#📜ಪ್ರಚಲಿತ ವಿದ್ಯಮಾನ📜
ಶಿಕ್ಷಣ ಸಂಸ್ಥೆಗಳು ಉತ್ತಮ ಸಂಸ್ಕಾರ ನೀಡಲಿ: ಆರ್.ಎಸ್.ಮಾಲಗತ್ತಿ
ಕೆಂಭಾವಿ: ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ದೂರದೃಷ್ಟಿ ಇರಬೇಕೇ ವಿನಃ ವ್ಯಾಪಾರೀಕರಣ ಬುದ್ಧಿ ಇರಬಾರದು ಎಂದು ಗ್ರಾ.ಪಂ. ಸದಸ್ಯ ಆರ್.ಎಸ್.ಮಾಲಗತ್ತಿ ಹೇಳಿದರು.
ಇಲ್ಲಿಗೆ ಸಮೀಪದ ಮಾಲಗತ್ತಿಯ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಮೌಲ್ಯಯುತ ಶಿಕ್ಷಣದ ಉದ್ದೇಶಗಳನ್ನು ಹೊಂದಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಕ್ಕಳ ಪರಿಪೂರ್ಣ ಬೆಳವಣಿಗೆಯಲ್ಲಿ ಶಿಕ್ಷಕರು, ಪೋಷಕರ ಜತೆಗೆ ಆಡಳಿತ ಮಂಡಳಿ ಪಾತ್ರ ಬಹಳ ಮತ್ತರವಾಗಿದೆ ಎಂದರು.
ಶಿಕ್ಷಣ ಸಂಸ್ಥೆಗಳು ಆರಂಭವಾಗುವಾಗ ಇರುವ ಉದ್ದೇಶಗಳು ಮುಂದೆ ಉಳಿದುಕೊಳ್ಳುವುದಿಲ್ಲ. ಅವು ವ್ಯಾಪಾರ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ ಇದನ್ನು ತಡೆದು ಶಿಕ್ಷಣ ಸಮಾಜಸೇವೆ ಎಂದು ಭಾವಿಸಿ ಶಿಕ್ಷಣ ನೀಡಬೇಕು ಎಂದರು.
ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಬದುಕಿನ ಪಾಠಗಳನ್ನು ಹೇಳಿ ಕೊಡಬೇಕು. ಮಕ್ಕಳು ಸಂಸ್ಕೃತಿಯ ವಾರಸುದಾರರಾಗಲು ಕಲಿಸುವ ಮತ್ತು ಕಲಿಯುವ ಕೆಲಸಗಳು ಒಟ್ಟಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಮೆಚ್ಚುವಂತಹ ಕೆಲಸ ಎಲ್ಲಾ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂದರು.
ಕರಡಕಲ್ ಶಾಖಾ ಮಠದ ಶಾಂತರುದ್ರಮುನಿ ಸ್ವಾಮೀಜಿ, ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಭೀಮರಾಯ ನಾಟೇಕಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಅಬ್ದುಲ್ ಪಟೇಲ್, ಎಸ್.ಡಿಎಂಸಿ ಅಧ್ಯಕ್ಷ ಸಣ್ಣಕ್ಕೆಪ್ಪ ಸಾಹುಕಾರ, ಭೀಮಣ್ಣ ದೊರೆ, ನಿಂಗಣ್ಣ ಸಾಹುಕಾರ, ಮಹಾರಾಯ ಸಾಹುಕಾರ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ , ವೆಂಕೋಬ ದೊರೆ, ನರಸಿಂಹ ನಾಯ್ಕೋಡಿ, ದೌಲತ್ ಪಟೇಲ್, ಸೂಗಣ್ಣ ಸಾಹುಕಾರ, ಗೊಲ್ಲಾಳಪ್ಪ ಕಿರದಳ್ಳಿ ಸೇರಿದಂತೆ ಹಲವರು ಹಾಜರಿದ್ದರು. ಮಲ್ಲು ಸಜ್ಜನ್ ನಿರೂಪಿಸಿದರು ಶ್ರೀಶೈಲ್ ಮ್ಯಾಗೇರಿ ವಂದಿಸಿದರು.
#Educational #institutions #provide #good #morals #RSMalagatti #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸೂತ್ರಧಾರರು ಕುಣಿಸದ ಕರಿಮಾಯಿ ನಾಟಕಕ್ಕೆ ಬಿ ಜಯಶ್ರೀ ಕಂಠ ಜೀವದ್ರವ್ಯ
ಚಂದ್ರಶೇಖರ ಕಂಬಾರರ 'ಕರಿಮಾಯಿ' ಕಾದಂಬರಿ ನಾಟಕರೂಪವನ್ನು ಪಡೆದುಕೊಂಡು ಅನೇಕ ಪ್ರದರ್ಶನಗಳನ್ನು ಕಾಣುತ್ತಿದೆ. ಆರಂಭದಲ್ಲಿ ಗಜವದನನ ಆರಾಧನೆಯೊಂದಿಗೆ ಶುರುವಾದ ಕರಿಮಾಯಿ ನಾಟಕ ಸೂತ್ರಧಾರರಿಂದ ಆರಂಭದಲ್ಲಿಯೇ ವಿಘ್ನ ಆವರಿಸಿಕೊಂಡಿತು. ಸೂತ್ರಧಾರರ ಸ್ಪಷ್ಟತೆ ಇಲ್ಲದ ಮಾತು ಪ್ರೇಕ್ಷಕರಿಗೆ ಮುಳುವಾಯಿತು. ಕಥೆಯ ಪ್ರವೇಶಕ್ಕೆ ಸೂತ್ರಧಾರರು ಗೊಂದಲ ಸೃಷ್ಟಿಸಿದರು. ಗಾಳಿಪಟಕ್ಕೆ ಸೂತ್ರವಿದ್ದರೆ ಬಾನಿನಲ್ಲಿ ಹಾರಾಡಲು ಸಾಧ್ಯ. ಸೂತ್ರವಿರದ ಗಾಳಿಪಟವಾಗಿದ್ದ ನಾಟಕವನ್ನು ಬಿ ಜಯಶ್ರೀ ಅವರ ಗಾಯನ ಜೀವಂತವಾಗಿ ಇಟ್ಟಿತ್ತು. ನಾಟಕದ ಮಧ್ಯದಲ್ಲಿ ಬಿ ಜಯಶ್ರೀರವರ ಸೂತ್ರಧಾರರ ಮೇಲಿನ ಕೋಪ ವ್ಯಕ್ತವಾಗುತ್ತಿತ್ತು. ಸೂತ್ರಧಾರ ಜೋರಾಗಿ ಮಾತನಾಡದೆ ಇದ್ದಾಗ ಮೈಕ್ ಕೊಟ್ಟು ಜೋರಾಗಿ ಮಾತಾಡುವಂತೆ ಸನ್ನೆ ಮಾಡಿದರು ಕೂಡ ಸೂತ್ರಧಾರ ಮಾತನಾಡಲೇ ಇಲ್ಲ. ಅದೇ ಅಸಮಾಧಾನದಿಂದ ಮೈಕ್ ಅನ್ನು ಕಿತ್ತುಕೊಂಡು ಹಾಡು ಮುಂದುವರಿಸಿದರು.
