Malgudi Express
854 views
#📜ಪ್ರಚಲಿತ ವಿದ್ಯಮಾನ📜 ಅಸಮಾನ್ಯ ಕನ್ನಡಿಗನ ಬದುಕಿನ ಕಥನ ಕಥಾನಾಯಕನ ಕಥೆ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠದ ಮೂಲಕ ಡಾ. ರಾಜಕುಮಾರ್ ಅವರ ಜೀವನ ಚರಿತ್ರೆ `ಕಥಾನಾಯಕನ ಕಥೆ’ಯು ಪುಸ್ತಕ ರೂಪದಲ್ಲಿ (2026) ಪ್ರಕಟವಾಗುತ್ತಿದೆ. ಭಾರತದ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದ ಕಲಾವಿದರು ಅಪರೂಪ. ಅಭಿನಯಕ್ಕಾಗಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಕಲಾವಿದ ಡಾ. ರಾಜಕುಮಾರ್. ಡಾ. ರಾಜಕುಮಾರ್ ಕೇವಲ ಸಿನಿಕಲಾವಿದರಾಗಿ ಮಾತ್ರ ಉಳಿಯದೆ, ಕನ್ನಡದ ನೆಲ-ಜಲ ಮತ್ತು ಭಾಷೆಯ ಉಳುವಿಗಾಗಿ ಬೀದಿಗಳಿದ ಅಪರೂಪದ ಕಲಾವಿದ. ಇಂತಹ ಅಸಮಾನ್ಯ ಕನ್ನಡಿಗನ ಬದುಕಿನ ಸಮಗ್ರ ವಿವರಗಳನ್ನು ದಾಖಲಿಸುವ ಪ್ರಯತ್ನಗಳನ್ನು ಕೆಲವರು ಮಾಡಿದ್ದಾರೆ. ಶ್ರೀ ದೊಡ್ಡಹುಲ್ಲೂರು ರುಕ್ಕೋಜಿಯವರು ಡಾ. ರಾಜಕುಮಾರ್ ಸಮಗ್ರ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಇದೊಂದು ಮಹತ್ವದ ಪ್ರಯತ್ನವಾಗಿದೆ. ಆದರೆ ಡಾ. ರಾಜಕುಮಾರ್ ಅವರ ಆತ್ಮಕತೆ ಇಲ್ಲಿಯವರೆಗೂ ಪ್ರಕಟವಾಗಿರಲಿಲ್ಲ. ಭಾರತದ ಪ್ರಖ್ಯಾತ ಚಲನಚಿತ್ರ ನಟರಾದ ಅಮಿತಾಬಚ್ಚನ್, ಎನ್.ಟಿ.ಆರ್, ಎಂ. ಜಿ. ರಾಮಚಂದ್ರನ್, ಮೋಹನ್ ಲಾಲ್‌ರಂತಹ ಕಲಾವಿದರ ಜೀವನ ಚರಿತ್ರೆಗಳನ್ನು ಆಯಾ ರಾಜ್ಯಭಾಷೆಗಳಲ್ಲದೆ, ಅಂತರಾಷ್ಟ್ರೀಯ ಖ್ಯಾತಿಯ ಪೆಂಗ್ವಿನ್ ಪ್ರಕಾಶನವು ಇಂಗ್ಲೀಷನಲ್ಲೂ ಪ್ರಕಟಿಸಿದೆ. ಆದರೆ ಇಲ್ಲಿಯವರೆಗೆ ಡಾ. ರಾಜಕುಮಾರ್ ಅವರ ಆತ್ಮಕಥೆ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಈಗ ಕನ್ನಡ ವಿಶ್ವವಿದ್ಯಾಲಯವು ಡಾ. ರಾಜಕುಮಾರ್ ಅವರ ಆತ್ಮಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ. ಡಾ.