ಸುವರ್ಣಷ್ಠೀವಿ*******
ನಾರದ ಮಹರ್ಷಿಯ ಸೋದರಳಿಯ ಪರ್ವತ ಮುನಿ ಇಬ್ಬರೂ ಭೂಲೋಕದಲ್ಲಿ ಸಂಚರಿಸುತ್ತಿರುವಾಗ ಸೃಂಜಯ ರಾಜನ ಅರಮನೆಯಲ್ಲಿ ಸ್ವಲ್ಪಕಾಲ ತಂಗುತ್ತಾರೆ. ರಾಜನ ಆತಿಥ್ಯದಿಂದ ಸುಪ್ರೀತರಾದ ಮಹರ್ಷಿಗಳಿಬ್ಬರೂ ರಾಜನಿಗೆ ವಾಂಛಿತ ವರವನ್ನು ಅನುಗ್ರಹಿಸಲು ನಿಶ್ಚಯಿಸಿದರು. ತನ್ನಿಮಿತ್ತವಾಗಿ ಪರ್ವತಮುನಿಯು ಸೃಂಜಯನಲ್ಲಿ ಅವನ ಬಹುದಿನದ ಆಕಾಂಕ್ಷೆ ಯಾವುದಾದರೂ ಇದ್ದಲ್ಲಿ ವರರೂಪದಲ್ಲಿ ಕೇಳಬಹುದು. ಆದರೆ ರಾಜನು ದೇವತೆಗಳಿಗೆ ಪೀಡೆಯಾಗುವಂತಹ, ಮನುಷ್ಯರಿಗೆ ತೊಂದರೆಯಾಗುವಂತಹ ವರವನ್ನು ಕೇಳಕೂಡದು ಎಂಬ ನಿಯಮ ವಿಧಿಸಿದರು. ಪರ್ವತನ ಮಾತಿಗೆ ಸೃಂಜಯನು ಸಂತೋಷದಿಂದ “ಮಹರ್ಷಿಯೇ, ವೀರಪರಾಕ್ರಮಿಯಾದ, ಸೌಭಾಗ್ಯಶಾಲಿಯಾದ, ದೀರ್ಘಾಯುಷ್ಯವುಳ್ಳ, ಇಂದ್ರನಿಗೆ ಸಮಾನನಾದ ಪುತ್ರನನ್ನು ಪಡೆಯಬೇಕೆಂಬ ಬಹುಕಾಲದ ನನ್ನ ಬಯಕೆಯನ್ನು ಈಡೇರಿಸಿರಿ” ಎಂದು ಪ್ರಾರ್ಥಿಸಿದ. ಸೃಂಜಯನ ಬಯಕೆಯೇನೋ ನೆರವೇರಿತು ಆದರೆ ಇಂದ್ರನನ್ನು ಪರಾಭವಗೊಳಿಸುವ ಮಗನನ್ನು ಪಡೆಯುವ ಸಂಕಲ್ಪವಿದ್ದ ಕಾರಣದಿಂದ ಹುಟ್ಟುವ ಮಗನು ಅಲ್ಪಾಯುಷ್ಯನಾಗುವಂತಾಯಿತು. ಈ ವಿಷಯದಿಂದ ಬಾಧಿತನಾದ ಸೃಂಜಯನು ಪರ್ವತನನ್ನು “ವಿಪ್ರಶ್ರೇಷ್ಠರೇ, ನನ್ನ ಮಗನು ಎಂದಿಗೂ ಅಲ್ಪಾಯುವಾಗಬಾರದು. ನಿಮ್ಮ ತಪಃಪ್ರಭಾವದಿಂದ ಅವನನ್ನು ದೀರ್ಘಾಯುವಾಗಿ ಮಾಡಿರಿ” ಎಂದು ದೀನನಾಗಿ ಪ್ರಾರ್ಥಿಸಿದರೂ ಇಂದ್ರನ ಮೇಲಿನ ಗೌರವದಿಂದಾಗಿ ಪರ್ವತ ಮಹರ್ಷಿಯು ಸುಮ್ಮನುಳಿದರು. ರಾಜಕುಮಾರನು ಪ್ರೇತರಾಜನ ವಶವಾದಾಗ ತನ್ನನ್ನು ಸ್ಮರಿಸುವಂತೆ ನಾರದರು ಸೂಚಿಸಿ ಸೃಂಜಯನನ್ನು ಸಂತೈಸಿದರು.
