#📜ಪ್ರಚಲಿತ ವಿದ್ಯಮಾನ📜
ಕೃತಕಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಸರ್ಕಾರದ ಎಲ್ಲ ಹಂತದ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತ, ನೈತಿಕ ಮತ್ತು ಪಾರದರ್ಶಕ ರೀತಿಯಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದಕ್ಕೆ ಕರ್ನಾಟಕ ಸರ್ಕಾರ ಕೃತಕಬುದ್ಧಿಮತ್ತೆಯ (ಎಐ) ಹೊಣೆಗಾರಿಕೆ ಸಮಿತಿ ರಚಿಸಿದೆ.
ಇನ್ಫೊಸಿಸ್ ನ ಸಹಸಂಸ್ಥಾಪಕ ಹಾಗೂ ಆಕ್ಸಿಲರ್ ವೆಂಚರ್ಸ್ ನ ಚೇರ್ಮನ್ ಕ್ರಿಸ್ ಗೋಪಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಮತ್ತು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ ಸಹ-ಅಧ್ಯಕ್ಷತೆಯಲ್ಲಿ ಉದ್ಯಮ, ಶೈಕ್ಷಣಿಕ, ನೀತಿ - ನಿರೂಪಣೆ ಮತ್ತು ಪ್ರಮುಖ ಕಾನೂನು ತಜ್ಞರನ್ನು ಒಳಗೊಂಡ 13 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಮೊದಲ ಸಭೆ ನಡೆಯಲ್ಲಿ ತ್ವರಿತವಾಗಿ ಬದಲಾಗುತ್ತಿರುವ ʼಎಐʼ ವಲಯ ಮತ್ತು ʼಎಐʼ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಥ ಆಡಳಿತ ಚೌಕಟ್ಟುಗಳನ್ನು ರೂಪಿಸುವುದರ ಅಗತ್ಯವನ್ನು ಹಾಗೂ ಅದರಲ್ಲೂ ವಿಶೇಷವಾಗಿ ನಾಗರಿಕರ ಮೇಲೆ ಪರಿಣಾಮ ಬೀರುವ ವ್ಯವಸ್ಥೆಗಳಲ್ಲಿನ ʼಎಐʼ ಪ್ರಭಾವವನ್ನು ಪ್ರಮುಖವಾಗಿ ಚರ್ಚಿಸಲಾಯಿತು.
ಸರ್ಕಾರದ ಆಡಳಿತ ಯಂತ್ರದಾದ್ಯಂತ ನಿಯೋಜಿಸಲಾಗುವ ʼಎಐʼ ಸೌಲಭ್ಯಗಳು ಸುರಕ್ಷಿತ, ನ್ಯಾಯಯುತ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವೀನ್ಯತೆ ಜಾರಿಗೊಳಿಸುವ ಗುರಿ ಹೊಂದಿರುವ ಕರ್ನಾಟಕಕ್ಕಾಗಿ ಜವಾಬ್ದಾರಿಯುತ ʼಎಐʼ ನೀತಿ ಮತ್ತು ಅನುಷ್ಠಾನ ಮಾರ್ಗಸೂಚಿಯನ್ನು ಸಮಿತಿಯು ಅಭಿವೃದ್ಧಿಪಡಿಸಲಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ತನ್ನ ಡೀಪ್ಟೆಕ್ ದಶಕವನ್ನು ಪ್ರವೇಶಿಸುತ್ತಿದ್ದಂತೆ, ರಾಜ್ಯ ಕೃತಕಬುದ್ಧಿಮತ್ತೆ ನಾವೀನ್ಯತೆಗೆ ವೇಗ ನೀಡುವುದರ ಜೊತೆಗೆ ಈ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶದಿಂದ ನಿಯೋಜಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಗಮನಹರಿಸಿದೆ ಎಂದರು.