ರಾಜಕುಮಾರ್ ಅಧ್ಯಯನ ಪೀಠವು ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಅಧ್ಯಯನ ಪೀಠವನ್ನು ದಿ: 18.04.2006 ರಂದು ವಿದ್ಯುಕ್ತವಾಗಿ ಆರಂಭಿಸಲಾಯಿತು. ಕಳೆದ ಎರಡು ದಶಕಗಳಿಂದ ಅಧ್ಯಯನ ಪೀಠವು ಅಹರ್ನಿಸಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಚಲನಚಿತ್ರ, ರಂಗಭೂಮಿ ಮತ್ತು ಅಭಿನಯ ಕಲೆಗೆ ಸಂಬಂಧಿಸಿದ ವಿವಿಧ ರಂಗಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಪೀಠವು ಮುಂದಡಿ ಇಟ್ಟಿದೆ. 1. ಡಾ. ರಾಜಕುಮಾರ್ ಅವರು ಕನ್ನಡ ರಂಗಭೂಮಿ ಮತ್ತು ಸಿನೆಮಾ ರಂಗಗಳ ನಡುವೆ ಒಂದು ಸೇತುವೆ ಎಂಬಂತೆ ಪರಿಭಾವಿಸಲ್ಪಟ್ಟಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕನ್ನಡದ ಭಾಷಿಕ ಪರಿಸರ ಮತ್ತು ಕಲಾಜಗತ್ತು ಹೇಗೆ ರೂಪುಗೊಳ್ಳುತ್ತಾ ಬಂದಿದೆ ಎಂಬುದನ್ನು ವಿಶ್ಲೇಷಿಸುವುದು. 2. ಡಾ. ರಾಜಕುಮಾರ್ ಕನ್ನಡವನ್ನೂ ಒಳಗೊಂಡಂತೆ ಭಾರತದ ಅಭಿನಯ ಮತ್ತು ಗಾಯನ ಪರಂಪರೆಗಳಿಗೆ ಮಹೋನ್ನತ ಕೊಡುಗೆಗಳನ್ನು ನೀಡಿದ್ದಾರೆ. ಜನಪ್ರಿಯ ಕಲಾಪ್ರಕಾರದಲ್ಲಿ ಉನ್ನತ ಸಾಧನೆಗಳನ್ನು ಮಾಡಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ರಾಜಕುಮಾರ್ ಅವರ ಬದುಕನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. 3. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ನಾಡಿನ ಸಮಾಜ ಮತ್ತು ಸಂಸ್ಕೃತಿಗಳನ್ನು ಪರಿಭಾವಿಸುವ ಕ್ರಮವೊಂದಿದೆ. ಅದರಲ್ಲೂ ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಭಾವುಕ ನೆಲೆಯಲ್ಲಿ ಕಲ್ಪಿಸಿಕೊಳ್ಳುವ ಪರಿಪಾಠವೊಂದು ಬೆಳೆದು ಬಂದಿದೆ. ಕನ್ನಡ ರಾಷ್ಟ್ರೀಯತೆ ಎಂಬ ಒಂದು ರಾಜಕೀಯ ರಚನೆಯನ್ನು ಭಾವುಕವಾಗಿ ಪರಿಭಾವಿಸುವ ಹಿಂದಿರುವ ಒತ್ತಾಸೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. 