#PSSM World
ಜೀವನದಲ್ಲಿ ತಾಳ್ಮೆ ಎಷ್ಟು ಮುಖ್ಯ? ಮತ್ತು ಏಕೆ?
ಸಹನೆ ಮತ್ತು ತಾಳ್ಮೆ ಎಂಬ ಬ್ರಹ್ಮಾಸ್ತ್ರಗಳು ಬದುಕು ಎಂಬ ಯುದ್ಧವನ್ನು ಗೆಲ್ಲಲು ಬೇಕೇ ಬೇಕಾಗುತ್ತದೆ.
ಬದುಕೊಂದು ಸತ್ವ ಪರೀಕ್ಷೆ ಇದ್ದಂತೆ. ಅದು ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು, ತಾಳ್ಮೆಯನ್ನು ಹಾಗೂ ವಿವೇಕವನ್ನು ಪರೀಕ್ಷೆಗೆ ಒಡುತ್ತದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುರಾಗಬಹುದು. ಆ ಸವಾಲುಗಳನ್ನು ಎದುರಿಸುವ ದೃಢ ಸಂಕಲ್ಪ ಎದೆಯಲ್ಲಿ ಗಟ್ಟಿಯಾಗಿರಬೇಕು. ಇಲ್ಲಿ ಮಾಡಿದ ಪ್ರಯತ್ನಗಳೆಲ್ಲ ಯಶಸ್ವಿಯಾಗುವುದಿಲ್ಲ, ಇಟ್ಟ ಗುರಿಗಳೆಲ್ಲ ತಲುಪುವುದಿಲ್ಲ, ನಂಬಿದವರೆಲ್ಲರೂ ನಂಬಿಕೆಯನ್ನು ಉಳಿಸಿಕೊಳ್ಳುವುದಿಲ್ಲ,, ಇದು ಅನಿಶ್ಚಿತತೆಗಳ ಸಂತೆ, ನಿಜ ಹೇಳಬೇಕೆಂದರೆ ಜೀವನದ ಬಹುತೇಕ ಸಂದರ್ಭಗಳಲ್ಲಿ ನಾವು ಬಯಸುವುದೇ ಬೇರೆ ಮತ್ತು ಆಗುವುದೇ ಬೇರೆ. ಆದರೂ ಸಹ ನಾವು ಸಹನೆ ಮತ್ತು ತಾಳ್ಮೆಯನ್ನು ಕಳೆದುಕೊಳ್ಳಬಾರದು.
ಇಲ್ಲಿ ಪ್ರತಿಯೊಬ್ಬರೂ ಸಹ ತನ್ನ ತನ್ನ ಸ್ವಾರ್ಥಕ್ಕಾಗಿಯೇ ಪ್ರಯತ್ನಿಸುತ್ತಿರುತ್ತಾರೆ. ಒಬ್ಬನ ಗೆಲುವು ಸಹಜವಾಗಿ ಇತರರ ಸೋಲೇ ಆಗಿರುವುದರಿಂದ ಒಬ್ಬನ ಗೆಲುವಿನಿಂದಾಗಿ ಹಲವಾರು ಜನರಿಗೆ ನಿರಾಶೆಯಾಗುತ್ತದೆ. ಒಲಂಪಿಕ್ ನಲ್ಲಿ ಯಾವುದೇ ಸ್ಪರ್ಧೆಯಲ್ಲಿಯೂ ಸಹ ಒಂದೇ ಒಂದು ಪದಕವಿರುತ್ತದೆ. ಅದನ್ನು ಗೆಲ್ಲಬೇಕೆಂದು ಜಗತ್ತಿನ ಕೋಟ್ಯಂತರ ಜನ ಬಯಸುತ್ತಿರುತ್ತಾರೆ. ಆದರೆ ಒಬ್ಬನಿಗೆ ಮಾತ್ರ ಅದನ್ನು ಪಡೆಯಲು ಸಾಧ್ಯ. ಅದನ್ನು ಆತ ಸೆಕೆಂಡಿನ ಒಂದು ಅಂಶದಲ್ಲಿ ಗೆಲ್ಲುತ್ತಾನೆ. ಆದರೂ ಸಹ ಗೆಲುವು ಗೆಲುವೇ ತಾನೇ ಆತ ಹೀರೋ ಆಗಿಬಿಡುತ್ತಾನೆ. ಒಂದು ಸೆಕೆಂಡಿನ ಹತ್ತನೇ ಒಂದು ಭಾಗದಷ್ಟು ಸಮಯದ ವ್ಯತ್ಯಾಸದಲ್ಲಿ ಆತ ಇಡೀ ಜಗತ್ತಿನ ಗಮನ ಕಳೆದು ವಿಜಯೋತ್ಸವದಿಂದ ನಡೆಯುತ್ತಾನೆಂದರೆ ನಮಗೆ ಸಮಯದ ಮಹತ್ವದ ಅರಿವಾಗಬೇಕು. ಆದರೆ ಆ ಕ್ಷಣದಲ್ಲಿ ವಿಫಲನಾದ ಎರಡನೆಯವನೂ ಸಹ ನಾಯಕನೇ, ಆದರೆ ಆತ ದುರಂತ ನಾಯಕನಾಗಿರುತ್ತಾನೆ.