ನಿರ್ದೇಶಕಿಯಾದ ಬಿ. ಜಯಶ್ರೀ ಅವರ ಈ ಅಸಮಾಧಾನ ಸಹಜವಾದದೇ. ಪ್ರಯೋಗ ಪ್ರತಿಬಾರಿ ಪರೀಕ್ಷೆ ಒಡ್ಡುತ್ತದೆ ಎಂಬುದಕ್ಕೆ ಕರಿಮಾಯಿ ನಾಟಕ ಸಾಕ್ಷಿ ಆಯಿತು. ಬಹಳಷ್ಟು ಪ್ರಯೋಗಗಳನ್ನು ಮಾಡಿದ ಕಲಾವಿದರು ಮಾಗಬೇಕೆ ಹೊರತು ಮಲಗಿಕೊಳ್ಳಬಾರದು. ಸೂತ್ರಧಾರರು ಲಯ ತಪ್ಪುತ್ತಿದ್ದರು. ಕಂಬಾರರ ಹಾಡಿನೊಂದಿಗೆ ನಾಟಕಕ್ಕೆ ಉಸಿರು ದೊರೆಯುತ್ತಿತ್ತು. ನಾಟಕ ಖೂನಿಯಿಂದ ಆರಂಭವಾಗಿ ಖೂನಿಯೊಂದಿಗೆ ಮುಕ್ತಾಯವಾಗುವುದು. ಕೊಲೆಪಾತಕರನ್ನು ಮರೆಮಾಚಲು ಗೌಡ ಕುಲಕರ್ಣಿ ಹರಸಾಸ ಪಡುವರು. ಕೊಲೆಗಾರ ನಿಂಗುವಿಗೆ ತೃತೀಯ ಲಿಂಗಿ ವೇಷ ಹಾಕಿಸುವರು. ಕಾಯ್ದೆ ಕಾನೂನುಗಳಿಗೆ ಕವಡೆ ಕಿಮ್ಮತ್ತು ಕೊಡುವುದಿಲ್ಲ ಎಂಬ ವಾದ ವಿವಾದಗಳೊಂದಿಗೆ ಆರಂಭವಾದ ಊರಿನ ಮುಖಂಡರ ನಡುವಿನ ಮನಸ್ತಾಪಗಳು ನಾಟಕದಲ್ಲಿ ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಮತ್ತೊಮ್ಮೆ ಮಾತಿನ ಚಕಮಕಿ ಮೂಲಕ ಪ್ರದರ್ಶನಗೊಳ್ಳುತ್ತವೆ.
ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕೆನ್ನುವವರು ಒಂದು ವರ್ಗ. ಅವನನ್ನು ಬಚಾವ್ ಮಾಡಬೇಕೆನ್ನುವ ಮತ್ತೊಂದು ವರ್ಗ. ಕಾನೂನಿಗೆ ಶರಣಾಗಲೇಬೇಕು ಎಂಬ ವಾದ ವಿವಾದಗಳು ಕರಿಮಾಯಿ ಮುಂದೆಯೇ ನಡೆಯುತ್ತವೆ. ಗ್ರಾಮೀಣರ ಬದುಕಿನಲ್ಲಾಗುವ ಸೂಕ್ಷ್ಮ ರೀತಿಯ ಸ್ಥಿತ್ಯಂತರಗಳನ್ನು ಶಿವಪುರ ಎಂಬ ಕಲ್ಪನೆಯ ಊರಿನ ಮೂಲಕ ಪ್ರಸ್ತುತ ವಿದ್ಯಮಾನಗಳನ್ನು ಕಂಬಾರರು ಚಿತ್ರಿಸಿದ್ದಾರೆ.
ಗೌರಿ -ಘಟವಾಳಪ್ಪ ಅವರ ಕೊಲೆ ವಿಷಯವಾಗಿ ಫೌಜ್ದಾರನು ನಡೆಸುವ ಚರ್ಚೆ ಮೆಚ್ಚುವಂಥದ್ದು. ಕೊಲೆ ಯಾರು ಮಾಡಿದ್ದಾರೆಂದು ಪತ್ತೆ ಹಚ್ಚಲು ಫೌಜ್ದಾರನಿಗೆ ಸಾಧ್ಯವಾಗುವುದೇ ಇಲ್ಲ. ಇದು ವರ್ತಮಾನದ ಘಟನೆಗಳಂತೆ ಪ್ರತಿಬಿಂಬಿತವಾಗಿದೆ. ಅಕ್ರಮ ಸಂಬಂಧ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗಿ ಜೀವ ಕಳೆದುಕೊಳ್ಳುತ್ತಿವೆ. ಇದೇ ಮಾದರಿಯ ಮರ್ಯಾದೆ ಹತ್ಯೆಗಳು ಕೂಡ ಇಂದಿಗೂ ಜೀವಂತವಾಗಿವೆ ಎಂಬ ಒಳದನಿ ನಾಟಕದ್ದು. ಈ ಕೊಲೆಯ ವಿಚಾರವಾಗಿ ನಾಟಕ ತನ್ನ ಎಳೆಯನ್ನು ಬಿಚ್ಚಿಕೊಳ್ಳುವುದಕ್ಕೆ ಶುರುಮಾಡುತ್ತದೆ. ಕೊಲೆಯ ಸುತ್ತ ಪಾತ್ರಗಳು ಮಾತಾಡುತ್ತವೆ. ಕೊಲೆಗಾರ ಯಾರು ಎಂಬುದನ್ನು ಭೇದಿಸಲು ಸಾಧ್ಯವಾಗುವುದಿಲ್ಲ. ಕೊಲೆಗಾರ ಗೊತ್ತಿದ್ದು ತನ್ನ ತಪ್ಪನ್ನು ಒಪ್ಪಿಕೊಂಡರು ಗೌಡ, ಕುಲಕರ್ಣಿ ಕೊಲೆಗಾರನನ್ನು ರಕ್ಷಿಸುವುದು ನಾಟಕದ ವ್ಯಂಗ್ಯ.
ಗೌಡರ ಮನೆಯ ಆಳು ಗೌಡರ ಎದುರಾಳಿಯ ಮನೆಯಲ್ಲಿ ಮದ್ಯಪಾನ ಸೇವಿಸುವುದು, ಕರಿಮಾಯಿ ಮೇಲೆ ಕುಡಿಯುವುದಿಲ್ಲ ಎಂದು ಆಣೆ ಮಾಡಿ ಮತ್ತೆ ಕುಡಿಯುವುದಕ್ಕೆ ಶುರು ಮಾಡಿ, ಮರಣ ಹೊಂದುವುದು. ಅದಕ್ಕೆ ಕರಿಮಾಯಿಯ ಕೋಪವೇ ಕಾರಣವೆನ್ನುವುದು. ಹೀಗೆ ಗ್ರಾಮ ದೇವತೆಯ ಮೇಲಿನ ನಂಬಿಕೆ -ಅಪನಂಬಿಕೆಗಳ ನಡುವಿನ ಸಂಘರ್ಷವಿದು. ಪಾತ್ರಧಾರಿಗಳು ಪ್ರೇಕ್ಷಕರಿಗೆ ಮುಟ್ಟುವಂತೆ ಇನ್ನಷ್ಟು ಕ್ರಿಯಾಶೀಲತೆಯಿಂದ ನಟಿಸಬೇಕು. ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಸ್ಪಂದನ ತಂಡ ಮತ್ತಷ್ಟು ಚುರುಕಾಗಬೇಕಿದೆ. ಅತಿ ಹೆಚ್ಚು ಪಾತ್ರಗಳ ನಾಟಕದ ನಾಗಾಲೋಟಕ್ಕೆ ಮಿತಿ ಹಾಕಿ ಕೊಂಡರೆ ಪ್ರಯೋಗ ಸಮಂಜಸವೆನಿಸುವುದು.
ಕರಿಮಾಯಿಯ ಜಾತ್ರೆ ನಿಮಿತ್ತ ನಾಟಕ ಆಡಿಸಬೇಕೆಂದು ಬೆಳಗಾವಿಯಿಂದ 'ಚಿಮಣಾ'ಳನ್ನು ಕರೆಸುವವರು. ಆ ಚಿಮಣಾ ಗೌಡರಿಗೆ ಬಸರಾಗಿದ್ದೇನೆಂದು ಗುಲ್ಲು ಎಬ್ಬಿಸುವ ದೃಶ್ಯ, ಆ ಬಸರಿಗೆ ಗರ್ಭಪಾತ ಮಾಡಿಸಬೇಕೆಂಬ ನಿರ್ಣಯ, ತಾನು ಗೌಡರಿಗೆ ಬಸರಾಗಿದ್ದೇನೆ ಎಂದು ಗೌಡನಿಂದ ಎರಡು ಎಕರೆ ಜಮೀನು ಬೇಕೆಂದು ಹಠ ಹಿಡಿಯುವ ಚಿಮಣಾಳನ್ನು ಊರಿಂದ ಬಹಿಷ್ಕಾರ ಹಾಕುವರು. ಈ ಎಲ್ಲಾ ಸಿಟ್ಟುಗಳನ್ನು ಇಟ್ಟುಕೊಂಡ ಚಿಮಣಾ ಬೆಳಗಾವಿಯ ಬಸವರಾಜನೊಂದಿಗೆ ಶಾಮಿಲ್ ಆಗಿ ಕರಿಮಾಯಿಯ ಬಂಗಾರದ ಮುಖವನ್ನು ಕದಿಯುವ ಸಾಹಸಕ್ಕೆ ಮುಂದಾಗುತ್ತಾರೆ. ಹಾಗೆ ಕರಿಮಾಯಿ ಪೂಜಾರಿಯ ಮೈಯಲ್ಲಿ ದೈವ ಬರದಂತೆ ಷಡ್ಯಂತ್ರ ರೂಪಿಸುತ್ತಾರೆ.
