Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಕೆ.ವಿ.ಪ್ರಭಾಕರ್ ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಸಿಎಂ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ "ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ" ದ ಅಧ್ಯಕ್ಷತೆ ವಹಿಸಿ ಮಾತನಾಡೀದ ಅವರು, ಹಿಂದೆಲ್ಲಾ ಸಿನಿಮಾಗಳು, ಸಿನಿಮಾದ ಪಾತ್ರಗಳು ನಮ್ಮ ಬದುಕಿನ‌ ಭಾಗ ಆಗಿರುತ್ತಿದ್ದವು. ಹೀಗಾಗಿ ಜನ ಕನ್ನಡ ಸಿನಿಮಾಗಳಿಗೆ ಮುಗಿಬೀಳುತ್ತಿದ್ದರು. ಆಗ ಯಾವ ಹೀರೋಗಳೂ ಇವತ್ತಿನ ಹೀರೋಗಳಂತೆ ನಮ್ಮ ಸಿನಿಮಾ ನೋಡಿ ಎಂದು ಗೋಗರೆಯುತ್ತಿರಲಿಲ್ಲ. ಹಿಂದಣ ಹೆಜ್ಜೆಯನ್ನರಿಯದವನು ಮುಂದನ ಹೆಜ್ಜೆಯನ್ನಿಡಲಾರನು ಎಂದರು. ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್ ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ ಎಂದರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಸಿನಿ ಪಯಣದ ಸುವರ್ಣ ಸಂಭ್ರಮ‌"ಕ್ಕಾಗಿ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಅರ್ಥಪೂರ್ಣ ಸಂಗತಿ. 50 ವರ್ಷಗಳ ಕನ್ನಡ ಸಿನಿಮಾ ಪಯಣವನ್ನು ಮೆಲುಕು ಹಾಕುತ್ತಲೇ, ಈ 50 ವರ್ಷಗಳಲ್ಲಿ ಕನ್ನಡ ಸಿನಿಮಾ ಪರಂಪರೆಯನ್ನು ಗಟ್ಟಿಗೊಳಿಸಿದ ಐದು ಮಂದಿ ಹಿರಿಯರನ್ನು ಗುರುತಿಸಿದ್ದೇವೆ. ಪಾರ್ವತಮ್ಮ ರಾಜ್ ಕುಮಾರ್, ಎಸ್. ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಡಾ.ಜಯಮಾಲ ಅವರ ಕೊಡುಗೆಗಳನ್ನು ನಾವು ಗುರುತಿಸುತ್ತಿದ್ದೇವೆ. ಈ ಐದು ಮಂದಿಯ ಸಾಧನೆಗಳನ್ನು ಮೆಲುಕು ಹಾಕುವುದೆಂದರೆ ಇಡೀ ಕನ್ನಡ ಸಿನಿಮಾ ಪರಂಪರೆಯ ಅರ್ಧ ಶತಮಾನವನ್ನು ಹಿಂದಿರುಗಿ ನೋಡಿದಂತೆ ಎಂದರು. ಗಿರೀಶ್ ಕಾಸರವಳ್ಳಿ ಅವರು ಕನ್ನಡಕ್ಕೆ ನಾಲ್ಕು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾಗಳ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಖ್ಯಾತ ಛಾಯಾಗ್ರಾಹಕರಾದ ಎಸ್.ರಾಮಚಂದ್ರ ಅವರು ಕನ್ನಡದ ಪರ್ಯಾಯ ಚಿತ್ರಗ ಳ ಪರಂಪರೆಯ ನೆರಳು - ಬೆಳಕು ಇದ್ದ ಹಾಗೆ. ಅರ್ಧ ಶತಮಾನದ ಪರ್ಯಾಯ ಸಿನಿಮಾಗಳಿಗಾಗಿ ಕನ್ನಡಕ್ಕೆ ಸಿಕ್ಕಿರುವ ಮಾನ್ಯತೆಗಳ ಹಿಂದೆ ಎಸ್.ರಾಮಚಂದ್ರ ಅವರ ಕ್ಯಾಮರಾ ಕಣ್ಣುಗಳು ಇವೆ ಎಂದರು. ಪಾರ್ವತಮ್ಮ ರಾಜ್ ಕುಮಾರ್ ಅವರು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ 80ಕ್ಕೂ ಹೆಚ್ಚು ಸದಭಿರುಚಿಯ ಜೊತೆಗೆ ಜನಪ್ರಿಯ ಸಿನಿಮಾಗಳನ್ನು ಕನ್ನಡ ಜಗತ್ತಿಗೆ ಮತ್ತು ಸಿನಿಮಾ ಜಗತ್ತಿಗೆ ನೀಡಿದವರು. ಏಕಕಾಲಕ್ಕೆ ಯಶಸ್ವಿ ಮತ್ತು ಸಮಾಜಮುಖಿಯಾದ ಸದಭಿರುಚಿಯ ಸಿನಿಮಾಗಳನ್ನು ನೀಡಿ ಗೆಲ್ಲುವುದು ಸುಲಭದ ಮಾತಲ್ಲ. ಈ ಸಾಹಸದಲ್ಲಿ ಪಾರ್ವತಮ್ಮ ಅವರು ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಕನ್ನಡ ಬೆಳ್ಳಿ ಪರದೆಯನ್ನು ಗೆಲ್ಲಿಸಿದ್ದಾರೆ ಎಂದರು. ಜಯಮಾಲ ಅವರು ತುಳು ಸಿನಿಮಾಗಳ ಮೂಲಕ ಸಿನಿಮಾ ಪ್ರಪಂಚಕ್ಕೆ ಬಂದರು. ಭೂತಯ್ಯನ ಮಗ ಅಯ್ಯು ಸಿನಿಮಾದ ಹಾಡೊಂದರ ಮೂಲಕ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಜಗತ್ತನ್ನು ಬೆಳಗಿಸಿದರು. ತಾವೂ ಬೆಳಗಿದರು. ಜಯಮಾಲ ಅವರು ಕೇವಲ ನಟಿ ಮಾತ್ರವಲ್ಲ. ನಿರ್ಮಾಪಕಿ ಆಗಿಯೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಒದಗಿಸಿದ್ದಾರೆ. "ತಾಯಿ ಸಾಹೇಬ" ಸಿನಿಮಾದ ನಿರ್ಮಾಪಕಿಯೂ ಆಗಿ, ನಟಿಯೂ ಆಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದ್ದಾರೆ.‌ ಜೊತೆಗೆ ಮಹಿಳಾ ಸಂವೇದನೆ ವಿಷಯದಲ್ಲಿ ಟಿ ಎಚ್ ಡಿ ಮಾಡಿ ಡಾ.ಜಯಮಾಲ ಆಗಿದ್ದಾರೆ ಎಂದರು. ಶಂಕರ್ ಸಿಂಗ್ ಅವರ ಪುತ್ರ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಇಡೀ ಕುಟುಂಬ ಸಿನಿಮಾ ಕುಟುಂಬ. ಹಿಂದಿ, ತೆಲುಗು, ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳನ್ನು ನಿರ್ದೇಶಿಸಿ ಉತ್ತರ-ದಕ್ಷಿಣ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಹೀಗಾಗಿ ಈ ಐದೂ ಮಂದಿಯ ಅರ್ಧ ಶತಮಾನದ ಕೊಡುಗೆಗಳು ಕನ್ನಡ ಸಿನಿಮಾದ ಮುಂದಿನ ಒಂದು ಶತಮಾನಕ್ಕೆ ಮಾರ್ಗದರ್ಶಿ ಆಗಲಿ ಎಂದು ಆಶಿಸುತ್ತೇನೆ ಎಂದರು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಲಾ ಅವರು ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಇರುವವರೆಗೆ ಸಬ್ಸಿಡಿ ನಿಲ್ಲುವುದಿಲ್ಲ ಎಂದರು. ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ‌ ಭರವಸೆ ನೀಡಿದರು. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸಿಂಗ್ ಬಾಬು, ಪೂರ್ಣಿಮಾ ರಾಜ್ ಕುಮಾರ್, ಜಯಮಾಲಾ, ಚಲನಚಿತ್ರ ಅಕಾಡೆಮಿ‌ ಅಧ್ಯಕ್ಷ ಸಾಧು ಕೋಕಿಲಾ, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಹಾಜರಿದ್ದರು. #Cinemas #distant #roots #Kannada #literature #culture #KVPrabhakar #internationalfilmfestival #bangalore #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ: ಸಿದ್ದರಾಮಯ್ಯ ಭಾರತ & ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ Narendra Modi ಅವರು ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ. ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗಬೇಕಾಗುತ್ತದೆ. ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ ನಡೆಯಬಾರದು. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬಂದಿರುವ ವಿಧಿ-ವಿಧಾನಗಳನ್ನು ಗಮನಿಸಿದರೆ ಇದು ಒಡೆಯನ ಅಜ್ಞೆಗೆ ಸೇವಕ ತಲೆಯಾಡಿಸಿದಂತಿದೆ. ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಯರ್ರಾಬಿರ್ರಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಸಿದ್ದರು. ಈಗ ಅದನ್ನು 25%ರಿಂದ 18%ಕ್ಕೆ ಇಳಿಸಿ ಭಾರತಕ್ಕೆ ಮಹದುಪಕಾರ ಮಾಡಿದಂತೆ ನಾಟಕವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿದೆ. ಮೇಲ್ನೋಟದಲ್ಲಿಯೇ ಈ ತಾರತಮ್ಯದಿಂದ ಆಗಿರುವ ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ. ಸದ್ಯ ಭಾರತ ಶೇಕಡಾ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಇದು ಭಾರತದ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದ್ದು ಅದರ ಪರಿಣಾಮವಾಗಿ ಉಳಿದ ಅಗತ್ಯವಸ್ತುಗಳು ಕೂಡಾ ದುಬಾರಿಯಾಗಲಿದೆ. ಈ ಒಪ್ಪಂದದಿಂದ ಆಗಲಿರುವ ಸಣ್ಣಪುಟ್ಟ ಲಾಭಗಳನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಭಾರತೀಯರಿಗೆ, ಮುಖ್ಯವಾಗಿ ದೇಶದ ರೈತ ಸಮುದಾಯಕ್ಕೆ ಆಗುತ್ತಿರುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಈ ಒಪ್ಪಂದವನ್ನು ಅಮೆರಿಕದ ರೈತ ಸಮುದಾಯ ಒಕ್ಕೊರಲಿನಿಂದ ಸ್ವಾಗತಿಸಿ ಕುಣಿದಾಡುತ್ತಿರುವುದೇ ಈ ಒಪ್ಪಂದ ಭಾರತದ ರೈತರ ಪಾಲಿನ ಮರಣಶಾಸನವಾಗಲಿದೆ ಎಂಬುದಕ್ಕೆ ಸೂಚನೆಯಾಗಿದೆ. ಭಾರತಕ್ಕೆ ಹೋಲಿಸಿದರೆ ಅತೀ ಹೆಚ್ಚಿನ ಪ್ರಮಾಣದ ಸಬ್ಸಿಡಿ ಪಡೆಯುತ್ತಿರುವ ಅಮೆರಿಕದ ರೈತರು ಭಾರತದ ಕೃಷಿ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಈ ಅಪಾಯವನ್ನು ತಪ್ಪಿಸಲಿಕ್ಕಾಗಿಯೇ ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಅಮೆರಿಕದಿಂದ ಆಮದಾಗುತ್ತಿರುವ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ಹೇರುತ್ತಾ ಬಂದಿವೆ. ಈಗ ಈ ಆಮದು ಸುಂಕವನ್ನು ರದ್ದುಗೊಳಿಸದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ.. ಇದರಿಂದ ಭಾರತದ ರೈತರು ದಿವಾಳಿ ಸ್ಥಿತಿ ತಲುಪಲಿದ್ದು, ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು. ಸಂಪೂರ್ಣವಾಗಿ ಶರಣಾಗತಿಯಾಗಿರುವ ಈ ಒಪ್ಪಂದಕ್ಕೆ ಭಾರತೀಯರ ಹಿತರಕ್ಷಣೆಯ ಉದ್ದೇಶ ಖಂಡಿತ ಇಲ್ಲ. ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೋದಿಯವರ ಉದ್ಯಮ ಸ್ನೇಹಿತ ಅದಾನಿ ಅವರ ರಕ್ಷಣೆ ಮತ್ತು ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗವಾಗಿ ಕೇಂದ್ರ ಸರ್ಕಾರ ದೇಶ ವಿರೋಧಿಯಾಗಿರುವ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಲು ಸಾಧ್ಯವೇ? ಜಾಗತಿಕವಾಗಿ ಭಾರತ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ರಾಜತಾಂತ್ರಿಕವಾಗಿ ಎದುರಾಗುವ ಒತ್ತಡಗಳನ್ನು ಇಲ್ಲಿಯ ವರೆಗಿನ ಎಲ್ಲ ಪ್ರಧಾನಿಗಳು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂ ಅವರ ಅಲಿಪ್ತ ನೀತಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿತ್ತು. ಪ್ರಧಾನಿ ಇಂದಿರಾಗಾಂಧಿಯವರು ದೈತ್ಯ ಅಮೆರಿಕದ ಒತ್ತಡವನ್ನು ಕೂಡಾ ಲೆಕ್ಕಿಸದೆ ಪಾಕಿಸ್ಥಾನವನ್ನು ಮಣಿಸಿದ್ದು ಈಗ ಇತಿಹಾಸವಾಗಿದೆ. ಜಾಗತಿಕವಾಗಿ ಎಲ್ಲ ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದಾಗ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಿದ್ದ ಡಾ.ಮನಮೋಹನ್ ಸಿಂಗ್ ಅವರು ಹೊಸ ಆರ್ಥಿಕ ಯುಗದ ಪ್ರವರ್ತಕರಾಗಿದ್ದರು. ಆದರೆ ಇಂದು ವಿಶ್ವದಲ್ಲಿ ಭಾರತಕ್ಕೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ವಿದೇಶಾಂಗ ನೀತಿ ಎಂದರೆ ಭಾಷಣ, ಘೋಷಣೆ, ಕೈಕುಲುಕಾಟ ಮತ್ತು ಸ್ವಪ್ರಚಾರವಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿದುಕೊಂಡಂತಿದೆ. ಚೀನಾ ಮತ್ತು ಅಮೆರಿಕದಂತಹ ದೈತ್ಯ ಶಕ್ತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತ ತನ್ನ ಅಸ್ಮಿತೆಯನ್ನು ಸಂಪೂರ್ಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ಮೋದಿ ಅವರು ಈಗ ಅದೇ ಟ್ರಂಪ್ ರ ಆಜ್ಞಾಪಾಲಕರಾಗುವ ದೈನೇಸಿ ಸ‍್ಥಿತಿಗೆ ಬಂದಿದ್ದು ವಿಷಾದನೀಯ. ಮೋದಿಯವರ 56 ಇಂಚಿನ ಎದೆ ಮತ್ತು ವಿಶ್ವಗುರುವಿನ ಕಿರೀಟವನ್ನು ಟ್ರಂಪ್ ಪ್ರತಿದಿನ ಕುಟ್ಟಿ ಪುಡಿ ಮಾಡುತ್ತಿದ್ದಾರೆ. ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಮತ್ತು ಸಾಮಾಜಿಕ ನೀತಿಯ ವರೆಗೂ ಎಲ್ಲ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವ ಪ್ರಧಾನಿ ಮೋದಿಯವರು ರಾಜೀನಾಮೆ ಕೊಟ್ಟು ದೇಶದ ಮತ್ತು ಅಳಿದುಳಿದ ಅವರ ಗೌರವವನ್ನು ಉಳಿಸಿಕೊಳ್ಳುವುದು ಒಳ್ಳೆಯದು. - ಸಿದ್ದರಾಮಯ್ಯ, ಸಿಎಂ #NarendraModi #IndiaUsTradeDeal #completely #surrendered #America #Siddaramaiah #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ರನ್ ಫಾರ್ ಲೈಫ್ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ – 2026 ರಲ್ಲಿ ದರ್ಶನ್ ಪುಟ್ಟಣ್ಣಯ್ಯ ಭಾಗಿ ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡರಿಗೆ ಸನ್ಮಾನ ಕ್ಯಾನ್ಸರ್ ತಪಾಸಣಾ ಶಿಬಿರ ಮಂಡ್ಯ: ಪಾಂಡವಪುರದಲ್ಲಿ ಶಂಭುಲಿಂಗೇಶ್ವರ ಪಿಯು ಕಾಲೇಜು ಆಯೋಜಿಸಿದ್ದ ರನ್ ಫಾರ್ ಲೈಫ್ ಕ್ಯಾನ್ಸರ್ ಜಾಗೃತಿ ಮ್ಯಾರಾಥಾನ್ – 2026 ರಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾದರು. ಮ್ಯಾರಾಥಾನ್ ನಲ್ಲಿ ನೂರಾರು ನಾಗರಿಕರು ಹೆಜ್ಜೆ ಹಾಕುವ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸಿದರು. ಕ್ಯಾನ್ಸರ್ ಜಾಗೃತಿಯ ಭಾಗವಾಗಿ ಭಾರತಿ ಆಸ್ಪತ್ರೆ ವತಿಯಿಂದ ಉಚಿತ ಕ್ಯಾನ್ಸರ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ನಾಗರಿಕರು ಸ್ವಯಂಪ್ರೇರಿತರಾಗಿ ಈ ಕ್ಯಾನ್ಸರ್ ಆರೋಗ್ಯ ತಪಸಾಣಾ ಶಿಬಿರದಲ್ಲಿ ಭಾಗವಹಿಸಿದರು. ಇನ್ನು ಶಿಬಿರದಲ್ಲಿ ೨೦೨೬ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಮ್ಯಾರಾಥಾನ್ ನಲ್ಲಿ ವಿಜೇತರಿಗೆ ನಗದು ಪುರಸ್ಕಾರವನ್ನು ನೀಡಲಾಯಿತು. #DarshanPuttannaiah #participate #RunforLife #Cancer #Awareness #Marathon2026 #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಸುಬ್ಬು ಹೊಲೆಯಾರ್ ಅವರಿಗೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ರಾಷ್ಟ್ರೀಯ ಪುರಸ್ಕಾರ ಪ್ರದಾನ ಬೆಂಗಳೂರು: ಪ್ರೊ. ಜಿ.ಎಸ್ ಶಿವರುದ್ರಪ್ಪ ಮತ್ತು ಪ್ರೊ. ಯು.ಆರ್.ಅನಂತಮೂರ್ತಿ ಸಾಂಸ್ಕೃತಿಕ ಜಂಟಿ ಕ್ರಿಯಾ ಸಮಿತಿ ಆಯೋಜನೆ ಮಾಡಿದ್ದ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಕಲಾಗ್ರಾಮದ ಎನ್ ಎಸ್ ಡಿ ಆವರಣದಲ್ಲಿರುವ ಪುಣ್ಯ ಭೂಮಿಯಲ್ಲಿ ವಿಜೃಂಭಣೆಯಿಂದ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಜಿಎಸ್ ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಪ್ರಯುಕ್ತ ಕಾವ್ಯ ವಾಚನ, ಗೀತೆ ಗಾಯನ, ಪ್ರಶಸ್ತಿ ಪ್ರಧಾನ, ಪುಷ್ಪ ನಮನ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಬೈರಮಂಗಲ ರಾಮೇಗೌಡ ವಹಿಸಿದ್ದರು. ಸಮಾರಂಭದಲ್ಲಿ ಡಾ.ಎಂ.ಪ್ರಭು ಜಯರಾಮ್, ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ, ಆಯೋಜಕರಾದ ಕುಮಾರ್ ಕೆ.ಹೆಚ್ ರಂಗೋತ್ರಿ, ಕವಿಗೋಷ್ಠಿ ಅಧ್ಯಕ್ಷ ಡಾ. ಹೆಚ್. ಲಕ್ಷ್ಮಿ ನಾರಾಯಣ, ಲಕ್ಷಿ ಶ್ರೀನಿವಾಸ್, ಮಂಜು ಪಾಂಡವಪುರ, ರಾಜು ಪವಾರ್, ವಕೀಲ ಶ್ಯಾಮ್ ಕುಮಾರ್ ಎ. ವಿ, ಮಲ್ಲಿಕಾರ್ಜುನ ಮಹಾಮನೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಾಡಿನ ಖ್ಯಾತ ಕವಿಗಳಲ್ಲಿ ಒಬ್ಬರಾದ ಸುಬ್ಬು ಹೊಲೆಯಾರ್ ಅವರಿಗೆ ಡಾ. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದಂತಹ ಡಾ.ಬಿ.ಟಿ.ಲಲಿತ ನಾಯಕ್, ಡಾ.ಸತೀಶ್ ಕುಮಾರ್ ಎಸ್ ಹೊಸಮನಿ, ಕುಮಾರ್ ಕೆ ಎಚ್., ಪ್ರಭು ಜಯರಾಮ್, . ಬೈರಮಂಗಲ ರಾಮೇಗೌಡ, ಡಾ. ಎಆರ್ ಗೋವಿಂದ ಸ್ವಾಮಿ ಸುಬ್ಬು ವಲಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ಡಾ. ಹನುಮಂತ್ ರಾಯಪ್ಪ, ಮಂಜು ಪಾಂಡವಪುರ, ರಾಜು ಪವಾರ್, ಶ್ಯಾಮ್ ಕುಮಾರ್ ಎ.ವಿ , ಸುಮನ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಯಿ ರಮಾಬಾಯಿ ಅಂಬೇಡ್ಕರ್ ಅವರ ನೆನಪಿನಲ್ಲಿ ಕುವೆಂಪು, ಯೂ ಆರ್ ಅನಂತಮೂರ್ತಿ, ಜಿ ಎಸ್ ಶಿವರುದ್ರಪ್ಪ, ಡಾ.ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಲತಾ ಜಿ.ಎಲ್, ರಕ್ಷಿತ್ ಕುಮಾರ್ ರವರಿಗೆ ಶ್ರೀ ಪ್ರಭು ಜಯರಾಮ್ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಬಿ .ಟಿ ಲಲಿತ ನಾಯಕ್ ರವರು ಮಾತನಾಡಿ, ಸಿನಿಮಾ ನಟರಿಗೆ ಉತ್ಕೃಷ್ಟವಾಗಿ ಸ್ಮಾರಕಗಳನ್ನು ನಿರ್ಮಿಸಿದಂತೆ ಕಲಾಗ್ರಾಮದಲ್ಲಿರುವ ಡಾ.ಜಿ.ಎಸ್ ಶಿವರುದ್ರಪ್ಪ, ಯು.