#📜ಪ್ರಚಲಿತ ವಿದ್ಯಮಾನ📜
ಡಿ ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ರಾಜ್ಯದ ಸಿಎಂ ಆಗಬಾರದು, ಸಿದ್ದರಾಮಯ್ಯ ಮುಂದುವರೆಯಬೇಕು: ಜನಾರ್ದನ ರೆಡ್ಡಿ
ಬೆಂಗಳೂರು: ಬಳ್ಳಾರಿಯ ರಾಜಕಾರಣ ರಾಜ್ಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಸವಾಲು ಮತ್ತು ಪ್ರತಿ ಸವಾಲಿನ ಪಂಥಾಹ್ವಾನದ ವೇದಿಕೆಯಾಗಿ ಪರಿಣಮಿಸಿತು. ಅಷ್ಟೇ ಅಲ್ಲದೆ ಡಿಸಿಎಂ ಡಿ ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ರಾಜ್ಯದ ಮುಖ್ಯಮಂತ್ರಿ ಆಗಬಾರದು, ಸಿದ್ದರಾಮಯ್ಯ ಅವರೇ ಹುದ್ದೆಯಲ್ಲಿ ಮುಂದುವರೆಯಬೇಕು ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಬಿಜೆಪಿಯ ಜನಾರ್ದನ ರೆಡ್ಡಿ, ಬಳ್ಳಾರಿಯಲ್ಲಿ ಇತ್ತೀಚೆಗೆ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಭೆಯ ವಿಷಯ ಪ್ರಸ್ತಾಪಿಸಿದ್ದರು.
ಇದಕ್ಕೆ ಸದನದಲ್ಲಿ ಭಾಷಣ ಆರಂಭಿಸಿದ ಮಾಜಿ ಸಚಿವ ಬಿ ನಾಗೇಂದ್ರ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ನಡೆದ ಘರ್ಷಣೆಯ ಕುರಿತಂತೆ ಜನಾರ್ದನ ರೆಡ್ಡಿಯವರು ನಿನ್ನೆ ಹಲವು ಸುಳ್ಳು ಹೇಳಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಗಲಾಟೆ ಆದಾಗ ಬಿಜೆಪಿ ಕಾರ್ಯಕರ್ತರು ವಾಲ್ಕೀಕಿ ಫೋಟೋ ಇದ್ದ ಬ್ಯಾನರ್ ಕೆಳಕ್ಕೆ ಹಾಕಿ ಅವಮಾನ ಮಾಡಿದ್ರು. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವಾಯ್ತು.ಇದಕ್ಕೆ ಯಾರು ಕಾರಣ ಅಂತ ತನಿಖೆಯಲ್ಲಿ ಬಹಿರಂಗ ಆಗುತ್ತದೆ.ಆದರೆ ಈ ಘಟನೆ ನಂತರ ಬಿಜೆಪಿ ನಾಯಕರ ಬಳ್ಳಾರಿಯಲ್ಲಿ ಸಮಾವೇಶದಲ್ಲಿ ಶ್ರೀರಾಮುಲು ಅವರು ಏ ಭರತ್ ರೆಡ್ಡಿ, ಏಯ್ ಕಾಂಗ್ರೆಸ್ ಕಾರ್ಯಕರ್ತರೇ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನೀವೆಲ್ಲಿದ್ರೂ, ಪಾತಾಳದಲ್ಲಿದ್ರೂ ಹುಡುಕಿ ಒದ್ದು ಓಡಿಸ್ತೇವೆ ಅಂದರು ಎಂದು ಆರೋಪಿಸಿದರು.
ನಾಗೇಂದ್ರ ಅವರ ಈ ಆರೋಪಗಳಿಗೆ ಅಲ್ಲಿಯೇ ತಿರುಗೇಟು ನೀಡಿದ ಜನಾರ್ಧನ ರೆಡ್ಡಿ ವಾಲ್ಮೀಕಿ ಸಮುದಾಯದಲ್ಲಿ ನೀನಿನ್ನೂ ಬಚ್ಚಾ ಯಾವುದೇ ಕಾರಣಕ್ಕೂ ಶ್ರೀರಾಮುಲು ಮುಂದೆ ನೀನು ನಾಯಕನಾಗಿ ಬೆಳೆಯಲು ಸಾಧ್ಯವೇ ಇಲ್ಲ. ಈ ಜನ್ಮ ಅಲ್ಲ ಇನ್ನು ನೂರು ಜನ್ಮ ಹುಟ್ಟಿ ಬಂದರೂ ನೀನು ನಮ್ಮ ನಾಯಕ ಶ್ರೀರಾಮುಲು ಅವರ ಮುಂದೆ ಲೀಡರ್ ಆಗಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ಗುಡುಗಿದರು.
ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಹಾಕೋಕೆ ಮುಂದಾದ್ರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದ್ರೆ ನೀನು ಅದನ್ನೆ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದ್ರೆ ಹೇಗೆ? ಎಂದು ನಾಗೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ತಿರುಗೇಟು ನೀಡಿದ ನಾಗೇಂದ್ರ, "ವಾಲ್ಮೀಕಿ ಭಾವಚಿತ್ರ ಇರೋ ಬ್ಯಾನರ್ ಕೆಳಗೆ ಹಾಕಿ ತುಳಿದಿದ್ದಾರೆ. ಇದು ಸರಿಯಲ್ಲ. ನನ್ನನ್ನು ಸೋಲಿಸೋದು ಬಿಡೋದು ಇದ್ದೇ ಇರುತ್ತದೆ. ನಮ್ಮ ಹೋರಾಟವೂ ಇರುತ್ತದೆ. ರೆಡ್ಡಿಯವರ ಎಲ್ಲ ಚಾಲೆಂಜ್ ಗಳನ್ನೂ ನಾವು ಸ್ವಾಗತ ಮಾಡ್ತೇವೆ" ಎಂದರು.
ವಿಚಾರವಾಗಿ ಇಬ್ಬರೂ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು ಇಬ್ಬರು ನಾಯಕರನ್ನು ಸುಮ್ಮನಿರುವಂತೆ ಮಾಡುವಲ್ಲಿ ಹರಸಾಹಸ ಮಾಡಿದ ಸಭಾಧ್ಯಕ್ಷ ಯುಟಿ ಖಾದರ್ ಅವರು ಅಂತಿಮವಾಗಿ ಬಿಜೆಪಿ ನಾಯಕ ಸುನಿಲ್ ಕುಮಾರ್ ಅವರಲ್ಲಿ ಜನಾರ್ಧನ ರೆಡ್ಡಿ ಅವರನ್ನು ಸುಮ್ಮನೆ ಕೂರಿಸುವಂತೆ ಮನವಿ ಮಾಡಿದರು.
#DKShivakumar #CM #state #reason #Siddaramaiah #continue #JanardanaReddy #malgudiexpress #malgudinews #news #TopNews