#📜ಪ್ರಚಲಿತ ವಿದ್ಯಮಾನ📜
ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ
ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ
ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ನಾಳೆ(ಫೆಬ್ರವರಿ 12) ಅಖಿಲ ಭಾರತ ಮಹಾಮುಷ್ಕರ ನಡೆಯಲಿದ್ದು, ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ, ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸುವ ಮೂಲಕ ರೈತ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಪರವಾಗಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ಭಾರತದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ನಾಶ ಮಾಡಲು ಕಾರ್ಮಿಕ ಚಳುವಳಿಯನ್ನು ಹತ್ತಿಕ್ಕಲು ಹಾಗೂ ಬಂಡವಾಳಿಗರ ಲಾಭದ ಹಿತಾಸಕ್ತಿಗಳನ್ನು ಕಾಪಾಡಲು ಪ್ರಮುಖ 29 ಕಾನೂನುಗಳನ್ನು ರದ್ದುಗೊಳಿಸಿ, ಉದ್ಯಮಸ್ನೇಹಿ ಹೆಸರಿನಲ್ಲಿ ಕಾರ್ಪೊರೇಟ್ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.ಮತ್ತೊಂದು ಕಡೆ ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಜಾರಿಗೊಳಿಸಿರುವುದು ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡಿ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೃಷಿಕೂಲಿಕಾರರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ತಿಳಿಸಿದೆ.
ಇಂದು ದೇಶಾದ್ಯಂತ ನಡೆಯಲಿರುವ ಮಹಾಮುಷ್ಕರದ ಭಾಗವಾಗಿ ದ.ಕ.ಜಿಲ್ಲೆಯ ತೊಕ್ಕೋಟು, ಮಂಗಳೂರು, ಗುರುಪುರ ಕೈಕಂಬ, ಮೂಡಬಿದ್ರೆ,ಬಿ ಸಿ ರೋಡ್, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಎಲ್ಲಾ ತಾಲೂಕು, ವಲಯ ಕೇಂದ್ರಗಳಲ್ಲಿ ರಸ್ತೆತಡೆ, ಮೆರವಣಿಗೆ, ಹಾಗೂ ಪ್ರತಿಭಟನಾ ಸಭೆಗಳು ವ್ಯಾಪಕವಾಗಿ ಜರುಗಲಿದೆ. ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯಾರ್ಥಿ ಯುವಜನರು,ಮಹಿಳೆಯರು, ದಲಿತ ಆದಿವಾಸಿ ಸೇರಿದಂತೆ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ದೃಢವಾಗಿ ವಿರೋಧಿಸಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (JCTU) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
#AllIndia #general #strike #led #farmer #workers #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಫೆಬ್ರವರಿ 15ರಂದು ಕಿ.ರಂ. ನೆನಪಿನ ಕಾವ್ಯ ಶಿವರಾತ್ರಿ
ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಬೆಂಗಳೂರು ಹಾಗೂ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಇದೇ 15 ಫೆಬ್ರವರಿ 2026, ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಬೆಂಗಳೂರು ವಿವಿ ಜ್ಞಾನಭಾರತಿಯ ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ವಿಮರ್ಶಕ ಪ್ರೊ ಕಿ.ರಂ.ನಾಗರಾಜ ನೆನಪಿನ ಕಾವ್ಯಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಮಹಾಕಾವ್ಯ ಗಾಯನವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರು ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಸಂಜೆ 6.00
ಕವಿಗೋಷ್ಠಿ
ಚಾಲನೆ: ಡಾ.ಎಚ್. ಲಕ್ಷ್ಮೀನಾರಾಯಣಸ್ವಾಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತರು
ಅಧ್ಯಕ್ಷತೆ: ಚಲಂ ಹಾಡ್ಲಹಳ್ಳಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಭಾಗವಹಿಸುವ ಕವಿಗಳು
ಚಾಂದ್ ಪಾಷಾ
ಅಮರಾವತಿ ಕೆ.
ದಾದಾಪೀರ್ ಜೈಮನ್
ಶ್ರೀಧರ ಸಿ.
ಮಂಜುಳಾ ಹುಲಿಕುಂಟೆ
ಇಂಚರ ನಾರಾಯಣಸ್ವಾಮಿ
ಎಂ.ಎಸ್. ಸಿದ್ದಾರ್ಥ
ಆನಂದ ಕುಮಾರ್ ಎಸ್.ಡಿ
ಹಾಜಿರಾ ಖಾನಂ
ಗುಂಡಿಗೆರೆ ವಿಶ್ವನಾಥ್
ಚಿನ್ನೇನಹಳ್ಳಿ ಸ್ವಾಮಿ
ಸೈಯ್ಯದ್ ಯೇಜಸ್ ಪಾಶ
ದಯಾನಂದ ಹುಲಗುತ್ತೂರು
ಶಿವಕುಮಾರ್ ಕೆಂಪನಪುರ
ಕಾಂತರಾಜಪುರ ಸುರೇಶ್
ಕಮರವಾಡಿ ಮಹದೇವಸ್ವಾಮಿ
ಕುಮಾರ್ ಇಂದ್ರಬೆಟ್ಟ
ಡಾ.ಪಿ ಪ್ರೇಮ
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕರಾದ ಡಾ.ಟಿ.ವೆಂಕಟೇಶಮೂರ್ತಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಜಯಕರ್ ಎಸ್.ಎಂ. ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ, ಇವರು ವಹಿಸಲಿದ್ದಾರೆ.
ಕಿರಂ ಕಾವ್ಯ ಶಿವರಾತ್ರಿ ಪುರಸ್ಕಾರ ಪ್ರದಾನ:
ಪ.ಸ. ಕುಮಾರ್, ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು
ಪುರಸ್ಕೃತರು: ಶೃತಿ ಶಿಲ್ಪಿ ಏಕತಾರಿ ರಾಮಯ್ಯ ಚಂಚನ ಪಾಳ್ಯ, ಬೆಂಗಳೂರು
ಮುಖ್ಯ ಅತಿಥಿಗಳಾಗಿ ಶಾಂತಲಾ ಕೆ ಟಿ, ಕುಲಸಚಿವರು, ಬೆಂಗಳೂರು ವಿಶ್ವವಿದ್ಯಾಲಯ, ಡಾ. ಸಿ ಎಸ್ ಕರಿಗಾರ್ ಕುಲಸಚಿವರು (ಮೌಲ್ಯಮಾಪನ) ಬೆಂಗಳೂರು ವಿಶ್ವವಿದ್ಯಾಲಯ, ಸಿಂಡಿಕೇಟ್ ಸದಸ್ಯರಾದ ಡಾ. ಕೆ.ಷರೀಫ, ರಮೇಶ್ ಬಾಬು, ಗಂಗರಾಜು, ಮಹದೇವ ನಾಯಕ್ ಹಾಗೂ ಕಿ.ರಂ ಮಕ್ಕಳಾದ ಕೆ.ಎನ್. ಸಹನ, ಕೆ.ಎನ್.ಕವನ, ಕೆ.ಎನ್.ಚಂದನ ಭಾಗವಹಿಸಲಿದ್ದಾರೆ.
ಪ್ರೊ. ಬಿ. ಗಂಗಾಧರ, ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಸ್ವಾಗತವನ್ನು ಡಾ. ಪ್ರದೀಪ್ ಮಾಲ್ಗುಡಿ, ಅಧ್ಯಕ್ಷರು ಜನಸಂಸ್ಕೃತಿ ಪ್ರತಿಷ್ಠಾನ ಮಾಡಲಿದ್ದಾರೆ. ಕಾರ್ಯಕ್ರಮವನ್ನು ನಿರ್ಮಲಾ ನಾದನ್ ನಿರ್ವಹಿಸಲಿದ್ದಾರೆ.
ಕಾವ್ಯಶಿವರಾತ್ರಿ ಕುರಿತು
ಪ್ರೊ ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು.
ಈ ಬಾರಿ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೊ: 9448160398, 9844086993
#KavyaShivaratri #memory #Kiram #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಿ ಕೆ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದ ಪಾಲಿಗೆ ಸುವರ್ಣ ಕಾಲ
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ರಾಜ್ಯದ ಸಚಿವರುಗಳಿಂದ ರಾಜ್ಯಕ್ಕೆ ಮೂರು ಕಾಸಿನ ಅನುಕೂಲ ಆಗುತ್ತಿಲ್ಲ .ಆದರೆ ಪದೇ ,ಪದೇ ರಾಜ್ಯ ಸರ್ಕಾರವನ್ನ ಟೀಕೆ ಮಾಡುವುದರಲ್ಲಿ ಮಾತ್ರ ಹಿಂದೆ ಬೀಳುವುದಿಲ್ಲ. ಆದರೆ ನಿಜಕ್ಕೂ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಲ್ಲಿ ಸುವರ್ಣ ಕಾಲವನ್ನು ಒದಗಿಸಿದವರು ಭಾರತ ದೇಶದ ಭೂಪಟದಲ್ಲಿ ರೈಲ್ವೆ ಇಲಾಖೆಯಲ್ಲಿ ಕರ್ನಾಟಕಕ್ಕೆ ಮಹತ್ವವನ್ನ ತಂದು ಕೊಟ್ಟವರು ಸಿ ಕೆ ಜಾಫರ್ ಶರೀಫ್.
ಪಿ,ವಿ ,ನರಸಿಂಹರಾಯರು ಪ್ರಧಾನ ಮಂತ್ರಿಗಳಾಗಿದ್ದಾಗ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಶ್ರೀ ಸಿ ಕೆ ಜಾಫರ್ ಷರೀಫ್ ರವರು ನಿಜಕ್ಕೂ ಸಹ ಈ ರಾಜ್ಯಕ್ಕೆ ಹೆಚ್ಚು ಸೇವೆಯನ್ನು ಸಲ್ಲಿಸಿದ ಕೇಂದ್ರ ಸಚಿವರಾಗಿದ್ದಾರೆ.
ಅವರು ಸಚಿವರಾಗಿದ್ದಾಗ ಇಡೀ ದೇಶದಾದ್ಯಂತ ಆರು ಸಾವಿರ ಕಿಲೋಮೀಟರ್ಗಳ ಗೇಜ್ ಪರಿವರ್ತನೆಯನ್ನ ಮಾಡುವ ಸಂದರ್ಭದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ಗೆಜ್ ಪರಿವರ್ತನೆಯ ಯೋಜನೆಯನ್ನು ಕರ್ನಾಟಕಕ್ಕೆ ನೀಡಿದ್ದಾರೆ.
ಅತ್ಯಂತ ಮಹತ್ವದ ಕೊಂಕಣ್ ರೈಲ್ವೆ ಯೋಜನೆಯ ಅನುಷ್ಠಾನಕ್ಕೆ ಶ್ರಮವನ್ನ ವಹಿಸಿದ್ದಾರೆ.
ಬೆಂಗಳೂರಿನಲ್ಲಿ ರೈಲ್ವೆ ವಲಯವನ್ನು ಸ್ಥಾಪಿಸಿ ನಮ್ಮ ನಾಡಿನ ಜನರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿಯನ್ನ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ರಚಿಸಿ ನಮ್ಮ ಕರ್ನಾಟಕದ ಹೆಚ್ಚಿನ ಜನರು ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ನೆರವು ನೀಡಿದ್ದಾರೆ.
ಬೆಂಗಳೂರು ಮತ್ತು ದೆಹಲಿ ರಾಜಧಾನಿ ಎಕ್ಸ್ಪ್ರೆಸ್ ,ಚೆನ್ನೈ ಬೆಂಗಳೂರು ಶತಾಬ್ದಿ ಎಕ್ಸ್ಪ್ರೆಸ್, ಇವುಗಳು ಇವರ ಕೊಡುಗೆಯಾಗಿದೆ.
ಅತ್ಯಂತ ಮಹತ್ವದ ವೀಲ್ ಅಂಡ್ ಆಕ್ಸೆಲ್ ಕಾರ್ಖಾನೆಯನ್ನು ಯಲಹಂಕದಲ್ಲಿ ಸ್ಥಾಪಿಸಿ ನಮ್ಮ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಕರ್ನಾಟಕದ ಅನೇಕ ಹೊಸ ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿ ಮತ್ತಷ್ಟು ಹೊಸ ಯೋಜನೆಗಳ ಅನುಷ್ಠಾನವಾಗುವಲ್ಲಿ ಅವುಗಳಿಗೆ ಬೇಕಾದ ಆಡಳಿತಾತ್ಮಕವಾದಂತ ಮಂಜೂರಾತಿ ಮತ್ತು ಸಂಪನ್ಮೂಲಗಳ ಒದಗಿಸಿ ಕೊಟ್ಟಿದ್ದಾರೆ.
ಇವರ ಈ ಕೊಡುಗೆಗಳಿಂದಾಗಿ ಬೆಂಗಳೂರು ನಗರದಲ್ಲಿ ರೈಲ್ವೆ ವಲಯದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರಗಳು ನಡೆಯಲು ಸಾಧ್ಯವಾಯಿತು.
ವಿನೂತನವಾದ ತಂತ್ರಜ್ಞಾನವನ್ನು ಒಳಗೊಂಡ ತೂಗು ಸೇತುವೆ ಕೆಆರ್ ಪುರದಲ್ಲಿ ನಿರ್ಮಾಣದ ಹಿಂದೆ ಇವರ ಶ್ರಮವಿದೆ.
ಕರ್ನಾಟಕದ ಜನರು ರೈಲಿನಲ್ಲಿ ಬಿಟ್ಟಿ ಓಡಾಡುತ್ತಿಲ್ಲ ,ಟಿಕೆಟ್ ಗಳನ್ನು ಕೊಂಡು ಪ್ರಯಾಣ ಮಾಡುತ್ತಾರೆ. ರೈಲ್ವೆ ಇಲಾಖೆಯ ಒಟ್ಟಾರೆ ಶೇಖರಣೆಯ ಮೊತ್ತದಲ್ಲಿ ಸುಮಾರು 48 ಸಾವಿರದಿಂದ ಹಿಡಿದು ಐವತ್ತು ಸಾವಿರ ರೂಪಾಯಿಗಳ ಪಾಲು ಕರ್ನಾಟಕದ ರೈಲ್ವೆ ಸಂಚಾರದಿಂದ ಬಂದಿರುತ್ತದೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನೇನು ಕೊಟ್ಟು ಬಿಟ್ಟಿದೆ ಎನ್ನುವ ರೀತಿಯಲ್ಲಿ ತಮ್ಮ ಬೆನ್ನುಗಳನ್ನು ತಾವೇ ತಟ್ಟಿಕೊಳ್ಳುವುದು ಬೇಡ. ಕರ್ನಾಟಕದ ರೈಲ್ವೆ ಇಲಾಖೆಯಲ್ಲಿ ಸಿಕೆ ಜಾಫರ್ ಷರೀಫ್ ರವರ ರೀತಿಯಲ್ಲಿ ಯಾರು ಸಹ ನಮ್ಮ ರಾಜ್ಯದ ಪರವಾಗಿ ಯೋಜನೆಗಳನ್ನು ತರಲು ಇಲ್ಲಿಯ ತನಕ ಸಾಧ್ಯವಾಗಿರುವುದಿಲ್ಲ.
ನಮ್ಮ ಲೋಕಸಭಾ ಸದಸ್ಯರುಗಳು ಮತ್ತು ಕೇಂದ್ರದ ಸಚಿವರು ಕೇವಲ ಟೀಕೆ ಮಾಡುವುದನ್ನು ಬಿಟ್ಟು ಯೋಜನೆಗಳನ್ನ ತಂದು ಕರ್ನಾಟಕದ ಪ್ರಗತಿಗೆ ಚಾಲನೆಯನ್ನು ನೀಡಿ. ರಾಜಕಾರಣದ ಮಾತುಗಳು ಪ್ರತಿದಿನವೂ ಕೇಳಿ ಕೇಳಿ ಎಲ್ಲರಿಗೂ ಸಾಕಾಗಿದೆ .ಅಭಿವೃದ್ಧಿಯ ಮಾತು ಕೇಳಿ ಬರಲಿ. ಯಾರು ಎಷ್ಟು ಕೆಲಸವನ್ನ ಮಾಡಿದ್ದಾರೆ ಎನ್ನುವುದನ್ನು ವಾಟ್ಸಾಪ್ ಗಳು ನಿರ್ಧರಿಸುವುದಿಲ್ಲ. ಇತಿಹಾಸ ದಾಖಲಿಸುತ್ತದೆ.
- ಕೆ ಎಸ್ ನಾಗರಾಜ್, ಬೆಂಗಳೂರು
#goldenera #Karnataka #CKJafferSharif #RailwayMinister #ksnagaraj #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡದ ಸಿನಿತಾರೆಗಳು ಕಣ್ಣಿಗೆ ಕಣ್ಣುತ್ತಿಲ್ಲವೇ?: ಡಾ.ಕೆ.ಸುಧಾಕರ್
ಕರ್ನಾಟಕದ ಸುಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್ ಗೆ ಬ್ರಾಂಡ್ ಅಂಬಾಸಿಡರ್ ನೇಮಿಸಲು ನಮ್ಮದೇ ಕನ್ನಡ ನಾಡಿನ ಅನೇಕ ತಾರೆಗಳು ಇದ್ದರೂ ಪರರಾಜ್ಯದ, ಅನ್ಯಭಾಷೆಯ ಸಿನಿಮಾ ನಟಿಯೊಬ್ಬರನ್ನು ಕೋಟ್ಯಂತರ ರೂಪಾಯಿ ಪೇಮೆಂಟ್ ಕೊಟ್ಟು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ಕನ್ನಡ ವಿರೋಧಿ ಮನಸ್ಥಿತಿಗೆ ಮತ್ತೊಂದು ಸಾಕ್ಷಿ.
ಕನ್ನಡ ಸಿನಿ ತಾರೆಯರಾದ ರಮ್ಯಾ, ರಶ್ಮಿಕಾ ಮಂದಣ್ಣ, ಶ್ರೀನಿಧಿ ಶೆಟ್ಟಿ, ಪೂಜಾ ಹೆಗ್ಡೆ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ನಟಿಯರು ಇವತ್ತು ಅನೇಕ ಭಾಷೆಗಳ ಚಿತ್ರರಂಗದಲ್ಲಿ ಬೇಡಿಕೆಯುಳ್ಳ ಜನಪ್ರಿಯ ನಟಿಯರಾಗಿ ಕನ್ನಡದ ಕೀರ್ತಿ ಪತಾಕೆಯನ್ನ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.
ನಮ್ಮದೇ ಕನ್ನಡ ನಾಡಿನ ನಟಿಯರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕುವ ಕಾಂಗ್ರೆಸ್ ಪಕ್ಷದ ಧೋರಣೆ ಕನ್ನಡ ನಾಡಿನ ಪ್ರತಿಭೆಗಳಿಗೆ ಮಾಡಿರುವ ಅಮಪಾನ ಮಾತ್ರವಲ್ಲ, ಮೈಸೂರು ಸ್ಯಾಂಡಲ್ ಸೋಪಿನ ಅಸ್ಮಿತೆಗೂ ಮಾಡಿರುವ ಘೋರ ಅಪಮಾನ.
ಈ ಕನ್ನಡ ವಿರೋಧಿ, ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ.
- ಡಾ.ಕೆ.ಸುಧಾಕರ್, ಸಂಸದ
#Kannada #film #stars #traitorous #govt #KSudhakar #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
#ಮಿಲ್ಕಿಬ್ಯೂಟಿ
ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿ
ಶತಮಾನಕ್ಕೂ ಮೀರಿದ ಪರಂಪರೆ, ಭವಿಷ್ಯವನ್ನೇ ಗುರಿಯಾಗಿಟ್ಟ ದೃಢ ಸಂಕಲ್ಪ!