ʼಎಐʼ ಉತ್ತರದಾಯಿ ಸಮಿತಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರ ನಂಬಿಕೆ ರಕ್ಷಿಸುವಾಗ ನಾವೀನ್ಯತೆ ಉತ್ತೇಜಿಸುವ ಆಡಳಿತದ ಚೌಕಟ್ಟು ರೂಪಿಸುವುದಕ್ಕೆ ನೆರವಾಗಲು ಉದ್ಯಮ, ಶೈಕ್ಷಣಿಕ ಮತ್ತು ನೀತಿ - ನಿರೂಪಣೆ ವಲಯದ ಪ್ರಮುಖ ತಜ್ಞರ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲಿದೆ. ಈ ಉಪಕ್ರಮ ಕರ್ನಾಟಕ ಅತ್ಯಾಧುನಿಕ ಮತ್ತು ಹೊಣೆಗಾರಿಕೆಯ ʼಎಐʼ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಮುಂದುವರಿಯಲು ನೆರವಾಗಲಿದೆʼ ಎಂದರು.
ಮೊದಲ ಸಭೆಯಲ್ಲಿ, ಸಮಿತಿಯು ಗಮನಹರಿಸುವ ಪ್ರಮುಖ ಕ್ಷೇತ್ರಗಳ ಬಗ್ಗೆ ಸದಸ್ಯರು ವಿವರವಾಗಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಸಂಗತಿಗಳು: ಹೊಣೆಗಾರಿಕೆಯ ʼಎಐʼ ತತ್ವಗಳು ಮತ್ತು ರಾಜ್ಯ ಸರ್ಕಾರಕ್ಕೆ ನೀತಿ ನಿರೂಪಣೆಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು.
ದೇಶದ ʼಎಐʼ ಆಡಳಿತ ಮಾರ್ಗಸೂಚಿಗಳಿಗೆ ಅನುಗುಣವಾಗಿರುವ ಮತ್ತು ಕಾನೂನುಬದ್ಧತೆ, ನ್ಯಾಯಸಮ್ಮತತೆ, ತಾರತಮ್ಯ ಮಾಡದಿರುವುದು, ಗೌಪ್ಯತೆ, ಸುರಕ್ಷತೆ, ಭದ್ರತೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿ ಸೇರಿದಂತೆ ಜಾಗತಿಕ ಅತ್ಯುತ್ತಮ ರೂಢಿಗಳ ಜೊತೆಗೆ ಹೊಂದಿಕೆಯಾಗುವ ನೀತಿ – ನಿಯಮಗಳನ್ನು ರೂಪಿಸುವುದು.
ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಮತ್ತು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಜೊತೆಗಿನ ಹೊಂದಾಣಿಕೆಯಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸಿಕೊಳ್ಳಲು ಜವಾಬ್ದಾರಿಯುತ ʼಎಐʼ ನೀತಿ ಚೌಕಟ್ಟನ್ನು ಶಿಫಾರಸು ಮಾಡುವುದು.
ನಾಗರಿಕರ ವರ್ತನೆ, ಚಟುವಟಿಕೆಗಳು ಮತ್ತು ಸಮಾಜದಲ್ಲಿ ಅವರ ನಡೆನುಡಿಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವುದರ ನಿಷೇಧ ಸೇರಿದಂತೆ ಕಾನೂನುಬಾಹಿರ ಅಥವಾ ಅಸಮಾನ ಕಣ್ಗಾವಲು, ನಿಷೇಧಿಸಬೇಕಾದ ಅಥವಾ ನಿರ್ಬಂಧಿಸಬೇಕಾದ ʼಎಐʼ ನಡವಳಿಕೆಗಳನ್ನು ಗುರುತಿಸುವುದು.
ಕಲ್ಯಾಣ ಕಾರ್ಯಕ್ರಮಗಳ ವಿತರಣೆ, ಆರೋಗ್ಯ ರಕ್ಷಣೆ, ಶಿಕ್ಷಣ, ಕಾನೂನು ಸುವ್ಯವಸ್ಥೆ, ನೇಮಕಾತಿ, ಹಣಕಾಸು ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ ಗರಿಷ್ಠ ಅಪಾಯದ ʼಎಐʼ ಅಪ್ಲಿಕೇಷನ್ಗಳಿಗೆ ಸುರಕ್ಷತಾ ಕ್ರಮಗಳು, ಅನುಮೋದನೆಗಳು ಮತ್ತು ಪರಿಶೀಲನಾ ಕಾರ್ಯವಿಧಾನಗಳನ್ನು ಶಿಫಾರಸು ಮಾಡುವುದು.
ಭಾರತದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯೊಂದಿಗೆ ಹೊಂದಿಕೆಯಾಗುವ ಡೇಟಾ ಗುಣಮಟ್ಟ, ಪ್ರಾತಿನಿಧ್ಯ, ಉದ್ದೇಶಗಳ ಮಿತಿ, ಸುರಕ್ಷಿತ ಡೇಟಾ-ಹಂಚಿಕೆ ಶಿಷ್ಟಚಾರಗಳ ಮಾನದಂಡಗಳನ್ನು ಒಳಗೊಂಡಂತೆ ʼಎಐʼ ವ್ಯವಸ್ಥೆಗಳಿಗೆ ದತ್ತಾಂಶ ಆಡಳಿತ ಮತ್ತು ಗೌಪ್ಯತೆ ಸುರಕ್ಷತಾ ಕ್ರಮಗಳ ವ್ಯಾಖ್ಯಾನ.
ನಾಗರಿಕರು ʼಎಐʼ-ಕಾರ್ಯಗತಗೊಳಿಸಿದ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಿದಾಗ ಮಾಹಿತಿ ಬಹಿರಂಗಪಡಿಸುವಿಕೆ, ʼಎಐʼ-ನೆರವಿನ ನಿರ್ಧಾರಗಳಿಗೆ ವಿವರಣೆಯ ಮಾನದಂಡಗಳು ಮತ್ತು ತಪ್ಪಾದ ಅಥವಾ ತಾರತಮ್ಯದ ಫಲಿತಾಂಶಗಳ ಸಂದರ್ಭಗಳಲ್ಲಿ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಾರ್ಯವಿಧಾನಗಳನ್ನು ನಿಗದಿಪಡಿಸುವುದು.
ಪಕ್ಷಪಾತ, ಪ್ರತಿಕೂಲ ದಾಳಿಗಳು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ತಪ್ಪು ದಾರಿಗೆ ಒಯ್ಯಲು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಹಾನಿಕಾರಕ ಮಾಹಿತಿಯನ್ನು ಡೇಟಾದಲ್ಲಿ ಸೇರಿಸುವ ಪ್ರಕ್ರಿಯೆ, ಡೀಪ್ಫೇಕ್ಗಳ ದುರುಪಯೋಗದಂತಹ ಅಪಾಯಗಳನ್ನು ಪರಿಹರಿಸಲು ಸ್ವತಂತ್ರ ಲೆಕ್ಕಪರಿಶೋಧನೆಗಳು, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ತುರ್ತು ಘಟನೆಗೆ ಪ್ರತಿಕ್ರಿಯಿಸುವ ನಿಯಮಾವಳಿ ಗಳನ್ನು ಶಿಫಾರಸು ಮಾಡುವುದು.
ಬಳಕೆದಾರರು ನೀಡಿದ ಮಾಹಿತಿ ಆಧರಿಸಿ ಹೊಸ ಮಾಹಿತಿ ಒದಗಿಸುವುದರ, ಸಾಮಾಜಿಕ ಮಾಧ್ಯಮ ತಂತ್ರಜ್ಞಾನಗಳ ಪರಿಣಾಮಗಳ ಪರಿಶೀಲನೆ ಮತ್ತು ಅಂತಹ ಅಪಾಯಗಳನ್ನು ತಗ್ಗಿಸಲು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡುವುದು.
ಸರ್ಕಾರಿ ಇಲಾಖೆಗಳು ಅಳವಡಿಸಿಕೊಂಡ ʼಎಐʼ ವ್ಯವಸ್ಥೆಗಳಿಗೆ ಜವಾಬ್ದಾರಿಯುತ ʼಎಐʼ ಖರೀದಿ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು.
ಸರ್ಕಾರಿ ಅಧಿಕಾರಿಗಳಿಗೆ ʼಎಐʼ ಸಾಕ್ಷರತಾ ಕಾರ್ಯಕ್ರಮಗಳನ್ನು ಶಿಫಾರಸು ಮಾಡುವುದು, ಜೊತೆಗೆ ಇಲಾಖೆಗಳಾದ್ಯಂತ ಪ್ರಾಯೋಗಿಕ ನಿಯೋಜನೆಗಾಗಿ ಆದ್ಯತೆಯ ʼಎಐʼ ಬಳಕೆ ಗುರುತಿಸುವುದು.
ಸಮಿತಿಯ ಸ್ವರೂಪ: ಸಮಿತಿಯು ಪ್ರಮುಖ ತಂತ್ರಜ್ಞಾನ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಹಿರಿಯ ನಾಯಕರು ಮತ್ತು ತಜ್ಞರನ್ನು ಒಳಗೊಂಡಿದೆ. ಇದರಲ್ಲಿ ಐಬಿಎಂ, ಆಕ್ಸೆಂಚರ್, ಕಿಂಡ್ರಿಲ್, ವಿಪ್ರೊ, ಐಐಐಟಿ ಬೆಂಗಳೂರು ಮತ್ತು ನಾಸ್ಕಾಂ ಪ್ರತಿನಿಧಿಗಳು ಸೇರಿದಂತೆ, ʼಎಐʼ ನೀತಿ, ಕಾನೂನು ಮತ್ತು ಆಡಳಿತದ ತಜ್ಞರು ಸೇರಿದ್ದಾರೆ.
ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಸಮಿತಿಯು 60 ದಿನಗಳಲ್ಲಿ ಮಧ್ಯಂತರ ವರದಿಯನ್ನು ಮತ್ತು 90 ದಿನಗಳಲ್ಲಿ ಅಂತಿಮ ಶಿಫಾರಸುಗಳನ್ನು ಸಲ್ಲಿಸಲಿದೆ.
ಸಮಿತಿಯ ಸದಸ್ಯರು:
ಅಕ್ಸೆಂಚರ್ ಇಂಡಿಯಾದ ಕಂಟ್ರಿ ಮ್ಯಾನೇಜಿಂಗ್ ಡೈರೆಕ್ಟರ್– ಅಜಯ್ ವಿಜ್
ಕಿಂಡ್ರಿಲ್ ಇಂಡಿಯಾ ಅಧ್ಯಕ್ಷ – ಲಿಂಗರಾಜು ಸಾವ್ಕರ್ ಐಬಿಎಂ ಇಂಡಿಯಾ, ದಕ್ಷಿಣ ಏಷ್ಯಾ ಮುಖ್ಯ ತಂತ್ರಜ್ಞಾನ ಅಧಿಕಾರಿ – ಅಮಿತ್ ಸಿಂಘೀ
ವಿಪ್ರೊ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ – ಸಂಜೀವ್ ಜೈನ್
ಐಐಐಟಿ ಬೆಂಗಳೂರು ನಿರ್ದೇಶಕ – ಪ್ರೊ. ದೇಬಬ್ರತ ದಾಸ್
ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸೇವಾ ಕಂಪನಿಗಳ ಸಂಘಟನೆ (ನಾಸ್ಕಾಂ) ಪ್ರಾದೇಶಿಕ ನಿರ್ದೇಶಕ – ಭಾಸ್ಕರ್ ವರ್ಮ
ಸರ್ವಂ ಎಐ ಸಹ ಸ್ಥಾಪಕ – ವಿವೇಕ್ ರಾಘವನ್
ಎಐ ಸಿಒಇ-ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ – ಅಶೋಕ್ ಕಾಮತ್
ಐಬಿಎಂ ಕಾನೂನು ವಿಭಾಗದ ಮುಖ್ಯಸ್ಥ – ದಿನೇಶ್ ವಿಜಯಕುಮಾರ್
ಟ್ರೈಲೀಗಲ್ ತಂತ್ರಜ್ಞಾನ, ಮಾಧ್ಯಮ ಮತ್ತು ದೂರಸಂಪರ್ಕ ವಿಭಾಗದ ಮುಖ್ಯಸ್ಥ – ರಾಹುಲ್ ಮಂಥನ್
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ʼಕೆಐಟಿಎಸ್ʼನ ವ್ಯವಸ್ಥಾಪಕ ನಿರ್ದೇಶಕ
#State #govt #forms #AI #Accountability #Committee #malgudiexpress #malgudinews #news #TopNews