ನಾರದ_ಪರ್ವತರ_ಉಪಾಖ್ಯಾನ******
ನಾರದ ಮತ್ತು ಪರ್ವತ ಋಷಿಗಳಿಗೆ ಒಮ್ಮೆ ಭೂಲೋಕ ವಿಹಾರ ಮಾಡಬೇಕೆಂಬ ಬಯಕೆಯುಂಟಾಯಿತು. ಹಾಗೆ ಭೂಚರರಾಗಿ ಸ್ವೇಚ್ಛೆಯಿಂದ ತಿರುಗಾಡುತ್ತಿದ್ದರು. ನಾರದರು ಸೋದರಮಾವ ಮತ್ತು ಪರ್ವತ ಋಷಿಯು ಅವರ ಸೋದರಳಿಯ. ಪರಸ್ಪರ ಪ್ರೀತಿಯುಳ್ಳವರಾಗಿ ಅನ್ಯೋನ್ಯವಾಗಿದ್ದರಿಂದ ಇಬ್ಬರ ಮನಸ್ಸಿನಲ್ಲಿ ಯಾವುದೇ ವಿಧವಾದ ಸಂಕಲ್ಪ ಹುಟ್ಟಿದರೂ ಅದು ಒಳ್ಳೆಯದೇ ಆಗಲೀ, ಕೆಟ್ಟದೇ ಆಗಿರಲಿ ಪರಸ್ಪರ ಮುಚ್ಚಿಡದೇ ಒಬ್ಬರಿಗೊಬ್ಬರು ಹೇಳಲೇಬೇಕು, ಯಾರೇ ತಪ್ಪಿದಲ್ಲಿ ಶಾಪಕ್ಕೆ ಭಾಜನರಾಗಬೇಕಾಗುವುದು ಎಂಬ ಪ್ರತಿಜ್ಞೆ ಮಾಡಿದರು. ಹೀಗೆ ನಾರದ-ಪರ್ವತರು ಸಂಚರಿಸುತ್ತ ಸೃಂಜಯರಾಜನ ಅರಮನೆಯಲ್ಲಿ ಸ್ವಲ್ಪಕಾಲ ತಂಗಲು ನಿಶ್ಚಯಿಸಿದರು. ಸೃಂಜಯನು ಋಷಿದ್ವಯರಿಗೆ ಅರ್ಘ್ಯಪಾದ್ಯಾದಿಗಳನ್ನಿತ್ತು ಯಥೋಚಿತವಾಗಿ ಸತ್ಕರಿಸಿ ಮುನಿಗಳ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟನು ಮತ್ತು ತನ್ನ ಏಕಮಾತ್ರ ಪುತ್ರಿಯಾದ ಸುಶೀಲೆಯೂ ಗುಣವತಿಯೂ ಆದ ‘ಸುಕುಮಾರಿ’ ಯನ್ನು ಮಹರ್ಷಿಗಳ ಸೇವೆಗಾಗಿ ನಿಯೋಜಿಸಿದನು. ಸೃಂಜಯನ ಮಗಳ ಅಪ್ರತಿಮ ರೂಪದಿಂದಾಗಿ ಮತ್ತು ಸೇವೆಯಿಂದ ನಾರದರಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತು. ನಾಚಿಕೆಯಿಂದಾಗಿ ತಮ್ಮ ಹೃದಯದಲ್ಲಿದ್ದ ಪ್ರೀತಿಯ ವಿಷಯವನ್ನು ಪರ್ವತರಲ್ಲಿ ಹೇಳಲಿಲ್ಲ. ಆದರೆ ನಾರದರ ನಡುವಳಿಕೆಯಲ್ಲಾದ ಬದಲಾವಣೆ ಹಾಗೂ ತಮ್ಮ ತಪಃಪ್ರಭಾವದಿಂದ ಪರ್ವತರಿಗೆ ನಾರದ ಮನಸ್ಸಿನಲ್ಲುಂಟಾಗುತ್ತಿದ್ದ ಪ್ರೇಮದ ವಿಚಾರ ಅರ್ಥವಾಯಿತು. ತಮ್ಮಿಬ್ಬರ ಮಧ್ಯೆ ಆದ ಪ್ರತಿಜ್ಞೆಯನ್ನು ನಾರದರು ಮೀರಿದ್ದರಿಂದ ಕ್ರುದ್ಧರಾಗಿ “ನೀನು ಮೋಹಿಸಿರುವ ಸುಕುಮಾರಿಯನ್ನು ನೀನು ವಿವಾಹವಾದ ಕೂಡಲೇ ನಿನಗೆ ಕಪಿರೂಪ ಬರುತ್ತದೆ” ಎಂದು ಶಪಿಸಿದರು. ಪರ್ವತರ ಶಾಪವಾಕ್ಯವನ್ನು ಕೇಳಿದ ಕೂಡಲೇ ಸೋದರಮಾವನಾದ ನಾರದರಿಗೂ ಕೋಪವುಂಟಾಗಿ “ನೀನು ಮಹಾ ತಪೋಧನನೇ ಆಗಿದ್ದು, ಧರ್ಮಪರಾಯಣನೇ ಆದರೂ ನಿನಗೆ ಸ್ವರ್ಗಪ್ರಾಪ್ತಿಯಿಲ್ಲ” ಎಂದು ಪ್ರತಿಶಾಪವನ್ನಿತ್ತು. ಪರಸ್ಪರ ಶಪಿಸಿಕೊಂಡು ಕೋಪದಿಂದ ಬುಸುಗುಡುತ್ತಾ ವಿರುದ್ಧ ದಿಕ್ಕುಗಳಲ್ಲಿ ಹೊರಟುಹೋದರು!
