Vikas Chandra
872 views
#PSSM World ನಿಯಂತ್ರಣದಲ್ಲಿಡುವುದು ಹೇಗೆ? ಸಾಮಾನ್ಯವಾಗಿ ಬಹುತೇಕ ಜನರಿಗೆ ಕೋಪವನ್ನ ನಿಯಂತ್ರಣದಲ್ಲಿ ಇಡುವುದು ಬಹಳ ಕಷ್ಟ. ಆದುದರಿಂದ, ಕೋಪ ಬಂದ ಮೇಲೆ ನಿಯಂತ್ರಿಸಿಕೊಳ್ಳುವ ಬದಲು ಕೋಪಿಸಿಕೊಳ್ಳುವುದನ್ನೇ ನಿಯಂತ್ರಿಸುವುದು ಒಳ್ಳೆಯದು. ಆದರೆ ಅದು ನಮ್ಮಂತಹ ಸಾಮಾನ್ಯರಿಗೆ ಕಷ್ಟ. ಕೋಪಿಸಿಕೊಳ್ಳಲೇಬೇಕು ಮತ್ತು ಅದನ್ನ ದಮನ ಮಾಡಿಕೊಳ್ಳಲೂಬೇಕು. ಸಂಸಾರ ಸಾಗರದಲ್ಲಿ "ತಾಪ" ತ್ರಯಗಳು ಹಲವು. ಹಣಕಾಸಿನ ವಿಷಯ, ಮಕ್ಕಳ ವಿದ್ಯಾಭ್ಯಾಸದ ವಿಷಯ, ಮನೆಗೆ ನೆಂಟರು ಬರುವ ಮತ್ತು ನೆಂಟರ ಮನೆಗೆ ಹೋಗುವ ವಿಚಾರ, ಬೇರೆ ಎಲ್ಲಿಗಾದರೂ ಹೋಗಬೇಕಾದ ವಿಚಾರ, ಮನೆಗೆ ಏನಾದರೂ ಸಾಮಾನು ಸರಂಜಾಮು ಗಳನ್ನ ತರುವ ವಿಚಾರ, ಹೀಗೆ ಹತ್ತು ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಈ ತರದ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರದ ಸಂಸಾರದಲ್ಲಿ ರಸವತ್ತತೆ ಇರದು. ಹೀಗೆ ಭಿನ್ನಾಭಿಪ್ರಾಯ ಬಂದಾಗಲೆಲ್ಲ ಸ್ವಲ್ಪ ವಾಗ್ವಾದ ನಡೆದು ಕೋಪ ಬರುವುದು ಮಾನವ ಸಹಜ ಕ್ರಿಯೆ ಮತ್ತು ಅದು ಬರಲೇ ಬೇಕು. ಹೀಗೆ ಬಂದ ಕೋಪವನ್ನ ಬೆಳೆಯಲು ಬಿಡದೆ ಅದನ್ನ ನಿಯಂತ್ರಿಸಿಕೊಂಡು ಹೋಗುವುದು ಸುಖ ಸಂಸಾರಕ್ಕೆ ಅತಿ ಮುಖ್ಯ ಈ ರೀತಿಯ ಕೋಪವನ್ನ ನಿಯಂತ್ರಣ ಮಾಡುವುದು ಹೇಗೆ? ನನ್ನ ಅನುಭವವದಲ್ಲಿ ಹೇಳುತ್ತೇನೆ. ವಾದ ಮತ್ತು ಸಮರ್ಥನೆ. ಮಾತಿಗೆ ಮಾತು ಬೆಳೆಸುವ ಬದಲು ಯಾರಾದರೊಬ್ಬರು ಸುಮ್ಮನಾಗಬೇಕು ಇಲ್ಲವೆ ಒಪ್ಪಿಕೊಳ್ಳಬೇಕು. ಮಾತಿನ ವಿಚಾರವನ್ನ ಬದಲಿಸಲೂಬಹುದು. "ನಾನೇ ಸರಿ" ಎಂದು ಸಮರ್ಥನೆ ಮಾಡಿಕೊಳ್ಳುವ ಬದಲು "ನೀನೇ ಸರಿ" ಇರಬಹುದು ಎನ್ನುವುದು ಸೂಕ್ತ. ಸಂಯಮ ಮತ್ತು ಅಹಂ. ಸಂಯಮ ಎಷ್ಟು ಮುಖ್ಯವೋ ಅಹಂ ಅಷ್ಟೇ ಅಪಾಯ. ನಾನು ಅನ್ನುವ ಅಹಂಕಾರವನ್ನ ಬಿಟ್ಟು ಸಂಯಮದಿಂದ ಸಮಸ್ಯೆ ಯನ್ನ ಬಗೆಹರಿಸಿದರೆ ಅಲ್ಲಿ ಕೋಪಕ್ಕೆ ಜಾಗವಿರದು. ಸೋಲು ಮತ್ತು ಗೆಲುವು. ಇದು ಅತಿ ಮುಖ್ಯವಾದ ವಿಚಾರ. ಪ್ರತಿ ಸಾರಿಯೂ ಕೋಪಬಂದಾಗ ಅದು ಅತಿರೇಕಕ್ಕೆ ಹೋಗಲು ಕಾರಣವೇ ಈ "ಸೋಲು" ಮತ್ತು "ಗೆಲುವು" ಸೋತು ಬಿಡಿ. ಸೋತು ಬಿಡಿ, ಪ್ರತಿ ಬಾರಿಯೂ ನೀವೇ ಸೋತುಬಿಡಿ. ಗಂಡನ ಮುಂದೆ ಹೆಂಡತಿ ಅಥವಾ ಹೆಂಡತಿಯ ಮುಂದೆ ಗಂಡ ಇಲ್ಲವೆ ಮಕ್ಕಳ ಮುಂದೆ ತಂದೆ ತಾಯಿ ಸೋಲುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಆ ಸೋಲು ಮುಂದಾಗಬಹುದಾದ ಅಪಾಯವನ್ನ ತಪ್ಪಿಸುತ್ತದೆ. ಸೋತು ಬಿಡಿ, ಪ್ರತಿ ಸಾರಿಯೂ ನೀವೇ ಸೋತು ಬಿಡಿ. ಹಾಗಾದರೆ ಯಾರು ಸೋಲಬೇಕು. ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಸೋಲುವುದಿಲ್ಲ. ವಯಸ್ಸಾದವರಿದ್ದರೆ ಅವರೂ ಸೋಲರಾರರು. ಇನ್ನು ಹೆಂಡತಿಗೆ ಸ್ವಲ್ಪ ಅಹಂ ಹೆಚ್ಚಿರುತ್ತದೆಯಾದ್ದರಿಂದ ಸೋಲುವುದು ಕಷ್ಟ. ಇದು ಸಾನಾನ್ಯವಾಗಿ ಸತ್ಯವಾದರೂ ಕೆಲವು ಮನೆಗಳಲ್ಲಿ ಸನ್ನಿವೇಶ ಇದಕ್ಜೆ ವಿರುದ್ಧವಾಗಿ ಕೂಡಾ ಇರಬಹುದು. ಕಡೆಯದಾಗಿ ಸೋಲುವ ಸರದಿ ಗಂಡನಿಗೇ ಕಟ್ಟಿಟ್ಟ ಬುತ್ತಿ. ತೊಂದರೆ ಇಲ್ಲ ಸೋತು ಬಿಡಿ. ಅವರು ಗೆದ್ದಿದ್ದರಿಂದ ನೀವು ಸೋತಿರೋ ಅಥವಾ ನೀವು ಸೋತಿದ್ದರಿಂದ ಅವರು ಗೆದ್ದರೋ ಅನ್ನುವುದನ್ನ ತಿಳಿಯುವ ಸಾಹಸವನ್ನ ಎಂದೂ ಮಾಡಬೇಡಿ. ಒಟ್ಟಿನಲ್ಲಿ ನೀವು ಸೋತು ಅವರನ್ನೆಲ್ಲ ಗೆದ್ದಿರಿ, ಗೆಲ್ಲಿಸಿದಿರಿ ಮತ್ತು ಸಿಟ್ಟನ್ನ ದಮನ ಮಾಡಿದಿರಿ ಅನ್ನುವ ಸಮಾಧಾನದಿಂದ ನೆಮ್ಮದಿಯಾಗಿರಿ. ಇವನ್ನ ಹೊರತು ಪಡಿಸಿ ಕೆಲವು ಸಲಹೆಗಳು. ಕೋಪ ಹೆಚ್ಚಾಗುತ್ತಿದ್ದರೆ ಮೌನಕ್ಕೆ ಶರಣಾಗಿ. ಇಲ್ಲವಾದರೆ ಒಂದರುಂದ ನೂರರವರೆಗೆ ಮತ್ತು ನೂರರಿಂದ ಇಂದರ ತನಕ ಮನಸ್ಸಿನಲ್ಲಿಯೇ ಎಣಿಸಿ. ಇನ್ನೂ ಕೋಪ ಕಡಿಮೆಯಾಗದಿದ್ದಲ್ಲಿ ಮನೆ ಕೆಲಸಗಳನ್ನ ಮಾಡಿ. ಬಟ್ಟೆ ತೊಳೆಯುವುದು, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಇತ್ಯಾದಿ. ಆಗ ಕೋಪ ತಣ್ಣಗಾಗುತ್ತದೆ. ಆದರೆ, ಕೋಪ ಬಂದಾಗ ಮನೆಯಿಂದ ಹೊರ ಹೋಗುವುದು ಸೂಕ್ತವಲ್ಲ. ಈ ರೀತಿಯ ಮನೋಭಾವವಿದ್ದಲ್ಲಿ ಸಿಟ್ಟು ಹೆಚ್ಚು ಹೊತ್ತು ಬಾಳಲಾರದು.