ಹಾಗೆಂದು ಆ ಕ್ಷಣದ ಮಟ್ಟಿಗೆ ಸೋತವನು ಆ ಸೋಲಿನಿಂದ ಕಂಗೆಟ್ಟು ಸುಮ್ಮನೆ ಇರುವಂತಿಲ್ಲ, ವಿರಮಿಸುವಂತಿಲ್ಲ, ಪ್ರಯತ್ನವನ್ನು ಬಿಡುವಂತಿಲ್ಲ, ಏಕೆಂದರೆ ಅಲ್ಲಿಗೆ ಜೀವನ ಮುಗಿಯುವಂತಿಲ್ಲ, "ಮರಳಿ ಯತ್ನವ ಮಾಡು" ಎಂಬಂತೆ ನಾವು ಪದೇ ಪದೇ ಪ್ರಯತ್ನವನ್ನು ಮಾಡುತ್ತಲೇ ಇರಬೇಕಾಗುತ್ತದೆ. ಪ್ರತಿಯೊಂದು ಪ್ರಯತ್ನವು ಯಶಸ್ವಿಯಾಗದಿದ್ದರೂ ಸಹ ನಮಗೆ ಯಾವುದೋ ಒಂದು ಅಥವಾ ಒಂದಲ್ಲ ಒಂದು ಅನುಭವವನ್ನು ಕೊಡುತ್ತಲೇ ಹೋಗುತ್ತದೆ, ಆ ಅನುಭವವು ನಮ್ಮ ಮುಂದಿನ ಪ್ರಯತ್ನ ಮತ್ತಷ್ಟು ಪರಿಪೂರ್ಣವಾಗಲು ಕಾರಣವಾಗುತ್ತದೆ. ಅಂತಹ ಪ್ರತಿಯೊಂದು ಅನುಭವವು ಕೂಡ ಜೀವನದಲ್ಲಿ ಪಾಠವಾಗಬೇಕು ಮತ್ತು ನೀತಿ ಪಾಠವಾಗಬೇಕು. ಆಗ ಮಾತ್ರ ನಾವು ಮುಂಬರಲಿರುವ ಸೋಲುಗಳನ್ನು ಎದುರಿಸಲು ಮತ್ತು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ.
ಯಾವುದೇ ಪ್ರಯತ್ನ ಎಂಬುದು ಯಶಸ್ವಿಯಾಗಬೇಕಾದರೆ ಅದು ಪರಿಣಾಮಕಾರಿಯಾಗಿರುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಲು ನಾವು ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆಯನ್ನು, ಹಾಗೂ ಯೋಜನೆಗಳನ್ನು ಮಾಡಿಕೊಂಡಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಖಚಿತವಾದ ರೂಪುರೇಷೆಯಿಂದ ಕೂಡಿದ ಆತ್ಮವಿಶ್ವಾಸ ಇರಬೇಕು. ಸಾಧಿಸಿಯೇ ತೀರುವ ದೃಢಸಂಕಲ್ಪವಿರಬೇಕು. ಹಂತ ಹಂತದಲ್ಲಿಯೂ ಸಹ, ಹೆಜ್ಜೆ ಹೆಜ್ಜೆಗೂ ಸಹ ಮೈಯಲ್ಲ ಕಣ್ಣಾಗಿ ಯಾವುದೇ ರೀತಿಯ ಅಜಾಗರೂಕತೆ ಉಂಟಾಗದಂತೆ ಕಾರ್ಯನಿರ್ವಹಿಸಲು ಕಟಿಬದ್ಧರಾಗಿರಬೇಕು. Well begin is half done ಎನ್ನುವಂತೆ ಅತ್ಯಂತ ನಿಖರವಾದ, ಯೋಜಿತ ರೀತಿಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಬೇಕು. ಆಗ ಮಾತ್ರ ಆಯಾ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ.
