#📜ಪ್ರಚಲಿತ ವಿದ್ಯಮಾನ📜
ಜಿರಲೆ ಜನತಾ ಪಾರ್ಟಿ ಮುರ್ದಾಬಾದ್
ಅಂಧಭಕ್ತನ ಸ್ವಗತ - 18
ಅದೆಂತಹುದೋ ಕಕ್ರೋಚ್ ಜನತಾ ಪಾರ್ಟಿ ಅಂತೆ, ಪಾಲೋವರ್ಸ್ ನಲ್ಲಿ ನಮ್ಮ ಕೇಸರಿ ಪಕ್ಷವನ್ನ ಹಿಂದೆ ಹಾಕಿದೆಯಂತೆ. ಇದೆಲ್ಲಾ ಮಾಡೋಕೆ ಕೆಲಸಾ ಇಲ್ಲದ ಅಡ್ಡಕಸಬಿ ಜಿರಲೆ ಜಾತಿಯವರು ಮಾಡೋ ದಂದೆ ಅಷ್ಟೇ.
ಈ ದೇಶದಲ್ಲಿ ಸುಪ್ರೀಂ ಅಂದ್ರೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೇ "ಈ ಸೊಂಬೇರಿ ಪರಾವಲಂಬಿ ನಿರುದ್ಯೋಗಿಗಳು ಜಿರಲೆಗಳಿದ್ದಂತೆ, ಅವರು ಮೀಡಿಯಾ, ಸೋಷಿಯಲ್ ಮೀಡಿಯಾ, ಆರ್ಟಿಐ ಗಳ ಮೂಲಕ ನಮ್ಮ ವ್ಯವಸ್ಥೆ ಮೇಲೆ ಆಕ್ರಮಣ ಮಾಡ್ತವೆ" ಅಂತಾ ಹೇಳಿದ ಮೇಲೆ ಮುಗೀತು. ಅದಕ್ಕೆ ಅಪೀಲೇ ಇಲ್ಲ. ಸುಪ್ರೀಂ ಜಜ್ ಹೇಳಿದ ತಕ್ಷಣ ಈ ನಿರುದ್ಯೋಗಿ ಜಿರಲೆಗಳು ಸೇರಿ ಒಂದು ಸೋಷಿಯಲ್ ಮೀಡಿಯಾ ಪಕ್ಷ ಮಾಡಿದ್ದಾವಂತೆ. ಅದಕ್ಕೆ *ಕಕ್ರೋಚ್ ಜನತಾ ಪಾರ್ಟಿ" ಅಂತಾ ಹೆಸರಿಟ್ಟಿದ್ದಾವಂತೆ. ಅದಕ್ಕೆ ದೇಶದ ನಿರುದ್ಯೋಗಿ ಸೋಮಾರಿಗಳೆಲ್ಲಾ ಮುಗಿಬಿದ್ದು ಐದೇ ದಿನದಲ್ಲಿ ಹದಿನೈದು ಮಿಲಿಯನ್ ಕಕ್ರೋಚ್ಗಳು ಮೇಂಬರ್ ಆಗಿದ್ದಾವಂತೆ.
ತೊ ಥೋ.. ಈ ಜಿರಲೆಗಳ ತರಲೆ ಪಾರ್ಟಿಗೆ ಪ್ರಣಾಳಿಕೆ ಬೇರೆ ಇದೆಯಂತೆ. ಅವುಗಳ ಡಿಮ್ಯಾಂಡ್ ನೋಡಿದರೆ ನಗರ ನಕ್ಸಲ್ ಜಿರಲೆಗಳ ಬೇಡಿಕೆ ಇದ್ದಂತೆ ಇವೆ.
1. ನಿವೃತ್ತಿ ನಂತರ ನ್ಯಾಯಮೂರ್ತಿಗಳಿಗೆ ರಾಜ್ಯಸಭಾ ಸ್ಥಾನ ಕೊಡಕೂಡದು ಅಂತೆ. ಯಾಕೆ ಕೊಡಬಾರದು? ಗುಟ್ಟಾಗಿ ನಮ್ಮ ವಿಶ್ವಗುರುಗಳ ಆದೇಶ ಪಾಲಿಸಿದ ಅದೆಷ್ಟೋ ಜಜ್ ಗಳಿಗೆ ಏನಾದರೂ ಕೊಡುಗೆ ಕೊಡೋದು ಬೇಡ್ವಾ? ಅಷ್ಟೊಂದು ಥ್ಯಾಂಕ್ಲೆಸ್ ಅಲ್ಲಾ ನಮ್ಮ ಚೌಕೀದಾರರು. ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡೇ ಮಾಡ್ತಾರೆ. ಅದೇ ನಂಬಿಕೆ ಮೇಲೆ ಕೆಲವು ಯುವರ್ ಆನರ್ ಗಳು ಕೇಸರಿ ಪಕ್ಷದ ಕಡೆ ವಾಲ್ತಾರಪ್ಪಾ, ಆದೇಶಗಳನ್ನೂ ವಾಲಸ್ತಾರಪ್ಪಾ, ಇದರಾಗೇನು ಈ ಕಕ್ರೋಚ್ಗಳ ಅಪಸ್ವರ.
2. SIR ಹೆಸರಲ್ಲಿ ಒಂದೇ ಒಂದು ಅರ್ಹ ಮತದಾರರ ಹೆಸರನ್ನು ಅಳಿಸಿದರೂ ಮುಖ್ಯ ಚುನಾವಣಾ ಅಧಿಕಾರಿಯನ್ನೇ ಉಗ್ರ ಕಾನೂನಿನಡಿ ಬಂಧಿಸಲಾಗುವುದಂತೆ. ಇದೆಲ್ಲಾ ಈ ದೇಶದಲ್ಲಿ ಸಾಧ್ಯಾನಾ? ಅದೂ ವಿಶ್ವಗುರುಗಳು ಪ್ರಧಾನಿಯಾಗಿದ್ದಾಗ. ಕಾನೂನೇ ಪ್ರಧಾನಿಗಳ ಮುಂದೆ ತಲೆಬಾಗಿ ತೆವಳುತ್ತಿರುವಾಗ ಈ ಕಠಿಣ ಕಾನೂನಿನಲ್ಲಿ ಬಂಧಿಸ್ತಾರಂತೆ, ಅದೂ ಕೇಸರಿ ಪಕ್ಷದ ಗೆಲುವಿಗೆ ಲಕ್ಷಾಂತರ ಮತದಾರರನ್ನ ಪಟ್ಟಿಯಿಂದ ಗೆಟೌಟ್ ಮಾಡಿದ್ದಕ್ಕೆ. ಎಲ್ಲಿಂದ ನಗಬೇಕೋ ಗೊತ್ತಾಗುತ್ತಿಲ್ಲ. ಸಿಜೆ ಯವರು ಹೇಳಿದಂತೆ ಈ ಜಿರಲೆಗಳು ನಮ್ಮ ಚೌಕೀದಾರರ ಚುನಾವಣಾ ವ್ಯವಸ್ಥೆಯ ಮೇಲೆ ಅಟ್ಯಾಕ್ ಮಾಡ್ತಾ ಇದ್ದಾವೆ. ಇದನ್ನ ಸಹಿಸೋಕೆ ಸಾಧ್ಯವೇ ಇಲ್ಲಾ. ಚುನಾವಣೆ ಗೆಲ್ಲುವ ಅಸ್ತ್ರವನ್ನೇ ನಿಶ್ಯಸ್ತ್ರ ಮಾಡಿದರೆ ಸುಮ್ಮನಿರಲು ಆಗೋದಿಲ್ಲ. ಈ ಕಕ್ರೋಚಗಳಿಗೊಂದು ಗತಿ ಕಾಣಿಸಲೇಬೇಕು.
