ಫಾಲೋ
manmohan
@150269374
478
ಪೋಸ್ಟ್ಸ್
249
ಫಾಲೋವರ್ಸ್
manmohan
2.2K ವೀಕ್ಷಿಸಿದ್ದಾರೆ
ಫೋನ್ ಪೇ ಮೂಲಕ ಯುಪಿಐ ಬಳಸುವವರಿಗೆ ಬಹಳ ಮುಖ್ಯವಾದ ಮಾಹಿತಿ.! ಹಣ ತೆಗೆದುಕೊಂಡು ಹೋಗಿ ಶಾಪಿಂಗ್ ಮಾಡುವುದು, ವಸ್ತುಗಳನ್ನು ಖರೀದಿ ಮಾಡುವುದು ಆಧುನಿಕ ಕಾಲದಲ್ಲಿ ಮುಗಿದು ಹೋಗಿರುವ ಅಧ್ಯಾಯ. ಬಹುತೇಕ ಎಲ್ಲಾ ಕಡೆಯೂ ಯುಪಿಐ ಹಾಗೂ ಕಾರ್ಡ್ ಮೂಲಕವೇ ಎಲ್ಲಾ ವಹಿವಾಟು ಡಿಜಿಟಲ್ ಜಗತ್ತಿನಲ್ಲಿ ನಡೆದು ಹೋಗುತ್ತದೆ. ಅದರಲ್ಲೂ ಫೋನ್‌ಪೇ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಬಹುತೇಕರು ಇದನ್ನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತಾರೆ. ಹೀಗಿದ್ದಾಗಲೇ ಇನ್ನುಮುಂದೆ ನೀವು ಯುಪಿಐ ಪಾವತಿ ಮಾಡಲು, ಫೋನ್‌ಪೇ ಬಳಸಿದರೆ ಸಣ್ಣಪುಟ್ಟ ವಹಿವಾಟು ನಡೆಸಲು ಪಿನ್ ಹಾಕುವ ಅಗತ್ಯತೆ ಇರುವುದಿಲ್ಲ. ಈ ರೀತಿ ಹೊಸ ಆಪ್ಷನ್ ಕೊಟ್ಟಿದೆ ಫೋನ್ ಪೇ ಅಪ್ಲಿಕೇಷನ್ ಇದೀಗ, ಬಯೋಮೆಟ್ರಿಕ್ ಮೂಲಕ ಪಾವತಿ ಮಾಡಲು ಈಗ ಅವಕಾಶ ನೀಡಲಾಗಿದೆ. ಫೇಸ್ ಐಡಿ ಅಥವಾ ಫಿಂಗರ್ ಪ್ರಿಂಟ್ ಬಳಸಿ ನೀವು ಪಾವತಿ ಮಾಡಲು ಫೋನ್‌ಪೇ ಹೊಸ ಅವಕಾಶ ಕಲ್ಪಿಸಿದೆ. ಹಾಗಾದರೆ ಇದರಿಂದ ಏನೆಲ್ಲಾ ಅನುಕೂಲ ಆಗಲಿದೆ? ಬನ್ನಿ ತಿಳಿಯೋಣ. 5,000 ರೂಪಾಯಿ ಒಳಗೆ ಇರಬೇಕು! ಫಿನ್‌ಟೆಕ್ ಪ್ಲಾಟ್‌ಫಾರ್ಮ್ ತನ್ನ ಗ್ರಾಹಕರಿಗೆ ಹೊಸ ಅಪ್ಷನ್ ತಂದಿದೆ, ಯುಪಿಐ ಮೂಲಕ ಪಾವತಿ ಮಾಡುವ ಫೋನ್‌ಪೇ ಬಳಕೆದಾರರಿಗೆ ಇದೀಗ ಪಿನ್ ಬಳಸುವ ಅವಶ್ಯಕತೆ ಇರುವುದಿಲ್ಲ, ಆದರೆ ಆ ನಿಮ್ಮ ವಹಿವಾಟು 5,000 ರೂಪಾಯಿ ಒಳಗೆ ಇರಬೇಕು. ಸಣ್ಣಪುಟ್ಟ ವಹಿವಾಟು ಮಾಡಲು, ಈಗ ಸುಮಾರು 5,000 ಒಳಗೆ ಪಾವತಿ ಮಾಡಲು ಗ್ರಾಹಕರು ಪಿನ್ ಹಾಕುವ ಬದಲಾಗಿ ನೇರವಾಗಿ ಫಿಂಗರ್ ಪ್ರಿಂಟ್ ಅಥವಾ ತಮ್ಮ ಫೇಸ್ ಐಡಿ ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಥವಾ ಫೇಸ್ ಐಡಿ ಮೂಲಕ ಪಾವತಿಸಬಹುದಾಗಿದೆ. ಡಬಲ್ ವೆರಿಫಿಕೇಷನ್ ಸೌಲಭ್ಯ ಲಭ್ಯ! ಹಾಗೇ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಡಬಲ್ ವೆರಿಫಿಕೇಷನ್ ಅಂದ್ರೆ, ಎರಡು ಬಾರಿ ಪರಿಶೀಲನೆಗೆ ಅವಕಾಶ ಕೂಡ ಇರಲಿದೆ. 5,000 ರೂಪಾಯಿ ಮೀರಿದ ಯುಪಿಐ ಪಾವತಿಗಳಿಗೆ ಈ ಹೊಸ ಆಪ್ಷನ್ ಅನ್ವಯ ಆಗುವುದಿಲ್ಲ, ಆಗ ಗ್ರಾಹಕರು ತಮ್ಮ ಪಿನ್ ಬಳಸಬೇಕಾಗುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಸ್ನೇಹಿತರು & ಕುಟುಂಬಕ್ಕೆ ಹಣ ಕಳುಹಿಸಲು ಇದು ಸಹಕಾರಿ ಆಗಲಿದೆ. ಅಂಗಡಿಯಲ್ಲಿ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಿ ನೇರವಾಗಿ ಪಿನ್ ಹಾಕದೆ ಪಾವತಿಸಬಹುದು. ಆನ್‌ಲೈನ್ ಪಾವತಿ & ಬ್ಯಾಂಕ್ ಬ್ಯಾಲೆನ್ಸ್‌ ಪರಿಶೀಲನೆಗೆ ಕೂಡ ಇದು ಸಹಕಾರಿ ಆಗಲಿದೆ. #LATEST #BENGALURU #DIGITALPAYMENT #UPI #BIOMETRIC
manmohan
7.5K ವೀಕ್ಷಿಸಿದ್ದಾರೆ
ವಿಶ್ವದ ಮೊದಲ AI ನಗರಕ್ಕೆ ಬೆಂಗಳೂರೇ ವೇದಿಕೆ.!ಕುತೂಹಲಕಾರಿ ಘೋಷಣೆ.! ನವದೆಹಲಿಯಲ್ಲಿ ನಡೆಯಲಿರುವ 2026ರ AI ಇಂಪ್ಯಾಕ್ಟ್ ಶೃಂಗಸಭೆಯ ಎರಡನೇ ದಿನದಂದು ಒಂದು ಕುತೂಹಲಕಾರಿ ಘೋಷಣೆ ಹೊರಬಿದ್ದಿದೆ. ಅದೇನೆಂದರೆ, Bharat1 ಹೆಸರಿನ ಸ್ಟಾರ್ಟ್‌ಅಪ್ ಒಂದು ನಮ್ಮ ಬೆಂಗಳೂರಿನಲ್ಲಿ ವಿಶ್ವದ ಮೊದಲ AI ನಗರವನ್ನು ನಿರ್ಮಿಸುವ ಯೋಜನೆಗಳನ್ನು ಪ್ರಕಟಿಸಿದೆ.! ಇದು ಸಾಮಾನ್ಯ ಸ್ಮಾರ್ಟ್ ಸಿಟಿಯಂತಿಲ್ಲ ಬದಲಾಗಿ, ನೈಜ ಪರಿಸ್ಥಿತಿಗಳಲ್ಲಿ AI ವ್ಯವಸ್ಥೆಗಳನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ ನಗರಮಟ್ಟದ ಸಂಶೋಧನಾ ವೇದಿಕೆಯಾಗಿರುತ್ತದೆ ಎಂದು ಹೇಳಿದೆ.! ಈ ವಿಷಯವೂ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ, ನಗರ-ಪ್ರಮಾಣದ ಸಂಶೋಧನೆ ಮತ್ತು ಮೂಲಸೌಕರ್ಯ ಉಪಕ್ರಮವನ್ನು ನಿರ್ಮಿಸುವ ತನ್ನ ದೃಷ್ಟಿಕೋನವನ್ನು Bharat1 