#📜ಪ್ರಚಲಿತ ವಿದ್ಯಮಾನ📜
ಮೋದಿ ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸತ್ಯವನ್ನು ಎದುರಿಸಲಾಗದ ಹೇಡಿತನ: ಸಿದ್ದರಾಮಯ್ಯ
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ Narendra Modi ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್ಗೆ ತೋರಿಸಿರುವ ಅಗೌರವ ಮಾತ್ರವಲ್ಲ, ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ.
ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರ ಉತ್ತರ ಇಲ್ಲದೆ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಓರ್ವ ಪ್ರಧಾನಿ ಸಂಸತ್ತನ್ನು ನಿರ್ಲಕ್ಷಿಸುವುದೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಡೆ ಎಂದರ್ಥ.
ಅಧಿಕಾರರೂಢ Bharatiya Janata Party (BJP) ಪಕ್ಷ ಮೊದಲು ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದೆ ತಡೆಯಿತು, ನಂತರ ತಾನೂ ಕೂಡಾ ಮಾತನಾಡದೆ ಮೌನಕ್ಕೆ ಶರಣಾಯಿತು. ಇದು ಬಹಳ ಆತಂಕಕಾರಿ ಬೆಳವಣಿಗೆ. ಲೋಕಸಭೆ ವಿಪಕ್ಷ ನಾಯಕ Rahul Gandhi ಅವರು ತಮ್ಮ ವಂದನಾ ನಿರ್ಣಯದ ಭಾಷಣದಲ್ಲಿ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರ ಪುಸ್ತಕದಲ್ಲಿದ್ದ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾದಾಗ ಅವರ ಮಾತನ್ನು ಸಂಪೂರ್ಣವಾಗಿ ತಡೆಯಲಾಯಿತು.
ಆ ಪುಸ್ತಕದಲ್ಲಿ 2020ರ ಚೀನಾ ಗಡಿ ಸಂಘರ್ಷದ ಸಂದರ್ಭ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಮುಖ್ಯಸ್ಥರಿಗೆ ಕೇವಲ ”ಜೋ ಉಚಿತ್ ಸಮಝೋ, ವೋಹ್ ಕರೋ" (ನಿಮಗೆ ಯೋಗ್ಯವೆನಿಸಿದ್ದನ್ನು ಮಾಡಿ) ಎಂದು ಹೇಳಿದ್ದಾಗಿ ದಾಖಲಾಗಿದೆ. ಇದು ಪ್ರಧಾನಿ ಮೋದಿಯವರ ನಾಯಕತ್ವದ ಟೊಳ್ಳುತನವನ್ನು ಜಗಜ್ಜಾಹೀರುಗೊಳಿಸಿರುವುದು ಮಾತ್ರವಲ್ಲ, ಮೋದಿ ತಾನೇ ಕಟ್ಟಿಕೊಂಡಿರುವ 56 ಇಂಚಿನ ಎದೆಯೊಳಗಿನ ಪುಕ್ಕಲುತನವನ್ನು ಬಯಲು ಮಾಡಿದೆ.
ಪ್ರಧಾನಿಯವರ ಈ ಪಲಾಯನವಾದಿ ನಡೆಯು ಸಂಸತ್ತಿನಲ್ಲಿ ಚರ್ಚೆ ಆಗಬಾರದೆಂಬ ಕಾರಣಕ್ಕೆ ರಾಹುಲ್ ಗಾಂಧಿಯವರು ಭಾಷಣ ಮಾಡದಂತೆ ತಡೆಯಲಾಗಿದೆ. ದೇಶದ ಬಹುಸಂಖ್ಯೆಯ ಜನರನ್ನು ಪ್ರತಿನಿಧಿಸುವ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.
ಇಂತಹ ಗಂಭೀರ ಪ್ರಶ್ನೆಗಳನ್ನು ಎದುರಿಸುವ ಬದಲು ಪ್ರಧಾನಿ ಮೋದಿ ಅವರು ಲೋಕಸಭೆಗೆ ಗೈರಾಗಿರುವುದು ನಿಜಕ್ಕೂ ನಾಚಿಕೆಗೇಡು.
ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ಹೆದರಿದ್ದಾರೆ, ಹಾಗಾಗಿ ಅವರು ಸಂಸತ್ತಿಗೆ ಹಾಜರಾಗುವ ಧೈರ್ಯವನ್ನು ಮಾಡುವುದಿಲ್ಲ ಎಂದು ರಾಹುಲ್ ಗಾಂಧಿಯವರು ಮುಂಚಿತವಾಗಿಯೇ ಹೇಳಿದ್ದರು. ಅದರಂತೆ ಮೋದಿ ಅವರು ಲೋಕಸಭೆಯಿಂದ ದೂರ ಉಳಿಯುವ ಮೂಲಕ ತಾನು ಭೀತಿಗೊಂಡಿರುವುದನ್ನು ರುಜು ಮಾಡಿದ್ದಾರೆ. ತನ್ನ ನಿರ್ಧಾರದ ಬಗ್ಗೆ ಆತ್ಮವಿಶ್ವಾಸವಿಲ್ಲದವರು, ಹೀಗೆ ಚರ್ಚೆಯಿಂದ ಯಾವಾಗಲೂ ಹಿಂದೆ ಸರಿಯುವವರು ದೇಶಕ್ಕೆ ಅದ್ಯಾವ ಸಮರ್ಥ ನಾಯಕತ್ವ ನೀಡಲು ಸಾಧ್ಯ?
ಅದೇ ರೀತಿ, ಪ್ರಧಾನಿ ಭಾಷಣಕ್ಕೆ ಅವಕಾಶ ನೀಡದೆ ವಂದನಾ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪಕ್ಷಪಾತದ ನಡವಳಿಕೆಯು ಸಂಸತ್ತಿನ ಘನತೆಗೆ ಗಂಭೀರ ಚ್ಯುತಿಯನ್ನುಂಟು ಮಾಡಿದೆ. ಸ್ಪೀಕರ್ ಲೋಕಸಭೆಯ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕೆ ವಿನಃ ಸರ್ಕಾರದ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಬಾರದು.
ವಿರೋಧ ಪಕ್ಷಗಳ ಬಾಯಿಮುಚ್ಚಿಸಿ, ಪ್ರಧಾನಮಂತ್ರಿಯವರು ಓಡಿ ಹೋದರೆ ಸಂಸತ್ತು ಅರ್ಥಹೀನವಾಗುತ್ತದೆ. ಇದು ಸಂಸತ್ತನ್ನು ದುರ್ಬಲಗೊಳಿಸುವುದು, ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗ ಮಾಡುವುದು ಮತ್ತು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಇಲ್ಲವಾಗಿಸುವುದು ಬಿಜೆಪಿ-ಆರೆಸ್ಸೆಸ್ ನ ಕುತಂತ್ರದ ಭಾಗವಾಗಿದೆ. ವಿರೋಧಿಗಳನ್ನು ಭಯ ಪಡಿಸುವುದರಿಂದ, ಮೌನವಾಗಿಸುವುದರಿಂದ ಮತ್ತು ಪಲಾಯನ ಮಾಡುವುದರಿಂದ ಪ್ರಜಾಪ್ರಭುತ್ವವು ಉಳಿಯುವುದಿಲ್ಲ.
- ಸಿದ್ದರಾಮಯ್ಯ, ಸಿಎಂ
#Modi #evasion #without #answering #cowardice #notfacing #truth #Siddaramaiah #AnswerMadiModi #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬೇಡ ಬಂಜಾರರಿಗೆ ವಿವಿಧ ಸವಲತ್ತುಗಳನ್ನು ಕೋರಿ ಮನವಿ
ಬೆಂಗಳೂರು: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಪದಾಧಿಕಾರಿಗಳಿಂದ ನಗರಸಭೆ ಅಧ್ಯಕ್ಷ ಕೆ ಶೇಷಾದ್ರಿ ಅವರಿಗೆ ಸಂಘದ ಸಲಹೆಗಾರ ಹೆಚ್ ಬಿ ಸಿದ್ಯಾನಾಯ್ಕ, ಕಾರ್ಯಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಡಾ. ಎಂ ಆರ್ ಗೋವಿಂದ ಸ್ವಾಮಿ, ಧನಂಜಯ್ ನಾಯ್ಕ್ ಉಪಾಧ್ಯಕ್ಷ, ಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಶಂಕರ್ ನಾಯ್ಕ್, ಪ್ರಕಾಶ್ ನಾಯ್ಕ್ ಇವರುಗಳು ರಾಮನಗರ ನಗರ ಜಿಲ್ಲೆ ಬೇಡ ಬಂಜಾರರಿಗೆ ವಿವಿಧ ಸವಲತ್ತುಗಳನ್ನು ಕೋರಿ ಮನವಿ ಸಲ್ಲಿಸಿದರು.
ಬೇಡಿಕೆಗಳು
೧. ರಾಮನಗರದ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಪ್ರಧಾನಿಗಳು, ಕೆಂಗಲ್ ಹನುಮಂತಯ್ಯ, ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಥೀಮ್ ಪಾರ್ಕ್ ಮಾಡುವುದು.
೨. ನಗರದಲ್ಲಿ ಬಂಜಾರ ಭವನಕ್ಕೆ ನಿವೇಶನ ಮತ್ತು ಸಾಂಸ್ಕೃತಿಕ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಿವೇಶನ ನೀಡುವುದು.
೩. ಪ್ರತಿ ವರ್ಷ ನಗರದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆಗೆ ಧನ ಸಹಾಯ ಮತ್ತು ಅನುದಾನ ನಿಗದಿ ಮಾಡುವುದು.
೪. ಸಂಘದ ಕಛೇರಿಗೆ ನಿವೇಶನ ಮತ್ತು ತಾತ್ಕಾಲಿಕ ಬಾಡಿಗೆ ಕಟ್ಟಡ ಒದಗಿಸುವುದು
೫. ಬಡ ಬಂಜಾರರಿಗೆ ಉಚಿತ ನಿವೇಶನ ನೀಡುವುದು.
೬. ನಗರದ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು.
೭. ಖಾಸಗಿ ಸಹಭಾಗಿತ್ವದಲ್ಲಿ ನಗರವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದು.
#Appeal #seeking #various #benefits #Banjara #BedaBanjaras #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಬಹುಮಾನ ವಿತರಣೆ
ಮಂಡ್ಯ: ಯಂಗ್ ಚಾಲೆಂಜರ್ಸ್ ಸ್ಪೋರ್ಟ್ & ಕ್ರೀಡಾ ಒಕ್ಕೂಟ, ಕ್ಯಾತನಹಳ್ಳಿ ಮಂಡ್ಯ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯನವರ ಸಾರಥ್ಯದಲ್ಲಿ ಹಸಿರು ನಕ್ಷತ್ರ ಕೆ.ಎಸ್.ಪುಟ್ಟಣ್ಣಯ್ಯ & ಸಮಾಜ ಧನ್ವಂತರಿ ಡಾ.ಕೆ.ವೈ.ಶ್ರೀನಿವಾಸ್ ಅವರ ಹಾಗೂ ಕ್ಯಾತನಹಳ್ಳಿಯ ಹಿರಿಯ ಕ್ರೀಡಾಪಟುಗಳ ಸವಿನೆನಪಿಗಾಗಿ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲಾಮಟ್ಟದ ಕ್ಯಾತನಹಳ್ಳಿ ಕಬಡ್ಡಿ ಹಬ್ಬ ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು 2026ರ ಫೆಬ್ರವರಿ 7 ಶನಿವಾರ, 8 ಭಾನುವಾರ ಆಯೋಜಿಸಲಾಗಿತ್ತು.
ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲಾಮಟ್ಟದ ಕ್ಯಾತನಹಳ್ಳಿ ಕಬಡ್ಡಿ ಹಬ್ಬ ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಕ್ಯಾತನಹಳ್ಳಿಯ ವೈ ಸಿ ಎಸ್ ತಂಡ ಪ್ರಥಮ (75,000 ರೂ.), ಮೇಟಗಳ್ಳಿಯ ಸಂಯುಕ್ತ ತಂಡ ದ್ವಿತೀಯ ಬಹುಮಾನ 40,000 ರೂ.), ನಾಗನಹಳ್ಳಿಯ ಲಕ್ಷ್ಮಿದೇವಿ ತಂಡ ತೃತೀಯ (20,000 ರೂ.) ಹಾಗೂ ಕೆನ್ನಾಳುವಿನ ಕದಂಬ ತಂಡ ನಾಲ್ಕನೇ ಬಹುಮಾನವನ್ನು (15,000 ರೂ.) ಪಡೆದವು. ಪ್ರಶಸ್ತಿ ಪುರಸ್ಕೃತ ತಂಡಗಳಿಗೆ ಪ್ರಶಸ್ತಿ ಮೊತ್ತದ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
#KSPCup #Light #Mat #Kabaddi #Tournament #Prize #Distribution #DarshanPuttannaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಮಾನತೆಯ ಕನಸಿನ ಸಂವಿಧಾನ ಕಥನ: ಲ್ಯಾಂಡ್ ಲಾರ್ಡ್
ಕನಸು ಕಾಣುವುದು ಮನುಷ್ಯನ ಮೂಲಭೂತ ಹಕ್ಕು.ಆ ಕನಸು ಸ್ವತಂತ್ರ. ಅದಕ್ಕೆ ಬೇಲಿಗಳಿಲ್ಲ. ಆ ಕನಸನ್ನು ನನಸು ಮಾಡುವುದಕ್ಕಾಗಿ ಹೋರಾಟದ ಹಾದಿ ಹಿಡಿಯುವುದು, ಬಂಡಾಯದ ಬಾವುಟ ಹಾರಿಸುವುದು ಅನಿವಾರ್ಯ ಎಂಬಂತೆ ಚಿತ್ರಕತೆ ರೂಪುಗೊಂಡಿದೆ. ಈ ಬಂಡಾಯ ಬದುಕಿಗಾಗಿ ಜೀತದಾಳಿನಿಂದ, ಕೂಲಿಕಾರನಿಂದ ಬಿಡುಗಡೆ ಹೊಂದಿ, ಜಮೀನು ಪಡೆದು ವ್ಯವಸಾಯಗಾರನಾಗಿ ಸ್ವತಂತ್ರ ಬದುಕು ನಿರ್ಮಿಸಿಕೊಳ್ಳುವುದಕ್ಕಾಗಿ .ಇಲ್ಲಿನ ಕಥಾನಾಯಕ ರಾಚಯ್ಯ ಪಾಳೆಗಾರಿಕೆ ಮಾಡುವವರ ವಿರುದ್ಧ ತುಂಡು ಭೂಮಿಗಾಗಿ, ಸಮಾನತೆಗಾಗಿ ಹೋರಾಟ ನಡೆಸುವನು. ಮೊಟ್ಟಮೊದಲ ಬಾರಿಗೆ ಸಂವಿಧಾನದ ಸಮಾನತೆಯನ್ನು ಗಟ್ಟಿದನಿಯಾಗಿ ಬಿಂಬಿಸಿದೆ. .ಸಂವಿಧಾನದ ಕುರಿತಾಗಿ ಹೆಚ್ಚು ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಸಿನಿಮಾ ಹೊಸ ಆಲೋಚನೆಗಳನ್ನು ಹೊತ್ತು ತಂದಿದೆ.
ಈ ಸಿನಿಮಾದಲ್ಲಿನ ಸಣ್ಣ ಮಗುವಿನ ಕುರುಡಿಯ ಪಾತ್ರವು ಇಡೀ ಸಿನಿಮಾಕ್ಕೆ ಮುನ್ನುಡಿ ಬರೆದಿದೆ. ಕಣ್ಣು ಇಲ್ಲದವರಿಗೆ ಕಣ್ಣಾಗಬೇಕೆಂಬ ನಿಟ್ಟಿನಲ್ಲಿ ಸಿನಿಮಾದ ಕೊನೆಯ ದೃಶ್ಯದಲ್ಲಿ ನಾಯಕ ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ಶಿಕ್ಷೆ ಏನಿದೆ ಎಂದು ಕೇಳುತ್ತಾನೆ.ಅದಕ್ಕೆ ಕಣ್ಣಿಲ್ಲದ ಪುಟ್ಟಿ ನನ್ನನ್ನು ಎತ್ತಿಕೊಳ್ಳಬೇಕು ಎಂಬ ಪ್ರತಿಧ್ವನಿ ಮಾರ್ಧನಿಸುತ್ತದೆ. ಅಸಹಾಯಕರ ಪಾಲಿಗೆ ಸಹಾಯಕರಾಗಬೇಕೆಂಬ ಸ್ವಚ್ಛ ದನಿ ಇದೆ. ಕೆಳಗಿನ ಕೇರಿ ಮ್ಯಾಲಿನ ಕೇರಿಯ ಸಂಘರ್ಷದ ಕಥನದಲ್ಲಿ ಸಮಾನತೆಯ ಅಂಶಕ್ಕಾಗಿ ಹೋರಾಟದ ಹಾದಿ ನಿರ್ಮಾಣಗೊಂಡಿದೆ.
ಬಸವಿ ಬಿಡುವುದು ಶ್ರಮಕ್ಕೆ ತಕ್ಕ ಪ್ರತಿಫಲ ನೀಡದೆ ಕಾಳು ಹಂಚುವುದು, ದುಡ್ಡು ಕೊಡದೆ ದರ್ಪ ತೋರಿಸುವುದು. ಮರ್ಯಾದೆ ಹತ್ಯೆ,ಸತ್ತವರ ಬಟ್ಟೆಗಳನ್ನು ಕೆಳಗಿನ ಕೇರಿಯವರು ಧರಿಸುವುದು,ನ್ಯಾಯ ಪಂಚಾಯತಿಯಲ್ಲಿ ಜಮೀನ್ದಾರರ ಕಟ್ಟಡಗಳೇ ಅಂತಿಮ ಆದೇಶವಾಗಿದ್ದು, ಇದನ್ನು ಮೀರಿ ನಡೆದರೆ ಸಾವು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗೆ ಅಮಾನವೀಯ ಘಟನೆಗಳಿಂದ ಸಮುದಾಯ ಹೇಗೆ ಹೊರ ಬರಬೇಕೆಂಬ ಹೋರಾಟದ ಛಾಯೆ ಚಿತ್ರದಲ್ಲಿದೆ . ಖಳನಾಯಕನಾಗಿ ರಾಜ್ ಬಿ ಶೆಟ್ಟಿ ಅಬ್ಬರ ಜೋರಾಗಿದೆ. ಮಹಿಳಾ ಪೊಲೀಸ್ ಖಳನಾಯಕನನ್ನು ಬಂಧಿಸುವುದು ಸಿನಿಮಾದ ಹೈಲೈಟ್. ಗಂಡಸುತನದ ಪ್ರಶ್ನೆಗಾಗಿ ಮಹಿಳಾ ಮಹಿಳಾ ಪೊಲೀಸ್ ನ್ನು ಬಸವೀ ಬಿಡುವುದಕ್ಕೆ ಮುಂದಾದಾಗ ಸಮಾಜದ ಪ್ರತಿಭಟನೆ ಶೂನ್ಯವಾಗಿರುವುದು ಸಿನಿಮಾದ ಮೈನಸ್. ನಾಯಕನ ಹೆಂಡತಿ ನಿಂಗವ್ವ ಗಂಡ ರಾಚಯ್ಯನ ಕೋಪವನ್ನು ಕಟ್ಟಿ ಹಾಕಿ ತಕ್ಕ ಸಮಯದಲ್ಲಿ ಗೂಳಿಯಾಗಲು ಬಿಡುತ್ತಾಳೆ. ಇದು ಹೆಣ್ಣಿನ ಆಂತರಿಕ ಸಂಘರ್ಷವನ್ನು ಸೂಚಿಸುವುದು.
ಓದಿ ವಿದ್ಯಾವಂತಳಾದ ರಾಚಯ್ಯನ ಮಗಳನ್ನು ಕಂಡ ಊರಿನ ಪಾಳೆಗಾರರು ಸಹಿಸುವುದಿಲ್ಲ. ಓದಿ ಜ್ಞಾನ ಪಡೆದು ಕಾನೂನು ತಿಳಿದುಕೊಂಡರೆ ನಾವು ಗುಲಾಮರಾಗುತ್ತೇವೆ ಎಂಬ ಪಂಕದಲ್ಲಿ ಪಾಳೇಗಾರರು. ತಾಯಿಗೆ ಕೊಟ್ಟ ಮಾತನ್ನು ರಾಚಯ್ಯ ಉಳಿಸಿಕೊಂಡನಾದರೂ ತನ್ನ ಸ್ವಂತ ಜಮೀನಿನಲ್ಲಿ ಬೆಳೆ ಬರುವಾಗ ಅದನ್ನು ಹಾನಿ ಮಾಡಿದರು. ಮೇಲ್ವರ್ಗದವರು ಕೆಳವರ್ಗದವರು ತಮ್ಮ ಸರಿ ಸಮಾನ ಬರಬಾರದೆಂಬ ಹುನ್ನಾರವಿದು.
