ಕೃಷ್ಣೆ 🦚💙
941 views
20 days ago
#🕉️ ಜೈ ಶ್ರೀ ರಾಮ🙏 #📜ರಾಮಾಯಣ ಟ್ಯಾಗ್🏹 ಮಜ್ಜಿಗೆ ರಾಮಾಯಣ – ಜನಪದ ಕಥೆ ಒಂದೂರಿನಲ್ಲಿ ಒಬ್ಬ ಮುದುಕಿ ಇದ್ದಳು. ಅವಳ ಮನೆ ಗುಡಿಸಿ; ಕೂಲಿ ಕೆಲಸ ಮಾಡಿ ತನ್ನ ಜೀವನ ಸಾಗಿಸುತ್ತಿದ್ದಳು. ಅದೇ ಊರಿನಲ್ಲಿ ಶ್ರೀಮಂತ ಗೌಡರ ಮನೆತನವಿತ್ತು. ದೊಡ್ಡ ಗೌಡರ ಪತ್ನಿ ಹೆಸರು ಗೌರಮ್ಮ. ಹೆಸರಿಗೆ ತಕ್ಕಂತೆ ಗೌರಮ್ಮ ಬಡಬಗ್ಗರಿಗೆ ಸಹಾಯ ಮಾಡುತ್ತಿದ್ದಳು; ಹಸಿದು ಬಂದವರಿಗೆ ಹೊಟ್ಟೆ ತುಂಬ ಆಹಾರ ಕೊಡುತ್ತಿದ್ದಳು. ದೀನ ದಲಿತರ ಮೇಲೆ ತುಂಬಾ ಅನುಕಂಪವಳ್ಳವಳಾಗಿದ್ದಳು. ತನ್ನ ಮನೆಗೆ ಬಂದ ಅತಿಥಿಗಳಿಗೆ ಊಟ ಬಡಿಸಿ ಅವರ ಮನ ತಣಿಸುತ್ತಿದ್ದಳು ಹಾಗೂ ಬಡವರಿಗೆ ದಾನ ಮಾಡುತ್ತಿದ್ದಳು. ಒಮ್ಮೆ ರಾಮನವಮಿ ಬಂದಿತು. ಆ ಊರಿನ ಗೌಡರು ರಾಮನವಮಿ ಪ್ರಯುಕ್ತ ಊರ ಹೊರಗಿನ ಮಾರುತಿ ಗುಡಿಯಲ್ಲಿ ಅಖಂಡ ರಾಮಾಯಣ ಕಥಾ ಸಪ್ತಾಹವನ್ನು ಏರ್ಪಡಿಸಿದರು. ರಾಮಾಯಣ ಮಾಡುವ ಕೀರ್ತನಕಾರರಾದ ರಾಮಾ ಶಾಸ್ತ್ರಿಗಳು ಹಳ್ಳಿಗೆ ಬಂದರು. ಮಾರುತಿ ಗುಡಿಯಲ್ಲಿ ದೊಡ್ಡ ಚಪ್ಪರ ಹಾಕಿ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಪ್ರತಿದಿನ ಸಂಜೆ 7:00ಕ್ಕೆ ರಾಮಾಯಣ ಕಥಾ ಶ್ರವಣ ನಡೆಯುತ್ತಿತ್ತು. ಶಾಸ್ತ್ರಿಗಳು ಬಹಳ ಚೆನ್ನಾಗಿ ವರ್ಣನೆ ಮಾಡುತ್ತಿದ್ದರು. ರಾಮಕಥೆ ಕೇಳಲು ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿತ್ತು. ಶಾಸ್ತ್ರಿಗಳು ಹೇಳುವ ರಾಮಾಯಣ ಕತೆ ಕೇಳಲು ಜನ ಕಿಕ್ಕಿರಿದು ತುಂಬಿರುತ್ತಿದ್ದರು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಆದರೆ ಗೌಡರ ಪತ್ನಿ ಗೌರಮ್ಮನಿಗೆ ಮನೆಯ ಕೆಲಸ ಜಾಸ್ತಿ. ನೆಂಟರು, ಆಪ್ತರು, ಮನೆ ತುಂಬಾ ಮಕ್ಕಳು ಇದ್ದುದರಿಂದ ಕಥೆ ಕೇಳಲು ಬರಲು ಅವರಿಗೆ ಆಗುತ್ತಿರಲಿಲ್ಲ. ಅದೇ ಊರಿನಲ್ಲಿದ್ದ ಬಡ ಮುದುಕಿ ನಿತ್ಯವೂ ಗೌಡರ ಮನೆಗೆ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು ಅಂದಿನ ಊಟಕ್ಕೆ ಗೌಡರ ಮನೆಯಿಂದಲೇ ಮಜ್ಜಿಗೆ ತೆಗೆದುಕೊಂಡು ಹೋಗುತ್ತಿದ್ದಳು. ಗೌಡರ ಮನೆಯಲ್ಲಿ ಕೊಟ್ಟಿಗೆ ತುಂಬಾ ಹಸು, ಎಮ್ಮೆ ಕಟ್ಟಿದ್ದರು. ಅಂದು ಸಹ ಮುದುಕಿ ಬೇಗನೆ ಮನೆ ಕೆಲಸ ಮುಗಿಸಿ, ಊಟ ಮಾಡಿಕೊಂಡು ರಾಮಕಥೆ ಕೇಳಲು ಹೋಗಬೇಕೆಂದು ಅವಸರವಾಗಿ ಮಜ್ಜಿಗೆ ಒಯ್ಯಲು ಗೌಡರ ಮನೆಗೆ ಬಂದಳು. ಹಾಗೆ ಮಾತನಾಡುತ್ತಾ ಮುದುಕಿ ಗೌಡ್ತಿಯನ್ನು ಕೇಳಿದಳು: “ಅಮ್ಮಾ, ನೀವು ರಾಮಾಯಣ ಕಥಾ ಪ್ರಸಂಗ ಕೇಳಲು ಬರುವುದಿಲ್ಲವೇ? ಶಾಸ್ತ್ರಿಗಳು ಬಹಳ ಚೆನ್ನಾಗಿ ರಾಮಕಥೆ ಹೇಳುತ್ತಾರೆ. ಈ ದಿನವಾದರೂ ಬಿಡುವು ಮಾಡಿಕೊಂಡು ಬನ್ನಿ.” ಗೌರಮ್ಮ ಹೇಳಿದಳು: “ನನಗೆ ಮನೆ ಕೆಲಸದಿಂದಾಗಿ ಹೊಸಿಲು ದಾಟಿ ಒಂದು ಹೆಜ್ಜೆ ಹೊರಗೆ ಇಡಲು ಆಗುವುದಿಲ್ಲ. ಮನೆ ತುಂಬಾ ಮಕ್ಕಳು, ನೆಂಟರು; ಅಡಿಗೆ ಮಾಡಿ ಬಡಿಸುವುದರಲ್ಲೇ ಸಮಯ ಕಳೆಯುತ್ತದೆ. ನೀನೇ ನಿತ್ಯ ಕಥೆ ಕೇಳಲು ಹೋಗ್ತೀಯಲ್ಲಾ—ಅಲ್ಲಿ ಏನು ಹೇಳಿದರು ಎಂಬುದನ್ನು ನನಗೂ ಹೇಳು.” ಮುದುಕಿ ಹೇಳಿದಳು: “ಅಮ್ಮಾ, ಇನ್ನೊಂದು ದಿನ ಹೇಳುತ್ತೇನೆ. ಈ ದಿನ ನನಗೆ ತಡವಾಗುತ್ತಿದೆ.” ಗೌರಮ್ಮ ಸ್ವಲ್ಪ ಮೊಂಡುತನದಿಂದ ತಮಾಷೆಗೆ ಹೇಳಿದಳು: “ಈ ದಿನವೇ ಹೇಳು. ನಾಳೆ ಕಥೆ ನಾಳೆಗೆ ಹೇಳು. ನೀನು ಹೇಳದಿದ್ದರೆ ಮಜ್ಜಿಗೆ ಕೊಡಲ್ಲ!” ಈ ಮಾತುಗಳನ್ನು ಕೇಳಿ ಮುದುಕಿಗೆ ಏನು ಮಾಡಬೇಕು ತೋಚಲಿಲ್ಲ. ಬೇಗ ಮಜ್ಜಿಗೆ ತೆಗೆದುಕೊಂಡು ಹೋಗಿ ಊಟ ಮಾಡಿ, ನಂತರ ಹೊಲದ ಕೂಲಿ ಕೆಲಸಕ್ಕೆ ಹೋಗಬೇಕು. ಮಜ್ಜಿಗೆ ಇಲ್ಲದೆ ಊಟ ಗಂಟಲಲ್ಲಿ ಇಳಿಯುವುದಿಲ್ಲ. ರಾಮಾಯಣ ಕಥೆ ಹೇಳುತ್ತ ಕೂತರೆ ಅದು ಇವತ್ತಿಗಂತೂ ಮುಗಿಯುವುದಿಲ್ಲ. ಸಮಯವಿಲ್ಲದೆಂದು ಗೌಡ್ತಿಗೆ ಹೇಳಲು ಬರುವುದಿಲ್ಲ. ಏನು ಮಾಡಲಿ, ಹೇಗೆ ಹೇಳಲಿ? ಎಂದು ಯೋಚಿಸುತ್ತಾ, ಜಾಣ ಮುದುಕಿ ಒಂದು ಉಪಾಯ ಮಾಡಿದಳು. ಅವಳು ಚುಟುಕಾಗಿ ಹೇಳಿದಳು: “ರಾಮ ಬಂದ – ರಾವಣನ ಕೊಂದ – ಸೀತೆಯನ್ನು ತಂದ – ಕೊಡ್ರಿ ಮಜ್ಜಿಗೆ!” (ಅಥವಾ: “ದಶರಥನ ಕಂದ – ರಾವಣನ ಕೊಂದ – ಸೀತೆಯನ್ನು ತಂದ!”) ಈ ಮೂರು ಮಾತುಗಳನ್ನು ಕೇಳಿ ಗೌರಮ್ಮ ಸಂತೋಷದಿಂದ: “ಹೋ! ರಾಮಾಯಣ ಎಂದರೆ ಇಷ್ಟೇನಾ?” ಎಂದುಕೊಂಡು ಎಂದಿಗಿಂತ ಹೆಚ್ಚಾಗಿ ಮಜ್ಜಿಗೆ ಹಾಕಿದಳು. ಮಜ್ಜಿಗೆ ಕಂಡು ಹಿರಿ ಹಿರಿ ಹಿಗ್ಗುತ್ತಾ ಮುದುಕಿ ತನ್ನ ಗುಡಿಸಲಿಗೆ ಹೋದಳು. ಅಂದಿನಿಂದ ಈ ಕತೆಗೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿತು. ಈ ಕಥೆಯಲ್ಲಿ ನವಿರಾದ ಹಾಸ್ಯದ ಜೊತೆ ತತ್ವವೂ ಅಡಗಿದೆ. ಒಬ್ಬ ಬಡ ಮುದುಕಿ—ಅಕ್ಷರ ಜ್ಞಾನವಿಲ್ಲದವಳು—ತನ್ನ ಬುದ್ಧಿವಂತಿಕೆಯಿಂದ ಕೆಲಸ ಮಾಡಿಸಿಕೊಂಡಳು. ಜನಪದ ಕಥೆಗಳಲ್ಲಿ ಮೇಲ್ನೋಟಕ್ಕೆ ಹಾಸ್ಯವಂತಾದರೂ, ಇಂಥ ಕಥೆಗಳ ಮೂಲಕ ಜೀವನದ ಪಾಠ ಕಲಿಯಬಹುದು. ಹಿಂದೆ ಅಜ್ಜ ಅಜ್ಜಿಯಂದಿರಿಗೆ ರಾಮಾಯಣದ ಕಥೆ ಹೇಳು, ಎಂದು ಮಕ್ಕಳು ಪಿಡಿಸಿದಾಗ, ವಯಸ್ಸಾದ ಅಜ್ಜ ಅಜ್ಜಿಯಂದಿರಿಗೆ ಹಾಸಿಗೆ ಮೇಲೆ ಮಲಗಿದರೆ ಸಾಕಾಗಿರುತ್ತದೆ. ಮೊಮ್ಮಕ್ಕಳು ಪ್ರೀತಿಯಿಂದ ಕಥೆ ಕೇಳುತ್ತದೆ ಆಗುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಆಗ ಏಕ ಶ್ಲೋಕಿ ರಾಮಾಯಣ, ಮಹಾಭಾರತ, ಬಾಗವತ ಕಥೆಗಳನ್ನು ಚುಟುಕಾಗಿ ಹೇಳಿ, ಅಂತ ವಿಸ್ತರಿಸಿ ಹೇಳುವೆ ಎನ್ನುತ್ತಿದ್ದರು. ಚುಟುಕು ಶ್ಲೋಕ ಕೆಳಗಿನದು. ಏಕ ಶ್ಲೋಕಿ ರಾಮಾಯಣ ಪೂರ್ವಂ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ ವಾಲೀನಿಗ್ರಹಣಂ ಸಮುದ್ರತರಣಂ ಲಂಕಾಪುರೀದಾಹನಂ ಪಶ್ಚಾದ್ರಾವಣಕುಂಭಕರ್ಣಹನನಂ ಏತದ್ದಿ ರಾಮಾಯಣಮ್॥ ರಾಮನ ಅರಣ್ಯಾ ಗಮನ, ಕಾಂಚನ ಮೃಗದ ಹನನ, ಜಾನಕಿಯ ಅಪಹರಣ, ಜಟಾಯುವಿನ ಮರಣ, ಸುಗ್ರೀವನ ಜೊತೆ ಸಂಭಾಷಣೆ, ವಾಲಿಯ ಹನನ, ಸಮುದ್ರ ಲಂಘನ, ಲಂಕೆಯ ಭಸ್ಮೀಕರಣ, ಅನಂತರ ಕುಂಭಕರ್ಣ ಮತ್ತು ರಾವಣರ ಮರಣ- ಇದೆ ಸಂಕ್ಷೇಪ ರಾಮಾಯಣ ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