ನಾಲ್ವಡಿ ಕೃಷ್ಣರಾಜ ಒಡೆಯರ್- ಸರ್ ಎಂ. ವಿಶ್ವೇಶ್ವರಯ್ಯ–ಮುಂತಾದ ಮಹನೀಯರ ದೂರದೃಷ್ಟಿಯಿಂದ ಹುಟ್ಟಿದ ಕೆ.ಎಸ್.ಡಿ.ಎಲ್ ಇಂದು ಹೊಸ ಯುಗಕ್ಕೆ ಕಾಲಿಡುತ್ತಿದೆ.
ಮೈಸೂರು ಸ್ಯಾಂಡಲ್ ಸೋಪ್ ಗೆ ನವೀನ ರೂಪ, ಉತ್ತರ ಭಾರತವನ್ನೂ ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ಖ್ಯಾತ ನಟಿ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿಯಾಗಿ ನೇಮಕ.
ಯುವಜನಾಂಗ, ಡಿಜಿಟಲ್ ಮಾರುಕಟ್ಟೆ, ರಫ್ತು ವಿಸ್ತರಣೆ-ಎಲ್ಲವನ್ನೂ ಒಟ್ಟುಗೂಡಿಸಿ 2030ರ ಹೊತ್ತಿಗೆ ₹5,000 ಕೋಟಿ ವಹಿವಾಟಿನ ಗುರಿ. ಕರ್ನಾಟಕದ ಸರ್ಕಾರಿ ಸಂಸ್ಥೆ, ರಾಷ್ಟ್ರಮಟ್ಟದ ಬ್ರ್ಯಾಂಡ್ ಆಗುವ ದಿಟ್ಟ ಹೆಜ್ಜೆ!
- ಎಂ ಬಿ ಪಾಟೀಲ್, ಬೃಹತ್ ಕೈಗಾರಿಕಾ ಸಚಿವ
#TamannaahBhatia #ksdl #mysoresandalsoap #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಮೋದಿ ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸತ್ಯವನ್ನು ಎದುರಿಸಲಾಗದ ಹೇಡಿತನ: ಸಿದ್ದರಾಮಯ್ಯ
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ Narendra Modi ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್ಗೆ ತೋರಿಸಿರುವ ಅಗೌರವ ಮಾತ್ರವಲ್ಲ, ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ.
ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರ ಉತ್ತರ ಇಲ್ಲದೆ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಓರ್ವ ಪ್ರಧಾನಿ ಸಂಸತ್ತನ್ನು ನಿರ್ಲಕ್ಷಿಸುವುದೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಡೆ ಎಂದರ್ಥ.
ಅಧಿಕಾರರೂಢ Bharatiya Janata Party (BJP) ಪಕ್ಷ ಮೊದಲು ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದೆ ತಡೆಯಿತು, ನಂತರ ತಾನೂ ಕೂಡಾ ಮಾತನಾಡದೆ ಮೌನಕ್ಕೆ ಶರಣಾಯಿತು. ಇದು ಬಹಳ ಆತಂಕಕಾರಿ ಬೆಳವಣಿಗೆ. ಲೋಕಸಭೆ ವಿಪಕ್ಷ ನಾಯಕ Rahul Gandhi ಅವರು ತಮ್ಮ ವಂದನಾ ನಿರ್ಣಯದ ಭಾಷಣದಲ್ಲಿ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರ ಪುಸ್ತಕದಲ್ಲಿದ್ದ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾದಾಗ ಅವರ ಮಾತನ್ನು ಸಂಪೂರ್ಣವಾಗಿ ತಡೆಯಲಾಯಿತು.
ಆ ಪುಸ್ತಕದಲ್ಲಿ 2020ರ ಚೀನಾ ಗಡಿ ಸಂಘರ್ಷದ ಸಂದರ್ಭ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಮುಖ್ಯಸ್ಥರಿಗೆ ಕೇವಲ ”ಜೋ ಉಚಿತ್ ಸಮಝೋ, ವೋಹ್ ಕರೋ" (ನಿಮಗೆ ಯೋಗ್ಯವೆನಿಸಿದ್ದನ್ನು ಮಾಡಿ) ಎಂದು ಹೇಳಿದ್ದಾಗಿ ದಾಖಲಾಗಿದೆ. ಇದು ಪ್ರಧಾನಿ ಮೋದಿಯವರ ನಾಯಕತ್ವದ ಟೊಳ್ಳುತನವನ್ನು ಜಗಜ್ಜಾಹೀರುಗೊಳಿಸಿರುವುದು ಮಾತ್ರವಲ್ಲ, ಮೋದಿ ತಾನೇ ಕಟ್ಟಿಕೊಂಡಿರುವ 56 ಇಂಚಿನ ಎದೆಯೊಳಗಿನ ಪುಕ್ಕಲುತನವನ್ನು ಬಯಲು ಮಾಡಿದೆ.
ಪ್ರಧಾನಿಯವರ ಈ ಪಲಾಯನವಾದಿ ನಡೆಯು ಸಂಸತ್ತಿನಲ್ಲಿ ಚರ್ಚೆ ಆಗಬಾರದೆಂಬ ಕಾರಣಕ್ಕೆ ರಾಹುಲ್ ಗಾಂಧಿಯವರು ಭಾಷಣ ಮಾಡದಂತೆ ತಡೆಯಲಾಗಿದೆ. ದೇಶದ ಬಹುಸಂಖ್ಯೆಯ ಜನರನ್ನು ಪ್ರತಿನಿಧಿಸುವ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.
ಇಂತಹ ಗಂಭೀರ ಪ್ರಶ್ನೆಗಳನ್ನು ಎದುರಿಸುವ ಬದಲು ಪ್ರಧಾನಿ ಮೋದಿ ಅವರು ಲೋಕಸಭೆಗೆ ಗೈರಾಗಿರುವುದು ನಿಜಕ್ಕೂ ನಾಚಿಕೆಗೇಡು.
ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ಹೆದರಿದ್ದಾರೆ, ಹಾಗಾಗಿ ಅವರು ಸಂಸತ್ತಿಗೆ ಹಾಜರಾಗುವ ಧೈರ್ಯವನ್ನು ಮಾಡುವುದಿಲ್ಲ ಎಂದು ರಾಹುಲ್ ಗಾಂಧಿಯವರು ಮುಂಚಿತವಾಗಿಯೇ ಹೇಳಿದ್ದರು. ಅದರಂತೆ ಮೋದಿ ಅವರು ಲೋಕಸಭೆಯಿಂದ ದೂರ ಉಳಿಯುವ ಮೂಲಕ ತಾನು ಭೀತಿಗೊಂಡಿರುವುದನ್ನು ರುಜು ಮಾಡಿದ್ದಾರೆ. ತನ್ನ ನಿರ್ಧಾರದ ಬಗ್ಗೆ ಆತ್ಮವಿಶ್ವಾಸವಿಲ್ಲದವರು, ಹೀಗೆ ಚರ್ಚೆಯಿಂದ ಯಾವಾಗಲೂ ಹಿಂದೆ ಸರಿಯುವವರು ದೇಶಕ್ಕೆ ಅದ್ಯಾವ ಸಮರ್ಥ ನಾಯಕತ್ವ ನೀಡಲು ಸಾಧ್ಯ?
ಅದೇ ರೀತಿ, ಪ್ರಧಾನಿ ಭಾಷಣಕ್ಕೆ ಅವಕಾಶ ನೀಡದೆ ವಂದನಾ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪಕ್ಷಪಾತದ ನಡವಳಿಕೆಯು ಸಂಸತ್ತಿನ ಘನತೆಗೆ ಗಂಭೀರ ಚ್ಯುತಿಯನ್ನುಂಟು ಮಾಡಿದೆ. ಸ್ಪೀಕರ್ ಲೋಕಸಭೆಯ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕೆ ವಿನಃ ಸರ್ಕಾರದ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಬಾರದು.
ವಿರೋಧ ಪಕ್ಷಗಳ ಬಾಯಿಮುಚ್ಚಿಸಿ, ಪ್ರಧಾನಮಂತ್ರಿಯವರು ಓಡಿ ಹೋದರೆ ಸಂಸತ್ತು ಅರ್ಥಹೀನವಾಗುತ್ತದೆ. ಇದು ಸಂಸತ್ತನ್ನು ದುರ್ಬಲಗೊಳಿಸುವುದು, ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗ ಮಾಡುವುದು ಮತ್ತು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಇಲ್ಲವಾಗಿಸುವುದು ಬಿಜೆಪಿ-ಆರೆಸ್ಸೆಸ್ ನ ಕುತಂತ್ರದ ಭಾಗವಾಗಿದೆ. ವಿರೋಧಿಗಳನ್ನು ಭಯ ಪಡಿಸುವುದರಿಂದ, ಮೌನವಾಗಿಸುವುದರಿಂದ ಮತ್ತು ಪಲಾಯನ ಮಾಡುವುದರಿಂದ ಪ್ರಜಾಪ್ರಭುತ್ವವು ಉಳಿಯುವುದಿಲ್ಲ.
