ಪರ್ವ
'ಪಾಂಡವರ ವಿರುದ್ಧ ಯುದ್ಧವಾಗುತ್ತಿರುವಾಗ ನಾನು ಬಿಟ್ಟರೆ ಕ್ಷತ್ರಿಯ ಧರ್ಮಕ್ಕೆ ಎರಡು ಬಗೆದ ಹಾಗೆ. ನಿನಗೇ ಗೊತ್ತಲ್ಲ, ವಿರಾಟನಗರದ ಉತ್ತರ ಭಾಗದಲ್ಲಿ ಅವನ ಹಸುಗಳ ಹಿಂಡನ್ನು ದೋಚಿ ತರುವುದಕ್ಕೆ ನಾನು ಹೋಗಿದ್ದೆ. ಹಾಳು ಪಾಂಡವರು ಅಲ್ಲೇ ಇದ್ದರು. ಇಲ್ಲದಿದ್ದರೆ ಅಷ್ಟೊಂದು ಹಸುಗಳು ನನಗೆ ಸಿಕ್ಕುತ್ತಿದ್ದುವು. ಸಿಕ್ಕದಿದ್ದರೆ ಬೇಡ ಅವರಿಂದ ಸೋತ ಅಪಮಾನವಾಯಿತು ನನಗೆ, ಅವರು ಅಲ್ಲಿರುತ್ತಾರೆ ಅಂತ ಗೊತ್ತಿದ್ದರೆ ಜಾಸ್ತಿ ಸೈನ್ಯದೊಡನೆ ಹೋಗುತ್ತಿದ್ದೆ. ಒಟ್ಟಿನಲ್ಲಿ ಅಪಮಾನಕ್ಕೆ ಪ್ರತೀಕಾರ ಮಾಡದವನು ಕ್ಷತ್ರಿಯ ಹೇಗಾಗ್ತಾನೆ?'
ಮತ್ತೆ ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದರು. ರುಕ್ಷ್ಮರಥ ಕೇಳಿದ: 'ಪಾಂಡವರನ್ನು ದ್ವೇಷಿಸಲು ನಿನಗೆ ಈ ಕಾರಣವಿದೆ. ನಾನು ಹೇಗೆ ಅವರನ್ನ ದ್ವೇಷಿಸಲಿ, ಅದೂ ತಂಗಿಯ ಮಕ್ಕಳು ಅಂತ ನಮ್ಮಪ್ಪ ಎದೆಗೆ ಅವಚಿಕೊಳ್ಳಲು ಹೊರಟಿರುವಾಗ?'
'ನಿನ್ನ ಸ್ನೇಹಿತನಾದ ನಾನು ಅವರನ್ನು ದ್ವೇಷಿಸುವುದಕ್ಕಿಂತ ಬೇರೆ ಕಾರಣ ಬೇಕೆ ನಿನಗೆ?' ರುಕ್ಷ್ಮರಥನಿಗೆ ತುಂಬ ಇಕ್ಕಟ್ಟಾಯಿತು. ಬೇಕು ಎಂದು ಸ್ನೇಹಿತನ ಎದುರಿಗೆ ಹೋಗಲಿ, ತನ್ನ ಮನಸ್ಸಿನಲ್ಲಿ ಕೂಡ ಹೇಳಿಕೊಳ್ಳಲಾರ. ಸಮವಯಸ್ಕ, ಅಲ್ಲದೆ ಆರ್ಯಾವರ್ತದ ಜನರ ಸಮಕ್ಕೆ ತಮ್ಮ ಮಾನ ಮರ್ಯಾದೆ ಆಚಾರವಿಚಾರಗಳನ್ನು ಏರಿಸಿಕೊಳ್ಳಬೇಕೆಂದು ಜೊತೆಯಲ್ಲಿ ಕನಸು ಕಂಡಿರುವ ಗೆಳೆಯ. ಮಗಳ ಸ್ವಯಂವರದ ಅದ್ಧೂರಿಗೆ ಬೇಕಾದ ಸಹಾಯ ಮಾಡುವು ದಾಗಿ ತಾನಾಗಿಯೇ ಆಶ್ವಾಸನೆ ಇತ್ತಿದ್ದಾನೆ. ಅವನ ದ್ವೇಷಿಯು ತನ್ನ ದ್ವೇಷಿಯೂ ಆಗದೆ ಇರುವುದು ಹೇಗೆ? ಇದ್ದಕ್ಕಿದ್ದಂತೆಯೇ ಅಪ್ಪನ ಮೇಲೆ ಸಿಟ್ಟು ಬಂತು. ರಾಜ್ಯಾಡಳಿತದ ಹೊಣೆಯನ್ನು ತನ್ನ ಮೇಲೆ ಬಿಟ್ಟು ಪಟ್ಟಾಭಿಷೇಕವನ್ನೂ ಮಾಡಿರುವ ಅಪ್ಪ ಇಂತಹ ಮುಖ್ಯ ವಿಷಯದಲ್ಲಿ ಇನ್ನೂ ಯಾಕೆ ತಲೆಹಾಕುತ್ತಾನೆ, ಎನ್ನಿಸಿತು. ಹಾಗೆಂದು ಅವನ ಎದುರು ನಿಂತು ಕೇಳುವ ಮನಸ್ಸಾಗಲಿ ಧೈರ್ಯವಾಗಲಿ ಇಲ್ಲ. ಇಷ್ಟು ಯೋಚಿಸುವಲ್ಲಿ ಸುಶರ್ಮನೇ ಎಂದ: *ಅವರವರ ಜಗಳ ನಮಗೇನು ಅಂತ ನಾವು, ಅಂದರೆ ಮದ್ರರು, ತ್ರಿಗರ್ತರು, ಹೀಗೇ ಇನ್ನು ಕೆಲವರು ಸುಮ್ಮನೆ ಯಾಕಿರಬಾರದು ಅಂತ ನೀನು ಕೇಳಬಹುದು. ಕೇಕಯರು ಪಾಂಡವರ ಕಡೆಗೆ ಸೇರುತ್ತಾರೆಂಬ ಸುದ್ದಿ. ಗಾಂಧಾರರು ಮಾತ್ರ ದುರ್ಯೋಧನನ ಕಡೆಯೇ, ಈ ಯುದ್ಧ ದಲ್ಲಿ ಹೆಚ್ಚು ಕಡಿಮೆ ಆರ್ಯ ಪ್ರಪಂಚದ ಎಲ್ಲರೂ ಒಂದಲ್ಲ ಒಂದು ಪಕ್ಷವಹಿಸಿಯೇ ವಹಿಸು ತ್ತಾರೆ. ನಾವು ಯಾವ ಪಕ್ಷವೂ ಬೇಡ ಅಂತ ಸುಮ್ಮನಿದ್ದು ಬಿಟ್ಟರೆ ಹೇಡಿಗಳು ಅನ್ನಿಸಿಕೊಳ್ಳು ವುದಿಲ್ಲವೆ? ಅಲ್ಲಿ ಯುದ್ಧವಾಗುವಾಗ ಇಲ್ಲಿ ಸುಮ್ಮನೆ ಸುಂದರಿ ದಾಸಿಯರ ತೋಳಿನಲ್ಲೋ, ಸೋಮದ ಅಮಲಿನಲ್ಲೋ ಅಥವಾ ದಾಳದ ಉರುಟಿನಲ್ಲೋ ಇರಲು ಹೇಗೆ ಸಾಧ್ಯ ಈ ಕ್ಷತ್ರಿಯ ರಕ್ತಕ್ಕೆ?...'
ರುಕ್ಷ್ಮರಥ ಮಧ್ಯದಲ್ಲಿ ನಿಲ್ಲಿಸಿ ಕೇಳಿದ: 'ಈ ಯುದ್ಧದಲ್ಲಿ ಯಾರು ಗೆಲ್ಲುತಾರೆ ಅಂತೀಯ
ನೀನು?'
'ದುರ್ಯೋಧನ, ಸಂಶಯ ಬೇಡ ನಿನಗೆ' - ಎಂದು ಸಿದ್ಧಪಡಿಸಿಟ್ಟಂತೆ ಹೇಳಿದ ನಂತರ, ಸ್ವಲ್ಪ ಯೋಚಿಸಿ ನಿಧಾನವಾಗಿ ಎಂದ: 'ಹೇಗೆ ಅಂತೀಯೋ? ಒಂದು, ಪಾಂಡವರು ಹೊಟ್ಟೆ ಬಟ್ಟೆಗಿಲ್ಲದೆ ಹದಿಮೂರು ವರ್ಷ ಹಣ್ಣಾಗಿದ್ದಾರೆ. ಎರಡು, ದುರ್ಯೋಧನನ ಕಡೆಗೆ ಬರು ವಷ್ಟು ದೊರೆಗಳು ಪಾಂಡವರ ಕಡೆಗೆ ಬರುವುದಿಲ್ಲ. ಅವನೆಷ್ಟಾದರೂ ಅಧಿಕಾರದಲ್ಲಿರುವ ರಾಜ್ಯ ರಾಜಭಂಡಾರ ಕೈಲಿದೆ. ಸೈನ್ಯಕ್ಕೆ ಎಷ್ಟಾದರೂ ಖರ್ಚುಮಾಡಬಲ್ಲ, ಕಾಡಿನಲ್ಲಿ ಇಷ್ಟು ದಿನ ತೀರ್ಥಯಾತ್ರೆ, ಸತ್ಸಂಗ ಅಂತ ಇದ್ದು ತರಕಲು ಗಡ್ಡ ಬೆಳೆಸಿರುವ ಪಾಂಡವರಿಗೆ ಯಾರಾದರೂ ನಮಸ್ಕಾರ ಮಾಡಬಹುದು. ಬಲ, ಬೆಂಬಲ ಕೊಡುವುದಿಲ್ಲ.'
'ಹಿಂದೆ ರಾಜಸೂಯ ಮಾಡಿದ ದೊಡ್ಡ ದೊರೆಗಳಲ್ಲವೆ ಅವರು?'
34/670 'ಹಿಂದಿನ ವೈಭವದ ನೆನಪಿನಿಂದಲ್ಲ ರಾಜಕಾರಣದ ಶಕ್ತಿ, ಬರೂದ ಸೂತ್ರದಿಂದ. ಕಳೆದ ಹದಿಮೂರು ವರ್ಷದಿಂದ ದುರ್ಯೋಧನ ಅಧಿಕ ಕೊಂಡು ಪಾಂಡವರ ಹೆಸರೇ ಮರೆಯುವ ಹಾಗೆ ಮಾಡಿದಾನೆ. ಅವರು ಕಟ್ಟಿದ ಇಂದ್ರಪ್ರಸ್ಥದ ಪ್ರದೇಶದಲ್ಲಿ ಕೂಡ ಮರೆಯುವ ಹಾಗೆ. ಪಾಂಚಾಲರ ದಾಕ್ಷಿಣ್ಯಕ್ಕೆ ಅಲ್ಲೊಬ್ಬರು ಇನ್ನೊಬ್ಬರು ಇವರ ಕಡೆ ಬಂದ ಶಾಸ್ತ್ರ ಮಾಡಬಹುದು. ಸೋಲುವ ಎತ್ತಿನ ಬಾಲ ನೀನೇಕೆ ಹಿಡೀತೀಯ, ಬಲಶಾಲಿಯಾದ ಎತ್ತು ಗೆದ್ದ ನಂತರ ನಿನ್ನ ಮೇಲೆ ನುಗ್ಗಿ ಮುಗಿಸದೆ ಇರುತ್ತೆಯೆ? ನಿನ್ನ ತಂದೆ ವಿವೇಕಿ. ಆದರೆ ವೃದ್ದಾಪ್ಯ.'
ಇಬ್ಬರೂ ಸಂಜೆಯ ತನಕ ಮಾತನಾಡುತ್ತಿದ್ದರು. ಅಷ್ಟು ಹೊತ್ತಿಗೆ ಮಳೆ ಬಂತು. ಎಲ್ಲ ಹೊರಗೆ ಹೊರಡಲಿಲ್ಲ. ರುಕ್ಷ್ಮರಥ ತನ್ನ ತಮ್ಮಂದಿರನ್ನು ಕರೆಸಿದ. ಅವರೊಡನೆಯೂ ಸುಶರ್ಮ ಕೌರವರ ಪರವಾಗಿ ಮಾತನಾಡಿದ. ರಾತ್ರಿ ಪ್ರಾಯದ ಹೋರಿಯನ್ನು ಕಡಿದು ಔತಣ ಮಾಡಿದ್ದರು. ಊಟವಾದ ಮೇಲೆ ತನಗಾಗಿ ಸಿದ್ದಪಡಿಸಿದ್ದ ಹಾಸಿಗೆಯ ಮೇಲೆ ಕುಳಿತು ಸುಶರ್ಮ ರುಕ್ಷ್ಮರಥನನ್ನು ಕೇಳಿದ: 'ನಿನ್ನ ಮಗಳನ್ನು ಪಾಂಡವರ ಹಿರಿಯ ಮಗನಿಗೆ ತಂದು. ಕೊಳ್ಳುವುದಾಗಿ ಪಾಂಚಾಲದ ಚಾಣಾಕ್ಷ ಪುರೋಹಿತ ಅಂದ ಅಂತೀಯ. ನಿನ್ನ ಮಗಳಿಗೆ ಐದು ಜನ ಗಂಡಂದಿರಾಗುತ್ತಾರೆ. ಇದು ಆರ್ಯ ಧರ್ಮವೋ ಗುಡ್ಡಗಾಡು ಜನದ ಪದ್ದತಿಯೋ? ಆರ್ಯ ಜನಾಂಗದಿಂದ ನೀನು ಬಹಿಷ್ಕೃತನಾಗಬೇಕಷ್ಟೆ.'
"ಹ್ಯಾಗೆ?'
'ಪಾಂಡವರು ಐದು ಜನ ಕೂಡಿ ತಾನೆ ದೌಪದಿಯನ್ನು ಮದುವೆಯಾದದ್ದು? ಅವಳ ಹೊಟ್ಟೆಯಲ್ಲಿ ಹುಟ್ಟಿದ ಯಾವ ಮಗು ಯಾರಿಗೆ ಆಯ್ತು ಅಂತ ಅವರಿಗೂ ಗೊತ್ತಿಲ್ಲ. ಅವಳಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಹಿರಿಯನ ಹೆಸರು, ನಿನ್ನ ಮಗಳನ್ನು ಮಾಡಿಕೊಂಡರೂ ನಮ್ಮ ಮನೆಯ ಪದ್ಧತಿ, ಐದು ಜನವೂ ನಿನ್ನನ್ನು ಹಂಚಿಕೊಡ್ತೀವಿ ಅಂತ ಬಲವಂತ ಮಾಡಿ ದರೆ ನಿನ್ನ ಮಗಳು ಏನು ಮಾಡಬೇಕು? ನೀನೇನು ಮಾಡ್ತೀಯ?'
ರುತ್ಮರಥನಿಗೆ ಇದು ಹೊಳೆದೇ ಇರಲಿಲ್ಲ. ಈಗ ಬುದ್ದಿ ಗತ್ತಲೆ ಹಿಡಿದಂತಾಯಿತು. ಅಪ್ಪನಿಗೆ ವೃದ್ಧಾಪ್ಯ ಎಂದು ಖಚಿತವಾಯಿತು. ಗೆಳೆಯನಿಗೆ ಉತ್ತರ ಹೇಳಲಾರದೆ ಸುಮ್ಮನೆ ಕುಳಿತ. ಮೂರು ಸಲ ಆಕಳಿಸಿದ ಮೇಲೆ ಸುಶರ್ಮ ತಾನಾಗಿಯೇ ಹೇಳಿದ: 'ನಿನ್ನ ಮಗಳು ದೊಡ್ಡ ರಾಜ್ಯದ ರಾಜ್ಞೆಯಾಗಬೇಕು ಅಂತ ನನಗೂ ಬಯಕೆ ಇದೆ. ದುರ್ಯೋಧನನ ಹಿರೀಮಗೆ ಸ್ವಯಂವರಕ್ಕೆ ಬರುವ ಹಾಗೆ ನಾನು ಮಾಡ್ತೀನಿ. ಯುದ್ಧ ಕಳೀಲಿ ಸುಮ್ಮನಿರು.'
