#🌼 ಗಾಂಧಿ ಜಯಂತಿ 🌼
ಗಾಂಧೀಜಿಯವರ ಧೈರ್ಯ ಎಲ್ಲರಿಗೂ ಮಾದರಿ: ಲಕ್ಷ್ಮಿ ಪ್ರಿಯಾ
ಕಾರವಾರ: ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿರುದ್ಧ ಧೈರ್ಯವಾಗಿ ಎದುರು ನಿಂತು ಇಡೀ ಭಾರತವನ್ನು ಒಂದುಗೂಡಿಸಿ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು, ಅನ್ಯಾಯದ ವಿರುದ್ಧ ಏಕಾಂಗಿಯಾಗಿ ದನಿಯೆತ್ತುವ ಅವರ ಧೈರ್ಯದ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಹೇಳಿದರು.
ನಗರಸಭೆಯ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಕಾರವಾರ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರಲ್ಲಿದ್ದ ಪ್ರಾಮಾಣಿಕತೆಯ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಹಿಂಸೆಯ ಮೂಲಕ ಏನು ಬೇಕಾದರು ಸಾಧಿಸಬಹುದು ಎಂದು ಇಡೀ ಜಗತ್ತಿಗೆ ತಿಳಿಸಿದ ಮಹಾನ್ ಚೇತನ ಗಾಂಧೀಜಿ. ಅವರ ಅಹಿಂಸೆಯ ತತ್ವದ ಪಾಲನೆ ಇಂದು ಇಡೀ ವಿಶ್ವಕ್ಕೆ ಅಗತ್ಯವಿದೆ. ಸರಳ ವ್ಯಕ್ತಿತ್ವ ಹೊಂದಿದ್ದ ಗಾಂಧೀಜಿ ಅವರ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬೇಕು, ಸಮಾಜದಲ್ಲಿ ಬದಲಾವಣೆ ಮಾಡಲು ದೊಡ್ಡ ಕೆಲಸಗಳನ್ನು ಮಾತ್ರ ಮಾಡಬೇಕಾದ ಅಗತ್ಯವಿಲ್ಲ ಬದಲಾಗಿ ಸಮಾಜಮುಖಿಯಾದ ಸಣ್ಣ ಸಣ್ಣ ಕಾರ್ಯಗಳ ಮೂಲಕ ಕೂಡ ಉತ್ತಮ ಬದಲಾವಣೆ ತರಲು ಸಾಧ್ಯ ಎಂಬುದನ್ನು ಗಾಂಧೀಜಿ ತಿಳಿಸಿದ್ದು, ಅವರ ತತ್ವ ಮತ್ತು ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದೀಲಿಷ್ ಶಶಿ ಮಾತನಾಡಿ, ಗಾಂಧೀಜಿ ಅವರು ನನ್ನ ಜೀವನವೇ ನನ್ನ ಸಂದೇಶ ಎಂಬುದಕ್ಕೆ ಪೂರಕವಾಗಿ ಅವರ ತತ್ವಗಳನ್ನು ಜೀವನ ಪರ್ಯಾಂತ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸರಳ ವ್ಯಕ್ತಿತ್ವದ ನಾಯಕ. ದೇಶದ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಲಿಪ್ ಎಂ. ಎನ್ ಮಾತನಾಡಿ, ಗಾಂಧೀಜಿ ಅವರು ರಾಜಕೀಯ, ಧಾರ್ಮಿಕ ವಿಷಯಗಳು ಹಾಗೂ ಪರಿಸರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರ ಅಚಾರ ವಿಚಾರಗಳು ಎಲ್ಲ ಕಾಲ ಘಟ್ಟಗಳಿಗೂ ಪ್ರಸ್ತುತ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಅಕೋಲೇಕರ ಮಾತನಾಡಿ, ಗಾಂಧೀಜಿ ಅವರ ಬಗ್ಗೆ ತಿಳಿಯಬೇಕಾದ ಸಾಕಷ್ಟು ವಿಷಯಗಳಿದ್ದು, ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಿರುವುದು ಬಹಳಷ್ಟು ಇದೆ . ಸತ್ಯ, ಅಹಿಂಸೆ ಮತ್ತು ಶಾಂತಿ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ ಗಾಂಧೀಜಿ ಅವರು ಎಂದರು.