- ಸಿದ್ದರಾಮಯ್ಯ, ಸಿಎಂ
#Modi #evasion #without #answering #cowardice #notfacing #truth #Siddaramaiah #AnswerMadiModi #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬೇಡ ಬಂಜಾರರಿಗೆ ವಿವಿಧ ಸವಲತ್ತುಗಳನ್ನು ಕೋರಿ ಮನವಿ
ಬೆಂಗಳೂರು: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಪದಾಧಿಕಾರಿಗಳಿಂದ ನಗರಸಭೆ ಅಧ್ಯಕ್ಷ ಕೆ ಶೇಷಾದ್ರಿ ಅವರಿಗೆ ಸಂಘದ ಸಲಹೆಗಾರ ಹೆಚ್ ಬಿ ಸಿದ್ಯಾನಾಯ್ಕ, ಕಾರ್ಯಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಡಾ. ಎಂ ಆರ್ ಗೋವಿಂದ ಸ್ವಾಮಿ, ಧನಂಜಯ್ ನಾಯ್ಕ್ ಉಪಾಧ್ಯಕ್ಷ, ಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಶಂಕರ್ ನಾಯ್ಕ್, ಪ್ರಕಾಶ್ ನಾಯ್ಕ್ ಇವರುಗಳು ರಾಮನಗರ ನಗರ ಜಿಲ್ಲೆ ಬೇಡ ಬಂಜಾರರಿಗೆ ವಿವಿಧ ಸವಲತ್ತುಗಳನ್ನು ಕೋರಿ ಮನವಿ ಸಲ್ಲಿಸಿದರು.
ಬೇಡಿಕೆಗಳು
೧. ರಾಮನಗರದ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಪ್ರಧಾನಿಗಳು, ಕೆಂಗಲ್ ಹನುಮಂತಯ್ಯ, ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಥೀಮ್ ಪಾರ್ಕ್ ಮಾಡುವುದು.
೨. ನಗರದಲ್ಲಿ ಬಂಜಾರ ಭವನಕ್ಕೆ ನಿವೇಶನ ಮತ್ತು ಸಾಂಸ್ಕೃತಿಕ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಿವೇಶನ ನೀಡುವುದು.
೩. ಪ್ರತಿ ವರ್ಷ ನಗರದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆಗೆ ಧನ ಸಹಾಯ ಮತ್ತು ಅನುದಾನ ನಿಗದಿ ಮಾಡುವುದು.
೪. ಸಂಘದ ಕಛೇರಿಗೆ ನಿವೇಶನ ಮತ್ತು ತಾತ್ಕಾಲಿಕ ಬಾಡಿಗೆ ಕಟ್ಟಡ ಒದಗಿಸುವುದು
೫. ಬಡ ಬಂಜಾರರಿಗೆ ಉಚಿತ ನಿವೇಶನ ನೀಡುವುದು.
೬. ನಗರದ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು.
೭. ಖಾಸಗಿ ಸಹಭಾಗಿತ್ವದಲ್ಲಿ ನಗರವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದು.
#Appeal #seeking #various #benefits #Banjara #BedaBanjaras #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಬಹುಮಾನ ವಿತರಣೆ
ಮಂಡ್ಯ: ಯಂಗ್ ಚಾಲೆಂಜರ್ಸ್ ಸ್ಪೋರ್ಟ್ & ಕ್ರೀಡಾ ಒಕ್ಕೂಟ, ಕ್ಯಾತನಹಳ್ಳಿ ಮಂಡ್ಯ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯನವರ ಸಾರಥ್ಯದಲ್ಲಿ ಹಸಿರು ನಕ್ಷತ್ರ ಕೆ.ಎಸ್.ಪುಟ್ಟಣ್ಣಯ್ಯ & ಸಮಾಜ ಧನ್ವಂತರಿ ಡಾ.ಕೆ.ವೈ.ಶ್ರೀನಿವಾಸ್ ಅವರ ಹಾಗೂ ಕ್ಯಾತನಹಳ್ಳಿಯ ಹಿರಿಯ ಕ್ರೀಡಾಪಟುಗಳ ಸವಿನೆನಪಿಗಾಗಿ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲಾಮಟ್ಟದ ಕ್ಯಾತನಹಳ್ಳಿ ಕಬಡ್ಡಿ ಹಬ್ಬ ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು 2026ರ ಫೆಬ್ರವರಿ 7 ಶನಿವಾರ, 8 ಭಾನುವಾರ ಆಯೋಜಿಸಲಾಗಿತ್ತು.
ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲಾಮಟ್ಟದ ಕ್ಯಾತನಹಳ್ಳಿ ಕಬಡ್ಡಿ ಹಬ್ಬ ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಕ್ಯಾತನಹಳ್ಳಿಯ ವೈ ಸಿ ಎಸ್ ತಂಡ ಪ್ರಥಮ (75,000 ರೂ.), ಮೇಟಗಳ್ಳಿಯ ಸಂಯುಕ್ತ ತಂಡ ದ್ವಿತೀಯ ಬಹುಮಾನ 40,000 ರೂ.), ನಾಗನಹಳ್ಳಿಯ ಲಕ್ಷ್ಮಿದೇವಿ ತಂಡ ತೃತೀಯ (20,000 ರೂ.) ಹಾಗೂ ಕೆನ್ನಾಳುವಿನ ಕದಂಬ ತಂಡ ನಾಲ್ಕನೇ ಬಹುಮಾನವನ್ನು (15,000 ರೂ.) ಪಡೆದವು. ಪ್ರಶಸ್ತಿ ಪುರಸ್ಕೃತ ತಂಡಗಳಿಗೆ ಪ್ರಶಸ್ತಿ ಮೊತ್ತದ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
#KSPCup #Light #Mat #Kabaddi #Tournament #Prize #Distribution #DarshanPuttannaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಮಾನತೆಯ ಕನಸಿನ ಸಂವಿಧಾನ ಕಥನ: ಲ್ಯಾಂಡ್ ಲಾರ್ಡ್
ಕನಸು ಕಾಣುವುದು ಮನುಷ್ಯನ ಮೂಲಭೂತ ಹಕ್ಕು.ಆ ಕನಸು ಸ್ವತಂತ್ರ. ಅದಕ್ಕೆ ಬೇಲಿಗಳಿಲ್ಲ. ಆ ಕನಸನ್ನು ನನಸು ಮಾಡುವುದಕ್ಕಾಗಿ ಹೋರಾಟದ ಹಾದಿ ಹಿಡಿಯುವುದು, ಬಂಡಾಯದ ಬಾವುಟ ಹಾರಿಸುವುದು ಅನಿವಾರ್ಯ ಎಂಬಂತೆ ಚಿತ್ರಕತೆ ರೂಪುಗೊಂಡಿದೆ. ಈ ಬಂಡಾಯ ಬದುಕಿಗಾಗಿ ಜೀತದಾಳಿನಿಂದ, ಕೂಲಿಕಾರನಿಂದ ಬಿಡುಗಡೆ ಹೊಂದಿ, ಜಮೀನು ಪಡೆದು ವ್ಯವಸಾಯಗಾರನಾಗಿ ಸ್ವತಂತ್ರ ಬದುಕು ನಿರ್ಮಿಸಿಕೊಳ್ಳುವುದಕ್ಕಾಗಿ .ಇಲ್ಲಿನ ಕಥಾನಾಯಕ ರಾಚಯ್ಯ ಪಾಳೆಗಾರಿಕೆ ಮಾಡುವವರ ವಿರುದ್ಧ ತುಂಡು ಭೂಮಿಗಾಗಿ, ಸಮಾನತೆಗಾಗಿ ಹೋರಾಟ ನಡೆಸುವನು. ಮೊಟ್ಟಮೊದಲ ಬಾರಿಗೆ ಸಂವಿಧಾನದ ಸಮಾನತೆಯನ್ನು ಗಟ್ಟಿದನಿಯಾಗಿ ಬಿಂಬಿಸಿದೆ. .ಸಂವಿಧಾನದ ಕುರಿತಾಗಿ ಹೆಚ್ಚು ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಸಿನಿಮಾ ಹೊಸ ಆಲೋಚನೆಗಳನ್ನು ಹೊತ್ತು ತಂದಿದೆ.
ಈ ಸಿನಿಮಾದಲ್ಲಿನ ಸಣ್ಣ ಮಗುವಿನ ಕುರುಡಿಯ ಪಾತ್ರವು ಇಡೀ ಸಿನಿಮಾಕ್ಕೆ ಮುನ್ನುಡಿ ಬರೆದಿದೆ. ಕಣ್ಣು ಇಲ್ಲದವರಿಗೆ ಕಣ್ಣಾಗಬೇಕೆಂಬ ನಿಟ್ಟಿನಲ್ಲಿ ಸಿನಿಮಾದ ಕೊನೆಯ ದೃಶ್ಯದಲ್ಲಿ ನಾಯಕ ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ಶಿಕ್ಷೆ ಏನಿದೆ ಎಂದು ಕೇಳುತ್ತಾನೆ.ಅದಕ್ಕೆ ಕಣ್ಣಿಲ್ಲದ ಪುಟ್ಟಿ ನನ್ನನ್ನು ಎತ್ತಿಕೊಳ್ಳಬೇಕು ಎಂಬ ಪ್ರತಿಧ್ವನಿ ಮಾರ್ಧನಿಸುತ್ತದೆ. ಅಸಹಾಯಕರ ಪಾಲಿಗೆ ಸಹಾಯಕರಾಗಬೇಕೆಂಬ ಸ್ವಚ್ಛ ದನಿ ಇದೆ. ಕೆಳಗಿನ ಕೇರಿ ಮ್ಯಾಲಿನ ಕೇರಿಯ ಸಂಘರ್ಷದ ಕಥನದಲ್ಲಿ ಸಮಾನತೆಯ ಅಂಶಕ್ಕಾಗಿ ಹೋರಾಟದ ಹಾದಿ ನಿರ್ಮಾಣಗೊಂಡಿದೆ.