ರುಕ್ಷ್ಮರಥ ಎದ್ದು ನಿಂತ. ನೀನು ಮಲಗು ಎಂದು ಹೇಳಿ ಅಲ್ಲಿಂದ ಹೊರಕೋಣೆಗೆ ಬಂದಾಗ, ಮೈಗೆ ಶ್ರೀಗಂಧ ಲೇಪಿಸಿಕೊಂಡು ಬಣ್ಣ ಬಣ್ಣದ ಹೂವಿನ ಹಾರ ಧರಿಸಿದ ಎಳೆ ಪ್ರಾಯದ ಹತ್ತು ಜನ ದಾಸಿಯರು ನಿಂತಿದ್ದರು. ನಡುವೆ ನಿಂತವಳ ಕೈಯಲ್ಲಿ ಅಕ್ಕಿಯಿಂದ ಮಾಡಿದ ಮದ್ಯದ ಪಾತ್ರೆಯಿತ್ತು. ಅವನಿಗೆ ಮರೆತೇಹೋಗಿತ್ತು. ಒಳಗೆ ನಡೆದು ಸ್ನೇಹಿತನಿಗೆ ಹೇಳಿದ:
'ಎದ್ದು ನೋಡು. ನಿನ್ನ ಸೇವೆಗೆ ಹತ್ತು ಜನ ಇದ್ದಾರೆ. ಎಷ್ಟು ಜನ ಬೇಕಾದರೂ ಅಥವಾ ಯಾರನ್ನು ಬೇಕಾದರೂ ಆರಿಸು. ಆದರೆ ಎಚ್ಚರಿಕೆ. ನಮ್ಮ ಮದ್ರ ದೇಶದ ಹೆಂಗಸರು ಎಂಥ ಗಂಡಸನ್ನೂ ಬಳಲಿಸಿಬಿಡುತ್ತಾರೆ. ನಿನಗೂ ಐವತ್ತು ವರ್ಷವಾಗಿದೆಯಲ್ಲವೆ?'
ಸ್ನೇಹಿತರು ಜೊತೆಯಲ್ಲಿ ಕುಳಿತರು. ಹೆಂಗಸರು ಕೊಟ್ಟ ಮದ್ಯವನ್ನು ಇಬ್ಬರೂ ಕುಡಿದರು. ಸ್ವಲ್ಪ ಹೊತ್ತಿನ ನಂತರ ರುಕ್ಷ್ಮರಥನು ಎದ್ದು ತನ್ನ ನಿವಾಸಕ್ಕೆ ನಡೆದ. ಒಬ್ಬ ಸುಂದರಿಯು ಅವನ ತೋಳು ಹಿಡಿದು ನಡೆಸಿ ರಾಣಿಯ ಹಾಸಿಗೆಗೆ ತಂದು ಬಿಟ್ಟು ಹಿಂತಿರುಗಿದಳು.
ಹೊರಗೆ ಮಳೆ ಸುರಿಯುತ್ತಿತ್ತು. ಮದ್ಯವನ್ನು ಸೇವಿಸಿದ್ದ ರಾಣಿಗೆ ಮಬ್ಬು ಬಂದಿತ್ತು. ಪಕ್ಕದಲ್ಲಿ ಗಂಡ ಬಂದು ಮಲಗಿದ ಅರಿವೂ ಆಗಲಿಲ್ಲ. ರುಕ್ಷ್ಮರಥನಿಗೆ ಪಾನದಿಂದ ಬರಬೇಕಾದ ನಿದ್ದೆ ಬರಲಿಲ್ಲ. ಬ್ರೌಪದಿಗೂ ಹೀಗೆಯೇ ಆಯಿತಂತೆ, ಸ್ವಯಂವರದಲ್ಲಿ ಅರ್ಜುನನೇನೋ ಗೆದ್ದ. ಅನಂತರ ಹಿರಿಯನಾದ ಧರ್ಮನು ದ್ರುಪದನ ಹತ್ತಿರ, ನಾವು ಗೆದ್ದ ಮೇಲೆ ಹೆಣ್ಣನ್ನು ಹೇಗಾದರೂ ಹಂಚಿಕೊಳ್ಳುತ್ತೇವೆ, ಕೇಳುವ ಅಧಿಕಾರ ನಿನಗೇನಿದೆ ಅಂದನಂತೆ. ಹಿರಣ್ಯವತಿಗೂ ನಾಳೆ ಹೀಗೆಯೇ ಹೇಳಿದರೆ! ಭಯವಾಯಿತು. ಆರ್ಯಧರ್ಮವನ್ನು ಕಡೆಗಣಿಸಿದ ಇವರಿಗೆ ಯಾರೂ ಸಹಾಯ ಮಾಡುವುದಿಲ್ಲ ಎನ್ನಿಸಿತು. ಮಾಡಕೂಡದು ಎಂದು ನಿಶ್ಚಯಿಸಿದ. ಸ್ನೇಹಿತ ಸುಶರ್ಮನ ವಿಷಯದಲ್ಲಿ ಕೃತಜ್ಞತೆ ಹುಟ್ಟಿತು. ಎಷ್ಟು ಹೊರಳಿದರೂ ನಿದ್ದೆ ಬಾರದು. ಅಪ್ಪನದು ಅವಿವೇಕ. ಅವನಿಗೆ ತಿಳಿಯಹೇಳಬೇಕು. ಅಷ್ಟರಲ್ಲಿ ಯಾರ ಸಂಗಡವಾದರೂ ಮಾತನಾಡುವ ಬಯಕೆ. ಪಕ್ಕದಲ್ಲಿ ಗಟ್ಟಿಯಾಗಿ ಉಸಿರೆಳೆದು ಬಿಡುತ್ತಿದ್ದ ಹೆಂಡತಿಯ ಭುಜ ಅಲುಗಿಸಿದ. ಅವಳು ಆ ಎಂದಳು. ಮತ್ತೆ ಉಸಿರೆಳೆಯಲು ಶುರುಮಾಡಿದಳು. ನಾಲ್ಕಾರು ಸಲ ಹೊರಳಿಸಿದಮೇಲೆ ಎಚ್ಚರಗೊಂಡಳು. 'ನೋಡು, ನಾವು ಯೋಚಿಸಿಯೇ ಇರಲಿಲ್ಲ. ಹಿರಣ್ಯವತಿಯನ್ನು ಪಾಂಡವರ ಮಗನಿಗೆ ಕೊಟ್ಟಿದ್ದರೆ ಹೀಗಾಗುತ್ತಿತ್ತು'– ಎಂದು ಬಿಡಿಸಿ ಹೇಳಿದ: 'ಎಂತಹ ಅನಾಹುತ!'
