#PSSM World ನಮ್ಮ ಸುತ್ತಮುತ್ತಲಿನ ನಮ್ಮ ಅತ್ಮೀಯತೆಯ ಜನರಿಗೆ ಹಾಗು ನಮ್ಮ ಸುತ್ತಲಿನ ಸಮಾಜಕ್ಕೆ ನಾವು ಅರ್ಥವಾಗದಿದ್ದಾಗ ನಮ್ಮಲ್ಲಿ ನಾವು ಮಾನಸಿಕವಾಗಿ ನೊಂದುಕೊಂಡು ಕೆಲವೊಮ್ಮೆ ಅದರಿಂದ ನಮಗೆ ನಾವೇ ಶಿಕ್ಷೆ ವಿಧಿಸಿಕೊಂಡು ಬದುಕುವುದು ಸರಿಯೋ ಅಥವಾ ತಪ್ಪೋ ಅನ್ನೋದು ಸ್ಪಷ್ಟವಾಗಿ ಇಂದಿನವರೆಗೂ ಯಾರಿಗೂ ತಿಳಿಯಲ್ಲ. ಸರಿ ಅಂತ 50% ಜನ ಅಂದುಕೊಂಡರೆ ಇನ್ನುಳಿದ 50% ಜನ ತಪ್ಪು ಅಂತ ವಾದಿಸುತ್ತಾರೆ ಅಷ್ಟೇ.
ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಸಹ ಅವರವರಿಗೆ ಅವರವರದೇ ಆದಂತಹ ಭಾವನೆಗಳು, ಲೆಕ್ಕಾಚಾರಗಳು, ಅನಿಸಿಕೆ ಹಾಗು ಅಭಿಪ್ರಾಯಗಳು ಅಂತ ಇದ್ದೇ ಇರುತ್ತವೆ. ಅದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ರೀತಿಯಲ್ಲಿ ಏನೇನೋ ಆಸೆ, ಆಕಾಂಕ್ಷೆಗಳು, ಕನಸುಗಳು, ಗುರಿಗಳು ಅಂತ ಇದ್ದರೂ ಅದು ವ್ಯಕ್ತಿಯಿಂದ ವ್ಯಕ್ತಿಗೆ ಎಂದಿಗೂ ವಿಭಿನ್ನ. ಒಬ್ಬರಂತೆ ಇನ್ನೊಬ್ಬರು ಅಂತ ಎಲ್ಲಿಯೂ/ ಯಾರಲ್ಲಿಯೂ ಇರಲು ಸಾಧ್ಯವಿಲ್ಲ. ಕೆಲವೊಮ್ಮೆ ಸರಿಸಮಾನವಾಗಿ ಇದ್ದಂತೆ ಕಂಡರೂ ಅದು ಕ್ಷಣಿಕ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತೆ.
ಈ ಪ್ರಪಂಚ ಎಷ್ಟು ವಿಚಿತ್ರ ಅಂದರೆ ಇನ್ನೊಬ್ಬರಿಗೆ ಇಷ್ಟವಾದಂತೆ, ಅವರಿಗೆ ಸರಿ ಅನಿಸಿದ ಹಾಗೆ ನಾವು ಬದುಕಿದರೆ ಮಾತ್ರ ನಾವು ಈ ಸಮಾಜಕ್ಕೆ ಅನುಗುಣವಾಗಿ ಅಥವಾ ಈ ಸಮಾಜದ ಕಣ್ಣಿಗೆ ಕಾಣುವಂತೆ ಉತ್ತಮರು ಅನ್ನುವ ಪಟ್ಟವನ್ನು ಅಲಂಕರಿಸಬಹುದು. ಇಲ್ಲ ನಾನು ಇರುವುದೇ ಹೀಗೆ, ನನ್ನಿಷ್ಟದಂತೆ ನಾನು ಬದುಕಲು ಬಯಸುತ್ತೇನೆ ಅಥವಾ ಬದುಕುತ್ತೇನೆ ಅಂತ ಹೊರಟರೆ ಈ ಸಮಾಜದ ಎದುರು ಕೆಟ್ಟವರೆಂಬ ಪಟ್ಟವನ್ನು ಅಲಂಕರಿಸಲೇಬೇಕಾಗುತ್ತದೆ ಅನ್ನೋದು ಮಾತ್ರ ಸತ್ಯ.
ಈ ಪ್ರಪಂಚ ತನಗೆ ಇಷ್ಟವಾದಂತೆ, ತಾನು ಬಯಸಿದಂತೆ ಎಲ್ಲವನ್ನೂ/ ಎಲ್ಲರನ್ನೂ ಕಾಣಬೇಕೆಂದು ಬಯಸುತ್ತೆ. ಆದರೆ ಎಲ್ಲವನ್ನೂ / ಎಲ್ಲರನ್ನೂ ವಾಸ್ತವತೆಯಲ್ಲಿ ಇದ್ದ ಹಾಗೆಯೇ ಸ್ವೀಕರಿಸಲು ಎಂದಿಗೂ ಬಯಸುವುದೂ ಇಲ್ಲ. ಬಯಸಿದರೂ ಸಮಯ ಕಳೆದಂತೆ ಬದಲಾವಣೆಯನ್ನು ಇಂದಲ್ಲಾ ನಾಳೆ ಬಯಸುವುದನ್ನು ಬಿಡುವುದಿಲ್ಲ.
