#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ
ಒಮ್ಮೆ ಸರ್ವ ಲೋಕ ಹಿತವನ್ನು ಬಯಸುವ ಋಷಿಗಳು ಆಚಾರ್ಯಾದಿ ತಪಸ್ವಿಗಳು ಷಣ್ಮುಖಸ್ವಾಮಿಯ ಬಳಿಗೆ ಹೋಗಿ ಹೇ...! ಭಗವಾನ್ ಕುಮಾರಸ್ವಾಮಿಯೇ ಈ ಭೂಲೋಕ ವಾಸಿಗಳಾದ ಸಮಸ್ತ ಜನರಿಗೆ ಬಂದೊದಗುವ ದಾರಿದ್ರ್ಯ ರೋಗ ಮತ್ತು ಸಂಕಷ್ಟಗಳಿಂದ ಅವರನ್ನು ಕಾಪಾಡಿ ಅವರ ಸಂಕಷ್ಟಗಳನ್ನು ಪರಿಹರಿಸುವ ಒಂದು ಮಹೋನ್ನತವಾದ ವ್ರತಶ್ರೇಷ್ಠವನ್ನು ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿಕೊಳ್ಳಲು,
ಶ್ರೀ ಶರವಣಭವರು ಋಷಿಗಳಿಗೆ ಪರಿಹಾರ ಸೂಚಕವೆಂಬಂತೆ ಹೀಗೆನ್ನುತ್ತಾರೆ...
" ಎಲೈ ಋಷಿಗಳಿರಾ ! ಸಾವಧಾನ ಚಿತ್ತರಾಗಿ ಶುದ್ದಮನಸ್ಸಿನಿಂದ ಕೇಳಿರಿ . ಆರ್ತರಾದ ಮನುಷ್ಯರಿಗೆ ಸೌಭಾಗ್ಯ ಮತ್ತು ಸಿದ್ದಿದಾಯಕವಾದ ಒಂದು ಮಹಾಪುಣ್ಯಕರವಾದ ಶ್ರೇಷ್ಠ ವ್ರತವನ್ನು ನಿಮಗೆ ತಿಳಿಸುವೆನು.
ಇದನ್ನು ಆದಿಯಲ್ಲಿ ಶ್ರೀ ಕೃಷ್ಣನು ಧರ್ಮರಾಯನಿಗೆ ಹೇಳಿದ್ದನು. ಅದರಂತೆ ಆಚರಿಸಲು ಧರ್ಮರಾಯನು ಸಕಲ ಸಂಕಷ್ಟಗಳಿಂದ ವಿಮುಕ್ತನಾದನು.
ಈಗ ಅದನ್ನೇ ನಿಮಗೂ ವಿವರಿಸುವೆನು ಕೇಳುವಂತರಾಗಿ...
ಒಂದು ದಿನ ಧರ್ಮರಾಯನು ಶ್ರೀ ಕೃಷ್ಣನನ್ನು ಕುರಿತು ಎಲೈ...! ರುಕ್ಮಿಣೀಶನೇ ನಮ್ಮ ಸಂಕಷ್ಟವು ಪರಿಹಾರವಾಗುವ ಬಗೆಯನ್ನು ತಿಳಿಸಬೇಕೆಂದು ಪ್ರಾಂಜಲೀಯವಾಗಿ ಪ್ರಾರ್ಥಿಸಿಕೊಳ್ಳಲು ; ಶ್ರೀ ಕೃಷ್ಣನು ಎಲೈ ಧರ್ಮರಾಯ ಯುಧಿಷ್ಠಿರನೇ..! ಮನುಷ್ಯನ ಸಕಲ ಸಂಕಷ್ಟಗಳನ್ನು ಪರಿಹರಿಸುವ ಶ್ರೀ ಸಂಕಷ್ಟಹರ ಮಹಾಗಣಪತಿ ವ್ರತವೆಂಬ ಒಂದು ಮಹೋನ್ನತವಾದ ವ್ರತರತ್ನವಿದೆ. ಅದನ್ನು ನಿನಗೆ ವಿವರಿಸುವೆನು ಸಾವಧಾನ ಚಿತ್ತನಾಗಿ ಕೇಳು...
ಹಿಂದೆ ಕೃತಯುಗದಲ್ಲಿ ಹಿಮಾಚಲ ಸುತೆಯಾದ ಗೌರಿದೇವಿಯು ಈಶ್ವರನ ಮನವೊಲಿಸಲು ಘೋರ ತಪಸ್ಸನ್ನು ಆಚರಿಸಿದಳು .ಆಗ ವಿಘ್ನೇಶ್ವರನನ್ನು ಸ್ಮರಿಸಲಾಗಿ , ಪ್ರತ್ಯಕ್ಷನಾದ ಗಣನಾಥನು ಹೀಗೆಂದನು...