ಕರಿಮಾಯಿಯ ಪೂಜಾರಿಯನ್ನು ತನ್ನ ಆಟದ ಬುಗುರಿಯನ್ನಾಗಿ ಮಾಡಿಕೊಳ್ಳಲಾಗುತ್ತದೆ. ಚಿಮಣ ಕರಿಮಾಯಿಯ ಪೂಜಾರಿಯ ಆತ್ಮಹತ್ಯೆಗೆ ಕಾರಣವಾಗುತ್ತಾಳೆ. ಚಿಮಣಾಳ ಬಸವರಾಜರ ಕೃತ್ಯಕ್ಕೆ ಶಿವಾಪುರದ ಜನತೆ ದಂಗಾಗುತ್ತಾರೆ. ಚಿಮಣಾ ಗೌಡರಿಗೆ ಬಸರಾಗದಿದ್ದರು ಸುಳ್ಳು ಹೇಳಿ ನಯವಂಚಕಳಂತೆ ವರ್ತಿಸುವಳು. ಪಂಚಾಯತಿ ತನ್ನ ಕೈಲಿ ಇಲ್ಲದ ಗೌಡನಿಗೆ ಇಲ್ಲ ಸಲ್ಲದ ಆರೋಪಗಳು ಅವನನ್ನು ಆವರಿಸುತ್ತವೆ. ಗೌಡ ಯಾರೋ ಮಾಡಿದ ತಪ್ಪನ್ನು ತನ್ನ ಮೇಲೆ ಹಾಕಿಕೊಂಡು ಅವಳಿಗೆ ನ್ಯಾಯ ಒದಗಿಸಲು ಮುಂದಾದರೂ ಚಿಮಣ ಅದರಿಂದ ಹಿಂದೆ ಸರಿಯುತ್ತಾಳೆ. ತನಗೆ ಬೇಕಿರುವುದು ಎರಡು ಎಕರೆ ಹೊಲ ಎಂದು ಅವಳು ಪಟ್ಟು ಹಿಡಿತಾಳೆ. ಮುಗ್ಧರಾದ ಹಳ್ಳಿಯ ಜನತೆಯನ್ನು ನಗರದ ಬೆಳಗಾವಿ ಜನತೆ ಹೇಗೆ ಮೋಸಗೊಳಿಸುತ್ತಾರೆ ಎಂದು ಕಾಣಬಹುದು. ಓದಿದವರು ಹೇಗೆ ಜನರನ್ನು, ಸಮಾಜವನ್ನು ವಂಚನೆಗೊಳಪಡಿಸುತ್ತಾರೆ ಎಂಬ ಸೂಚ್ಯ ದನಿಯು ಇಲ್ಲಿದೆ. ಕರಿಮಾಯಿ ಜಾತ್ರೆಯ ನಿಮಿತ್ತ ಶಾಲಾ ಮಾಸ್ತರರಿಗೆ ನಾಟಕ ಆಡಿಸಬೇಕೆಂದು ಕೆಲವು ಯುವಕರು ದುಂಬಾಲು ಬೀಳುವ ದೃಶ್ಯ ಪ್ರೇಕ್ಷಕರಲ್ಲಿ ನಗು ಮೂಡಿಸುತ್ತದೆ. ಈ ನಾಟಕದಲ್ಲಿ ತಾನಿಲ್ಲವೆಂದು ನಿಂಗು ಆ ನಾಟಕ ಯಶಸ್ವಿಯಾಗದಂತೆ ತಂತ್ರ ರೂಪಿಸುತ್ತಾನೆ.
'ಸಾವಿಗಿಂತ ಬದುಕು ದೊಡ್ಡದು' ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಆಣೆ ಪ್ರಮಾಣಗಳು ನಾಟಕದಲ್ಲಿ ನೋಡುಗರ ಕುತೂಹಲವನ್ನು ಹೆಚ್ಚಿಸುತ್ತದೆ. ಇಂದಿನ ದಿನಮಾನಗಳಲ್ಲಿ ಕೊಲೆಗಾರನ ರಕ್ಷಣೆ ಮಾಡುವ ತಂತ್ರಗಾರಿಕೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹೊಸದೇನಲ್ಲ ಎಂಬಂತೆ ರಾಜಕೀಯ ಧೋರಣೆಗಳನ್ನು ಕಂಬಾರರು ಕಟ್ಟಿ ಕೊಟ್ಟಿದ್ದಾರೆ.
ಪಾತ್ರಗಳು ಸಂಭಾಷಣೆ ಮಾಡುತ್ತಿರುವಾಗಲೇ ಹಾಡುಗಳನ್ನು ಹಾಡುತ್ತಿರುವುದರಿಂದ ನಟರ ಮಾತುಗಳು ಸರಿಯಾಗಿ ಕೇಳಿಸುತ್ತಿರಲಿಲ್ಲ. ಇದು ನಟರ ದೌರ್ಬಲ್ಯವೂ ಅಥವಾ ಪಂಡಿತ ರಂಗ ಮಂದಿರದ ಧ್ವನಿವರ್ಧಕಗಳ ಸಮಸ್ಯೆಯೋ ಎಂಬ ಗೊಂದಲ ಕಾಡತೊಡಗಿತ್ತು.
