ಮಾಹಿಷ್ಮತೀ_ನೀಲ*******
ಪೂರ್ವದಲ್ಲಿ ಮಾಹಿಷ್ಮತೀ ನಗರವನ್ನು ನೀಲನೆಂಬ ರಾಜನು ಆಳುತ್ತಿದ್ದನು. ನೀಲನಿಗೆ ಅಪ್ರತಿಮ ಸುಂದರಿಯಾಗಿದ್ದ ‘ಸುದರ್ಶನಾ’ ಎಂಬ ಹೆಸರಿನ ಮಗಳಿದ್ದಳು. ಪರಮಧಾರ್ಮಿಕನೂ, ಸತ್ಯಸಂಧನೂ ಆಗಿದ್ದ ನೀಲನು ದೀರ್ಘಕಾಲದ ಯಜ್ಞವೊಂದನ್ನು ಮಾಡಲುಪಕ್ರಮಿಸಿದನು. ರಾಜನು ಯಜ್ಞ-ಯಾಗಾದಿಗಳಲ್ಲಿ ನಿರತನಾಗಿದ್ದಾಗ ಸುದರ್ಶನಾ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಲು ತಂದೆಗೆ ಸಹಾಯ ಮಾಡುತ್ತಿದ್ದಳು. ಆಕೆಗೆ ಇದು ಪ್ರತಿನಿತ್ಯದ ಕಾರ್ಯವಾಗಿತ್ತು. ಯಜ್ಞೇಶ್ವರನಾದರೋ ರಾಜಕನ್ಯೆಯು ಗಾಳಿಹಾಕಿದರೆ ಮಾತ್ರವೇ ಪ್ರಜ್ವಲಿಸುತ್ತಿದ್ದ. ಅವಳ ಹೊರತಾಗಿ ಬೇರೆ ಯಾರೇ ಗಾಳಿಬೀಸಿದರೂ ಅತಿಯಾದ ಧೂಮವು ಎಲ್ಲೆಡೆ ಸುತ್ತಿಕೊಂಡು ಎಲ್ಲರೂ ಯಾಗಶಾಲೆಯಿಂದ ಹೊರಗೆ ಹೋಗುವಂತಾಗುತ್ತಿತ್ತು. ಸುದರ್ಶನಾಳ ಚೆಲುವು ಮತ್ತು ಶ್ರದ್ಧಾಭಕ್ತಿಗಳಿಂದ ಅಗ್ನಿಯು ರಾಜಪುತ್ರಿಯನ್ನು ಕಾಮಿಸತೊಡಗಿದ. ಬ್ರಾಹ್ಮಣ ರೂಪವನ್ನು ತಳೆದು ರಾಜಕನ್ಯೆಯೊಂದಿಗೆ ರಮಿಸತೊಡಗಿದ. ಎಲ್ಲಾ ರಹಸ್ಯಗಳಿಗೂ ಮುಕ್ತಾಯದ ಅವಧಿ ಅಂತ ಒಂದಿದೆ. ಅಂತೆಯೇ ಬ್ರಾಹ್ಮಣನೊಬ್ಬ ರಾಜಪುತ್ರಿಯೊಂದಿಗೆ ರಹಸ್ಯವಾಗಿ ರಮಿಸುತ್ತಿರುವುದು ಬಹಿರಂಗವಾಯಿತು. ವಿಷಯ ತಿಳಿದ ನೀಲರಾಜ ಸಿಟ್ಟಿನಿಂದ ಆ ಬ್ರಾಹ್ಮಣನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸುವಂತೆ ಆದೇಶಿಸಿದ. ಬ್ರಾಹ್ಮಣರೂಪಿ ಯಜ್ಞೇಶ್ವರನು ರಾಜನ ಮಾತಿನಿಂದ ಕೋಪಗೊಂಡ. ಬ್ರಾಹ್ಮಣನ ಸುತ್ತಲೂ ಧಗಧಗನೆ ಅಗ್ನಿಯು ಕಾಣಿಸಕೊಂಡು ಜ್ವಾಲೆಗಳು ಕೆನ್ನಾಲಗೆ ಚಾಚತೊಡಗಿದವು. ತನ್ನ ಮುಂದಿರುವವನು ಸಾಧಾರಣ ಬ್ರಾಹ್ಮಣನಲ್ಲ ಎಂದು ಭಯಗೊಂಡ ನೀಲರಾಜ ಅವನಿಗೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸಿ ತನ್ನನ್ನು ಮನ್ನಿಸುವಂತೆ ಪ್ರಾರ್ಥಿಸಿದ. ತನ್ನೆದರು ನಿಂತಿರುವವನು ಸಾಕ್ಷಾತ್ ಅಗ್ನಿದೇವನೆಂದು ತಿಳಿದು ತನ್ನ ಮಗಳನ್ನು ಕೊಟ್ಟು ವಿವಾಹವಿಧಿಯನ್ನು ನೆರವೇರಿಸಿದ.
