#📜ಪ್ರಚಲಿತ ವಿದ್ಯಮಾನ📜
ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ದರ್ಶನ್ ಪುಟ್ಟಣ್ಣಯ್ಯ
ದರ್ಶನ್ ಪುಟ್ಟಣ್ಣಯ್ಯನವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದ ಕನ್ನಡ ಅವತರಣಿಕೆಯ ಪೂರ್ಣಪಾಠ:
ಎಲ್.ಪಿ.ಜಿ., ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆ ಪರಿಹರಿಸಿ
ಸನ್ಮಾನ್ಯ ನರೇಂದ್ರ ಮೋದಿ,
ಪ್ರಧಾನ ಮಂತ್ರಿಗಳು, ನವದೆಹಲಿ
ಮಾನ್ಯರೇ,
ಕಳೆದ ಕೆಲವು ದಿನಗಳಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಭಾರತೀಯ ನಾಗರಿಕರಿಗೆ ಅನಾನುಕೂಲವಾಗುತ್ತಿದೆ. ವಿಶೇಷವಾಗಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ದೇಶಗಳ ನಡೆಯುತ್ತಿರುವ ರಾಜಕೀಯ ಅಂತಹಕಲಹದಿಂದಾಗಿ ಈಗಾಗಲೇ ಬೆಂಗಳೂರಿನಂತಹ ನಗರಗಳಲ್ಲಿ ಹೊಟೆಲ್ ಗಳನ್ನು ಆಶ್ರಯಿಸಿ ಜೀವನ ನಡೆಸುತ್ತಿರುವ ನಾಗರಿಕರಿಗೆ ಊಟ ಸಿಗದಂತಹ ಮತ್ತು ಹೊಟೆಲ್ ಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಜನ ಆಹಾರ ಸಿಗದಂತೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜೊತೆಗೆ, ಇಡೀ ಭಾರತವೇ ಆರ್ಥಿಕವಾಗಿ ಹಿನ್ನಡೆ ಅನುಭವಿಸಲಿದೆ.
ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲ ಕೊರತೆ ದೇಶದ ಯಾವ ಮೂಲೆಯಲ್ಲೂ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಈ ಬಿಕ್ಕಟ್ಟು ನಿಮ್ಮ ರಾಜತಾಂತ್ರಿಕ ನೈಪುಣ್ಯತೆಯನ್ನು ತೋರಿಸಲು ನಿಮಗೆ ಒದಗಿರುವ ಅವಕಾಶವೆಂದೇ ನನಗೆ ಅನಿಸುತ್ತದೆ. ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಆದಷ್ಟು ಶೀಘ್ರವಾಗಿ ಮಾತನಾಡಿ. ಅಗತ್ಯ ಪ್ರಮಾಣದ ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಕೊರತೆ ಉಂಟಾಗದಂತೆ ಆಮದು ಮಾಡಿಕೊಳ್ಳಲು ಸೂಕ್ತ ದಾರಿಗಳನ್ನು ಹುಡುಕಿ.
ಇನ್ನು ನೈಸರ್ಗಿಕ ಅನಿಲವನ್ನು ಈ ಹಿಂದೆ 21 ದಿನಗಳಿಗೆ ಒಂದು ಸಿಲಿಂಡರ್ ತುಂಬಿಸಲು ಅವಕಾಶವಿತ್ತು. ಆದರೆ ಅದನ್ನು 25 ದಿನಕ್ಕೆ ಏರಿಸಲಾಗಿದೆ. ಇದು ದೇಶದ ನಾಗರಿಕರಿಗೆ ಮಾಡುವ ಅವಮಾನ ಎಂದು ನನಗೆ ಅನಿಸುತ್ತದೆ. ಏಕೆಂದರೆ, ದೇಶದ ಎಲ್ಲ ನಾಗರಿಕರೂ ಸಂಕಷ್ಟಗಳ ಅವಧಿಯಲ್ಲಿ ಕೂಡ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವುದಿಲ್ಲ. ಅವರಿಗೆ ಭವಿಷ್ಯದ ಚಿಂತೆ ಇರುತ್ತದೆ. ನಾಳೆ ಸಿಲಿಂಡರ್ ಸಿಗದೆ ಹೋದರೆ ಏನು ಎಂಬ ಆತಂಕದಿಂದ ಅವರು ಮುಂಗಡವಾಗಿ ಸಿಲಿಂಡರ್ ಬುಕ್ ಮಾಡಲು ಯತ್ನಿಸುತ್ತಾರೆಯೇ ಹೊರತು, ಎಲ್ಲ ನಾಗರಿಕರು ತಮ್ಮ ಒಂದು ಸಿಲಿಂಡರ್ ಅನ್ನು ಮಾರಿಕೊಂಡು ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿರುವುದಿಲ್ಲ. ಆದ್ದರಿಂದ ಇಂತಹ ಕ್ರಮಗಳಿಗೆ ಅವಕಾಶ ಮಾಡಿಕೊಡಬೇಡಿ. ಇದರ ಬದಲಾಗಿ ನೈಸರ್ಗಿಕ ಅನಿಲ ಕಾಳದಂಧೆಯವರ ಕೈಗೆ ಸಿಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ.
ಇಂತಹ ಸಮಸ್ಯೆಗಳಿಗೆ ಇದ್ದಕ್ಕಿದ್ದಂತೆ ಪರಿಹಾರ ಹುಡುಕುವುದು ತುಸು ಕಷ್ಟದಾಯಕ. ಆದ್ದರಿಂದ ಸ್ವರಾಜ್ಯ ಪರಿಕಲ್ಪನೆಯನ್ನು ಜಾರಿಗೆ ತರಲು ಯತ್ನಿಸಿ. ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಯಾವೆಲ್ಲ ರೀತಿಯಲ್ಲಿ ಇಂಧನ ಸ್ವಾಯತ್ತತೆಯನ್ನು ಗಳಿಸಬಹುದು ಎಂಬ ವಿಷಯಗಳತ್ತ ಗಮನಹರಿಸಿ. ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಗರಿಷ್ಠ ಅವಕಾಶಗಳನ್ನು ಸೃಷ್ಟಿಸಿ. ಸ್ಟಾರ್ಟ್ ಅಪ್, ಕೌಶಲ್ಯಾಭಿವೃದ್ಧಿ ಯೋಜನೆಗಳಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿ. ಇವುಗಳ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಘೋಷಿಸಿ. ಉತ್ಪಾದನಾ ಕಂಪನಿಗಳಿಗೆ ಸಾಲಸೌಲಭ್ಯ ಸೇರಿದಂತೆ ತೆರಿಗೆ ವಿನಾಯಿತಿಗಳನ್ನು ನೀಡಿ. ನಾಗರಿಕರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಸೌರ, ಪವನ ವಿದ್ಯುತ್ ಬಳಕೆಗೆ ಉತ್ತೇಜನ ನೀಡಿ. ಹಳ್ಳಿಗಳನ್ನು ಸ್ವಾವಲಂಬಿಗಳಾಗಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳು ದೇಶದ ನಾಗರಿಕರಿಗೆ ತಟ್ಟಲಾರವು. ಈ ಹಿನ್ನೆಲೆಯಲ್ಲಿ ಈಗ ಎದುರಾಗಿರುವ ಬಿಕ್ಕಟ್ಟನ್ನೇ ಒಂದು ಸದವಕಾಶವೆಂದು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ತಾವು ಜನರ ಕಷ್ಟಗಳನ್ನು ಪರಿಹರಿಸಲು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾನು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಇಂತಿ ನಿಮ್ಮ ವಿಶ್ವಾಸಿ
ದರ್ಶನ್ ಪುಟ್ಟಣ್ಣಯ್ಯ, ಮೇಲುಕೋಟೆ ಶಾಸಕ, ಕರ್ನಾಟಕ, ಭಾರತ
#DarshanPuttannaiah #LPG #writes #letter #PM #Modi #malgudiexpress #malgudinews #news #TopNews