ಪ್ರೇಕ್ಷಕರ ಮಧ್ಯದಿಂದಲೇ ಪ್ರವೇಶ ಪಡೆಯುವ ಕರಿಮಾಯಿ ಪಾತ್ರದ ಪೂಜಾರಿಯ ನರ್ತನಕ್ಕೆ ರಂಗಮಂದಿರ ಕಂಪಿಸಿತು. ಕಂಬಾರರ ಹಾಡುಗಳು ನಾಟಕಕ್ಕೆ ಮೆರುಗನ್ನು ತಂದುಕೊಟ್ಟವು. ಬಿ ಜಯಶ್ರೀಯವರ ಗಾಯನ ನಾಟಕಕ್ಕೆ ಕಳಸದಂತೆ ಶೋಭಾಯಮಾನವಾಗಿತ್ತು. ಈ ನಾಟಕಕ್ಕೆ ಬಿ ಜಯಶ್ರೀ ಅವರ ಗಾಯನವಿಲ್ಲದಿದ್ದರೆ ನಾಟಕ ಅಪೂರ್ಣವಾಗುವ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿತು. ರಂಗದಲ್ಲಿ ಕರಿಮಾಯಿಯ ಮೂರ್ತಿ ಬೆಟ್ಟದ ಮೇಲಿರುವಂತೆ ಎತ್ತರದಲ್ಲಿ ಕುಳ್ಳಿರಸಲಾಗಿತ್ತು. ಅದರ ಮುಂದೆ ಗಾಯನ ತಂಡವಿತ್ತು. ಮೊದಲ ಅಂಕದಲ್ಲಿ ಕರಿಮಾಯಿಯ ಮೂರ್ತಿ ದರ್ಶನ ಮಾಡಿಸುವುದರ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು ಮತ್ತೆ ಚಪ್ಪಾಳೆಯನ್ನು ಪಡೆಯಲು ನಾಟಕ ಹರಸಾಹಸ ಪಡುತ್ತಿತ್ತು. ಬೆಳಗಾವಿಯ ಗ್ರಾಮೀಣ ಭಾಷೆಯಲ್ಲಿ ನಾಟಕ ಮತ್ತಷ್ಟು ಪ್ರಭಾವ ಬೀರುವ ಸಾಧ್ಯತೆಗಳಿದ್ದರೂ ನಟವರ್ಗ ಸಾಧಿಸುವಲ್ಲಿ ಸಫಲವಾಗಲಿಲ್ಲ. ರಂಗ ಸಜ್ಜಿಕೆ ನಾಟಕಕ್ಕೆ ಹೊಂದಿಕೊಳ್ಳುವಲ್ಲಿ ಸ್ವಲ್ಪ ಅಡಚಣೆ ಆಗುತ್ತಿತ್ತು. ನಟರು ತಮ್ಮ ವ್ಯಾಪ್ತಿಯನ್ನು ಮೀರಿ ರಂಗಕ್ಷೇತ್ರ ಆವರಿಸಿಕೊಳ್ಳುತ್ತಿದ್ದರು ಎನಿಸುತ್ತಿತ್ತು. ಸ್ವಲ್ಪಮಟ್ಟಿನ ರಂಗದ ಶಿಸ್ತು ಅಗೋಚರವಾಗಿತ್ತು. ತುಂಬಾ ವಿಸ್ತಾರವಾದ ನಾಟಕವನ್ನು ದೃಶ್ಯ ಕಟ್ಟುವಾಗ ಸೀಮಿತಗೊಳಿಸಬೇಕಿತ್ತು. ಪಂಚಾಯಿತಿಯ ವಾಗ್ವಾದದಲ್ಲಿ ಮಾತಿನ ಏರಿಳಿತಗಳ ಅಂಶಗಳು ಕಾಣೆಯಾಗಿದ್ದವು. ಚಿಮಣ ಪಾತ್ರ ಮಾತ್ರ ಜೀವಂತವಾಗಿ ರಂಗದ ಮೇಲೆ ಆಟವಾಡಿತು. ರಂಗದ ಮೇಳ ನಾಟಕಕ್ಕೆ ಹೊಸ ವಿನ್ಯಾಸವನ್ನು ಒದಗಿಸುವಂತೆ ತಯಾರಿ ಮಾಡಿಕೊಂಡಿದ್ದರೆನಿಸತ್ತದೆ. ಆದರೆ ನಟರಾದವರು ಅದಕ್ಕೆ ಪೂರಕವಾಗಿ ರಂಗ ಅಧ್ಯಯನದಲ್ಲಿ ತಲ್ಲಿನರಾಗಬೇಕು. 2026ರ ಕಲಬುರ್ಗಿ ರಂಗೋತ್ಸವದಲ್ಲಿ ಬಿ. ಜಯಶ್ರೀ ನಿರ್ದೇಶನದ ಕರಿಮಾಯಿ ನಾಟಕವನ್ನು ಬೆಂಗಳೂರು ಸ್ಪಂದನ ತಂಡ ಪ್ರದರ್ಶಿಸಿತು. 'ಸಾವಿರದ ಶರಣವ್ವ ಕರಿಮಾಯಿ ತಾಯಿ, 'ಬ್ಯಾಟಿ ಬ್ಯಾಟಿಯನಾಡಿದ ಬ್ಯಾಡರ ಹುಡುಗ ಕಾಡ ಬ್ಯಾಟಿಯನಾಡಿದ' ಕಂಬಾರರ ಭಾವ ನಾಟಕದ ಕೇಂದ್ರ ಬಿಂದುವಾಗಿತ್ತು. ಆದರೆ ಸ್ಪಂದನ ತಂಡ ನಟನೆಯ ಕಾಡಬ್ಯಾಟಿಯನ್ನು ಹಿಡಿಯಲು ಮತ್ತಷ್ಟು ಪಳಗಬೇಕಿದೆ. 'ಸಾವಿರದ ಶರಣವ್ವ ಕರಿಮಾಯಿ ತಾಯಿ ' ಸಾಲಿನಲ್ಲಿ ನಾಟಕದ ಸಾವು ಅಗೋಚರವಾಗಿ, ಕರಿಮಾಯಿ ಪೂಜಾರಿಯ ಆತ್ಮಹತ್ಯೆ, ಇನ್ನು ಹುಟ್ಟದ ಕೂಸಿಗೆ ಗರ್ಭಪಾತವಾಗಿ ಮರಣ ಶಾಸನವನ್ನು ನಾಟಕ ನಿರೂಪಿಸುತ್ತದೆ.
- ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, ಸಂಶೋಧಕರು, ಯಾದಗಿರಿ
#BJayashree #voice #lifeblood #Karimai #drama #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ದರ್ಶನ್ ಪುಟ್ಟಣ್ಣಯ್ಯ
ದರ್ಶನ್ ಪುಟ್ಟಣ್ಣಯ್ಯನವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದ ಕನ್ನಡ ಅವತರಣಿಕೆಯ ಪೂರ್ಣಪಾಠ:
ಎಲ್.ಪಿ.ಜಿ., ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆ ಪರಿಹರಿಸಿ
ಸನ್ಮಾನ್ಯ ನರೇಂದ್ರ ಮೋದಿ,
ಪ್ರಧಾನ ಮಂತ್ರಿಗಳು, ನವದೆಹಲಿ
ಮಾನ್ಯರೇ,
ಕಳೆದ ಕೆಲವು ದಿನಗಳಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಭಾರತೀಯ ನಾಗರಿಕರಿಗೆ ಅನಾನುಕೂಲವಾಗುತ್ತಿದೆ. ವಿಶೇಷವಾಗಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ದೇಶಗಳ ನಡೆಯುತ್ತಿರುವ ರಾಜಕೀಯ ಅಂತಹಕಲಹದಿಂದಾಗಿ ಈಗಾಗಲೇ ಬೆಂಗಳೂರಿನಂತಹ ನಗರಗಳಲ್ಲಿ ಹೊಟೆಲ್ ಗಳನ್ನು ಆಶ್ರಯಿಸಿ ಜೀವನ ನಡೆಸುತ್ತಿರುವ ನಾಗರಿಕರಿಗೆ ಊಟ ಸಿಗದಂತಹ ಮತ್ತು ಹೊಟೆಲ್ ಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಜನ ಆಹಾರ ಸಿಗದಂತೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜೊತೆಗೆ, ಇಡೀ ಭಾರತವೇ ಆರ್ಥಿಕವಾಗಿ ಹಿನ್ನಡೆ ಅನುಭವಿಸಲಿದೆ.
ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲ ಕೊರತೆ ದೇಶದ ಯಾವ ಮೂಲೆಯಲ್ಲೂ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಈ ಬಿಕ್ಕಟ್ಟು ನಿಮ್ಮ ರಾಜತಾಂತ್ರಿಕ ನೈಪುಣ್ಯತೆಯನ್ನು ತೋರಿಸಲು ನಿಮಗೆ ಒದಗಿರುವ ಅವಕಾಶವೆಂದೇ ನನಗೆ ಅನಿಸುತ್ತದೆ. ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಆದಷ್ಟು ಶೀಘ್ರವಾಗಿ ಮಾತನಾಡಿ. ಅಗತ್ಯ ಪ್ರಮಾಣದ ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಕೊರತೆ ಉಂಟಾಗದಂತೆ ಆಮದು ಮಾಡಿಕೊಳ್ಳಲು ಸೂಕ್ತ ದಾರಿಗಳನ್ನು ಹುಡುಕಿ.
