#📖ವಿಶ್ವ ಪುಸ್ತಕ ದಿನ📘 #ಹಾಸ್ಯದ ಜೀವದ್ರವ್ಯ #ಬೀಚಿ 😂😂🙏🙏🙏
ಮೇಲ್ನೋಟಕ್ಕೆ ಬೀಚಿ ಒಬ್ಬ ಹಾಸ್ಯಗಾರರಂತೆ ಕಂಡರೂ ಬದುಕು ನಗೆಯಷ್ಟು ಸುಲಲಿತವಾಗಿರಲಿಲ್ಲ. ಬದುಕಿನುದ್ದಕ್ಕೂ ಕಷ್ಟ, ಕಹಿ ಅನುಭವಗಳನ್ನೇ ಉಂಡರು. ಹೆತ್ತವರಿಲ್ಲದ ಬಾಲ್ಯ, ನೌಕರಿಗಾಗಿ ಅಲೆದಾಟ, ನೌಕರಿ ಪಡೆದ ಮೇಲೆ ವರ್ಗಾವಣೆಗಳು, ವೈವಾಹಿಕ ಜೀವನದ ಜಂಜಾಟಗಳು… ಹೀಗೆ ಅನೇಕ ಕೋಟಲೆಗಳಿಗೆ ಬೀಚಿ ನಲುಗಿದವರು. ಇಂದು ಅವರ 108ನೇ ಜನ್ಮದಿನ.
ಕನ್ನಡ ಸಾರಸ್ವತ ಲೋಕಕ್ಕೆ ಅದರಲ್ಲೂ ಹಾಸ್ಯ, ವಿಡಂಬನೆ, ಚತುರೋಕ್ತಿಗಳಿಗೆ ಹೊಸ ಬಾಷ್ಯ ಬರೆದವರು ರಾಯಸಂ ಭೀಮಸೇನರಾಯರು. ರಾಯಸಂ ಭೀಮಸೇನರಾಯರು ಎಂದರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ಬೀಚಿ, ಬಳ್ಳಾರಿ ಬೀಚಿ ಎಂದರೆ ಎಂಥವರಿಗೂ ಥಟ್ಟನೆ ತಿಳಿದುಬಿಡುತ್ತದೆ.
ಕಾದಂಬರಿಕಾರರಾಗಿ, ವಿಡಂಬನಕಾರರಾಗಿ, ಅಂಕಣಕಾರರಾಗಿ ಜತೆಗೆ ಕವಿಯಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬೀಚಿಯವರು ಜಿಡ್ಡುಗಟ್ಟಿದ ಸಮಾಜವನ್ನು ತಮ್ಮ ವ್ಯಂಗ್ಯ, ಮೊನಚು ಮಾತುಗಳಿಂದ ಚುಚ್ಚಿದ್ದು ಗಮನಾರ್ಹ. ಬದುಕಿನಲ್ಲಿ ಕಂಡದ್ದನ್ನೇ ಬರೆದ, ಬರೆದಂತೆ ಬದುಕಿದ ಕೆಲವೇ ಕೆಲವರಲ್ಲಿ ಇವರೊಬ್ಬರು. ಬದುಕು-ಬರಹಗಳ ನಡುವೆ ಗೋಡೆ ಕಟ್ಟಿಕೊಳ್ಳದೆ ಪಾರದರ್ಶಕತೆ ಮೆರೆದ ಬೀಚಿ ಅಪರೂಪದ ಅಕ್ಷರಪ್ರೇಮಿ.