ಅನಾವರಣಗೊಳಿಸಿದೆ. ಈ ಯೋಜನೆಯ ಮೊದಲ ಹಂತವಾಗಿ, ಬೆಂಗಳೂರಿನ ಸರ್ಜಾಪುರದಲ್ಲಿ ಸಮೀಪದ ಪ್ರದೇಶದಲ್ಲಿ ಸುಮಾರು 5 ಲಕ್ಷ ಚದರ ಅಡಿ ವ್ಯಾಪ್ತಿಯ AI ಸಂಶೋಧನಾ ಮತ್ತು ನವೀನತಾ ಕ್ಯಾಂಪಸ್ ನಿರ್ಮಾಣಕ್ಕೆ ರೂಪುರೇಷೆ ಸಿದ್ಧವಾಗಿದೆ. ಈ ಕ್ಯಾಂಪಸ್‌ನಲ್ಲಿ ಮಾದರಿ ತರಬೇತಿ (model training), ಫೈನ್-ಟ್ಯೂನಿಂಗ್, ಇನ್‌ಫರೆನ್ಸ್, ಪ್ಲಗ್-ಅಂಡ್-ಪ್ಲೇ ಪ್ರಯೋಗಾಲಯಗಳು, ಹಾಗೂ AI ಕ್ಲೌಡ್ ಸೇವೆಗಳ ಸಂಪರ್ಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ. Bharat1 ಸಂಸ್ಥೆಯು ಮುಂದಿಟ್ಟಿರುವ ದೃಷ್ಟಿಯಲ್ಲಿ, "AI ಸಿಟಿ" ಎಂದರೆ AI ನಗರವನ್ನು ನಿಯಂತ್ರಿಸುವುದಲ್ಲ. ಬದಲಿಗೆ, ಏಜೆಂಟಿಕ್ AI ಹಾಗೂ ಭೌತಿಕ AI ವ್ಯವಸ್ಥೆಗಳನ್ನು ನಿಯಂತ್ರಿತ ನೈಜ ಪರಿಸ್ಥಿತಿಗಳಲ್ಲಿ ಪರೀಕ್ಷಿಸಿ, ಅವುಗಳ ಪರಿಣಾಮಗಳನ್ನು ವಿಶ್ಲೇಷಿಸಿ, ಬಳಿಕ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರುವ ಪ್ರಕ್ರಿಯೆ ಎಂದು ತಿಳಿಸಲಾಗಿದೆ. ಇದು ಭವಿಷ್ಯದ ಸ್ವಯಂಚಾಲಿತ ವಾಹನಗಳು, ರೋಬೋಟಿಕ್ಸ್, ಸ್ಮಾರ್ಟ್ ಮೂಲಸೌಕರ್ಯ ವ್ಯವಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವದ ಹೆಜ್ಜೆಯಾಗಬಹುದು. ದರಿಂದ ಸಂಶೋಧಕರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನಗರಮಟ್ಟದ AI ಪರೀಕ್ಷಾ ಪರಿಸರ ಲಭ್ಯವಾಗಲಿದೆ. AI ತಂತ್ರಜ್ಞಾನವು ಇತ್ತೀಚಿನ ವರ್ಷಗಳಲ್ಲಿ ಅಪಾರ ವೇಗದಲ್ಲಿ ಅಭಿವೃದ್ಧಿ ಕಂಡಿದೆ. ಆದರೆ ದೊಡ್ಡ ಭಾಷಾ ಮಾದರಿಗಳು (LLMs) ಹಾಗೂ ಇತರೆ ಬುದ್ಧಿವಂತ ವ್ಯವಸ್ಥೆಗಳು ಇಂಟರ್ನೆಟ್ ಆಧಾರಿತ ಡೇಟಾದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಅವುಗಳ ವಿಶ್ವಾಸಾರ್ಹತೆ, ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು Bharat1 ನೈಜ ಜಗತ್ತಿನ ಗುಣಮಟ್ಟದ, ಸಂರಚಿತ ಮತ್ತು ಬಹುಮಾಧ್ಯಮ ಡೇಟಾ ಆಧಾರಿತ ಪರೀಕ್ಷಾ ಮೂಲಸೌಕರ್ಯ ಅಗತ್ಯವಿದೆ ಎಂದು ಹೇಳಿದೆ. Bharat1 ಸಂಸ್ಥೆಯ ಸಹ-ಸ್ಥಾಪಕ ಹಾಗೂ ಸಿಇಒ ಉಮಾಕಾಂತ್ ಸೋನಿ ಅವರ ಪ್ರಕಾರ, AI ಈಗ ಪ್ರಯೋಗಾಲಯಗಳ ಗಡಿಯನ್ನು ಮೀರಿ ಸಮಾಜದ ದೈನಂದಿನ ಬದುಕಿಗೆ ಪ್ರವೇಶಿಸುತ್ತಿದೆ. AI ಕ್ರಾಂತಿಯಲ್ಲಿ ನಾವು ಒಂದು ಬಾಗುವ ಹಂತದಲ್ಲಿದ್ದು, ಬುದ್ಧಿವಂತಿಕೆಯು ಪ್ರಯೋಗಾಲಯಗಳಿಂದ ಹೊರಬಂದು ಸಮಾಜದ ರಚನೆಗೆ ಚಲಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮಗ್ರ ಪರೀಕ್ಷೆಯಿಲ್ಲದೆ AI ವ್ಯವಸ್ಥೆಗಳನ್ನು ವಿಸ್ತರಿಸುವುದು ಅಪಾಯಕಾರಿಯಾಗಬಹುದು. ಆದ್ದರಿಂದ, ಜವಾಬ್ದಾರಿಯುತ ಮತ್ತು ಮಾನವ ಹಿತಾಸಕ್ತಿಯನ್ನು ಕೇಂದ್ರೀಕರಿಸಿದ ಅಭಿವೃದ್ಧಿಗೆ ನಗರಮಟ್ಟದ ಮಾನ್ಯತೆ ವ್ಯವಸ್ಥೆ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ನಮ್ಮ ಬೆಂಗಳೂರು ಜಾಗತಿಕ AI ಸಂಶೋಧನಾ ನಕ್ಷೆಯಲ್ಲಿ ಮತ್ತಷ್ಟು ಬಲವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಸ್ಟಾರ್ಟ್‌ಅಪ್ ರಾಜಧಾನಿ ಎಂಬ ಹೆಸರನ್ನು ಪಡೆದಿರುವ ಬೆಂಗಳೂರು, ಈ ರೀತಿಯ ಪ್ರಯತ್ನಗಳ ಮೂಲಕ AI ಸುರಕ್ಷತೆ ಮತ್ತು ಜವಾಬ್ದಾರಿತನದ ಕ್ಷೇತ್ರದಲ್ಲೂ ಮುಂಚೂಣಿಗೆ ಬರಬಹುದು. ಒಟ್ಟಾರೆಯಾಗಿ, Bharat1 ಘೋಷಿಸಿರುವ AI ನಗರ ಯೋಜನೆ ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಪ್ರಯತ್ನವಾಗಿದೆ. ಮಾನವ ಮೌಲ್ಯಗಳು, ಸುರಕ್ಷತೆ ಮತ್ತು ಜವಾಬ್ದಾರಿತನವನ್ನು ಕೇಂದ್ರದಲ್ಲಿ ಇಟ್ಟುಕೊಂಡು AI ವ್ಯವಸ್ಥೆಗಳನ್ನು ರೂಪಿಸುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಗತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. #LATEST #TECHNOLOGY #WORLDSFIRSTAICITY #BENGALURU #BHARAT1STARTUP
manmohan
527 ವೀಕ್ಷಿಸಿದ್ದಾರೆ