ಇನ್ನು ನೈಸರ್ಗಿಕ ಅನಿಲವನ್ನು ಈ ಹಿಂದೆ 21 ದಿನಗಳಿಗೆ ಒಂದು ಸಿಲಿಂಡರ್ ತುಂಬಿಸಲು ಅವಕಾಶವಿತ್ತು. ಆದರೆ ಅದನ್ನು 25 ದಿನಕ್ಕೆ ಏರಿಸಲಾಗಿದೆ. ಇದು ದೇಶದ ನಾಗರಿಕರಿಗೆ ಮಾಡುವ ಅವಮಾನ ಎಂದು ನನಗೆ ಅನಿಸುತ್ತದೆ. ಏಕೆಂದರೆ, ದೇಶದ ಎಲ್ಲ ನಾಗರಿಕರೂ ಸಂಕಷ್ಟಗಳ ಅವಧಿಯಲ್ಲಿ ಕೂಡ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವುದಿಲ್ಲ. ಅವರಿಗೆ ಭವಿಷ್ಯದ ಚಿಂತೆ ಇರುತ್ತದೆ. ನಾಳೆ ಸಿಲಿಂಡರ್ ಸಿಗದೆ ಹೋದರೆ ಏನು ಎಂಬ ಆತಂಕದಿಂದ ಅವರು ಮುಂಗಡವಾಗಿ ಸಿಲಿಂಡರ್ ಬುಕ್ ಮಾಡಲು ಯತ್ನಿಸುತ್ತಾರೆಯೇ ಹೊರತು, ಎಲ್ಲ ನಾಗರಿಕರು ತಮ್ಮ ಒಂದು ಸಿಲಿಂಡರ್ ಅನ್ನು ಮಾರಿಕೊಂಡು ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿರುವುದಿಲ್ಲ. ಆದ್ದರಿಂದ ಇಂತಹ ಕ್ರಮಗಳಿಗೆ ಅವಕಾಶ ಮಾಡಿಕೊಡಬೇಡಿ. ಇದರ ಬದಲಾಗಿ ನೈಸರ್ಗಿಕ ಅನಿಲ ಕಾಳದಂಧೆಯವರ ಕೈಗೆ ಸಿಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ.
ಇಂತಹ ಸಮಸ್ಯೆಗಳಿಗೆ ಇದ್ದಕ್ಕಿದ್ದಂತೆ ಪರಿಹಾರ ಹುಡುಕುವುದು ತುಸು ಕಷ್ಟದಾಯಕ. ಆದ್ದರಿಂದ ಸ್ವರಾಜ್ಯ ಪರಿಕಲ್ಪನೆಯನ್ನು ಜಾರಿಗೆ ತರಲು ಯತ್ನಿಸಿ. ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಯಾವೆಲ್ಲ ರೀತಿಯಲ್ಲಿ ಇಂಧನ ಸ್ವಾಯತ್ತತೆಯನ್ನು ಗಳಿಸಬಹುದು ಎಂಬ ವಿಷಯಗಳತ್ತ ಗಮನಹರಿಸಿ. ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಗರಿಷ್ಠ ಅವಕಾಶಗಳನ್ನು ಸೃಷ್ಟಿಸಿ. ಸ್ಟಾರ್ಟ್ ಅಪ್, ಕೌಶಲ್ಯಾಭಿವೃದ್ಧಿ ಯೋಜನೆಗಳಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿ. ಇವುಗಳ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಘೋಷಿಸಿ. ಉತ್ಪಾದನಾ ಕಂಪನಿಗಳಿಗೆ ಸಾಲಸೌಲಭ್ಯ ಸೇರಿದಂತೆ ತೆರಿಗೆ ವಿನಾಯಿತಿಗಳನ್ನು ನೀಡಿ. ನಾಗರಿಕರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಸೌರ, ಪವನ ವಿದ್ಯುತ್ ಬಳಕೆಗೆ ಉತ್ತೇಜನ ನೀಡಿ. ಹಳ್ಳಿಗಳನ್ನು ಸ್ವಾವಲಂಬಿಗಳಾಗಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳು ದೇಶದ ನಾಗರಿಕರಿಗೆ ತಟ್ಟಲಾರವು. ಈ ಹಿನ್ನೆಲೆಯಲ್ಲಿ ಈಗ ಎದುರಾಗಿರುವ ಬಿಕ್ಕಟ್ಟನ್ನೇ ಒಂದು ಸದವಕಾಶವೆಂದು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ತಾವು ಜನರ ಕಷ್ಟಗಳನ್ನು ಪರಿಹರಿಸಲು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾನು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಇಂತಿ ನಿಮ್ಮ ವಿಶ್ವಾಸಿ
ದರ್ಶನ್ ಪುಟ್ಟಣ್ಣಯ್ಯ, ಮೇಲುಕೋಟೆ ಶಾಸಕ, ಕರ್ನಾಟಕ, ಭಾರತ
#DarshanPuttannaiah #LPG #writes #letter #PM #Modi #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನೀರಾವರಿ ಯೋಜನೆಗಳ ಶೀಘ್ರ ಜಾರಿಗೆ ಸಿದ್ಧತೆ
ದೆಹಲಿಯಲ್ಲಿ ಸಂಸದರ ಭೇಟಿ ಹಾಗೂ ಪ್ರತ್ಯೇಕ ವಕೀಲರ ತಂಡ ರಚನೆ
ಬೆಂಗಳೂರು: ಮಹದಾಯಿ, ಕೃಷ್ಣಾ ಮತ್ತು ಕಾವೇರಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಈಗ ಯುದ್ಧೋಪಾದಿಯಲ್ಲಿ ತಯಾರಿ ನಡೆಸಿದೆ. ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಪರಿಷತ್ತಿನಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಸದರೊಂದಿಗೆ ಮಹತ್ವದ ಸಭೆ:ಸಚಿವ ಎಂ.ಬಿ. ಪಾಟೀಲ್ ಹಾಗೂ ಎಚ್.ಕೆ. ಪಾಟೀಲ್ ಅವರೊಂದಿಗೆ ಡಿಸಿಎಂ ನವದೆಹಲಿಗೆ ತೆರಳಲಿದ್ದಾರೆ. ಅಲ್ಲಿ ರಾಜ್ಯದ ಸಂಸದರನ್ನು ಭೇಟಿಯಾಗಿ, ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಮಂಜೂರಾತಿಗಳು ಹಾಗೂ ಅನುಮತಿಗಳ ಬಗ್ಗೆ ಮಾಹಿತಿ ನೀಡಿ, ಯೋಜನೆಗಳ ಅನುಷ್ಠಾನಕ್ಕೆ ಎಲ್ಲರ ಸಹಕಾರ ಕೋರಲಿದ್ದಾರೆ.
ಪ್ರತ್ಯೇಕ ವಕೀಲರ ತಂಡ: ಕೃಷ್ಣಾ ಮೇಲ್ದಂಡೆ ಸೇರಿದಂತೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರಾಜ್ಯದ ಪರವಾಗಿ ಗಟ್ಟಿಯಾದ ವಾದ ಮಂಡಿಸಲು ಪ್ರತ್ಯೇಕ ವಕೀಲರ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ಇದು ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ.
ಕಾನೂನು ಅಡೆತಡೆಗಳ ನಿವಾರಣೆ: ಕೃಷ್ಣ ಜಲಭಾಗ್ಯ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳು ಸುಪ್ರೀಂಕೋರ್ಟ್ನಲ್ಲಿ ದಾಖಲಿಸಿದ್ದ ವಿಶೇಷ ಮೇಲ್ಮನವಿಗಳ ಕುರಿತು ಪ್ರಸ್ತಾಪಿಸಿದ ಅವರು, ಫೆಬ್ರವರಿ 9ರಂದು ಬಂದಿರುವ ಅಂತಿಮ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರ್ಥಿಕ ಹೊರೆಗೆ ಬ್ರೇಕ್: ಭೂಸ್ವಾಧೀನ ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಲಯಗಳು ನೀಡಿರುವ ಹೆಚ್ಚುವರಿ ಪರಿಹಾರದ ಆದೇಶಗಳಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ತಪ್ಪಿಸಲು ಮೆರಿಟ್ ಆಧಾರದಲ್ಲಿ ವಾದ ಮಂಡಿಸಲಾಗುವುದು. ಇದರಿಂದ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲು ದಾರಿಯಾಗಲಿದೆ ಎಂದು ಅವರು ವಿವರಿಸಿದರು.