32 ವರ್ಷ ಪೊಲೀಸ್ ಇಲಾಖೆ ಸೇವೆಯಲ್ಲಿ್ಲ್ದೂ ಪ್ರಾಮಾಣಿಕತೆ, ಸ್ವಾಭಿಮಾನದ ಮೇರು ಪರ್ವತವಾಗಿದ್ದ ಇವರು ಹಚ್ಚಿಕೊಂಡ ಚಟ(ಹವ್ಯಾಸ)ಗಳನ್ನು ಮುಚ್ಚಿಟ್ಟವರಲ್ಲಿ ಅಕ್ಷರವನ್ನು ಪ್ರೀತಿಸಿದಷ್ಟೆ ಗುಂಡು(ಪಾನ) ಪ್ರಿಯರಾಗಿದ್ದರು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ರಾಯಸಂ ಮನೆತನದ ಶ್ರೀನಿವಾಸರಾಯ, ಶ್ರೀಮತಿ ಭಾರತಿಯಮ್ಮರ ಕಿರಿಯ ಮಗನಾಗಿ 23.04.1913ರಲ್ಲಿ ಜನಿಸಿದ ಭೀಮಸೇನರಾಯರು ನಾಡಿಗೆಲ್ಲ ಬೀಚಿ ಎಂದೇ ಪರಿಚಿತ. ಹುಟ್ಟುತ್ತಲೆ ತಂದೆಯನ್ನು ಕಳೆದುಕೊಂಡ ಇವರೊಟ್ಟಿಗೆ ತಾಯಿಯೂ ಬಹುವರ್ಷ ಇರಲಿಲ್ಲ. ಬೀಚಿಯವರಿಗೆ 9 ವರ್ಷ ತುಂಬುವ ಹೊತ್ತಿಗೆ ಕ್ಷಯರೋಗಕ್ಕೆ ತುತ್ತಾದರು. ಬಳಿಕ ಸೋದರಮಾವ ಇವರಿಗೆ ಆಸರೆಯಾದರು.
ಇದೆಲ್ಲಕ್ಕಿಂತ ಹೆಚ್ಚಾಗಿ ಸಿಎ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಮಗ ನರೇಂದ್ರನನ್ನು ಕಳೆದುಕೊಂಡು ಬೀಚಿಯವರು ಕುಗ್ಗಿ ಹೋದರು. ಗಾಯದ ಮೇಲೆ ಬರೆ ಎಂಬಂತೆ ಹೆಂಡತಿ ಸೀತಾಬಾಯಿ ಮತಿಭ್ರಮಣೆಗೊಳಗಾಗಿ ನಿಂತ ನೆಲ ಅದುರಿದಂತೆ ಮತ್ತಷ್ಟು ಕುಸಿದರು. ಬೀಚಿ ಸಾಮಾನ್ಯರಂತೆ ಬದುಕಿ ತೋರಿಸಿದರು ಕೂಡ. ಸರಳವಾಗಿ, ಹಾಸ್ಯವಾಗಿ ಕಂಡರೂ ಅವರೊಳಗೊಬ್ಬ ದಾರ್ಶನಿಕನಿದ್ದ. ಸಾಹಿತ್ಯ ಲೋಕದ ದಿಗ್ಗಜರಾದ ಕೈಲಾಸಂ, ಅನಕೃ, ಜಿ.ಪಿ.ರಾಜರತ್ನಂ, ಶ್ರೀರಂಗ, ಕೀರ್ತಿನಾಥ ಕುರ್ತಕೋಟಿ, ಶಂ.ಬಾ. ಜೋಷಿಯಂಥವರ ಒಡನಾಟದಲ್ಲಿದ್ದು ಹೊಸಗನ್ನಡ ಸಾಹಿತ್ಯದ ಪ್ರಮುಖರೆನಿಸಿಕೊಂಡರು. ರಾಶಿ, ನಾ.ಕಸ್ತೂರಿ, ನಾಡಿಗೇರ್ ಅವರ ಮಧ್ಯೆ ಬಂದ ಬೀಚಿಯವರ ಹೊಸ ಎಂಟ್ರಿ 1940- 50 ದಶಕಗಳಲ್ಲಿ ಸಾಹಿತ್ಯಕ್ಕೊಂದು ಹೊಸ ಮೆರಗು ತಂತು.
ಸಮಾಜದ ಬದಲಾವಣೆಯನ್ನು ಬಯಸಿದ್ದ ಅವರು ಕೃತಿಗಳಲ್ಲಿ ವ್ಯಂಗ್ಯದ ಮೂಲಕ ಕಟುಸತ್ಯವನ್ನೇ ಹೇಳಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿನ ಶೋಷಣೆ, ಗಂಡಿನ ಸರ್ವಾಧಿಕಾರ ಧೋರಣೆ, ಭ್ರಷ್ಟಚಾರ, ಲಂಚಗುಳಿತನ, ಅಧಿಕಾರ ಕೇಂದ್ರೀಕೃತ ಮಠಗಳ ವ್ಯವಸ್ಥೆ, ಬದಲಾವಣೆಗೆ ಗೋಡೆಯಂತೆ ಅಡ್ಡಿಯಾಗಿದ್ದ ಜಾತಿ ವ್ಯವಸ್ಥೆಯನ್ನು ಕೃತಿಗಳಲ್ಲಿ ಪಾತ್ರಗಳ ಮೂಲಕ ಕಟುವಾಗಿ ಟೀಕಿಸಿದರು. ಧರ್ಮ, ಧರ್ವಂಧಕಾರ, ಆಷಾಢಭೂತಿಯನ್ನು ಒಪ್ಪದೆ ಮನುಷ್ಯ, ಮನುಷ್ಯನಂತೆ ಬಾಳಬೇಕು ಎಂಬ ಸಂದೇಶ ಸಾರಿದ್ದಾರೆ. ಸಂಪ್ರದಾಯಬದ್ಧ ಆಚರಣೆ ನಂಬದಿದ್ದರೂ ಅವನ್ನು ಗೌರವಿಸುತ್ತಿದ್ದ ಬೀಚಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರೂ ಸಹೃದಯಿಯಾಗಿದ್ದರು.