ಯಾರಿಗಾಗಿ ಬದಲಾಗಬೇಕು, ಯಾವ ಕಾರಣಕ್ಕಾಗಿ ನಾವು ಬದಲಾಗಬೇಕು. ಬದುಕು ಕ್ಷಣಿಕ ಅಂದಮೇಲೆ ಬದಲಾವಣೆಯನ್ನು ಬಯಸಿ ಅಥವಾ ಸ್ವೀಕರಿಸಿ ಬದುಕಲು ಹೊರಟರೆ ನಮ್ಮಂತೆ, ನಮ್ಮಿಷ್ಟದಂತೆ ಬದುಕುವುದು ಯಾವಾಗ? ನಮ್ಮ ಸಂತೋಷ, ನಮ್ಮ ಮನಸ್ಸಿಗೆ ನೆಮ್ಮದಿ ಸಿಗೋದು ಯಾವಾಗ? ಹಾಗಾದರೆ ನಮ್ಮಿಷ್ಟದಂತೆ ಬದುಕುವ ಸ್ವತಂತ್ರ ನಮಗಿಲ್ಲವೇ? ನಮ್ಮಿಷ್ಟದಂತೆ ಬದುಕುವ ಅರ್ಹತೆ ಅನ್ನೋದು ನಮಗಿಲ್ಲದ ಬದುಕು ನಾವು ಬದುಕುತ್ತಿದ್ದೆವಾ ಅನ್ನಿಸುವ ದಿನಗಳು ನಮ್ಮ ಜೀವನದಲ್ಲಿ ಎದುರಾಗದೆ ಹೋಗುವುದೇ?
ನಮ್ಮಿಷ್ಟದಂತೆ ನಾವು ಸ್ವತಂತ್ರತೆಯಿಂದ ಬದುಕಲು ಆಗದ, ಯಾರೋ ತೋರಿಸಿದ ಅಥವಾ ಯಾರೋ ಇಷ್ಟ ಪಡುವ ಹಾದಿಯಲ್ಲಿ ನಾವು ಸಾಗಬೇಕಾ? ನಮ್ಮ ಆಸೆ, ಆಕಾಂಕ್ಷೆ, ಕನಸು, ಗುರಿಯಂತೆ ನಾವು ಬದುಕಬಾರದೆ? ಬದುಕಲು ಸಾಧ್ಯವೆ ಇಲ್ಲವಾ? ಇಂತಹ ಅನೇಕ ಪ್ರಶ್ನೆಗೆ ಉತ್ತರ ನಮ್ಮಲ್ಲಿ ನಾವೇ ನಮ್ಮ ಸ್ವಂತ ನಿರ್ಧಾರಗಳಿಂದಲೇ ಪಡೆದುಕೊಳ್ಳಬೇಕಾಗುತ್ತದೆ.
ಜೀವನದಲ್ಲಿ ಯಾರನ್ನೋ ಅಥವಾ ಇನ್ನೇನನ್ನೋ ಕಳೆದುಕೊಳ್ಳಬೇಕಾಗುತ್ತದೆ ಅನ್ನುವ ಭಯದಿಂದಲೋ ಅಥವಾ ಇನ್ಯಾರನ್ನೋ ಮೆಚ್ಚಿಸುವ ಸಲುವಾಗಿ ಬದುಕಬೇಕೋ ಅಥವಾ ನಮ್ಮ ಮನಸ್ಸು ನಮ್ಮನ್ನು ಮೆಚ್ಚಿ, ನೆಮ್ಮದಿಯನ್ನು ಒದಗಿಸುವಂತೆ ನಾವು ಬದುಕಬೇಕೋ ಅನ್ನುವ ಆಯ್ಕೆ ಎಂದಿಗೂ ನಮ್ಮದೇ ಆಗಿರುತ್ತದೆ.
ಈ ಪ್ರಪಂಚದಲ್ಲಿ ಅಥವಾ ನಮ್ಮ ಜೀವನದಲ್ಲಿ ಕಳೆದುಕೊಳ್ಳಲೇಬೇಕು ಅಂತ ಇದ್ದರೆ ಅದು ಇಂದಲ್ಲಾ ನಾಳೆ ಅಥವಾ ಎಂದಿಗಾದರೂ ಕಳೆದುಕೊಳ್ಳಲೇಬೇಕಾಗುತ್ತದೆ. ಯಾಕೆಂದರೆ, ಬಲವಂತವಾಗಿ ಅಥವಾ ಇನ್ಯಾವುದೋ ಒತ್ತಡ, ಅನಿವಾರ್ಯತೆ, ಅವಶ್ಯಕತೆ, ಅವಸರದಲ್ಲಿದ್ದು ಪಡೆದುಕೊಳ್ಳುವುದು ಎಂದಿಗೂ ಶಾಶ್ವತವಾಗಿ ನಮ್ಮೊಂದಿಗೆ ಇರಲಾರದು. ಅದು ವ್ಯಕ್ತಿಯಾದರೂ ಸರಿ ಅಥವಾ ವಸ್ತುವಾದರೂ ಸರಿ.
