❤️🌷❤️ ಜೀಮೂತ ವಾಹನ ❤️🌷❤️
ಹಿಮಾಲಯದ ಪರ್ವತ ತಪ್ಪಲಿನ 'ಕಾಂಚನ ಪುರ'ದಲ್ಲಿ 'ವಿದ್ಯಾಧರ' ಎಂಬ ರಾಜ್ಯವಿದ್ದು, ಇದನ್ನು ಅಪ್ರತಿಮನು, ಬಲಾಡ್ಯನು, ಧರ್ಮಿಷ್ಠನು, ದಯಾ ಪರನು ಆಗಿದ್ದ 'ಜೀಮೂತಕೇತು' ಎಂಬ ರಾಜನು ಆಳುತ್ತಿದ್ದನು. ಈ ರಾಜ್ಯವು ಸುಖ ಸಮೃದ್ಧಿಯಿಂದ ತುಂಬಿತ್ತು. ಅದಕ್ಕೆ ಕಾರಣವೂ ಇತ್ತು ಜೀಮೂತ ಕೇತುವಿನ ಹತ್ತಿರ 'ಕಲ್ಪವೃಕ್ಷ' ವಿತ್ತು. ಅವನಿಗೆ ಬೇಕಾದದ್ದನ್ನೆಲ್ಲ ಕಲ್ಪವೃಕ್ಷ ವನ್ನು ಕೇಳಿ ಪಡೆಯುತ್ತಿದ್ದನು. ಇಷ್ಟೆಲ್ಲ ಇದ್ದರೂ ಜಿಮೂತಕೇತುಗೆ ಮಕ್ಕಳಿರಲಿಲ್ಲ. ಒಂದು ದಿನ ಶುದ್ಧ ಮನಸ್ಸಿನಿಂದ ಕಲ್ಪವೃಕ್ಷದ ಹತ್ತಿರ ಕೈಜೋಡಿಸಿ ನನಗೆ ವೀರ, ಧೀರ, ಪರಾಕ್ರಮಿ, ಗುಣವಂತ ನಾಗಿರುವ ಹಾಗೂ ಕರುಣಾಳುವಾದ ದಯಾಳುವಾದ, ಬೋಧಿಸತ್ವ ಗುಣವುಳ್ಳ ಗಂಡು ಮಗು ಬೇಕು ಎಂದು ಕೇಳಿದ.
ಕಲ್ಪವೃಕ್ಷ ಅವನ ಕೇಳಿದಂಥ ಮಗುವನ್ನು ಕೊಟ್ಟಿತು. ಅವನಿಗೆ 'ಜೀಮೂತ ವಾಹನ' ಎಂದು ಹೆಸರಿಡಲಾಯಿತು. ಅವನು ಬೆಳೆದು ದೊಡ್ಡವನಾದ ರಾಜನು ಬಯಸಿದಂತಹ ಎಲ್ಲಾ ಗುಣಗಳು ಅವನಲ್ಲಿ ಎದ್ದು ಕಾಣುತ್ತಿತ್ತು. ಬೆಳೆದು ನಿಂತ ಮಗ ದೇಶ ಪರ್ಯಟನೆ ಮಾಡಿ ರಾಜ್ಯಕ್ಕೆ ಬಂದನು. ಅವನು ನೋಡಿದ ಎಲ್ಲಾ ರಾಜ್ಯಗಳಿಗಿಂತ ತನ್ನ ತಂದೆಯ ರಾಜ್ಯ ಸುಭಿಕ್ಷವಾಗಿತ್ತು. ಬೇರೆ ರಾಜ್ಯಗಳಲ್ಲಿ ಬಡತನ, ರೋಗ, ನೋವು, ಹೀಗೆ ಹಲವು ತೊಂದರೆಗಳು ಇದ್ದವು. ಅವನು ತಂದೆಯ ಅನುಮತಿ ಪಡೆದು 'ಕಲ್ಪವೃಕ್ಷದ' ಹತ್ತಿರ ಹೋಗಿ "ಹೇ ಕಲ್ಪವೃಕ್ಷವೇ ಈ ಜಗತ್ತನ್ನೇ ನಿನಗೆ ನಾನು ದಾನ ಕೊಟ್ಟಿದ್ದೇನೆ. ಜಗತ್ತಿನ ಕಷ್ಟಕಾರ್ಪಣ್ಯಗಳೆಲ್ಲ ನಾಶವಾಗಿ ಜಗತ್ತು ಸುಭೀಕ್ಷ ವಾಗಿರಬೇಕು" ಎಂದು ಕಲ್ಪವೃಕ್ಷವನ್ನು ಕೇಳಿಕೊಂಡನು. ಕಲ್ಪವೃಕ್ಷವು ಅವನ ಆಸೆಯಂತೆ ಇಡೀ ಜಗತ್ತಿಗೆ ಬಂಗಾರದ ಮಳೆ ಸುರಿಸಿತು. ನಂತರ ಕಲ್ಪವೃಕ್ಷ ದೇವಲೋಕಕ್ಕೆ ಮರಳಿತು. ಪ್ರಜೆಗಳು ಜಿಮೂತವಾಹನ ಹಾಗೂ ಅವನ ತಂದೆಯನ್ನು ಹಾಡಿಹೊಗಳಿದರು. ಪ್ರತಿಯೊಬ್ಬ ಪ್ರಜೆಯು ತಮಗೆಷ್ಟು ಬೇಕೋ ಅಷ್ಟು ಬಂಗಾರವನ್ನು ಆರಿಸಿಕೊಂಡು ಮನೆಯಲ್ಲಿಟ್ಟು ಶ್ರೀಮಂತರಾದರು.
ರಾಜ್ಯದಲ್ಲಿ ಈಗ ಕಲ್ಪವೃಕ್ಷ ಇಲ್ಲವೆಂದು ಗೊತ್ತಾಗುತ್ತಿದ್ದಂತೆ, ಇಲ್ಲಿವರೆಗೂ, ಬಾಯಿಮುಚ್ಚಿಕೊಂಡು ತೆಪ್ಪಗಿದ್ದ ಜೀಮೂತವಾಹನನ ಚಿಕ್ಕಪ್ಪ, ದೊಡ್ಡಪ್ಪ,
ಸೇರಿಕೊಂಡು ಇವರ ರಾಜ್ಯದ ಮೇಲೆ ದಂಗೆ ಏಳಲು ಹೊರಟರು. ಇದನ್ನು ತಿಳಿದ ತಂದೆ ಜೀಮೂತ ಕೇತು ಯುದ್ಧದ ತಯಾರಿ ಮಾಡಲು ಹೊರಟರು.
ಆಗ ಜೀಮೂತವಾಹನ ಬಂದು, ಅಪ್ಪ ರಾಜ್ಯಕ್ಕಾಗಿ ಯಾಕಿಷ್ಟು ಹೋರಾಟ, ರಕ್ತಪಾತ, ಕೊಲೆ, ಸುಲಿಗೆ, ಇದಕ್ಕೆಲ್ಲ ಯುದ್ಧ ಬೇಕೇ? ನನಗಂತೂ ಈ ರಾಜ್ಯಕೋಶ ಯಾವುದು ಬೇಡ. ನಾನು ಕಾಡಿಗೆ ಹೋಗುತ್ತೇನೆ ಎಂದನು.ಆಗ ತಂದೆಯೂ ಸಹ ಮಗನೇ ನಿನಗೆ ಬೇಡವಾದ ಮೇಲೆ ನಮಗೆ ಏಕೆ ಬೇಕು ಎಂದು ಜೀಮೂತವಾಹನನ ಜೊತೆ ರಾಜಾ-ರಾಣಿಯು, ತಮ್ಮ ರಾಜ್ಯ ಅಧಿಕಾರ ಎಲ್ಲವನ್ನು ಬಿಟ್ಟು ಕಾಡಿಗೆ ಹೊರಟರು. ಮಲಯ ಪರ್ವತ ತಪ್ಪಲಿಗೆ ಬಂದು ಒಂದು ಗುಡಿಸಲನ್ನು ಕಟ್ಟಿಕೊಂಡು ಋಷಿ ಮುನಿಗಳ ತರ ನೆಮ್ಮದಿ ಜೀವನ ನಡೆಸುತ್ತಿದ್ದರು.