ಗಾಂಧೀಜಿ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅಂಕೋಲಾದ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಮೋಹನ್ ಹಬ್ಬು , ಗಾಂಧೀಜಿ ಅವರು ಏರಿದ ಎತ್ತರಕ್ಕೆ ಯಾವ ನಾಯಕರೂ ಇದುವರೆಗೆ ಏರಿಲ್ಲ, ಏರಲೂ ಆಗುವುದಿಲ್ಲ, ನನ್ನ ಜೀವನವೇ ನನ್ನ ಸಂದೇಶ ಎನ್ನುವ ಅರ್ಹತೆ ಇದ್ದ ಏಕೈಕ ವ್ಯಕ್ತಿ ಅವರು ಎಂದರು.
ಪ್ರಪಂಚದ 175 ದೇಶಗಳು ಅಂಚೆ ಚೀಟಿ ಹೊರ ತಂದಿವೆ, ಮರಣೋತ್ತರ ಗೌರವವಾಗಿ ವಿಶ್ವ ಸಂಸ್ಥೆ ತನ್ನೆಲ್ಲಾ ದೇಶಗಳ ಧ್ವಜಗಳನ್ನು ಅರ್ಧಕ್ಕಿಳಿಸಿದ ಜಗತ್ತಿನ ಏಕೈಕ ನಾಯಕರಾಗಿದ್ದಾರೆ. ಅಹಿಂಸಾ ತತ್ವವನ್ನು ಪಾಲಿಸಿದ ಗಾಂಧೀಜಿ ಯಾರನ್ನೂ ದ್ವೇಷಿಸಲಿಲ್ಲ, ಸ್ವಾವಲಂಬನೆಗೆ ಒತ್ತು ನೀಡಿದ್ದ ಅವರು ಒಬ್ಬ ಸಂತರಾಗಿದ್ದರು, ಆಧ್ಯಾತ್ಮಿಕ ಸಾಧಕರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ದಿಶಾ. ಜೆ, ದೀಕ್ಷಾ ಮಂಜುನಾಥ ನಾಯ್ಕ, ಅಲೇಖಾ ಎಂ ನಾಯ್ಕ, ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಸೃಷ್ಟಿ ಆರ್ ಪಟಗಾರ, ನಯನಾ ಕೃಷ್ಣಾ ಗೌಡ, ಸಂಜನಾ ಭಾಸ್ಕರ ನಾಯ್ಕ, ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಕಿರಣ ಧುಮಾಲಿ, ಅಂಕಿತಾ ಡಿ ದಳವಿ, ರಕ್ಷಿತಾ ಆರ್ ಗೌಡ, ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ತರಬೇತಿ ನಿರತ ಐಎಎಸ್ ಅಧಿಕಾರಿ, ಝೂಪೀಶನ್ ಹಕ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ನಗರಸಭೆಯ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಹಿರಿಯ ಆರೋಗ್ಯ ನಿರೀಕ್ಷ ಯಾಕುಬ್ ಶೇಖ್, ನಗರಸಭೆ ವ್ಯವಸ್ಥಾಪಕ ಎನ್.ಎಂ ಮೆಸ್ತ ಹಾಗೂ ನಗರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಗಾಂಧೀ ಭಜನೆಗಳ ಕಾರ್ಯಕ್ರಮ ನಡೆಯಿತು, ನಂತರ ಎಂಜಿ ರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು.
#Gandhiji #courage #example #everyone #LakshmiPriya #malgudiexpress #malgudinews #news #TopNews
