#📜ಪ್ರಚಲಿತ ವಿದ್ಯಮಾನ📜
ನಾನು ಕೇವಲ ಭಾಷಣ ಮಾಡದೆ ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಅವರು (ಬಿಜೆಪಿ ನಾಯಕರು) ಕೇವಲ ಭಾಷಣದಲ್ಲಿ ಹಿಂದೂ ಹಿಂದೂ ಎನ್ನುತ್ತಿರುತ್ತಾರೆ, ಆದರೆ ಹಿಂದೂಗಳಿಗೆ ಏನೂ ಮಾಡುವುದಿಲ್ಲ. ನಾನು ಕೇವಲ ಭಾಷಣ ಮಾಡದೆ, ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ, ಕ್ಷೇತ್ರದಲ್ಲಿ 152 ದೇವಸ್ಥಾನ ಕಟ್ಟಿಸಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳ್ಳಿ ಗ್ರಾಮದಲ್ಲಿ 7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಮ್ಮೆ ಅವಕಾಶ ಕೊಡಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು 7 ವರ್ಷದ ಹಿಂದೆ ಹೇಳಿದ್ದೆ. ಅದರಂತೆ ಅಭಿವೃದ್ಧಿ ಮಾಡಿ ತೋರಿಸಿದೆ. ಹಾಗಾಗಿ ಮತ್ತೊಮ್ಮೆ ಆಯ್ಕೆ ಮಾಡಿ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದರು.
ಗ್ರಾಮೀಣ ಕ್ಷೇತ್ರ ಬೆಳೆಸುತ್ತಿದ್ದೇನೆ, ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ. ಈ ಸ್ಪೀಡ್ ಕಟ್ ಮಾಡ ಬೇಡಿ. ನನಗೆ ಸುಧಾರಣೆ ಮಾಡುವ ಅವಕಾಶ ಸಿಕ್ಕಿದೆ, ನಿಮಗೆ ಸುಧಾರಣೆ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನೀವು ಮಗಳೆಂದು ಸ್ವೀಕಾರ ಮಾಡಿದ್ದೀರಿ. ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದರು.
ನಾನು ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಹೆಣ್ಣುಮಗಳಲ್ಲ, ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಬೇರೆ ಬೇರೆ ಮಂತ್ರಿಗಳು, ಅಧಿಕಾರಿಗಳ ಬಳಿ ಹೋಗಿ ಕೆಲಸ ತರುತ್ತಿದ್ದೇನೆ. ಈ ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ರಾಜ್ಯಕ್ಕೆ ಗೊತ್ತಿರಲಿಲ್ಲ. ಈಗ ಅಭಿವೃದ್ಧಿಯ ಮೂಲಕ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗುವಂತೆ ಮಾಡಿದ್ದೇನೆ ಎಂದರು.
ಒಂದು ಊರಲ್ಲಿ ಜಾತ್ರೆಯಾದರೆ ಇಡೀ ಊರನ್ನು ಸುಧಾರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಪ್ರತಿ ಗ್ರಾಮಕ್ಕೆ 5 -10 ಕೋಟಿ ರೂ. ಕೆಲಸ ತರುತ್ತಿದ್ದೇನೆ. ಈ ಹಿಂದೆ ಯಾರೂ ಇಷ್ಟು ಹಣ ಕೊಟ್ಟಿರಲಿಲ್ಲ ಎಂದರು.
ನಾನಾಗಲಿ, ಸಹೋದರ ಚನ್ನರಾಜ ಆಗಲಿ, ಮಗ ಮೃಣಾಲ ಆಗಲಿ ರಾಜಕಾರಣ ಮಾಡಲು ಬಂದಿಲ್ಲ. ಜನ ಸೇವೆ ಮಾಡಬೇಕು, ಜನರ ಪ್ರೀತಿಗಳಿಸಬೇಕೆಂದು ಬಂದವರು. ಒಳ್ಳೆಯ ಹೆಸರು ಮಾಡಬೇಕೆಂದು ನಾವು ಬಂದವರು. ನಮ್ಮ ಕೈಲಾದಷ್ಟು ಜನರ ಸೇವೆ ಮಾಡಿ ನಿಮ್ಮ ಪ್ರೀತಿ ಗಳಿಸುತ್ತಿದ್ದೇವೆ. ಸನ್ಮಾನದ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಳೆದ 7 ವರ್ಷಗಳಿಂದ ಗ್ರಾಮೀಣ ಕ್ಷೇತ್ರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ 7 ವರ್ಷದಿಂದ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಹೊಲಕ್ಕೆ ಸಾಗುವ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಸಹ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುರೇಶ ಪಾಟೀಲ, ರಾಜು ಪಾಟೀಲ, ಶೀಲಾ ತಿಪ್ಪಣ್ಣಗೋಳ, ನಿಂಗಪ್ಪ ಶಹಾಪೂರಕರ್, ಸುರೇಶ್ ಮುಚ್ಚಂಡಿ, ನಾಗೇಶ್ ದೇಸಾಯಿ, ಸಿಪಿಐ ನಾಗನಗೌಡ, ಪ್ರಕಾಶ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ್ ಸೇರಿದಂತೆ ಅನೇಕರು ಹಾಜರಿದ್ದರು.
#giving #speeches #saving #Hindu #culture #LakshmiHebbalkar #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನಾನು ಕೇವಲ ಭಾಷಣ ಮಾಡದೆ ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಅವರು (ಬಿಜೆಪಿ ನಾಯಕರು) ಕೇವಲ ಭಾಷಣದಲ್ಲಿ ಹಿಂದೂ ಹಿಂದೂ ಎನ್ನುತ್ತಿರುತ್ತಾರೆ, ಆದರೆ ಹಿಂದೂಗಳಿಗೆ ಏನೂ ಮಾಡುವುದಿಲ್ಲ. ನಾನು ಕೇವಲ ಭಾಷಣ ಮಾಡದೆ, ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ, ಕ್ಷೇತ್ರದಲ್ಲಿ 152 ದೇವಸ್ಥಾನ ಕಟ್ಟಿಸಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳ್ಳಿ ಗ್ರಾಮದಲ್ಲಿ 7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಮ್ಮೆ ಅವಕಾಶ ಕೊಡಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು 7 ವರ್ಷದ ಹಿಂದೆ ಹೇಳಿದ್ದೆ. ಅದರಂತೆ ಅಭಿವೃದ್ಧಿ ಮಾಡಿ ತೋರಿಸಿದೆ. ಹಾಗಾಗಿ ಮತ್ತೊಮ್ಮೆ ಆಯ್ಕೆ ಮಾಡಿ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದರು.
ಗ್ರಾಮೀಣ ಕ್ಷೇತ್ರ ಬೆಳೆಸುತ್ತಿದ್ದೇನೆ, ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ. ಈ ಸ್ಪೀಡ್ ಕಟ್ ಮಾಡ ಬೇಡಿ. ನನಗೆ ಸುಧಾರಣೆ ಮಾಡುವ ಅವಕಾಶ ಸಿಕ್ಕಿದೆ, ನಿಮಗೆ ಸುಧಾರಣೆ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನೀವು ಮಗಳೆಂದು ಸ್ವೀಕಾರ ಮಾಡಿದ್ದೀರಿ. ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದರು.
ನಾನು ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಹೆಣ್ಣುಮಗಳಲ್ಲ, ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಬೇರೆ ಬೇರೆ ಮಂತ್ರಿಗಳು, ಅಧಿಕಾರಿಗಳ ಬಳಿ ಹೋಗಿ ಕೆಲಸ ತರುತ್ತಿದ್ದೇನೆ. ಈ ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ರಾಜ್ಯಕ್ಕೆ ಗೊತ್ತಿರಲಿಲ್ಲ. ಈಗ ಅಭಿವೃದ್ಧಿಯ ಮೂಲಕ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗುವಂತೆ ಮಾಡಿದ್ದೇನೆ ಎಂದರು.
ಒಂದು ಊರಲ್ಲಿ ಜಾತ್ರೆಯಾದರೆ ಇಡೀ ಊರನ್ನು ಸುಧಾರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಪ್ರತಿ ಗ್ರಾಮಕ್ಕೆ 5 -10 ಕೋಟಿ ರೂ. ಕೆಲಸ ತರುತ್ತಿದ್ದೇನೆ. ಈ ಹಿಂದೆ ಯಾರೂ ಇಷ್ಟು ಹಣ ಕೊಟ್ಟಿರಲಿಲ್ಲ ಎಂದರು.