ಪರ್ವತದ ಪಕ್ಕದಲ್ಲಿ 'ಸಿದ್ಧರಾಜ್ಯ' ವಿತ್ತು. ಅಲ್ಲಿಯ ರಾಜಕುಮಾರ ಮಲಯಕೇತು ಹಾಗೂ ಅವನ ತಂಗಿ ರಾಜಕುಮಾರಿ ಮಲಯವತಿ. ರಾಜಕುಮಾರ ಮಲಯಕೇತುವೀಗೂ, ಜೀಮೂತವಾಹನನೀಗೂ ಪರಿಚಯವಾಗಿ ಸಮಾನ ಮನಸ್ಕರಾದ ಇಬ್ಬರು ಸ್ನೇಹಿತರಾದರು. ಇಂಥ ಒಳ್ಳೆಯ ಸ್ನೇಹಿತನಿಗೆ ತನ್ನ ತಂಗಿಯನ್ನು ಕೊಡಬಾರದೇಕೆ? ಎಂದು ಯೋಚಿಸಿ ಮಲಯವತಿಯನ್ನು ಕೇಳುತ್ತಾನೆ. ಆಕೆಗೆ ಮೊದಲೇ ಗೌರಿ ದೇವಿಯ ವರವಿತ್ತು . ಅವಳು ಸಂತೋಷದಿಂದ ಒಪ್ಪಿ, ಜೀಮೂತವಾಹನ ಹಾಗೂ ರಾಜಕುಮಾರಿ ಮಲಯವತಿಯ ಮದುವೆ ನೆರವೇರಿತು. ತಾನು ರಾಜಕುಮಾರಿ ಎಂಬ ಹಮ್ಮು ಇಲ್ಲದೆ ಗಂಡನ ಮನೆ ಗುಡಿಸಲಿಗೆ ಬಂದು ಅತ್ತೆ ಮಾವ ಗಂಡನ ಸೇವೆ ಮಾಡಿಕೊಂಡಿರುತ್ತಾಳೆ.
ಮಲಯಕೇತು, ಜೀಮೂತವಾಹನ ಒಂದು ದಿನ ಹೊರಗೆ ತಿರುಗಾಡಿ ಕೊಂಡು ಗೋಕರ್ಣೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು. ಜಿಮೂತವಾಹನ ಪರಿಸರ ಪ್ರೇಮಿ. ಒಂದು ಕಡೆ ಹಚ್ಚ ಹಸಿರು ತುಂಬಿದೆ, ಮತ್ತೊಂದು ಕಡೆ ಸಮುದ್ರ , ಮಗದೊಂದು ಕಡೆ ಸೂರ್ಯನ ಬಂಗಾರದ ಹೊಂಗಿರಣ, ಪಕ್ಕದಲ್ಲಿ ಬೆಳ್ಳಿಬೆಟ್ಟ ವಿತ್ತು. ಇದನ್ನು ನೋಡಿ ಸ್ನೇಹಿತನನ್ನು ಇದೇನು? ಇಲ್ಲಿ ಹಿಮಪರ್ವತ ಎಂದನು. ಆಗ, ಮಲಯಕೇತು , ಗೆಳೆಯ ನೀನು ಹೇಳಿದ್ದು ಸರಿ ಅದು ಬೆಳ್ಳಿಯ ಬೆಟ್ಟ ಹೌದು, ಆದರೆ ಅದು ಹಿಮಪರ್ವತದ ಬೆಟ್ಟವಲ್ಲ. ಮೂಳೆಗಳ ರಾಶಿ ಎಂದನು. ಜೀಮೂತವಾಹನ ಗಾಬರಿಯಿಂದ ಯಾವ ಮೂಳೆ ಅದು ಎಂದು ಕೇಳಲು, ಗರುಡನು ನಾಗಗಳನ್ನು ತಿಂದು ಹಾಕಿದ ಮೂಳೆಗಳು ಹೀಗೆ ಪರ್ವತಾಕಾರವಾಗಿ ನಿಂತಿದೆ ಎಂದು ಸ್ನೇಹಿತ ಅದರ ಕುರಿತಾಗಿ ಕಥೆ ಹೇಳಿದ.