ತುಂಡು ಭೂಮಿಗಾಗಿ ಹೋರಾಟದ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕ ಪ್ರಸ್ತುತಪಡಿಸಿದೆ. ಚೋಮ,ಕುರುಮಯ್ಯ ರೊಂದಿಗೆ ಸಿನಿಮಾದ ರಾಚಯ್ಯನು ಭೂಮಿಗಾಗಿ ಹೋರಾಟ ಮಾಡಿದವರು ಆಗಿದ್ದಾರೆ. ಇಂಥ ಅನೇಕ ಜನರು ಇಂದಿಗೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪಟ್ಟಣಗಳಲ್ಲಿ ಅವಿತುಕೊಂಡಿದ್ದಾರೆ. ಜಾತೀಯ ಕಾರಣಕ್ಕಾಗಿ ಅವರು ಮುಂದೆ ಬರುವುದಕ್ಕೆ ಆಗಿಲ್ಲ. ಬಂದರು ಸಮುದಾಯ ಒಪ್ಪುವುದಿಲ್ಲ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಇಂದಿಗೂ ಹೋರಾಟದ ಭಾಗವೇ ಆಗಿದೆ. ಶ್ರೀಮಂತಿಕೆ ಕೆಲವರ ಹತೋಟಿಯಲ್ಲಿದೆ ಅವರೇ ಸರ್ಕಾರವು ನಿಯಂತ್ರಿಸಿದ್ದಾರೆ ಎಂಬ ಸೂಚನೆ ಸಿನಿಮಾದಲ್ಲಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರ ಹಲವು ಆಯಾಮಗಳನ್ನು ಕನ್ನಡ ಚಿತ್ರರಂಗಕ್ಕೆ ಒದಗಿಸುತ್ತಿದೆ. ಆದರೂ ಸಿನಿಮಾ ಕೆಲವು ಸಿದ್ದ ಹಸ್ತಗಳಿಂದ ಹೊರಬಂದಿಲ್ಲ. ಸಿನಿಮಾದಲ್ಲಿ ಹಿಂಸೆ ಅತಿರೇಕಕ್ಕೆ ಹೋಗಿದೆ. ಆದರೆ ಕಥಾನಾಯಕ ಕೊನೆಯಲ್ಲಿ ಅಹಿಂಸೆಯನ್ನೇ ಪ್ರಧಾನವಾಗಿ ಒಪ್ಪಿದರೂ ಈ ಸಂದರ್ಭದಲ್ಲಿ ಕಥೆ ತನ್ನ ಹಿಮ್ಮುಖ ಚಲನೆ ಆರಂಭಿಸಿದಂತೆ ಭಾಸವಾಗುತ್ತದೆ. ಅನಕ್ಷರಸ್ತರಿಂದ ಸಂವಿಧಾನದ ಪಾಠ ಮಾಡಿದ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು. ನಮ್ಮವರಿಂದಲೇ ನಮಗೆ ದೋಷವಾಗುತ್ತದೆ ಎಂಬುದು ವಿಧಿ ಲಿಖಿತವೆಂಬಂತೆ, ಹೋರಾಟಕ್ಕೆ ದನಿಗೂಡಿಸಿದರೆ ಹೋರಾಟದ ರಾಚಯ್ಯನ ಕೊಲೆಗೆ ಪ್ರಯತ್ನಿಸಲಾಗುತ್ತದೆ. ಅಕ್ಷರ ಕಲಿತವರಿಂದಲೇ ಸಂವಿಧಾನದ ಆಶಯಗಳು ಕರಗುತ್ತಿವೆ ಎಂಬ ಪ್ರಬಲ ಧ್ವನಿ ಸಿನಿಮಾದ್ದು. ತಾಂತ್ರಿಕವಾಗಿ ಕಥೆ ಮೈಮರೆತರೂ ಪ್ರತಿಭಟನೆಯ ಸಂಕೇತವಾಗಿ ರಾಚಯ್ಯ, ನಿಂಗವ್ವ ನಂತಹ ಅನೇಕ ಜನರು ಹೋರಾಟದ ಹಾದಿಯಲ್ಲಿ ಜೀವನ ಸಾಗಿಸುತ್ತಿರುವುದು ನಮ್ಮ ನಾಡಿನ ದುರಂತ.
1947 ರಲ್ಲಿ ಸ್ವಾತಂತ್ರ,1950 ರಲ್ಲಿ ಸಂವಿಧಾನ ಜಾರಿಯಾದರು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವುದರಲ್ಲಿ ಪ್ರಾತ್ಸರ ಮನೋಭಾವವನ್ನು ತೋರುತ್ತಿದ್ದೇವೆ ಇದಕ್ಕೆ ಕಾರಣ ಅಧಿಕಾರಿಗಳು, ರಾಜಕಾರಣಿಗಳು, ಬಂಡವಾಳ ಶಾಹಿಗಳು ಎಂದು ಸಿನಿಮಾ ಹೇಳುತ್ತಿದೆ. ಅಂದಿನ ಜಮೀನ್ದಾರರೇ ಇಂದಿನ ಬಂಡವಾಳಶಾಹಿಗಳಾಗಿ ಮಾರ್ಪಾಡಾಗಿದ್ದಾರೆಂಬ ಸೂಚನೆ ಸಿನಿಮಾ ಹೇಳುತ್ತಿದೆ. ಚುನಾಯಿತ ಪ್ರತಿನಿಧಿಗಳ ಮಕ್ಕಳೆ ಮತ್ತು ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗುವುದು ರಾಜಪ್ರಭುತ್ವವಾಗುತ್ತದೆ ಹೊರತು ಪ್ರಜಾಪ್ರಭುತ್ವವಾಗುವುದಿಲ್ಲೆoಬ ಸಂದೇಶ ಮತದಾರರಿಗೆ ನೀಡಿದೆ. ಯಾವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬುದು ಮತದಾರರು ಇನ್ನು ಪಕ್ವಗೊಂಡಿಲ್ಲ ಎಂಬುದೇ ಈ ಮಾತಿನ ಸೂಚನೆ. ತಳ ಸಮುದಾಯದ ವ್ಯಕ್ತಿ ಜನಪ್ರತಿನಿಧಿಯಾದಾಗ ಆತನಲ್ಲಿ ಬೆವರು ವಾಸನೆ ಹೋಗಿ ಸುಗಂಧದ ವಾಸನೆ ಬರುವಂತ ದ್ರವ್ಯ ಬಳಸುತ್ತಿರುವಾಗ ಜನರ ಕಷ್ಟ ಸಂಕಟ ನೋವುಗಳು ಆತನಿಗೆ ಹೇಗೆ ಅರ್ಥವಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಶಾಸಕನ ಮಗ ಶಾಸಕನೇ ಆಗಬೇಕೆಂಬ ಪ್ರಾಬಲ್ಯ ಕೊನೆಗೊಂಡು ಜನಸಾಮಾನ್ಯನಿಗೆ ವಿಶೇಷ ಅಧಿಕಾರವನ್ನು ನೀಡಬೇಕೆಂಬದು ಚಿತ್ರದ ಕ್ಲೈಮಾಕ್ಸ್. ಶಾಸಕ,ಕಾರ್ಯಾಂಗ, ನ್ಯಾಯಾಂಗಗಳಿಗೆ ಬೀಗ ಹಾಕಲಾಗಿದೆ. ಏಕೆಂದರೆ 'ತುಳಿತಾ ಇರೋರು ನಾವೇ, ತುಳಿಸಿಕೊಳ್ಳುತ್ತಾ ಇರುವವರು ನಾವೇ ' ಹಾಗಾಗಿ ಈ ದ್ವಂದ್ವದಿಂದ ಹೊರ ಬಂದಾಗ ಸಮಾನತೆಯ ಕನಸು ನನಸಾಗಲು ಸಾಧ್ಯ. ಮಳೆ ಬಂದರೆ ನಮ್ಮ ಭೂಮಿ ಹೇಗೆ ಹಸಿರಾಗುತ್ತದೋ ಹಾಗೆ ಸಂವಿಧಾನ ಬಂದರೆ ನಮ್ಮ ಬದುಕು ಹಸನಾಗುತ್ತದೆ ಎಂಬ ನಾಯಕನ ಮಾತು ಮನಮುಟ್ಟುವಂಥದ್ದು. ಸಮಾನತೆಯನ್ನು ಸಂವಿಧಾನ ಹಳ್ಳಿ ಹಳ್ಳಿಗೂ ಬರಬೇಕೆಂಬ ಕಾಳಜಿ ಪ್ರತಿಯೊಬ್ಬ ಅಕ್ಷರಸ್ಥನಲ್ಲಿ ಬಂದಾಗ ಅಸ್ಪೃಶ್ಯತೆ,ಅಸಮಾನತೆ, ಅಂಧಕಾರದ ಮೌಡ್ಯ ಶಕ್ತಿಗಳೆಲ್ಲವೂ ಬೇರುಸಹಿತ ನಾಶವಾಗುತ್ತದೆಂಬ ನಿಟ್ಟಿನಲ್ಲಿ ಸಿನಿಮಾ ಮಾತಾಡುತ್ತದೆ.ಸಾರಥಿ ಫಿಲಂಸ್ ಸಧಬಿ ರುಚಿಯ ಚಿತ್ರಗಳನ್ನು ನೀಡುತ್ತಿರಲಿ. ಅಜನೀಶ್ ಸಂಗೀತ ಗೀತ ಚಿತ್ರಕ್ಕೆ ಮತ್ತೊಂದು ಮೆರಗು ತಂದು ಕೊಟ್ಟಿದೆ. ಇನ್ನೊಂದು ಹಾಡು ಸಮಾನತೆಯ ಕುರಿತಾಗಿ ರಚಿಸಬೇಕಿತ್ತು ಎಂದು ಚಿತ್ರ ಬಯಸುತ್ತದೆ.
ಆದರೆ ಈ ಸಿನಿಮಾವನ್ನು ನೋಡಬೇಕಾಗಿರುವವರು ಯಾರು ಎಂಬುದು ಮುಖ್ಯವಾದ ಪ್ರಶ್ನೆ. ಸಮಾನತೆಯ ಕನಸು ಕಾಣುವವರು ಮಾತ್ರ ಸಿನಿಮಾ ನೋಡಿ ಹೌದೆನ್ನಬಹುದು. ಅಸಮಾನತೆಯನ್ನೇ ಜೀವಂತವಾಗಿ ಇಟ್ಟು ಕೊಂಡಿರುವ ಮನಸ್ಸುಗಳು ಈ ಸಿನಿಮಾವನ್ನು ನೋಡಲು ಸಾಧ್ಯವೇ? ಸಿನಿಮಾಕ್ಕೆ ಯಶಸ್ಸು ಸಿಗಬಹುದು. ಆದರೆ ಜೀವನದ ಅಸಮಾನತೆ ಹಂಗನ್ನು ತೊರೆಯಲು ಮನಸ್ಸುಗಳು ಸಿದ್ಧವಾದರೆ ಮಾತ್ರ ಸಿನಿಮಾಕ್ಕೆ ನಿಜವಾದ ಯಶಸ್ಸು ಲಭಿಸುವುದು. ಸಮಾನತೆಯ ಹೆಸರಿನ ಸಂವಿಧಾನ ಉಸಿರಾಡಲು ಸಾಧ್ಯವಾಗುವುದು. ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾವು ಕೇವಲ ಭೂಮಿಗಾಗಿ ಮಾತ್ರವಲ್ಲದೆ ಸಮಾಜದಲ್ಲಿ ಸ್ಥಾಪಿತ ಸಂಪ್ರದಾಯಗಳನ್ನು ಮುರಿದು ಹಾಕಿ ವೈಚಾರಿಕ ಪ್ರಜ್ಞೆಯ ನೆಲೆಗಟ್ಟಿನಲ್ಲಿ ಬದುಕಬೇಕೆಂಬ ಆಶಯ ಸಿನಿಮಾದಲ್ಲಿದೆ.
- ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, ಸಂಶೋಧಕರು, ಯಾದಗಿರಿ
#Constitution #Essay #DreamofEquality #LandLord #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಎಸ್ಐಆರ್ ಯಾಕೆ ಬೇಡ?
2025 ಜೂನ್ 24ರಂದು ಇಸಿಐ ತನ್ನ ಆದೇಶ ಸಂಖ್ಯೆ (23/ಇಆರ್ಎಸ್ /2025) ಮೂಲಕ, ಸಂವಿಧಾನದ ವಿಧಿ 324ರ ಅಡಿಯಲ್ಲಿ ದೇಶಾದ್ಯಂತ ಎಸ್ಐಆರ್ ಪ್ರಾರಂಭಿಸುವುದಾಗಿ ಘೋಷಿಸಿತು. ಮೊದಲಿಗೆ ಬಿಹಾರದಲ್ಲಿ ಆಗಸ್ಟ್–ಸೆಪ್ಟೆಂಬರ್ 2025ರಲ್ಲಿ ಈ ಎಸ್ಐಆರ್ ನಡೆಯಿತು.
24 ಜೂನ್ 2025 :
7.89 ಕೋಟಿ ಮತದಾರರು
65 ಲಕ್ಷ ಮತದಾರರನ್ನು ತೆಗೆಯಲಾಗಿದೆ
ಸುಪ್ರೀಂಕೋರ್ಟ್ ವಿಚಾರಣೆ, ಮಧ್ಯಪ್ರವೇಶ
1 ಆಗಸ್ಟ್ 2025(36 ದಿನಗಳ ಅಂತರದಲ್ಲಿ)
7.24 ಕೋಟಿ ಮತದಾರರು
3.66ಲಕ್ಷ ಮತದಾರರನ್ನು ತೆಗೆಯಲಾಗಿದೆ
21.53 ಮತದಾರರನ್ನು ಸೇರಿಸಲಾಗಿದೆ
30 ಸೆಪ್ಟೆಂಬರ್ 2025
7.42 ಕೋಟಿ ಮತದಾರರು
ಅದನ್ನ ಅನುಸರಿಸಿ, 12 ರಾಜ್ಯಗಳಾದ ಅಂಡಮಾನ್ ನಿಕೋಬಾರ್, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೆರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಜನವರಿ 2026ರೊಳಗೆ ಪೂರ್ಣಗೊಂಡಿದೆ.
6.5 ಕೋಟಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
ಪ. ಬಂಗಾಳದಲ್ಲಿ 1.36 ಕೋಟಿ ಮತದಾರರ ಮ್ಯಾಪಿಂಗ್ ಆಗಿದ್ದರೂ ಅವರಿಗೆ ಹತ್ತಾರು ಸಮಸ್ಯೆಗಳನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.
ಅಷ್ಟು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇವರು ಎಸ್ ಐಆರ್ ನಲ್ಲಿ ಇಲ್ಲ ಎಂದು ಸರ್ಕಾರದ ಕಲ್ಯಾಣ ಯೋಜನೆಗಳಿಂದ ವಂಚಿತರಾಗಬಹುದು..
ಈ ಪಟ್ಟಿಯ ಆರು ರಾಜ್ಯಗಳಿಗೆ 2026ರಲ್ಲಿ ವಿಧಾಐನಸಭಾ ಚುನಾವಣೆಗಳೂ ನಿಗದಿಯಾಗಿದೆ.
ಜನಪ್ರತಿನಿಧಿಗಳ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960 ಪ್ರಕಾರ ಮತದಾರರ ಪಟ್ಟಿ ತಯಾರಿಸಲು ಮೂರು ವಿಧಾನಗಳಿವೆ
1. ತೀವ್ರವಾದ ಪರಿಷ್ಕರಣೆ (intensive revision)
2. ಸಾರಾಂಶ ಪರಿಷ್ಕರಣೆ (summary revision)
3. ಕೆಲವೊಮ್ಮೆ ತೀವ್ರವಾಗಿ, ಕೆಲವೊಮ್ಮೆ ಸಾರಾಂಶದಲ್ಲಿ
ಆದರೆ ʼವಿಶೇಷ ತೀವ್ರವಾದ ಪರಿಷ್ಕರಣೆʼ ಎನ್ನುವುದು ಕಾನೂನಿನಲ್ಲಿ, ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ.
ಇದನ್ನು ಕೇಂದ್ರ ಗೃಹ ಇಲಾಖೆ ನಿರ್ದೇಶನದ ಮೇರೆಗೆ ಇಸಿಐ ನಡೆಸುತ್ತಿದೆ.
ಈ ಸಂಸ್ಥೆ ಸ್ವಾಯತ್ತತೆ ಕಳೆದುಕೊಂಡಿರುವದರಿಂದ, ತನ್ನದೇ ಸ್ವತಂತ್ರ ನಿಲುವು ತೆಗೆದುಕೊಳ್ಳಲು ಸಾಧ್ಯವೇ ಇಲ್ಲದಿರುವುದರಿಂದ ಮೋದಿ ನೇತೃತ್ವ ಸರ್ಕಾರದ ಅಡಿಯಾಳಾಗಿ ಕಾರ್ಯ ನಿರ್ವಹಿಸುತ್ತಿದೆ.
ಇದು ಮೊದಲ ಆಕ್ಷೇಪ.
ಕಾನೂನು ತಜ್ಞರು ಹೇಳಿದಂತೆ ತೀವ್ರವಾದ ಪರಿಷ್ಕರಣೆಯನ್ನು ಒಂದು ನಿರ್ದಿಷ್ಠ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಬಹುದೇ ಹೊರತು ಇಡೀ ರಾಜ್ಯಕ್ಕಲ್ಲ.
ಆದರೆ ಇಸಿಐ ಇಡೀ ಬಿಹಾರ್ ರಾಜ್ಯಕ್ಕೆ ಅನ್ವಯಿಸಿ ಎಸ್ಐಆರ್ ನಡೆಸಿದೆ.
2025 ಜೂನ್ 24ರಂದು ಇಸಿಐ ಬಿಹಾರ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲೂ, ಕಾನೂನಾತ್ಮಕವಾಗಿ ʼವಿಶೇಷ ಪರಿಷ್ಕರಣೆಯ ಅಗತ್ಯವೇನಿದೆ?ʼ ಎಂದು ಸ್ಪಷ್ಟೀಕರಣ ನೀಡಿಲ್ಲ, ಕಾರಣಗಳು ಏನೆಂದು ವಿವರಿಸಿಲ್ಲ. ಅದರ ನಿರ್ಧಾರಗಳು ನಿಯಮಗಳಿಗೆ ವಿರುದ್ಧವಾಗಿದೆ.
ಹಾಗೆಯೇ ಪ.ಬಂಗಾಳ, ಕೇರಳ, ತಮಿಳುನಾಡುನಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ತರಾತುರಿಯಲ್ಲಿ ಕೇವಲ ಎರಡು ತಿಂಗಳಲ್ಲಿ ಎಸ್ ಐಆರ್ ನಡೆಸುವ ಉದ್ದೇಶವೇನು? ವಾಸ್ತವದಲ್ಲಿ ವಿಸ್ತ್ರತ ಪರಿಷ್ಕರಣೆಗೆ ಒಂದು ವರ್ಷ ಅವಧಿಯ ಅಗತ್ಯವಿದೆ
ಇದು ಎರಡನೇ ಆಕ್ಷೇಪ.
ಏನು ಬೇಕು?
● 1 ಜುಲೈ1987 ಕ್ಕಿಂತ ಮೊದಲು ಜನಿಸಿದವರು, ತಮ್ಮ ಜನನ ದಿನಾಂಕ/ಸ್ಥಳದ ದಾಖಲೆಯನ್ನುನೀಡಬೇಕು.
● 1 ಜುಲೈ1987 ಮತ್ತು2 ಡಿಸೆಂಬರ್ 2004 ನಡುವೆ ಜನಿಸಿದವರು, ತಮ್ಮದೂ, ಮತ್ತುತಂದೆ ಅಥವಾ ತಾಯಿಯ ದಾಖಲೆಯನ್ನುನೀಡಬೇಕು.
● 2 ಡಿಸೆಂಬರ್ 2004 ನಂತರ ಜನಿಸಿದವರು, ತಮ್ಮದೂ, ಮತ್ತುಇಬ್ಬರು ಪೋಷಕರ ದಾಖಲೆಯನ್ನು ನೀಡಬೇಕು.
ಸಿಇಒ -ಕೆ ನೀಡಿರುವ ಹನ್ನೊಂದು ದಾಖಲೆಗಳು ಪಟ್ಟಿ, ಜನಸಾಮಾನ್ಯರಲ್ಲಿ ಬಹುತೇಕ ಯಾರಿಗೂ ಇಲ್ಲದಂತಹ ದಾಖಲೆಗಳಾಗಿವೆ.
ಇದರ ದಸ್ತಾವೇಜಿನಲ್ಲಿ ಇದರ ಕುರಿತು ಮತ್ತು ಹನ್ನೆರೆಡನೆಯದಾಗಿ ಆಧಾರ್ ದಾಖಲೆಗಳ ವಿವರಗಳನ್ನು ಪ್ರಕಟಿಸಿದೆ.
ಅವೇನೆಂದರೆ.
ಸರ್ಕಾರ, ಪಿಎಸ್ ಯು ಮುಂತಾದ ಉದ್ಯೋಗದ ಗುರುತಿನ ಚೀಟಿ
1 ಜುಲೈ 1987 ಮುಂಚಿನ ಗುರುತಿನ ಚೀಟಿ (ಅಧಿಕಾರಿಗಳಿಂದ ಲಗತ್ತಾಗಿರಬೇಕು)
ಜನನ ಪ್ರಮಾಣ ಪತ್ರ
(ಅಧಿಕಾರಿಗಳಿಂದ ಲಗತ್ತಾಗಿರಬೇಕು)
ಪಾಸ್ ಪೋರ್ಟ್
ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
ಶಾಶ್ವತ ನಿವಾಸದ ಪ್ರಮಾಣ ಪತ್ರ
ಅರಣ್ಯ ಹಕ್ಕುಗಳ ಪತ್ರ
ಜಾತಿ ಪ್ರಮಾಣ ಪತ್ರ
ಸರ್ಕಾರದಿಂದ ಜಮೀನು, ನಿವೇಶನ, ಮನೆ ಹಂಚಿಕೆ ಪತ್ರ
ಮತದಾರರ ಪಟ್ಟಿಯ ಉಲ್ಲೇಖ ಪ್ರತಿ
ಜೊತೆಗೆ ಆಧಾರ್ (ಇದು ಪೌರತ್ವ ನಿರ್ಧರಿಸುವ ದಾಖಲೆ ಅಲ್ಲ.. ಈ ಪಟ್ಟಿಯಲ್ಲಿ ಮತದಾರ ಗುರುತು ಪತ್ರ, ಪಡಿತರ ಚೀಟಿ ಇಲ್ಲ)
ಹೇಗೆ ಸಂವಿಧಾನ ವಿರೋಧಿ?
ಸಂವಿಧಾನದ ವಿಧಿ 326ರ ನೀತಿಯು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನದ ಹಕ್ಕನ್ನು ಖಚಿತಪಡಿಸಿದೆ. ಅವರಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆದರೆ ಇಸಿಐ ವಿಧಿ 324ರ ಅಡಿಯಲ್ಲಿ ತನ್ನ ಜವಬ್ದಾರಿಯನ್ನು ಮಾತ್ರ ಹೇಳಿಕೊಳ್ಳುತ್ತಿದೆಯೇ ಹೊರತು ವಿಧಿ 326ರ ಅಡಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎನ್ನುವುದನ್ನು ಉಲ್ಲಂಘಿಸಿ ಆದಾರ್ ಕಾರ್ಡ, ಮತದಾರ ಗುರುತಿನ ಚೀಟಿ(ಎಪಿಕ್), ಪಡಿತರ ಚೀಟಿ ಮುಂತಾದವುಗಳನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ, ಆ ಮೂಲಕ ಸಂವಿಧಾನದ ನೀತಿಯನ್ನು ಉಲ್ಲಂಘಿಸುತ್ತಿದೆ.
ಕಾನೂನಿನ ಪ್ರಕಾರ ಗೃಹ ಇಲಾಖಗೆ ಮಾತ್ರ ಪೌರತ್ವವನ್ನು ನಿರ್ಧರಿಸುವ ಹಕ್ಕಿದೆ. ಇಸಿಐಗೆ ಇಲ್ಲ.