" ಎಲೈ ಸರ್ವಮಂಗಳೆಯೇ..! ನೀನು ಸಂಕಷ್ಟಹರ ಗಣೇಶ್ವರ ವ್ರತವನ್ನು ಮಾಡುವುದರಿಂದ ನಿನ್ನ ಕಾರ್ಯಸಿದ್ದಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ , ಈ ವ್ರತವನ್ನು ಶ್ರಾವಣಮಾಸ ಕೃಷ್ಣಪಕ್ಷ ಚತುರ್ಥಿಯಂದು ಆಚರಿಸಿ ಚಂದ್ರೋದಯದ ನಂತರ ಆರ್ಘ್ಯಪ್ರಧಾನ ಮಾಡಬೇಕು...
ವ್ರತವನ್ನು ಮಾಡಬಯಸುವವರು ಆದಿನ ಅರುಣೋದಯ ಕಾಲದಲ್ಲಿಯೇ ( ಸೂರ್ಯೋದಯಕ್ಕು ಮುಂಚೆ ) ಎದ್ದು ಶೌಚ ಕರ್ಮವನ್ನು ಮುಗಿಸಿಕೊಂಡು ನದೀತೀರಕ್ಕೆ ಹೋಗಿ ಅಲ್ಲಿ ಶುದ್ದವಾಗಿ , ಹೊಟ್ಟು ತೆಗೆದ ಬಿಳಿ ಎಳ್ಳಿನಿಂದ ಮೈಗೆ ಉಜ್ಜಿಕೊಂಡು ಸ್ನಾನವನ್ನು ನಿತ್ಯ ಅನುಷ್ಠಾನಗಳನ್ನು ಮುಗಿಸಿಕೊಳ್ಳಬೇಕು. ಸಾಯಂಕಾಲದವರೆಗೂ ಉಪವಾಸವಿದ್ದು ವಿನಾಯಕ ವ್ರತವನ್ನು ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡಬೇಕು .ಪ್ರದೋಷ ಕಾಲದಲ್ಲಿ ಪುನಃ ಸ್ನಾನಗೈದು ಶುಚಿಯಾದ ಸ್ಥಳದಲ್ಲಿ ಅಷ್ಟದಳ ಪದ್ಮವನ್ನು ಬರೆದು ಅದನ್ನು ಗಂಧಾದಿಗಳಿಂದ ಅಲಂಕರಿಸಿ ಅಲ್ಲಿ ತ್ರಿನೇತ್ರನೂ ಚತುರ್ಭುಜನೂ ರಕ್ತವರ್ಣನೂ , ಲಂಬೋದರನೂ ನಾನಾ ವರ್ಣ ಸಮಾಯುಕ್ತನೂ ಪ್ರಸನ್ನಾಸ್ಯನೂ ಆದ ಸಂಕಷ್ಟಹರ ಗಣೇಶ್ವರನನ್ನು ಸ್ಥಾಪಿಸಿ ಪ್ರಾನಪ್ರತಿಷ್ಠೆಗೈದು ಕಲ್ಪೋಕ್ತ ವಿಧಾನದಿಂದ ಪೂಜಿಸಬೇಕು . ಎಳ್ಳಿನ ಕಡುಬು ( ಮೋದಕ) ಮಾಡಿ ಐದನ್ನು ದೇವರಿಗೆ ನಿವೇದಿಸಿ ,ಐದನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು ,ದೇವರಿಗೆ ನೈವೇದ್ಯ ಅರ್ಪಿಸಿದನ್ನು ತಾನು ಸೇವಿಸಿ ಆ ರಾತ್ರಿ ಜಾಗರಣೆ ಮಾಡಬೇಕು. ಚಂದ್ರೋದಯವಾಗಲು ಚಂದ್ರನಿಗೆ ಕಲ್ಪೋಕ್ತ ಮಂತ್ರದಿಂದ ಅರ್ಘ್ಯಪ್ರದಾನ ಮಾಡಬೇಕು.
ಸಮಸ್ತ ಪ್ರತಿಮ ಕಲಶವನ್ನು ದಕ್ಷಿಣಾಸಹಿತವಾಗಿ ಆಚಾರ್ಯರಿಗಿತ್ತು ಶ್ರೀ ಸಂಕಷ್ಟಹರ ಗಣೇಶನನ್ನು ವಿಸರ್ಜಿಸಬೇಕು. ಈ ರೀತಿಯಾಗಿ ಶ್ರಾವಣ ಚತುರ್ಥಿಯಲ್ಲಿ ಈ ವ್ರತವನ್ನು ಮಾಡಿದರೆ ನಾನು ಪ್ರಸನ್ನನಾಗಿ ಅವರ ಇಷ್ಟಾರ್ಥಗಳನ್ನು ಕರುಣಿಸುವೆನು ಎಂದು ಆರಾಧಿಸಲ್ಪಟ್ಟ ಪಾರ್ವತಿದೇವಿಗೆ ಅವಳ ಸಂಕಷ್ಟ ಪರಿಹಾರಕ್ಕಾಗಿ ಗಣೇಶನು ಈ ವ್ರತವನ್ನು ಮೊದಲು ಉಪದೇಶಿಸಿದನು. ಪಾರ್ವತಿ ದೇವಿಯು ಯಥೋಕ್ತ ವ್ರತಾಚರಣೆ ಮಾಡಿ ಮಹಾದೇವನನ್ನು ವರಿಸಿದಳು. ಆದರಿಂದ ಎಲೈ ಧರ್ಮರಾಜನೇ ನೀನು ಸಂಕಷ್ಟಹರ ಗಣಪತಿ ವ್ರತವನ್ನು ಭಕ್ತಿಯಿಂದ ಆಚರಿಸಿ ಕೃತಾರ್ಥನಾಗು ಇದಕ್ಕೆ ಸಂಕಷ್ಟಹರ ಚತುರ್ಥಿ ವ್ರತವೆಂಬ ನಾಮವೂ ಇದೆ.
ಇದನ್ನು ಭಕ್ತಿಯಿಂದ ಆಚರಿಸಿದಲ್ಲಿ ಜನರ ಈ ಲೋಕದಲ್ಲಿಯೇ ಧರ್ಮಾರ್ಥಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನಿಸ್ಸಂಶವಾಗಿ ಪಡೆಯುವರು. ಶ್ರಾವಣ ಕೃಷ್ಣ ಚತುರ್ಥಿಯಲ್ಲಿ ಒಂದು ವೇಳೆ ಮಾಡಲಾಗದಿದ್ದರೆ ಬೇರೆ ಯಾವುದಾದರೂ ಕೃಷ್ಣ ಚತುರ್ಥಿಯಯಲ್ಲಾದರೂ ಭಕ್ತಿಯಿಂದ ವ್ರತಾಚರಣೆ ಮಾಡಿದ್ದಲ್ಲಿ ಅವರ ವ್ರತ ಮಹಿಮೆಯಿಂದ ಸರ್ವಾರ್ಥ ಸಾಧನವನ್ನು ಪಡೆಯುವರು.
ವಿಧ್ಯಾರ್ಥಿಗಳಿಗೆ ವಿದ್ಯೆಯೂ ,ಧನಾರ್ಥಿಗಳಿಗೆ ಧನವೂ, ಪುತ್ರಾರ್ಥಿಗಳಿಗೆ ಸಂತಾನವೂ ಹೆಚ್ಚೇಕೆ ಮೊಕ್ಷಾರ್ಥಿಗಳಿಗೆ ಮೋಕ್ಷವು ಈ ವ್ರತಾಚರಣೆಯಿಂದ ದೊರಕುವುದು ಈ ವ್ರತವನ್ನು ಕೇಳಿ ತಿಳಿದವರು ಮತ್ತು ಇದನ್ನು ಜನರಿಗೆ ಓದಿ ತಿಳಿಸುವರು ಸಹ ಈ ಲೋಕದ ಸುಖವನ್ನೆಲ್ಲಾ ಸಂಪೂರ್ಣವಾಗಿ ಅನುಭವಿಸಿ ಪರಲೋಕದಲ್ಲಿ ಗಣಸತ್ಯ ಸ್ಥಾನವನ್ನು ಪಡೆಯುವರು ಎಂಬಲ್ಲಿಗೆ ಸಂಕಷ್ಟಹರ ಗಣೇಶ್ವರನ ವ್ರತದ ಕಥೆಯ ಮೊದಲ ಭಾಗವು ಸಮಾಪ್ತಿಯಾಯಿತು...
ಮುಂದುವರೆಯುತ್ತದೆ ಶುಭವಾಗಲಿ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