ಗರುಡನಿಗೆ ನಾಗಗಳಿಂದ ತುಂಬಾ ಅನ್ಯಾಯವಾಗಿತ್ತು. ಸಿಟ್ಟಿಗೆದ್ದ ಗರುಡ ತಪಸ್ಸುಮಾಡಿ ವಿಷ್ಣುವನ್ನು ಒಲಿಸಿಕೊಂಡು ನಾಗ ಸರ್ಪಗಳನ್ನೆ ಆಹಾರವಾಗಿ ವರ ಪಡೆದುಕೊಂಡ. ಆನಂತರ ನಾಗಲೋಕದ ಮೇಲೆ ಗರುಡನು ದಾಳಿ ಮಾಡಿ ನಾಗ ಲೋಕವನ್ನೇ ಧ್ವಂಸ ಮಾಡತೊಡಗಿದ. ಅಲ್ಲಿದ್ದ ಆದಿಶೇಷ ಬಂದು ಕೈಮುಗಿದು ಗರುಡ ನಮ್ಮಿಂದ ನಿನಗೆ ಅನ್ಯಾಯವಾಗಿದೆ ನಿಜ, ಆದರೆ ಈ ರೀತಿ ನಾಗಲೋಕಕ್ಕೆ ಬಂದು ಧ್ವಂಸ ಮಾಡಿದರೆ ನಾಗಗಳ ಸಂತತಿ ನಾಶವಾಗುತ್ತದೆ ಜೊತೆಗೆ ನಿನಗೆ ಆಹಾರ ಇಲ್ಲವಾಗುತ್ತೆ ಇದಕ್ಕಾಗಿ ಒಂದು ಒಪ್ಪಂದ ಮಾಡಿಕೊಳ್ಳೋಣ. ಇಬ್ಬರಿಗೂ ಒಳ್ಳೆಯದು.ಆ ಪ್ರಕಾರ ನಿತ್ಯವೂ ಒಂದೊಂದು ನಾಗಗಳನ್ನು ನಿನಗೆ ಆಹಾರವಾಗಿ ಕಳಿಸುತ್ತೇವೆ.
ನೀನು ಅದನ್ನು ತಿಂದು ತೃಪ್ತಿಯಾಗಿರು. ನಿನಗೂ ನೆಮ್ಮದಿ, ನಾವು ಬದುಕುತ್ತೇವೆ ಎಂದನು. ಈ ಪ್ರಕಾರ ಗೋಕರ್ಣ ದೇವಸ್ಥಾನ ಅದರ ಮಧ್ಯೆ ಕೋಡುಗಲ್ಲಿದೆ. ಅದರ ಮೇಲೆ ಪ್ರತಿನಿತ್ಯ ಗರುಡನ ಆಹಾರಕ್ಕಾಗಿ ಒಂದು ನಾಗ ಮಲಗಿರುತ್ತದೆ. ಗರುಡನು ಅದನ್ನು ಕಚ್ಚಿ ತಿಂದು ಮೂಳೆಯನ್ನು ಅಲ್ಲಿ ಬಿಸಾಕುತ್ತಾನೆ. ಅದು ಪರ್ವತದಂತೆ ಆಗಿದೆ.
