Malgudi Express
572 views
#📜ಪ್ರಚಲಿತ ವಿದ್ಯಮಾನ📜 ಶಿವರುದ್ರಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು ರಾಷ್ಟ್ರಕವಿ ಜಿಎಸ್ಎಸ್ ರವರಿಗೆ 100ನೇ ಜನ್ಮದಿನ ನವೋದಯ ಮತ್ತು ನವ್ಯ ಕಾವ್ಯ ಈ ಎರಡು ಬಗೆ ಕವಿತೆಗಳನ್ನು ಬರೆದ ಶಿವರುದ್ರಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು, ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರವರಿ 7ರಂದು ಜನಿಸಿರುತ್ತಾರೆ. ವೃತ್ತಿ ಜೀವನವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಗುವುದರ ಮೂಲಕ ಆರಂಭಿಸಿದ ಇವರು, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ,ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರ ಸೌಂದರ್ಯ ಸಮೀಕ್ಷೆ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ. ಇವರು ಸಾಮಗಾನ, ಕಾರ್ತಿಕ, ದೀಪದ ಹೆಜ್ಜೆ, ಪ್ರೀತಿ ಇಲ್ಲದ ಮೇಲೆ, ಅನಾವರಣ, ಕಾಡಿನ ಕತ್ತಲಲ್ಲಿ, ತೆರೆದ ದಾರಿ, ಮುಂತಾದ ಕವನ ಸಂಕಲನಗಳನ್ನು ರಚಿಸಿರುತ್ತಾರೆ ಸಿದ್ದರಾಮನ ಜೀವನ ಚರಿತ್ರೆ ಉಳ್ಳ ಕರ್ಮಯೋಗಿ ಒಂದು ಮುಖ್ಯ ಗದ್ಯಕೃತಿ, ವಿಮರ್ಶೆಯ ಪೂರ್ವ ಪಶ್ಚಿಮ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ, ಸ್ವರೂಪ, ನವೋದಯ ಕನ್ನಡ ಕವಿಗಳ ಕಾವ್ಯ ಕಲ್ಪನೆ, ಕಾವ್ಯಾರ್ಥ ಚಿಂತನ ಇವು ಇವರ ವಿಮರ್ಶಾತ್ಮಕ ಕೃತಿಗಳು. ಮಾಸ್ಕೋದಲ್ಲಿ 22 ದಿನ ಮತ್ತು ಅಮೆರಿಕಾದಲ್ಲಿ ಕನ್ನಡಿಗ, ಇದು ಇವರ ಪ್ರವಾಸ ಸಾಹಿತ್ಯ ಕೃತಿಗಳಾಗಿರುತ್ತದೆ. 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ, ಜೊತೆಗೆ ರಾಜ್ಯ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರ ಸೇವೆಗೆ ಸಂದಿದೆ. ಇವರು ಕುವೆಂಪುರವರ ಶಿಷ್ಯರಾಗಿದ್ದು ಶಿವರುದ್ರಪ್ಪನವರ ಬೆಳವಣಿಗೆಯಲ್ಲಿ ತ. ಸು.ಶಾಮರಾಯರು ಪ್ರಮುಖ ಕೊಡುಗೆ ಇದೆ. ಸುಗಮ ಸಂಗೀತ ಕ್ಷೇತ್ರದ ಗಾಯಕರಿಗೆ ಇವರು ಅಚ್ಚುಮೆಚ್ಚಿನ ಕವಿಯಾಗಿದ್ದಾರೆ. ಇವರ ಹಲವಾರು ಭಾವಗೀತೆಗಳು ಕಾರ್ಯಕ್ರಮಗಳಲ್ಲಿ ವೇದಿಕೆಗೆ ಘನತೆಯನ್ನು ತಂದುಕೊಡುತ್ತದೆ. ಪ್ರೀತಿ ಇಲ್ಲದ ಮೇಲೆ, ಎದೆ ತುಂಬಿ ಹಾಡುವೆನು, ಕಾಣದ ದೇವರು, ಹೀಗೆ ಅನೇಕ ಇವರ ಕವನಗಳು ಕನ್ನಡಿಗರ ಅಚ್ಚುಮೆಚ್ಚಿನ ಕವನಗಳಾಗಿದೆ, ಬಹುತೇಕ ಕನ್ನಡಿಗರ ನಾಲಿಗೆಗಳ ಮೇಲೆ ಇವು ಕುಣಿದಾಡುತ್ತದೆ. ಇವರ ಕವನದ ಸಾಲುಗಳನ್ನು ಕೇಳದ ಕಿವಿಗಳು ಅಪರೂಪ. ಗೋವಿಂದ ಪೈ ರವರು ಮೊದಲ ರಾಷ್ಟ್ರಕವಿ, ತದನಂತರ ಕುವೆಂಪುರವರನ್ನ ರಾಷ್ಟ್ರಕವಿ ಎಂದು ಗೌರವಿಸಲಾಯಿತು. ಕುವೆಂಪುರವರ ನಿಧನದ ನಂತರ ಅನೇಕ ವರ್ಷಗಳ ತರುವಾಯ ಡಾಕ್ಟರ್ ಜಿ ಎಸ್ ಶಿವರುದ್ರಪ್ಪ ಇವರನ್ನು ರಾಷ್ಟ್ರಕವಿ ಗೌರವ ನೀಡಿ ರಾಜ್ಯ ಸರ್ಕಾರ ಕರ್ನಾಟಕದ ಗೌರವವನ್ನು ಹೆಚ್ಚಿಸಿತು. ಶಿವರುದ್ರಪ್ಪನವರು 2013ರಲ್ಲಿ ನಿಧನರಾದ ನಂತರ ರಾಷ್ಟ್ರಕವಿ ಗೌರವಕ್ಕೆ ಯಾರನ್ನು ಆಯ್ಕೆ ಮಾಡದೇ ಇರುವುದು ಸರಿಯಲ್ಲ. ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗುವ ಮಟ್ಟದವರು ಅನೇಕ ಸಾಹಿತಿಗಳು, ಕವಿಗಳು ಕನ್ನಡ ನಾಡಿನಲ್ಲಿ ಇನ್ನೂ ಇದ್ದಾರೆ. ಕನ್ನಡ ಸಾಹಿತ್ಯ ಒಬ್ಬ ರಾಷ್ಟ್ರಕವಿಯನ್ನು ಗುರುತಿಸಲಾಗದಷ್ಟು ಬಡವಾಗಿಲ್ಲ. - ಕೆ ಎಸ್ ನಾಗರಾಜ್, ಬೆಂಗಳೂರು #GSShivarudrappa #greatest #poets #Kannada #ksnagaraj #malgudiexpress #malgudinews #news #TopNews