ರಿಲಯನ್ಸ್ ಜಿಯೋ ಆರೋಗ್ಯ AI: ನಿಮಿಷಗಳಲ್ಲಿ ಹೆಲ್ತ್ ರಿಪೋರ್ಟ್! ನವದೆಹಲಿ: ನಿಮಿಷಗಳಲ್ಲಿ ಹೆಲ್ತ್ ರಿಪೋರ್ಟ್ ವಿಶ್ಲೇಷಣೆ ಮಾಡಿ, ಅದರ ಫಲಿತಾಂಶವನ್ನು ಕೈಗಿಡುವ ಎಐ ಆಧಾರಿತ ಕ್ಲಿನಿಕ್ ಮಾದರಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಮನ ಸೆಳೆದಿದೆ. ಅಲ್ಲಿ ಪ್ರದರ್ಶಿಸಲಾದ ಜಿಯೋ ಆರೋಗ್ಯ ಎಐ, ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಎಐ-ಆಧಾರಿತ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದೆ. ಈ ಎಐ-ಚಾಲಿತ ವ್ಯವಸ್ಥೆಯು ರೋಗಿಯ ಪ್ರಮುಖ ಆರೋಗ್ಯ ಅಂಶಗಳನ್ನು ಅಳೆದು- ತೂಗಿ, ಕೆಲವೇ ನಿಮಿಷಗಳಲ್ಲಿ ಸ್ಕ್ರೀನ್ ಮಾಡುತ್ತದೆ ಮತ್ತು ವಿಶ್ಲೇಷಿಸುತ್ತದೆ, ಸಂಭಾವ್ಯ ಅಪಾಯಗಳನ್ನು ಗುರುತಿಸುತ್ತದೆ ಮತ್ತು ಅಗತ್ಯವಿರುವಂತೆ ತಜ್ಞರ ಉಲ್ಲೇಖಗಳನ್ನು ಶಿಫಾರಸು ಮಾಡುತ್ತದೆ. ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಐ-ಸಕ್ರಿಯಗೊಳಿಸಿದ ಚಿಕಿತ್ಸಾಲಯಗಳಾಗಿ ಪರಿವರ್ತಿಸುವುದು, ದೂರದ ಪ್ರದೇಶಗಳಲ್ಲಿಯೂ ಸಹ ವೇಗದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವುದು ತನ್ನ ಗುರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ವ್ಯವಸ್ಥೆಯಲ್ಲಿ ರೋಗಿಯು ಎಐ-ಸಕ್ರಿಯಗೊಳಿಸಿದ ರೋಗನಿರ್ಣಯ (ಡಯಾಗ್ನೋಸ್ಟಿಕ್) ಸಾಧನ, ಸ್ಮಾರ್ಟ್ ಮಿರರ್ ಮುಂದೆ ನಿಲ್ಲುತ್ತಾನೆ, ಇದು ಕಣ್ಣುಗಳು, ಚರ್ಮ ಮತ್ತು ಇತರ ದೃಶ್ಯ ಸೂಚನೆಗಳ ಆಧಾರದ ಮೇಲೆ ಅಗತ್ಯವಾದ ರೀಡಿಂಗ್ ತೆಗೆದುಕೊಳ್ಳುತ್ತದೆ. ಎಐ ಈ ಡೇಟಾವನ್ನು ವಿಶ್ಲೇಷಿಸುತ್ತದೆ ಮತ್ತು ಪ್ರಾಥಮಿಕ ಆರೋಗ್ಯ ಮೌಲ್ಯಮಾಪನವನ್ನು ಜನರೇಟ್ ಮಾಡುತ್ತದೆ. ರೋಗಿಯು ಸಮಸ್ಯೆಯನ್ನು 'ವಾಯ್ಸ್ ಎಐ ವೈದ್ಯರಿಗೆ' ಮೌಖಿಕವಾಗಿ ವಿವರಿಸಬಹುದು. ಅಗತ್ಯವಿದ್ದರೆ, ವಾಯ್ಸ್ ಎಐ ವೈದ್ಯರು ರೋಗಿಗೆ ಹೆಚ್ಚುವರಿ ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಇದರ ವೈಶಿಷ್ಟ್ಯವೆಂದರೆ ಅದು ಹಲವಾರು ಪ್ರಮುಖ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸಬಹುದು. 'ಜಿಯೋ ಆರೋಗ್ಯ ಎಐ' ರೋಗಿಗಳನ್ನು ವರ್ಗೀಕರಿಸಬಹುದು ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಪ್ರಕರಣಗಳಿಗೆ- ರೆಫರೆನ್ಸ್ ಗಳಿಗೆ ಆದ್ಯತೆ ನೀಡಬಹುದು. ಇದು ವೈದ್ಯರ ನಿತ್ಯದ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ನಿರ್ಣಾಯಕ ಪ್ರಕರಣಗಳ ಮೇಲೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ. ಕಂಪನಿಯ ಪ್ರಕಾರ, ಎಐ ವ್ಯವಸ್ಥೆಯು ಪ್ರಾಥಮಿಕ ಮೌಲ್ಯಮಾಪನವನ್ನು ಮಾತ್ರ ಜನರೇಟ್ ಮಾಡುತ್ತದೆ ಮತ್ತು ವೈದ್ಯರ ಸಲಹೆಯಿಲ್ಲದೆ ಔಷಧಿ ಅಥವಾ ಇತರ ವೈದ್ಯಕೀಯ ಸಹಾಯವನ್ನು ಒದಗಿಸುವುದಿಲ್ಲ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಆರೋಗ್ಯ ಮೂಲಸೌಕರ್ಯದ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಈ ಮಾದರಿಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿದೆ. ಸಂಪರ್ಕ ಲಭ್ಯವಿರುವಲ್ಲೆಲ್ಲಾ ಎಐ ಚಿಕಿತ್ಸಾಲಯಗಳನ್ನು ಸ್ಥಾಪಿಸಬಹುದು. ಪೋರ್ಟಬಲ್ ಎಕ್ಸ್-ರೇಗಳು ಮತ್ತು ಪೋರ್ಟಬಲ್ ಇಸಿಜಿಗಳಂತಹ ಸಾಧನಗಳನ್ನು ಸಹ ಸಂಪರ್ಕಿಸಬಹುದು. ಅಗತ್ಯವಿದ್ದರೆ ರೋಗಿಗಳು ಆನ್‌ಲೈನ್ ಕನ್ಸಲ್ಟೇಷನ್ ಮತ್ತು ಡಿಜಿಟಲ್ ಔಷಧಿ ಪ್ರಿಸ್ಕ್ರಿಪ್ಷನ್ ನಂಥ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯಬಹುದು. ದೇಶದಲ್ಲಿ ವಿಸ್ತರಿಸುತ್ತಿರುವ ಡಿಜಿಟಲ್ ಸಂಪರ್ಕದ ಲಾಭವನ್ನು ಪಡೆದುಕೊಂಡು, ಜಿಯೋ ಆರೋಗ್ಯ ಎಐನಂತಹ ಮಾದರಿಗಳು ದೊಡ್ಡ ಪ್ರಮಾಣದಲ್ಲಿ ಜಾರಿಗೆ ಬಂದರೆ, ಆರಂಭಿಕ ರೋಗನಿರ್ಣಯ ಮತ್ತು ತಜ್ಞರ ಸಲಹೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. #LATEST #INDIA #TECHNOLOGY #JIO #HEALTHAI #INSTANTREPORT