ಜೀಮೂತವಾಹನ ಮೊದಲೇ ಕರುಣಾಮಯಿ. ಇದನ್ನು ಕೇಳಿದ ಮೇಲಂತೂ ಅವನ ಹೃದಯ ಕರಗಿ ನೀರಾಯಿತು. ನಾಗರಾಜ ಆದಿಶೇಷನ ಮೇಲೆ ಬೇಸರ ಬಂತು. ಆದಿಶೇಷನಿಗೆ ಸಾವಿರ ನಾಲಿಗೆ ಇದೆ. ಮೊದಲು ನನ್ನನ್ನು ತಿನ್ನು ಆಮೇಲೆ ಪ್ರಜೆಗಳನ್ನು ತಿನ್ನು ಅಂತ ಹೇಳಬಹುದಿತ್ತು ಪ್ರಜೆಗಳನ್ನೇ ಬಲಿ ಕೊಟ್ಟು ತಾನು ಆರಾಮವಾಗಿದ್ದಾನೆ ಇವನೆಂಥ ರಾಜ ಎಂದನು.
ಮಲಯಕೇತುವಿಗೆ ಈ ವಿಚಾರ ಬೇಡವಾಗಿತ್ತು. ಆ ವೇಳೆಗೆ ಅರಮನೆ ಯಿಂದ ಅವನಿಗೆ ಕರೆಬಂದಿತು. ನೀನು ಬರುವೆಯಾ?ಎಂದು ಜೀಮೂತ ವಾಹನನ್ನು ಕೇಳಿದ್ದಕ್ಕೆ "ನೀನು ಹೋಗು ನಾನು ದೇವಸ್ಥಾನಕ್ಕೆ ಹೋಗುವೆ" ಎಂದನು. ಮಲಯಕೇತು ಅರಮನೆಗೆ ಬಂದನು. ಜೀಮೂತವಾಹನ ದೇವಸ್ಥಾನಕ್ಕೆ ಹೋದಾಗ ಒಬ್ಬ ವೃದ್ಧೆ ದುಃಖದಿಂದ ಅಳುತ್ತಿದ್ದಳು. ಅವಳ ಜೊತೆ ತರುಣನು ಇದ್ದನು. ಜೀಮೂತವಾಹನ ಅವಳ ಹತ್ತಿರ ಹೋಗಿ ಕಾರಣವೇನು ಎಂದು ಕೇಳಿದಾಗ ಆ ವೃದ್ಧೆ, ಇಂದು ನನ್ನ ಮಗ ಶಂಖಚೂಡ ಗರುಡಗೆ ಆಹಾರವಾಗಬೇಕು. ನನಗೆ ಒಬ್ಬನೇ ಮಗ ಎಂದು ಅಳತೊಡಗಿದಳು. ಆಗ ಜೀಮೂತವಾಹನ ಅಳಬೇಡಿ ತಾಯಿ ನಿಮ್ಮ ಮಗನ ಬದಲಿಗೆ ನಾನು ಹೋಗುತ್ತೇನೆ ಎಂದನು. ಆಗ ಮುದುಕಿಯು ನೀನು ವಿದ್ಯಾಧರ ರಾಜ್ಯದ ವಜ್ರ. ನನ್ನ ಮಗ ಶಂಖಚೂಡ ಒಂದು ಗಾಜು ಇದ್ದಹಾಗೆ, ಸಾಮಾನ್ಯ ಗಾಜಿಗಾಗಿ ವಜ್ರವನ್ನು ಕಳೆದುಕೊಳ್ಳುತ್ತಾರೆಯೇ? ಆದ್ದರಿಂದ ನೀನು ಹೊರಡು ನನ್ನಮಗನೇ ಗರುಡನಿಗೆ ಆಹಾರವಾಗುತ್ತಾನೆ. ಶಂಖ ಚೂಡನು ಬಲಿಪೀಠಕ್ಕೆ ಹೋಗುವ ಮುನ್ನ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಪ್ರದಕ್ಷಿಣೆ ಹಾಕಲು ಹೊರಟನು. ಆಗ ಜಿಮೂತವಾಹನ ಏನೂ ಹೇಳದೆ, ನಾನೇ ಗರುಡಗೆ ಬಲಿಯಾಗಬೇಕು ಎಂದು ಹೊರಗಡೆ ಬಂದನು. ಅಲ್ಲೊಂದು ಕೆಂಪುಬಟ್ಟೆ ಕಾಣಿಸಿತು. ಅವನು ಬಟ್ಟೆಯನ್ನು ತೆಗೆದುಕೊಂಡು ಹೋಗಿ ಬಲಿಪೀಠದ ಮೇಲೆ ಮಲಗಿ ಮುಸುಕು ಹಾಕಿಕೊಂಡನು. ಆಹಾರ ಕ್ಕಾಗಿ ಬಂದ ಗರುಡಗೆ ಕೆಂಪುಬಟ್ಟೆ ಮುಸುಕಿ ನಿಂದಾಗಿ ಜೀಮೂತವಾಹನ ಎಂಬುದು ತಿಳಿಯದೆ, ಕುಕ್ಕೀ ಕುಕ್ಕೀ ಅವನನ್ನು ತಿನ್ನುತ್ತಿದ್ದನು. ಆಗ ಆತನ ದೇಹದಿಂದ ರಕ್ತ ಸೋರುತ್ತಿತ್ತು ಅದರ ಜೊತೆ ಜೀಮೂತವಾಹನನ ಕುತ್ತಿಗೆ ಯಲ್ಲಿದ್ದ ಪದಕವು ಕೆಳಗೆ ಬಿದ್ದಿತ್ತು. ಆಗ ಪದಕ ಜೀಮೂತವಾಹನನ ಮನೆಯಲ್ಲಿ ಮಲಯವತಿ ಕುಳಿತಲ್ಲಿಗೇ ಬಿದ್ದು ಅವಳಿಗೆ ಸಿಕ್ಕಿತು. ಅವಳು ಗಾಬರಿಯಿಂದ ಪದಕದ ಗುರುತು ಹಿಡಿದು ಅಲ್ಲಿಗೆ ಬಂದಳು.
ಗರುಡನು ಮತ್ತೆ ಮತ್ತೆ ಕುಕ್ಕಿ ತಿನ್ನುತ್ತಿದ್ದ. ಆಕಾಶದಿಂದ ಪುಷ್ಪವೃಷ್ಟಿಯಾ ಯಿತು. ಶಂಖಚೂಡಗೆ ವಿಷಯ ತಿಳಿಯಿತು. ಅವನು ಓಡಿ ಬಂದು, ಗರುಡ ಅದು ನಾನಲ್ಲ ವಿದ್ಯಾಧರ ರಾಜ ಜೀಮೂತವಾಹನ ಎಂದು ಕೂಗಿ ಹೇಳಿದ. ಗಾಬರಿಯಿಂದ ಗರುಡ ತಿನ್ನುವುದನ್ನು ನಿಲ್ಲಿಸಿದ. ಗರುಡನಿಗೆ ಮೊದಲೇ ಅನುಮಾನವಿತ್ತು .ತಡೆಯಲಾರದಷ್ಟು ದುಃಖವಾಯಿತು. ಈ ಸಮಯ ಕ್ಕಾಗಿ ಕಾಯುತ್ತಿದ್ದ ಜೀಮೂತವಾಹನ ಗರುಡನ ಕೈಯಲ್ಲಿ ಇನ್ನು ಮುಂದೆ ನಾಗಗಳನ್ನು ತಿನ್ನುವುದಿಲ್ಲ ಎಂಬ ಮಾತನ್ನು ತೆಗೆದುಕೊಂಡನು. ಗರುಡನು