ಅವಳು ಮತ್ತೆ ಮಂಪರಿಗೆ ಇಳಿದಿದ್ದಳು. 'ನೋಡು, ಎಷ್ಟು ಗಂಭೀರ ವಿಷಯ ಹೇಳಿ, ದೀನಿ. ನೀನು ನಿದ್ದೆ ಮಾಡ್ತಿದೀಯ. ಮಾತಾಡು.' ಅವಳು ಮಾತನಾಡಲಿಲ್ಲ. ಪುನಃ ಭುಜ ಅಲುಗಿಸಿ ಎಚ್ಚರ ಮಾಡಿ ಮೊದಲಿನಿಂದ ಎಲ್ಲವನ್ನೂ ವಿವರಿಸಿ, ಮಾತಾಡುವಂತೆ ಬಲವಂತ ಮಾಡಿದ.
'ಐದು ಜನರನ್ನು ಕರೆದುಕೊಳ್ಳುವ ಶಕ್ತಿ ಅವಳಿಗಿದ್ದರೆ ಮಾಡಿಕೊಳ್ಳಲಿ' - ಎಂದು ತೊದಲಿದಳು. 'ಏನಂದೆ?' – ಎಂದು ಇವನು ಕೇಳುವ ಹೊತ್ತಿಗೆ ಅವಳು ನಿದ್ದೆಯ ಉಸಿರೆಳೆ ಯುತ್ತಿದ್ದಳು.
ಸುಶರ್ಮ ಮರುದಿನವೇ ಪ್ರಯಾಣ ಮಾಡಿದ. ತಾನೂ ಬೆಂಗಾವಲಿನವರೊಡನೆ ನದಿಯ ತನಕ ಹೋಗಿ ಗೌರವದಿಂದ ಕಳಿಸಿ ಹಿಂತಿರುಗಿದ ತಕ್ಷಣ ರುಕ್ಷ್ಯರಥನು ಅಪ್ಪನ ಅರಮನೆಗೆ ಹೋದ. ಉದ್ಯಾನದಲ್ಲಿ ಸಂಜೆಯ ವಾಲು-ಬಿಸಿಲಿಗೆ ಮಿನುಗುವ ಬಿಳಿಗೂದಲಿನ ತಲೆಯನ್ನು ಬಗ್ಗಿಸಿಕೊಂಡು ಹೊಸದಾಗಿ ಒಡೆಯುತ್ತಿದ್ದ ನೆಲಸಂಪಿಗೆಯ ಹೂವನ್ನು ನೋಡುತ್ತಿದ್ದ ಶಲ್ಯ ರಾಜ, 'ಸುಖ ಪ್ರಸ್ಥಾನವಾಯಿತೊ?' ಎಂದು ಕೇಳಿದ. ಹೊರಡುವ ಮುನ್ನ ಸುಶರ್ಮ ಹಿರಿಯನಲ್ಲಿಗೆ ಬಂದು ನಮಸ್ಕರಿಸಿ ಹೋಗಿದ್ದ. ರುಕ್ಷ್ಮರಥ ನೇರವಾಗಿ ಅಪ್ಪನಲ್ಲಿ ಪ್ರಸ್ತಾಪಿಸಿದ. ಐವರಿಗೆ ಒಬ್ಬ ಹೆಂಡತಿ, ಅಂಥವರ ಹಿರಿಯ ಮಗನಿಗೆ ನಮ್ಮ ಹುಡುಗಿ ಕೊಟ್ಟರೆ ಅವರು ದ್ರುಪದನಿಗೆ ಹೇಳಿದ ಉತ್ತರವನ್ನೇ ಹೇಳಬಹುದಲ್ಲವೆ? ನಮ್ಮ ಆರ್ಯಧರ್ಮವೇ ಇದು?