4. ಮನರಂಜನೆಯ ಅತ್ಯಂತ ಪ್ರಭಾವಶಾಲಿ ಮಾಧ್ಯಮವೆಂದರೆ ಸಿನಿಮಾ. ಈ ಮಾಧ್ಯಮವು ಜನಸಾಮಾನ್ಯರಲ್ಲಿ ಪ್ರಭಾವ ಬೀರಿದ ಕ್ಷೇತ್ರಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳ ಹೊರತಾಗಿಯೂ, ಸಾಂಸ್ಕೃತಿಕ ವಿಮರ್ಶೆಯಾಗಿಯೂ, ನಮ್ಮ ನಾಡಿನ ಸಮಾಜಗಳ ವಿವಿಧ ವಲಯಗಳ ಮೇಲೆ ಅದರ ಪ್ರಭಾವವನ್ನು ಬಿಚ್ಚಿಡಲು ಪೀಠವು ಕೆಲಸ ಮಾಡಬೇಕಾಗಿದೆ. ಈ ಎಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಪೀಠವು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ನಾನು ಪೀಠದ ಸಂಚಾಲಕನಾದ ಮೊದಲ ದಿನವೇ ಡಾ. ರಾಜಕುಮಾರ್ ಅವರ ಆತ್ಮಕಥೆಯನ್ನು ಹುಡುಕಿ ಪ್ರಕಟಿಸಬೇಕು ಎಂದು ನಿರ್ಧರಿಸಿದೆ. ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿಯವರು ಈ ಯೋಜನೆಯನ್ನು ಕೈಗೊಳ್ಳಲು ತುಂಬು ಮನಸ್ಸಿನಿಂದ ಒಪ್ಪಿ ಸಹಕರಿಸಿದರು. ಹಿರಿಯರಾದ ನಾಡೋಜ ಬರಗೂರು ರಾಮಚಂದ್ರಪ್ಪನವರು ಈ ಆತ್ಮಕಥೆಯನ್ನು ಪ್ರಕಟಿಸಲು ವಿಶೇಷ ಕಾಳಜಿ ವಹಿಸಿದ್ದಾರೆ. ಡಾ. ರಾಜಕುಮಾರ್ ಅವರ ಮನೆಯವರ ಜೊತೆಗೆ ಮಾತನಾಡಿ ಈ ಆತ್ಮಕಥೆಯನ್ನು ಪ್ರಕಟಿಸಲು ಅನುಮತಿಯನ್ನು ಕೊಡಿಸಿದ್ದಲ್ಲದೆ, `ಕಥಾನಯಕನ ಕಥೆ’ಗೆ ಮಹತ್ವದ ಪ್ರವೇಶಿಕೆಯನ್ನು ಬರೆದುಕೊಟ್ಟಿದ್ದಾರೆ. ನಾನು ಪೀಠದ ಸಂಚಾಲಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಈ ಆತ್ಮಕಥೆಯು ಪ್ರಕಟವಾದ ವಿಜಯಚಿತ್ರ ನಿಯತಕಾಲಿಕೆಯ ಸಂಚಿಕೆಗಳ ಹುಡುಕಾಟ ಶುರುವಾಯಿತು. ನನ್ನ ಜೊತೆಗೆ ಲೇಖಕರೂ ಸಿನೆಮಾ ನಿರ್ದೇಶಕರೂ ಆದ ಶ್ರೀ ಪ್ರಕಾಶರಾಜ್ ಮೇಹು ಅವರು ಈ ಸಂಚಿಕೆಗಳನ್ನು ಹುಡುಕಲು ತೊಡಗಿದರು. ಈ ಹೊತ್ತಿಗೆ ವಿಜಯಚಿತ್ರದ ಪ್ರಕಟಣೆ ನಿಂತು ಹೋಗಿತ್ತು. ಇದಲ್ಲದೆ, ವಿಜಯಚಿತ್ರದ ಎಲ್ಲ ಸಂಚಿಕೆಗಳನ್ನು ಸಂಗ್ರಹಿಸಿಟ್ಟಿದ್ದ ಪ್ರಕಟಣಾ ಸಂಸ್ಥೆಯ ಸಂಗ್ರಹಾಗಾರಕ್ಕೆ (Archive) ಬೆಂಕಿಬಿದ್ದು ಸುಟ್ಟು ಹೋಗಿತ್ತು. ಚೆನೈಗೆ ಹೋದರೆ ಪ್ರಯೋಜನವಿಲ್ಲವೆಂದು ಬೆಂಗಳೂರಿನ ಪುಸ್ತಕ ಪ್ರಿಯರಲ್ಲಿ ಯಾರಾದರೂ ಈ ಸಂಚಿಕೆಗಳನ್ನು ಸಂಗ್ರಹಿಸಿರಬಹುದು ಎಂಬ ಭರವಸೆಯೊಂದಿಗೆ ನನ್ನ ಹುಡುಕಾಟವನ್ನು ಮುಂದುವರೆಸಿದೆ. ಹಲವು ಜನರನ್ನು ಸಂಪರ್ಕಿಸಿದ ನಂತರವೂ ವಿಜಯಚಿತ್ರದ ಸಂಚಿಕೆಗಳು ಲಭ್ಯವಾಗಲಿಲ್ಲ. ಕೊನೆಯ ಪ್ರಯತ್ನದ ನೆಪದಲ್ಲಿ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀ ರಾಜು ಅವರನ್ನು ಸಂಪರ್ಕಿಸಿದೆವು. ಶ್ರೀ ರಾಜು ಅವರು ಡಾ. ರಾಜಕುಮಾರರ ಪರಮಾಭಿಮಾನಿ. ಶ್ರೀಯುತರು ನಮ್ಮನ್ನು ರವಿಶಂಕರ್ ಎಂಬ ಇನ್ನೊಬ್ಬ ರಾಜಕುಮಾರ್ ಅಭಿಮಾನಿಯ ಬಳಿ ಕರೆದೊಯ್ದರು. ಶ್ರೀ ರವಿಶಂಕರ್ ಅವರು ನಮ್ಮಗಳ ಹಿನ್ನೆಲೆ, ನಮ್ಮ ಉದ್ದೇಶಗಳನ್ನು ಸರಿಸುಮಾರು ಮೂರು ತಾಸಿನ ವರೆಗೆ ಪರೀಕ್ಷಿಸಿ ರಾಜಕುಮಾರ್ ಅವರ ಆತ್ಮಕಥೆ ಪ್ರಕಟವಾದ ವಿಜಯಚಿತ್ರದ ಎಲ್ಲ ಸಂಚಿಕೆಗಳನ್ನು ಕೊಡಲು ಒಪ್ಪಿಕೊಂಡರು. ಅಲ್ಲಿಗೆ ನಮ್ಮ ಹುಡುಕಾಟ ಮತ್ತು ಓಡಾಟಗಳಿಗೆ ಒಂದು ಮುಕ್ತಿ ಸಿಕ್ಕಂತಾಯಿತು. ರವಿಶಂಕರ್ ಮತ್ತು ರಾಜು ಇಬ್ಬರೂ ಸೇರಿ ಒಂದು ದಿನ ನಮ್ಮನ್ನು ಕಂಠೀರವ ಸ್ಟೂಡಿಯೋಕ್ಕೆ ಕರೆದೊಯ್ದು, ಅಲ್ಲಿ ಡಾ. ರಾಜಕುಮಾರ್ ಅವರ ಸಮಾಧಿಯ ಮುಂದೆ ವಿಜಯಚಿತ್ರದ ಸಂಚಿಕೆಗಳನ್ನು ಇರಿಸಿ, ಅವುಗಳಿಗೆ ಪೂಜೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ನಮ್ಮ ಕೈಗಿತ್ತರು. ವಿಜಯಚಿತ್ರದ ಸಂಚಿಕೆಗಳು ಅಣ್ಣಾವರ ಸಮಾಧಿಯ ಮುಂದೆ ವಿಧಿವತ್ತಾಗಿ ನಮ್ಮ ಕೈಸೇರಿದವು. ‘ಡಾ. ರಾಜ್ ಅವರ ಆತ್ಮಕಥೆಯನ್ನು ಪ್ರಕಟಿಸಿ ಯಾರೂ ಅದನ್ನು ಲಾಭ ಮಾಡಿಕೊಳ್ಳಬಾರದು. ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಆತ್ಮಕಥೆಯನ್ನು ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ ಪ್ರಕಟಿಸುತ್ತವೆ’ ಎಂಬ ಕಾರಣಕ್ಕಾಗಿ ರವಿಶಂಕರ್ ಈ ಸಂಚಿಕೆಗಳನ್ನು ನಮಗೇ ನೀಡಿ ಉಪಕರಿಸಿದ್ದಾರೆ. ರವಿಶಂಕರ್ ಅವರು ನಮ್ಮ ಮೇಲೆ ಪ್ರೀತಿ ತೋರಿಸಿ ವಿಶ್ವವಿದ್ಯಾಲಯದ ಮೂಲಕ ಆತ್ಮಕಥೆ ಪ್ರಕಟವಾಗಲು ಕಾರಣಕರ್ತರಾಗಿದ್ದಾರೆ, ಅವರಿಗೆ ವಿಶ್ವವಿದ್ಯಾಲಯದ ಪರವಾಗಿ, ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಇದರ ಜೊತೆಗೆ ರವಿಶಂಕರ್ ಅವರನ್ನು ನಮಗೆ ಪರಿಚಯಿಸಿ ಉಪಕರಿಸಿದವರು ಶ್ರೀ ರಾಜು ಅವರು. ಶ್ರೀ ರಾಜು ಅವರ ನೆರವಿಲ್ಲದೇ ಇದ್ದಲ್ಲಿ ಈ ಪುಸ್ತಕ ಪ್ರಕಟವಾಗುತ್ತಿರಲಿಲ್ಲ. ಶ್ರೀ ರಾಜು ಅವರಿಗೂ ಸಹ ಕೃತಜ್ಞತೆಗಳು ಸಲ್ಲಲೇಬೇಕು. ಪ್ರಸ್ತುತ ಡಾ. ರಾಜಕುಮಾರ್ ಆತ್ಮಕತೆ 'ಕಥಾನಾಯಕನ ಕಥೆ’ಯು ಚೆನೈ ಮೂಲದ `ವಿಜಯಚಿತ್ರ’ಎಂಬ ಸಿನಿ ಮಾಸಪತ್ರಿಕೆಯಲ್ಲಿ 94 ಕಂತುಗಳಲ್ಲಿ ಎಂಟು ವರ್ಷಗಳ ಕಾಲ ಪ್ರಕಟವಾಯಿತು. (ವಿಜಯಚಿತ್ರದಲ್ಲಿ ಈ ಆತ್ಮಕಥೆ ಧಾರಾವಾಹಿಯಾಗಿ ಪ್ರಾರಂಭವಾದದ್ದು 1976 ಏಪ್ರಿಲ್ ತಿಂಗಳಲ್ಲಿ, ಸಂಪುಟ 2, ಸಂಚಿಕೆ 1. ಕೊನೆಯ ಭಾಗ ಪ್ರಕಟವಾದದ್ದು: ಮಾರ್ಚ್ 1994, ಸಂಪುಟ 9, ಸಂಚಿಕೆ 12, ಸಂಪಾದಕರು: ವಿಶ್ವಂ, ಉಪಸಂಪಾದಕರು: ಚಿ. ಸದಾಶಿವಯ್ಯನವರು, ಪ್ರಕಾಶನ: ಚಂದಮಾಮ ಪಬ್ಲಿಕೇಷನ್ಸ್, ಮದ್ರಾಸು 26) ಡಾ. ರಾಜಕುಮಾರ್ ಅವರು ಹೇಳಿದಂತೆ ಆತ್ಮಕಥೆಯನ್ನು ನಿರೂಪಿಸಿದವರು ಚಿ. ದತ್ತರಾಜ್ ಅವರು. ಚಿ. ದತ್ತರಾಜ್ ಅವರು ಚಿ. ಉದಯದಶಂಕರ್ ಅವರ ಕಿರಿಯ ಸಹೋದರ. ಈ ಆತ್ಮಕಥೆಯ ಕೊನೆಯ ಕಂತು ಪ್ರಕಟವಾದದ್ದು 1984ರಲ್ಲಿ. 1984ರ ನಂತರದ ಡಾ. ರಾಜಕುಮಾರ್ ಅವರ ಬದುಕಿನ ವಿವರಗಳು ಈ ಪುಸ್ತಕದಲ್ಲಿಲ್ಲ. `ಕನ್ನಡದ ಜನ ವಿಜಯಚಿತ್ರ ಪತ್ರಿಕೆಯನ್ನು ಆ ಸಂದರ್ಭದಲ್ಲಿ ಖರೀದಿಸುತ್ತಿದ್ದುದು ಡಾ. ರಾಜ್ ಅವರ ಆತ್ಮಕತೆಯನ್ನು ಓದಲು. ವಿಜಯಚಿತ್ರದ ಪ್ರಸರಣದ ಸಂಖ್ಯೆಯೂ ಆ ಒಂದು ದಶಕದ ಅವಧಿಯಲ್ಲಿ ಹೆಚ್ಚಿತ್ತು’ ಎಂಬುದನ್ನು ಹಲವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದಾದ ನಂತರ ಈ ಆತ್ಮಕಥೆ ಪುಸ್ತಕ ರೂಪದಲ್ಲಿ ಪ್ರಕಟವಾಗಲೇ ಇಲ್ಲ. ಐದು ದಶಕಗಳ ಕಾಲ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಿನಿಮಾ ಜಗತ್ತನ್ನು ಪೋಷಿಸಿದ ಪ್ರತಿಭಾಶಾಲಿ ಕಲಾವಿದನ ಆತ್ಮಚರಿತ್ರೆಯನ್ನು ಪ್ರಕಟಿಸಿದ್ದು ತಮಿಳು/ತೆಲುಗು