#Preparations #early #implementation #irrigation #projects #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕೃತಕಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಸರ್ಕಾರದ ಎಲ್ಲ ಹಂತದ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತ, ನೈತಿಕ ಮತ್ತು ಪಾರದರ್ಶಕ ರೀತಿಯಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದಕ್ಕೆ ಕರ್ನಾಟಕ ಸರ್ಕಾರ ಕೃತಕಬುದ್ಧಿಮತ್ತೆಯ (ಎಐ) ಹೊಣೆಗಾರಿಕೆ ಸಮಿತಿ ರಚಿಸಿದೆ.
ಇನ್ಫೊಸಿಸ್ ನ ಸಹಸಂಸ್ಥಾಪಕ ಹಾಗೂ ಆಕ್ಸಿಲರ್ ವೆಂಚರ್ಸ್ ನ ಚೇರ್ಮನ್ ಕ್ರಿಸ್ ಗೋಪಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಮತ್ತು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ ಸಹ-ಅಧ್ಯಕ್ಷತೆಯಲ್ಲಿ ಉದ್ಯಮ, ಶೈಕ್ಷಣಿಕ, ನೀತಿ - ನಿರೂಪಣೆ ಮತ್ತು ಪ್ರಮುಖ ಕಾನೂನು ತಜ್ಞರನ್ನು ಒಳಗೊಂಡ 13 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಮೊದಲ ಸಭೆ ನಡೆಯಲ್ಲಿ ತ್ವರಿತವಾಗಿ ಬದಲಾಗುತ್ತಿರುವ ʼಎಐʼ ವಲಯ ಮತ್ತು ʼಎಐʼ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಥ ಆಡಳಿತ ಚೌಕಟ್ಟುಗಳನ್ನು ರೂಪಿಸುವುದರ ಅಗತ್ಯವನ್ನು ಹಾಗೂ ಅದರಲ್ಲೂ ವಿಶೇಷವಾಗಿ ನಾಗರಿಕರ ಮೇಲೆ ಪರಿಣಾಮ ಬೀರುವ ವ್ಯವಸ್ಥೆಗಳಲ್ಲಿನ ʼಎಐʼ ಪ್ರಭಾವವನ್ನು ಪ್ರಮುಖವಾಗಿ ಚರ್ಚಿಸಲಾಯಿತು.
ಸರ್ಕಾರದ ಆಡಳಿತ ಯಂತ್ರದಾದ್ಯಂತ ನಿಯೋಜಿಸಲಾಗುವ ʼಎಐʼ ಸೌಲಭ್ಯಗಳು ಸುರಕ್ಷಿತ, ನ್ಯಾಯಯುತ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವೀನ್ಯತೆ ಜಾರಿಗೊಳಿಸುವ ಗುರಿ ಹೊಂದಿರುವ ಕರ್ನಾಟಕಕ್ಕಾಗಿ ಜವಾಬ್ದಾರಿಯುತ ʼಎಐʼ ನೀತಿ ಮತ್ತು ಅನುಷ್ಠಾನ ಮಾರ್ಗಸೂಚಿಯನ್ನು ಸಮಿತಿಯು ಅಭಿವೃದ್ಧಿಪಡಿಸಲಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ತನ್ನ ಡೀಪ್ಟೆಕ್ ದಶಕವನ್ನು ಪ್ರವೇಶಿಸುತ್ತಿದ್ದಂತೆ, ರಾಜ್ಯ ಕೃತಕಬುದ್ಧಿಮತ್ತೆ ನಾವೀನ್ಯತೆಗೆ ವೇಗ ನೀಡುವುದರ ಜೊತೆಗೆ ಈ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶದಿಂದ ನಿಯೋಜಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಗಮನಹರಿಸಿದೆ ಎಂದರು.
ʼಎಐʼ ಉತ್ತರದಾಯಿ ಸಮಿತಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರ ನಂಬಿಕೆ ರಕ್ಷಿಸುವಾಗ ನಾವೀನ್ಯತೆ ಉತ್ತೇಜಿಸುವ ಆಡಳಿತದ ಚೌಕಟ್ಟು ರೂಪಿಸುವುದಕ್ಕೆ ನೆರವಾಗಲು ಉದ್ಯಮ, ಶೈಕ್ಷಣಿಕ ಮತ್ತು ನೀತಿ - ನಿರೂಪಣೆ ವಲಯದ ಪ್ರಮುಖ ತಜ್ಞರ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲಿದೆ. ಈ ಉಪಕ್ರಮ ಕರ್ನಾಟಕ ಅತ್ಯಾಧುನಿಕ ಮತ್ತು ಹೊಣೆಗಾರಿಕೆಯ ʼಎಐʼ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಮುಂದುವರಿಯಲು ನೆರವಾಗಲಿದೆʼ ಎಂದರು.
ಮೊದಲ ಸಭೆಯಲ್ಲಿ, ಸಮಿತಿಯು ಗಮನಹರಿಸುವ ಪ್ರಮುಖ ಕ್ಷೇತ್ರಗಳ ಬಗ್ಗೆ ಸದಸ್ಯರು ವಿವರವಾಗಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಸಂಗತಿಗಳು: ಹೊಣೆಗಾರಿಕೆಯ ʼಎಐʼ ತತ್ವಗಳು ಮತ್ತು ರಾಜ್ಯ ಸರ್ಕಾರಕ್ಕೆ ನೀತಿ ನಿರೂಪಣೆಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು.
ದೇಶದ ʼಎಐʼ ಆಡಳಿತ ಮಾರ್ಗಸೂಚಿಗಳಿಗೆ ಅನುಗುಣವಾಗಿರುವ ಮತ್ತು ಕಾನೂನುಬದ್ಧತೆ, ನ್ಯಾಯಸಮ್ಮತತೆ, ತಾರತಮ್ಯ ಮಾಡದಿರುವುದು, ಗೌಪ್ಯತೆ, ಸುರಕ್ಷತೆ, ಭದ್ರತೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿ ಸೇರಿದಂತೆ ಜಾಗತಿಕ ಅತ್ಯುತ್ತಮ ರೂಢಿಗಳ ಜೊತೆಗೆ ಹೊಂದಿಕೆಯಾಗುವ ನೀತಿ – ನಿಯಮಗಳನ್ನು ರೂಪಿಸುವುದು.
ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಮತ್ತು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಜೊತೆಗಿನ ಹೊಂದಾಣಿಕೆಯಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸಿಕೊಳ್ಳಲು ಜವಾಬ್ದಾರಿಯುತ ʼಎಐʼ ನೀತಿ ಚೌಕಟ್ಟನ್ನು ಶಿಫಾರಸು ಮಾಡುವುದು.
ನಾಗರಿಕರ ವರ್ತನೆ, ಚಟುವಟಿಕೆಗಳು ಮತ್ತು ಸಮಾಜದಲ್ಲಿ ಅವರ ನಡೆನುಡಿಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವುದರ ನಿಷೇಧ ಸೇರಿದಂತೆ ಕಾನೂನುಬಾಹಿರ ಅಥವಾ ಅಸಮಾನ ಕಣ್ಗಾವಲು, ನಿಷೇಧಿಸಬೇಕಾದ ಅಥವಾ ನಿರ್ಬಂಧಿಸಬೇಕಾದ ʼಎಐʼ ನಡವಳಿಕೆಗಳನ್ನು ಗುರುತಿಸುವುದು.
ಕಲ್ಯಾಣ ಕಾರ್ಯಕ್ರಮಗಳ ವಿತರಣೆ, ಆರೋಗ್ಯ ರಕ್ಷಣೆ, ಶಿಕ್ಷಣ, ಕಾನೂನು ಸುವ್ಯವಸ್ಥೆ, ನೇಮಕಾತಿ, ಹಣಕಾಸು ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ ಗರಿಷ್ಠ ಅಪಾಯದ ʼಎಐʼ ಅಪ್ಲಿಕೇಷನ್ಗಳಿಗೆ ಸುರಕ್ಷತಾ ಕ್ರಮಗಳು, ಅನುಮೋದನೆಗಳು ಮತ್ತು ಪರಿಶೀಲನಾ ಕಾರ್ಯವಿಧಾನಗಳನ್ನು ಶಿಫಾರಸು ಮಾಡುವುದು.
ಭಾರತದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯೊಂದಿಗೆ ಹೊಂದಿಕೆಯಾಗುವ ಡೇಟಾ ಗುಣಮಟ್ಟ, ಪ್ರಾತಿನಿಧ್ಯ, ಉದ್ದೇಶಗಳ ಮಿತಿ, ಸುರಕ್ಷಿತ ಡೇಟಾ-ಹಂಚಿಕೆ ಶಿಷ್ಟಚಾರಗಳ ಮಾನದಂಡಗಳನ್ನು ಒಳಗೊಂಡಂತೆ ʼಎಐʼ ವ್ಯವಸ್ಥೆಗಳಿಗೆ ದತ್ತಾಂಶ ಆಡಳಿತ ಮತ್ತು ಗೌಪ್ಯತೆ ಸುರಕ್ಷತಾ ಕ್ರಮಗಳ ವ್ಯಾಖ್ಯಾನ.
ನಾಗರಿಕರು ʼಎಐʼ-ಕಾರ್ಯಗತಗೊಳಿಸಿದ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಿದಾಗ ಮಾಹಿತಿ ಬಹಿರಂಗಪಡಿಸುವಿಕೆ, ʼಎಐʼ-ನೆರವಿನ ನಿರ್ಧಾರಗಳಿಗೆ ವಿವರಣೆಯ ಮಾನದಂಡಗಳು ಮತ್ತು ತಪ್ಪಾದ ಅಥವಾ ತಾರತಮ್ಯದ ಫಲಿತಾಂಶಗಳ ಸಂದರ್ಭಗಳಲ್ಲಿ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಾರ್ಯವಿಧಾನಗಳನ್ನು ನಿಗದಿಪಡಿಸುವುದು.
ಪಕ್ಷಪಾತ, ಪ್ರತಿಕೂಲ ದಾಳಿಗಳು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ತಪ್ಪು ದಾರಿಗೆ ಒಯ್ಯಲು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಹಾನಿಕಾರಕ ಮಾಹಿತಿಯನ್ನು ಡೇಟಾದಲ್ಲಿ ಸೇರಿಸುವ ಪ್ರಕ್ರಿಯೆ, ಡೀಪ್ಫೇಕ್ಗಳ ದುರುಪಯೋಗದಂತಹ ಅಪಾಯಗಳನ್ನು ಪರಿಹರಿಸಲು ಸ್ವತಂತ್ರ ಲೆಕ್ಕಪರಿಶೋಧನೆಗಳು, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ತುರ್ತು ಘಟನೆಗೆ ಪ್ರತಿಕ್ರಿಯಿಸುವ ನಿಯಮಾವಳಿ ಗಳನ್ನು ಶಿಫಾರಸು ಮಾಡುವುದು.
ಬಳಕೆದಾರರು ನೀಡಿದ ಮಾಹಿತಿ ಆಧರಿಸಿ ಹೊಸ ಮಾಹಿತಿ ಒದಗಿಸುವುದರ, ಸಾಮಾಜಿಕ ಮಾಧ್ಯಮ ತಂತ್ರಜ್ಞಾನಗಳ ಪರಿಣಾಮಗಳ ಪರಿಶೀಲನೆ ಮತ್ತು ಅಂತಹ ಅಪಾಯಗಳನ್ನು ತಗ್ಗಿಸಲು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡುವುದು.
ಸರ್ಕಾರಿ ಇಲಾಖೆಗಳು ಅಳವಡಿಸಿಕೊಂಡ ʼಎಐʼ ವ್ಯವಸ್ಥೆಗಳಿಗೆ ಜವಾಬ್ದಾರಿಯುತ ʼಎಐʼ ಖರೀದಿ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು.
ಸರ್ಕಾರಿ ಅಧಿಕಾರಿಗಳಿಗೆ ʼಎಐʼ ಸಾಕ್ಷರತಾ ಕಾರ್ಯಕ್ರಮಗಳನ್ನು ಶಿಫಾರಸು ಮಾಡುವುದು, ಜೊತೆಗೆ ಇಲಾಖೆಗಳಾದ್ಯಂತ ಪ್ರಾಯೋಗಿಕ ನಿಯೋಜನೆಗಾಗಿ ಆದ್ಯತೆಯ ʼಎಐʼ ಬಳಕೆ ಗುರುತಿಸುವುದು.
ಸಮಿತಿಯ ಸ್ವರೂಪ: ಸಮಿತಿಯು ಪ್ರಮುಖ ತಂತ್ರಜ್ಞಾನ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಹಿರಿಯ ನಾಯಕರು ಮತ್ತು ತಜ್ಞರನ್ನು ಒಳಗೊಂಡಿದೆ. ಇದರಲ್ಲಿ ಐಬಿಎಂ, ಆಕ್ಸೆಂಚರ್, ಕಿಂಡ್ರಿಲ್, ವಿಪ್ರೊ, ಐಐಐಟಿ ಬೆಂಗಳೂರು ಮತ್ತು ನಾಸ್ಕಾಂ ಪ್ರತಿನಿಧಿಗಳು ಸೇರಿದಂತೆ, ʼಎಐʼ ನೀತಿ, ಕಾನೂನು ಮತ್ತು ಆಡಳಿತದ ತಜ್ಞರು ಸೇರಿದ್ದಾರೆ.
ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ (ಕೆಐಟಿಎಸ್) ವ್ಯವಸ್ಥಾಪಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಸಮಿತಿಯು 60 ದಿನಗಳಲ್ಲಿ ಮಧ್ಯಂತರ ವರದಿಯನ್ನು ಮತ್ತು 90 ದಿನಗಳಲ್ಲಿ ಅಂತಿಮ ಶಿಫಾರಸುಗಳನ್ನು ಸಲ್ಲಿಸಲಿದೆ.
ಸಮಿತಿಯ ಸದಸ್ಯರು:
ಅಕ್ಸೆಂಚರ್ ಇಂಡಿಯಾದ ಕಂಟ್ರಿ ಮ್ಯಾನೇಜಿಂಗ್ ಡೈರೆಕ್ಟರ್– ಅಜಯ್ ವಿಜ್
ಕಿಂಡ್ರಿಲ್ ಇಂಡಿಯಾ ಅಧ್ಯಕ್ಷ – ಲಿಂಗರಾಜು ಸಾವ್ಕರ್ ಐಬಿಎಂ ಇಂಡಿಯಾ, ದಕ್ಷಿಣ ಏಷ್ಯಾ ಮುಖ್ಯ ತಂತ್ರಜ್ಞಾನ ಅಧಿಕಾರಿ – ಅಮಿತ್ ಸಿಂಘೀ
ವಿಪ್ರೊ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ – ಸಂಜೀವ್ ಜೈನ್
ಐಐಐಟಿ ಬೆಂಗಳೂರು ನಿರ್ದೇಶಕ – ಪ್ರೊ. ದೇಬಬ್ರತ ದಾಸ್
ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸೇವಾ ಕಂಪನಿಗಳ ಸಂಘಟನೆ (ನಾಸ್ಕಾಂ) ಪ್ರಾದೇಶಿಕ ನಿರ್ದೇಶಕ – ಭಾಸ್ಕರ್ ವರ್ಮ
ಸರ್ವಂ ಎಐ ಸಹ ಸ್ಥಾಪಕ – ವಿವೇಕ್ ರಾಘವನ್
ಎಐ ಸಿಒಇ-ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ – ಅಶೋಕ್ ಕಾಮತ್
ಐಬಿಎಂ ಕಾನೂನು ವಿಭಾಗದ ಮುಖ್ಯಸ್ಥ – ದಿನೇಶ್ ವಿಜಯಕುಮಾರ್
ಟ್ರೈಲೀಗಲ್ ತಂತ್ರಜ್ಞಾನ, ಮಾಧ್ಯಮ ಮತ್ತು ದೂರಸಂಪರ್ಕ ವಿಭಾಗದ ಮುಖ್ಯಸ್ಥ – ರಾಹುಲ್ ಮಂಥನ್
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ʼಕೆಐಟಿಎಸ್ʼನ ವ್ಯವಸ್ಥಾಪಕ ನಿರ್ದೇಶಕ
#State #govt #forms #AI #Accountability #Committee #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನಿಂದನೆಯ ಕಲ್ಲುಗಳು ಹೂವಾಗಿ ಅರಳಿದವು..