ವೃದ್ಧರಾಜನಿಗೂ ಇದು ಸರಿ ಎನ್ನಿಸಲಿಲ್ಲ. ಇದೆಲ್ಲವನ್ನೂ ಮಗನಿಗೆ ಹೇಳಿಕೊಡುವವನು ಆ ತ್ರಿಗರ್ತದವನು ಎಂದು ಅವನಿಗೆ ಗೊತ್ತಿತ್ತು. ನಡೆದಿರುವುದನ್ನೆಲ್ಲ ತಪ್ಪೆಂದು ಕರೆದು ತಾವು ಹೊಸತು ಮಾಡಬೇಕೆಂದು ಈ ಗೆಳೆಯರಿಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. ತಕ್ಷಣ ಹೊಳೆ ದದ್ದನ್ನು ಮುದುಕ ಹೇಳಿದ: 'ಅದು ಅಧರ್ಮವೇ ಆಗಿದ್ದರೆ ಭೀಷ್ಮ ಒಪ್ಪುತ್ತಿದ್ದನೆ? ಆರ್ಯ ಧರ್ಮವನ್ನು ಭೀಷ್ಮನಿಗಿಂತ ಹೆಚ್ಚು ತಿಳಿದ ಯಾರಿದ್ದಾರೆ?'
ಮಗನ ಬಾಯಿ ಕಟ್ಟಿತು. ಹೌದು. ಭೀಷ್ಮ ದ್ರೋಣ ಇವರೆಲ್ಲ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ಇಂಥ ಮದುವೆಯಾದ ಪಾಂಡವರ ರಾಜಸೂಯಕ್ಕೆ ಸಮಸ್ತ ಆರ್ಯ ರಾಜರೂ, ಆರ್ಯ ಪುರೋಹಿತರೂ ಹೋಗಿದ್ದಾರೆ. ಬೇಡದಿದ್ದರೆ ತನ್ನ ಮಗಳನ್ನು ಆ ಮನೆಗೆ ಕೊಡು ವುದು ಬೇಡ, ಆದರೆ ಪಾಂಡವರ ಮದುವೆಯನ್ನು ತಪ್ಪು ಎನ್ನುವಂತಿಲ್ಲ. ಅವನು ಹೇಳಿ ಕೊಟ್ಟನೋ ಈ ಸಿಗುರನ್ನ ನಿನ್ನ ಸ್ನೇಹಿತ?'- ಅಪ್ಪ ಕೇಳಿದ. ಗೆಳೆಯನಿಗೆ ನಿಂದೆಯನ್ನು ತಗುಲಿಸಿದ್ದಕ್ಕೆ ರುಕ್ಷ್ಮರಥನಿಗೆ ಸಿಟ್ಟೇನೋ ಬಂತು. ಆದರೆ ಮೂಲಪ್ರಶ್ನೆಯನ್ನು ಕುರು ಪಾಂಚಾಲರಾದಿಯಾಗಿ ಸಮಸ್ತರೂ ಒಪ್ಪಿಕೊಂಡಿರುವಾಗ, ತನಗೆ ಹೇಳಿಕೊಟ್ಟವನು ಗೆಳೆಯನೇ ಅಲ್ಲವೆ, ತಲೆಯಲ್ಲಿ ಗೊಂದಲವಾಯಿತು. ಆದರೆ ಇದುವರೆಗೆ ನಮ್ಮ ಆರ್ಯರಲ್ಲಿ ಎಲ್ಲಾದರೂ ನಡೆದಿದೆಯೆ ಇಂಥಾ ಮದುವೆ, ನಡೆದಿತ್ತೆ?'- ಎಂದು ಮರುಪ್ರಶ್ನೆ ಹಾಕಿದ. ಅಪ್ಪನಿಗೂ ತಕ್ಷಣ ಹೊಳೆಯಲಿಲ್ಲ. ಅಲ್ಲಿ ನಿಂತು ಮಾತನ್ನು ಮುಂದುವರಿಸುವುದು ಬೇಡವಾಗಿದ್ದುದರಿಂದ ಮಗನು ತನ್ನ ನಿವಾಸಕ್ಕೆ ನಡೆದ. ರಾತ್ರಿ ನಿದ್ರೆಯಲ್ಲಿ ಏನೋ ಹೇಳಿದಳು, ಈಗ ಹೆಂಡತಿಯ ಕೈಲಿ ನಿಧಾನವಾಗಿ ಮಾತನಾಡಬೇಕು ಎನ್ನಿಸಿತು.