ನಾನಾಗಲಿ, ಸಹೋದರ ಚನ್ನರಾಜ ಆಗಲಿ, ಮಗ ಮೃಣಾಲ ಆಗಲಿ ರಾಜಕಾರಣ ಮಾಡಲು ಬಂದಿಲ್ಲ. ಜನ ಸೇವೆ ಮಾಡಬೇಕು, ಜನರ ಪ್ರೀತಿಗಳಿಸಬೇಕೆಂದು ಬಂದವರು. ಒಳ್ಳೆಯ ಹೆಸರು ಮಾಡಬೇಕೆಂದು ನಾವು ಬಂದವರು. ನಮ್ಮ ಕೈಲಾದಷ್ಟು ಜನರ ಸೇವೆ ಮಾಡಿ ನಿಮ್ಮ ಪ್ರೀತಿ ಗಳಿಸುತ್ತಿದ್ದೇವೆ. ಸನ್ಮಾನದ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಳೆದ 7 ವರ್ಷಗಳಿಂದ ಗ್ರಾಮೀಣ ಕ್ಷೇತ್ರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ 7 ವರ್ಷದಿಂದ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಹೊಲಕ್ಕೆ ಸಾಗುವ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಸಹ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುರೇಶ ಪಾಟೀಲ, ರಾಜು ಪಾಟೀಲ, ಶೀಲಾ ತಿಪ್ಪಣ್ಣಗೋಳ, ನಿಂಗಪ್ಪ ಶಹಾಪೂರಕರ್, ಸುರೇಶ್ ಮುಚ್ಚಂಡಿ, ನಾಗೇಶ್ ದೇಸಾಯಿ, ಸಿಪಿಐ ನಾಗನಗೌಡ, ಪ್ರಕಾಶ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ್ ಸೇರಿದಂತೆ ಅನೇಕರು ಹಾಜರಿದ್ದರು.
#giving #speeches #saving #Hindu #culture #LakshmiHebbalkar #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನರೇಗಾ ಬಗ್ಗೆ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಯಲಿದೆ: ಸಿದ್ದರಾಮಯ್ಯ
ಬೆಂಗಳೂರು: ಜನವರಿ 22ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ (MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣ ಮತ್ತು ನರೇಗಾ (MGNREGA) ಯೋಜನೆ ಬದಲಾವಣೆಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧಿವೇಶನದ ನಂತರ ಆಯವ್ಯಯದ ಸಿದ್ಧತೆ ಪ್ರಾರಂಭಿಸಲಾಗುವುದು ಎಂದರು.
ದೆಹಲಿಗೆ ಭೇಟಿ ನೀಡುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವರಿಷ್ಠರು ಕರೆ ನೀಡಿದರೆ ದೆಹಲಿಗೆ ತೆರಳುತ್ತೇನೆ ಎಂದರು.
ಡಿಜಿಪಿ ರಾಮಚಂದ್ರರಾವ್ ಅವರ ಅನುಚಿತ ವರ್ತನೆ ವಿರುದ್ಧ ಕ್ರಮದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ, ಅಮಾನತ್ತುಗೊಳಿಸಲಾಗಿದೆ ಎಂದರು.
#special #discussion on #MNREGA #joint #session #Siddaramaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ತುಮಕೂರು ಜಿಲ್ಲೆಯ ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ಲೇಖನ ಸ್ಪರ್ಧೆ
ತುಮಕೂರು: ಪ್ರೊ. ಬರಗೂರು ರಾಮಚಂದ್ರಪ್ಪ ಅವರ 'ಬಯಲಾಟದ ಭೀಮಣ್ಣ' ಕಥೆ ಅಥವಾ 'ಮನುಷ್ಯರು ಬೇಕಾಗಿದ್ದಾರೆ, ಹುಡುಕೋಣ ಬನ್ನಿ' ಲೇಖನ ಮತ್ತು ಡಾ. ಲಲಿತಾ ಸಿದ್ಧಬಸಯ್ಯ ಅವರ 'ಮೇಡಂ ಅಂಡ್ ಆಡಂ' ಕಥೆ ಅಥವಾ ಆಯ್ದ ಐದು ಕವಿತೆಗಳ ಕುರಿತು ವಿಮರ್ಶಾ ಬರಹಗಳನ್ನು ಕಳುಹಿಸಲು ಆತ್ಮೀಯ ಕರೆ...
ಸೂಚನೆಗಳು:
ಈ ಮೇಲಿನ ಇಬ್ಬರೂ ಲೇಖಕರ ಎರಡು ಬರಹಗಳಲ್ಲಿ, ತಲಾ ಒಂದೊಂದು ಬರಹವನ್ನು ಕುರಿತು ವಿಮರ್ಶೆ ಬರೆಯಬೇಕು. ಅಂದರೆ ಸ್ಪರ್ಧೆಗೆ ಎರಡು ಲೇಖನಗಳನ್ನು ಕಳುಹಿಸಬೇಕು. ಒಂದೇ ಲೇಖಕರ ಎರಡು ಬರಹಗಳನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.
ಗರಿಷ್ಠ ಮಿತಿ: ಎರಡೂ ಲೇಖನಗಳು ಸೇರಿ ಫುಲ್ಸ್ಕೇಪ್ 8-10 ಪುಟ ಅಥವಾ 2000-3000 ಪದಗಳು.
ವಿದ್ಯಾರ್ಥಿಯು ಕಾಲೇಜಿನ ಐಡಿ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ವಿದ್ಯಾರ್ಥಿಯ ಸ್ವಂತ ಬರಹವೆಂದು ಪ್ರಮಾಣೀಕರಿಸಲಾದ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರವನ್ನು ಲಗತ್ತಿಸಿರಬೇಕು.
ಪ್ರತಿ ಕಾಲೇಜಿನಿಂದ ಗರಿಷ್ಠ ನಾಲ್ಕು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕಡೆಯ ದಿನಾಂಕ ಜನವರಿ, 27, 2026 ರ ಒಳಗೆ ಡಾ. ನಾಗಭೂಷಣ ಬಗ್ಗನಡು, ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, 577502 (ಮೊ. 9964852581) ಇವರಿಗೆ ತಲುಪುವಂತೆ ಬರಹಗಳನ್ನು ನೇರವಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು.
ಆಯ್ದ ಸಾಹಿತಿಗಳ ಲೇಖನ ಮತ್ತು ಕಥೆಗಳನ್ನು ಈ ಪೋಸ್ಟರ್ನೊಂದಿಗೆ ಕಳುಹಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಿಮ್ಮ ಕಾಲೇಜಿನ ಆಯೋಜಕರಿಂದ ಪಡೆದುಕೊಳ್ಳಬಹುದು.
ಗಮನಿಸಿ: ಭಾನುವಾರ, ಫೆಬ್ರವರಿ 1, 2026 ರಂದು, ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ ವೋಚರ್ ನೀಡಲಾಗುವುದು.
ಪ್ರಥಮ ಬಹುಮಾನ: ರೂ.1500/-
ದ್ವಿತೀಯ ಬಹುಮಾನ: ರೂ.1250/-
ತೃತೀಯ ಬಹುಮಾನ: ರೂ.1000/-
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಹೇಶ್ ಕುಮಾರ್ ಸಿ. ಎಸ್., ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, 88841 51513
ಸರ್ವೆ ನಂ. 66, ಬುರುಗುಂಟೆ ಹಳ್ಳಿ, ಬಿಕ್ಕನಹಳ್ಳಿ ಮುಖ್ಯರಸ್ತೆ, ಸರ್ಜಾಪುರ, ಬೆಂಗಳೂರು - 562125 | 080 66144900
#Essay #competition #graduate #students #Tumkur #district #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬಗೆದಷ್ಟೂ ಬಯಲಾಗುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರ!: ಆರ್ ಅಶೋಕ್
ಅಬಕಾರಿ ಇಲಾಖೆಯಲ್ಲಿ ಕಾಂಗ್ರೆಸ್ ಸರ್ಕಾರದ ಲಂಚಾವತಾರ; ಬಗೆದಷ್ಟೂ ಬಯಲಾಗುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರ!