ಬಸವಿ ಬಿಡುವುದು ಶ್ರಮಕ್ಕೆ ತಕ್ಕ ಪ್ರತಿಫಲ ನೀಡದೆ ಕಾಳು ಹಂಚುವುದು, ದುಡ್ಡು ಕೊಡದೆ ದರ್ಪ ತೋರಿಸುವುದು. ಮರ್ಯಾದೆ ಹತ್ಯೆ,ಸತ್ತವರ ಬಟ್ಟೆಗಳನ್ನು ಕೆಳಗಿನ ಕೇರಿಯವರು ಧರಿಸುವುದು,ನ್ಯಾಯ ಪಂಚಾಯತಿಯಲ್ಲಿ ಜಮೀನ್ದಾರರ ಕಟ್ಟಡಗಳೇ ಅಂತಿಮ ಆದೇಶವಾಗಿದ್ದು, ಇದನ್ನು ಮೀರಿ ನಡೆದರೆ ಸಾವು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗೆ ಅಮಾನವೀಯ ಘಟನೆಗಳಿಂದ ಸಮುದಾಯ ಹೇಗೆ ಹೊರ ಬರಬೇಕೆಂಬ ಹೋರಾಟದ ಛಾಯೆ ಚಿತ್ರದಲ್ಲಿದೆ . ಖಳನಾಯಕನಾಗಿ ರಾಜ್ ಬಿ ಶೆಟ್ಟಿ ಅಬ್ಬರ ಜೋರಾಗಿದೆ. ಮಹಿಳಾ ಪೊಲೀಸ್ ಖಳನಾಯಕನನ್ನು ಬಂಧಿಸುವುದು ಸಿನಿಮಾದ ಹೈಲೈಟ್. ಗಂಡಸುತನದ ಪ್ರಶ್ನೆಗಾಗಿ ಮಹಿಳಾ ಮಹಿಳಾ ಪೊಲೀಸ್ ನ್ನು ಬಸವೀ ಬಿಡುವುದಕ್ಕೆ ಮುಂದಾದಾಗ ಸಮಾಜದ ಪ್ರತಿಭಟನೆ ಶೂನ್ಯವಾಗಿರುವುದು ಸಿನಿಮಾದ ಮೈನಸ್. ನಾಯಕನ ಹೆಂಡತಿ ನಿಂಗವ್ವ ಗಂಡ ರಾಚಯ್ಯನ ಕೋಪವನ್ನು ಕಟ್ಟಿ ಹಾಕಿ ತಕ್ಕ ಸಮಯದಲ್ಲಿ ಗೂಳಿಯಾಗಲು ಬಿಡುತ್ತಾಳೆ. ಇದು ಹೆಣ್ಣಿನ ಆಂತರಿಕ ಸಂಘರ್ಷವನ್ನು ಸೂಚಿಸುವುದು.
ಓದಿ ವಿದ್ಯಾವಂತಳಾದ ರಾಚಯ್ಯನ ಮಗಳನ್ನು ಕಂಡ ಊರಿನ ಪಾಳೆಗಾರರು ಸಹಿಸುವುದಿಲ್ಲ. ಓದಿ ಜ್ಞಾನ ಪಡೆದು ಕಾನೂನು ತಿಳಿದುಕೊಂಡರೆ ನಾವು ಗುಲಾಮರಾಗುತ್ತೇವೆ ಎಂಬ ಪಂಕದಲ್ಲಿ ಪಾಳೇಗಾರರು. ತಾಯಿಗೆ ಕೊಟ್ಟ ಮಾತನ್ನು ರಾಚಯ್ಯ ಉಳಿಸಿಕೊಂಡನಾದರೂ ತನ್ನ ಸ್ವಂತ ಜಮೀನಿನಲ್ಲಿ ಬೆಳೆ ಬರುವಾಗ ಅದನ್ನು ಹಾನಿ ಮಾಡಿದರು. ಮೇಲ್ವರ್ಗದವರು ಕೆಳವರ್ಗದವರು ತಮ್ಮ ಸರಿ ಸಮಾನ ಬರಬಾರದೆಂಬ ಹುನ್ನಾರವಿದು.
ತುಂಡು ಭೂಮಿಗಾಗಿ ಹೋರಾಟದ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕ ಪ್ರಸ್ತುತಪಡಿಸಿದೆ. ಚೋಮ,ಕುರುಮಯ್ಯ ರೊಂದಿಗೆ ಸಿನಿಮಾದ ರಾಚಯ್ಯನು ಭೂಮಿಗಾಗಿ ಹೋರಾಟ ಮಾಡಿದವರು ಆಗಿದ್ದಾರೆ. ಇಂಥ ಅನೇಕ ಜನರು ಇಂದಿಗೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪಟ್ಟಣಗಳಲ್ಲಿ ಅವಿತುಕೊಂಡಿದ್ದಾರೆ. ಜಾತೀಯ ಕಾರಣಕ್ಕಾಗಿ ಅವರು ಮುಂದೆ ಬರುವುದಕ್ಕೆ ಆಗಿಲ್ಲ. ಬಂದರು ಸಮುದಾಯ ಒಪ್ಪುವುದಿಲ್ಲ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಇಂದಿಗೂ ಹೋರಾಟದ ಭಾಗವೇ ಆಗಿದೆ. ಶ್ರೀಮಂತಿಕೆ ಕೆಲವರ ಹತೋಟಿಯಲ್ಲಿದೆ ಅವರೇ ಸರ್ಕಾರವು ನಿಯಂತ್ರಿಸಿದ್ದಾರೆ ಎಂಬ ಸೂಚನೆ ಸಿನಿಮಾದಲ್ಲಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರ ಹಲವು ಆಯಾಮಗಳನ್ನು ಕನ್ನಡ ಚಿತ್ರರಂಗಕ್ಕೆ ಒದಗಿಸುತ್ತಿದೆ. ಆದರೂ ಸಿನಿಮಾ ಕೆಲವು ಸಿದ್ದ ಹಸ್ತಗಳಿಂದ ಹೊರಬಂದಿಲ್ಲ. ಸಿನಿಮಾದಲ್ಲಿ ಹಿಂಸೆ ಅತಿರೇಕಕ್ಕೆ ಹೋಗಿದೆ. ಆದರೆ ಕಥಾನಾಯಕ ಕೊನೆಯಲ್ಲಿ ಅಹಿಂಸೆಯನ್ನೇ ಪ್ರಧಾನವಾಗಿ ಒಪ್ಪಿದರೂ ಈ ಸಂದರ್ಭದಲ್ಲಿ ಕಥೆ ತನ್ನ ಹಿಮ್ಮುಖ ಚಲನೆ ಆರಂಭಿಸಿದಂತೆ ಭಾಸವಾಗುತ್ತದೆ. ಅನಕ್ಷರಸ್ತರಿಂದ ಸಂವಿಧಾನದ ಪಾಠ ಮಾಡಿದ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು. ನಮ್ಮವರಿಂದಲೇ ನಮಗೆ ದೋಷವಾಗುತ್ತದೆ ಎಂಬುದು ವಿಧಿ ಲಿಖಿತವೆಂಬಂತೆ, ಹೋರಾಟಕ್ಕೆ ದನಿಗೂಡಿಸಿದರೆ ಹೋರಾಟದ ರಾಚಯ್ಯನ ಕೊಲೆಗೆ ಪ್ರಯತ್ನಿಸಲಾಗುತ್ತದೆ. ಅಕ್ಷರ ಕಲಿತವರಿಂದಲೇ ಸಂವಿಧಾನದ ಆಶಯಗಳು ಕರಗುತ್ತಿವೆ ಎಂಬ ಪ್ರಬಲ ಧ್ವನಿ ಸಿನಿಮಾದ್ದು. ತಾಂತ್ರಿಕವಾಗಿ ಕಥೆ ಮೈಮರೆತರೂ ಪ್ರತಿಭಟನೆಯ ಸಂಕೇತವಾಗಿ ರಾಚಯ್ಯ, ನಿಂಗವ್ವ ನಂತಹ ಅನೇಕ ಜನರು ಹೋರಾಟದ ಹಾದಿಯಲ್ಲಿ ಜೀವನ ಸಾಗಿಸುತ್ತಿರುವುದು ನಮ್ಮ ನಾಡಿನ ದುರಂತ.
1947 ರಲ್ಲಿ ಸ್ವಾತಂತ್ರ,1950 ರಲ್ಲಿ ಸಂವಿಧಾನ ಜಾರಿಯಾದರು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವುದರಲ್ಲಿ ಪ್ರಾತ್ಸರ ಮನೋಭಾವವನ್ನು ತೋರುತ್ತಿದ್ದೇವೆ ಇದಕ್ಕೆ ಕಾರಣ ಅಧಿಕಾರಿಗಳು, ರಾಜಕಾರಣಿಗಳು, ಬಂಡವಾಳ ಶಾಹಿಗಳು ಎಂದು ಸಿನಿಮಾ ಹೇಳುತ್ತಿದೆ. ಅಂದಿನ ಜಮೀನ್ದಾರರೇ ಇಂದಿನ ಬಂಡವಾಳಶಾಹಿಗಳಾಗಿ ಮಾರ್ಪಾಡಾಗಿದ್ದಾರೆಂಬ ಸೂಚನೆ ಸಿನಿಮಾ ಹೇಳುತ್ತಿದೆ. ಚುನಾಯಿತ ಪ್ರತಿನಿಧಿಗಳ ಮಕ್ಕಳೆ ಮತ್ತು ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗುವುದು ರಾಜಪ್ರಭುತ್ವವಾಗುತ್ತದೆ ಹೊರತು ಪ್ರಜಾಪ್ರಭುತ್ವವಾಗುವುದಿಲ್ಲೆoಬ ಸಂದೇಶ ಮತದಾರರಿಗೆ ನೀಡಿದೆ. ಯಾವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬುದು ಮತದಾರರು ಇನ್ನು ಪಕ್ವಗೊಂಡಿಲ್ಲ ಎಂಬುದೇ ಈ ಮಾತಿನ ಸೂಚನೆ. ತಳ ಸಮುದಾಯದ ವ್ಯಕ್ತಿ ಜನಪ್ರತಿನಿಧಿಯಾದಾಗ ಆತನಲ್ಲಿ ಬೆವರು ವಾಸನೆ ಹೋಗಿ ಸುಗಂಧದ ವಾಸನೆ ಬರುವಂತ ದ್ರವ್ಯ ಬಳಸುತ್ತಿರುವಾಗ ಜನರ ಕಷ್ಟ ಸಂಕಟ ನೋವುಗಳು ಆತನಿಗೆ ಹೇಗೆ ಅರ್ಥವಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಶಾಸಕನ ಮಗ ಶಾಸಕನೇ ಆಗಬೇಕೆಂಬ ಪ್ರಾಬಲ್ಯ ಕೊನೆಗೊಂಡು ಜನಸಾಮಾನ್ಯನಿಗೆ ವಿಶೇಷ ಅಧಿಕಾರವನ್ನು ನೀಡಬೇಕೆಂಬದು ಚಿತ್ರದ ಕ್ಲೈಮಾಕ್ಸ್. ಶಾಸಕ,ಕಾರ್ಯಾಂಗ, ನ್ಯಾಯಾಂಗಗಳಿಗೆ ಬೀಗ ಹಾಕಲಾಗಿದೆ. ಏಕೆಂದರೆ 'ತುಳಿತಾ ಇರೋರು ನಾವೇ, ತುಳಿಸಿಕೊಳ್ಳುತ್ತಾ ಇರುವವರು ನಾವೇ ' ಹಾಗಾಗಿ ಈ ದ್ವಂದ್ವದಿಂದ ಹೊರ ಬಂದಾಗ ಸಮಾನತೆಯ ಕನಸು ನನಸಾಗಲು ಸಾಧ್ಯ. ಮಳೆ ಬಂದರೆ ನಮ್ಮ ಭೂಮಿ ಹೇಗೆ ಹಸಿರಾಗುತ್ತದೋ ಹಾಗೆ ಸಂವಿಧಾನ ಬಂದರೆ ನಮ್ಮ ಬದುಕು ಹಸನಾಗುತ್ತದೆ ಎಂಬ ನಾಯಕನ ಮಾತು ಮನಮುಟ್ಟುವಂಥದ್ದು. ಸಮಾನತೆಯನ್ನು ಸಂವಿಧಾನ ಹಳ್ಳಿ ಹಳ್ಳಿಗೂ ಬರಬೇಕೆಂಬ ಕಾಳಜಿ ಪ್ರತಿಯೊಬ್ಬ ಅಕ್ಷರಸ್ಥನಲ್ಲಿ ಬಂದಾಗ ಅಸ್ಪೃಶ್ಯತೆ,ಅಸಮಾನತೆ, ಅಂಧಕಾರದ ಮೌಡ್ಯ ಶಕ್ತಿಗಳೆಲ್ಲವೂ ಬೇರುಸಹಿತ ನಾಶವಾಗುತ್ತದೆಂಬ ನಿಟ್ಟಿನಲ್ಲಿ ಸಿನಿಮಾ ಮಾತಾಡುತ್ತದೆ.ಸಾರಥಿ ಫಿಲಂಸ್ ಸಧಬಿ ರುಚಿಯ ಚಿತ್ರಗಳನ್ನು ನೀಡುತ್ತಿರಲಿ. ಅಜನೀಶ್ ಸಂಗೀತ ಗೀತ ಚಿತ್ರಕ್ಕೆ ಮತ್ತೊಂದು ಮೆರಗು ತಂದು ಕೊಟ್ಟಿದೆ. ಇನ್ನೊಂದು ಹಾಡು ಸಮಾನತೆಯ ಕುರಿತಾಗಿ ರಚಿಸಬೇಕಿತ್ತು ಎಂದು ಚಿತ್ರ ಬಯಸುತ್ತದೆ.
ಆದರೆ ಈ ಸಿನಿಮಾವನ್ನು ನೋಡಬೇಕಾಗಿರುವವರು ಯಾರು ಎಂಬುದು ಮುಖ್ಯವಾದ ಪ್ರಶ್ನೆ. ಸಮಾನತೆಯ ಕನಸು ಕಾಣುವವರು ಮಾತ್ರ ಸಿನಿಮಾ ನೋಡಿ ಹೌದೆನ್ನಬಹುದು. ಅಸಮಾನತೆಯನ್ನೇ ಜೀವಂತವಾಗಿ ಇಟ್ಟು ಕೊಂಡಿರುವ ಮನಸ್ಸುಗಳು ಈ ಸಿನಿಮಾವನ್ನು ನೋಡಲು ಸಾಧ್ಯವೇ? ಸಿನಿಮಾಕ್ಕೆ ಯಶಸ್ಸು ಸಿಗಬಹುದು. ಆದರೆ ಜೀವನದ ಅಸಮಾನತೆ ಹಂಗನ್ನು ತೊರೆಯಲು ಮನಸ್ಸುಗಳು ಸಿದ್ಧವಾದರೆ ಮಾತ್ರ ಸಿನಿಮಾಕ್ಕೆ ನಿಜವಾದ ಯಶಸ್ಸು ಲಭಿಸುವುದು. ಸಮಾನತೆಯ ಹೆಸರಿನ ಸಂವಿಧಾನ ಉಸಿರಾಡಲು ಸಾಧ್ಯವಾಗುವುದು. ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾವು ಕೇವಲ ಭೂಮಿಗಾಗಿ ಮಾತ್ರವಲ್ಲದೆ ಸಮಾಜದಲ್ಲಿ ಸ್ಥಾಪಿತ ಸಂಪ್ರದಾಯಗಳನ್ನು ಮುರಿದು ಹಾಕಿ ವೈಚಾರಿಕ ಪ್ರಜ್ಞೆಯ ನೆಲೆಗಟ್ಟಿನಲ್ಲಿ ಬದುಕಬೇಕೆಂಬ ಆಶಯ ಸಿನಿಮಾದಲ್ಲಿದೆ.
- ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, ಸಂಶೋಧಕರು, ಯಾದಗಿರಿ
#Constitution #Essay #DreamofEquality #LandLord #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಎಸ್ಐಆರ್ ಯಾಕೆ ಬೇಡ?
2025 ಜೂನ್ 24ರಂದು ಇಸಿಐ ತನ್ನ ಆದೇಶ ಸಂಖ್ಯೆ (23/ಇಆರ್ಎಸ್ /2025) ಮೂಲಕ, ಸಂವಿಧಾನದ ವಿಧಿ 324ರ ಅಡಿಯಲ್ಲಿ ದೇಶಾದ್ಯಂತ ಎಸ್ಐಆರ್ ಪ್ರಾರಂಭಿಸುವುದಾಗಿ ಘೋಷಿಸಿತು. ಮೊದಲಿಗೆ ಬಿಹಾರದಲ್ಲಿ ಆಗಸ್ಟ್–ಸೆಪ್ಟೆಂಬರ್ 2025ರಲ್ಲಿ ಈ ಎಸ್ಐಆರ್ ನಡೆಯಿತು.
24 ಜೂನ್ 2025 :
7.89 ಕೋಟಿ ಮತದಾರರು
65 ಲಕ್ಷ ಮತದಾರರನ್ನು ತೆಗೆಯಲಾಗಿದೆ
ಸುಪ್ರೀಂಕೋರ್ಟ್ ವಿಚಾರಣೆ, ಮಧ್ಯಪ್ರವೇಶ
1 ಆಗಸ್ಟ್ 2025(36 ದಿನಗಳ ಅಂತರದಲ್ಲಿ)
7.24 ಕೋಟಿ ಮತದಾರರು
3.66ಲಕ್ಷ ಮತದಾರರನ್ನು ತೆಗೆಯಲಾಗಿದೆ
21.53 ಮತದಾರರನ್ನು ಸೇರಿಸಲಾಗಿದೆ
30 ಸೆಪ್ಟೆಂಬರ್ 2025
7.42 ಕೋಟಿ ಮತದಾರರು
ಅದನ್ನ ಅನುಸರಿಸಿ, 12 ರಾಜ್ಯಗಳಾದ ಅಂಡಮಾನ್ ನಿಕೋಬಾರ್, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೆರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಜನವರಿ 2026ರೊಳಗೆ ಪೂರ್ಣಗೊಂಡಿದೆ.
6.5 ಕೋಟಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
ಪ. ಬಂಗಾಳದಲ್ಲಿ 1.36 ಕೋಟಿ ಮತದಾರರ ಮ್ಯಾಪಿಂಗ್ ಆಗಿದ್ದರೂ ಅವರಿಗೆ ಹತ್ತಾರು ಸಮಸ್ಯೆಗಳನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.
ಅಷ್ಟು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇವರು ಎಸ್ ಐಆರ್ ನಲ್ಲಿ ಇಲ್ಲ ಎಂದು ಸರ್ಕಾರದ ಕಲ್ಯಾಣ ಯೋಜನೆಗಳಿಂದ ವಂಚಿತರಾಗಬಹುದು..
ಈ ಪಟ್ಟಿಯ ಆರು ರಾಜ್ಯಗಳಿಗೆ 2026ರಲ್ಲಿ ವಿಧಾಐನಸಭಾ ಚುನಾವಣೆಗಳೂ ನಿಗದಿಯಾಗಿದೆ.
ಜನಪ್ರತಿನಿಧಿಗಳ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960 ಪ್ರಕಾರ ಮತದಾರರ ಪಟ್ಟಿ ತಯಾರಿಸಲು ಮೂರು ವಿಧಾನಗಳಿವೆ
1. ತೀವ್ರವಾದ ಪರಿಷ್ಕರಣೆ (intensive revision)
2. ಸಾರಾಂಶ ಪರಿಷ್ಕರಣೆ (summary revision)
3. ಕೆಲವೊಮ್ಮೆ ತೀವ್ರವಾಗಿ, ಕೆಲವೊಮ್ಮೆ ಸಾರಾಂಶದಲ್ಲಿ
ಆದರೆ ʼವಿಶೇಷ ತೀವ್ರವಾದ ಪರಿಷ್ಕರಣೆʼ ಎನ್ನುವುದು ಕಾನೂನಿನಲ್ಲಿ, ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ.
ಇದನ್ನು ಕೇಂದ್ರ ಗೃಹ ಇಲಾಖೆ ನಿರ್ದೇಶನದ ಮೇರೆಗೆ ಇಸಿಐ ನಡೆಸುತ್ತಿದೆ.