ಆರ್ಯರ ರೀತಿ ನೀತಿಗಳನ್ನು ಶಲ್ಯನು ತಿಳಿಯದವನಲ್ಲ. ಆದರೆ ಒಬ್ಬ ಹೆಂಗಸನ್ನು ಅಣ್ಣ ತಮ್ಮಂದಿರೆಲ್ಲ ಒಟ್ಟಿಗೆ ಮದುವೆಯಾಗುವುದನ್ನು ಅವನು ಕೇಳಿಯೂ ಅರಿಯ. ಅಧರ್ಮವೇ ಆಗಿದ್ದಲ್ಲಿ ಭೀಷ್ಮಾದಿಗಳು ಹೇಗೆ ಒಪ್ಪಿಕೊಂಡರು, ಇತರ ರಾಜರು, ದೇಶದೇಶಗಳ ಆಚಾರ ವಿಚಾರಗಳ ಪಂಡಿತರು ಹೇಗೆ ರಾಜಸೂಯಕ್ಕೆ ಬಂದರು? ಆದ್ದರಿಂದ ಆ ಮದುವೆ ಧರ್ಮದ್ದೆ, ಹೇಗೆ ಎಂಬುದು ಮಾತ್ರ ತನಗೆ ಗೊತ್ತಿಲ್ಲ, ಗೊತ್ತಾಗದಿದ್ದರೆ ಏನಾಗಬೇಕು ಎಂದು ಮನಸ್ಸನ್ನು ಸಮಾಧಾನಪಡಿಸಿಕೊಂಡು ಬೆಂಗಾವಲಿನವನೊಡನೆ ರಥವೇರಿ ಶಸ್ತ್ರಾಭ್ಯಾಸ ದಅಂಗಳಕ್ಕೆ ಹೋದ. ಮಳೆ ಶುರುವಾದ ಮೇಲೆ ಅಭ್ಯಾಸದ ಬಿರುಸು ಕಡಿಮೆಯಾಗಿತ್ತು. ತಾನು ಕೂಡ ಇತ್ತ ಕಡೆ ಬಂದಿಲ್ಲ. ರಥದ ಗಾಲಿ ನೆಲದಲ್ಲಿ ಹೂತುಕೊಳ್ಳುತ್ತಿದೆ. ಕುದುರೆಗಳು ಬಿಚ್ಚು ಧೈರ್ಯದಿಂದ ಓಟದ ಹೆಜ್ಜೆ ಎಸೆಯುತ್ತಿಲ್ಲ. ಒಟ್ಟು ಐವತ್ತು ಜನ ಕ್ಷತ್ರಿಯ ಯುವಕರು ಬಿಲ್ಲಿನ ಗುರಿಯನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಉಳಿದ ಸುಮಾರು ಇಪ್ಪತ್ತು ಜನರು ಭರ್ಜಿ ಎಸೆಯು ತಿದ್ದರು. ದೊಡ್ಡ ರಾಜ ಬಂದದ್ದರಿಂದ ಅವರು ಪರಸ್ಪರ ಮಾತನಾಡಿಕೊಳ್ಳುವುದನ್ನು ನಿಲ್ಲಿಸಿ ಶಿಸ್ತಿನಿಂದ ಅಭ್ಯಾಸದಲ್ಲಿ ತೊಡಗಿದರು. ಎಲ್ಲರ ಬೆವರಿದ ಮೈಗಳೂ ಎಣ್ಣೆ ಬಳಿದಂತೆ
ಹೊಳೆಯುತ್ತಿದ್ದುವು. ಶಲ್ಯರಾಜನಿಗೆ ದಾಸಿಯಲ್ಲಿ ಹುಟ್ಟಿದ ಶಲಾಕನು ಅಭ್ಯಾಸದ ಮೇಲ್ವಿಚಾ ರಕನಾಗಿದ್ದ.
ಅವನು ಹತ್ತಿರ ಬಂದು ಕೇಳಿದ: 'ಅಪ್ಪ, ಯುದ್ಧಕ್ಕೆ ಹೊರಡುವುದೆಂದು?'
'ಇನ್ನೂ ಗೊತ್ತಿಲ್ಲ ಮಗು, ಅವರು ಹೇಳಿಕಳಿಸುತ್ತಾರೆ."
'ನಾನು ಯಾಕೆ ಕೇಳಿದೆ ಅಂದರೆ ಯುದ್ಧ ಯಾವತ್ತು ನಡೆಯುತ್ತೋ, ನಡೆಯುತ್ತೋ ಇಲ್ಲವೋ, ಅದಕ್ಕೆ ನಾವು ಯಾಕೆ ಸುಮ್ಮಸುಮ್ಮನೆ ದಿನಾ ಅದನ್ನೇ ಅಭ್ಯಾಸ ಮಾಡಿ ಮಾಡಿ ದಣಿದು ಬೇಸರ ತಂದುಕೊಬೇಕು ಅಂತ ಇವರೆಲ್ಲ ಗೊಣಗ್ತಾರೆ.'
'ಯುದ್ಧವಿರಲಿ ಇಲ್ಲದಿರಲಿ, ಅಭ್ಯಾಸ ನಿಲ್ಲಿಸಕೂಡದು ಅಂತ ನಿನಗೆ ಗೊತ್ತಿಲ್ಲವೆ?'
'ಆದರೆ ಇಷ್ಟೊಂದು ಯಾಕೆ ಅಂತ ಇವರು ಕೇಳೂದು.'