ಅಬಕಾರಿ ಇಲಾಖೆ ಕಾಂಗ್ರೆಸ್ ಪಾಲಿನ ಪರ್ಸೆಂಟೇಜ್ ದಂಧೆಯ ಎಟಿಎಂ ಯಂತ್ರವಾಗಿ ಬದಲಾಗಿದೆ. ಅಧಿಕಾರಿಗಳ ವರ್ಗಾವಣೆಯಿಂದ ಹಿಡಿದು, ಮದ್ಯದಂಗಡಿಗಳ ಲೈಸೆನ್ಸ್ ಮಂಜೂರಾತಿಯವರೆಗೆ ಪ್ರತಿಯೊಂದಕ್ಕೂ ಇಲ್ಲಿ ಲಂಚದ ಮುದ್ರೆ ಅನಿವಾರ್ಯವಾಗಿದೆ.
ಲಂಚ ನೀಡದೆ ಒಂದು ಕಡತವೂ ಕದಲುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ.
ಮದ್ಯದ ಅಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ನಡೆಯುತ್ತಿರುವ ಬಲವಂತದ ವಸೂಲಿ ದಂಧೆಯಲ್ಲಿ ಬರೋಬ್ಬರಿ ₹2,500 ಕೋಟಿ ರೂಪಾಯಿಗಳ ಬೃಹತ್ ಹಗರಣ ಎಂಬ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ.
ಈ ಕುರಿತು ರಾಜ್ಯ ಮದ್ಯ ಮಾರಾಟಗಾರರ ಸಂಘವೇ ಈ ಬಗ್ಗೆ ಲಿಖಿತ ದೂರು ನೀಡಿರುವುದು, "ಕೈಬೆಚ್ಚಗೆ ಮಾಡದಿದ್ದರೆ ಸುಳ್ಳು ಕೇಸ್ ಹಾಕಿ ಟಾರ್ಗೆಟ್ ಮಾಡಲಾಗುತ್ತದೆ" ಎಂದು ಬಾರ್ ಮಾಲೀಕರೊಬ್ಬರು ಲೋಕಾಯುಕ್ತದ ಮೆಟ್ಟಿಲೇರಿರುವುದು ಇಲಾಖೆಯ ಕರ್ಮಕಾಂಡಕ್ಕೆ ಸ್ಪಷ್ಟ ಸಾಕ್ಷಿಗಳಾಗಿವೆ. ಇಷ್ಟಾದರೂ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದೀರಲ್ಲ ಸಚಿವ @PriyankKharge ಅವರೇ, ನಿಮ್ಮ ಸರ್ಕಾರಕ್ಕೆ ನಾಚಿಕೆ ಅನ್ನೋದೇ ಇಲ್ಲವೇ?
ಈ ಬ್ರಹ್ಮಾಂಡ ಭ್ರಷ್ಟಾಚಾರದ ಹಣ ಯಾರ ಕಿಸೆ ಸೇರುತ್ತಿದೆ ಎಂಬುದಕ್ಕೆ ಉತ್ತರವಿಲ್ಲದಿದ್ದರೂ, ಮುಖ್ಯಮಂತ್ರಿಗಳ, ಸಚಿವರ ಆಶೀರ್ವಾದವಿಲ್ಲದೆ ಈ ಸುಲಿಗೆ ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಯಾವಾಗಲೂ "ನನ್ನದು ತೆರೆದ ಪುಸ್ತಕ" ಎಂದು ಬಡಾಯಿ ಕೊಚ್ಚಿಕೊಳ್ಳುವ ಮುಖ್ಯಮಂತ್ರಿ @siddaramaiah ಅವರೇ, ಇಷ್ಟೊಂದು ಗಂಭೀರ ಆರೋಪಗಳಿದ್ದರೂ, ದಾಖಲೆಗಳಿದ್ದರೂ ನಿಮ್ಮ ಈ ಮೌನದ ಹಿಂದಿನ ರಹಸ್ಯವೇನು? ನಿಮ್ಮ ಮೂಗಿನ ನೇರಕ್ಕೇ ಇಷ್ಟು ದೊಡ್ಡ ಅಕ್ರಮ ನಡೆಯುತ್ತಿದ್ದರೂ ನೀವು ಯಾಕೆ ಮೌನವಾಗಿದ್ದೀರಿ? ಈ ಲೂಟಿಯಲ್ಲಿ ನಿಮ್ಮ ಪಾಲೆಷ್ಟು ಎಂಬ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ.
ಬಾರ್, ಪಬ್, ಕ್ಲಬ್ಗಳಿಂದ ‘ಮಂಥ್ಲಿ ಮನಿ’ ವಸೂಲಿ ಮಾಡುವ ಭ್ರಷ್ಟ ಸಚಿವ ಆರ್. ಬಿ. ತಿಮ್ಮಾಪುರ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಲು ನಿಮಗಿರುವ ಅಡ್ಡಿಯಾದರೂ ಏನು?
ಇಷ್ಟೇ ಅಲ್ಲದೆ ದಿವಾಳಿ ಆಗಿರುವ ಸರ್ಕಾರದ ಖಜಾನೆ ತುಂಬಿಸಲು ರಾಜ್ಯದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯಲು ಅವಕಾಶ ನೀಡಲಾಗಿದೆ. ಈ ಸರ್ಕಾರದ ಹಣದ ದಾಹಕ್ಕೆ ರಾಜ್ಯದ ಯುವಜನತೆಯ ಭವಿಷ್ಯ ಬಲಿಯಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಮದ್ಯದ ದಂಧೆ ಹರಡುತ್ತಿದ್ದು, ಸಣ್ಣ ಮಕ್ಕಳು ಮತ್ತು ವಿದ್ಯಾರ್ಥಿಗಳು ಕುಡಿತದ ದಾಸರಾಗುತ್ತಿದ್ದಾರೆ. ಮದ್ಯಪಾನದ ಮದದಿಂದ ಸಂಭವಿಸುತ್ತಿರುವ ಅಪಘಾತಗಳು ಕುಟುಂಬಗಳನ್ನು ಬೀದಿಗೆ ತಳ್ಳುತ್ತಿವೆ. ಇಷ್ಟೆಲ್ಲಾ ಅವಾಂತರಗಳು ಸಂಭವಿಸುತ್ತಿದ್ದರೂ, ಅಬಕಾರಿ ಇಲಾಖೆಯ ಅಧಿಕಾರಿಗಳು ಕೇವಲ ವಸೂಲಿಯಲ್ಲೇ ಮಗ್ನರಾಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೂಡಲೇ ಎಚ್ಚೆತ್ತು ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆದು ಸಮಗ್ರ ತನಿಖೆಗೆ ಆದೇಶಿಸಬೇಕು. ಭ್ರಷ್ಟರನ್ನು ರಕ್ಷಿಸುವುದೇ ನಿಮ್ಮ ಗುರಿಯಾಗಿದ್ದರೆ, ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಸುಧಾರಿಸಿಕೊಳ್ಳಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ!