3. ಮಹಿಳೆಯರಿಗೆ ಸಂಸತ್ತಿನಲ್ಲಷ್ಟೇ ಅಲ್ಲಾ ಸಚಿವ ಸಂಪುಟದಲ್ಲೂ 50 ℅ ಮೀಸಲಾತಿ ಕೊಡಬೇಕಂತೆ. ಅಲ್ರಯ್ಯಾ ಜಿರಲೆಗಳಾ ಹೆಣ್ಮಕ್ಕಳಿಗೆ ಎಲ್ಲಾ ಮೀಸಲಾತಿ ಕೊಟ್ರೆ ಗಂಡಸರೇನು ಮಾಡಬೇಕು? ನಮ್ಮದು ಪಿತೃಪ್ರಧಾನ ದೇಶ. ಮಹಿಳೆಯರಿಗೆ ಅಧಿಕಾರ ಕೊಟ್ರೆ ಗಂಡಸರ ಗತಿ ಅಷ್ಟೇ ಗೋವಿಂದ. ಇದು ಪುರುಷ ವಿರೋಧಿಯಾಗಿದ್ದರಿಂದ ಜಿರಲೆಗಳ ಈ ಡಿಮಾಂಡನ್ನಂತೂ ಯಾವ ಪಕ್ಷದವರೂ ಒಪ್ಪಲು ಸಾಧ್ಯವೇ ಇಲ್ಲ. "ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ" ಎನ್ನುವ ಸನಾತನ ಪಾರ್ಟಿಯವರಂತೂ ಒಪ್ಪಿಕೊಳ್ಳುವ ಚಾನ್ಸೇ ಇಲ್ಲ.
4. ಅಂಬಾನಿ ಆದಾನಿಗಳ ಮಾಲೀಕತ್ವದ ಟಿವಿ ಮಾಧ್ಯಮಗಳನ್ನ ಬ್ಯಾನ್ ಮಾಡ್ತಾರಂತೆ ಹಾಗೂ ಗೋದಿ ಮಾಧ್ಯಮಗಳ ಲೆಕ್ಕಪತ್ರ ಆಡಿಟ್ ಮಾಡಿಸ್ತಾರಂತೆ, ಇದಂತೂ ಖಂಡಿತಾ ಸಾಧ್ಯವಿಲ್ಲ. ಈ ಮಾರಿಕೊಂಡ ಮಾಧ್ಯಮಗಳಿಂದಲೇ ಸಂಘಿ ಜೀವಿಗಳು, ಕೇಸರಿ ಪಕ್ಷದವರು ಹಾಗೂ ವಿಶ್ವಗುರುಗಳು ಉಸಿರಾಡಿಸ್ತಾ ಇರೋದು. ಆ ಉಸಿರನ್ನೇ ನಿಲ್ಲಿಸಲು ಈ ಕಕ್ರೋಚ್ಗಳು ಶಡ್ಯಂತ್ರ ಮಾಡ್ತಿವೆ. ಈಗ ನಮ್ಮ ಹೆಮ್ಮೆಯ ಮಡಿಲ ಮಾಧ್ಯಮಗಳೆಲ್ಲಾ ಕಂಡಕಂಡಲ್ಲಿ ಜಿರಲೆಗಳ ಮೇಲೆ ಹಿಟ್ ರಾಸಾಯನಿಕ ಪ್ರಯೋಗ ಮಾಡ್ತಾವೆ ನೋಡ್ತಾ ಇರಿ. ಗೋದಿ ಮಾಧ್ಯಮಗಳನ್ನ ಎದುರು ಹಾಕಿಕೊಂಡು ಯಾರಾದರೂ ಮಾನವಂತರಾಗಿ ಇರೋಕೆ ಸಾಧ್ಯವಾ?
5. ಕೊನೆಯದಾಗಿ ಪಕ್ಷಾಂತರ ಮಾಡುವವರಿಗೆ 20 ವರ್ಷ ಚುನಾವಣೆ ಸ್ಪರ್ದೆಯಿಂದಲೇ ನಿಷೇದವಂತೆ. ಇದಂತೂ ನಮ್ಮ ಪಕ್ಷಾಂತರ ವ್ಯವಸ್ಥೆ ಮೇಲೆ ಈ ಜಿರಲೆಗಳು ಮಾಡುವ ಮಾಸ್ಟರ್ ಸ್ಟ್ರೋಕ್ ಆಗಿದೆ. ಅಲ್ರೀ ಹಿಂಗಾದ್ರ ನಮ್ಮ ವಿಶ್ವಗುರುಗಳ ವಾಷಿಂಗ್ ಮೆಶಿನ್ ಗತಿ ಏನು? ಇಡಿ ಐಟಿ ಸಿಬಿಐಗಳ ಮೂಲಕ ಹೆದರಿಸಿ ವಿರೋಧ ಪಕ್ಷದ ಪ್ರಮುಖರನ್ನ ಪಕ್ಷಾಂತರ ಮಾಡಿಸಿ ದೇಶಾದ್ಯಂತ ಕೇಸರಿ ಬಾವುಟ ಹಾರಿಸಿರುವ ನಮ್ಮ ಚೌಕೀದಾರ ಹಾಗೂ ಚಾಣಕ್ಯರ ಮಾಸ್ಟರ್ ಸ್ಟ್ರೋಕ್ ಕುತಂತ್ರಕ್ಕೆ ವಿರುದ್ಧವಾಗಿ ಜಿರಲೆಗಳ ಮಾಸ್ಟರ್ ಸ್ಟ್ರೊಕಾ? ನೋ ಚಾನ್ಸ್. ಇಂತಹ ಸಾವಿರಾರು ಕೋಟಿ ಜೆನ್ ಜಿ ಕಕ್ರೋಚ್ಗಳು ನೂರು ಜನ್ಮ ಎತ್ತಿ ಬಂದ್ರೂ ನೋ ಚಾನ್ಸ್.