ಮಹಾರಾಜ ಉತ್ತರ ಹೇಳಲಿಲ್ಲ. ಮಳೆಗಾಲ ಕಳೆಯುವ ತನಕವಂತೂ ಯುದ್ಧವಿಲ್ಲ. ಅದು ಅವರಿಗೂ ಗೊತ್ತಿದೆ. ಬಾಯಿ ಬಿಟ್ಟು ಹೇಳದೆ ಅವನೇ ರಥವನ್ನು ನಡೆಸಿಕೊಂಡು ಮುಂದೆ ನಡೆದ, ಬಯಲಿನಲ್ಲಿ ಜೋರಿನಿಂದ ಓಡಿಸಿದ. ಗಕ್ಕನೆ ನಿಲ್ಲಿಸಿದ. ಸರಕ್ಕನೆ ತಿರುಗಿಸಿದ. ಹೊಸ ಕುದುರೆಗಳು, ಕೆಸರು ನೆಲ. ಆದರೂ ತನಗೆ ಬಗ್ಗುತ್ತವೆ, ಶಲ್ಯನಲ್ಲವೆ ನಾನು ಎಂದುಕೊಂಡು ಒಂದು ಮೂಲೆಗೆ ಹೋಗಿ ರಥವನ್ನು ನಿಲ್ಲಿಸುವಾಗ ಅಕ್ಕ ತಂಗಿಯರನ್ನೆಲ್ಲ ಒಬ್ಬ ಮಾಡಿಕೊಳ್ಳು ವುದೇನೋ ಕೇಳಿಬಲ್ಲೆ, ಆದರೆ ಅಣ್ಣ ತಮ್ಮಂದಿರನ್ನೆಲ್ಲ ಒಬ್ಬಳು ಮಾಡಿಕೊಳ್ಳುವುದನ್ನು ಎಲ್ಲಿಯೂ ಕೇಳಿಲ್ಲವಲ್ಲ ಎನ್ನಿಸಿತು. ಸ್ವಲ್ಪ ಹೊತ್ತು ರಥದ ಮೇಲೆಯೇ ಕುಳಿತ. ಸಂಜೆ ಯಾಗುತ್ತಿತ್ತು. ಮಳೆ ಬರುವ ಸೂಚನೆ ಕಂಡಿತು. ತಾನೇ ನಡೆಸಿಕೊಂಡು ಅರಮನೆಗೆ ವಾಪಸಾದಾಗ ಅಗ್ನಿಗೆ ತುಪ್ಪವನ್ನು ಸುರಿಯುವ ಹೋಮದ ವಾಸನೆ ಅಡರಿತ್ತು. ಸ್ನಾನ ಮಾಡಿ ತಾನೂ ಹೋಗಿ ಹೋಮದಲ್ಲಿ ಪಾಲುಗೊಂಡ. ಅನಂತರ ಪುರೋಹಿತನನ್ನು ಹತ್ತಿರ ಕರೆದು ತನ್ನ ಸಮಸ್ಯೆಯನ್ನು ಕೇಳಿದ: 'ಪಾಂಚಾಲ ಹಸ್ತಿನಾವತಿಗಳ ವೇದಜ್ಞರೆಲ್ಲ ಒಪ್ಪಿದ ರೆಂದರೆ ಧರ್ಮಸಮ್ಮತವೇ ಅಲ್ಲವೆ?'
ಅವನು ಉತ್ತರ ಹೇಳಿದ. ರಾಜನಿಗೆ ಮತ್ತೆ ಪ್ರಶ್ನಿಸುವುದೇನೂ ಕಾಣಲಿಲ್ಲ.
ಅಪ್ಪ ಮಗನಲ್ಲಿ ಸ್ವಲ್ಪ ವಾಗ್ವಾದ ನಡೆಯಿತು. ಭೀಷ್ಮಾದಿಗಳೇ ಒಪ್ಪಿದ್ದಾರೆ ಎಂಬುದಕ್ಕಿಂತ ಹೆಚ್ಚಿನದನ್ನು ಅಪ್ಪ ಹೇಳಲಿಲ್ಲ. ದುರ್ಯೋಧನ ಮೊದಲಾಗಿ ಹಸ್ತಿನಾವತಿಯವರು, ಇತ್ತ ತ್ರಿಗರ್ತರು ಅತ್ತ ದುರ್ಯೋಧನನನ್ನು ಸಮರ್ಥಿಸುವ ಎಲ್ಲ ದೊರೆಗಳೂ ಅದನ್ನು ಅಪಹಾಸ್ಯ ಮಾಡುತ್ತಿದ್ದಾರೆಂದು ಮಗ ಹೇಳಿದ. ಅಣ್ಣ ತಮ್ಮಂದಿರೆಲ್ಲ ಒಬ್ಬಳನ್ನೇ ಹಂಚಿಕೊಳ್ಳುವುದು ಕೆಲವು ಕಾಡು ಜನರ ಪದ್ಧತಿ ಎಂದು ಅವರು ಕೇಳಿದ್ದರು. ಕಾಡಿನಲ್ಲೇ ಹುಟ್ಟಿ ಬೆಳೆದು ಪ್ರಾಯದಲ್ಲೂ ಆ ಜನಗಳ ಒಡನಾಡಿದ ಪಾಂಡವರು ಆರ್ಯಧರ್ಮವನ್ನೇ ನೀರು-ಪಾಲು ಮಾಡಿದ್ದಾರೆಂದು ಮಗ ವಾದಿಸಿದ. ನನ್ನ ಮಗಳನ್ನು ಅವರಿಗೆ ಕೊಡುವುದಂತೂ ಸಾಧ್ಯವಿಲ್ಲ, ಇನ್ನು ಅವರಿಗೆ ಸಹಾಯ. ಏಕೆ ಮಾಡಬೇಕು ದುರ್ಯೋಧನನಂತಹ ಸಿರಿವಂತ ರಾಜನ
ಮುಂದುವರೆಯುತ್ತದೆ...
( 📑 20 ರಿಂದ 25.5 📌 ಒಟ್ಟು ಪುಟಗಳು 657 )
💛 ಫೇಸ್ಬುಕ್ ಗ್ರೂಪ್ ಲಿಂಕ್...
https://www.facebook.com/groups/822079466827754/?ref=share&mibextid=NSMWBT
❤️ ನನ್ನ ಟೆಲಿಗ್ರಾಂ ಪೇಜ್ ನಲ್ಲಿಯು ಸಹ ಇರುತ್ತದೆ !
https://t.me/krishnachetanaloka1/26323
📙 *ಪರ್ವ* 📖
✒️ `ಎಸ್.ಎಲ್. ಭೈರಪ್ಪ```
🏹 ~ಕೃಷ್ಣ ಚೇತನ~ 📒
#ನಿಮ್ಮ ಗಮನಕ್ಕೆ ❗✔️