ಈ ಸಂಸ್ಥೆ ಸ್ವಾಯತ್ತತೆ ಕಳೆದುಕೊಂಡಿರುವದರಿಂದ, ತನ್ನದೇ ಸ್ವತಂತ್ರ ನಿಲುವು ತೆಗೆದುಕೊಳ್ಳಲು ಸಾಧ್ಯವೇ ಇಲ್ಲದಿರುವುದರಿಂದ ಮೋದಿ ನೇತೃತ್ವ ಸರ್ಕಾರದ ಅಡಿಯಾಳಾಗಿ ಕಾರ್ಯ ನಿರ್ವಹಿಸುತ್ತಿದೆ.
ಇದು ಮೊದಲ ಆಕ್ಷೇಪ.
ಕಾನೂನು ತಜ್ಞರು ಹೇಳಿದಂತೆ ತೀವ್ರವಾದ ಪರಿಷ್ಕರಣೆಯನ್ನು ಒಂದು ನಿರ್ದಿಷ್ಠ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಬಹುದೇ ಹೊರತು ಇಡೀ ರಾಜ್ಯಕ್ಕಲ್ಲ.
ಆದರೆ ಇಸಿಐ ಇಡೀ ಬಿಹಾರ್ ರಾಜ್ಯಕ್ಕೆ ಅನ್ವಯಿಸಿ ಎಸ್ಐಆರ್ ನಡೆಸಿದೆ.
2025 ಜೂನ್ 24ರಂದು ಇಸಿಐ ಬಿಹಾರ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲೂ, ಕಾನೂನಾತ್ಮಕವಾಗಿ ʼವಿಶೇಷ ಪರಿಷ್ಕರಣೆಯ ಅಗತ್ಯವೇನಿದೆ?ʼ ಎಂದು ಸ್ಪಷ್ಟೀಕರಣ ನೀಡಿಲ್ಲ, ಕಾರಣಗಳು ಏನೆಂದು ವಿವರಿಸಿಲ್ಲ. ಅದರ ನಿರ್ಧಾರಗಳು ನಿಯಮಗಳಿಗೆ ವಿರುದ್ಧವಾಗಿದೆ.
ಹಾಗೆಯೇ ಪ.ಬಂಗಾಳ, ಕೇರಳ, ತಮಿಳುನಾಡುನಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ತರಾತುರಿಯಲ್ಲಿ ಕೇವಲ ಎರಡು ತಿಂಗಳಲ್ಲಿ ಎಸ್ ಐಆರ್ ನಡೆಸುವ ಉದ್ದೇಶವೇನು? ವಾಸ್ತವದಲ್ಲಿ ವಿಸ್ತ್ರತ ಪರಿಷ್ಕರಣೆಗೆ ಒಂದು ವರ್ಷ ಅವಧಿಯ ಅಗತ್ಯವಿದೆ
ಇದು ಎರಡನೇ ಆಕ್ಷೇಪ.
ಏನು ಬೇಕು?
● 1 ಜುಲೈ1987 ಕ್ಕಿಂತ ಮೊದಲು ಜನಿಸಿದವರು, ತಮ್ಮ ಜನನ ದಿನಾಂಕ/ಸ್ಥಳದ ದಾಖಲೆಯನ್ನುನೀಡಬೇಕು.
● 1 ಜುಲೈ1987 ಮತ್ತು2 ಡಿಸೆಂಬರ್ 2004 ನಡುವೆ ಜನಿಸಿದವರು, ತಮ್ಮದೂ, ಮತ್ತುತಂದೆ ಅಥವಾ ತಾಯಿಯ ದಾಖಲೆಯನ್ನುನೀಡಬೇಕು.
● 2 ಡಿಸೆಂಬರ್ 2004 ನಂತರ ಜನಿಸಿದವರು, ತಮ್ಮದೂ, ಮತ್ತುಇಬ್ಬರು ಪೋಷಕರ ದಾಖಲೆಯನ್ನು ನೀಡಬೇಕು.
ಸಿಇಒ -ಕೆ ನೀಡಿರುವ ಹನ್ನೊಂದು ದಾಖಲೆಗಳು ಪಟ್ಟಿ, ಜನಸಾಮಾನ್ಯರಲ್ಲಿ ಬಹುತೇಕ ಯಾರಿಗೂ ಇಲ್ಲದಂತಹ ದಾಖಲೆಗಳಾಗಿವೆ.
ಇದರ ದಸ್ತಾವೇಜಿನಲ್ಲಿ ಇದರ ಕುರಿತು ಮತ್ತು ಹನ್ನೆರೆಡನೆಯದಾಗಿ ಆಧಾರ್ ದಾಖಲೆಗಳ ವಿವರಗಳನ್ನು ಪ್ರಕಟಿಸಿದೆ.
ಅವೇನೆಂದರೆ.
ಸರ್ಕಾರ, ಪಿಎಸ್ ಯು ಮುಂತಾದ ಉದ್ಯೋಗದ ಗುರುತಿನ ಚೀಟಿ
1 ಜುಲೈ 1987 ಮುಂಚಿನ ಗುರುತಿನ ಚೀಟಿ (ಅಧಿಕಾರಿಗಳಿಂದ ಲಗತ್ತಾಗಿರಬೇಕು)
ಜನನ ಪ್ರಮಾಣ ಪತ್ರ
(ಅಧಿಕಾರಿಗಳಿಂದ ಲಗತ್ತಾಗಿರಬೇಕು)
ಪಾಸ್ ಪೋರ್ಟ್
ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
ಶಾಶ್ವತ ನಿವಾಸದ ಪ್ರಮಾಣ ಪತ್ರ
ಅರಣ್ಯ ಹಕ್ಕುಗಳ ಪತ್ರ
ಜಾತಿ ಪ್ರಮಾಣ ಪತ್ರ
ಸರ್ಕಾರದಿಂದ ಜಮೀನು, ನಿವೇಶನ, ಮನೆ ಹಂಚಿಕೆ ಪತ್ರ
ಮತದಾರರ ಪಟ್ಟಿಯ ಉಲ್ಲೇಖ ಪ್ರತಿ
ಜೊತೆಗೆ ಆಧಾರ್ (ಇದು ಪೌರತ್ವ ನಿರ್ಧರಿಸುವ ದಾಖಲೆ ಅಲ್ಲ.. ಈ ಪಟ್ಟಿಯಲ್ಲಿ ಮತದಾರ ಗುರುತು ಪತ್ರ, ಪಡಿತರ ಚೀಟಿ ಇಲ್ಲ)
ಹೇಗೆ ಸಂವಿಧಾನ ವಿರೋಧಿ?
ಸಂವಿಧಾನದ ವಿಧಿ 326ರ ನೀತಿಯು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನದ ಹಕ್ಕನ್ನು ಖಚಿತಪಡಿಸಿದೆ. ಅವರಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆದರೆ ಇಸಿಐ ವಿಧಿ 324ರ ಅಡಿಯಲ್ಲಿ ತನ್ನ ಜವಬ್ದಾರಿಯನ್ನು ಮಾತ್ರ ಹೇಳಿಕೊಳ್ಳುತ್ತಿದೆಯೇ ಹೊರತು ವಿಧಿ 326ರ ಅಡಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎನ್ನುವುದನ್ನು ಉಲ್ಲಂಘಿಸಿ ಆದಾರ್ ಕಾರ್ಡ, ಮತದಾರ ಗುರುತಿನ ಚೀಟಿ(ಎಪಿಕ್), ಪಡಿತರ ಚೀಟಿ ಮುಂತಾದವುಗಳನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ, ಆ ಮೂಲಕ ಸಂವಿಧಾನದ ನೀತಿಯನ್ನು ಉಲ್ಲಂಘಿಸುತ್ತಿದೆ.
ಕಾನೂನಿನ ಪ್ರಕಾರ ಗೃಹ ಇಲಾಖಗೆ ಮಾತ್ರ ಪೌರತ್ವವನ್ನು ನಿರ್ಧರಿಸುವ ಹಕ್ಕಿದೆ. ಇಸಿಐಗೆ ಇಲ್ಲ.
ಆದರೆ ಇದನ್ನು ಪಾಲಿಸುತ್ತಿಲ್ಲ.
ಇದಕ್ಕೆ ಇಸಿಐ 'ನಾನು ಪೌರತ್ವ ಇದೆ/ಇಲ್ಲ ಎಂದು ಮಾತ್ರ ಪರಿಶೀಲನೆ ಮಾಡುತ್ತೇವೆ, ನಿರ್ಧರಿಸುತ್ತಿಲ್ಲ.. ' ಎಂದು ಹೇಳುತ್ತದೆ
ಮುಖ್ಯವಾದ ಬಿಕ್ಕಟ್ಟೇನು?
ಇಲ್ಲಿ ಇಸಿಐ ಮತದಾರರ ಪಟ್ಟಿ ಪರಿಷ್ಕರಿಸಿ, ಅರ್ಹತೆ, ಪೌರತ್ವವನ್ನು ಸಾಬೀತುಪಡಿಸುತ್ತಿಲ್ಲ...
ಬದಲಿಗೆ ಮತದಾರರು ಸಾಬೀತುಪಡಿಸಬೇಕು
(ಯುಎಪಿಎ, ಪಿಎಂಎಲ್ ಎ ರೀತಿ..)
ಎಡಿಆರ್ ಸಂಸ್ಥೆ(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಪ್ರಕಾರ, ಬಿಹಾರದಲ್ಲಿ
ಅಂತಿಮ ಪಟ್ಟಿಯಲ್ಲಿ ಹೆಸರು, ಸಂಬಂಧಿಕರ ಹೆಸರು, ವಯಸ್ಸು, ವಿಳಾಸ ಒಂದೇ ಆಗಿರುವ 5 ಲಕ್ಷಕ್ಕೂ ಹೆಚ್ಚು ನಕಲಿ ನಮೂದುಗಳಿವೆ.