ತಾನು ಪ್ರೇಮಿಸಿದ ಸುದರ್ಶನಾಳನ್ನು ಪಡೆದ ಅಗ್ನಿದೇವನು ನೀಲರಾಜನಿಗೆ ವರವೊಂದನ್ನು ಅನುಗ್ರಹಿಸಿದ. ಯುದ್ಧದಲ್ಲಿ ತೊಡಗಿರುವ ತನ್ನ ಚತುರಂಗಬಲವು ಯಾವುದೇ ಕಾರಣದಿಂದಲೂ ಭಯದಿಂದ ಹಿಮ್ಮೆಟ್ಟುವಂತೆ ಆಗಬಾರದು ಎಂಬ ನೀಲರಾಜನ ಪ್ರಾರ್ಥನೆಯನ್ನು ಅಗ್ನಿಯು ಮನ್ನಿಸಿದ. ಅಂದಿನಿಂದ ಮಾಹಿಷ್ಮತಿ ನಗರದ ಮೇಲೆ ಯಾರೇ ಆಕ್ರಮಣ ನಡೆಸಲು ಹೋದರೂ ಯಾರೂ ಸಹ ನಗರದ ಕೋಟೆಯನ್ನು ಪ್ರವೇಶಿಸುವುದು ಅಸಾಧ್ಯವಾಗಿತ್ತು. ಕೋಟೆಯನ್ನು ಸಮೀಪಿಸಿದವರನ್ನು ಅಗ್ನಿಯು ಸುಟ್ಟು ಭಸ್ಮಮಾಡುತ್ತಿದ್ದನು. ಶತ್ರುರಾಜರು ಮಾಹಿಷ್ಮತೀ ನಗರದ ಮೇಲೆ ಆಕ್ರಮಣ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಅಗ್ನಿಯ ವರದ ಪ್ರಭಾವದಿಂದ ಆ ಪಟ್ಟಣದಲ್ಲಿ ಪುರುಷರು ತಮ್ಮ ಇಚ್ಛಾನುಸಾರ ಯುವತಿಯರನ್ನು ಪಾಣಿಗ್ರಹಣ ಮಾಡಿಕೊಳ್ಳುವಂತಿರಲಿಲ್ಲ, ಬದಲಾಗಿ ಯುವತಿಯರು ಇಷ್ಟಪಟ್ಟರೆ ಮಾತ್ರ ಅದು ಸಾಧ್ಯವಾಗುತ್ತಿತ್ತು. ಪೂರ್ಣಸ್ವತಂತ್ರರಾದ ಕನ್ಯೆಯರು ತಮಗೆ ಇಷ್ಟವಾದವರನ್ನು ವರಿಸುತ್ತಿದ್ದರು. ನೀಲರಾಜನ ವಂಶೀಯರು ಆಳ್ವಿಕೆಯಿರುವವರೆಗೆ ಅಗ್ನಿಯು ಅವರ ರಾಜ್ಯರಕ್ಷಣೆ ಮಾಡುವೆನೆಂಬ ವಾಗ್ದಾನದಿಂದಾಗಿ ನೀಲನು ಅಪರಾಜಿತನೆಂಬ ಖ್ಯಾತಿ ಪಡೆದ.