ನಮ್ಮೊಂದಿಗೆ ಇರಬೇಕಾದುದು, ನಮ್ಮೊಂದಿಗೆ ಉಳಿಯಲೇಬೇಕಾದುದು ಅಂತ ಯಾವುದೇ ವ್ಯಕ್ತಿ ಅಥವಾ ವಸ್ತುಗಳು ಅಂತ ಇದ್ದಿದ್ದೇ ಆದರೆ, ಅದು ನಿಧಾನವಾದರೂ ಸರಿ ಇಂದಲ್ಲ ನಾಳೆ ನಮ್ಮ ಜೀವನದಲ್ಲಿ ಎದುರಾಗಿ ಬಂದರೂ ಅದು ಶಾಶ್ವತವಾಗಿ ಉಳಿಯುತ್ತೆ.
ಆದರೆ ನಮ್ಮ ಜೀವನದಲ್ಲಿ ನಂಬಿಕೆ ಹಾಗು ಭರವಸೆಗೆ ಪೆಟ್ಟು ಬಿದ್ದಾಗ ಬದುಕಲ್ಲಿಯೇ ನಂಬಿಕೆ ಕಳೆದುಕೊಂಡು ಅಥವಾ ನಂಬಿಕೆಯ ಭರವಸೆಯ ಬೆಳಕೇ ಇಲ್ಲದೆ ಇರುವ ತ್ರಿಶಂಕು ಸ್ಥಿತಿಯಲ್ಲಿರುವ ಬದುಕಿಗೆ ಇನ್ನೆಲ್ಲಿಯ ಭರವಸೆ ಇನ್ನೆಲ್ಲಿಯ ನಂಬಿಕೆ ಅಂದುಕೊಂಡೆ ಬದುಕು ಬದುಕಲೇಬೇಕಾಗುತ್ತದೆ.
ಈ ಪ್ರಪಂಚ ನಮ್ಮನ್ನು ಹೀಗೆಯೇ ಇರು? ಹಾಗೆಯೇ ಇರು ಅಂತ ಪ್ರತಿಯೊಂದರಲ್ಲಿಯೂ ತಿದ್ದಿ, ತೀಡಲು ಸದಾ ಮುಂದಿರುತ್ತದೆ, ಅದೇ ರೀತಿ ನಮ್ಮನ್ನು ಯಾಕೆ ಹೀಗಿದ್ದಿಯಾ? ಏನಾಯಿತು? ಅಂತ ಕೇಳಲು ಮುಂದೆ ಬರಲ್ಲ. ಹಾಗಂತ ನಮ್ಮನ್ನು ಬದಲಾವಣೆ ಮಾಡಲು ಮಾಡುವ ಪ್ರಯತ್ನ ತಪ್ಪು ಅಂತ ನಾನು ಹೇಳುತ್ತಿಲ್ಲ. ಬದಲಿಗೆ ನಮ್ಮ ಇಷ್ಟ, ನಮ್ಮ ಅಸೆ ಆಕಾಂಕ್ಷೆಗಳೇನು ಅಂತ ಅರಿಯುವ ಪ್ರಯತ್ನ ಹಾಗು ನಮ್ಮ ಭಾವನೆಗಳನ್ನು ಅರಿಯುವ ಪ್ರಯತ್ನ ಮಾಡಿ ನಂತರ ತಿದ್ದಿ ತೀಡುವ ಪ್ರಯತ್ನ ಮಾಡುವುದು ಸರಿ ಅಲ್ವಾ.
ಈ ಪ್ರಪಂಚದಲ್ಲಿನ ನಶ್ವರ ಬದುಕಿನಲ್ಲಿ ಕಳೆವ ಕ್ಷಣಿಕ ದಿನಗಳಲ್ಲಿ ನಮ್ಮ ಬದುಕಿನ ಹಾದಿ ನಾವು ಇಷ್ಟ ಪಟ್ಟಂತೆಯೇ, ನಮ್ಮಿಷ್ಟದಂತೆಯೇ ಇರಲಿ. ಯಾಕೆಂದರೆ ಹಾಗೆ ನಮ್ಮಿಷ್ಟದಂತೆ ಬದುಕು ಸಾಗುತ್ತಲಿರುವಾಗ ಆದರ ಪ್ರತಿಫಲ ಏನೇ ಆದರೂ ಅದು ಅಷ್ಟಾಗಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಲ್ಲ.
ಹಾಗಿದ್ದಾಗ ನಮ್ಮಲ್ಲಿ ನಮ್ಮ ಬದುಕು ನಮ್ಮಿಷ್ಟದಂತೆ ಸಾಗುತ್ತಿದೆ ಅನ್ನುವ ಅಲ್ಪ ನೆಮ್ಮದಿಯಾದರೂ ನಮಗೆ ಉಳಿಯಲಿ ಅಲ್ವಾ....😔😔😔