ಅಲ್ರಯ್ಯಾ ಜಿರಲೆ ಪಾರ್ಟಿಯ ತರಲೆಗಳಾ, ನಿಮ್ಮ ಯಕಶ್ಚಿತ್ ಪಾರ್ಟಿ ಪ್ರಣಾಳಿಕೆಯ ಐದೂ ಅಂಶಗಳ ಮೇಲೆ ನಮ್ಮ ವಿಶ್ವಗುರುಗಳ ಸರಕಾರ ನಿಂತಿರೋದು. ಅವು ನಮ್ಮ ಮಹಾಮಾನವರ ಪ್ರಭಲವಾದ ಅಸ್ತ್ರಗಳು. ಅವುಗಳನ್ನೇ ಕಿತ್ತು ಕೇಸರಿ ಪಕ್ಷಕ್ಕೆ ಕುತ್ತು ತರಲು ನೋಡ್ತೀರಲ್ಲಾ ನಿಮಗೆಷ್ಟು ಧೈರ್ಯ ಇರಬೇಕು? ಇದು ಖಂಡಿತಾ ವ್ಯವಸ್ಥೆಯನ್ನು ಬುಡಮೇಲು ಮಾಡುವ ಶಡ್ಯಂತ್ರ. ಉಗ್ರ ನಿಗ್ರಹ ಕಾಯ್ದೆಯಡಿ ಕಕ್ರೋಚ್ ಪಾರ್ಟಿಯ ಎಲ್ಲಾ ಜಿರಲೆಗಳನ್ನ ಬಂಧಿಸಿ ಬೇಲ್ ಕೊಡದೇ ಜೈಲಿಗೆ ಹಾಕಲಾಗುತ್ತದೆ ಹುಷಾರ್.
ನಮ್ಮ ಕೇಸರಿ ಐಟಿ ಸೆಲ್ ಇದೆ. ಗೋದಿ ಮೀಡಿಯಾ ಇದೆ. ಅಂಧಭಕ್ತರ ದೊಡ್ಡ ಪಡೆಯೇ ಇದೆ, ಈ ಕಕ್ರೋಚ್ಗಳ ಪ್ರಚಾರಕ್ಕೆ ಅಪಪ್ರಚಾರ ಹೇಗೆ ಮಾಡಬೇಕು ಅಂತಾನೂ ಗೊತ್ತಿದೆ. ಕೋಮು ದ್ವೇಷ ಹೇಗೆ ಬಿತ್ತಬೇಕು ಅನ್ನೋದು ನಮ್ಮ ಎಕ್ಸಪರ್ಟಗಳಿಗೆ ತಿಳಿದಿದೆ. ಈಗಾಗಲೇ ಈ ಕಕ್ರೋಚ್ ಪಾರ್ಟಿಗೆ 49% ಪಾಕಿಸ್ತಾನಿಗಳು, 14% ಯುಎಇ ಮುಸ್ಲಿಮರು ಮೇಂಬರ್ ಆಗಿದ್ದಾರೆ ಅಂತಾ ಗ್ರಾಪ್ ಕ್ರಿಯೇಟ್ ಮಾಡಿ ಹರಿಬಿಡಲಾಗಿದೆ. ಅದನ್ನ ಸಜ್ಜನ ರಾಜಕಾರಣಿ ನಾಮಾಂಕಿತ ಸುರೇಶಕುಮಾರ್ ರವರೇ ಹಂಚಿಕೊಂಡಿದ್ದಾರೆ. ಈ ಕಕ್ರೋಚ್ ಪಾರ್ಟಿ ಹಿಂದೆ ದೇಶದ್ರೋಹಿ ಮುಸಲ್ಮಾನರಿದ್ದಾರೆ ಅಂತಾ ನಂಬಿಸಿದ್ರೆ ಸಾಕು, ನಮ್ಮ ಹಿಂದೂಗಳು ಒಂದಾಗಿ ಜಿರಲೆಗಳ ಮೇಲೆ ಹಿಟ್ ಪ್ರಯೋಗ ಮಾಡ್ತಾರೆ. ಆಪ್ ಪಾರ್ಟಿ ಹುನ್ನಾರ ಅಂತಾ ಅಪಪ್ರಚಾರ ಮಾಡಲಾಗ್ತಿದೆ. ಈಗಾಗಲೇ ಈ ಜಿರಲೆ ಪಾರ್ಟಿಯ ಎಕ್ಸ್ ಖಾತೆ ಬಂದ್ ಮಾಡಿಸಲಾಗಿದೆ. ಇನ್ನು ಈ ಪಾರ್ಟಿಯ ಫೆಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಮುಂತಾದ ಸೋಷಿಯಲ್ ಮೀಡಿಯಾಗಳ ಅಕೌಂಟಗಳನ್ನೆಲ್ಲಾ ಹೊಲ್ಸೇಲಾಗಿ ಸಸ್ಪೆಂಡ್ ಮಾಡಿಸಲಾಗುತ್ತೆ. ಆಗ ಈ ಜಿರಲೆಗಳು ಹೆಂಗೆ ಸಿಸ್ಟಂ ಮೇಲೆ ಆಕ್ರಮಣ ಮಾಡ್ತಾವೋ ನೋಡೋಣ.
ಇದು ದೇವಮಾನವನ ಕೋಟೆ ಕಣ್ರಯ್ಯಾ ಕಕ್ರೋಚ್ಗಳಾ. ಇಲ್ಲಿ ನಿಮ್ಮ ಆಟ ನಡೆಯೋದಿಲ್ಲಾ. ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನು ಆಪೋಷಣ ಪಡೆದು ಉತ್ತರ ಭಾರತವನ್ನು ಗೆದ್ದು, ದಕ್ಷಿಣ ಭಾರತವನ್ನು ಆಕ್ರಮಿಸುವತ್ತ ಹೊರಟಿರುವ ವಿಶ್ವಗುರುಗಳ ಅಶ್ವಮೇಧದ ಕುದುರೆಯನ್ನು ಈ ಯಕಶ್ಚಿತ್ ಜಿರಲೆಗಳು ಕಟ್ಟಿ ಹಾಕಲು ಸಾಧ್ಯವಾ? ಚಾನ್ಸೇ ಇಲ್ಲಾ. ಇದಕ್ಕೆ ನಾವು ಅಖಿಲ ಭಾರತ ಅಂಧಭಕ್ತರು ಅವಕಾಶ ಕೊಡುವುದೇ ಇಲ್ಲ. ಈಗಾಗಲೇ ನಾವು ಜೆನ್ ಜೀ ಜಿರಲೆಗಳ ವಿರುದ್ಧ ಟ್ರೋಲಾಸ್ತ್ರ ಹೂಡಲು ಶುರು ಮಾಡಿದ್ದೇವೆ. ಬೈಗುಳಾಸ್ತ್ರ ಹೂಡುವುದು ಬಾಕಿ ಇದೆ.
ಕಕ್ರೋಚ್ ಜನತಾ ಪಾರ್ಟಿ ಮುರ್ದಾಬಾದ್
ವಿಶ್ವಗುರುಗಳ ಕೇಸರಿ ಪಾರ್ಟಿ ಜಿಂದಾಬಾದ್.
- ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ
#CackrochJanataParty #Murdabad #CJP #ShashikanthYadalli #malgudiexpress #malgudinews #news #TopNews