ಅಗ್ನಿಗೆ ಹಾರಲು ಪ್ರದಕ್ಷಿಣೆ ಹೋಗುತ್ತಿದ್ದ. ಆಗ ಶಂಖಚೂಡನು, ಗರುಡ ಮೊದಲು ದೇವಲೋಕಕ್ಕೆ ಹೋಗಿ ಅಮೃತ ತಂದು ಬದುಕಿಸು ಎಂದು ಕೂಗಿ ಹೇಳಿದ. ಗರುಡನು ದೇವಲೋಕಕ್ಕೆ ಹೋಗಿ ಅಮೃತ ತಂದು ಜೀಮೂತವಾ ಹನನ್ನ ಬದುಕಿಸಿದ. ಬರುವಾಗ ಅಮೃತದ ಬಿಂದುಗಳು ಮಳೆಯಂತೆ ಹನಿಸಿ ನಾಗಗಳ ಮೂಳೆ ರಾಶಿಯ ಮೇಲೆ ಬಿದ್ದಿತ್ತು. ಆಗ ನಾಗಗಳೆಲ್ಲ ಬದುಕಿದವು. ರಾಜಕುಮಾರಿ ಮಲಯವತಿ ದುಃಖದಿಂದ ಅಗ್ನಿ ಪ್ರವೇಶ ಮಾಡಲು ಹೊರ ಟಿದ್ದಳು. ಗೌರಿ ದೇವಿ ಪ್ರತ್ಯಕ್ಷಳಾಗಿ ನಿನಗೆ ಯಾವುದೇ ಅನ್ಯಾಯವಾಗುವು ದಿಲ್ಲ. ನನ್ನ ಆಶೀರ್ವಾದ ನಿನ್ನ ಮೇಲೆ ಇದೆ. ಜೀಮೂತವಾಹನ ಇದ್ದಲ್ಲಿಗೆ ಹೋಗು ಎಂದಳು. ಮಲಯವತಿ ಬರುವ ಸಮಯಕ್ಕೆ ಜೀಮೂತವಾಹನ ಎದ್ದು ಕುಳಿತಿದ್ದನು. ಆ ಸಮಯಕ್ಕೆ ರಾಜ್ಯದ ಪ್ರಜೆಗಳು ಬಂದು ಜೀಮೂತ ವಾಹನಿಗೆ, ವಿದ್ಯಾಧರ ರಾಜ್ಯದ ಚಕ್ರವರ್ತಿ ನೀವೇ ಆಗಬೇಕು ಎಂದು ಹೇಳಿ ದರು. ಎಲ್ಲವೂ ಸುಖಾಂತ್ಯವಾಗಿ, ಗೌರಿ ದೇವಿಯ ವರದಂತೆ ಜೀಮೂತ ವಾಹನ ವಿದ್ಯಾಧರ ರಾಜ್ಯಕ್ಕೆ ಚಕ್ರವರ್ತಿ ಆದನು. ಮಲಯವತಿ ಚಕ್ರವರ್ತಿ ನಿಯಾದಳು. ಜೀಮೂತವಾಹನ ತನ್ನ ತ್ಯಾಗ ಬಲಿದಾನದಿಂದ ಮೂರು ಲೋಕದಲ್ಲೂ ಪ್ರಸಿದ್ಧಿಯಾದನು. ತನ್ನ ಕುಟುಂಬದೊಂದಿಗೆ ಸಾವಿರಾರು ವರ್ಷಗಳ ಕಾಲ ರಾಜ್ಯಭಾರ ಮಾಡಿ ಪ್ರಸಿದ್ಧನಾದನು.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️
#✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್