ಆರ್ ಅನಂತಮೂರ್ತಿ, ಡಾ. ಸಿದ್ದಲಿಂಗಯ್ಯರವರ ಸಮಾಧಿಗಳನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ಈ ಸಂಸ್ಥೆಯೊಂದಿಗೆ ಜೊತೆಗೂಡಿ ಸರ್ಕಾರವು ಅಭಿವೃದ್ಧಿಪಡಿಸಬೇಕೆಂದು ಆಗ್ರಹಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಬೈರಮಂಗಲ ರಾಮೇಗೌಡ, ಈ ಪ್ರದೇಶದಲ್ಲಿ ಜಿಎಸ್ ಶಿವರುದ್ರಪ್ಪ ರವರ ಸ್ಮಾರಕದ ಜೊತೆಗೆ ಒಂದು ಗ್ರಂಥಾಲಯ ಮತ್ತು ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ರಂಗಮಂದಿರ ತುರ್ತಾಗಿ ನಿರ್ಮಾಣಮಾಡಿ ಅವರ ಹೆಸರು ಇಡಬೇಕೆಂದು ಒತ್ತಾಯಿಸಿದರು. ನಂತರ ಸ್ಮಾರಕಗಳನ್ನ ನಿರ್ಮಿಸಲು ತಿಳಿಸಿದವರ ಉದ್ದೇಶವನ್ನು ತಿಳಿಯದ ಸರ್ಕಾರ ಹಾಗೂ ಸಂಸ್ಕೃತಿ ಇಲಾಖೆ ಸ್ಮಾರಕ ನಿರ್ಮಾಣ ಮಾಡಿದ್ದು ಆ ಸ್ಮಾರಕಗಳ ಉದ್ದೇಶವನ್ನು ಅರಿಯುವ ಮನಸ್ಸು ಮಾಡಬೇಕು ಎಂದು ಸರ್ಕಾರಕ್ಕೆ ಎಲ್ಲರೂ ಸೇರಿ ಚಾಟಿ ಬೀಸಬೇಕು ಎಂದರು. #SubbuHoleyar #awarded #NationalPoet #GSShivarudrappa #NationalAward #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 MSIL ನೂತನ ಚಿಟ್ಸ್ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆ ಬೆಂಗಳೂರು: ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌‌ನ ನೂತನ ಚಿಟ್ಸ್ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2005 ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಉಳಿತಾಯದ ಸಂಸ್ಕೃತಿ ಅತ್ಯವಶ್ಯವಾಗಿದ್ದು, ತುರ್ತು ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ ಎಂದರು. ಜಾತಿವರ್ಗಗಳ ಬೇಧವಿಲ್ಲದೇ ಜಾರಿಯಾಗುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯದಿಂದ ಉಳಿತಾಯವಾಗುವ ಹಣವನ್ನು ಜನರು, ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದರು. ಹೂಡಿಕೆ ಹಣ ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂಎಸ್ಐಎಲ್ ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ ನಡೆಯುವ ಚೀಟಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯತೆ ಇರುತ್ತದೆ. ಆದರೆ ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಜನರ ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತದೆ. ತಮ್ಮ ಹೂಡಿಕೆಯ ಕೇವಲ ಶೇ.5 ರಷ್ಟು ಲಾಭ ಪಡೆಯುವ ಸಂಸ್ಥೆ ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ ಎಂದರು. ಕೇರಳ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ 47,000 ಕೋಟಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಕೇವಲ 500 ಕೋಟಿ ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು 10,000 ಕೋಟಿಗೆ ಹೆಚ್ಚಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಶಿಕ್ಷಣ, ಆರೋಗ್ಯ, ಮದುವೆ ಸಮಾರಂಭ, ಮನೆ, ಹೀಗೆ ಜನರು ತಮ್ಮ ಅಗತ್ಯಗಳಿಗಾಗಿ ಹೂಡಿಕೆ ಮಾಡುವ ಉಳಿತಾಯದ ಮೊತ್ತ ಸುಭದ್ರವಾಗಿರುವ ಗ್ಯಾರಂಟಿ ಇದೆ. ಹಣ ಗಳಿಸುವುದು ಎಷ್ಟು ಮುಖ್ಯವೋ, ಸುಭದ್ರವಾಗಿ ಹೂಡಿಕೆ ಮಾಡುವುದೂ ಅಷ್ಟೇ ಮುಖ್ಯ ಎಂದರು. ಎಂಎಸ್ಐಎಲ್ ನ ಚಿಟ್ ಫಂಡ್ ವ್ಯವಹಾರದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಾಂಶವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಗಳು ನೀಡುವ ಸಾಲದ ಸುಳಿಯಲ್ಲಿ ಅನೇಕ ಜನರು ಸಿಲುಕುತ್ತಾರೆ. ಆದ್ದರಿಂದ "ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶ 2025" ಕಾಯ್ದೆಯನ್ನು ಜಾರಿಮಾಡಿ, ಸಾಲ ಪಡೆದು ಕಿರುಕುಳ ಅನುಭವಿಸುತ್ತಿರುವ ಜನರ ರಕ್ಷಣೆ ಮಾಡಲಾಗಿದೆ ಎಂದರು. #Siddaramaiah #launched #MSIL #new #chits #software #mobile #app #ChitFund #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ನುಂಗಣ್ಣಗಳ ಭ್ರಷ್ಟಾಚಾರ ಬಯಲು, ಇನ್ನಷ್ಟು ಹೋರಾಟ: ಆರ್‌.ಅಶೋಕ ಬೆಂಗಳೂರು: ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್‌ನ ನುಂಗಣ್ಣಗಳ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ. ಇದರ ವಿರುದ್ಧ ಇನ್ನಷ್ಟು ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ನಡೆದ 6,000 ಕೋಟಿ ರೂ. ಹಗರಣ ಸಂಬಂಧ ಐದು ದಾಖಲೆಗಳನ್ನು ಹಾಗೂ ಆಡಿಯೋ ದಾಖಲೆಗಳನ್ನು ನೀಡಿದ್ದೇನೆ. ಇಷ್ಟಾದರೂ ಸರ್ಕಾರ ಇನ್ನೂ ಸಾಕ್ಷಿ ಕೇಳುತ್ತಿದೆ. ಈ ಹಿಂದೆ 40 ಪರ್ಸೆಂಟ್‌ ಭ್ರಷ್ಟಾಚಾರವೆಂದು ಗುತ್ತಿಗೆದಾರರು ಹೇಳಿದ್ದಕ್ಕೆ ಕಾಂಗ್ರೆಸ್‌ ನಾಯಕರು ಅಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿತ್ತು. ಈಗ ಮದ್ಯ ಮಾರಾಟಗಾರರ ಸಂಘದವರು 80 ಪರ್ಸೆಂಟ್‌ ಭ್ರಷ್ಟಾಚಾರವೆಂದು ಹೇಳಿದ್ದು, ಆ ಬಗ್ಗೆ ರಾಹುಲ್‌ ಗಾಂಧಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯ, ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯದೆ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ಕೂಡ ಇದರಲ್ಲಿ ಭಾಗಿಯಾಗಿರುವುದರಿಂದ ಅವರು ಸಚಿವರ ರಾಜೀನಾಮೆ ಪಡೆದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಇದರ ವಿರುದ್ಧ ಇನ್ನಷ್ಟು ಹೋರಾಟ ಮಾಡಿ 6,000 ಕೋಟಿ ರೂ. ವಸೂಲಿ ಮಾಡಿ ಜನರ ಹಣ ಉಳಿಸುತ್ತೇವೆ ಎಂದರು. ವಿಬಿ ಜಿ ರಾಮ್‌ ಜಿ ಯೋಜನೆಗೆ ಸಂಬಂಧಿಸಿದಂತೆ ಪಕ್ಷದ ವತಿಯಿಂದ ಜಾಹೀರಾತು ನೀಡಿದ್ದೇವೆ. ಕಾಂಗ್ರೆಸ್‌ನಂತೆ ಸರ್ಕಾರದ ಹಣದಲ್ಲಿ ಜಾಹೀರಾತು ನೀಡಿಲ್ಲ. ಮಹಾತ್ಮ ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಮದ್ಯದಂಗಡಿಗಳನ್ನು ನಿರ್ಮಿಸಿ, ಅದರಲ್ಲಿ ಲೂಟಿ ಮಾಡಿದ್ದಾರೆ. ಗೋಹತ್ಯೆ ವಿರುದ್ಧ ಗಾಂಧೀಜಿ ಹೇಳಿದ್ದರೆ, ಕಾಂಗ್ರೆಸ್‌ ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ವಿರೋಧಿಸಿತ್ತು. ರಘುಪತಿ ರಾಘವ ರಾಜಾರಂ ಎಂದಿದ್ದ ಗಾಂಧೀಜಿಯವರ ಹೆಸರನ್ನು ಯೋಜನೆಗಳಿಗೆ ಇರಿಸುವ ಬದಲು, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಹೆಸರನ್ನೇ ಇರಿಸಿದ್ದಾರೆ. ಕೇವಲ ಇವರ ಕುಟುಂಬದ ಹೆಸರನ್ನೇ ಎಲ್ಲಕ್ಕೂ ಇಟ್ಟಿದ್ದಾರೆ. 