ರಿಪೋರ್ಟರ್ ಕಲೆಕ್ಟಿವ್ (ವರದಿಗಾರರ ಸಮೂಹ) ಪ್ರಕಾರ, ಸುಮಾರು 14.35 ಲಕ್ಷ ನಮೂದುಗಳು ʼಸಂದೇಹಾಸ್ಪದ ನಕಲುಗಳಾಗಿವೆʼ.
ಅವುಗಳಲ್ಲಿ ಸರಿಸುಮಾರು 3.4 ಲಕ್ಷ ನಮೂದುಗಳು ಹೆಸರು, ಸಂಬಂಧಿಕರ ಹೆಸರು ಮತ್ತು ವಯಸ್ಸಿನ ವಿಷಯದಲ್ಲಿ ಒಂದೇ ತೆರನಾದ ಮಾಹಿತಿ ಹೊಂದಿದೆ. ಮತದಾರರ ವಿವರಗಳಲ್ಲೂ ಗಂಭೀರ ದೋಷಗಳು ಕಂಡುಬಂದಿದೆ.
22 ಲಕ್ಷ ಜನ ತೀರಿಕೊಂಡಿದ್ದಾರೆ(ಇದನ್ನು ಒಪ್ಪಿಕೊಳ್ಳಬಹುದು),
7 ಲಕ್ಷ ನಕಲಿ ಮತದಾರರು(ಇದನ್ನೂ ಅನುಮಾನವಿದ್ದರೂ ಒಪ್ಪಿಕೊಳ್ಳಬಹುದು ಅಥವಾ ಪರಿಶೀಲಿಸಬಹುದು),
36 ಲಕ್ಷ ಜನ ವಲಸೆ ಹೋಗಿದ್ದಾರೆ ಅಥವಾ ಪತ್ತೆ ಹಚ್ಚಲಾಗಿಲ್ಲ. ಈ ಅಂಶ ಪ್ರಶ್ನಾರ್ಹವಾಗಿದೆ, ಅನುಮಾನಸ್ಪವಾಗಿದೆ,
ಪಶ್ಚಿಮ ಬಂಗಾಳದ ಉದಾಹರಣೆ:
ಮ್ಯಾಪಿಂಗ್ ಆಗಿದ್ದರೂ SIR ಅಡಿಯಲ್ಲಿ (ಜನಸಂಖ್ಯೆಯ ಸುಮಾರು 20%) ಸುಮಾರು 1.3 ಕೋಟಿ ಜನರಿಗೆ
‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಎಂದು ಹೆಸರಿಸಿ ನೋಟಿಸ್ಗಳನ್ನು ಕಳುಹಿಸಲಾಗಿದೆ
‘ತಾರ್ಕಿಕ ವ್ಯತ್ಯಾಸಗಳು’ ಎಂದರೆ: ಆರಕ್ಕಿಂತ ಹೆಚ್ಚು ‘ಸಂತಾನ’ಗಳಿರುವುದು, ‘ಗಂಗೂಲಿ’ ಮತ್ತು ‘ದತ್ತ’ ಎಂಬಂತೆ ಹೆಸರುಗಳ ಅಕ್ಷರ ಸಂಯೋಜನೆಯಲ್ಲಿ ವ್ಯತ್ಯಾಸ, ಪೋಷಕರು ಮತ್ತು ಮಕ್ಕಳ ನಡುವೆ ಕೇವಲ 15 ವರ್ಷಗಳ ವಯಸ್ಸಿನ ಅಂತರ ಇರುವುದು, ಹಾಗೂ ಅಜ್ಜ–ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇರುವುದು...
ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಾಗ್ಚಿ 'ಪೋಷಕರು ಮತ್ತು ಮಗುವಿನ ನಡುವೆ 15 ವರ್ಷದ ವಯಸ್ಸಿನ ಅಂತರ ಇರುವುದು ಹೇಗೆ ತರ್ಕಕ್ಕೆ ವಿರುದ್ಧವಾಗುತ್ತದೆ ಎಂದು ಪ್ರಶ್ನಿಸಿದರು; “ಮಕ್ಕಳ ವಿವಾಹವೇ ಇಲ್ಲದ ದೇಶದಲ್ಲಿ ನಾವು ಬದುಕುತ್ತಿದ್ದೇವೆಯೇ?” ಎಂದು ಕೇಳಿದರು.
ಒಂದೇ ಜಿಲ್ಲೆಯಲ್ಲಿ 2.31 ಲಕ್ಷಕ್ಕೂ ಹೆಚ್ಚು ಜನರಿಗೆ ಅವರ ವಿರುದ್ಧ ಕಂಡುಬಂದ ‘ತಾರ್ಕಿಕ ವ್ಯತ್ಯಾಸಗಳನ್ನು’ ವಿವರಿಸಲು ನೋಟಿಸ್ಗಳು ಬಂದಿವೆ.
‘ಸಂತಾನ’ ವರ್ಗದಲ್ಲಿ ಜನಸಂಖ್ಯೆಯ 2.12% ಮಂದಿಗೆ ನೋಟಿಸ್ಗಳನ್ನು ನೀಡಲಾಗಿದೆ.
ಈ ಎಲ್ಲಾ ಮಾನದಂಡಗಳು ಎಲ್ಲಿಂದ ಬಂದವು?
ಯಾರು ನಿರ್ಧರಿಸುತ್ತಾರೆ?
ಈ 1.36 ಕೋಟಿ ಜನರ ವಿಚಾರಣೆ ನಡೆಸಲು ಚುನಾವಣಾ ಆಯೋಗ (EC) ಕೇವಲ 500 ಸ್ಥಳಗಳನ್ನು ಮಾತ್ರ ಒದಗಿಸಿತ್ತು, ಆದರೆ 1900ಕ್ಕೂ ಹೆಚ್ಚು ಸ್ಥಳಗಳು ಅಗತ್ಯವಾಗಿದ್ದವು.
32 ಲಕ್ಷ ಜನರನ್ನು ‘ಅನ್-ಮ್ಯಾಪ್ಡ್’ (2002ರ ಪಶ್ಚಿಮ ಬಂಗಾಳದ ಹಿಂದಿನ SIRನಲ್ಲಿ ತಯಾರಿಸಲಾದ ಮತದಾರರ ಪಟ್ಟಿಗಳಲ್ಲಿ ಅವರ ಹೆಸರುಗಳು ಅಥವಾ ಅವರ ಕುಟುಂಬದ ಸದಸ್ಯರ ಹೆಸರುಗಳು ಕಾಣಿಸದವರು) ಎಂದು ಗುರುತಿಸಿ, ದಾಖಲೆಗಳನ್ನು ಸಲ್ಲಿಸಿ ಆಕ್ಷೇಪಣೆಗಳನ್ನು ದಾಖಲಿಸುವಂತೆ ನೋಟಿಸ್ಗಳನ್ನು ಕಳುಹಿಸಲಾಗಿದೆ
ಇದು
mass exclusion not mass inclusion
(ಬಿಕ್ಕಟ್ಟಿನ ಮೂಲ ಕಾರಣ
2 ಮಾರ್ಚ 2023ರಂದು ಆಗಿನ ಸುಪ್ರೀಂಕೋರ್ಟ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠವು ಭಾರತದ ಚುನಾವಣಾ ಅಯೋಗದ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಸೂಚಿಸಿತು. ಮತ್ತಷ್ಟು ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ನೀತಿ ತರಲು ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂಕೋರ್ಟನ ಸಿಜೆಐ (ಮುಖ್ಯ ನ್ಯಾಯಮೂರ್ತಿಗಳು) ಒಳಗೊಂಡ ಸಮಿತಿಯು ರಾಷ್ಟçಪತಿಗಳಿಗೆ ತಮ್ಮ ಆಯ್ಕೆಯನ್ನು ಕಳಿಸಿಕೊಡಬೇಕೆಂದು ನಿರ್ದೇಶನ ನೀಡಿತು. ಆದರೆ ‘ತನ್ನ ನಿರ್ದೇಶನವು ಸಂಸತ್ತು ಕಾಯ್ದೆ ರೂಪಿಸುವವರೆಗೆ ಮಾತ್ರ ಮಾನ್ಯವಾಗಿರುತ್ತದೆ’ ಎಂದು ಸೇರಿಸಿತು. ಇದನ್ನೇ ನೆಪ ಮಾಡಿಕೊಂಡ ಆಗಿನ ಮೋದಿ ನೇತೃತ್ವದ ಸರ್ಕಾರವು 28 ಡಿಸೆಂಬರ್ 2023ರಂದು ಮುಖ್ಯ ಚುನಾವಣಾ ಅಯುಕ್ತ ಮತ್ತು ಇತರೆ ಆಯುಕ್ತರು(ನೇಮಕಾತಿ, ಸೇವೆ, ಟರ್ಮ್ಸ ಆಪ್ ಆಫೀಸ್) 2023 ಕಾಯ್ದೆಯನ್ನು ಜಾರಿಗೆ ತಂದರು. ಈ ಕಾಯ್ದೆಯಲ್ಲಿ ಸಿಜೆಐಯವರನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟು ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಪಿಎಂ ನಾಮನಿರ್ದೇಶನ ಮಾಡುವ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಈ ಕಾಯ್ದೆಯನ್ನು 2 ಜನವರಿ 2024ರಂದು ಜಾರಿಗೊಳಿಸಲಾಯಿತು.)
ಇಷ್ಟು ಕಾರಣಗಳು ಸಾಕಲ್ಲವೇ! ಎಸ್ ಐಆರ್ ತಿರಸ್ಕರಿಸಲು?
- ಶ್ರೀಪಾದ್ ಭಟ್, ಬೆಂಗಳೂರು
#WhynotSIR #SIR #BSripadBhat #votechori #voteloot #malgudiexpress #malgudinews #news #TopNews