manmohan
530 ವೀಕ್ಷಿಸಿದ್ದಾರೆ
ಕರ್ಮ ರಿಟರ್ನ್ಸ್ ಅನ್ನೋದು ಇದಕ್ಕೇ.! ವಿಶ್ವಕಪ್‌ ಮೇಲೆ ಕಾಲಿಟ್ಟಿದ್ದೇ ಬಂತು, ಹೆಗಲೇರಿದ ಶನಿ.! ಈಗ ಟಿ20 ವಿಶ್ವಕಪ್‌ನಿಂದ ಆಸೀಸ್ ಬಹುತೇಕ ಔಟ್.? T20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತೊಂದು ದಯನೀಯ ಸೋಲು ಅನುಭವಿಸಿದ್ದು, ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟಿದ್ದರು. ಇದಾದ ಮೇಲೆ ಟ್ರೋಫಿ ಹತ್ತಿರ ಬರಲು ಸಾಧ್ಯವಾಗುತ್ತಿಲ್ಲ. ಆಸ್ಟ್ರೇಲಿಯಾ ತಂಡಕ್ಕೆ ಕಳೆದ ಮೂರ್ನಾಲ್ಕು ದಶಕಗಳಿಂದ ಐಸಿಸಿ ಟ್ರೋಫಿ ಗೆಲ್ಲುವುದು ನೀರು ಕುಡಿದಷ್ಟೇ ಸುಲಭ ಎನ್ನುವಂತಹ ಪ್ರದರ್ಶನ ನೀಡುತ್ತಾ ಬಂದಿತ್ತು. ಹೀಗಾಗಿ ಕಾಂಗರೂ ಪಡೆಯ ಸೊಕ್ಕು ಮುಗಿಲು ಮುಟ್ಟಿತ್ತು. ಅದರಲ್ಲೂ ಭಾರತದಲ್ಲೇ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಅಗಿ ಹೊರಹೊಮ್ಮಿತ್ತು. ಇಷ್ಟಕ್ಕೆ ಸುಮ್ಮನಾಗದ ಕಾಂಗರೂ ಪಡೆ ಆಲ್ರೌಂಡರ್ ಮಿಚೆಲ್ ಮಾರ್ಷ್, ಟ್ರೋಫಿ ತಲೆ ಮೇಲೆ ಕಾಲಿಟ್ಟು ಫೋಟೋಗೆ ಫೋಸ್ ಕೊಟ್ಟಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಆಸ್ಟ್ರೇಲಿಯನ್ನರಿಗೆ ಎಷ್ಟು ದುರಹಂಕಾರ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಆದರೆ ಎಲ್ಲಾ ದರ್ಪಕ್ಕೂ ಒಂದು ಅಂತ್ಯ ಇರಲೇಬೇಕಲ್ಲ. ಈ ಘಟನೆಯ ಬಳಿಕ ಆಸ್ಟ್ರೇಲಿಯಾ ತಂಡವು ಮತ್ತೊಂದು ಟ್ರೋಫಿ ಗೆಲ್ಲುವುದಿರಲಿ ಕನಿಷ್ಠಪಕ್ಷ ಫೈನಲ್‌ಗೇರಲು ಸಾಧ್ಯವಾಗುತ್ತಿಲ್ಲ. ಇದೀಗ ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಸೆಮೀಸ್‌ಗೇರಲು ಸಾಧ್ಯವಾಗಿರಲಿಲ್ಲ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಮತ್ತೆ ಐಸಿಸಿ ಟ್ರೋಫಿ ಗೆಲ್ಲುವ ರೇಸ್‌ನಿಂದ ಹೊರಬಿದ್ದಿತ್ತು. ಇದೀಗ ಆಸ್ಟ್ರೇಲಿಯಾ ತಂಡವು ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ದ ಸೋಲು ಕಂಡಿದೆ. ಇದೀಗ ಆಸೀಸ್‌ ತಂಡದ ಪರಿಸ್ಥಿತಿ ಹೇಗಿದೆ ಎಂದರೆ, ತಾನು ಸೂಪರ್-8 ಹಂತಕ್ಕೇರಬೇಕಾದರೆ ಇಂದು ನಡೆಯಲಿರುವ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ. ಈಗಾಗಲೇ 'ಬಿ' ಗುಂಪಿನಲ್ಲಿ ಶ್ರೀಲಂಕಾ ತಂಡವು ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೂಪರ್-8 ಹಾದಿ ಖಚಿತಪಡಿಸಿಕೊಂಡಿದೆ. ಇನ್ನು ಜಿಂಬಾಬ್ವೆ ಎರಡು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದ್ದರೇ, ಆಸೀಸ್ ಮೂರು ಪಂದ್ಯಗಳ ಪೈಕಿ ಒಂದು ಗೆಲುವು ಎರಡು ಸೋಲು ಸಹಿತ ಮೂರನೇ ಸ್ಥಾನದಲ್ಲಿದೆ. ಇಂದು ಐರ್ಲೆಂಡ್ ಎದುರು ಜಿಂಬಾಬ್ವೆ ಗೆದ್ದರೇ ಆಸೀಸ್ ಹೋರಾಟ ಗ್ರೂಪ್ ಹಂತದಲ್ಲೇ ಕೊನೆಯಾಗಲಿದೆ. #LATESTINFO #CRICKETZONE #OVERVIEW #T20 #WORLDCUP #KARMARETURN
manmohan
559 ವೀಕ್ಷಿಸಿದ್ದಾರೆ
T20 WC 2026: ಹಿಸ್ಟರಿ ರಿಪೀಟ್! ಪಾಕಿಸ್ತಾನದ ಹೆಡೆಮುರಿ ಕಟ್ಟಿದ ಟೀಮ್ ಇಂಡಿಯಾ ಗೆಲುವಿನ ಹೀರೋಗಳು ಇವರೇ.! ಭಾರತ ತಂಡ ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿತು. 2026 ರ ಟಿ20 ವಿಶ್ವಕಪ್‌ನ ರೋಚಕ ಪಂದ್ಯವನ್ನು ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಟಾಸ್ ಗೆದ್ದ ಪಾಕಿಸ್ತಾನ ತಂಡವು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಇಶಾನ್ ಕಿಶನ್ ಅವರ ಬಿರುಗಾಳಿಯ ಅರ್ಧಶತಕದ ಇನ್ನಿಂಗ್ಸ್‌ನ ಸಹಾಯದಿಂದ, ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 175 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಪಾಕಿಸ್ತಾನ ತಂಡವು 18 ಓವರ್‌ಗಳಲ್ಲಿ 10 ವಿಕೆಟ್‌ಗಳಿಗೆ 114 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದು ಪ್ರಸ್ತುತ ಟೂರ್ನಿಯಲ್ಲಿ ಭಾರತದ ಸತತ ಮೂರನೇ ಗೆಲುವು. ಈ ಗೆಲುವಿನೊಂದಿಗೆ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಗ್ರೂಪ್ ಎ ಯ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಮೂಲಕ ಸೂಪರ್-8 ತಲುಪಿತು. ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲಿ ಈ ಆಟಗಾರರು ಹೀರೋಗಳಾಗಿ ಮಿಂಚಿದರು. ಪಾಕ್ ಬೌಲರ್ಸ್ ಗೆ ನಡುಕ ಹುಟ್ಟಿಸಿದ ಇಶಾನ್: ಪಾಕಿಸ್ತಾನ ವಿರುದ್ಧ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದರು. ಇಶಾನ್ ಪವರ್‌ಪ್ಲೇನಲ್ಲಿ 42 ರನ್ ಗಳಿಸಿ ಭಾರತಕ್ಕೆ ಉತ್ತಮ ಆರಂಭ ಕೊಟ್ಟರು. ಇಶಾನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ನಂತರ ತಮ್ಮ ಇನ್ನಿಂಗ್ಸ್ ಅನ್ನು ಜವಾಬ್ದಾರಿಯುತವಾಗಿ ಆಡಿದರು. ಈ ಮೂಲಕ ಟೀಮ್ ಇಂಡಿಮಾ ದಾಖಲೆ ಮೊತ್ತವನ್ನು ಗಳಿಸಲು ಇಶಾನ್ ನೆರವಾದರು. ಕಳಪೆ ಪವರ್-ಪ್ಲೇ: ಪವರ್-ಪ್ಲೇನಲ್ಲಿ ಹೆಚ್ಚು ರನ್ ಗಳಿಸದಿರುವುದು ಕೂಡ ಪಾಕಿಸ್ತಾನದ ಸೋಲಿಗೆ ಕಾರಣ. ಟೀಮ್ ಇಂಡಿಯಾ ಬೌಲರ್ಸ್ ಆರಂಭದಲ್ಲೇ ನಾಲ್ಕು ವಿಕೆಟ್ ಕಬಳಿಸಿ ಪಾಕಿಸ್ತಾನಕ್ಕೆ ಶಾಕ್ ಕೊಟ್ಟರು. ಈ ಮೂಲಕ ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅಕ್ಸರ್ ಪಟೇಲ್ ಆರಂಭದಲ್ಲಿ ಹೀರೋಗಳಾದರು. ಪರಿಣಾಮ ಪಾಕಿಸ್ತಾನ ತಂಡ 176 ರನ್ಗಳ ದಾಖಲೆ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಮೊದಲ 6 ಓವರ್ ಗಳಲ್ಲಿ ಪಾಕಿಸ್ತಾನ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 39 ರನ್ ಗಳಿಸಿತು. ಪಾಕ್ ಗೆ ಆರಂಭಿಕ ಆಘಾತ ಕೊಟ್ಟ ಬೌಲರ್ಸ್: ಪಾಕಿಸ್ತಾನದ ಸೋಲಿಗೆ ಆರಂಭದಲ್ಲಿಯೇ ಮೂರು ವಿಕೆಟ್ ಕಳೆದುಕೊಂಡಿದ್ದು ಪ್ರಮುಖ ಕಾರಣವಾಯಿತು. ಭಾರತ ನೀಡಿದ 176 ರನ್ ಗಳ ದಾಖಲೆಯ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲೇ ಪಾಕಿಸ್ತಾನ ಮೇಲೆ ಟೀಮ್ ಇಂಡಿಯಾ ಬೌಲರ್ಸ್ ಒತ್ತಡ ಹಾಕಿದರು. ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಮಿಂಚಿದರು. ಪರಿಣಾಮ ಪಾಕಿಸ್ತಾನ ತನ್ನ ಆಗ್ರ ಕ್ರಮಾಂಕವನ್ನು ಬೇಗ ಕಳೆದುಕೊಂಡಿತ್ತು. ಟೀಮ್ ಇಂಡಿಯಾ ಶಿಸ್ತುಬದ್ದ ಬೌಲಿಂಗ್: ಪಾಕಿಸ್ತಾನ ತಂಡವನ್ನು ಟೀಮ್ ಇಂಡಿಯಾ ಬೌಲರ್ಸ್ ಸಂಪೂರ್ಣ ಕಟ್ಟಿ ಹಾಕಿದರು. ಪವರ್-ಪ್ಲೇನಲ್ಲಿ ಹೆಚ್ಚು ರನ್ ನೀಡದೆ, ನಾಲ್ಕು ವಿಕೆಟ್ ಕಬಳಿಸಿದರು. ಮೊದಲ ಓವರ್ನಲ್ಲಿ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರೆ, ಸೈಮ್ ಅಯೂಬ್ ಮತ್ತು ನಾಯಕ ಸಲ್ಮಾನ್ ಆಘಾ ಅವರನ್ನು ಜಸ್ಪ್ರೀತ್ ಬುಮ್ರಾ ಔಟ್ ಮಾಡಿದರು. ಐದನೇ ಸ್ಪಿನ್ನರ್ ಬಾಬರ್ ಅಜಮ್ ಅವರನ್ನು ಅಕ್ಸರ್ ಪಟೇಲ್ ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಪ್ರಾಬಲ್ಯ ಸಾಧಿಸಿದರು. ಅದ್ಭುತ ಫಿಲ್ಡೀಂಗ್: ಟೀಮ್ ಇಂಡಿಯಾ ಆಟಗಾರರು ಅದ್ಭುತ ಫೀಲ್ಡಿಂಗ್ ಮಾಡಿದರು. ಹೀಗಾಗಿ ಪಾಕಿಸ್ತಾನದ ಆಟಗಾರರು ಬಹುತೇಕ ಕ್ಯಾಚ್ ಔಟಾದರು. ಶಿವಂ ದುಬೆ ಮತ್ತು ರಿಂಕು ಸಿಂಗ್ ತಲಾ ಎರಡು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಶಿವಂ ದುಬೆ ಮತ್ತು ರಿಂಕು ಸಿಂಗ್ ಟೀಮ್ ಇಂಡಿಯಾ ಗೆಲುವಿನ ಹೀರೋ ಆದರು. ಪಾಕ್ ಮಧ್ಯಮ ಕ್ರಮಾಂಕ ಡಮಾರ್..? ಪಾಕಿಸ್ತಾನದ ಮಧ್ಯಮ ಕ್ರಮಾಂಕ ಪಂದ್ಯಕ್ಕೆ ಜೀವ ತುಂಬುವ ನಿರೀಕ್ಷೆಯಲ್ಲಿತ್ತು. ಆದರೆ, ಈ ಎಲ್ಲಾ ಲೆಕ್ಕಚಾರವನ್ನು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಉಲ್ಟಾ ಮಾಡಿದರು. ವರುಣ್ ಚಕ್ರವರ್ತಿ ಒಂದೇ ಓವರ್ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಬೇಗ ಮುಗಿಯುವಂತೆ ಮಾಡಿದರು. #BIGBREAKING #LATESTINFO #INDIAWON #T20 #WORLDCUP2026 #HISTORYREPEAT
manmohan
581 ವೀಕ್ಷಿಸಿದ್ದಾರೆ
Drone Runway: ಮತ್ತೆ ಪಾಕ್ ನಿದ್ದೆಗೆಡಿಸಿದ ಭಾರತ! ಆಪರೇಷನ್ ಸಿಂಧೂರ್ ಬಳಿಕ ಡ್ರೋನ್ ರನ್ ವೇ ಕಾರ್ಯ ಆರಂಭಿಸಿದ ಸೇನೆ! ಮೀರತ್‌ : ಆಧುನಿಕ ಯುದ್ಧಗಳಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತಿದೆ. ಅದರಲ್ಲೂ, ವಿಶೇಷವಾಗಿ 'ಆಪರೇಷನ್ ಸಿಂಧೂರ್' ವೇಳೆ ಡ್ರೋನ್‌ಗಳ (Drone) ಬಳಕೆ ಬಗ್ಗೆ ಭಾರತ ಮಹತ್ವದ ಪಾಠ ಕಲಿತಿದೆ. ಈ ಅನುಭವದ ಆಧಾರದಲ್ಲಿ ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ದೊಡ್ಡ ಹೆಜ್ಜೆ ಇಡುತ್ತಿದ್ದು, ಅದರ ಭಾಗವಾಗಿ ಉತ್ತರ ಪ್ರದೇಶದ ಮೀರತ್ನಲ್ಲಿ ದೇಶದ ಮೊದಲ ಸಮರ್ಪಿತ ಡ್ರೋನ್ ಮತ್ತು 'ರಿಮೋಟ್ಲಿ ಪೈಲಟೆಡ್ ಏರ್‌ಕ್ರಾಫ್ಟ್ ಏರ್‌ಬೇಸ್' (Remotely Piloted Aircraft Airbase) ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮೀರತ್‌ನಲ್ಲಿ ಅತಿ ದೊಡ್ಡ ಏರ್‌ಬೇಸ್! ಮೀರತ್‌ನಲ್ಲಿ ಸುಮಾರು 900 ಎಕರೆ ಭೂಮಿಯಲ್ಲಿ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ 'ಗಡಿ ರಸ್ತೆಗಳ ಸಂಸ್ಥೆ' (BRO), 'ಹೈ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್' (HALE) ರಿಮೋಟ್ ಪೈಲಟ್ ವಿಮಾನಗಳಿಗಾಗಿ ಮೀಸಲಾದ ಮಿಲಿಟರಿ ವಾಯುಯಾನ ನೆಲೆಯನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.ದಾಖಲೆಗಳ ಪ್ರಕಾರ, ರೂ.406 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಗಾಗಿ BRO ಬಿಡ್‌ಗಳನ್ನು ಆಹ್ವಾನಿಸಿದೆ ಎನ್ನಲಾಗಿದೆ. ಅದರಂತೆ, ಇದು ಭಾರತದಲ್ಲಿ ಡ್ರೋನ್ ಕಾರ್ಯಾಚರಣೆಗಳಿಗೆ ಸಮರ್ಪಿತವಾಗಿ ನಿರ್ಮಾಣವಾಗುತ್ತಿರುವ ಮೊದಲ ಪ್ರಮುಖ ಕೇಂದ್ರವಾಗಿದೆ. ಈ ವಾಯುನೆಲೆಯಲ್ಲಿ ವಿಶೇಷ ಏನು? ಈ ನೆಲೆಯ ಪ್ರಮುಖ ವೈಶಿಷ್ಟ್ಯವೆಂದರೆ 2,110 ಮೀಟರ್ ಉದ್ದ ಮತ್ತು 45 ಮೀಟರ್ ಅಗಲದ ರನ್‌ವೇ. ಈ ರನ್‌ವೇಯನ್ನು 'ರಿಮೋಟ್ ಪೈಲಟ್ ವಿಮಾನಗಳಿಗೆ ಮಾತ್ರವಲ್ಲದೆ C-295 ಮತ್ತು C-130' ಸಾರಿಗೆ ವಿಮಾನಗಳಿಗೂ ವಿನ್ಯಾಸಗೊಳಿಸಲಾಗುವುದು ಈ ರನ್‌ವೇ 'ICAO CAT-II' ಮಾನದಂಡಗಳಿಗೆ ಅನುಗುಣವಾಗಿ ಬೆಳಕು ಮತ್ತು ಆಧುನಿಕ ಸಂಚರಣೆ ವ್ಯವಸ್ಥೆಗಳೊಂದಿಗೆ ಸಜ್ಜುಗೊಳ್ಳಲಿದ್ದು, ಚಳಿಗಾಲದ ಮಂಜಿನಿಂದ ಉಂಟಾಗುವ ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿಯೂ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತದೆ. ಜೊತೆಗೆ 60x50 ಮೀಟರ್ ಅಳತೆಯ ಎರಡು ದೊಡ್ಡ ಹ್ಯಾಂಗರ್‌ಗಳನ್ನು ಸಹ ನಿರ್ಮಿಸಲಾಗುವುದು. ಇವು ವಿಮಾನಗಳು ಮತ್ತು ಡ್ರೋನ್‌ಗಳನ್ನು ಇರಿಸುವುದರ ಜೊತೆಗೆ ನಿರ್ವಹಣೆ ಮತ್ತು ತ್ವರಿತ ನಿಯೋಜನೆಯನ್ನು ಸಹ ಸುಗಮಗೊಳಿಸುತ್ತದೆ. ಪ್ರತಿ ವರ್ಷ ಸಾವಿರಾರು ಡ್ರೋನ್ ಕಾರ್ಯಾಚರಣೆ! ಈ ಬೇಸ್‌ನಲ್ಲಿ ಪ್ರತಿ ವರ್ಷ ಸುಮಾರು 1,500 ಡ್ರೋನ್ ಕಾರ್ಯಾಚರಣೆ ನಡೆಯುವ ನಿರೀಕ್ಷೆಯಿದೆ. ಅಂದರೆ ಸರಾಸರಿ ಪ್ರತಿದಿನ ನಾಲ್ಕು ಡ್ರೋನ್‌ಗಳು ಹಾರಾಟ ನಡೆಸಲಿವೆ. ಯಾಕಂದರೆ, ಡ್ರೋನ್‌ಗಳು ಈಗ ಕೇವಲ ಸಹಾಯಕ ಸಾಧನವಾಗಿಲ್ಲ, ಅವು ಯುದ್ಧದ ಪ್ರಮುಖ ಭಾಗವಾಗಿ ಪರಿಣಮಿಸಿರುವುದು. ಆಪರೇಷನ್ ಸಿಂಧೂರ್ನಿಂದ ಕಲಿತ ಮಹತ್ವದ ಪಾಠ! ಆಪರೇಷನ್ ಸಿಂಧೂರ್ ವೇಳೆ ಮಾನವ ರಹಿತ ಡ್ರೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿತ್ತು. ಇದರ ಮೂಲಕ ಶತ್ರುಗಳ ಚಲನವಲನವನ್ನು ನಿಖರವಾಗಿ ಗಮನಿಸಲು ಮತ್ತು ಸೈನಿಕರ ಜೀವಕ್ಕೆ ಅಪಾಯ ಕಡಿಮೆ ಮಾಡಲು ಸಾಧ್ಯವಾಯಿತು. ಅದರಲ್ಲೂ, HALE ಡ್ರೋನ್‌ಗಳು ಹೆಚ್ಚು ಎತ್ತರದಲ್ಲಿ ಮತ್ತು ಹೆಚ್ಚು ಸಮಯ ಹಾರಾಟ ನಡೆಸಿ, ವಿಶಾಲ ಪ್ರದೇಶದ ಬಗ್ಗೆ ರಿಯಲ್ ಟೈಮ್ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿವೆ. ಇದು ಭವಿಷ್ಯದ ಯುದ್ಧಗಳಲ್ಲಿ ಮುಂಚಿತವಾಗಿ ಅಪಾಯ ಗುರುತಿಸಲು ಮತ್ತು ತ್ವರಿತ ಕ್ರಮ ಕೈಗೊಳ್ಳಲು ಸಹಾಯಕವಾಗಲಿದೆ. 