ಸೃಂಜಯನು ಅತೀವ ಭಕ್ತಿಯಿಂದ ಪುತ್ರಿ ಸುಕುಮಾರಿಯನ್ನು ವೇದೋಕ್ತವಾಗಿ ನಾರದರಿಗೆ ವಿವಾಹ ಮಾಡಿಕೊಟ್ಟ. ವಿವಾಹವಿಧಿಗಳು ಮುಗಿದ ಕೂಡಲೇ ಶಾಪಪ್ರಭಾವದಿಂದಾಗಿ ಸುಕುಮಾರಿಯು ನಾರದರನ್ನು ಮಂಗದ ರೂಪದಲ್ಲಿ ಕಂಡಳು. ಅವಳಿಗೆ ಅಚ್ಚರಿಯಾದರೂ ಅವರನ್ನು ಅವಹೇಳನ ಮಾಡಲಿಲ್ಲ. ನಾರದರ ವಿಕಾರವಾದ ಮುಖವನ್ನು ಕಂಡಮೇಲೆಯೂ ಯಾವುದೇ ವ್ಯತ್ಯಾಸವಿಲ್ಲದಂತೆ ಬಹುವಾಗಿ ಪ್ರೀತಿಸತೊಡಗಿದಳು. ಪತಿಯ ಸೇವೆಯಲ್ಲಿಯೇ ಸದಾ ತೊಡಗಿಕೊಂಡಿದ್ದಳು. ಸ್ವಲ್ಪಕಾಲ ಕಳೆಯಿತು. ಒಮ್ಮೆ ಲೋಕಸಂಚಾರ ಮಾಡುತ್ತಾ ಬಂದ ಪರ್ವತರು ಕಪಿರೂಪದಲ್ಲಿದ್ದ ನಾರದರನ್ನು ಸಂದರ್ಶಿಸಿದರು. ಶಾಪದ ಪ್ರಭಾವದಿಂದ ಅವರೂ ಸಹ ಭೂಮಿಯನ್ನು ಬಿಟ್ಟು ಸ್ವರ್ಗಕ್ಕೆ ಹೋಗಲಾರದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ಸೋದರಮಾವನನ್ನು ಕಂಡ ಕೂಡಲೇ ನಮಸ್ಕರಿಸಿ ತಮ್ಮ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡರು. ನಾರದರಿಗೂ ಪುತ್ರಸಮಾನನಾದ ಸೋದರಳಿಯನನ್ನು ಕೋಪದಿಂದ ಶಪಿಸಿದೆನಲ್ಲ ಎಂಬ ಮರುಕವುಂಟಾಯಿತು. ನಾರದ-ಪರ್ವತರು ತಾವು ಮಾಡಿದ ಅಕಾರ್ಯಕ್ಕೆ ಪಶ್ಚಾತ್ತಾಪಪಟ್ಟು ಪರಸ್ಪರ ಶಾಪಗಳನ್ನು ನಿವೃತ್ತಿಗೊಳಿಸಿದರು. ನಾರದರಿಗೆ ಮಂಗನ ಮುಖವೂ ಹೋಯಿತು, ಪರ್ವತರಿಗೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಯಿತು.
ಕಪಿಯ ಮುಖ ಹೋಗಿ ದೇವರೂಪಿಗಳಾದ ನಾರದರನ್ನು ನೋಡಿ ಸುಕುಮಾರಿಯು ಪರಪುರುಷನೆಂದು ಭ್ರಮೆಗೊಂಡು ಓಡಿಹೋಗಲು ಮುಂದಾದಳು! ಓಡುತ್ತಿದ್ದ ಅವಳನ್ನು ಪರ್ವತರು ಕೂಗಿ ನಿಲ್ಲಿಸಿ ನಡೆದ ವಿಷಯವನ್ನೆಲ್ಲ ಅರುಹಿದರು. ಶಾಪದದೋಷದಿಂದ ತನ್ನ ಪತಿಗೆ ಮಂಗದ ಮುಖ ಬಂದದ್ದನ್ನು ಪರ್ವತರಿಂದ ತಿಳಿದ ರಾಜಕುಮಾರಿಯು ಹೃಷ್ಟಳಾದಳು. ಇತ್ತ ಪರ್ವತರು ಸ್ವರ್ಗಕ್ಕೆ ಪ್ರಯಾಣಿಸಿದರು, ನಾರದರು ಪತ್ನಿಯೊಡನೆ ಸ್ವಗೃಹಕ್ಕೆ ತೆರಳಿದರು. ಪ್ರಕರಣ ಸುಖಾಂತ್ಯವಾಯಿತು!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️
#🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್