ಆದರೆ ಇದನ್ನು ಪಾಲಿಸುತ್ತಿಲ್ಲ.
ಇದಕ್ಕೆ ಇಸಿಐ 'ನಾನು ಪೌರತ್ವ ಇದೆ/ಇಲ್ಲ ಎಂದು ಮಾತ್ರ ಪರಿಶೀಲನೆ ಮಾಡುತ್ತೇವೆ, ನಿರ್ಧರಿಸುತ್ತಿಲ್ಲ.. ' ಎಂದು ಹೇಳುತ್ತದೆ
ಮುಖ್ಯವಾದ ಬಿಕ್ಕಟ್ಟೇನು?
ಇಲ್ಲಿ ಇಸಿಐ ಮತದಾರರ ಪಟ್ಟಿ ಪರಿಷ್ಕರಿಸಿ, ಅರ್ಹತೆ, ಪೌರತ್ವವನ್ನು ಸಾಬೀತುಪಡಿಸುತ್ತಿಲ್ಲ...
ಬದಲಿಗೆ ಮತದಾರರು ಸಾಬೀತುಪಡಿಸಬೇಕು
(ಯುಎಪಿಎ, ಪಿಎಂಎಲ್ ಎ ರೀತಿ..)
ಎಡಿಆರ್ ಸಂಸ್ಥೆ(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಪ್ರಕಾರ, ಬಿಹಾರದಲ್ಲಿ
ಅಂತಿಮ ಪಟ್ಟಿಯಲ್ಲಿ ಹೆಸರು, ಸಂಬಂಧಿಕರ ಹೆಸರು, ವಯಸ್ಸು, ವಿಳಾಸ ಒಂದೇ ಆಗಿರುವ 5 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳಿವೆ.
ರಿಪೋರ್ಟರ್ ಕಲೆಕ್ಟಿವ್ (ವರದಿಗಾರರ ಸಮೂಹ) ಪ್ರಕಾರ, ಸುಮಾರು 14.35 ಲಕ್ಷ ನಮೂದುಗಳು ʼಸಂದೇಹಾಸ್ಪದ ನಕಲುಗಳಾಗಿವೆʼ.
ಅವುಗಳಲ್ಲಿ ಸರಿಸುಮಾರು 3.4 ಲಕ್ಷ ನಮೂದುಗಳು ಹೆಸರು, ಸಂಬಂಧಿಕರ ಹೆಸರು ಮತ್ತು ವಯಸ್ಸಿನ ವಿಷಯದಲ್ಲಿ ಒಂದೇ ತೆರನಾದ ಮಾಹಿತಿ ಹೊಂದಿದೆ. ಮತದಾರರ ವಿವರಗಳಲ್ಲೂ ಗಂಭೀರ ದೋಷಗಳು ಕಂಡುಬಂದಿದೆ.
22 ಲಕ್ಷ ಜನ ತೀರಿಕೊಂಡಿದ್ದಾರೆ(ಇದನ್ನು ಒಪ್ಪಿಕೊಳ್ಳಬಹುದು),
7 ಲಕ್ಷ ನಕಲಿ ಮತದಾರರು(ಇದನ್ನೂ ಅನುಮಾನವಿದ್ದರೂ ಒಪ್ಪಿಕೊಳ್ಳಬಹುದು ಅಥವಾ ಪರಿಶೀಲಿಸಬಹುದು),
36 ಲಕ್ಷ ಜನ ವಲಸೆ ಹೋಗಿದ್ದಾರೆ ಅಥವಾ ಪತ್ತೆ ಹಚ್ಚಲಾಗಿಲ್ಲ. ಈ ಅಂಶ ಪ್ರಶ್ನಾರ್ಹವಾಗಿದೆ, ಅನುಮಾನಸ್ಪವಾಗಿದೆ,
ಪಶ್ಚಿಮ ಬಂಗಾಳದ ಉದಾಹರಣೆ:
ಮ್ಯಾಪಿಂಗ್ ಆಗಿದ್ದರೂ SIR ಅಡಿಯಲ್ಲಿ (ಜನಸಂಖ್ಯೆಯ ಸುಮಾರು 20%) ಸುಮಾರು 1.3 ಕೋಟಿ ಜನರಿಗೆ
‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಎಂದು ಹೆಸರಿಸಿ ನೋಟಿಸ್ಗಳನ್ನು ಕಳುಹಿಸಲಾಗಿದೆ
‘ತಾರ್ಕಿಕ ವ್ಯತ್ಯಾಸಗಳು’ ಎಂದರೆ: ಆರಕ್ಕಿಂತ ಹೆಚ್ಚು ‘ಸಂತಾನ’ಗಳಿರುವುದು, ‘ಗಂಗೂಲಿ’ ಮತ್ತು ‘ದತ್ತ’ ಎಂಬಂತೆ ಹೆಸರುಗಳ ಅಕ್ಷರ ಸಂಯೋಜನೆಯಲ್ಲಿ ವ್ಯತ್ಯಾಸ, ಪೋಷಕರು ಮತ್ತು ಮಕ್ಕಳ ನಡುವೆ ಕೇವಲ 15 ವರ್ಷಗಳ ವಯಸ್ಸಿನ ಅಂತರ ಇರುವುದು, ಹಾಗೂ ಅಜ್ಜ–ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇರುವುದು...
ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಾಗ್ಚಿ 'ಪೋಷಕರು ಮತ್ತು ಮಗುವಿನ ನಡುವೆ 15 ವರ್ಷದ ವಯಸ್ಸಿನ ಅಂತರ ಇರುವುದು ಹೇಗೆ ತರ್ಕಕ್ಕೆ ವಿರುದ್ಧವಾಗುತ್ತದೆ ಎಂದು ಪ್ರಶ್ನಿಸಿದರು; “ಮಕ್ಕಳ ವಿವಾಹವೇ ಇಲ್ಲದ ದೇಶದಲ್ಲಿ ನಾವು ಬದುಕುತ್ತಿದ್ದೇವೆಯೇ?” ಎಂದು ಕೇಳಿದರು.
ಒಂದೇ ಜಿಲ್ಲೆಯಲ್ಲಿ 2.31 ಲಕ್ಷಕ್ಕೂ ಹೆಚ್ಚು ಜನರಿಗೆ ಅವರ ವಿರುದ್ಧ ಕಂಡುಬಂದ ‘ತಾರ್ಕಿಕ ವ್ಯತ್ಯಾಸಗಳನ್ನು’ ವಿವರಿಸಲು ನೋಟಿಸ್ಗಳು ಬಂದಿವೆ.
‘ಸಂತಾನ’ ವರ್ಗದಲ್ಲಿ ಜನಸಂಖ್ಯೆಯ 2.12% ಮಂದಿಗೆ ನೋಟಿಸ್ಗಳನ್ನು ನೀಡಲಾಗಿದೆ.
ಈ ಎಲ್ಲಾ ಮಾನದಂಡಗಳು ಎಲ್ಲಿಂದ ಬಂದವು?
ಯಾರು ನಿರ್ಧರಿಸುತ್ತಾರೆ?
ಈ 1.36 ಕೋಟಿ ಜನರ ವಿಚಾರಣೆ ನಡೆಸಲು ಚುನಾವಣಾ ಆಯೋಗ (EC) ಕೇವಲ 500 ಸ್ಥಳಗಳನ್ನು ಮಾತ್ರ ಒದಗಿಸಿತ್ತು, ಆದರೆ 1900ಕ್ಕೂ ಹೆಚ್ಚು ಸ್ಥಳಗಳು ಅಗತ್ಯವಾಗಿದ್ದವು.
32 ಲಕ್ಷ ಜನರನ್ನು ‘ಅನ್-ಮ್ಯಾಪ್ಡ್’ (2002ರ ಪಶ್ಚಿಮ ಬಂಗಾಳದ ಹಿಂದಿನ SIRನಲ್ಲಿ ತಯಾರಿಸಲಾದ ಮತದಾರರ ಪಟ್ಟಿಗಳಲ್ಲಿ ಅವರ ಹೆಸರುಗಳು ಅಥವಾ ಅವರ ಕುಟುಂಬದ ಸದಸ್ಯರ ಹೆಸರುಗಳು ಕಾಣಿಸದವರು) ಎಂದು ಗುರುತಿಸಿ, ದಾಖಲೆಗಳನ್ನು ಸಲ್ಲಿಸಿ ಆಕ್ಷೇಪಣೆಗಳನ್ನು ದಾಖಲಿಸುವಂತೆ ನೋಟಿಸ್ಗಳನ್ನು ಕಳುಹಿಸಲಾಗಿದೆ
ಇದು
mass exclusion not mass inclusion
(ಬಿಕ್ಕಟ್ಟಿನ ಮೂಲ ಕಾರಣ
2 ಮಾರ್ಚ 2023ರಂದು ಆಗಿನ ಸುಪ್ರೀಂಕೋರ್ಟ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠವು ಭಾರತದ ಚುನಾವಣಾ ಅಯೋಗದ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಸೂಚಿಸಿತು. ಮತ್ತಷ್ಟು ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ನೀತಿ ತರಲು ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂಕೋರ್ಟನ ಸಿಜೆಐ (ಮುಖ್ಯ ನ್ಯಾಯಮೂರ್ತಿಗಳು) ಒಳಗೊಂಡ ಸಮಿತಿಯು ರಾಷ್ಟçಪತಿಗಳಿಗೆ ತಮ್ಮ ಆಯ್ಕೆಯನ್ನು ಕಳಿಸಿಕೊಡಬೇಕೆಂದು ನಿರ್ದೇಶನ ನೀಡಿತು. ಆದರೆ ‘ತನ್ನ ನಿರ್ದೇಶನವು ಸಂಸತ್ತು ಕಾಯ್ದೆ ರೂಪಿಸುವವರೆಗೆ ಮಾತ್ರ ಮಾನ್ಯವಾಗಿರುತ್ತದೆ’ ಎಂದು ಸೇರಿಸಿತು. ಇದನ್ನೇ ನೆಪ ಮಾಡಿಕೊಂಡ ಆಗಿನ ಮೋದಿ ನೇತೃತ್ವದ ಸರ್ಕಾರವು 28 ಡಿಸೆಂಬರ್ 2023ರಂದು ಮುಖ್ಯ ಚುನಾವಣಾ ಅಯುಕ್ತ ಮತ್ತು ಇತರೆ ಆಯುಕ್ತರು(ನೇಮಕಾತಿ, ಸೇವೆ, ಟರ್ಮ್ಸ ಆಪ್ ಆಫೀಸ್) 2023 ಕಾಯ್ದೆಯನ್ನು ಜಾರಿಗೆ ತಂದರು. ಈ ಕಾಯ್ದೆಯಲ್ಲಿ ಸಿಜೆಐಯವರನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಪಿಎಂ ನಾಮನಿರ್ದೇಶನ ಮಾಡುವ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಈ ಕಾಯ್ದೆಯನ್ನು 2 ಜನವರಿ 2024ರಂದು ಜಾರಿಗೊಳಿಸಲಾಯಿತು.)
ಇಷ್ಟು ಕಾರಣಗಳು ಸಾಕಲ್ಲವೇ! ಎಸ್ ಐಆರ್ ತಿರಸ್ಕರಿಸಲು?
- ಶ್ರೀಪಾದ್ ಭಟ್, ಬೆಂಗಳೂರು
#WhynotSIR #SIR #BSripadBhat #votechori #voteloot #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನಮಗಾಗಿ ಬದುಕಿನ ಉದ್ದಕ್ಕೂ ಹೋರಾಟ ನಡೆಸಿದ ಬಾಬಾ ಸಾಹೇಬರು ಎಂತಹ ಸ್ಥಿತಿ ಎದುರಿಸಿದ್ದರು ಅಲ್ಲವೇ?: ಡಾ.ಎಚ್.ಸಿ.ಮಹದೇವಪ್ಪ
ಅಲ್ಲವೇ?
ಅಂಬೇಡ್ಕರ್ ಅವರು ವಿದೇಶದಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದಾಗ ಅವರು ಬರೋಡಾದಲ್ಲಿ ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡರು.
ಸೆಪ್ಟೆಂಬರ್ ತಿಂಗಳಲ್ಲಿ ಅವರು ಬರೋಡಾಗೆ ಬಂದಿಳಿದಾಗ ರಾಜರ ಆದೇಶವಿದ್ದರೂ ಅವರನ್ನು ಸ್ವಾಗತಿಸಲು ರೈಲು ನಿಲ್ದಾಣಕ್ಕೆ ಯಾರೂ ಬರಲಿಲ್ಲ. ಆ ಊರಿನಲ್ಲಿ ಅವರ ವಾಸಕ್ಕೆ ಒಂದೇ ಒಂದು ಬಾಡಿಗೆ ಮನೆ ಸಿಗಲಿಲ್ಲ.
ಕೆಲಸ ಮಾಡುವ ಸ್ಥಳದಲ್ಲೂ ಯಾರೂ ಸಹಕಾರ ನೀಡಲಿಲ್ಲ. ಕಚೇರಿಯಲ್ಲಿ ಟಪಾಲು ಪತ್ರಗಳನ್ನು ದೂರದಿಂದಲೇ ಬಿಸಾಡುತ್ತಿದ್ದರು. ಹೀಗಿರುವಾಗ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಅಧಿಕಾರಿಗಳ ಬಳಿ ಅಂಬೇಡ್ಕರ್ ಅವರು ಹೇಳಿದರು. ಮಹಾರಾಜರಿಗೂ ಪತ್ರ ಬರೆದರು. ಆಗ ಮಹಾರಾಜರು ಆ ಪತ್ರವನ್ನು ದಿವಾನರಿಗೆ ವರ್ಗಾಯಿಸಿದರು. ದಿವಾನರು ಈ ವಿಷಯದಲ್ಲಿ ನನಗೇನೂ ಮಾಡಲು ಸಾಧ್ಯವಿಲ್ಲ ಎಂದರು.
ಆಗ ಅಂಬೇಡ್ಕರ್ ಗುರುಗಳಾಗಿದ್ದ ಕೇಳುಸ್ಕರ್ ಮಾಸ್ತರ್ ಅವರು ತಮಗೆ ಗೊತ್ತಿದ್ದ ಒಬ್ಬ ವಿಚಾರವಂತ ಗೆಳೆಯನ ಮನೆಗೆ ಕಳಿಸಿದರು. ಆತ ಇವರನ್ನು ಮನೆಯಲ್ಲಿ ಇರಿ ಎಂದರು, ಆತನ ಹೆಂಡತಿ ಮಾತ್ರ ಅಸ್ಪೃಶ್ಯರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಮುಖಕ್ಕೆ ಹೇಳಿದಳು. ಓರ್ವ ಕ್ರೈಸ್ತ ಮಿತ್ರರ ಮನೆಯಲ್ಲೇ ಇದೇ ಕೆಟ್ಟ ಅನುಭವ ಆಯಿತು.
ಇನ್ನು ಕಚೇರಿಯಲ್ಲಿ ಒಬ್ಬ ಜವಾನನೂ ಕೂಡಾ ಅಸ್ಪಶ್ಯರನ್ನು ಮುಟ್ಟಿಸಿಕೊಳ್ಳಬಾರದು ಎಂದು ದೂರದಿಂದಲೇ ಫೈಲುಗಳನ್ನು ದೊಪ್ಪನೆ ಎಸೆದು ಹೋಗುತ್ತಿದ್ದರು.
ಅಧಿಕಾರಿಗಳ ಕ್ಲಬ್ ಗೆ ಸೇರಲು ಹೋದರೆ ಅಲ್ಲಿಯೂ ಇವರಿಗೆ ತಿರಸ್ಕಾರದ ಅವಮಾನವಾಯಿತು.
ಕೊನೆಗೆ ಒಬ್ಬ ಪಾರ್ಸಿಗಳ ಮನೆಯಲ್ಲಿ ಜಾತಿಯ ಹೆಸರು ಹೇಳದೇ ಕೇವಲ ಹಿಂದೂ ಎಂದರು. ಅವರೂ ಸಹ ಇಂಗ್ಲಿಷ್ ಮಾತಾಡುತ್ತಿದ್ದ ಈತ ಉನ್ನತ ಜಾತಿಯವನೇ ಇರಬೇಕೆಂದು ಮನೆ ನೀಡಿದರು.
ಆದರೆ ಯಾವಾಗ ಇವರು ಅಸ್ಪೃಶ್ಯ ಸಮುದಾಯದವರು ಎಂದು ತಿಳಿಯತೋ ಆ ಮನೆಯ ಯಜಮಾನ ಇವರನ್ನು ನಡೆಯೋ ಆಚೆಗೆ ಎಂದುಬಿಟ್ಟ!
ಆಗ ಅಂಬೇಡ್ಕರ್ ಅವರು ಮುಂದೆ ಎಲ್ಲಿರಬೇಕೆಂದು ತೋಚದೇ ಯಾರಿಗೂ ತಿಳಿಯದಂತೆ ಅಟ್ಟದ ಮೇಲೆ ಇರುತ್ತೇನೆ ಎಂದು ಹೇಳಿ, ಅಟ್ಟದ ಮೇಲಿನ ಸಾಮಾನಿನ ರಾಶಿ ಹಾಗು ಧೂಳಿನ ನಡುವೆ, ಒಂದು ಮುರುಕು ಕುರ್ಚಿ ಹಾಗೂ ಕಾಟಿನ ಮೇಲೆ ಯಾರಿಗೂ ಕಾಣದಂತೆ ಕಾಲ ಕಳೆಯತೊಡಗಿದರು.
ಆದರೆ ಮುಂದೆ ಇದು ಹೇಗೋ ಪಾರ್ಸಿಗಳಿಗೆ ಗೊತ್ತಾಗಿ ಅವರು ಲಾಠಿ ಹಿಡಿದು ಬಂದು ನಿಂತ ನೆಲದಲ್ಲೇ ಹೊರಗಡೆ ಹೋಗದಿದ್ದರೆ ಕೊಂದು ಬಿಡುವುದಾಗಿ ಧಮಕಿ ಹಾಕಿದರು.
ಆಗ ಜೀವ ಉಳಿದರೆ ಸಾಕೆಂದು ಇದ್ದ ಸಾಮಾನುಗಳು ಮತ್ತು ಪುಸ್ತಕಗಳೊಂದಿಗೆ ಅಂಬೇಡ್ಕರ್ ಅವರು ಬೀದಿಗೆ ಬಂದು ನಿಂತರು. ಯಾವ ಗೆಳೆಯರ ಸಹಾಯವೂ ಇಲ್ಲದೇ, ಕೂರಲು ಸ್ಥಳವಿಲ್ಲದೇ ಒಳಗೆ ಬಿಟ್ಟುಕೊಳ್ಳುವ ಗೆಳೆಯರ ಮನೆಗಳೂ ಇಲ್ಲದೇ ಅಕ್ಷರಶಃ ಅವಮಾನ ಅನುಭವಿಸಿದರು.
ಆಗ ಒಂದು ಮರದ ಕೆಳಗೆ ಕೂತ ಅಂಬೇಡ್ಕರ್ ಅವರು " ಎಷ್ಟು ಕಷ್ಟಪಟ್ಟು ವಿದೇಶದಲ್ಲಿ ಉನ್ನತ ವ್ಯಾಸಾಂಗ ನಡೆಸಿ, ಪದವಿ ಪಡೆದರೂ ತಾನು ಹುಟ್ಟಿದ ಭಾರತದ ನೆಲದಲ್ಲಿ ಇರುವ ಜಾತಿಯ ಮುಂದೆ ತನ್ನ ವಿದ್ಯೆ, ಗುಣ ಮತ್ತು ಜ್ಞಾನ ಯಾವುದೂ ಲೆಕ್ಕಕ್ಕೆ ಇಲ್ಲದೇ ಹೋಯಿತಲ್ಲಾ... ಎಂದು ಯೋಚಿಸುತ್ತಾ, ತನ್ನ ಅಸಹಾಯಕತೆ ಮತ್ತು ಅವಮಾನವನ್ನು ನೆನೆದು ಬಾಬಾ ಸಾಹೇಬರು ಬಿಕ್ಕಿ ಬಿಕ್ಕಿ ಅಳುತ್ತಾರೆ.
ನಮಗಾಗಿ ಬದುಕಿನ ಉದ್ದಕ್ಕೂ ಹೋರಾಟ ನಡೆಸಿದ ಬಾಬಾ ಸಾಹೇಬರು ಎಂತಹ ಸ್ಥಿತಿ ಎದುರಿಸಿದ್ದರು ಅಲ್ಲವೇ?
- ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
#situation #BabaSaheb #foughtforus #throughout #life #face #HCMahadevappa #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಕೆ.ವಿ.ಪ್ರಭಾಕರ್
ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ "ಕನ್ನಡ ಸಿನಿ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ" ದ ಅಧ್ಯಕ್ಷತೆ ವಹಿಸಿ ಮಾತನಾಡೀದ ಅವರು, ಹಿಂದೆಲ್ಲಾ ಸಿನಿಮಾಗಳು, ಸಿನಿಮಾದ ಪಾತ್ರಗಳು ನಮ್ಮ ಬದುಕಿನ ಭಾಗ ಆಗಿರುತ್ತಿದ್ದವು. ಹೀಗಾಗಿ ಜನ ಕನ್ನಡ ಸಿನಿಮಾಗಳಿಗೆ ಮುಗಿಬೀಳುತ್ತಿದ್ದರು. ಆಗ ಯಾವ ಹೀರೋಗಳೂ ಇವತ್ತಿನ ಹೀರೋಗಳಂತೆ ನಮ್ಮ ಸಿನಿಮಾ ನೋಡಿ ಎಂದು ಗೋಗರೆಯುತ್ತಿರಲಿಲ್ಲ. ಹಿಂದಣ ಹೆಜ್ಜೆಯನ್ನರಿಯದವನು ಮುಂದನ ಹೆಜ್ಜೆಯನ್ನಿಡಲಾರನು ಎಂದರು.
ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್ ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ ಎಂದರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಸಿನಿ ಪಯಣದ ಸುವರ್ಣ ಸಂಭ್ರಮ"ಕ್ಕಾಗಿ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಅರ್ಥಪೂರ್ಣ ಸಂಗತಿ. 50 ವರ್ಷಗಳ ಕನ್ನಡ ಸಿನಿಮಾ ಪಯಣವನ್ನು ಮೆಲುಕು ಹಾಕುತ್ತಲೇ, ಈ 50 ವರ್ಷಗಳಲ್ಲಿ ಕನ್ನಡ ಸಿನಿಮಾ ಪರಂಪರೆಯನ್ನು ಗಟ್ಟಿಗೊಳಿಸಿದ ಐದು ಮಂದಿ ಹಿರಿಯರನ್ನು ಗುರುತಿಸಿದ್ದೇವೆ. ಪಾರ್ವತಮ್ಮ ರಾಜ್ ಕುಮಾರ್, ಎಸ್. ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಡಾ.ಜಯಮಾಲ ಅವರ ಕೊಡುಗೆಗಳನ್ನು ನಾವು ಗುರುತಿಸುತ್ತಿದ್ದೇವೆ. ಈ ಐದು ಮಂದಿಯ ಸಾಧನೆಗಳನ್ನು ಮೆಲುಕು ಹಾಕುವುದೆಂದರೆ ಇಡೀ ಕನ್ನಡ ಸಿನಿಮಾ ಪರಂಪರೆಯ ಅರ್ಧ ಶತಮಾನವನ್ನು ಹಿಂದಿರುಗಿ ನೋಡಿದಂತೆ ಎಂದರು.
ಗಿರೀಶ್ ಕಾಸರವಳ್ಳಿ ಅವರು ಕನ್ನಡಕ್ಕೆ ನಾಲ್ಕು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾಗಳ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಖ್ಯಾತ ಛಾಯಾಗ್ರಾಹಕರಾದ ಎಸ್.ರಾಮಚಂದ್ರ ಅವರು ಕನ್ನಡದ ಪರ್ಯಾಯ ಚಿತ್ರಗ ಳ ಪರಂಪರೆಯ ನೆರಳು - ಬೆಳಕು ಇದ್ದ ಹಾಗೆ. ಅರ್ಧ ಶತಮಾನದ ಪರ್ಯಾಯ ಸಿನಿಮಾಗಳಿಗಾಗಿ ಕನ್ನಡಕ್ಕೆ ಸಿಕ್ಕಿರುವ ಮಾನ್ಯತೆಗಳ ಹಿಂದೆ ಎಸ್.ರಾಮಚಂದ್ರ ಅವರ ಕ್ಯಾಮರಾ ಕಣ್ಣುಗಳು ಇವೆ ಎಂದರು.
ಪಾರ್ವತಮ್ಮ ರಾಜ್ ಕುಮಾರ್ ಅವರು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ 80ಕ್ಕೂ ಹೆಚ್ಚು ಸದಭಿರುಚಿಯ ಜೊತೆಗೆ ಜನಪ್ರಿಯ ಸಿನಿಮಾಗಳನ್ನು ಕನ್ನಡ ಜಗತ್ತಿಗೆ ಮತ್ತು ಸಿನಿಮಾ ಜಗತ್ತಿಗೆ ನೀಡಿದವರು. ಏಕಕಾಲಕ್ಕೆ ಯಶಸ್ವಿ ಮತ್ತು ಸಮಾಜಮುಖಿಯಾದ ಸದಭಿರುಚಿಯ ಸಿನಿಮಾಗಳನ್ನು ನೀಡಿ ಗೆಲ್ಲುವುದು ಸುಲಭದ ಮಾತಲ್ಲ. ಈ ಸಾಹಸದಲ್ಲಿ ಪಾರ್ವತಮ್ಮ ಅವರು ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಕನ್ನಡ ಬೆಳ್ಳಿ ಪರದೆಯನ್ನು ಗೆಲ್ಲಿಸಿದ್ದಾರೆ ಎಂದರು.
ಜಯಮಾಲ ಅವರು ತುಳು ಸಿನಿಮಾಗಳ ಮೂಲಕ ಸಿನಿಮಾ ಪ್ರಪಂಚಕ್ಕೆ ಬಂದರು. ಭೂತಯ್ಯನ ಮಗ ಅಯ್ಯು ಸಿನಿಮಾದ ಹಾಡೊಂದರ ಮೂಲಕ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಜಗತ್ತನ್ನು ಬೆಳಗಿಸಿದರು. ತಾವೂ ಬೆಳಗಿದರು. ಜಯಮಾಲ ಅವರು ಕೇವಲ ನಟಿ ಮಾತ್ರವಲ್ಲ. ನಿರ್ಮಾಪಕಿ ಆಗಿಯೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಒದಗಿಸಿದ್ದಾರೆ. "ತಾಯಿ ಸಾಹೇಬ" ಸಿನಿಮಾದ ನಿರ್ಮಾಪಕಿಯೂ ಆಗಿ, ನಟಿಯೂ ಆಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದ್ದಾರೆ. ಜೊತೆಗೆ ಮಹಿಳಾ ಸಂವೇದನೆ ವಿಷಯದಲ್ಲಿ ಟಿ ಎಚ್ ಡಿ ಮಾಡಿ ಡಾ.ಜಯಮಾಲ ಆಗಿದ್ದಾರೆ ಎಂದರು.
ಶಂಕರ್ ಸಿಂಗ್ ಅವರ ಪುತ್ರ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಇಡೀ ಕುಟುಂಬ ಸಿನಿಮಾ ಕುಟುಂಬ. ಹಿಂದಿ, ತೆಲುಗು, ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳನ್ನು ನಿರ್ದೇಶಿಸಿ ಉತ್ತರ-ದಕ್ಷಿಣ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಹೀಗಾಗಿ ಈ ಐದೂ ಮಂದಿಯ ಅರ್ಧ ಶತಮಾನದ ಕೊಡುಗೆಗಳು ಕನ್ನಡ ಸಿನಿಮಾದ ಮುಂದಿನ ಒಂದು ಶತಮಾನಕ್ಕೆ ಮಾರ್ಗದರ್ಶಿ ಆಗಲಿ ಎಂದು ಆಶಿಸುತ್ತೇನೆ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಲಾ ಅವರು ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಇರುವವರೆಗೆ ಸಬ್ಸಿಡಿ ನಿಲ್ಲುವುದಿಲ್ಲ ಎಂದರು.
ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸಿಂಗ್ ಬಾಬು, ಪೂರ್ಣಿಮಾ ರಾಜ್ ಕುಮಾರ್, ಜಯಮಾಲಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಹಾಜರಿದ್ದರು.
#Cinemas #distant #roots #Kannada #literature #culture #KVPrabhakar #internationalfilmfestival #bangalore #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ: ಸಿದ್ದರಾಮಯ್ಯ
ಭಾರತ & ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ Narendra Modi ಅವರು ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ.
ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗಬೇಕಾಗುತ್ತದೆ. ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ ನಡೆಯಬಾರದು. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬಂದಿರುವ ವಿಧಿ-ವಿಧಾನಗಳನ್ನು ಗಮನಿಸಿದರೆ ಇದು ಒಡೆಯನ ಅಜ್ಞೆಗೆ ಸೇವಕ ತಲೆಯಾಡಿಸಿದಂತಿದೆ.
ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಯರ್ರಾಬಿರ್ರಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಸಿದ್ದರು. ಈಗ ಅದನ್ನು 25%ರಿಂದ 18%ಕ್ಕೆ ಇಳಿಸಿ ಭಾರತಕ್ಕೆ ಮಹದುಪಕಾರ ಮಾಡಿದಂತೆ ನಾಟಕವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿದೆ. ಮೇಲ್ನೋಟದಲ್ಲಿಯೇ ಈ ತಾರತಮ್ಯದಿಂದ ಆಗಿರುವ ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ.
ಸದ್ಯ ಭಾರತ ಶೇಕಡಾ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಇದು ಭಾರತದ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದ್ದು ಅದರ ಪರಿಣಾಮವಾಗಿ ಉಳಿದ ಅಗತ್ಯವಸ್ತುಗಳು ಕೂಡಾ ದುಬಾರಿಯಾಗಲಿದೆ.
ಈ ಒಪ್ಪಂದದಿಂದ ಆಗಲಿರುವ ಸಣ್ಣಪುಟ್ಟ ಲಾಭಗಳನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಭಾರತೀಯರಿಗೆ, ಮುಖ್ಯವಾಗಿ ದೇಶದ ರೈತ ಸಮುದಾಯಕ್ಕೆ ಆಗುತ್ತಿರುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಈ ಒಪ್ಪಂದವನ್ನು ಅಮೆರಿಕದ ರೈತ ಸಮುದಾಯ ಒಕ್ಕೊರಲಿನಿಂದ ಸ್ವಾಗತಿಸಿ ಕುಣಿದಾಡುತ್ತಿರುವುದೇ ಈ ಒಪ್ಪಂದ ಭಾರತದ ರೈತರ ಪಾಲಿನ ಮರಣಶಾಸನವಾಗಲಿದೆ ಎಂಬುದಕ್ಕೆ ಸೂಚನೆಯಾಗಿದೆ.
ಭಾರತಕ್ಕೆ ಹೋಲಿಸಿದರೆ ಅತೀ ಹೆಚ್ಚಿನ ಪ್ರಮಾಣದ ಸಬ್ಸಿಡಿ ಪಡೆಯುತ್ತಿರುವ ಅಮೆರಿಕದ ರೈತರು ಭಾರತದ ಕೃಷಿ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಈ ಅಪಾಯವನ್ನು ತಪ್ಪಿಸಲಿಕ್ಕಾಗಿಯೇ ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಅಮೆರಿಕದಿಂದ ಆಮದಾಗುತ್ತಿರುವ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ಹೇರುತ್ತಾ ಬಂದಿವೆ. ಈಗ ಈ ಆಮದು ಸುಂಕವನ್ನು ರದ್ದುಗೊಳಿಸದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ.. ಇದರಿಂದ ಭಾರತದ ರೈತರು ದಿವಾಳಿ ಸ್ಥಿತಿ ತಲುಪಲಿದ್ದು, ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು.
ಸಂಪೂರ್ಣವಾಗಿ ಶರಣಾಗತಿಯಾಗಿರುವ ಈ ಒಪ್ಪಂದಕ್ಕೆ ಭಾರತೀಯರ ಹಿತರಕ್ಷಣೆಯ ಉದ್ದೇಶ ಖಂಡಿತ ಇಲ್ಲ. ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೋದಿಯವರ ಉದ್ಯಮ ಸ್ನೇಹಿತ ಅದಾನಿ ಅವರ ರಕ್ಷಣೆ ಮತ್ತು ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗವಾಗಿ ಕೇಂದ್ರ ಸರ್ಕಾರ ದೇಶ ವಿರೋಧಿಯಾಗಿರುವ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಲು ಸಾಧ್ಯವೇ?
ಜಾಗತಿಕವಾಗಿ ಭಾರತ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ರಾಜತಾಂತ್ರಿಕವಾಗಿ ಎದುರಾಗುವ ಒತ್ತಡಗಳನ್ನು ಇಲ್ಲಿಯ ವರೆಗಿನ ಎಲ್ಲ ಪ್ರಧಾನಿಗಳು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂ ಅವರ ಅಲಿಪ್ತ ನೀತಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿತ್ತು. ಪ್ರಧಾನಿ ಇಂದಿರಾಗಾಂಧಿಯವರು ದೈತ್ಯ ಅಮೆರಿಕದ ಒತ್ತಡವನ್ನು ಕೂಡಾ ಲೆಕ್ಕಿಸದೆ ಪಾಕಿಸ್ಥಾನವನ್ನು ಮಣಿಸಿದ್ದು ಈಗ ಇತಿಹಾಸವಾಗಿದೆ. ಜಾಗತಿಕವಾಗಿ ಎಲ್ಲ ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದಾಗ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಿದ್ದ ಡಾ.ಮನಮೋಹನ್ ಸಿಂಗ್ ಅವರು ಹೊಸ ಆರ್ಥಿಕ ಯುಗದ ಪ್ರವರ್ತಕರಾಗಿದ್ದರು.
