ShareChat
click to see wallet page
search
ಮನುಷ್ಯನಿಗೆ ಬದುಕಲು ಹಣದ ಜೊತೆಯಲ್ಲಿ ನೆಮ್ಮದಿ ಕೂಡ ಅಷ್ಟೇ ಮುಖ್ಯ. ಅದರ ಜೊತೆಗೆ ನಮ್ಮವರು, ಬಂಧು,ಬಳಗ,ಸ್ನೇಹ ಹೀಗೆ ನೂರಾರು ನಂಟುಗಳ ಗುಚ್ಛ. ಯಾಕೆಂದರೆ ಮನುಷ್ಯ ಸಂಘಜೀವಿ ಅದಕ್ಕೆ. ಆದರೆ ಈಗಿನ ಕಾಲದಲ್ಲಿ ಬಹು ಮುಖ್ಯವಾಗಿ ನೆಮ್ಮದಿಯನ್ನೇ ಮನುಷ್ಯ ಕಳೆದುಕೊಂಡು ಪಕೀರನಾಗುತ್ತಿದ್ದಾನೆ.ಕಾರಣ ಅವನೊಳಗಿರುವ ಅಹಂಕಾರ, ಒಣ ಜಂಭ,ಸ್ವಾರ್ಥವೇ ತುಂಬಿದ ಕೇಡು ಗುಣದಿಂದ. ಅವಿಭಕ್ತ ಕುಟುಂಬ ಕರಗಿ, ವಿಭಕ್ತ ಕುಟುಂಬ ಪರಿವರ್ತನೆ ಆಗಿ ಗಂಡ ,ಹೆಂಡತಿ, ಮಕ್ಕಳು ಬಿಟ್ಟರೆ ಬೇರೆ ಯಾವ ಪ್ರಪಂಚದ ಖುಷಿಯೂ ಈಗ ಬೇಡವೇ ಆಗಿದೆ.ಮದುವೆ ಆಗುವ ತನಕ ಎಲ್ಲರೂ. ಮದುವೆ ಆದ ಬಳಿಕ ವ್ಯಕ್ತಿ ಅವನ ಪ್ರಪಂಚದದಿಂದಲೇ ದೂರ ದೂರ.ಎಲ್ಲರೂ ಹೀಗೇ ಅಂತಲ್ಲ. ಆದರೆ ಬಹುತೇಕ ಹೀಗೆಯೇ. ಒಬ್ಬ ಅಣ್ಣ ,ತನ್ನ ತಮ್ಮ ಚೆನ್ನಾಗಿ ಇರಲಿ ಅಂತ ಎಲ್ಲವನ್ನೂ ಅವನಿಗೇ ಬಿಟ್ಟು ತಮ್ಮನ ಬಹುತೇಕ ಕಷ್ಟ, ನಷ್ಟಗಳಿಗೆಲ್ಲ ತಾ ನೆರಳಾಗಿ ನಿಂತು ಅವನ ಮದುವೆಯನ್ನು ಮಾಡಿ,ಅವನಿಗೊಂದು ಚಂದದ ಸಂಸಾರ ಸಾಗರವನ್ನು ನಿರ್ಮಿಸಿ ತಾನು ತನ್ನ ಬದುಕಿನೊಟ್ಟಿಗೆ ಹೆಣಗಾಡಿ ಹೈರಾಣ ಆಗುವ ಅಣ್ಣ ,ಕೊನೇತನಕ ಬಯಸಿದ್ದು ತಮ್ಮ ,ತಮ್ಮನ ಸಂಸಾರ ಚೆನ್ನಾಗಿ ಇರಲಿ ಅಂತ.