ಬೀಚಿಯವರ ಹಾಸ್ಯ ಪ್ರಜ್ಞೆ ವಿಭಿನ್ನ. ಇವರು ಉತ್ತಮ ಬರಹಗಾರರಂತೆ ಉತ್ತಮ ಭಾಷಣಕಾರರಾಗಿದ್ದರು. ಮೇಲ್ನೋಟಕ್ಕೆ ಮಾತಾಗಿ ಕಾಣುವ ಪದಗಳಲ್ಲಿ ಒಳಾರ್ಥ ಚಾಟಿಯ ನೋವಿನ ಅನುಭವವನ್ನು ಉಕ್ಕಿಸುತ್ತಿದ್ದವು. ಇವರ ಮನಸ್ಸಿನಲ್ಲಿ ಏನಿತ್ತೋ ಆದರೆ, ಸದಾ ಹಾಸ್ಯ, ವ್ಯಂಗ್ಯ, ವಕ್ರೋಕ್ತಿ, ವಿಡಂಬನೆಯನ್ನೆ ಉಸಿರಾಡಿ ಕನ್ನಡ ಸಾಹಿತ್ಯಕ್ಕೆ ಹೊಸ ಸಿಂಚನ, ಸಂಚಲನ ಮೂಡಿಸಿದರು. ಇವರು ಎಷ್ಟು ಹಾಸ್ಯ ಪ್ರಿಯರಾಗಿದ್ದರೆಂದರೆ ತಮ್ಮ ಮಕ್ಕಳಿಬ್ಬರಿಗೂ ಟ್ರಿಮ್ಮಿ, ಟ್ರಕ್ಕಿ ಎಂದೇ ಕರೆದು ಬದುಕನ್ನು ನಗುತ್ತ ಕಳೆಯಲೆತ್ನಿಸಿದರು.
ಬೀಚಿಯವರಿಗೆ ತಮ್ಮ ಏಳೂವರೆ ದಶಕಗಳ (7.12.1980 ನಿಧನ) ಜೀವನದಲ್ಲಿ ದಕ್ಕಿದ ಸುಖವೆಷ್ಟೊ ಆದರೆ, ಅವರು ಉಣಬಡಿಸಿದ ಸಾಹಿತ್ಯ ರಸಗವಳ ತಿಂದು ತೇಗಿದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಈಗಲೂ ಬೀಚಿಯವರ ಪುಸ್ತಕಗಳಿಗೆ ಸಾಹಿತ್ಯ ಪ್ರಿಯರು ಹಾತೊರೆಯುವುದುಂಟು. ಈ ಕಾರಣಕ್ಕೆ ಹೇಳಿರಬೇಕು ಹಿರಿಯರು ‘ಕನ್ನಡಕ್ಕೊಬ್ಬರೇ ಕೈಲಾಸಂ, ಹಾಸ್ಯಕ್ಕೊಬ್ಬರೇ ಬೀಚಿ’ಎಂದು. #🎂ಬೀಚಿರವರ ಜನ್ಮದಿನ ನಗು ವಾರದಲ್ಲಿ ಮೂರು ದಿನವಾದರೂ ನಗುತ್ತಾ ಇರಬೇಕು ನಿನ್ನೆ ಇವತ್ತು ಮತ್ತು ನಾಳೆ " ಬೀಚಿರವರ ಮಾತನ್ನು ಕೇಳಿ ನಗುತ್ತಾ ಇರೋಣ ಇವರ ಜನ್ಮದಿನಕ್ಕೆ ನೋವೊಂದು ಶುಭಾಶಯ ಕೋರೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್