ಆದರೆ ಇಂದು ವಿಶ್ವದಲ್ಲಿ ಭಾರತಕ್ಕೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ವಿದೇಶಾಂಗ ನೀತಿ ಎಂದರೆ ಭಾಷಣ, ಘೋಷಣೆ, ಕೈಕುಲುಕಾಟ ಮತ್ತು ಸ್ವಪ್ರಚಾರವಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿದುಕೊಂಡಂತಿದೆ. ಚೀನಾ ಮತ್ತು ಅಮೆರಿಕದಂತಹ ದೈತ್ಯ ಶಕ್ತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತ ತನ್ನ ಅಸ್ಮಿತೆಯನ್ನು ಸಂಪೂರ್ಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ಮೋದಿ ಅವರು ಈಗ ಅದೇ ಟ್ರಂಪ್ ರ ಆಜ್ಞಾಪಾಲಕರಾಗುವ ದೈನೇಸಿ ಸ್ಥಿತಿಗೆ ಬಂದಿದ್ದು ವಿಷಾದನೀಯ. ಮೋದಿಯವರ 56 ಇಂಚಿನ ಎದೆ ಮತ್ತು ವಿಶ್ವಗುರುವಿನ ಕಿರೀಟವನ್ನು ಟ್ರಂಪ್ ಪ್ರತಿದಿನ ಕುಟ್ಟಿ ಪುಡಿ ಮಾಡುತ್ತಿದ್ದಾರೆ.
ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಮತ್ತು ಸಾಮಾಜಿಕ ನೀತಿಯ ವರೆಗೂ ಎಲ್ಲ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವ ಪ್ರಧಾನಿ ಮೋದಿಯವರು ರಾಜೀನಾಮೆ ಕೊಟ್ಟು ದೇಶದ ಮತ್ತು ಅಳಿದುಳಿದ ಅವರ ಗೌರವವನ್ನು ಉಳಿಸಿಕೊಳ್ಳುವುದು ಒಳ್ಳೆಯದು.
- ಸಿದ್ದರಾಮಯ್ಯ, ಸಿಎಂ
#NarendraModi #IndiaUsTradeDeal #completely #surrendered #America #Siddaramaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ರನ್ ಫಾರ್ ಲೈಫ್ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ – 2026 ರಲ್ಲಿ ದರ್ಶನ್ ಪುಟ್ಟಣ್ಣಯ್ಯ ಭಾಗಿ
ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡರಿಗೆ ಸನ್ಮಾನ
ಕ್ಯಾನ್ಸರ್ ತಪಾಸಣಾ ಶಿಬಿರ
ಮಂಡ್ಯ: ಪಾಂಡವಪುರದಲ್ಲಿ ಶಂಭುಲಿಂಗೇಶ್ವರ ಪಿಯು ಕಾಲೇಜು ಆಯೋಜಿಸಿದ್ದ ರನ್ ಫಾರ್ ಲೈಫ್ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ – 2026 ರಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾದರು. ಮ್ಯಾರಾಥಾನ್ ನಲ್ಲಿ ನೂರಾರು ನಾಗರಿಕರು ಹೆಜ್ಜೆ ಹಾಕುವ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸಿದರು.
ಕ್ಯಾನ್ಸರ್ ಜಾಗೃತಿಯ ಭಾಗವಾಗಿ ಭಾರತಿ ಆಸ್ಪತ್ರೆ ವತಿಯಿಂದ ಉಚಿತ ಕ್ಯಾನ್ಸರ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ನಾಗರಿಕರು ಸ್ವಯಂಪ್ರೇರಿತರಾಗಿ ಈ ಕ್ಯಾನ್ಸರ್ ಆರೋಗ್ಯ ತಪಸಾಣಾ ಶಿಬಿರದಲ್ಲಿ ಭಾಗವಹಿಸಿದರು.
ಇನ್ನು ಶಿಬಿರದಲ್ಲಿ ೨೦೨೬ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಮ್ಯಾರಾಥಾನ್ ನಲ್ಲಿ ವಿಜೇತರಿಗೆ ನಗದು ಪುರಸ್ಕಾರವನ್ನು ನೀಡಲಾಯಿತು.
#DarshanPuttannaiah #participate #RunforLife #Cancer #Awareness #Marathon2026 #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸುಬ್ಬು ಹೊಲೆಯಾರ್ ಅವರಿಗೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ರಾಷ್ಟ್ರೀಯ ಪುರಸ್ಕಾರ ಪ್ರದಾನ
ಬೆಂಗಳೂರು: ಪ್ರೊ. ಜಿ.ಎಸ್ ಶಿವರುದ್ರಪ್ಪ ಮತ್ತು ಪ್ರೊ. ಯು.ಆರ್.ಅನಂತಮೂರ್ತಿ ಸಾಂಸ್ಕೃತಿಕ ಜಂಟಿ ಕ್ರಿಯಾ ಸಮಿತಿ ಆಯೋಜನೆ ಮಾಡಿದ್ದ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಕಲಾಗ್ರಾಮದ ಎನ್ ಎಸ್ ಡಿ ಆವರಣದಲ್ಲಿರುವ ಪುಣ್ಯ ಭೂಮಿಯಲ್ಲಿ ವಿಜೃಂಭಣೆಯಿಂದ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಜಿಎಸ್ ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಪ್ರಯುಕ್ತ ಕಾವ್ಯ ವಾಚನ, ಗೀತೆ ಗಾಯನ, ಪ್ರಶಸ್ತಿ ಪ್ರಧಾನ, ಪುಷ್ಪ ನಮನ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಬೈರಮಂಗಲ ರಾಮೇಗೌಡ ವಹಿಸಿದ್ದರು. ಸಮಾರಂಭದಲ್ಲಿ ಡಾ.ಎಂ.ಪ್ರಭು ಜಯರಾಮ್, ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ, ಆಯೋಜಕರಾದ ಕುಮಾರ್ ಕೆ.ಹೆಚ್ ರಂಗೋತ್ರಿ, ಕವಿಗೋಷ್ಠಿ ಅಧ್ಯಕ್ಷ ಡಾ. ಹೆಚ್. ಲಕ್ಷ್ಮಿ ನಾರಾಯಣ, ಲಕ್ಷಿ ಶ್ರೀನಿವಾಸ್, ಮಂಜು ಪಾಂಡವಪುರ, ರಾಜು ಪವಾರ್, ವಕೀಲ ಶ್ಯಾಮ್ ಕುಮಾರ್ ಎ. ವಿ, ಮಲ್ಲಿಕಾರ್ಜುನ ಮಹಾಮನೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಡಿನ ಖ್ಯಾತ ಕವಿಗಳಲ್ಲಿ ಒಬ್ಬರಾದ ಸುಬ್ಬು ಹೊಲೆಯಾರ್ ಅವರಿಗೆ ಡಾ. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದಂತಹ ಡಾ.ಬಿ.ಟಿ.ಲಲಿತ ನಾಯಕ್, ಡಾ.ಸತೀಶ್ ಕುಮಾರ್ ಎಸ್ ಹೊಸಮನಿ, ಕುಮಾರ್ ಕೆ ಎಚ್., ಪ್ರಭು ಜಯರಾಮ್, . ಬೈರಮಂಗಲ ರಾಮೇಗೌಡ, ಡಾ. ಎಆರ್ ಗೋವಿಂದ ಸ್ವಾಮಿ ಸುಬ್ಬು ವಲಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಡಾ. ಹನುಮಂತ್ ರಾಯಪ್ಪ, ಮಂಜು ಪಾಂಡವಪುರ, ರಾಜು ಪವಾರ್, ಶ್ಯಾಮ್ ಕುಮಾರ್ ಎ.ವಿ , ಸುಮನ ಮುಂತಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತಾಯಿ ರಮಾಬಾಯಿ ಅಂಬೇಡ್ಕರ್ ಅವರ ನೆನಪಿನಲ್ಲಿ ಕುವೆಂಪು, ಯೂ ಆರ್ ಅನಂತಮೂರ್ತಿ, ಜಿ ಎಸ್ ಶಿವರುದ್ರಪ್ಪ, ಡಾ.ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಲತಾ ಜಿ.ಎಲ್, ರಕ್ಷಿತ್ ಕುಮಾರ್ ರವರಿಗೆ ಶ್ರೀ ಪ್ರಭು ಜಯರಾಮ್ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಬಿ .ಟಿ ಲಲಿತ ನಾಯಕ್ ರವರು ಮಾತನಾಡಿ, ಸಿನಿಮಾ ನಟರಿಗೆ ಉತ್ಕೃಷ್ಟವಾಗಿ ಸ್ಮಾರಕಗಳನ್ನು ನಿರ್ಮಿಸಿದಂತೆ ಕಲಾಗ್ರಾಮದಲ್ಲಿರುವ ಡಾ.ಜಿ.ಎಸ್ ಶಿವರುದ್ರಪ್ಪ, ಯು.ಆರ್ ಅನಂತಮೂರ್ತಿ, ಡಾ. ಸಿದ್ದಲಿಂಗಯ್ಯರವರ ಸಮಾಧಿಗಳನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ಈ ಸಂಸ್ಥೆಯೊಂದಿಗೆ ಜೊತೆಗೂಡಿ ಸರ್ಕಾರವು ಅಭಿವೃದ್ಧಿಪಡಿಸಬೇಕೆಂದು ಆಗ್ರಹಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಬೈರಮಂಗಲ ರಾಮೇಗೌಡ, ಈ ಪ್ರದೇಶದಲ್ಲಿ ಜಿಎಸ್ ಶಿವರುದ್ರಪ್ಪ ರವರ ಸ್ಮಾರಕದ ಜೊತೆಗೆ ಒಂದು ಗ್ರಂಥಾಲಯ ಮತ್ತು ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ರಂಗಮಂದಿರ ತುರ್ತಾಗಿ ನಿರ್ಮಾಣಮಾಡಿ ಅವರ ಹೆಸರು ಇಡಬೇಕೆಂದು ಒತ್ತಾಯಿಸಿದರು.
ನಂತರ ಸ್ಮಾರಕಗಳನ್ನ ನಿರ್ಮಿಸಲು ತಿಳಿಸಿದವರ ಉದ್ದೇಶವನ್ನು ತಿಳಿಯದ ಸರ್ಕಾರ ಹಾಗೂ ಸಂಸ್ಕೃತಿ ಇಲಾಖೆ ಸ್ಮಾರಕ ನಿರ್ಮಾಣ ಮಾಡಿದ್ದು ಆ ಸ್ಮಾರಕಗಳ ಉದ್ದೇಶವನ್ನು ಅರಿಯುವ ಮನಸ್ಸು ಮಾಡಬೇಕು ಎಂದು ಸರ್ಕಾರಕ್ಕೆ ಎಲ್ಲರೂ ಸೇರಿ ಚಾಟಿ ಬೀಸಬೇಕು ಎಂದರು.
#SubbuHoleyar #awarded #NationalPoet #GSShivarudrappa #NationalAward #malgudiexpress #malgudinews #news #TopNews