ರಾಜಸೂಯಯಾಗದ ಸಮಯದಲ್ಲಿ ಸಹದೇವನು ದಕ್ಷಿಣದೆಡೆಗೆ ದಿಗ್ವಿಜಯ ಯಾತ್ರೆಗೈದನು. ಯಜ್ಞಾಶ್ವವನ್ನು ಅಡ್ಡಗಟ್ಟಿದ ನೀಲರಾಜನಿಗೂ ಸಹದೇವನಿಗೂ ಅತಿಭಯಂಕರವಾದ ಯುದ್ಧ ನಡೆದು ಅಗ್ನಿಯ ವರಬಲದಿಂದ ನೀಲರಾಜನು ಅಪರಾಜಿತನಾದನು. ಸಹದೇವನ ಸೈನ್ಯವೆಲ್ಲವೂ ಯಜ್ಞೇಶ್ವರನ ಜ್ವಾಲೆಗಳಿಂದ ಆವೃತವಾಗಿ ಹೊತ್ತಿ ಉರಿಯತೊಡಗಿ ಮುಂದೇನು ಮಾಡಬೇಕೆಂಬುದೇ ತಿಳಿಯದಾಯಿತು. ಧೃತಿಗೆಡದೆ ಸಹದೇವನು ಶುದ್ಧಾಚಮನವನ್ನು ಮಾಡಿ ಸ್ಥಿರವಾಗಿ ಕುಳಿತು ನಾನಾವಿಧವಾಗಿ ಅಗ್ನಿಯನ್ನು ಸ್ತುತಿಸಿದನು. ಯುಧಿಷ್ಠಿರನ ಯಜ್ಞಸಂಕಲ್ಪ ಮತ್ತು ಸಹದೇವನ ಉದ್ದೇಶ ಎರಡನ್ನೂ ಅರಿತು ಅವನನ್ನು ಪರೀಕ್ಷಿಸಿದ್ದ ಅಗ್ನಿಯು ಪ್ರಸನ್ನನಾಗಿ ನೀಲರಾಜನಿಗೆ ಕುರುವಂಶದವರೊಂದಿಗೆ ಸಾಮೋಪಾಯವನ್ನು ಅನುಸರಿಸಲು ಸೂಚನೆ ನೀಡಿದ. ಅದರಂತೆ ನೀಲರಾಜನು ರಾಜಸೂಯಕ್ಕೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಸಹದೇವನನ್ನು ಬೀಳ್ಕೊಟ್ಟ.
ಮುಂದೆ ಭಾರತ ಯುದ್ಧದಲ್ಲಿ ನೀಲರಾಜನು ಪಾಂಡವರ ಪಕ್ಷವನ್ನು ಬೆಂಬಲಿಸುತ್ತಾನೆ. ಅಗ್ನಿಯ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ನೀಲನು ಬಿಲ್ಲನ್ನೇ ಜ್ವಾಲೆಯನ್ನಾಗಿಸಿ ಬಾಣಗಳನ್ನೇ ಕಿಡಿಯಾಗಿಸಿ ಕುರುಸೈನ್ಯವನ್ನು ಭಸ್ಮಮಾಡತೊಡಗಿದ. ಹದಿಮೂರನೆಯ ದಿನದ ಯುದ್ಧದಲ್ಲಿ ದ್ರೋಣಪುತ್ರ ಅಶ್ವತ್ಥಾಮನಿಗೆ ನೀಲರಾಜನು ಎದುರಾದನು. ಎರಡು ಅಗ್ನಿಪರ್ವತಗಳ ಘರ್ಷಣೆಯೋಪಾದಿಯಲ್ಲಿ ಪರಸ್ಪರ ಹೋರಾಟ ನಡೆಯಿತು. ಕೊನೆಯಲ್ಲಿ ಅಶ್ವತ್ಥಾಮನಿಂದ ಹತನಾಗಿ ಭೂಮಿಗೊರಗಿದನು.
ಅಂದಹಾಗೆ ಮಾಹಿಷ್ಮತಿ ಎಂದರೆ ಈಗಿನ ಮಧ್ಯಪ್ರದೇಶದ ಮಾಹೇಶ್ವರ!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️
#🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್