85 ತಿಂಗಳಲ್ಲಿ ಪೂರ್ಣಗೊಳ್ಳುವ ಮಹತ್ವಾಕಾಂಕ್ಷಿ ಯೋಜನೆ! ಈ ಯೋಜನೆ ಪೂರ್ಣಗೊಳ್ಳಲು ಒಟ್ಟು 85 ತಿಂಗಳ ಕಾಲಾವಕಾಶ ನಿಗದಿಯಾಗಿದೆ. ಮೊದಲ 7 ತಿಂಗಳಲ್ಲಿ ಯೋಜನಾ ವರದಿ ಮತ್ತು ಪೂರ್ವ ಸಿದ್ಧತೆ ನಡೆಯಲಿದೆ. ನಂತರ 18 ತಿಂಗಳು ನಿರ್ಮಾಣ ಕಾರ್ಯ ನಡೆಯಲಿದೆ. ಜೊತೆಗೆ 24 ತಿಂಗಳ ದೋಷ ಹೊಣೆಗಾರಿಕೆ ಅವಧಿ ಮತ್ತು 36 ತಿಂಗಳ ನಿರ್ವಹಣೆ ಅವಧಿ ಇರಲಿದೆ. ಇದರಿಂದ ಈ ಏರ್‌ಬೇಸ್ ದೀರ್ಘಕಾಲ ಸಂಪೂರ್ಣ ಕಾರ್ಯಾಚರಣೆ ಸ್ಥಿತಿಯಲ್ಲಿ ಇರಲು ಸಹಾಯವಾಗುತ್ತದೆ. #LATESTINFO #INDIA #TECHNOLOGY #DRONERUNWAY #BIGGESTAIRBASE #OPERATIONSINDOOR
manmohan
480 ವೀಕ್ಷಿಸಿದ್ದಾರೆ
ದೇಶದ ಮೊದಲ ಮ್ಯೂಸಿಕಲ್ ರೋಡ್ ಲೋಕಾರ್ಪಣೆ : ಏನಿದು ಸಂಗೀತ ಕೇಳಿಸುವ ರಸ್ತೆ.? ದೇಶದ ಆರ್ಥಿಕ ರಾಜಧಾನಿ ಮುಂಬೈನ ಮಹತ್ವಾಕಾಂಕ್ಷೆಯ 'ಕೋಸ್ಟಲ್ ರೋಡ್' (ಕರಾವಳಿ ರಸ್ತೆ) ಯೋಜನೆಗೆ ಈಗ ಮತ್ತೊಂದು ವಿಶೇಷ ಗರಿ ಸೇರ್ಪಡೆಯಾಗಿದೆ. ವಾಹನ ಸವಾರರು ನಿಗದಿತ ವೇಗದಲ್ಲಿ ಈ ರಸ್ತೆಯ ಮೇಲೆ ಸಂಚರಿಸುವಾಗ ಬಾಲಿವುಡ್‌ನ ಪ್ರಸಿದ್ಧ 'ಜೈ ಹೋ' ಹಾಡು ಕೇಳಿಬರಲಿದ್ದು, ಈ ಮೂಲಕ ಭಾರತದ ಮೊಟ್ಟಮೊದಲ 'ಮ್ಯೂಸಿಕಲ್ ರೋಡ್' ಅಥವಾ ಸಂಗೀತ ರಸ್ತೆ' ಉದ್ಘಾಟನೆಗೊಂಡಿದ್ದು, ಇದು ದೇಶದ ರಸ್ತೆ ನಿರ್ಮಾಣ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ. ಈ ವಿನೂತನ ರಸ್ತೆ ಮಾರ್ಗವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಬುಧವಾರ (ಫೆ.11) ಉದ್ಘಾಟಿಸಿದರು. ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಭಿವೃದ್ಧಿಪಡಿಸಿರುವ ಈ ವಿಶೇಷ ರಸ್ತೆ ಮಾರ್ಗವು ನಾರಿಮನ್ ಪಾಯಿಂಟ್‌ನಿಂದ ವರ್ಲಿ ಕಡೆಗೆ ಸಾಗುವ ಉತ್ತರ ದಿಕ್ಕಿನ ಕೋಸ್ಟಲ್ ರೋಡ್‌ನಲ್ಲಿದೆ. ಧರ್ಮವೀರ ಸ್ವರಾಜ್ಯರಕ್ಷಕ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರಿನಲ್ಲಿರುವ ಈ ರಸ್ತೆಯು ವಿಶ್ವದ ಐದನೇ ಹಾಗೂ ಭಾರತದ ಪ್ರಪ್ರಥಮ ಮ್ಯೂಸಿಕಲ್ ರೋಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರ್ಲಿ ಕಡೆಗೆ ಹೋಗುವ ಸುರಂಗದಿಂದ ವಾಹನಗಳು ಹೊರಬರುತ್ತಿದ್ದಂತೆ ಸುಮಾರು 500 ಮೀಟರ್ ಮುಂದಕ್ಕೆ ಈ ಮ್ಯೂಸಿಕಲ್ ಸ್ಟ್ರಿಪ್‌ಗಳನ್ನು ಅಳವಡಿಸಲಾಗಿದೆ. ರಸ್ತೆಯ ಮೇಲ್ಮೈಯಲ್ಲಿ ನಿರ್ದಿಷ್ಟ ಅಳತೆ ಮತ್ತು ಅಂತರದಲ್ಲಿ ವಿಶೇಷವಾದ ಸಣ್ಣ ಚಡಿಗಳನ್ನು (ಗ್ರೂವ್ಸ್) ಕೆತ್ತಲಾಗಿದ್ದು, ವಾಹನಗಳು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಇವುಗಳ ಮೇಲೆ ಚಲಿಸಿದಾಗ ಟೈರ್ ಮತ್ತು ರಸ್ತೆಯ ಘರ್ಷಣೆಯಿಂದ 'ಜೈ ಹೋ' ಹಾಡಿನ ರಾಗವು ಹೊರಹೊಮ್ಮುತ್ತದೆ. ಈ ಸಂಗೀತವು ವಾಹನದ ಒಳಗೆ ಸ್ಪಷ್ಟವಾಗಿ ಕೇಳಿಬರಲಿದ್ದು, ಸವಾರರಿಗೆ ಹೊಸ ಅನುಭವ ನೀಡಲಿದೆ. ಸವಾರರ ಅನುಕೂಲಕ್ಕಾಗಿ ಸುರಂಗದ ಒಳಗೆ ಈ ಸಂಗೀತ ರಸ್ತೆಯ ಬಗ್ಗೆ ಮುನ್ಸೂಚನೆ ನೀಡುವ ಫಲಕಗಳನ್ನು ಅಳವಡಿಸಲಾಗಿದೆ. ಚಡಿಗಳು ಆರಂಭವಾಗುವ 500 ಮೀಟರ್, 100 ಮೀಟರ್ ಮತ್ತು 60 ಮೀಟರ್ ಮೊದಲೇ ಈ ಬಗ್ಗೆ ಸೂಚನೆ ನೀಡಲಾಗಿದ್ದು, ನಿಗದಿತ ವೇಗವನ್ನು ಕಾಪಾಡಿಕೊಳ್ಳಲು ಸವಾರರಿಗೆ ತಿಳಿಸಲಾಗಿದೆ. ಜಪಾನ್‌ನ ಇಂಜಿನಿಯರ್ ಶಿಜುವೊ ಶಿನೋಡಾ ಅವರು 2007ರಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಈಗಾಗಲೇ ಹಂಗೇರಿ, ದಕ್ಷಿಣ ಕೊರಿಯಾ ಮತ್ತು ಯುಎಇ ಅಂತಹ ದೇಶಗಳಲ್ಲಿ ಇಂತಹ ಪ್ರಯೋಗಗಳು ಯಶಸ್ವಿಯಾಗಿದ್ದು, ಇದೀಗ ಭಾರತವೂ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಕೇವಲ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮಾತ್ರವಲ್ಲದೆ, ಪ್ರಯಾಣಿಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಈ ಪರಿಕಲ್ಪನೆಯನ್ನು ನೀಡಿದ್ದ ಮಾಜಿ ಸಂಸದರು ಉಪಸ್ಥಿತರಿದ್ದರು. #LATEST #INDIA #TECHNOLOGY #MUSICALROAD #BMC #NORTHCOASTWAY