470 ಯೋಜನೆಗಳಲ್ಲಿ ಗಾಂಧೀಜಿ ಅಥವಾ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸರಿಲ್ಲ. ಇವರೆಲ್ಲರೂ ನಕಲಿ ಗಾಂಧಿಗಳು ಎಂದರು. ಗಾಂಧೀಜಿ ಹೆಸರಿಟ್ಟು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಕಾಂಗ್ರೆಸ್‌ ನಾಯಕರು ಬೋಫೋರ್ಸ್‌ ಹೆಸರಿಟ್ಟಿದ್ದರು. ಹಾಗಾಗಿ ಗಾಂಧೀಜಿ ಕೋಲು ತೆಗೆದುಕೊಂಡಿದ್ದಾರೆ. ಕುಕ್ಕರ್‌ ಬಾಂಬ್‌ ಹಾಕಿದವನನ್ನು ಬ್ರದರ್ಸ್‌ಗಳು ಎಂದಿದ್ದಾರೆ. ಪಾಕಿಸ್ತಾನದಲ್ಲಿ ರಾಹುಲ್‌ ಗಾಂಧಿ ಎಂದರೆ ಅಪ್ಪಿಕೊಳ್ಳುತ್ತಾರೆ, ನರೇಂದ್ರ ಮೋದಿ ಎಂದರೆ ಕೆಂಡ ಕಾರುತ್ತಾರೆ. ಯಾರು ದೇಶಪ್ರೇಮಿ, ಯಾರು ಯಾರ ಪರ ಎಂದು ಇದರಿಂದಲೇ ಗೊತ್ತಾಗುತ್ತದೆ. ಕಾಂಗ್ರೆಸ್‌ ನಾಯಕರು ವಿದೇಶಕ್ಕೆ ಹೋಗಿ ಭಾರತವನ್ನು ಖಂಡಿಸುತ್ತಾರೆ. ಕಾಂಗ್ರೆಸ್‌ ಜನರ ಪಾಲಿಗೆ ಸತ್ತುಹೋಗಿದೆ ಎಂದರು. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ನಡುವಿನ ವಾರ್‌ ಮತ್ತೆ ಆರಂಭವಾಗಿದೆ. ಇನ್ನು ಮುಂದೆಯೂ ಅಭಿವೃದ್ಧಿ ಬದಲು ಕೇವಲ ಕುರ್ಚಿ ಕಾಳಗ ಕಂಡುಬರಲಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯ ಬದಲು ಯತೀಂದ್ರ ಅವರೇ ನಮ್ಮ ನಾಯಕ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳಬೇಕಿದೆ. ಎಲ್ಲರೂ ಹೈಕಮಾಂಡ್‌ ತೀರ್ಮಾನ ಎಂದರೆ, ಯತೀಂದ್ರ ಮಾತ್ರ ನಮ್ಮಪ್ಪನೇ ಪೂರ್ಣಾವಧಿ ಸಿಎಂ ಎನ್ನುತ್ತಾರೆ. ಆದ್ದರಿಂದ ಇದು ಪವರ್‌ಲೆಸ್‌ ಹೈಕಮಾಂಡ್‌ ಆಗಿದೆ ಎಂದರು. ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಯಲಿದೆ. ಎಲ್ಲ ಶಾಸಕರು ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಬಿಜೆಪಿ ಬಿಬಿಎಂಪಿಯಲ್ಲಿ ಗೆದ್ದಿತ್ತು. ಈಗ ನಿರಂತರವಾಗಿ ತೆರಿಗೆಗಳನ್ನು ಹಾಕಿರುವುದರಿಂದ ಕಾಂಗ್ರೆಸ್‌ಗೆ ಜನರು ಕಪಾಳ ಮೋಕ್ಷ ಮಾಡಲಿದ್ದಾರೆ. ಬಿಜೆಪಿ ಐದು ಪಾಲಿಕೆಗಳನ್ನು ಗೆಲ್ಲುವ ಕುರಿತು ತಂತ್ರಗಾರಿಕೆ ಮಾಡಲಿದ್ದೇವೆ ಎಂದರು. ಕಾಂಗ್ರೆಸ್‌ನವರು ತುಘಲಕ್‌ನಂತೆ ಎಡಬಿಡಂಗಿಗಳು. ಮತಯಂತ್ರವನ್ನು ರಾಜೀವ್‌ ಗಾಂಧಿ ತಂದಿದ್ದು, ಈಗ ಅವರ ಮೇಲೆಯೇ ಕಾಂಗ್ರೆಸ್‌ಗೆ ನಂಬಿಕೆ ಇಲ್ಲ. ಮತಯಂತ್ರವನ್ನು ಕೋರ್ಟ್‌ ಕೂಡ ಮಾನ್ಯ ಮಾಡಿದೆ. ನಾಯಕತ್ವ ಇಲ್ಲದೇ ಆಗುತ್ತಿರುವ ಸೋಲಿನಿಂದ ಪಾಠ ಕಲಿಯುವ ಬದಲು ಮತಯಂತ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರು ಒಂದು ವ್ಯವಸ್ಥೆಗೆ ಹೊಂದಿಕೊಂಡಿರುವಾಗ ಈಗ ಮತ್ತೆ ಬದಲಾವಣೆ ಮಾಡಲು ಮುಂದಾದರೆ ಕಷ್ಟವಾಗುತ್ತದೆ. ಎಲ್ಲ ಉನ್ನತ ಹುದ್ದೆಗಳನ್ನು ಸೋನಿಯಾ ಗಾಂಧಿ ಕುಟುಂಬಕ್ಕೆ ಕೊಡಲಾಗಿದೆ. ಕಾಂಗ್ರೆಸ್‌ನಲ್ಲಿ ಒಂದು ಕುಟುಂಬಕ್ಕೆ ಅಂಟಿಕೊಳ್ಳುವ ಬದಲು ಹೊಸಬರಿಗೆ ಅವಕಾಶ ನೀಡಬೇಕು. ಒಂದು ಕುಟುಂಬದಿಂದ ಇಡೀ ಪಕ್ಷ ಹಾಳಾಗಿದೆ ಎಂದರು. ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಅಧಿವೇಶನದಲ್ಲೇ ಸರಿಯಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್‌ ವಿರುದ್ಧ ಮಾತನಾಡುವವರನ್ನು ಪತ್ತೆ ಮಾಡಲು 67 ಕೋಟಿ ರೂ. ದುಂದುವೆಚ್ಚ ಮಾಡಲಾಗುತ್ತಿದೆ ಎಂದರು. ತಿರುಪತಿ ಭಾರತೀಯರ ಶ್ರದ್ಧಾಕೇಂದ್ರ. ತಿರುಪತಿಯಲ್ಲಿ ಕಳಪೆ ತುಪ್ಪ ಬಳಸಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲಾಗಿದೆ. ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಲು ಸಿಎಂ ಸಿದ್ದರಾಮಯ್ಯನವರೇ ತಂತ್ರ ಮಾಡಿದ್ದರು. ತಿಮರೋಡಿ ಮತ್ತು ಗ್ಯಾಂಗ್‌ ಶ್ರದ್ಧಾಕೇಂದ್ರವನ್ನು ಹಾಳು ಮಾಡುವ ಪ್ರಯತ್ನ ಮಾಡಿದ್ದರು. ತಿರುಪತಿಯನ್ನು ಹಾಳು ಮಾಡಲು ವಿದೇಶದಿಂದ ಹಣ ಬರುತ್ತಿದೆ. ವಿದೇಶಿ ಶಕ್ತಿಗಳ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದರು. #corruption #exposed #more #fight #come #RAshoka #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಶಿವರುದ್ರಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು ರಾಷ್ಟ್ರಕವಿ ಜಿಎಸ್ಎಸ್ ರವರಿಗೆ 100ನೇ ಜನ್ಮದಿನ ನವೋದಯ ಮತ್ತು ನವ್ಯ ಕಾವ್ಯ ಈ ಎರಡು ಬಗೆ ಕವಿತೆಗಳನ್ನು ಬರೆದ ಶಿವರುದ್ರಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು, ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರವರಿ 7ರಂದು ಜನಿಸಿರುತ್ತಾರೆ. ವೃತ್ತಿ ಜೀವನವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಗುವುದರ ಮೂಲಕ ಆರಂಭಿಸಿದ ಇವರು, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ,ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರ ಸೌಂದರ್ಯ ಸಮೀಕ್ಷೆ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ. ಇವರು ಸಾಮಗಾನ, ಕಾರ್ತಿಕ, ದೀಪದ ಹೆಜ್ಜೆ, ಪ್ರೀತಿ ಇಲ್ಲದ ಮೇಲೆ, ಅನಾವರಣ, ಕಾಡಿನ ಕತ್ತಲಲ್ಲಿ, ತೆರೆದ ದಾರಿ, ಮುಂತಾದ ಕವನ ಸಂಕಲನಗಳನ್ನು ರಚಿಸಿರುತ್ತಾರೆ ಸಿದ್ದರಾಮನ ಜೀವನ ಚರಿತ್ರೆ ಉಳ್ಳ ಕರ್ಮಯೋಗಿ ಒಂದು ಮುಖ್ಯ ಗದ್ಯಕೃತಿ, ವಿಮರ್ಶೆಯ ಪೂರ್ವ ಪಶ್ಚಿಮ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ, ಸ್ವರೂಪ, ನವೋದಯ ಕನ್ನಡ ಕವಿಗಳ ಕಾವ್ಯ ಕಲ್ಪನೆ, ಕಾವ್ಯಾರ್ಥ ಚಿಂತನ ಇವು ಇವರ ವಿಮರ್ಶಾತ್ಮಕ ಕೃತಿಗಳು. ಮಾಸ್ಕೋದಲ್ಲಿ 22 ದಿನ ಮತ್ತು ಅಮೆರಿಕಾದಲ್ಲಿ ಕನ್ನಡಿಗ, ಇದು ಇವರ ಪ್ರವಾಸ ಸಾಹಿತ್ಯ ಕೃತಿಗಳಾಗಿರುತ್ತದೆ. 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ, ಜೊತೆಗೆ ರಾಜ್ಯ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರ ಸೇವೆಗೆ ಸಂದಿದೆ. ಇವರು ಕುವೆಂಪುರವರ ಶಿಷ್ಯರಾಗಿದ್ದು ಶಿವರುದ್ರಪ್ಪನವರ ಬೆಳವಣಿಗೆಯಲ್ಲಿ ತ. ಸು.ಶಾಮರಾಯರು ಪ್ರಮುಖ ಕೊಡುಗೆ ಇದೆ. ಸುಗಮ ಸಂಗೀತ ಕ್ಷೇತ್ರದ ಗಾಯಕರಿಗೆ ಇವರು ಅಚ್ಚುಮೆಚ್ಚಿನ ಕವಿಯಾಗಿದ್ದಾರೆ. ಇವರ ಹಲವಾರು ಭಾವಗೀತೆಗಳು ಕಾರ್ಯಕ್ರಮಗಳಲ್ಲಿ ವೇದಿಕೆಗೆ ಘನತೆಯನ್ನು ತಂದುಕೊಡುತ್ತದೆ. ಪ್ರೀತಿ ಇಲ್ಲದ ಮೇಲೆ, ಎದೆ ತುಂಬಿ ಹಾಡುವೆನು, ಕಾಣದ ದೇವರು, ಹೀಗೆ ಅನೇಕ ಇವರ ಕವನಗಳು ಕನ್ನಡಿಗರ ಅಚ್ಚುಮೆಚ್ಚಿನ ಕವನಗಳಾಗಿದೆ, ಬಹುತೇಕ ಕನ್ನಡಿಗರ ನಾಲಿಗೆಗಳ ಮೇಲೆ ಇವು ಕುಣಿದಾಡುತ್ತದೆ. ಇವರ ಕವನದ ಸಾಲುಗಳನ್ನು ಕೇಳದ ಕಿವಿಗಳು ಅಪರೂಪ. ಗೋವಿಂದ ಪೈ ರವರು ಮೊದಲ ರಾಷ್ಟ್ರಕವಿ, ತದನಂತರ ಕುವೆಂಪುರವರನ್ನ ರಾಷ್ಟ್ರಕವಿ ಎಂದು ಗೌರವಿಸಲಾಯಿತು. ಕುವೆಂಪುರವರ ನಿಧನದ ನಂತರ ಅನೇಕ ವರ್ಷಗಳ ತರುವಾಯ ಡಾಕ್ಟರ್ ಜಿ ಎಸ್ ಶಿವರುದ್ರಪ್ಪ ಇವರನ್ನು ರಾಷ್ಟ್ರಕವಿ ಗೌರವ ನೀಡಿ ರಾಜ್ಯ ಸರ್ಕಾರ ಕರ್ನಾಟಕದ ಗೌರವವನ್ನು ಹೆಚ್ಚಿಸಿತು. ಶಿವರುದ್ರಪ್ಪನವರು 2013ರಲ್ಲಿ ನಿಧನರಾದ ನಂತರ ರಾಷ್ಟ್ರಕವಿ ಗೌರವಕ್ಕೆ ಯಾರನ್ನು ಆಯ್ಕೆ ಮಾಡದೇ ಇರುವುದು ಸರಿಯಲ್ಲ. ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗುವ ಮಟ್ಟದವರು ಅನೇಕ ಸಾಹಿತಿಗಳು, ಕವಿಗಳು ಕನ್ನಡ ನಾಡಿನಲ್ಲಿ ಇನ್ನೂ ಇದ್ದಾರೆ. ಕನ್ನಡ ಸಾಹಿತ್ಯ ಒಬ್ಬ ರಾಷ್ಟ್ರಕವಿಯನ್ನು ಗುರುತಿಸಲಾಗದಷ್ಟು ಬಡವಾಗಿಲ್ಲ. - ಕೆ ಎಸ್ ನಾಗರಾಜ್, ಬೆಂಗಳೂರು #GSShivarudrappa #greatest #poets #Kannada #ksnagaraj #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಬಂಡವಾಳ ಮಾಡಿಕೊಂಡ ಕುವೆಂಪು ಕುಟುಂಬದ ಸದಸ್ಯರು ದುರಾಸೆಗೆ ದಾರಿ ಮಾಡಿಕೊಂಡರು ಎಮರ್ಸನ್ ಎಂಬ ಲೇಖಕ ಹೇಳ್ತಾನೆ: "ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗಲಿರುವ ಆಸ್ತಿ ಪುಸ್ತಕಗಳು!" ನಿಜ. ಈಚಿನ ವರ್ಷಗಳಲ್ಲಿ ಕನ್ನಡದ ಮೇರು ಲೇಖಕರ ಕೃತಿಗಳು ಹಾಗೂ ಅವರು ವಾಸವಿದ್ದ ಮನೆಯ ವಿಚಾರದಲ್ಲಿ ಈ ಮಾತು ದುರ್ಬಳಕೆ ಆಗುತ್ತಿರುವ ಘಟನೆಗಳು ನಡೆದಿವೆ. ಹಾಗಾದರೆ ವಾಸ್ತವ ಯೋಚಿಸೋಣ. ಕುವೆಂಪು ಹೆಸರಲ್ಲಿ ಅವರ ಕುಟುಂಬ ಅವರಿದ್ದ ಮನೆ ಮಾರಾಟದಲ್ಲಿ ದಂಧೆ ಮಾಡುತ್ತಿದೆಯಾ? ಕಾಸಿಗೆ ಕೈ ಚಾಚೋ ಕುಟುಂಬ ಆಗಿದೆಯಾ? ಹೀಗೆ ವರ್ತಿಸೋರು ಕುವೆಂಪುಗೆ ಯೋಗ್ಯ ಮಕ್ಕಳಲ್ಲವಾ? ಹೀಗೊಂದು ಜಿಜ್ಞಾಸೆ ಶುರುವಾಗಿದೆ. ಮೈಸೂರು ಕುವೆಂಪು ಮನೆ "ಉದಯರವಿ" ಸ್ಮಾರಕ ಆಗಲಿ ಅಂತ ಕೆಲವರು ಹುಯಿಲೆಬ್ಬಿಸಿದರು! ಅದಕ್ಕೆ ಸರ್ಕಾರವು ಮಣಿಯಿತು. ಇದನ್ನೆ ಬಂಡವಾಳ ಮಾಡಿಕೊಂಡ ಕುವೆಂಪು ಕುಟುಂಬದ ಸದಸ್ಯರು ದುರಾಸೆಗೆ ದಾರಿ ಮಾಡಿಕೊಂಡರು. ಮೈಸೂರಿನಲ್ಲಿ ವಾಸವಿದ್ದ ಕುವೆಂಪು ಮನೆ ಸ್ಮಾರಕ ಆಗುವುದು ಬೇಡ. ಅದಕ್ಕೆ ಅವರ ಕುಟುಂಬ ₹15 ಕೋಟಿಗೆ ಬೇಡಿಕೆ ಇಟ್ಟಿದೆಯಂತೆ! ಇಷ್ಟು ಹಣ ಕೊಡಲು ಇದು ಯಾರಪ್ಪನ ಮನೆ ದುಡ್ಡು? ನನ್ನ ತೆರಿಗೆ ಹಣ ಅದು. ಕುವೆಂಪುಗೆ ಕುಪ್ಪಳಿ ಮನೆಯ ಸ್ಮಾರಕವೆ ಸಾಕು. ಒಬ್ಬ ಕವಿಗೆ ಎರಡು ಸ್ಮಾರಕ ಏಕೆ? ಸರ್ಕಾರ ಕೂಡಲೆ ಈ ಯೋಜನೆ ಕೈ ಬಿಡಲಿ. ಇನ್ನು ಮೂಡಿಗೆರೆ ಸಮೀಪದಲ್ಲಿರೋ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಹಾಳೊಯ್ಯುತ್ತಿದೆ. ಅಲ್ಲಿ ತೇಜಸ್ವಿ ಬಳಸುತ್ತಿದ್ದ ಒಂದೇ ಒಂದು ವಸ್ತುವನ್ನು ಅವರ ಮಕ್ಕಳು ಪ್ರತಿಷ್ಠಾನಕ್ಕೆ ಕೊಟ್ಟಿಲ್ಲ. ಅಲ್ಲೂ ಕೋಟಿಗಳ ಬೇಡಿಕೆ ಇಟ್ಟಿದ್ದಾರಂತೆ! ದಿನಕ್ಕೆ ಲಕ್ಷಗಟ್ಟಲೆ ಅವರ ಕೃತಿಗಳಿಂದ ಸಂಪಾದನೆ ಇದ್ದು ಇನ್ನೂ ದುರಾಸೆಯೆ? ತೇಜಸ್ವಿ ಕತೆ, ಕಾದಂಬರಿ ನಾಟಕ ಮಾಡಿದರೆ ಅಲ್ಲೂ ಪ್ರದರ್ಶನಕ್ಕಿಷ್ಟು ಹಣ ಕೊಡಲು ಬೇಡಿಕೆಯಿಟ್ಟಿದ್ದಾರೆ! ಇವರು ಕಲಿತ ಕುವೆಂಪು ಮೊಮ್ಮಕ್ಕಳು!!! ಹಿಂದೆ ಕವಿ ದ.ರಾ. ಬೇಂದ್ರೆ ಮಗ ವಾಮನ ಬೇಂದ್ರೆ ಪೀಡೆ ಆಗಿದ್ದ. ಅವರ ಕವನಗಳ ಎರಡು ಸಾಲು ಪ್ರಕಟಿಸಲು ಒಪ್ಪಿಗೆ ಬೇಕಿತ್ತು. ಅಪ್ಪಿತಪ್ಪಿ ಪ್ರಕಟಿಸಿದರೆ, ಅವರ ಫೋಟೋ ಮುದ್ರಿಸಿ ಹಂಚಿದರೆ copyright ಹೆಸರಲ್ಲಿ ಕೋರ್ಟಿಗೆ ಹೋದ ಉದಾಹರಣೆಯೂ ಇದೆ! ಇನ್ನು ಹುಬ್ಬಳ್ಳಿಯ ಯಾವನೋ ಶರ್ಮನದ್ದು ಇದೇ ಕತೆ. ಬೇಂದ್ರೆ ಕವಿಯ ಅನೇಕ ಬಳಕೆ ವಸ್ತು, ಕಾವ್ಯ ಕೃತಿಗಳ ಹಕ್ಕು ಹೊಂದಿದ್ದಾನೆ. ಆತ ಬೇಂದ್ರೆಯ ಹೆಸರನ್ನು ಹಾಳು ಹಾಳುಮಾಡಿದ. ಧಾರವಾಡದಲ್ಲಿ ಸರ್ಕಾರದ ಬೇಂದ್ರೆ ಟ್ರಸ್ಟ್ ಇದೆ. ಅಲ್ಲೇ ಬೇಂದ್ರೆ ಸ್ಮಾರಕ ಭವನವೂ ಇದೆ. ಆಯ್ತು ಅದರಲ್ಲೇನಿದೆ ಕವಿ ಕುರುಹು? ಹ್ಞೂ... ಹೂ... ಏನೂ ಇಲ್ಲ. ಅಲ್ಲೇನಿದೆ ಮಣ್ಣಂಗಟ್ಟಿ? ಕುಪ್ಪಳಿಯ ಕುವೆಂಪು ಸ್ಮಾರಕದ ಮುಂದೆ ಅದು "ಸೊನ್ನೆ". ಇನ್ನು ಶಿವರಾಮ ಕಾರಂತರರ ಕೃತಿ ಸ್ವಾಮ್ಯದ ಮಾತು ಹೇಳುವಂತೆಯೇ ಇಲ್ಲ. ಅವರ ಕೃತಿಯೊಂದು ನಾಟಕವಾದರೆ, ಅದಕ್ಕೆ ತಕರಾರು, ರಾಯಲ್ಟಿ ಅಂತ ಕೃತಿ ಸ್ವಾಮ್ಯ ಪಡೆದ ಮಾಲಿನಿ‌ ಮಲ್ಯ ಕೋರ್ಟಿಗೆ ಹೋಗಿದ್ದರು. ಇನ್ನು ಕೃತಿ ಮುದ್ರಣಕ್ಕೆ ಎಷ್ಟೋ ಲಕ್ಷದ ಬೇಡಿಕೆ! ಮಾಲಿನಿ ಮಲ್ಯರಿಗೆ ಕಾರಂತರು ಕೊನೆ ಕಾಲದಲ್ಲಿ ಕೃತಿ ಹಕ್ಕುಸ್ವಾಮ್ಯ ನೀಡಿದ್ದರು. ಇಷ್ಟೇ ಸಾಕಾಯ್ತು ದರ್ಬಾರು ನಡೆಸಲು. KSDL Chandu "ಮೈ ಮನಗಳ ಸುಳಿಯಲ್ಲಿ" ರಂಗಕ್ಕೆ ಅಳವಡಿಸಿದ್ದರು. ಈಯಮ್ಮನ ತಕರಾರು ಶುರುವಾಯ್ತು. ಲಾಯರ್ ನೋಟೀಸು ಕೊಟ್ಟು ಹಿಂಸೆ ಮಾಡಿ, ನಾಟಕ ಪ್ರದರ್ಶನ ಆಗದಂತೆ ನೋಡಿಕೊಂಡರು. ಯಾವುದೇ ಲೇಖಕ ಬರೆದ ಕೃತಿ, ಆತ ಸತ್ತ 50 ವರ್ಷದವರೆಗೆ ಅವರ ಕುಟುಂಬದವರ ಸ್ವಾಮ್ಯಕ್ಕೆ ಒಳಪಡುತ್ತೆ. ನಂತರ ಅದನ್ನು ಯಾರಾದರೂ ಅಚ್ಚು ಹಾಕಿಸಲು ಕಾನೂನಿನಲ್ಲಿ ಅವಕಾಶ ಇದೆ. ಠಾಗೋರ್ ಅವರ "ಗೀತಾಂಜಲಿ" ಇತರ ಕೃತಿಗಳಿಗೆ ಹಕ್ಕು ಸ್ವಾಮ್ಯ ಇಲ್ಲ. ಈಗ ಯಾರಾದರೂ ಮುದ್ರಿಸಬಹುದು. ದ‌.ರಾ. ಬೇಂದ್ರೆ ಕೃತಿಗಳು ಜನ ಸಾಮಾನ್ಯರ ಕೈಗೆ, ಪ್ರಕಾಶಕರಿಗೆ ಎಟುಕಲು ಇನ್ನು ಕೆಲವೆ ವರ್ಷಗಳಿವೆ. [ಬೇಂದ್ರೆ ಕವಿತೆ, ಫೋಟೋ ಹಕ್ಕು ಎಷ್ಟು ದುರುಪಯೋಗ ಆಯ್ತು, ಯಾರಾರೆಲ್ಲ ಕಷ್ಟ ಅನುಭವಿಸಿದರು, ಯಾರಾರೆಲ್ಲ ಕೋರ್ಟಿಗೆ ಅಲೆದರು... ಅನ್ನೋದನ್ನ ವಿವರವಾದ ಲೇಖನ ನಮ್ಮ "ಅನ್ವೇಷಣೆ" ಪತ್ರಿಕೆಯಲ್ಲಿ ಬರೆಯುತ್ತೇನೆ.] "ಸತ್ಯ ಕಹಿ ಮತ್ತು ಕಟು". - ಆರ್.ಜಿ. ಹಳ್ಳಿ ನಾಗರಾಜ, ಹಿರಿಯ ಪತ್ರಕರ್ತರು #Members #Kuvempu #family #money #RGHallinagaraj #greed #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸ ಚಲನಚಿತ್ರ 'ಮಹಾಕವಿ' ಕನ್ನಡದ ಓದುಗರಿಗೆ ʼಮಹಾಕವಿʼ ಎಂದರೆ ಪಂಪ, ಆದಿಕವಿ ಎಂದರೂ ಅವನೇ. ಸಂಸ್ಕೃತದಲ್ಲಿ ಈ ಕೀರ್ತಿಗೆ ಭಾಜನನಾದವನು ಮಹಾಕವಿ ವಾಲ್ಮೀಕಿ. ಬೇರಾವ ಭಾರತೀಯ ಭಾಷೆಗಳಲ್ಲೂ ಇಂಥದ್ದೊಂದು ವಿಸ್ಮಯ ನಡೆದಿಲ್ಲ. ಕನ್ನಡದ ಘನತೆಯನ್ನು ನಿರ್ವಿವಾದವಾಗಿ ಹೆಚ್ಚಿಸಿದ ಕವಿ ಪಂಪನಾದುದರಿಂದಲೇ ʼ ಪಸರಿಪ ಕನ್ನಡಕ್ಕೊಡೆಯನೋರ್ವನೆ ಪಂಪನಾವಗಂʼ ( ನಾಗರಾಜ ಕವಿ, ೧೪ನೇ ಶತಮಾನ), ಎಂಬ ಮಾತು ಇವತ್ತಿನವರೆಗೆ ಮಸುಕಾಗದೆ ಹಾಗೇಯೇ ಉಳಿದಿದೆ. ವ್ಯಾಸನ ಸಂಸ್ಕೃತ ಭಾರತವನ್ನು (ಕ್ರಿಸ್ತಪೂರ್ವ ಸುಮಾರು ೭ನೇ ಶತಮಾನ) ಭಾರತದ ದೇಸೀ ಭಾಷೆಯೊಂದರಲ್ಲಿ ಮೊದಲು ಬರೆದ ಶ್ರೇಯಸ್ಸು ಇವನಿಗೆ. ಭಾರತದ ಇತರ ಅಭಿಜಾತ ಭಾಷೆಗಳಾದ ಒಡಿಯಾ, ತಮಿಳು, ಅಸ್ಸಾಮೀ, ತೆಲುಗು, ಮಲೆಯಾಳಂಗಳಲ್ಲಿ ಮಹಾಭಾರತ ಕಾಣಿಸಿಕೊಂಡದ್ದು ಆಮೇಲೆ. ಅಸಾಮಾನ್ಯ ಪ್ರತಿಭೆಯ ಪಂಪನು ಸಂಸ್ಕೃತ ಭಾರತವನ್ನು ಕನ್ನಡವಾಗಿಸುವಾಗ ಕೃಷ್ಣನನ್ನೂ ಗೌಣವಾಗಿಸಿದ, ಭಗವದ್ಗೀತೆಯನ್ನೂ ಬದಿಗೆ ಸರಿಸಿದ. ಅರ್ಜುನನ್ನು ಬನವಾಸಿಯಲ್ಲಿ ಓಡಾಡಿಸಿ, ಮತ್ತೆ ಹುಟ್ಟುವುದಾದರೆ ಹಸ್ತಿನಾವತಿಯಲ್ಲಿ ಅಲ್ಲ, ಬನವಾಸಿಯಲ್ಲಿ ಎಂದು ಘೋಷಿಸಿದ. ಜಾತಿಯೇ ಪ್ರಧಾನವಾಗಿರುವ ದೇಶದಲ್ಲಿ ʼ ಮಾನವ ಜಾತಿ ಒಂದೆ ವಲಂʼ ಎಂದು ದಿಟ್ಟವಾಗಿ ಘೋಷಿಸಿದ. ಈ ಅರ್ಥದಲ್ಲಿ ಕನ್ನಡಕ್ಕೊಂದು ವೈಚಾರಿಕ ನೆಲೆಗಟ್ಟನ್ನು ರೂಪಿಸಿದ ಕೀರ್ತಿ ಪಂಪನದ್ದು. ಇಂಥ ಪಂಪನ ಬದುಕನ್ನು ಆಧರಿಸಿ ಬರಗೂರು ರಾಮಚಂದ್ರಪ್ಪನವರು ತಯಾರಿಸಿದ ಚಲನಚಿತ್ರವೇ ʼ ಮಹಾಕವಿʼ ಇಷ್ಟಿದ್ದರೂ ಪಂಪನೆಂಬ ಮಹಾಕವಿಯ ಬದುಕನ್ನು ಆಧರಿಸಿ ಒಂದು ಸಿನೇಮಾ ಮಾಡುವಷ್ಟು ಮಾಹಿತಿಗಳು ನಮಗೆ ದೊರಕಿಲ್ಲ. ಅವನ ಎರಡು ಕೃತಿಗಳಾದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯಗಳಲ್ಲಿ ಸಿಕ್ಕ ಮಾಹಿತಿಗಳು ಅತ್ಯಲ್ಪ. ಪಂಪನ ತಮ್ಮನಾದ ಜಿನವಲ್ಲಭ ಬರೆಯಿಸಿದ ಶಾಸನದಿಂದಾಗಿ ಪಂಪನ ಬಗ್ಗೆ ಒಂದಷ್ಟು ವಿವರಗಳು ದೊರಕಿದವು. ಈ ಮಿತಿಗಳ ನಡುವೆಯೂ ನಾಡಿನ ಶ್ರೇಷ್ಠ ಚಿಂತಕರೂ ಲೇಖಕರೂ ಆಗಿರುವ ಬರಗೂರು ರಾಮಚಂದ್ರಪ್ಪನವರು ಪಂಪನ ಬಗ್ಗೆ ಹೆಚ್ಚು ಮಾಹಿತಿ ಇಲ್ಲವೆಂಬ ಮಾತನ್ನು ಒಪ್ಪದೆ, ಪಂಪನ ಎರಡು ಕಾವ್ಯಗಳ ಮೂಲಕವೇ ಸಿನೇಮಾಕ್ಕೆ ಬೇಕಾದಷ್ಟು ಮಾಹಿತಿಗಳನ್ನು ಸೃಷ್ಟಿಸಿಕೊಂಡರು. ಈ ನವೀನ ತಂತ್ರದ ಮೂಲಕ ಅವರು ಜೀವನ ಚರಿತ್ರೆಯ ಚಲನಚಿತ್ರಗಳು ಹೇಗೆ ಕತೆಯನ್ನು ಹೇಳಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇತಿಹಾಸವೆಂದರೆ, ಯುದ್ಧ, ಆರ್ಭಟೆಗಳು, ಕಿವಿ ಗಡಚಿಕ್ಕುವ ಸಂಗೀತ ಇತ್ಯಾದಿ ನಂಬಿಕೆಗಳನ್ನು ತಿರಸ್ಕರಿಸಿ, ನಾವು ಚರಿತ್ರೆಯನ್ನು ನೋಡಬೇಕಾದ ಕ್ರಮವೊಂದನ್ನು ಬರಗೂರು ಮಹಾಕವಿ ಚಿತ್ರದ ಮೂಲಕ ನಮಗೆ ತೋರಿಸಿದ್ದಾರೆ. ಚಿತ್ರದ ಬಹಳ ಮುಖ್ಯವಾದ ಕೆಲವು ಅಂಶಗಳು ಈ ಕೆಳಗಿನಂತಿವೆ- 1. ಕವಿಯಾಗಿದ್ದ ಪಂಪನು ಕಲಿಯೂ ಆಗಿದ್ದ ಎಂಬುದನ್ನು ಕನ್ನಡ ಸಾಹಿತ್ಯದ ಓದುಗರು ಬಲ್ಲರು. ಈ ಅಂಶವನ್ನು ಆಧರಿಸಿ ಬರಗೂರರು ಕವಿ ಪ್ರತಿಭೆಯೊಂದು ಅರಸೊತ್ತಿಗೆಗೆ ಅಡಿಯಾಳಾಗಿರಬೇಕೇ ಎಂಬ ಸಮಕಾಲೀನ ಪ್ರಶ್ನೆಯನ್ನೆತ್ತಿಕೊಂಡು ಪಂಪನ ದ್ವಂದ್ವಗಳನ್ನು ಪರಿಶೀಲಿಸುತ್ತಾರೆ. ಇಲ್ಲಿ ಸಹಜವಾಗಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಅದು ಕಲಿಯಾದಾಗ ಉಂಟಾಗುವ ಯುದ್ಧಗಳು ಮತ್ತು ಅದರಿಂದ ಹುಟ್ಟುವ ಹಿಂಸೆಯ ಪ್ರಶ್ನೆ. ಈ ಸಮಸ್ಯೆಯನ್ನು ಬರಗೂರು ಪಂಪನ ಆದಿಪುರಾಣವನ್ನು ಕೇಂದ್ರದಲ್ಲಿರಿಸಿಕೊಂಡು ಚರ್ಚಿಸುತ್ತಾರೆ. ಕೈಯಲ್ಲಿ ಖಡ್ಗ ಹಿಡಿದ ಪಂಪನಿಗೆ ಅದರೊಳಗೆ ಓಲೆಗರಿ ಕಾಣಿಸುತ್ತದೆ. ಓಲೆಗರಿಯೊಳಗೆ ಖಡ್ಗ ಮೂಡುತ್ತದೆ. ಅಂತಿಮವಾಗಿ ನೀಲಾಂಜನೆಯ ಪ್ರತಿಭೆ ಸಾವಿನಲ್ಲಿ ಕೊನೆಯಾದರೆ, ಭರತನ ಯುದ್ಧವು ತ್ಯಾಗದಲ್ಲಿ ಮುಗಿಯುತ್ತದೆ. ಕಾವ್ಯಧರ್ಮ ಮತ್ತು ಧರ್ಮದ ಸಮಸ್ಯೆಯೂ ಇಲ್ಲಿ ಮುನ್ನೆಲೆಗೆ ಬರುತ್ತದೆ. ಕವಿಯ ದ್ವಂದ್ವಗಳನ್ನು ಸಿನೇಮಾವು ಕಾವ್ಯದಷ್ಟೇ ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ. 2. ಚಲನಚಿತ್ರದ ಎರಡನೆಯ ಮುಖ್ಯ ಅಂಶವೆಂದರೆ- ಜಾತಿಯ ಪ್ರಶ್ನೆ. ಇದನ್ನು ಬರಗೂರು ವಿಕ್ರಮಾರ್ಜುನ ವಿಜಯವನ್ನು ಆಧರಿಸಿ ಚರ್ಚಿಸುತ್ತಾರೆ. ʼಮಾನವಜಾತಿ ತಾನೊಂದೆ ವಲಂʼ ಎಂದು ಸಾರಿದ ಪಂಪನ ಮುಂದೆ ಇದೀಗ ಕರ್ಣ ನಿಂತಿದ್ದಾನೆ. ಆತ ʼಕುಲವಿಹೀನʼ ಎಂಬ ಮಾತನ್ನು ಆಗಾಗ ಕೇಳಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಪಂಪನು ಕರ್ಣನ ಪರವಾಗಿ ನಿಲ್ಲುತ್ತಾನೆ. ʼಕರ್ಣ ರಸಾಯನಮಲ್ತೆ ಭಾರತಂʼ ಎಂಬ ಮಾತನ್ನೂ ಹೇಳುತ್ತಾನೆ. ಇಲ್ಲಿ ಪಂಪನ ಮುಂದಿದ್ದ ಸಮಸ್ಯೆ ಅನ್ನ ಮತ್ತು ಆಶ್ರಯಕೊಟ್ಟ ಅರಿಕೇಸರಿಯನ್ನು ಹೇಗೆ ಸಂಭಾಳಿಸುವುದು ಎಂಬುದು. ಆದರೆ ಪಂಪ ಅರಸೊತ್ತಿಗೆಯನ್ನೇ ಅಂತಿಮ ಎಂದು ಭಾವಿಸದೆ, ನಿರ್ಭಿಡೆಯಿಂದ “ಪೆರರೀವುದೇಂ ಪೆರರಿಂದಪ್ಪುದೇಂ” ಎಂದು ಸವಾಲು ಹಾಕಿ ಮುಂದುವರೆಯುತ್ತಾನೆ. ಸಿನೇಮಾದ ಈ ಭಾಗ ಮನೋಜ್ಞವಾಗಿದೆ. 3. ಮಹಾಕವಿಯ ಪತ್ನಿಯಾದ ಜಕ್ಕಲೆಯು ಆಗಾಗ ಪ್ರೇಕ್ಷಕರ ಪರವಾಗಿ ಕೆಲವು ಪ್ರಶ್ನೆಗಳನ್ನು ಎತ್ತುತ್ತಾ, ಅರಮನೆ ಮತ್ತು ಕವಿಮನೆಗಳ ನಡುವೆ ಸಮನ್ವಯ ಸಾಧಿಸುತ್ತಾಳೆ. ಪಂಪನ ಗುರುಗಳಾದ ದೇವೇಂದ್ರ ಮುನಿಗಳೂ ಬಹುಮಟ್ಟಿಗೆ ಇದುವೇ ಕೆಲಸವನ್ನು ಮಾಡುತ್ತಾರೆ. ಈ ಎರಡೂ ಪಾತ್ರಗಳು ಚೇತೋಹಾರಿಯಾಗಿವೆ. 4. ಸಿನೇಮಾ ಕೊನೆಯಾದಾಗ ಅರಮನೆಯ ಭವ್ಯ ಮೆರವಣಿಗೆಯನ್ನು ತಿರಸ್ಕರಿಸಿದ ಮಹಾಕವಿ, ಯಾವುದೋ ಬೆಟ್ಟದಂಚಿನಲ್ಲಿ ನಿಂತು ನಿಸರ್ಗವನ್ನೂ ಆಕಾಶವನ್ನೂ ಒಂಟಿಯಾಗಿ ದಿಟ್ಟಿಸುವ ಚಿತ್ರ ಮೂಡುತ್ತದೆ. ಈ ದೃಶ್ಯವು ಪಂಪ ಮತ್ತು ಅವನ ಕಾವ್ಯಗಳು ಯಾವುದೇ ಗಡಿಗಳಿಲ್ಲದೆ ನೋಡುಗರ ಮನಸಿನಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡುತ್ತದೆ. ಇದು ಚಿತ್ರದ ನಿಜವಾದ ಯಶಸ್ಸು. ಪಂಪನ ಪಾತ್ರಧಾರಿ ನಟ ಕಿಶೋರ್‌ ಮಹಾಕವಿಯ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ನಟಿಸಿದ್ದಾರೆ.‌ ಮಹಾಕವಿಯು ಬನವಾಸಿಯನ್ನು ಇಷ್ಟಪಟ್ಟಿದ್ದ. ಸಿನೇಮಾವು ಬನವಾಸಿಯ ಸೌಂದರ್ಯವನ್ನು ಅದ್ಭುತವಾಗಿ ಹಿಡಿದಿಟ್ಟಿದೆ. ಛಾಯಾಚಿತ್ರಗ್ರಹಣ ಮೋಹಕವಾಗಿದೆ. ಅಭಿಜಾತ ಕಾವ್ಯಗಳನ್ನು ಚಲಚಿತ್ರವಾಗಿಸುವಾಗ, ಮಹಾಕಾವ್ಯಗಳ ಭವ್ಯತೆಗೆ ಕುಂದಾಗದಂತೆ ಸಂಗೀತವನ್ನು ಹೇಗೆ ಬಳಸಬೇಕೆಂಬುದು ಅರ್ಥವಾಗಬೇಕಾದರೆ, ಮಹಾಕವಿ ಸಿನೇಮಾ ನೋಡಬೇಕು. ನಮ್ಮ ಅಭಿಜಾತ ಕಾವ್ಯಗಳನ್ನು ಹೊಸಬಗೆಯಿಂದ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಮಹಾಕವಿ ಚಲನಚಿತ್ರವನ್ನು ಎಲ್ಲ ಕನ್ನಡಿಗರೂ ನೋಡಬೇಕು. ಅದರಲ್ಲೂ ಮುಖ್ಯವಾಗಿ ಕಾವ್ಯ ಪರಂಪರೆಯಿಂದ ದೂರ ಸರಿಯುತ್ತಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಚಲನಚಿತ್ರವನ್ನು ನೋಡಲೇಬೇಕು. ಅಥವಾ ನೋಡಲು ಸಾಧ್ಯವಾಗುವಂಥ ವಾತಾವರಣ ನಿರ್ಮಾಣವಾಗಬೇಕು. ಅಭಿಜಾತ ಪರಂಪರೆಯೊಡನೆ ಶಾಲಾ ಕಾಲೇಜಿನ ಮಕ್ಕಳು ಸಂಬಂಧ ಸಾಧಿಸಿಕೊಳ್ಳಲು ಮಹಾಕವಿ ಚಲನಚಿತ್ರವು ಖಂಡಿತಾ ಸಹಕರಿಸುತ್ತದೆ ಎಂಬ ವಿಶ್ವಾಸ ನನ್ನದು. • ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ #Mahakavi #new #film #directed #BaraguruRamachandrappa #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ದರ್ಶನ್ ಪುಟ್ಟಣ್ಣಯ್ಯ ಮಂಡ್ಯ: 16 ಕೂಟಗಳ ಮಂತ್ರಿ ಶ್ರೀ ಹುಚ್ಚರಾಯ ಬೀರೇಶ್ವರಸ್ವಾಮಿ ಮತ್ತು ಶ್ರೀ ಗುತ್ತಿಲಕ್ಕಮ್ಮ ದೇವಸ್ಥಾನಗಳ ವಿಮಾನ ಗೋಪುರದ ಕಳಶ ಪ್ರತಿಷ್ಠಾಪನೆಯ ಅಂಗವಾಗಿ 30ಕೂಟಗಳ ಪೂಜಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಶ್ರೀ ಹುಚ್ಚರಾಯ ಬೀರೇಶ್ವರಸ್ವಾಮಿ ದೇವಸ್ಥಾನದ ಆವರಣ, ಬೇವುಕಲ್ಲುಕೊಪ್ಪಲು, ದುದ್ದ ಹೋಬಳಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ದಿನಾಂಕ 05-02-2026ನೇ ಗುರುವಾರ ಮತ್ತು 06-02-2026ನೇ ಶುಕ್ರವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಿದ್ಧತೆ ಮತ್ತು ಇತರ ವ್ಯವಸ್ಥೆಗಳನ್ನು ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ದರ್ಶನ್ ಪುಟ್ಟಣ್ಣಯ್ಯ ಅವರ ಆಪ್ತ ಸಹಾಯಕರು, ಕೆಲವು ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. #DarshanPuttannaiah #reviews #preparations #CM #Siddaramaiah #KRRS #visit #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat