ShareChat
click to see wallet page
search
#ಕರುನಾಡುನಮ್ಮ ಬಂಗಾರದ ಬೀಡು #ಎಲ್ಲಮ್ಮನ_ನೆಲೆವೀಡು_ಸವದತ್ತಿ #ವರ್ಷದಲ್ಲಿ_ಏಳು_ಜಾತ್ರೆ_ನಡೆಯುವುದು_ಈ_ಕ್ಷೇತ್ರದ_ವಿಶೇಷ #ಸವದತ್ತಿ_ಎಲ್ಲಮ್ಮ,_ಯಲ್ಲಮ್ಮ #ಬೆಳಗಾವಿ ಜಿಲ್ಲೆಯ ಸೌಂದತ್ತಿ ಅಥವಾ ಸವದತ್ತಿ ಪುರಾಣ ಪ್ರಸಿದ್ಧ ಶಕ್ತಿದೇವತೆಯ ಕ್ಷೇತ್ರ. ಸೌಗಂದವರ್ತಿ ಅಥವಾ ಸೌಗಂದಿಕಾಪುರ ಎಂಬುದು ಇದರ ಪ್ರಾಚೀನ ಹೆಸರು. ಇದು ತಾಯಿ ರೇಣುಕಾ ಯಲ್ಲಮ್ಮ ಅಥವಾ ತಾಯಿ ಎಲ್ಲಮ್ಮನ ನೆಲೆವೀಡು. ಇಲ್ಲಿರುವ ಎಲ್ಲಮ್ಮನ ದೇವಸ್ಥಾನವನ್ನು ಸುಮಾರು 2,000 ವರ್ಷಗಳಷ್ಟು ಹಿಂದೆಯೇ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಆದರೆ ಈಗಿರುವ ದೇವಾಲಯ ಅಷ್ಟು ಪ್ರಾಚೀನವಾದ್ದಲ್ಲ, ಕ್ರಿ.ಶ. 1514ರಲ್ಲಿ ಬಾಗಿಬೊಮ್ಮಪ್ಪನಾಯಕ ಇದನ್ನು ಕಟ್ಟಿಸಿರುವನೆಂಬುದು ತಜ್ಞರ ಅಭಿಮತ. ಅಲ್ಲದೆ ದೇವಾಲಯದಲ್ಲಿರುವ ದೇವತೆ ಪದ್ಮಪುಷ್ಪಪಾಣಿಯಾದ ಯಕ್ಷಿ ಪದ್ಮಾವತಿಯದೆಂದೂ ಕೆಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ನೂರಾರು ವರ್ಷಗಳಿಂದ ಬೇಡಿ ಬರುವ ಭಕ್ತರ ಕೋರಿಕೆಯನ್ನು ಈಡೇರಿಸುತ್ತಾ ಇಲ್ಲಿ ನೆಲೆಸಿರುವ ತಾಯಿ ಎಲ್ಲಮ್ಮನೇ ಎಂಬುದು ಭಕ್ತರ ಅಚಲ ನಂಬಿಕೆ. ಜನಪದರು ಎಲ್ಲಮ್ಮನಿಗೆ ಉದೋ... ಉದೋ.. ಅನ್ರಪ್ಪ ಅಂತ ಹಾಡಿದ್ದಾರೆ. ತಾಯಿಯ ಮಹಿಮೆಯನ್ನು ಕೊಂಡಾಡಿದ್ದಾರೆ. ಚಾಲುಕ್ಯ ಹಾಗೂ ರಾಷ್ಟ್ರಕೂಟರ ವಾಸ್ತುಶೈಲಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಎಲ್ಲಮ್ಮನಿಗೆ ವೀರಶೈವ ಸಂಪ್ರದಾಯದಂತೆ ನಿತ್ಯ ಪೂಜೆ ನಡೆಯುತ್ತದೆ. ಎಲ್ಲಮ್ಮ ದೇವಾಲಯಕ್ಕೆ ಎಲ್ಲ ಜಾತಿ, ಮತ, ಪಂಥಗಳ ಭಕ್ತರೂ ಆಗಮಿಸುವುದು ವಿಶೇಷ. ನಿತ್ಯವೂ ಇಲ್ಲಿಗೆ ಹೊಸ ಹೊಸ ಭಕ್ತರು ಬರುವುದು ಮತ್ತೊಂದು ವಿಶೇಷ. ಯಾವ ದಿನ ನನ್ನ ದೇವಾಲಯಕ್ಕೆ ಹೊಸ ಭಕ್ತರು ಬರುವುದಿಲ್ಲವೋ ಅಂದು ತಾನಲ್ಲಿ ಇರುವುದಿಲ್ಲ ಎಂದು ತಾಯಿ ಹೇಳಿದ್ದಾಳೆಂದೂ ಹೇಳಲಾಗುತ್ತದೆ. Savadatti Yallamma Temple, ಸವದತ್ತಿ ಎಲ್ಲಮ್ಮ ದೇವಾಲಯ - ಚಿತ್ರಕೃಪೆ ಬೆಳಗಾವಿ ಜಿಲ್ಲಾ ಅಧಿಕೃತ ವೆಬ್ ತಾಣಪ್ರತಿ ಮಂಗಳವಾರ ಹಾಗೂ ಶುಕ್ರವಾರಗಳಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನವಂತೂ ಜನ ಜಾತ್ರೆಯೇ ನೆರೆದಿರುತ್ತದೆ. ಬನದ ಹುಣ್ಣಿಮೆ, ಭಾರತ ಪೂರ್ಣಿಮೆ ಅಥವಾ ಬರಾತನ ಹುಣ್ಣಿಮೆಯ ದಿನ ಇಲ್ಲಿ ಲಕ್ಷಾಂತರ ಭಕ್ತರು ಸೇರಿ ದೊಡ್ಡ ಜಾತ್ರೆಯನ್ನೇ ಆಚರಿಸುತ್ತಾರೆ. ವರ್ಷದಲ್ಲಿ ಏಳು ಜಾತ್ರೆ ನಡೆಯುವುದು ಈ ಕ್ಷೇತ್ರದ ಮತ್ತೊಂದು ವಿಶೇಷ. ಸ್ಥಳ ಪುರಾಣಗಳ ರೀತ್ಯ ಭೂಮಿಯಲ್ಲಿ ದಶವತಾರವೆತ್ತಿದ ಶ್ರೀಮನ್ನಾರಾಯಣ ಪರಶುರಾಮಾವತಾರದಲ್ಲಿ ಇಲ್ಲಿ ನೆಲೆಸಿ ತಪವನ್ನಾಚರಿಸಿದರಂತೆ. ಪರಶುರಾಮರ ತಂದೆ ಜಮದಗ್ನಿ ಮಹರ್ಷಿ ಹಾಗೂ ಪರಶುರಾಮರ ತಾಯಿ ರೇಣುಕಾದೇವಿ ಇಲ್ಲಿ ಆಶ್ರಮವಾಸಿಗಳಾಗಿದ್ದರು. ಪ್ರತಿನಿತ್ಯ ಯಜ್ಞಕ್ಕೆ ನೀರು ತರಲು ಹೊಳೆಗೆ ಹೋಗುತ್ತಿದ್ದ ರೇಣುಕಾದೇವಿ, ಮರಳಲ್ಲಿ ಮಡಕೆ ಮಾಡಿ, ಹಾವನ್ನೇ ಸಿಂಬೆಯಾಗಿಟ್ಟುಕೊಂಡು ನೀರು ತರುತ್ತಿದ್ದಳಂತೆ. ಆಕೆಯ ಪಾತಿವ್ರತ್ಯದಲ್ಲಿ ಅಂತಹ ಶಕ್ತಿ ಇತ್ತಂತೆ. ಒಂದು ದಿನ ಮರಳಿನಲ್ಲಿ ಮಾಡಿದ ಮಡಕೆಗೆ ಆ ತಾಯಿ ನೀರು ತುಂಬಿಸುವಾಗ ಆಕಾಶಮಾರ್ಗದಲ್ಲಿ ಹೋಗುತ್ತಿದ್ದ ಯಕ್ಷರ ಸರಸದ ಬಿಂಬ ನೀರಿನಲ್ಲಿ ಕಾಣಿಸಿತಂತೆ. ಇದನ್ನು ಕಂಡು ರೇಣುಕಾಮಾತೆ ಮೋಹಪರವಶಳಾದಳಂತೆ. (ಕಾರ್ತವೀರ್ಯಾರ್ಜುನ ತನ್ನ ಯುವತಿಯರೊಂದಿಗೆ ಜಲಕ್ರೀಡೆ ಆಡುವುದನ್ನು ನೋಡಿ ಎಂದೂ ಕೆಲವರು ಹೇಳುತ್ತಾರೆ) ಹೀಗಾಗಿ ಆ ಮಡಕೆ ನೀರಲ್ಲಿ ಕರಗಿ ಹೋಯಿತಂತೆ. ಮತ್ತೆ ಮರಳಿನಲ್ಲಿ ಮಡಕೆ ಮಾಡಲು ಸತತ ಪ್ರಯತ್ನ ಮಾಡಿದರೂ ಆಗಲಿಲ್ಲ. ಇದೆಲ್ಲವನ್ನೂ ತನ್ನ ದಿವ್ಯದೃಷ್ಟಿಯಿಂದ ನೋಡಿ ಕುಪಿತನಾದ ಜಮದಗ್ನಿ ತನ್ನ ಪತ್ನಿಗೆ ಶಾಪ ನೀಡಿದನಂತೆ. ಶಾಪಗ್ರಸ್ಥೆಯಾದ ರೇಣುಕೆಯ ಮೈಯನ್ನು ತೊನ್ನು ಆವರಿಸಿ, ಕುಷ್ಠರೋಗಿಯಾದಳಂತೆ. ಆಶ್ರಮದಿಂದಲೂ ಆಕೆಯನ್ನು ಹೊರ ಹಾಕಲಾಯಿತಂತೆ. ಹೀಗೆ ಪತಿಯಿಂದ ಪರಿತ್ಯಕ್ತೆಯಾದ ರೇಣುಕಾಮಾತೆ, ಸವದತ್ತಿಯ ಈಗಿನ ಜೋಗುಳ ಬಾವಿಯ ಬಳಿ ಬಂದು, ಎಕ್ಕಯ್ಯ, ಜೋಗಯ್ಯ ಎಂಬ ಸಿದ್ಧರ ದರ್ಶನ ಮಾಡಿ, ಅವರ ಆಣತಿಯಂತೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ಮೈಗೆ ಹರಿಶಿನ (ಭಂಡಾರ) ಲೇಪಿಸಿಕೊಂಡಾಗ ತೊನ್ನೆಲ್ಲಾ ಮಾಯವಾಗಿ,ರೋಗಮುಕ್ತಳಾಗಿ ಹಿಂದಿನ ರೂಪವನ್ನು ಪಡೆದಳಂತೆ. ಶಾಪವಿಮೋಚನೆ ಆದ ಬಳಿಕ ಮತ್ತೆ ಆಶ್ರಮಕ್ಕೆ ಹಿಂತಿರುಗಿದ ಪತ್ನಿಯನ್ನು ಕಂಡು ಕೋಪಾಗ್ನಿಯಿಂದ ಕುದಿಯುತ್ತಿದ್ದ ಜಮದಗ್ನಿ ತನ್ನ ಮಗ ಪರಶುರಾಮನಿಗೆ ತಾಯಿಯ ತಲೆ ಕತ್ತರಿಸುವಂತೆ ಆಜ್ಞಾಪಿಸಿದರಂತೆ. ಪರಶುರಾಮರು ಪಿತೃವಾಕ್ಯ ಪರಿಪಾಲಿಸಿ ತಾಯಿಯ ರುಂಡವನ್ನು ತುಂಡರಿಸಿದರಂತೆ. ನಂತರ ಮತ್ತೆ ತಂದೆಯನ್ನು ಸಂತೈಸಿ, ಅವರ ತಪೋಬಲದಿಂದಲೇ ತಾಯಿಗೆ ಮರುಜನ್ಮ ದೊರಕಿಸಿದರಂತೆ. ಹೀಗೆ ಎರಡು ಬಾರಿ ಹುಟ್ಟಿದ ತಾಯಿ ರೇಣುಕಾದೇವಿ, ತನ್ನ ಶಾಪವಿಮೋಚನೆಗೆ ಕಾರಣವಾದ ಜೋಗಳ ಬಾವಿಯ ಬಳಿ ಎಲ್ಲಮ್ಮನಾಗಿ ನೆಲೆಸಿ ಭಕ್ತರನ್ನು ಹರಸುತ್ತಿದ್ದಾಳೆಂಬುದು ಜನರ ನಂಬಿಕೆ. ಈ ಪವಿತ್ರ ತಾಣದಲ್ಲಿ ಜಮದಗ್ನಿ ಹಾಗೂ ಪರಶುರಾಮರ ದೇವಾಲಯಗಳೂ ಇವೆ. ಇಂದಿಗೂ ಈ ದೇವಾಲಯದಲ್ಲಿ ಭಕ್ತರು ಭಂಡಾರ ಅರ್ಪಿಸುವುದು ಪ್ರಮುಖ ಸೇವೆಯಾಗಿದೆ. ಅಲ್ಲದೆ ಮಕ್ಕಳಿಲ್ಲದವರು, ಸಂತಾನ ಭಾಗ್ಯಕ್ಕೆ ಹರಕೆ ಹೊತ್ತು ಪರಶುರಾಮರ ತೊಟ್ಟಿಲು ತೂಗುವ ಸೇವೆಯನ್ನೂ ನಡೆಸುತ್ತಾರೆ. Savadatti Yallamma Temple, Temples of Karnataka, ಸವದತ್ತಿ ಎಲ್ಲಮ್ಮ ದೇವಾಲಯ -ಮತ್ತೊಂದು ಕಥೆಯ ಪ್ರಕಾರ, ಶ್ರೀಮಂತ ವೀರಶೈವ ಕುಟುಂಬದಲ್ಲಿ ಜನಿಸಿದ ಎಲ್ಲಮ್ಮ. ತೊನ್ನು ರೋಗಕ್ಕೆ ತುತ್ತಾಗುತ್ತಾಳೆ. ಯಾರೂ ಆಕೆಯನ್ನು ಮದುವೆಯಾಗುವುದಿಲ್ಲ. ಸವದತ್ತಿಗೆ ಬಂದು ಗುಡ್ಡದಲ್ಲಿ ಎಕ್ಕಯ್ಯ ಜೋಗಯ್ಯರ ಪಾದುಕೆಯ ಮೇಲಿನ ಮಳೆನೀರು ಬಿದ್ದಕ್ಷಣವೇ ತೊನ್ನು ಮಾಯವಾಯಿತು. ಆಗ ಆಕೆ ಸಿದ್ದರ ಧ್ಯಾನದಲ್ಲಿ ಅಲ್ಲೇ ಕುಳಿತಳು. ಕೊನೆಗೆ ಪ್ರತ್ಯಕ್ಷರಾದ ಅವರು ಎಲ್ಲ ರೀತಿಯ ಯಂತ್ರ ಮಂತ್ರ ರಸವಿದ್ಯೆಗಳನ್ನು ಹೇಳಿಕೊಟ್ಟರಂತೆ. ಎಲ್ಲಮ್ಮನಿಗೆ ಪರಮಪವಿತ್ರವಾದ ಶಿವಪಂಚಾಕ್ಷರಿ ಮಂತ್ರವನ್ನೂ ಉಪದೇಶಿಸಿದರಂತೆ. ಗುರುವಾಜ್ಞೆಯಂತೆ ಎಲ್ಲಮ್ಮ ಅಲ್ಲಿಯೇ ನೆಲೆಸಿ ತಪವನ್ನಾಚರಿಸಿ, ಭಕ್ತರ ಅಭಿಷ್ಠ ಪೂರೈಸಲು ದೇವತೆಯಾಗಿ ಅಲ್ಲಿಯೇ ಪ್ರತಿಷ್ಠಾಪಿತಳಾದಳಂತೆ. ಹಿಂದೆ ಸುಗಂಧವರ್ತಿ, ಸಂವಧವರ್ತಿ, ಸವಧವರ್ತಿ ಎಂದು ಖ್ಯಾತವಾಗಿದ್ದ ಪಟ್ಟಣ 10ರಿಂದ 13ನೇ ಶತಮಾನದಲ್ಲಿ ರಟ್ಟರ ರಾಜಧಾನಿಯಾಗಿತ್ತು. ರಟ್ಟರ ಕಾಲದಲ್ಲಿಯೇ ಇಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಾಲಯ ನಿರ್ಮಿಸಲಾಗಿತ್ತು ಎಂದೂ ಹೇಳಲಾಗುತ್ತದೆ. ಸವದತ್ತಿಯಲ್ಲಿ ಅಂಕುರೇಶ್ವರ, ಪುರಂದರೇಶ್ವರ, ಶಂಕರಲಿಂಗ ದೇವ ಮುಂತಾದ ಹಳೆಯ ದೇವಾಲಯಗಳೂ ಇವೆ. ಒಂದು ಜೈನ ಬಸದಿಯೂ ಇದೆ. ಸವದತ್ತಿಯ ಉತ್ತರಕ್ಕೆ 11 ಕಿಮೀ ದೂರದಲ್ಲಿರುವ ಮನೋಳಿಯ ಮಲಪ್ರಭಾ ದಂಡೆಯ ಮೇಲೆ ಸುಂದರವಾದ ಪಂಚಲಿಂಗದೇವರ ಮಂದಿರಗಳಿವೆ. ಹತ್ತಿರದ ಮುರಗೋಡಿನಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ಹಿಂದೆ ಪರಸ್ಗಡ ತಾಲೂಕು ವ್ಯಾಪ್ತಿಯಲ್ಲಿದ್ದ ಈ ಕ್ಷೇತ್ರ, ಈಗ ಸ್ವತಃ ಸವದತ್ತಿ ತಾಲೂಕೇ ಆಗಿದೆ, ಬೆಳಗಾವಿಯಿಂದ 78 ಹಾಗೂ ಧಾರವಾಡದಿಂದ 37 ಕಿಲೋ ಮೀಟರ್ ದೂರದಲ್ಲಿರುವ ಸವದತ್ತಿಗೆ ಹೋಗಲು ಬೆಂಗಳೂರು, ಧಾರವಾಡ, ಬೆಳಗಾವಿಗಳಿಂದ ನೇರ ಬಸ್ ಸೌಲಭ್ಯವಿದೆ ಟಿ,ಎಂ. ಸತೀಶ್ #ಶ್ರೀ ರೇಣುಕಾ ಯಲ್ಲಮ್ಮ, ಯಲ್ಲಮ್ಮಗುಡ್ಡ, ಸವದತ್ತಿ #🙏🙏 ಶ್ರೀ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ🙏🙏 #ಶ್ರೀ ರೇಣುಕಾ ದೇವಿ ಸವದತ್ತಿ 🙏 #ಸವದತ್ತಿ ಯಲ್ಲಮ್ಮ
ಕರುನಾಡುನಮ್ಮ ಬಂಗಾರದ ಬೀಡು - ಸವದತ್ತಿ ರೇಣುಕಾ ಎಲ್ಲಮ್ಮ ದೇವಾಲಯ ಸವದತ್ತಿ ರೇಣುಕಾ ಎಲ್ಲಮ್ಮ ದೇವಾಲಯ - ShareChat