manmohan
837 ವೀಕ್ಷಿಸಿದ್ದಾರೆ
ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ.! ನವದೆಹಲಿ : ಸರ್ಕಾರ ಆದಾಯ ತೆರಿಗೆ ಕಾನೂನಿನಲ್ಲಿ (New Income Tax rules) ಕೆಲ ಸುಧಾರಣೆಗಳನ್ನು ಮಾಡುತ್ತಿದ್ದು, ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಇವು ಸಾರ್ವಜನಿಕ ಪರಾಮರ್ಶೆಗೆ ಒಳಪಡುತ್ತಿದ್ದು, ಅಂತಿಮ ನಿಯಮಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತವೆ. ಈ ಪ್ರಸ್ತಾಪಿತ ನಿಯಮಗಳಲ್ಲಿ ಕೆಲ ಪ್ಯಾನ್ ನಿಯಮಗಳ ಬದಲಾವಣೆಗಳೂ ಇವೆ. ನಿಮ್ಮ ಹಣಕಾಸು ಸ್ಥಿತಿ ಗತಿ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರಬಲ್ಲ ನಿಯಮಗಳೂ ಇದರಲ್ಲಿವೆ. ಕ್ಯಾಷ್ ಡೆಪಾಸಿಟ್ ಮಿತಿ, ವಾಹನ ಖರೀದಿ, ಇನ್ಷೂರೆನ್ಸ್ ಇತ್ಯಾದಿ ವಿಚಾರದಲ್ಲಿ ಪ್ಯಾನ್ ಬಳಕೆ ಕುರಿತಾದ ಬದಲಾವಣೆಗಳಿವು. ಕ್ಯಾಷ್ ಡೆಪಾಸಿಟ್ ಮತ್ತು ವಿತ್ ಡ್ರಾವಲ್ ಮಿತಿಯಲ್ಲಿ ಭಾರೀ ಹೆಚ್ಚಳ: ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ಡೆಪಾಸಿಟ್ ಮಾಡಿದಾಗ ಅಥವಾ ವಿತ್ಡ್ರಾ ಮಾಡಿದಾಗ ಪ್ಯಾನ್ ಅನ್ನು ನಮೂದಿಸಬೇಕು ಎನ್ನುವ ಪ್ರಸ್ತಾಪ ಇದೆ. ಈಗಿರುವ ನಿಯಮ ಪ್ರಕಾರ, ದಿನಕ್ಕೆ 50,000 ರೂ ಹಾಗೂ ಹೆಚ್ಚಿನ ಮೊತ್ತದ ಡೆಪಾಸಿಟ್ ಗೆ ಪ್ಯಾನ್ ತೋರಿಸಬೇಕು. ವಾಹನ ಖರೀದಿಯಲ್ಲೂ ಮಿತಿ ಹೆಚ್ಚಳ: ಮೋಟಾರು ವಾಹನ ಖರೀದಿಸುವಾಗ, ಅದರ ಮೌಲ್ಯ 5 ಲಕ್ಷ ರೂಗಿಂತ ಹೆಚ್ಚಿದ್ದರೆ ಆಗ ಆ ಹಣ ಪಾವತಿಸುವಾಗ ಪ್ಯಾನ್ ತೋರಿಸಬೇಕು ಎಂದು ಹೊಸ ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ. ಈಗಿರುವ ನಿಯಮದ ಪ್ರಕಾರ ಯಾವುದೇ ಮೌಲ್ಯದ ಯಾವುದೇ ವಾಹನದ ಖರೀದಿಯಾದರೂ ಪ್ಯಾನ್ ತೋರಿಸುವುದು ಕಡ್ಡಾಯ. ಹೋಟೆಲ್, ಸಭಾಂಗಣಗಳ ಪಾವತಿಯಲ್ಲಿ: ಹೋಟೆಲ್, ರೆಸ್ಟೋರೆಂಟ್, ಬ್ಯಾಂಕ್ವೆಟ್ ಹಾಲ್, ಕನ್ವೆನ್ಷನ್ ಸೆಂಟರ್, ಈವೆಂಟ್ ಮ್ಯಾನೇಜರ್ ಇತ್ಯಾದಿ ಸೇವೆಗಳಿಗೆ ಹಣ ಪಾವತಿಸುವಾಗ ಅದರ ಮೌಲ್ಯ 50,000 ರೂ ಇದ್ದರೆ ಪ್ಯಾನ್ ನೀಡಬೇಕು. ಆದರೆ, ಹೊಸ ನಿಯಮದಲ್ಲಿ ಈ ಮಿತಿಯನ್ನು ಒಂದು ಲಕ್ಷ ರೂಗೆ ಏರಿಸಲಾಗಿದೆ. ರಿಯಲ್ ಎಸ್ಟೇಟ್ ವಹಿವಾಟು: ಸದ್ಯ ನೀವು ಖರೀದಿಸಿರುವ ಅಥವಾ ಮಾರುತ್ತಿರುವ ಸೈಟು, ಮನೆಯ ಬೆಲೆ 10 ಲಕ್ಷ ರೂ ದಾಟಿದಾಗ ಪ್ಯಾನ್ ನೀಡಬೇಕು. ಈಗ ಇದರ ಮಿತಿಯನ್ನು 20 ಲಕ್ಷ ರೂ.ಗೆ ಏರಿಸುವ ಪ್ರಸ್ತಾಪ ಮಾಡಲಾಗಿದೆ. ಪ್ಯಾನ್ ವ್ಯಾಪ್ತಿಗೆ ಇನ್ಷೂರೆನ್ಸ್ ಅಕೌಂಟ್: ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗಲೇ ಪ್ಯಾನ್ ತೋರಿಸಬೇಕು ಎನ್ನುವ ನಿಯಮದ ಪ್ರಸ್ತಾಪ ಮಾಡಲಾಗಿದೆ. ಈಗಿರುವ ನಿಯಮದ ಪ್ರಕಾರ, ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ ಹಣ ವರ್ಷಕ್ಕೆ 50,000 ರೂ ಮೀರಿದಾಗ ಮಾತ್ರ ಪ್ಯಾನ್ ನೀಡಬೇಕು ಎಂದಿದೆ. ಹೊಸ ಆದಾಯ ತೆರಿಗೆ ಕಾಯ್ದೆ 2026ರ ಏಪ್ರಿಲ್ ನಿಂದ ಜಾರಿಗೆ ಬರುತ್ತದೆ. ಇದರಲ್ಲಿ ನಿಯಮಗಳನ್ನು ಸರಳ ಹಾಗೂ ಸುಲಭಗೊಳಿಸಲಾಗಿದೆ. ಕ್ರಿಪ್ಟೋ ವಹಿವಾಟುಗಳ ಮಾಹಿತಿಯನ್ನು ಆದಾಯ ತೆರಿಗೆ ಸಲ್ಲಿಸುವುದು, ಸಿಬಿಡಿಸಿಯನ್ನು (ಇ-ರುಪಾಯಿ) ಮಾನ್ಯವಾದ ಎಲೆಕ್ಟ್ರಾನಿಕ್ ಪೇಮೆಂಟ್ ವಿಧಾನವೆಂದು ಅಧಿಕೃತವಾಗಿ ಪರಿಗಣಿಸುವುದು ಇತ್ಯಾದಿ ಹಲವು ಪ್ರಸ್ತಾಪಗಳು ಈ ಕರಡು ನಿಯಮಗಳಲ್ಲಿ ಇವೆ. #LATEST #INDIA #BANKING #INSURANCE #NEWINCOMETAXRULES2026
See other profiles for amazing content