ಆದರೆ ಇಷ್ಟೆಲ್ಲಾ ನಿಸ್ವಾರ್ಥವಾಗಿ ಬದುಕಿದ ಅಣ್ಣ ಕೊನೆಯಲ್ಲಿ ತಮ್ಮನಿಗೆ ಬೇಡವಾದ ಬಂಧು ಆಗಿ ನಿರ್ಲಕ್ಷ್ಯ ಕ್ಕೆ ಒಳಗಾಗುವ ಸಂದರ್ಭ ಬಂದಾಗ ಆ ಅಣ್ಣನ ಮನಸ್ಸಿಗೆ ಅದೆಷ್ಟು ನೋವಾಗಬೇಡ. ಕೆಲವೆಡೆ ತಮ್ಮ, ಅಣ್ಣನನ್ನು ತುಂಬಾ ಚೆನ್ನಾಗಿ ನೋಡಿಕೊಂಡು ಅಣ್ಣನಿಗಾಗಿ ತನ್ನ ಬದುಕನ್ನು ಮುಡಿಪಿಡುವ ತಮ್ಮನಿಗೆ ಸ್ವತಃ ಅಣ್ಣನೇ ಅನ್ಯಾಯ ಎಸಗಿದಾಗಲೂ ಆ ತಮ್ಮ ಎನ್ನುವ ಜೀವದ ವ್ಯಥೆ ಅಷ್ಟಿಷ್ಟಲ್ಲ. ಬೆನ್ನ ಹಿಂದೆ ಹುಟ್ಟಿದ ಜೀವಗಳು ಕವಲೊಡೆದು ಅವರವರ ಸಂಸಾರದ ನೊಗ ಭಾರ ಹೊತ್ತು ಬೇರೆ ಬೇರೆ ದಾರಿಯಲ್ಲಿ ಸಾಗುವಾಗ ಇದೇಕೆ ಸ್ವಾರ್ಥ ಪ್ರಪಂಚವನ್ನು ಆಯ್ಕೆ ಮಾಡಿಕೊಂಡು ಬಿಡುತ್ತವೋ ಗೊತ್ತಿಲ್ಲ. ಮನದಲ್ಲಿ ಸಾಸಿವೆ ಕಾಳಿನಷ್ಟಾದರೂ ಕೃತಜ್ಞತೆ ಇಟ್ಟುಕೊಂಡು ಬದುಕಬೇಕು. ಅದು ಎಷ್ಟೇ ಪುಟ್ಟ ಸಹಾಯ ಆಗಿರಲಿ,ಸಹಾಯ ಮಾಡಿದವರ ಮೇಲೆ ಕಿಂಚಿತ್ ಕೃತಜ್ಞತೆ ಇಟ್ಟು ನಡೆದಾಗಲೇ ಮನುಷ್ಯ ತುಸು ನೆಮ್ಮದಿ ಅಂತ ಕಾಣೋದು. ಇವತ್ತು ಈ ಕೃತಜ್ಞತೆ ಅನ್ನೋದೇ ಇಲ್ಲವಾದ ಕಾರಣ ಮನುಷ್ಯ ನೆಮ್ಮದಿ, ಸುಖ,ಶಾಂತಿ ಕಳೆದುಕೊಂಡು ಪರದಾಡುವ ಪರಿಸ್ಥಿತಿ ಎದುರಾಗಿದೆ. ಈಗ ಕೌಟುಂಬಿಕ ವಾತಾವರಣದಲ್ಲಿಯೇ ಇಂಥ ಸ್ವಾರ್ಥ ತುಂಬಿದ ಗುಣಗಳ ಕೈ ಮೇಲಾಗಿರುವಾಗ ಇನ್ನು ಸಾಮಾಜಿಕ ವಾತಾವರಣದಲ್ಲಿ ಅದೆಷ್ಟರಮಟ್ಟಿಗೆ ಇದರ ಅಟ್ಟಹಾಸ ಇರಬಹುದು ಎನ್ನುವುದು ಯೋಚಿಸಲೇಬೇಕಾದಂತ ವಿಷಯ. ಎಷ್ಟು ಸಂಕುಚಿತ ಭಾವದ ಸಂಕೋಲೆಯಲ್ಲಿ ಮನುಷ್ಯ ಬಂಧಿಯಾಗುತ್ತಾನೋ ಅಷ್ಟೇ ಅವನ ಮನುಷ್ಯತ್ವ ಕೂಡ ಸಾಯುತ್ತಾ ಹೋಗುತ್ತದೆ. ಅವನ ನೆಮ್ಮದಿ ಕೂಡ ಮರೀಚಿಕೆ ಆಗುತ್ತಾ ಹೋಗುತ್ತದೆ. ನಮ್ಮ ಯುನಿವರ್ಸ್ ಕೂಡ ಇದನ್ನೇ ನೋಡುತ್ತಾ ಇರುತ್ತದೆ. ನೀ ಎಷ್ಟರಮಟ್ಟಿಗೆ ಉಪಕಾರಿ ಮನೋಭಾವ ,ಕೃತಜ್ಞತೆ ಹೊಂದಿ ಬದುಕುವೆಯೋ ಅಷ್ಟರ ಮಟ್ಟಿಗೆ ನಾನೂ ನಿನಗೆ ಒಳ್ಳೆಯದನ್ನು ಮರಳಿ ನೀಡುವೆ ಎನ್ನುತ್ತದೆ ಯುನಿವರ್ಸ್. ಗೊತ್ತಿಲ್ಲ ,ಮನುಷ್ಯ ಯಾಕಿಷ್ಟು ಸ್ವಾರ್ಥಿಯಾಗುತ್ತಿದ್ದಾನೆ ಅಂತ.ಗ್ರಾಹಕರೊಬ್ಬರ ಕಥೆ ಕೇಳಿ ಮನಸ್ಸು ಭಾರ ಆಯಿತು. ಇವತ್ತು ಅದೆಷ್ಟೇ ಹಣ ಇದ್ದರೂ ಬದುಕು ನೆಮ್ಮದಿಯಲ್ಲಿ ಇಲ್ಲ. ಅಂದು ಹಣವೇ ಇಲ್ಲದ ಬದುಕಿನಲ್ಲೂ ಕೂಡ ನೆಮ್ಮದಿ ಬೇಕಾದಷ್ಟು ಇತ್ತು. ಕಾರಣ ನಮ್ಮ ಹಿರಿಯರ ಗುಣ ಚಿನ್ನದಂತೆ ಇತ್ತು. ಹಾಗೂ ಅವಿಭಕ್ತ ಕುಟುಂಬದಲ್ಲಿ ಎಲ್ಲರಿಗೂ ಒಂದೇ ಸಮಾನವಾಗಿ ಪ್ರೀತಿ ಹಂಚಿ ಸಂಸಾರದ ತೇರೆಳೆವ ಸಾಮರ್ಥ್ಯ ಅಂದಿನವರಲ್ಲಿ ಇತ್ತು.ಇಂದು ಎಲ್ಲವೂ ಇದೆ.ಆದರೆ ನೆಮ್ಮದಿಯನ್ನೊಂದು ಬಿಟ್ಟು. ಎಷ್ಟೇ ಇದ್ದರೂ ಅತೃಪ್ತಿಯ ಜೀವನದ ಸಾಗರದಲ್ಲಿ ಮುಳುಗಿ ಮೇಲೆ ಏಳಲಾಗದೇ ನರಳುತ್ತಿದ್ದಾರೆ. ✍️ಶೋಭಾ ನಾರಾಯಣ ಹೆಗಡೆ.. #kannadamotivation #kannada #💓ಮನದಾಳದ ಮಾತು #🖊ಬದುಕಿನ ಕೋಟ್ಸ್📜 #🖋️ ನನ್ನ ಬರಹ #📝ನನ್ನ ಕವಿತೆಗಳು #☺ಜೀವನದ ಸತ್ಯ
💓ಮನದಾಳದ ಮಾತು - ShareChat