- ಆರ್ ಅಶೋಕ್, ವಿರೋಧ ಪಕ್ಷದ ನಾಯಕ
#corruption #universe #exposed #everyway #RAshok #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಮನುಷ್ಯ ಪ್ರೀತಿಯ ಅನ್ವೇಷಣೆಯ ವಿಪುಲ ರೂಪ ಧಾರಿಣಿ
ಡಾ. ಜಿ.ಎಸ್ ಶಿವರುದ್ರಪ್ಪನವರ ಕವಿತೆಗಳು ರಂಗ ರೂಪವನ್ನು ಪಡೆದು ಸ್ವತಂತ್ರವಾಗಿ ವಿಹರಿಸಲು ಪ್ರಯತ್ನಿಸುವುದಕ್ಕೆ ಶುರು ಮಾಡಿದಾಗ, ನೋಡುಗರ ಮೈಮನಗಳಲ್ಲಿ ವಿದ್ಯುತ್ ಸಂಚಾರವಾಗ ತೊಡಗಿತು. ಕವಿತೆ ಬರಿ ಅಕ್ಷರಗಳಾಗಿದ್ದವು ಅದು ರಂಗಕ್ಕೆ ಬಂದಾಗ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವವರಂತೆ ನರ್ತಿಸುತ್ತಿತ್ತು. ಕಾವ್ಯ ಮಾತಾಡುತ್ತ, ಆಟವಾಡುತ್ತ, ವಾಚಿಸುತ್ತ, ಸಂಜ್ಞೆ ತೋರುತ್ತ ಹಲವು ಪ್ರಶ್ನೆಗಳನ್ನು ಸಮುದಾಯಕ್ಕೆ, ಓದುಗರಿಗೆ,ನೋಡುಗರಿಗೆ ಕೇಳುತ್ತಲಿದ್ದವು. ಆ ಪ್ರಶ್ನೆಗಳೆಂದರೆ ಮಹಿಳೆಯ ಸ್ವಾತಂತ್ರ್ಯ ಎಲ್ಲಿದೆ? ಪ್ರೀತಿ, ಕರುಣೆಗಳೆಲ್ಲಿವೆ? ದೇವರು ಎಲ್ಲಿದ್ದಾನೆ? ಮನುಷ್ಯರೆಲ್ಲಿದ್ದಾರೆ? ಧರ್ಮ ಎಲ್ಲಿದೆ? ನ್ಯಾಯ ಎಲ್ಲಿದೆ? ಎಂಬುವುದಕ್ಕೆ ಕುಪ್ಪಳಿಯ ಹೇಮಾಂಗಣ ವೇದಿಕೆ ಸಾಕ್ಷಿಯಾಯಿತು.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು ಅವರು ಏರ್ಪಡಿಸಿದ 'ಸಾಹಿತ್ಯ ವಿಮರ್ಶೆ ತಾತ್ವಿಕತೆ ಮತ್ತು ಪ್ರಾಯೋಗಿಕತೆ' ಕಮ್ಮಟದಲ್ಲಿ 'ವಿಪುಲ ರೂಪ ಧಾರಿಣಿ' ನಾಟಕವು ಜಿ.ಎಸ್.ಎಸ್ ಕವಿತೆಗಳ ಕಾವ್ಯ ಅಭಿನಯದ ಒಂದು ನೋಟವನ್ನು ಶಿವಮೊಗ್ಗದ ಹೊಂಗಿರಣ ತಂಡ ಪ್ರದರ್ಶಿಸಿತು. ಮೂರು ದಶಕಗಳ ಕಾಲ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ತಂಡ ಅನೇಕ ಪ್ರಯೋಗಗಳನ್ನು ಮಾಡಿದೆ, ಮಾಡುತ್ತಿದೆ. ವಿಮರ್ಶೆಗಳನ್ನು, ಕಥನಗಳನ್ನು ನಾಟಕ ರೂಪದಲ್ಲಿ ರಂಗಕ್ಕೆ ತಂದ ಕೀರ್ತಿ ಹೊಂಗಿರಣದ ಪ್ರಾಯೋಗಿಕತೆಗೆ ಸಾಕ್ಷಿ.
ವಿಶಿಷ್ಟವಾಗಿ ಇಲ್ಲಿಯವರೆಗೆ ಜನಮಾನಸದಲ್ಲಿರುವ ಕವಿತೆಗಳನ್ನು ಬಳಸದೆ, ಕೇಳದೆ ಇರುವ ಕವನಗಳಿಗೆ ರಂಗ ರೂಪ ಕೊಡುವುದರ ಮೂಲಕ ರಂಗ ವಿನ್ಯಾಸವನ್ನು ರೂಪಿಸಿಕೊಂಡಿರುವ ರಂಗ ಪಠ್ಯ. ನಟರ ವಾಚಿಕ ಆಂಗಿಕ ಅಭಿನಯವೇ ನಾಟಕದ ಜೀವಾಳವಾಗಿದೆ.
ಅಸಹಾಯಕರಿಗೆ ಸಹಾಯ ಮಾಡುವ, ಪ್ರೀತಿಗಾಗಿ ಜೀವಿಸುವ, ಬಡವರಿಗೆ ಸಹಾಯ ಹಸ್ತ ಚಾಚುವ, ವಾತ್ಸಲ್ಯದ ಹೃದಯಗಳಾಗಿ ತಡಕಾಡುವ ಮನಸ್ಸುಗಳನ್ನು ಹುಡುಕಾಡುತ್ತಿದ್ದೇನೆ ಎಂದು ಜಿ.ಎಸ್.ಎಸ್ ಅವರ ಕವಿತೆಗಳು ಅಕ್ಷರಸ್ಥನನ್ನು, ಅಧಿಕಾರಿಶಾಹಿಗಳನ್ನು, ಬಂಡವಾಳ ಶಾಹಿಗಳನ್ನು ಕಗ್ಗಲಿನ ಹೃದಯಕ್ಕೂ ಪ್ರವೇಶಿಸಿ ಕೇಳುತ್ತಾರೆ. ಗುಡಿ,ಚರ್ಚ್, ಮಸೀದಿಗಳ ಹೆಸರಲ್ಲಿ ಜನರ ಮನಸ್ಸಿನಲ್ಲಿ ಬೆಂಕಿ ಹತ್ತಿಸುವವರು ಯಾರು? ಇದಕ್ಕೆಲ್ಲ ಯಾರು ಹೊಣೆ ಎಂದಾಗ ಕವಿ ಕೇಳುವ ಪ್ರಶ್ನೆ, ನಾವೇ ಇದಕ್ಕೆಲ್ಲ ಹೊಣೆ ಎಂದು ಹೇಳುವರು.
ಸಾಹಿತ್ಯದ ಜವಾಬ್ದಾರಿ, ಸಾಹಿತಿಗಳ ಔಚಿತ್ಯವೇನು? ಕಾವ್ಯ ಏನೆಂದು ಹೇಳಬೇಕು? ಏನನ್ನು ಹೇಳಬಾರದು, ಕಾವ್ಯ ಏನು ಹೇಳುತ್ತಿದೆ, ಅದರ ಅಂತರಾತ್ಮ ಗ್ರಹಿಸುವ ಬಗೆ ಹೇಗೆ, ಅದರ ಸ್ವರೂಪದ ವ್ಯಾಖ್ಯೆಗಳನ್ನು ಕಂಡುಕೊಳ್ಳುವುದು ನಿಜವಾದ ಸೃಜನಶೀಲತೆ ಎಂದು ಕವಿ ಮನಸ್ಸು ಪ್ರಶ್ನೆಸಿಕೊಳ್ಳುತ್ತಿದೆ. ಈ ಆಲೋಚನೆಗಳನ್ನು ಗ್ರಹಿಸಿದಾಗ
"ಮನುಷ್ಯನ ಹೃದಯದಷ್ಟು
ಫಲವತ್ತಾದ ಜಾಗ ಇನ್ನೊಂದಿಲ್ಲ,
ಅಲ್ಲಿ ಏನನ್ನು ಬೆಳೆಯಬೇಕು?
ಪ್ರೀತಿಯೋ? ದ್ವೇಷವೊ?
ಆಯ್ಕೆ ನಿಮ್ಮದು" ಎಂಬ ಪಿ. ಲಂಕೇಶ್ ಅವರ ಮಾತು ನೆನಪಿಸುತ್ತಿತ್ತು. ವಿಚಾರ ಮಡುಗಟ್ಟಿದರೆ ಪುರಾಣವಾಗಿ ಬಿಡುವ ಸಂಭವವೇ ಹೆಚ್ಚು, ವಿಚಾರಗಳು ಚಲನಶೀಲವಾದಾಗ ಚರಿತ್ರೆ ನಿರ್ಮಾಣವಾಗುವುದೆಂಬ ಕವಿತೆಗಳ ಆಶಯ ಮನಮುಟ್ಟುವಂತಿತ್ತು.
ಮನುಷ್ಯ- ಪ್ರೀತಿ- ದೇವರು
ಪ್ರತಿಯೊಂದು ಧರ್ಮಗಳ ದೇವಸ್ಥಾನಗಳಲ್ಲಿರುವ ಅಂಧಕಾರ, ಆಡಂಬರದ ಪೂಜಾರಿಗಳ ಸಾಂಪ್ರದಾಯಿಕತೆಗೆ ಮನುಷ್ಯನು ಬೀಳದಿರಲಿ ಎಂಬ ಎಚ್ಚರದಿಂದಲೇ ನಾಟಕ ಸಿಡಿಲಬ್ಬರದಂತೆ ಶುರುವಾಗುತ್ತದೆ. 'ಈ ಪವಿತ್ರ ಭಾರತದಲ್ಲಿ ಹಿಂದುಗಳಿದ್ದಾರೆ ಮುಸ್ಲಿಮರಿದ್ದಾರೆ ಕ್ರೈಸ್ತರಿದ್ದಾರೆ, ಬುದ್ಧರಿದ್ದಾರೆ, ಜೈನರಿದ್ದಾರೆ, ಸಿಖ್ ರಿದ್ದಾರೆ, ಬ್ರಾಹ್ಮಣರಿದ್ದಾರೆ, ಒಕ್ಕಲಿಗರಿದ್ದಾರೆ ಅಸ್ಪೃಶ್ಯರಿದ್ದಾರೆ ಆದರೆ ನಾನು ಹುಡುಕುತ್ತಿರುವುದು ಮನುಷ್ಯನನ್ನು ದಯಮಾಡಿ ಹೇಳಿ ಅವರು ಎಲ್ಲಿದ್ದಾರೆ?'