ಇದಕ್ಕಾಗಿ ಒಂದು ಪುಟ್ಟ ಕಥೆಯನ್ನು ಹೇಳಲು ಬಯಸುತ್ತೇನೆ
ಬುದ್ಧನ ಶಿಷ್ಯನಾಗಿ ಒಬ್ಬನು ಬಂದು ಸೇರಿಕೊಳ್ಳುತ್ತಾನೆ. ತನ್ನನ್ನು ಮತ್ತು ತನ್ನ ಚಿಂತನೆಯನ್ನು ನಂಬಿ ಬಂದವರನ್ನು ಹಿಂದಿರುಗಿಸುವುದು ಬುದ್ಧನ ಜಾಯಮಾನವಲ್ಲ. ಆದರೆ ಅವನ ಮನೆಯವರಿಗೆ ಅವನು ಬುದ್ಧನ ಶಿಷ್ಯನಾಗುವುದು ಮತ್ತು ಸನ್ಯಾಸಿಯಾಗುವುದು ಇಷ್ಟವಿರುವುದಿಲ್ಲ. ಅದಕ್ಕಾಗಿ ಭಾರದ್ವಾಜನೆಂಬ ಆತನ ಅಣ್ಣನೊಬ್ಬನು ಬಂದು ಬುದ್ಧ ಗುರುವಿಗೆ ಹೀನಮಾನವಾಗಿ ಬಯ್ಯುತ್ತಾನೆ. ಬುದ್ಧನ ಶಿಷ್ಯರು ಅವನನ್ನು ಹೊಡೆಯಲು ಹೋಗುತ್ತಾರೆ. ಆದರೆ ಅವರನ್ನು ತಡೆದ ಬುದ್ಧನು ಆ ವ್ಯಕ್ತಿಯನ್ನು ಕೇಳುತ್ತಾನೆ..
ಬುದ್ಧ :ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆಯೇ..
ಆತ: ಹೌದು ಬರುತ್ತಾರೆ.
ಬುದ್ಧ : ಅವರು ಬಂದಾಗ ಅವರಿಗೆ ಏನಾದರೂ ಕೊಡುವ ಪದ್ಧತಿ ನಿಮ್ಮಲ್ಲಿದೆಯೇ?
ಆತ : ಕೊಡುವ ಪದ್ಧತಿಯು ಉಂಟು ಮತ್ತು ಅದನ್ನೆಲ್ಲ ಅವರು ಹೊತ್ತುಕೊಂಡು ಹೋಗುವ ಮತ್ತು ತಿಂದು ತೇಗಿ ಹೋಗುವ ಪದ್ಧತಿಯೂ ಉಂಟು.
ಬುದ್ಧ : ಒಂದು ವೇಳೆ ಅವರು ನೀವು ಕೊಟ್ಟ ವಸ್ತುಗಳನ್ನು ಪಡೆಯಲು ನಿರಾಕರಿಸಿದರೆ ನೀವು ಏನು ಮಾಡುತ್ತೀರಿ ?
ಆತ : ಹಾಳಾಗಿ ಹೋಗಲಿ ಎಂದು ನಾವೇ ಇಟ್ಟುಕೊಳ್ಳುತ್ತೇವೆ.
ಬುದ್ಧಗುರು : ಹೌದಾ ? ಹಾಗಾದರೆ ನಾನೂ ಅಷ್ಟೇ. ನೀನು ಬೈದ ಯಾವುದೇ ಬೈಗುಳಗಳನ್ನು ನಾನು ಇಟ್ಟುಕೊಳ್ಳುವುದಿಲ್ಲ. ಅದನ್ನು ನೀನೇ ತೆಗೆದುಕೊಂಡು ಹೋಗಿಬಿಡು..
ಎನ್ನುತ್ತಾನೆ. ಆಗ ಅಷ್ಟು ಹೊತ್ತು ಕೋಪಾವೇಶದಿಂದ ಮಾತನಾಡಿದಂತಹ ವ್ಯಕ್ತಿ ಶಾಂತನಾಗಿ ಪಶ್ಚಾತಾಪದಿಂದ ಅಲ್ಲಿಂದ ಹೊರಟು ಹೋಗುತ್ತಾನೆ. ಇದು ಬುದ್ಧ ಗುರುವಿನ ತಾಳ್ಮೆಗೆ ಅತ್ಯಂತ ಉತ್ತಮ ಉದಾಹರಣೆಯಾದ ಒಂದು ಸಣ್ಣ ಕಥೆ.
ಒಟ್ಟಾರೆಯಾಗಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಹನೆ ಮತ್ತು ತಾಳ್ಮೆಗಳು ಅತ್ಯಂತ ಅವಶ್ಯಕವಾದ ಅಂಶಗಳಾಗಿವೆ.