ಮೂಲದ ಒಂದು ನಿಯತಕಾಲಿಕೆ. ಇದಾದ ನಂತರವಾದರೂ ಈ ಆತ್ಮಕಥೆ ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕಿತ್ತು. ಡಾ. ರಾಜಕುಮಾರ್ ಅವರು ನಮ್ಮ ಜೊತೆಗಿಲ್ಲ, ಅವರ ಆತ್ಮಕಥೆಯನ್ನು ನಿರೂಪಿಸಿದ ಶ್ರೀ ದತ್ತರಾಜ್ ಅವರೂ ಹಿಂದಿನ ವರ್ಷ ನಿಧನರಾದರು. ದತ್ತರಾಜ್ ಅವರ ಅಣ್ಣನ ಮಗ ಚಿತ್ರನಟ ಗುರುದತ್ (ಚಿ. ಉದಯಶಂಕರ್ ಅವರ ಮಗ) ಅವರನ್ನು ಸಂಪರ್ಕಿಸಿ `ಕಥಾನಾಯಕನ ಕಥೆ’ ಪುಸ್ತಕವನ್ನು ಪ್ರಕಟಿಸಲು ಅನುಮತಿಯನ್ನು ಕೇಳಿದೆವು. ಶ್ರೀ ಗುರುದತ್ ಅವರು ತುಂಬು ಮನಸ್ಸಿನಿಂದ ನಮಗೆ ಅನುಮತಿಯನ್ನು ನೀಡಿದರು. ಇದಲ್ಲದೆ ನಾಡೋಜ ಬರಗೂರು ರಾಮಚಂದ್ರಪ್ಪನವರ ಮೂಲಕ ಡಾ. ರಾಜಕುಮಾರ್ ಅವರ ಪುತ್ರ ರಾಘವೇಂದ್ರ ರಾಜಕುಮಾರ್ ಅವರನ್ನು ಸಂಪರ್ಕಿಸಿ ಪುಸ್ತಕ ಪ್ರಕಟಕಣೆಗೆ ಅನುಮತಿಯನ್ನು ಕೇಳಿದೆವು. ಶ್ರೀ ರಾಘವೇಂದ್ರ ರಾಜಕುಮಾರ್ ಅವರೂ ಸಂತೋಷದಿಂದ ಒಪ್ಪಿಗೆ ಸೂಚಿಸಿದರು. ಶ್ರೀ ಗುರುದತ್ ಮತ್ತು ಶ್ರೀ ರಾಘವೇಂದ್ರ ರಾಜಕುಮಾರ್ ಅವರಿಗೆ ನಮಸ್ಕಾರಗಳು ವಿಜಯಚಿತ್ರದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಆತ್ಮಕಥೆಯ ಕೆಲವು ಭಾಗಗಳಿಗೆ ನಿರೂಪಕರು ಶೀರ್ಷಿಕೆಯನ್ನು ನೀಡಿರಲಿಲ್ಲ. ಅಂತಹ ಭಾಗಗಳಿಗೆ ನಾನು ಸೂಕ್ತವೆನ್ನಿಸುವ ಶೀರ್ಷಿಕೆಯನ್ನು ನೀಡಲು ಪ್ರಯತ್ನಿಸಿದ್ದೇನೆ. ಈ ಆತ್ಮಕಥೆಯ ಪ್ರಕಟಣೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿವರು ವಿಶೇಷ ಆಸಕ್ತಿಯನ್ನು ತೋರಿಸಿ ನನಗೆ ಪ್ರೋತ್ಸಾಹಿಸಿದ್ದಾರೆ. ಕುಲಪತಿಯವರ ನಿರಂತರ ಒತ್ತಾಸೆ ಮತ್ತು ಮಾರ್ಗದರ್ಶನಗಳಿಂದ ಈ ಆತ್ಮಕಥೆಯ ಪ್ರಕಟಣೆ ಸಾಧ್ಯವಾಗಿದೆ. ಹಿಂದಿನ ಕುಲಸಚಿವರಾದ ಪ್ರೊ. ತಂಬಂಡ ವಿಜಯ ಪೂಣಚ್ಚ ಅವರ ಬೌದ್ಧಿಕ ಮತ್ತು ಆಡಳಿತಾತ್ಮಕ ಸಹಕಾರ ಅಮೂಲ್ಯವಾದದ್ದು. ಕನ್ನಡ ವಿಶ್ವವಿದ್ಯಾಲಯದ ಇಂದಿನ ಕುಲಸಚಿವರಾದ ಸಹೋದರ ಪ್ರೊ. ವಿರುಪಾಕ್ಷ ಪೂಜಾರಹಳ್ಳಿಯವರು ಸಹ ಪೀಠದ ಕೆಲಸಕಾರ್ಯಗಳಿಗೆ ಆಡಳಿತಾತ್ಮಕ ನೆರವನ್ನು ನೀಡಿದ್ದಾರೆ. ಪೀಠದ ಸಲಹಾ ಸಮಿತಿ ಸದಸ್ಯರಾದ ಪ್ರೊ. ಜಿ. ಪ್ರಶಾಂತ್ ನಾಯಕ್, ಡಾ. ಮಂಜುನಾಥ್ ಅದ್ದೆ, ಶ್ರೀ ಬಿ. ಎಂ. ಗಿರಿರಾಜ್ ಮತ್ತು ಶ್ರೀ ಪ್ರಕಾಶರಾಜ್ ಮೇಹು ಅವರ ಸಹಕಾರವೂ ದೊಡ್ಡದು. ಈ ಆತ್ಮಕಥೆಯನ್ನು ವೇಗವಾಗಿ ಗಣಕಕ್ಕೆ ಅಳವಡಿಸಿದ್ದು ಕೊಟ್ಟೂರಿನ ಕೊಟ್ರೇಶ್ ಅವರು. ಪುಟ ವಿನ್ಯಾಸ ಮಾಡಿದ್ದು ಶ್ರೀಮಾನ್ ಪ್ರಿಂಟೆಕ್ಸ್ ನ ಶ್ರೀ ಕಿಶೋರ್ ಅವರು. ಸುಂದರ ಮುಖಪುಟವನ್ನು ರಚಿಸಿಕೊಟ್ಟವರು ಮಿತ್ರರಾದ ಅರುಣ್‌ಕುಮಾರ್ ಅವರು, ಇವರೆಲ್ಲರಿಗೂ ಪೀಠದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಆತ್ಮಕಥೆಯನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರು, ಮಿತ್ರರೂ ಆದ ಪ್ರೊ. ಮಹದೇವಯ್ಯ ಮತ್ತು ಅವರ ಸಿಬ್ಬಂದಿಗಳಿಗೆ ಪೀಠದ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. `ಕಥಾನಾಯಕನ ಕಥೆ’ ಕೇವಲ ರಾಜಕುಮಾರ್ ಅವರ ಜೀವನದ ಕಥೆ ಮಾತ್ರವಲ್ಲ. ಇದು ನಮ್ಮ ಸಮಾಜದ ತಳಸ್ತರದ ಸಮುದಾಯದ ಸಾಮಾನ್ಯನೊಬ್ಬನ ಕಥನವೂ ಆಗಿದೆ. ಓದುತ್ತಾ ಹೋದಂತೆ ಇದು ನಮ್ಮ ಅಂತರಂಗವನ್ನು ತಾಕುತ್ತದೆ. ಇಂತಹ ಒಂದು ಚಾರಿತ್ರಿಕ ಮಹತ್ವದ ಕೃತಿಯನ್ನು ಪ್ರಕಟಿಸಲು ನನಗೆ ಅವಕಾಶ ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. `ಕಥಾನಾಯಕನ ಕಥೆ’ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ರಾಜಕುಮಾರರ ಆತ್ಮಕಥೆಯು ಕನ್ನಡ ನೆಲದ ಜನಸಾಮಾನ್ಯನ ಆತ್ಮಕಥೆಯಂತೆ ಅನಾವರಣವಾಗುತ್ತದೆ. ಓದಿ... ಪ್ರತಿಕ್ರಿಯಿಸಿ... - ಡಾ. ಎ. ಎಸ್. ಪ್ರಭಾಕರ ಸಂಚಾಲಕರು ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ ಕನ್ನಡ ವಿಶ್ವವಿದ್ಯಾಲಯ, ಹಂಪಿ #story #protagonist #life #extraordinary #Rajkumar #Kannadigas #ASPrabhakar #malgudiexpress #malgudinews #news #TopNews