'ಈ ದೇಶದ ಉದ್ದಗಲಕ್ಕೂ ಅಸಂಖ್ಯಾತ ಗುಡಿಗಳಿವೆ, ಮಸೀದಿಗಳಿವೆ, ಮಂದಿರಗಳಿವೆ, ಬಸದಿಗಳಿವೆ ದಯಮಾಡಿ ಹೇಳಿ. ಆದರೆ ನಾನು ಹುಡುಕುತ್ತಿರುವುದು ದೇವರನ್ನು ದಯಮಾಡಿ ಹೇಳಿ ಅವನು ಎಲ್ಲಿದ್ದಾನೆ?'
ಈ ದೇಶದ ಹಿಂದುಗಳಿಗೆ ಭಗವದ್ಗೀತೆ ಇದೆ. ಶಾಸ್ತ್ರ, ಪುರಾಣ ಆಗಮಗಳಿವೆ. ಮುಸ್ಲಿಮರಿಗೆ ಕುರಾನ್ ಇದೆ. ಕ್ರೈಸ್ತರಿಗೆ ಬೈಬಲ್ ಇದೆ. ಲಿಂಗಾಯಿತರಿಗೆ ವಚನಗಳಿಗವೆ. ಆದರೆ ನಾನು ಹುಡುಕುತ್ತಿರುವುದು ಪ್ರೀತಿಗಾಗಿ. ದಯಮಾಡಿ ಹೇಳಿ ಅದು ಎಲ್ಲಿದೆ? ನಾವು ಹುಡುಕುತ್ತಿರುವುದು ಪ್ರೀತಿಗಾಗಿ ದಯಮಾಡಿ ಹೇಳಿ ಅದು ಎಲ್ಲಿದೆ? ಎಂದು ಪಾತ್ರಗಳು ಮನುಷ್ಯರಿಗಾಗಿ, ಪ್ರೀತಿಗಾಗಿ, ದೇವರಿಗಾಗಿ ಅನ್ವೇಷಣೆ ನಡೆಸುತ್ತಿವೆ ಎಂಬುದು ಶಿವರುದ್ರಪ್ಪ ನವರ ಕವಿತೆಗಳ ಅನುರಣನ.
ಬುದ್ಧ, ಅಲ್ಲಮರು ಇಹಲೋಕವನ್ನು ಕುರಿತು ವಿಚಾರಿಸುತ್ತಾರೆ, ತರ್ಕಿಸುತ್ತಾರೆ. ಕೊನೆಗೆ 'ನಾನೆಷ್ಟು ಎತ್ತರನೋ ನಮ್ಮ ದೇವರು ಕೂಡ ಅಷ್ಟೇ ಎತ್ತರ 'ಎಂಬ ನಿಲುವಿಗೆ ಬಂದು ನಿಲ್ಲುತ್ತಾರೆ. ಇಲ್ಲಿ ದೇವರೆಂದರೆ ವಿಚಾರವಷ್ಟೇ. ಯಾವುದೇ ರೀತಿಯ ಮೂರ್ತ ಸ್ವರೂಪದ ವಿಗ್ರಹಗಳಲ್ಲ. ಪ್ರೀತಿ, ಸ್ನೇಹ, ಕರುಣೆ, ಮರುಕ ಇವೇ ನಮ್ಮ ದೇವರು ಎಂಬ ಆಶಯ ರಂಗದಲ್ಲಿ ಪ್ರತಿಧ್ವನಿಸುತ್ತಿತ್ತು.
ಅಪರಾಧಿ ಸ್ಥಾನದಲ್ಲಿ ಕವಿತೆ
ಇಂದಿನ ಭಾರತದಲ್ಲಿ ಅದೆಷ್ಟು ಅನಾಥ ಮಕ್ಕಳು ಬೀದಿ ಬೀದಿಗಳಲ್ಲಿ ಚಿಂದಿ ಆಯುವ, ಬಿಕ್ಷಾಟನೆ ಮಾಡುವ ಮಕ್ಕಳನ್ನು ನೋಡುತ್ತೇವೆ. ಅವರಿಗೆ ಒಂದು ಸೂರು ಒದಗಿಸುವ ಯೋಗ್ಯತೆಯೂ ನಮಗಿಲ್ಲ. ಇದಕ್ಕೆ ಕಾರಣ ಯಾರೆಂದರೆ ನಾನು ಎಂದು ಕವಿ ಸ್ವವಿಮರ್ಶೆಗೊಳಪಡಿಸಿಕೊಳ್ಳುತ್ತಾರೆ. ಬೇರೆಯವರನ್ನು ಬೆರಳು ಮಾಡಿ ತೋರಿಸುವುದಕ್ಕಿಂತ ನನ್ನ ಕಡೆಗೆ ನಾನು ಮೊದಲು ತಪ್ಪಿತಸ್ಥನೆಂದು ಒಪ್ಪಿಕೊಳ್ಳಬೇಕೆಂಬ ರೀತಿಯಲ್ಲಿ ಕವಿ ಮಾತಾಡುತ್ತಾರೆ. ನಾನು ಚಳಿ ಇದೆ ಎಂದು ಬೆಚ್ಚನೆ ಉಡುಪನ್ನು ಧರಿಸಿರುವೆ. ಆದರೆ ಬೀದಿಯಲ್ಲಿರುವ ಮನುಷ್ಯ ಚಳಿಯಿಂದ ನಡುಗುತ್ತಿದ್ದಾನೆ. ಇದಕ್ಕಾರು ಹೊಣೆ ಎಂದು ಮತ್ತೆ ಕವಿ ನೊಂದುಕೊಳ್ಳುತ್ತಾರೆ, ಇದಕ್ಕೆ ನಾನು ಹೊಣೆ ಎಂದು ಮರುಗುತ್ತಾರೆ. ಕೊಳಗೇರಿಗಳಲ್ಲಿ ಇರುವ ಜನರನ್ನು ನೋಡಿ, ಬೆಚ್ಚಗಿರುವ ಮನೆಯಲ್ಲಿ ನಾನಿದ್ದೇನೆ ಇದಕ್ಕೆ ಯಾರು ಹೊಣೆ ಎಂದು ಕವಿ ಮತ್ತೆ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾರೆ. ಇವುಗಳಿಗೆಲ್ಲ ನಾನೇ ಹೊಣೆ ಎಂದು ಕವಿ ಅಪರಾಧಿ ಸ್ಥಾನದಲ್ಲಿ ನಿಲ್ಲಲು ಬಯಸುತ್ತಾರೆ. ಈ ತರಹದ ಮನೋಭೂಮಿಕೆ ಇರುವವರು ಮಾತ್ರ ಮನುಷ್ಯತ್ವವನ್ನು ಬಯಸುತ್ತಾರೆ, ಹುಡುಕುತ್ತಾರೆ.
ನಿಸರ್ಗದ ರೆಂಬೆಕೊಂಬೆಗಳನ್ನು ಕಡಿದು ಮರುಭೂಮಿ ಮಾಡಲು ಹೊರಟ ಮಾನವನಿಗೆ ನೀತಿ ಹೇಳುವುದಾದರೂ ಹೇಗೆ ಎಂದು ಕವಿ ಪರಿತಪಿಸುತ್ತಾರೆ. ಆಧುನಿಕತೆಯ ಭರಾಟೆಯಲ್ಲಿ ಮರಗಳ ಮಾರಣಹೋಮ ನಡೆದಿದೆ. ಇದಕ್ಕಾರು ಹೊಣೆ ಎಂದು ಕೇಳಿದರೆ ಮತ್ತೆ ಕವಿ ತನ್ನನ್ನೇ ಹೊಣೆಗಾರರನ್ನಾಗಿ ಮಾಡಿಕೊಳ್ಳುತ್ತಾರೆ. ಇನ್ನೊಬ್ಬರನ್ನು ದೂರುವ ವ್ಯವಧಾನ ಕವಿತೆಯದಲ್ಲ, ನಾವು ಪಡೆಯುತ್ತಿರುವ ಶಿಕ್ಷಣ ನಮ್ಮನ್ನು ಹೇಗೆ ನಡೆಸುತ್ತಿದೆ ಎಂಬುದೇ ನಮ್ಮನ್ನು ನಾವು ಕೇಳುವ ಪ್ರಶ್ನೆಯಾಗಬೇಕು. ಕವಿ, ಕವಿತೆ ಕೇಳುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಹುದೇ , ಅದಕ್ಕೆ ಉತ್ತರಿಸಲು ಸಾಧ್ಯವೇ?ಗೊತ್ತಿಲ್ಲ.