ಕಾಲ ಸರಿಯಿತು. ರಾಜರ್ಷಿ ಸೃಂಜಯನಿಗೆ ತೇಜಸ್ವಿಯಾದ ಮಗನೊಬ್ಬನು ಜನಿಸಿದನು. ಸುವರ್ಣವನ್ನು ಉಗುಳುತ್ತಿದ್ದುದ್ದರಿಂದ ಅವನಿಗೆ “ಸುವರ್ಣಷ್ಠೀವಿ” ಎಂಬ ಅಭಿಧಾನವಾಯಿತು. ಶುಕ್ಲಪಕ್ಷದ ಚಂದ್ರನಂತೆ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಗನನ್ನು ಕಂಡು ಸೃಂಜಯನು ಆನಂದದಿಂದಿದ್ದನು. ಪರ್ವತಮಹರ್ಷಿಯ ವರದಾನದಿಂದ ಹುಟ್ಟಿದ ಸೃಂಜಯನ ಮಗನು ಸುವರ್ಣವನ್ನೇ ಉಗುಳುವನೆಂದು ಲೋಕವಿಖ್ಯಾತವಾದನು. ಈ ವಿಚಾರ ಇಂದ್ರನಿಗೂ ತಿಳಿಯಿತು. ಸುವರ್ಣಷ್ಠೀವಿಯಿಂದ ಮುಂದೆ ತನ್ನ ಪರಾಜಯವಾಗುವುದು ನಿಶ್ಚಿತವೆಂದು ಯೋಚಿಸಿದ ಇಂದ್ರನು ಅವನನ್ನು ಕೊಲ್ಲಲು ತನ್ನ ವಜ್ರಾಯುಧವನ್ನು ನಿರ್ದೇಶಿಸಿದನು. ರಾಜರ್ಷಿ ಸೃಂಜಯನು ಪತ್ನಿ-ಪುತ್ರರೊಡನೆ ಅರಣ್ಯದಲ್ಲಿದ್ದು ವ್ರತಾನುಷ್ಠಾನಗಳಲ್ಲಿ ತೊಡಗಿಕೊಂಡಿದ್ದ ಸಂದರ್ಭ. ಐದು ವರ್ಷದ ಬಾಲಕ ಸುವರ್ಣಷ್ಠೀವಿಯು ಆಟವಾಡುತ್ತಿದ್ದಾಗ ವ್ಯಾಘ್ರರೂಪವನ್ನು ತಳೆದ ವಜ್ರಾಯುಧವು ಅವನನ್ನು ಕ್ಷಣಮಾತ್ರದಲ್ಲಿ ಕಚ್ಚಿ ಸಾಯಿಸಿ ಅಲ್ಲಿಂದ ಹೊರಟುಹೋಯಿತು. ಬಾಲಕನ ಜೊತೆಯಲ್ಲಿದ್ದ ಸೇವಕಿಯ ಕೂಗಾಟ ಕೇಳಿದ ಅಲ್ಲಿಗೆ ಬಂದ ರಾಜನು ರಕ್ತಸಿಕ್ತ ದೇಹದೊಂದಿಗೆ ಗತಪ್ರಾಣನಾಗಿ ಬಿದ್ದಿದ್ದ ಮಗನನ್ನು ಕಂಡು ಶೋಕಾವಿಷ್ಟನಾದನು. ಮೃತಶರೀರವನ್ನು ತೊಡೆಯಮೇಲೆ ಮಲಗಿಸಿಕೊಂಡು ವಿಲಪಿಸತೊಡಗಿದನು. ಹಿಂದೆ ಇಂತಹ ಸನ್ನಿವೇಶ ಒದಗಿದಾಗ ತಮ್ಮನ್ನು ಸ್ಮರಿಸುವಂತೆ ನಾರದರು ಹೇಳಿದ್ದನ್ನು ಸೃಂಜಯ ನೆನಪಿಸಿಕೊಂಡ. ನಾರದರು ಅವನಿಗೆ ಕಾಣಿಸಿಕೊಂಡರು. ಸೃಂಜಯ ಮತ್ತು ನಾರದರು ಇಂದ್ರನನ್ನು ಸ್ತುತಿಸಲಾಗಿ ಬಾಲಕನು ಪುನಃ ಸಜೀವನಾದನು. ವಿಧಿನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ!
ಅನೇಕ ವರ್ಷಗಳ ಪ್ರಜಾಪರಿಪಾಲನೆಯ ನಂತರ ಸೃಂಜಯನು ಸ್ವರ್ಗಸ್ಥನಾದ. ಪರಮವಿಕ್ರಮನೂ ಸತ್ಯಸಂಧನೂ ಆದ ಸುವರ್ಣಷ್ಠೀವಿಯು ದೀರ್ಘಕಾಲ ಧರ್ಮದಿಂದ ರಾಜ್ಯಭಾರ ಮಾಡಿದನು. ಯಜ್ಞಯಾಗಾದಿಗಳನ್ನು ನಡೆಸಿ ದೇವತೆಗಳನ್ನೂ, ಶ್ರಾದ್ಧ-ತರ್ಪಣಾದಿಗಳಿಂದ ಪಿತೃಗಳನ್ನೂ ತೃಪ್ತಿಗೊಳಿಸಿ ವಂಶೋದ್ಧಾರಕರಾದ ಸಂತಾನವನ್ನು ಪಡೆದು ಕಾಲಾನಂತರದಲ್ಲಿ ಮರಣಿಸಿ ಪುಣ್ಯಲೋಕವನ್ನು ಸೇರಿದನು.
ಮುಪ್ಪು ಮತ್ತು ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರವಾದ ಕಾಲವೆಂಬ ಸಾಗರದಲ್ಲಿ ಈ ಜಗತ್ತೆಲ್ಲವೂ ಮುಳುಗಿಹೋಗುತ್ತಿದೆ. ಆದರೆ ಈ ಗಂಭೀರವಾದ ವಿಷಯವನ್ನು ತಿಳಿದುಕೊಳ್ಳದೇ ತಮ್ಮನ್ನೇ ಸರ್ವಜ್ಞರು ಸರ್ವಶಕ್ತರೆಂದು ತಿಳಿದು ಕೂಪದಲ್ಲಿ ಜೀವಿಸುತ್ತಿರುವರು.
🌷🙏❤️ ವಿಮಲ್ ನ್ಯೂಟ್ರಿಷನ್ ಸೆಂಟರ್ ❤️🙏🌷
#✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್