Anthoniraj
668 views
ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಅಂತ ಇದ್ದೇ ಇರುತ್ತವೆ. ಇರಬೇಕು ಕೂಡ. ಯಾಕೆಂದರೆ, ಸಮಸ್ಯೆಗಳಿದ್ದರೆ ಮಾತ್ರವೇ ನಮ್ಮ ಬದುಕು ಪರಿಪೂರ್ಣವಾಗಲು ಸಾಧ್ಯ. ಸಮಸ್ಯೆಗಳು ಇದ್ದರೇನೇ ಜೀವನದಲ್ಲಿ ಪ್ರತಿಯೊಂದರ ಮೌಲ್ಯ ಅರ್ಥವಾಗಲು ಸಾಧ್ಯ. ಹಾಗೆ ಸಮಸ್ಯೆಗಳಲ್ಲಿ ಇದ್ದಾಗಲೇ ನಮಗೆ ನಮ್ಮವರು ಯಾರು? ನಮ್ಮ ಹಿತವನ್ನು ಹಾಗು ಅಹಿತವನ್ನು ಬಯಸುವವರು ಯಾರು? ನಮ್ಮೊಂದಿಗಿದ್ದು ನಮ್ಮ ಜೀವನದಲ್ಲಿ ಬದಲಾವಣೆ ಬಯಸುವವರು ಯಾರು ಅನ್ನೋದರ ಸ್ಪಷ್ಟ ಚಿತ್ರಣದ ಅರಿವಾಗಲು ಸಾಧ್ಯ. ನಮಗೆ ಸಮಸ್ಯೆಗಳು ಎದುರಾದಾಗ ಕೆಲವೊಮ್ಮೆ ನಮ್ಮ ವರ್ತನೆಯ ಬದಲಾವಣೆಯಿಂದ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು. ನನ್ನ ಅನುಭವದಲ್ಲಿ ಈ ಮಾತು ನನ್ನ ಬದುಕಿಗೆ ಹೊಸ ತಿರುವು ನೀಡಿತು. ನನ್ನ ಜೀವನದಲ್ಲಿನ ಕೆಲವೊಂದು ಸಮಸ್ಯೆಗಳಿಗೆ ನನ್ನಲ್ಲಿ ನಾನೇ ಪರಿಹಾರ ಕಂಡುಕೊಂಡೆ. ವಾಸ್ತವತೆಯ ಅರಿವಾದ ಮೇಲೆ ನಾನು ಏನಾಗಬೇಕು, ಹೇಗಿದ್ದು ಬದುಕಬೇಕು ಈ ಆಧುನಿಕ ಯಾಂತ್ರಿಕ ಸಮಾಜದಲ್ಲಿ ಅನ್ನುವುದನ್ನು ನಿರ್ಧರಿಸಿಕೊಂಡೆ. ನನ್ನ ಮಾತಿನ ಮೂಲಕ, ನನ್ನ ಜೀವನದಲ್ಲಿ ಒಂಟಿಯಾಗಿದ್ದಾಗ ಎದುರಿಸಿದ ಅನೇಕ ಅನುಭವಗಳ ಆಧಾರದ ಮೇಲೆ ಬೇರೊಬ್ಬರ ಬದುಕನ್ನು ಬದಲಾಯಿಸುವ ಪ್ರಯತ್ನ ಮಾಡಬೇಕೆಂದು ನಿರ್ಧಾರವನ್ನು ಮಾಡಿದೆ. ಒಬ್ಬರ ಮಾತು ಇನ್ನೊಬ್ಬರ ಮನಸ್ಸನ್ನು ಬದಲಿಸಲು ಸಾಧ್ಯವೇ ಅಂತ ಎಲ್ಲರೂ ಪ್ರಶ್ನಿಸಿಕೊಳ್ಳಬಹುದು. ಆದರೆ, ಅದು ಖಂಡಿತ ಸಾಧ್ಯವಿದೆ. ಅದು ಮಾತನಾಡುವ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅದನ್ನು ಸರಿಯಾಗಿ ಆಲಿಸಿ ಅರ್ಥ ಮಾಡಿಕೊಳ್ಳುವುದರ ಮೇಲೆಯೂ ಅವಲಂಬಿತವಾಗಿರುತ್ತದೆ. ಯಾಕೆಂದರೆ, ಹಾಗೆಯೇ ಕೇಳುವುದು ಮತ್ತು ಆಲಿಸುವುದರಲ್ಲಿಯೂ ಸಾಕಷ್ಟು ವ್ಯತ್ಯಾಸವಿರುತ್ತೆ. ಆಲಿಸುವುದು ಅರ್ಥ ಮಾಡಿಕೊಳ್ಳುವುದು ನಮ್ಮ ಸ್ವಂತ ಮನಸ್ಸಿನ ವಿಷಯವಾದರೆ, ಹೇಳುವುದನ್ನ ಕೇಳುವುದು ಬರೀ ನಮ್ಮ ದೈಹಿಕ ಕ್ರಿಯೆಯಾಗಿರುತ್ತೆ. ಸರಿಯಾದ ಅರ್ಥದಿಂದ ಆಲಿಸುವುದರಿಂದ ವಿಷಯವನ್ನು ಅರ್ಥಮಾಡಿಕೊಂಡು ನಮ್ಮ ಅನುಭವದಲ್ಲಿ ಅಳವಡಿಸಿಕೊಳ್ಳುವುದು ಸುಲಭವಾಗುತ್ತದೆ. ಜೀವನದಲ್ಲಿ ನಾವು ಪದೇಪದೆ ಸೋತಾಗ ಸಾಮಾನ್ಯವಾಗಿ ಸಾಕಷ್ಟು ಕುಗ್ಗುತ್ತೇವೆ. ನಮ್ಮೊಳಗೆ ಒಬ್ಬ ‘ಸೋಲುಗಾರ’ನನ್ನೇ ನಾವು ಕಾಣತೊಡಗುತ್ತೇವೆ. ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ನಾವು ಯಾವುದೇ ಕೆಲಸ ಮಾಡಿದರು ಅಲ್ಲಿ ಗೆಲುವು ಸಾಧ್ಯವಾಗುವುದಿಲ್ಲ. ಆಗ ನಮ್ಮಲ್ಲಿನ ಕೀಳರಿಮೆ ಇದರಿಂದ ಹೆಚ್ಚುತ್ತಲೇ ಹೋಗುತ್ತದೆ. ಜೀವನದಲ್ಲಿ ಸೋಲಿನಿಂದ ಗೆಲುವಿನ ಹಾದಿಯನ್ನು ಕಂಡುಕೊಳ್ಳುವುದು ಮುಖ್ಯ. ಮಹತ್ತರ ಸಾಧನೆ ಮಾಡಿರುವ ಪ್ರತಿಯೊಬ್ಬ ವ್ಯಕ್ತಿಯು ಒಮ್ಮೆಯಾದರೂ ಜೀವನದಲ್ಲಿ ಸೋತಿರುತ್ತಾರೆ. ಆದರೆ ಆ ಸಮಸ್ಯೆ ಹಾಗು ಪರಿಸ್ಥಿತಿಗಳನ್ನು ಎದುರಿಸಿದ ನಂತರವೇ ಸಾಧನೆ ಸಾಧ್ಯವಾಗುತ್ತದೆ. ಸಮಸ್ಯೆಯೇ ಇಲ್ಲದ ವ್ಯಕ್ತಿ ಅಂತ ಈ ಪ್ರಪಂಚದಲ್ಲಿ ಯಾರೂ ಇರಲ್ಲ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಪರಿಸ್ಥಿತಿ ಹಾಗು ಸಮಸ್ಯೆಗಳ ಪ್ರಮಾಣ ಬೇರೆಬೇರೆ ಇರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಕಷ್ಟಕೋಟಲೆಗಳನ್ನ, ದುಃಖ ದುಮ್ಮಾನಗಳನ್ನ ಕೇಳಿಸಿಕೊಳ್ಳುವುದು ಕಷ್ಟವೇನಲ್ಲ. ಆದರೆ ಇಂದು ಎಲ್ಲರಿಗೂ ಕೇಳಿಸಿಕೊಳ್ಳುವುದಕ್ಕೆ ಬೇಕಾದ ಸಮಯ ಅನ್ನೋದು ಯಾರಲ್ಲಿಯೂ ಇಲ್ಲ. ಕೆಲವರು ಯಂತ್ರಗಳಂತೆ ನಿರ್ಜಿವತೆಯಿಂದ ಬದುಕುತ್ತಿದ್ದಾರೆ, ಇನ್ನೂ ಕೆಲವರು ಎಲ್ಲವನ್ನೂ ಅನುಮಾನದಿಂದ ಅಥವಾ ಇನ್ಯಾವುದೋ ಭಯದಿಂದ ವ್ಯಕ್ತಪಡಿಸಿಕೊಳ್ಳಲಾಗದೆ ತಮ್ಮಲ್ಲಿ ತಾವೇ ಒಂಟಿತನ ಅನುಭವಿಸುತ್ತಿದ್ದಾರೆ. ಈ ಪ್ರಪಂಚದಲ್ಲಿ ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸೋದು ಕಷ್ಟ. ಯಾಕೆಂದರೆ, ಎಲ್ಲವನ್ನೂ, ಎಲ್ಲರನ್ನೂ ಅನುಮಾನ ಹಾಗು ಭಯದಿಂದ ನೋಡುವ ಜನರ ಮಧ್ಯೆ ನಮ್ಮತನವನ್ನು ನಾವು ನಿರೂಪಿಸಿಕೊಳ್ಳಲು ಮನಸ್ಸು ಹಿಂಜರಿಯುತ್ತದೆ. ಹಾಗೆಯೇ ಸ್ಪಂದಿಸುವ ಜನರಲ್ಲಿ ವ್ಯಕ್ತಪಡಿಸಿಕೊಂಡರೂ ಸಹ ನಂಬಿಕೆ ಉಳಿಯಲ್ಲ. ಯಾಕೆಂದರೆ, ಒಮ್ಮೆ ನಮ್ಮಲ್ಲಿನ ಭಾವನೆಗಳನ್ನು ವ್ಯಕ್ತಪಡಿಸಿಕೊಂಡಮೇಲೆ ಅವರ ಪ್ರತಿಕ್ರಿಯೆ ಹಾಗು ಅವರು ನಡೆದುಕೊಳ್ಳುವ ರೀತಿ, ಅವರು ಕಾಯ್ದುಕೊಳ್ಳುವ ಅಂತರ ಸಾಕಷ್ಟು ನೋವುಂಟು ಮಾಡುತ್ತದೆ. ಆಡುವ ಮಾತಿನಲ್ಲಿ ಕಾಳಜಿ ಇದ್ದರೆ ಅದು ಎದುರಿಗಿದ್ದವರ ಮನವನ್ನು ಸುಲಭವಾಗಿ ಮುಟ್ಟುತ್ತದೆ ಅಂತಾರೆ. ಆದರೆ, ಕೆಲವೊಮ್ಮೆ ನಾವು ತೋರುವ ಕಾಳಜಿಯೇ ನಮಗೆ ನೋವನ್ನು ಉಳಿಸಿಬಿಡುತ್ತೆ. ಹಾಗೆ ನಾವು ನಿರೀಕ್ಷೆ ಮಾಡುವ ಕಾಳಜಿಗೆ ಸೂಕ್ತ ಸ್ಪಂದನೆ ಹಾಗು ಪ್ರತಿಕ್ರಿಯೆ ಸಿಗದೆ ಹೋದಾಗ ಯಾರೇ ಆಗಲಿ ಜೀವನದಲ್ಲಿ ನಿರಾಸೆ ಹೊಂದಿ, ಯಾವುದರಲ್ಲಿಯೂ ಆಸಕ್ತಿ ಇಲ್ಲದೆ, ಯಾರೊಂದಿಗೂ ಸ್ಪಂದಿಸದೆ ಒಂಟಿಯಾಗಿದ್ದು ಬಿಡುತ್ತಾರೆ. ಅಂತಹ ಒಂಟಿತನಕ್ಕೆ ಶರಣಾದ ಶರಣಾರ್ಥಿ ನಾನು. ಯಾಕೆಂದರೆ ನೊಂದವರ, ಬದುಕಿನ ಅರ್ಥ ತಿಳಿದವರ, ಕಳೆದುಕೊಂಡದ್ದರ ಬೆಲೆ ತಿಳಿದಿರುವವರೊಂದಿಗೆ ಸ್ಪಂದಿಸಲು ಹೊರಟ ನನಗೆ ನಿರಾಸೆ, ನೋವು, ದುಃಖವೇ ಉಳಿಯಿತೇ ವಿನಃ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಹಾಗೆಯೇ ಸ್ಪಂದಿಸಿದವರ ಜೊತೆಗೆ ನನ್ನಲ್ಲಿನ ಭಾವನೆಗಳನ್ನು ವ್ಯಕ್ತಪಡಿಸಿಕೊಂಡು ಮನಸ್ಸು ಸಮಾಧಾನ ಹೊಂದಿದಂತೆ ಕಂಡ ನನಗೆ ಅವರ ಪ್ರತಿಕ್ರಿಯಿಸುವ, ನನ್ನೊಂದಿಗೆ ಸ್ಪಂದಿಸುವ ರೀತಿಯಿಂದಲೇ ಮನಸ್ಸು ಕಲ್ಲಾಗಿಹೋಗಿದೆ. ಯಾಕೆಂದರೆ, ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ. ಬೆಲೆಯಿದ್ದರೂ ಸ್ಪಂದಿಸುವ ಮನಸ್ಸು ಹಾಗು ಸಮಯ ಯಾರಲ್ಲಿಯೂ ಇಲ್ಲ.... ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್