ಖಾದಿ ಕಾವಿಯಂತೆ ಸಾಹಿತ್ಯ
ಇಂದಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿಯನ್ನು ಕೂಡ ಕವಿತೆ ಮಾರ್ಮಿಕವಾಗಿ ವಿಮರ್ಶೆಗೊಳಪಡಿಸುತ್ತದೆ. 'ದೊಡ್ಡ ಪೀಠದ ಮೇಲೆ ಸಣ್ಣ ಜನ ಇಲಿ ಹೆಗ್ಗಣಗಳು ಹರಿದಾಡುತ್ತಿದ್ದದ್ದನ್ನು ಕಂಡೆ' ಏನು ಬಾರದ ವ್ಯಕ್ತಿ ಒಬ್ಬ ರಾಜಕೀಯ ಸ್ಥಾನಮಾನವನ್ನು ಪಡೆದು ಇಡೀ ವ್ಯವಸ್ಥೆಗೆ ಸಂಚುರೂಪಿಸುತ್ತಿದ್ದಾನೆ ಎಂಬ ಅಳಲಿದೆ. ಇಂತಹ ಅಪ್ರಯೋಜಕರಿಂದ ದೀನ ದಲಿತರ ಬಾಳಲ್ಲಿ ಕನಸುಗಳು ನೆರವೇರಲು ಸಾಧ್ಯವೇ? ಕುರ್ಚಿಗಾಗಿ ಬಡಿದಾಡುವ ರಾಜಕಾರಣಿ ಜನರ ನೋವುಗಳನ್ನು ಅರಿಯಲು ಸಾಧ್ಯವೇ? ಜನರ ತೆರಿಗೆ ದುಡ್ಡಿನಲ್ಲಿ ಜಾಹೀರಾತುಗಳನ್ನು ಪ್ರಚಾರ ಮಾಡುವ ಸರ್ಕಾರ ತನ್ನ ಯಶೋಗಾಥೆಯನ್ನು ಬಿಂಬಿಸಿ ದುಂದು ವೆಚ್ಚ ಮಾಡುವುದಕ್ಕೆ ಮುಂದಾಗಿರುವವರು ಆರ್ಥಿಕ ಭದ್ರತೆಯ ನೀತಿ ರೂಪಿಸಲು ಸಾಧ್ಯವೇ? ಎಂಬ ಅಳಲು ಕವಿತೆಗಳದು.
'ಕಾವಿಯೊಳಗೆ ಕೋವಿ ಎದ್ದು ತನ್ನೊಳಗೆ ತಾನು ಸುಟ್ಟುಕೊಂಡಿದ್ದ ಕಂಡೆ ' ಎಂಬ ಸಾಲುಗಳು ಪ್ರಸ್ತುತ ಧಾರ್ಮಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಕಾಪಾಡಬೇಕಾದ ಕಾವಿ ತಾನೇ ಬಂದೂಕಾಗಿ ತನ್ನ ಜನರ ನಡುವೆ ಜಾತಿ ಪ್ರತಿಷ್ಠೆಯನ್ನು ಬೆಳೆಸುತ್ತಿದೆ, ತನ್ನ ಕ್ಷೇತ್ರವಲ್ಲದ ರಾಜಕೀಯಕ್ಕೂ ಕೂಡ ಕಾಲಿಟ್ಟಿದೆ. ವೈಶ್ಯಮ್ಯ ವಾತಾವರಣವನ್ನು ಸೃಷ್ಟಿಸಿ ಕಾವಿ ನಗುತ್ತಲಿದೆ.
ವಿದ್ಯಾವಂತರು ಬುದ್ಧಿವಂತರು ತಮ್ಮ ಸ್ವವಿ ಮರ್ಶೆಯನ್ನು ಕಳೆದುಕೊಂಡು, ಸ್ವಆಲೋಚನೆಯನ್ನು ಮಾರಿಕೊಂಡು, ಪುಂಡ ರಾಜಕಾರಣಿಗಳ ಮನೆಯ ಕಸದ ಪೊರಕೆಯಾಗಿದ್ದಾರೆ ಎಂದು ಕವಿತೆ ನಮ್ಮ ಸಮಾಜದ ಅವಿವೇಕತನವನ್ನು ಪ್ರತಿನಿಧಿಸುತ್ತದೆ.
ಸಾಹಿತಿಗಳಾದವರು ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಸಂವಿಧಾನಿಕವಾಗಿ ನಡೆದುಕೊಂಡು ಅವರ ಒಂದು ರೀತಿಯಲ್ಲಿ ಸಮಾಜಕ್ಕೆ ಬೆಂಕಿಯ ಅಣುಬಾಂಬುಗಳಾಗಿ ನಡೆದಾಡುತ್ತಿದ್ದಾರೆ ಎಂದು ಕವಿತೆ ನೊಂದುಕೊಳ್ಳುತ್ತದೆ. ಯಾವುದೇ ಉದ್ದೇಶವಿಲ್ಲದೆ ಹುಟ್ಟಿಕೊಂಡಿರುವಂತಹ ಸಾಹಿತ್ಯ ಗುಂಪುಗಳ ಸಮಾಜ ವಿರೋಧಿ ಘಟನೆಗಳ ಆಲೋಚನೆಗೆ ಮನುಷ್ಯ ಬಲಿಯಾಗುತ್ತಿದ್ದಾನೆ ಎಂಬ ಕೊರಗು ರಂಗ ರೂಪ ಪ್ರಸ್ತುತಪಡಿಸಿತು. 'ಹಠಕ್ಕಾಗಿ ಮಠ ಕಟ್ಟಿದ ಸಾಹಿತಿಗಳ ಕಂಡೆ ಕಂಡು ಎಚ್ಚರಗೊಂಡೆ ಎಚ್ಚರವಾದಾಗ ನಿಗಿನಿಗಿ ಕೆಂಡ ಉರಿಯುವುದ ಕಂಡೆ' ಎಂಬ ಸಾಲುಗಳು ಕವಿಯನ್ನು ಆತಂಕದಲ್ಲಿ ದೂಡಿವೆ.
ಸಂವೇದನಾ ರಹಿತ ಪ್ರಜಾ ಸಮುದಾಯ
ದಿನಪತ್ರಿಕೆಗಳಲ್ಲಿನ ಆಲೋಚನೆಗಳು, ವಿಚಾರಗಳು ಆಳುವ ವರ್ಗಕ್ಕೆ ಮುಟ್ಟುವುದೇ ಇಲ್ಲ. ಏಕೆಂದರೆ ಅಧಿಕಾರಿಶಾಹಿಗಳಿಗೆ ಕಿವಿಗಳಿಲ್ಲ, ಕಣ್ಣುಗಳಿಲ್ಲ. ಅದು ಸಂವೇದನಶೀಲರಹಿತವಾಗಿದೆ ಎಂಬುದಕ್ಕೆ ನರಿ, ಕುರಿಗಳ ಪ್ರತಿಮೆ, ಕಪ್ಪೆ ಆಮೆಗಳ ಸಂಭಾಷಣೆ ನಾಟಕದ ಪ್ರಾಮುಖ್ಯತೆಯನ್ನು ಹೆಚ್ಚಿಸಿವೆ. ಮಹಿಳೆಗೆ ಯಾವ ಧರ್ಮಗಳಲ್ಲಿಯೂ ಕೂಡ ಸ್ವಾತಂತ್ರ್ಯವೇ ಇಲ್ಲ. ಆಕೆ ಬರಿ ಭೋಗದ ವಸ್ತು. ಆಕೆ ವಿಚಾರ ಮಾಡುವಂತೆ ಇಲ್ಲ. ಗಂಡಿನ ಅಡಿಯಾಳಾಗಿ ಕೆಲಸ ಮಾಡುವುದಕ್ಕೆ ಸೀಮಿತವಾಗಿದ್ದಾಳೆ. ಆಕೆ ಸೀಮಾತೀತಳಾಗಿ ಬೆಳೆಯುವುದಕ್ಕೆ ಕವಿಯ ಮನಸ್ಸು ಇಚ್ಚಿಸುತ್ತದೆ. 'ಸ್ತ್ರೀ ಅಂದರೆ ಅಷ್ಟೇ ಸಾಕೆ?' ಎಂಬ ಅವರ ಆಲೋಚನೆ ಕ್ರಮವೇ ವಿಭಿನ್ನ.
ಕೃತಕ ಬುದ್ಧಿಮತ್ತೆಯ ಪರಿಣಾಮ
ಇಂದಿನ ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯಲ್ಲಿ ನಿಸರ್ಗದ ಚೈತನ್ಯವನ್ನು ನೋಡುವುದನ್ನು ಮರೆತುಬಿಟ್ಟಿದ್ದೇವೆ. ಗುಬ್ಬಿ ಗೂಡು ಕಟ್ಟುವುದನ್ನು, ಸೂರ್ಯೋದಯ ಚಂದ್ರೋದಯಗಳ ನಯನ ಮನೋಹರ ದೃಶ್ಯವನ್ನು, ಕರು ಆಕಳ ಕೆಚ್ಚಲನ್ನು ಹುಡುಕುವ ಹೊತ್ತನ್ನು ಮರೆತುಬಿಟ್ಟಿದ್ದೇವೆ. ಆಕಾಶದಿಂದ ಜಾರುವ ಮಳೆ, ಕಾಮನಬಿಲ್ಲು,ಇಬ್ಬನಿಯ ರೂಪ, ಪ್ರೀತಿ -ವಿರಹಗಳ ನಡುವಿನ ಬಾಂಧವ್ಯ,ಮೌನ ರಹಸ್ಯಗಳ ನಡುವಿನ ವಿಸ್ಮಯ. ಇವುಗಳ ನಡುವಿನ ಪ್ರೀತಿಯನ್ನು ಗಳಿಸುವ, ಬೆಳೆಸುವ, ಉಳಿಸುವ ದಾಹ ನಮ್ಮದಾಗಲಿ ಎಂಬ ಆಶಯ ವಿಪುಲ ರೂಪ ಧಾರಣಿಯದು. ಏಕೆಂದರೆ 'ದಾರಿ ನೂರಾರಿವೆ ಬಿಡುಗಡೆಯ ಬೆಳಕಿನ ಅರಮನೆಗೆ' ಎಂಬ ಸಾಲುಗಳು ನಮ್ಮಲ್ಲಿ ಪ್ರೀತಿಯ ಬುಗ್ಗೆ ಚಿಮ್ಮುವಂತಾಗಲಿ.
ಇಲ್ಲಿಯವರೆಗೆ ನನ್ನ ಕವಿತೆಗಳು ಅಕ್ಷರರೂಪ ಪಡೆದಿದ್ದು, ಅವು ರಂಗ ರೂಪದಿಂದ ರೆಕ್ಕೆಯನ್ನು ಪಡೆದು ಹಾರಾಡಿ, ಸಮಾನತೆಯ ತತ್ವವನ್ನು ಸಾರಲು ಪಯಣ ಬೆಳೆಸಿದವು ಎಂದು ಕವಿ ಖುಷಿಪಟ್ಟರು. ರಂಗದ ಮೇಲೆ ಜಿ.ಎಸ್ ಶಿವರುದ್ರಪ್ಪನವರ ಭಾವಚಿತ್ರ ಹಾಗೂ ಹಣತೆ ಇದೆಲ್ಲವನ್ನು ಗಮನಿಸುತ್ತಾ ಮೌನದಿಂದಲೇ ನಮ್ಮೊಂದಿಗೆ ಸಂಭಾಷಣೆ ನಡೆಸುತ್ತಿತ್ತು. ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಎಂಬ ನುಡಿಯು ರಂಗಕ್ಕೆ ಪರಿಪೂರಕವಾಗಿ ಹಿಮ್ಮೇಳದಂತೆ ನುಡಿಯುತ್ತಿತ್ತು. ಜಿಎಸ್ಎಸ್ ಅವರ ಕವನಗಳ ಕಾವ್ಯಾಭಿನಯ ಮನದಲ್ಲಿ ಉಳಿಯುವಂತೆ ರಂಗ ಪಠ್ಯವನ್ನಾಗಿಸಿದ ಶ್ರೀಪಾದ ಭಟ್, ಸಾಸಿವೆಹಳ್ಳಿ ಸತೀಶ್ ಹಾಗೂ ಹೊಂಗಿರಣ ತಂಡಕ್ಕೆ ಸಾವಿರದ ಶರಣು ಶರಣಾರ್ಥಿಗಳು.
- ಡಾ. ರಾಜೇಂದ್ರಕುಮಾರ್ ಕೆ., ಮುದ್ನಾಳ್, ಯಾದಗಿರಿ
#VipulaRoopaDharini #search #pursuit #love #Drama #Theatre #RajendraKumarMudnal #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡ ರೂಪಾಯಿ
ದೆಹಲಿ: ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಪತನ ಕಂಡು ಆಡಳಿತಾರೂಢ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಮರ್ಥಕರ ಬಾಯಿ ಮುಚ್ಚಿಸಿದೆ. ಜನವರಿ 21, 2026ರಂದು ಅಮೆರಿಕನ್ ಡಾಲರ್ ಎದುರು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಪತನದಲ್ಲಿ ನೂತನ ದಾಖಲೆ ಸ್ಥಾಪಿಸಿದೆ.
ಮೋದಿ ಆಪ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸುತ್ತಿರುವ ವಿವೇಚನಾರಹಿತ ತೆರಿಗೆ, ರಷ್ಯಾ – ಉಕ್ರೇನ್ ವಿರಸ, ತೈಲ ರಾಷ್ಟ್ರಗಳಲ್ಲಿ ಉಂಟಾಗಿರುವ ಅನಿಶ್ಚಿತತೆ ಮೊದಲಾದ ಕಾರಣಗಳು ಸೇರಿ ರೂಪಾಯಿ ಬಲಹೀನವಾಗಿದ್ದು, ಡಾಲರ್ ಬೆಲೆ ಗಗನಕ್ಕೇರಿದೆ.
ಬುಧವಾರ ಜ.21ರಂದು ರೂಪಾಯಿ ಮೌಲ್ಯ 68 ಪೈಸೆ ಕುಸಿದು, ಒಂದು ಡಾಲರ್ಗೆ ಕನಿಷ್ಠ 91.66 ರೂಪಾಯಿಗೆ ತಲುಪುವ ಮೂಲಕ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಕುಸಿದಿದೆ. ರೂಪಾಯಿ 91.28ರ ಕನಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿ, ಇಂದು 91.66 ರೂಪಾಯಿಗೆ ಕುಸಿಯಿತು.
ಇದರೊಂದಿಗೆ ಷೇರು ಮಾರುಕಟ್ಟೆ ಕೂಡ ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ನಿಫ್ಟಿ 75 ಅಂಶಗಳಷ್ಟು ಕುಸಿತ ಕಂಡು 25157.50 ಅಂಶಕ್ಕೆ ದಿನದ ವಹಿವಾಟು ಮುಗಿಸಿದರೆ, ಸೆನ್ಸೆಕ್ಸ್ 270.84 ಅಂಶಗಳನ್ನು ಕಳೆದುಕೊಂಡು ದಿನದ ವಹಿವಾಟಿನ ಅಂತ್ಯಕ್ಕೆ 81919.60 ಅಂಶಕ್ಕೆ ಕುಸಿಯಿತು.
ಮಧ್ಯಾಹ್ನ 3:30ರ ವೇಳೆಗೆ ಬಂಗಾರದ ಬೆಲೆ 10 ಗ್ರಾಂಗೆ 7,145 ರೂಪಾಯಿ ಏರಿಕೆಯಾಗಿ, 1,57,710 ರೂಪಾಯಿಗೆ ತಲುಪಿದರೆ, ಬೆಳ್ಳಿ ದರ (1 ಕೆಜಿ) 10,982 ರೂ. ಏರಿಕೆಯಾಗಿ 3,34,654 ರೂಪಾಯಿ ತಲುಪಿತು.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಾಡಿದ್ದ ಹಳೆಯ ಟ್ವೀಟ್ ನೋಡಿ…
https://x.com/TheShilpaShetty/status/369741251912163328?s=20
ನಿಮ್ಮ ಅಭಿಪ್ರಾಯ ತಿಳಿಸಿ.
#Rupee #hits #alltime #low #against #dollar #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
5.15 ಕೋಟಿ ಮೌಲ್ಯದ ಎಂಡಿಎಂಎ ಹಾಗೂ 300 ಎಕ್ಸ್ ಟೆಸಿ ಮಾತ್ರೆ ವಶ
ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ನಂತರವೂ ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 5.15 ಕೋಟಿ ಮೌಲ್ಯದ ಎಂಡಿಎಂಎ ಹಾಗೂ 300 ಎಕ್ಸ್ ಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಕೇಂದ್ರ ಅಪರಾಧ ದಳದ ಆಂಟಿ ನಾರ್ಕೋಟಿಕ್್ಸ ವಿಂಗ್ ತಂಡವು ಕಾರ್ಯಾ ಚರಣೆ ನಡೆಸಿ, ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇ ಕೊಳಲು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ವಾಸದ ಮನೆಯಲ್ಲೇ ಮಾದಕ ವಸ್ತುಗಳನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ.
ಆತನ ಮನೆಯಲ್ಲಿದ್ದ 2 ಕೆಜಿ 500 ಗ್ರಾಂ ಎಂಡಿಎಂಎ, 300 ಎಕ್್ಸಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ ಸುಮಾರು 5.15 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಈ ಹಿಂದೆ ಹೆಣ್ಣೂರು, ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಅಪರಾಧ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ.
ಈತ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಬಳಿಕ ಪುನಃ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದ. ಹಾಗಾಗಿ ಸಿಸಿಬಿ ಎಎನ್ಡಬ್ಲ್ಯೂ ಅಧಿಕಾರಿಗಳು ಈತನ ಚಲನವಲನದ ಮೇಲೆ ನಿಗಾ ವಹಿಸಿದ್ದರು. ಆ ಸಂದರ್ಭದಲ್ಲಿ ವಿದೇಶಿ ಪ್ರಜೆ ಮತ್ತೆ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.
ಮಾದಕ ವಸ್ತುಗಳ ಮೂಲ ಪತ್ತೆ, ಹಿಂದಿನ ಹಾಗೂ ಮುಂದಿನ ಸಂಪರ್ಕಕೊಂಡಿಗಳನ್ನು ಗುರುತಿಸಿರುವುದು, ಈ ಜಾಲದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆ ಹಚ್ಚುವ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.
#crore #MDMA #Ecstasy #pills #seized #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವಿರೋಧ ಆಯ್ಕೆ
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಲಿಂಗಾಯತ ವೀರಶೈವ ಮಹಾಸಭಾ ಕಾರ್ಯಕಾರಿಣಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸಭಾದ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರ್ ಖಂಡ್ರೆ ಅವರನ್ನು ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು ಎಂದು ಸಮಾಜದ ಹಿರಿಯ ಮುಖಂಡ ಶಂಕರ ಬಿದರಿ ಘೋಷಿಸಿದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ಅವರನ್ನು ಆಯ್ಕೆ ಮಾಡಲು ಎಲ್ಲ ಸದಸ್ಯರೂ ಒಮ್ಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು ಎಂದರು.
ಕಳೆದ 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರ್ ಖಂಡ್ರೆ ಅವರು ಕಳೆದ ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು.
ತಮ್ಮನ್ನು ಮಹಾಸಭಾದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿಗೆ ಧನ್ಯವಾದ ಅರ್ಪಿಸಿದ ಈಶ್ವರ್ ಖಂಡ್ರೆ, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ತಾವು ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ಘೋಷಿಸಿದರು.
ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈ ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದ್ದು. ನಮ್ಮ ಸಮಾಜದಲ್ಲೂ ಶೇ.40ರಿಂದ 50ರಷ್ಟು ಬಡವರಿದ್ದು, ಶೇ.30ಕ್ಕಿಂತ ಹೆಚ್ಚು ಜನ ತೀವ್ರ ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಹೀಗಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲು ಸಭಾ ವತಿಯಿಂದ ನೂತನ ಅಧ್ಯಕ್ಷನಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಲು ಮುಂದಿನ ಮಾರ್ಚ್ ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಿ, ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ಘೋಷಿಸಿದರು.
ಈಗಾಗಲೇ ಹಲವು ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಭವನ ಇದ್ದು, ಭವನ ಇಲ್ಲದ ಜಿಲ್ಲೆಗಳಲ್ಲಿ ಭವನ ನಿರ್ಮಾಣ ಮಾಡಲೂ ಶ್ರಮಿಸಲಾಗುವುದು. ಈ ಭವನದಲ್ಲಿ ಸಮುದಾಯದ ಪ್ರತಿಭಾವಂತರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುವುದು ಎಂದರು.
ಪಂಚಾಚಾರ್ಯರ, ಜಗದ್ಗುರುಗಳ, ಮಠಾಧಿಪತಿಗಳ, ಹರ, ಚರ ಗುರು ಮೂರ್ತಿಗಳ, ವಿರಕ್ತರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಕೆಲಸ ಮಾಡುತ್ತೇನೆ. ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ. ಎಲ್ಲ ಜಾತಿ, ಜನಾಂಗದವರನ್ನೂ ಜೊತೆಯಲ್ಲಿ ತೆಗೆದುಕೊಂಡು ಶ್ರಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
#EshwarKhandre #elected #unopposed #NationalPresident #AllIndiaVeerashaivaLingayatMahasabha #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಶೀಘ್ರವೇ ಕರೆಯಲಾಗುವುದು: ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳ ಕುರಿತು ಚರ್ಚಿಸಲು ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ದಕ್ಷಿಣ ಭಾರತ ಸಮಾಜವಾದಿಗಳ ಸಮಾಜವಾದಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ವ್ಯವಸ್ಥೆ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದೆ. ಇದರಿಂದ ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಾದ ಅನುದಾನ ಕಡಿಮೆಯಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚು ಅನ್ಯಾವವಾಗುತ್ತಿದ್ದು, ಇದನ್ನು ಪ್ರಜಾಸತ್ತಾತ್ಮಕವಾಗಿಯೇ ಪ್ರಶ್ನಿಸಬೇಕಾಗಿದೆ ಎಂದರು.
ಕರ್ನಾಟಕ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ನೀಡುವ ರಾಜ್ಯಗಳಲ್ಲಿ ಒಂದು. ಆದರೆ ನಮಗೆ ಕೇಂದ್ರದಿಂದ ಬರುತ್ತಿರುವ ಅನುದಾನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈಗ ಮನರೇಗ ಯೋಜನೆ ಮೂಲಕ ನೀಡುತ್ತಿದ್ದ ಅನುದಾನದ ಪ್ರಮಾಣ ತಗ್ಗಿಸಿದ್ದು, ರಾಜ್ಯಗಳ ಆರ್ಥಿಕ ವ್ಯವಸ್ಥೆಗದ ಹೊಡೆತ ಬೀಳಲಿದೆ ಎಂದರು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವ ಮೂಲಕ ದಕ್ಷಿಣ ರಾಜ್ಯಗಳ ವ್ಯಾಪ್ತಿಯ ಕ್ಷೇತ್ರಗಳ ಪ್ರಮಾಣ ಕಡಿಮೆ ಮಾಡಿ ಹಿಂದಿ ಭಾಷೆ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವ ಹುನ್ನಾರ ನಡೆದಿದೆ. ಇದನ್ನು ಬಲವಾಗಿ ವಿರೋಧಿಸಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ ಎಂದರು.
#meeting #SouthIndian #CM #called #soon #Siddaramaiah #malgudiexpress #malgudinews #news #TopNews









![📜ಪ್ರಚಲಿತ ವಿದ್ಯಮಾನ📜 - ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ - ShareChat 📜ಪ್ರಚಲಿತ ವಿದ್ಯಮಾನ📜 - ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ - ShareChat](https://cdn4.sharechat.com/bd5223f_s1w/compressed_gm_40_img_857020_1764c509_1768992855295_sc.jpg?tenant=sc&referrer=user-profile-service%2FrequestType50&f=295_sc.jpg)