ಮೈಮೇಲೆ ಬಿದ್ದ ಕೆಸರುಗಳು ಅಕ್ಷರ ಮಾಲೆಯಾದವು..
ಅವಮಾನದ ಹಾದಿಯಲಿ ಗೌರವದ ದೀಪ ಹಚ್ಚಿದವಳು..
ನಮ್ಮಮ್ಮ ಸಾವಿತ್ರಿಬಾಯಿ ಫುಲೆ, ಅಕ್ಷರದ ಹರಿಕಾರಳು.
ಮಹಿಳಾ ಸಬಲೀಕರಣದ ಹರಿಕಾರರ ಪುಣ್ಯಸ್ಮರಣೆಯಂದು ಗೌರವದ ನಮನಗಳು.
#malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಉಡುಪಿ ಹೋಟೆಲ್ ಶೈಲಿಯ 'ಮಸಾಲಾ ಪುಡಿ' ಮತ್ತು ಸಾಂಬಾರ್ ಮಾಡುವ ರಹಸ್ಯ!
ದಕ್ಷಿಣ ಭಾರತದ ಊಟ ಎಂದರೆ ಅಲ್ಲಿ ಸಾಂಬಾರ್ ಇರಲೇಬೇಕು. ಅದರಲ್ಲೂ ಆ ಘಮಘಮಿಸುವ 'ಉಡುಪಿ ಹೋಟೆಲ್' ಸಾಂಬಾರ್ ರುಚಿಯೇ ಬೇರೆ. ಎಷ್ಟೇ ಪ್ರಯತ್ನಿಸಿದರೂ ಮನೆಯಲ್ಲಿ ಹೋಟೆಲ್ ಸವಿಯ ಸಾಂಬಾರ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದಲ್ಲಿ, ನಿಮ್ಮ ಅಡುಗೆಮನೆಯಲ್ಲಿ ಈ ಮ್ಯಾಜಿಕ್ ಪುಡಿ ಮತ್ತು ಈ ಸರಳ ವಿಧಾನ ಇರಲೇಬೇಕು.
ಭಾಗ 1: ಉಡುಪಿ ಸಾಂಬಾರ್ ಪುಡಿ ತಯಾರಿ
ಬೇಕಾಗುವ ಪದಾರ್ಥಗಳು:
1 ಕಪ್ ಧನಿಯಾ, 2 ಚಮಚ ಕಡ್ಲೆಬೇಳೆ, 1 ಚಮಚ ಉದ್ದಿನಬೇಳೆ.
8-10 ಬ್ಯಾಡಗಿ ಮತ್ತು 3-4 ಗುಂಟೂರು ಒಣ ಮೆಣಸಿನಕಾಯಿ.
ತಲಾ 1 ಚಮಚ ಮೆಂತ್ಯ ಮತ್ತು ಜೀರಿಗೆ, ½ ಚಮಚ ಕಾಳುಮೆಣಸು.
2 ಚಮಚ ಒಣ ಕೊಬ್ಬರಿ ತುರಿ, 8-10 ಕರಿಬೇವು, ½ ಚಮಚ ಅರಿಶಿನ.
ತಯಾರಿಸುವ ವಿಧಾನ: ಎಲ್ಲಾ ಪದಾರ್ಥಗಳನ್ನು ಸಣ್ಣ ಉರಿಯಲ್ಲಿ ಪ್ರತ್ಯೇಕವಾಗಿ (Dry Roast) ಹುರಿದುಕೊಳ್ಳಿ. ಕೊಬ್ಬರಿ ಮತ್ತು ಕರಿಬೇವು ಗರಿಗರಿಯಾದ ನಂತರ, ಎಲ್ಲವನ್ನೂ ತಣ್ಣಗಾಗಲು ಬಿಡಿ. ಕೊನೆಯಲ್ಲಿ ಅರಿಶಿನ ಸೇರಿಸಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ.
ಭಾಗ 2: ಈ ಪುಡಿ ಬಳಸಿ 'ಹೋಟೆಲ್ ಶೈಲಿಯ ಸಾಂಬಾರ್' ಮಾಡುವ ವಿಧಾನ: ಮನೆಯಲ್ಲೇ ಹೋಟೆಲ್ ರುಚಿ ಬರಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಅಗತ್ಯವಿರುವ ಪದಾರ್ಥಗಳು:
ಬೇಯಿಸಿದ ತೊಗರಿ ಬೇಳೆ (1 ಕಪ್)
ತರಕಾರಿಗಳು (ನುಗ್ಗೆಕಾಯಿ, ಕ್ಯಾರೆಟ್, ಆಲೂಗಡ್ಡೆ ಅಥವಾ ಕುಂಬಳಕಾಯಿ)
ಹುಣಸೆಹಣ್ಣಿನ ರಸ ಮತ್ತು ಬೆಲ್ಲ (ರುಚಿಗೆ ತಕ್ಕಷ್ಟು)
ನಾವು ತಯಾರಿಸಿದ ಉಡುಪಿ ಸಾಂಬಾರ್ ಪುಡಿ (2-3 ಚಮಚ)
ಒಗ್ಗರಣೆಗೆ: ಎಣ್ಣೆ/ತುಪ್ಪ, ಸಾಸಿವೆ, ಇಂಗು, ಕರಿಬೇವು ಮತ್ತು ಒಣ ಮೆಣಸಿನಕಾಯಿ.
ಮಾಡುವ ವಿಧಾನ: ತರಕಾರಿ ಬೇಯಿಸಿ: ಮೊದಲು ತರಕಾರಿಗಳನ್ನು ಸ್ವಲ್ಪ ಉಪ್ಪು ಮತ್ತು ನೀರಿನಲ್ಲಿ ಅರ್ಧಂಬರ್ಧ ಬೇಯಿಸಿಕೊಳ್ಳಿ.
ಮಸಾಲೆ ಸೇರಿಸಿ: ಬೇಯುತ್ತಿರುವ ತರಕಾರಿಗಳಿಗೆ ಹುಣಸೆಹಣ್ಣಿನ ರಸ, ಸ್ವಲ್ಪ ಬೆಲ್ಲ ಮತ್ತು ನಾವು ತಯಾರಿಸಿದ 2-3 ಚಮಚ ಸಾಂಬಾರ್ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. (ಹೋಟೆಲ್ ಸಾಂಬಾರ್ಗೆ ಬೆಲ್ಲ ಕಡ್ಡಾಯ)
ಬೇಳೆ ಮಿಶ್ರಣ: ಈಗ ಮೊದಲೇ ಬೇಯಿಸಿ ಸ್ಮ್ಯಾಶ್ ಮಾಡಿದ ತೊಗರಿ ಬೇಳೆಯನ್ನು ಸೇರಿಸಿ. ಸಾಂಬಾರ್ ಹದಕ್ಕೆ ತಕ್ಕಂತೆ ನೀರು ಹಾಕಿ 5-8 ನಿಮಿಷ ಚೆನ್ನಾಗಿ ಕುದಿಯಲು ಬಿಡಿ.
ಘಮಘಮಿಸುವ ಒಗ್ಗರಣೆ: ಕೊನೆಯಲ್ಲಿ ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕರಿಬೇವು, ಒಣ ಮೆಣಸಿನಕಾಯಿ ಮತ್ತು ಮುಖ್ಯವಾಗಿ ಇಂಗು ಹಾಕಿ ಒಗ್ಗರಣೆ ನೀಡಿ ಸಾಂಬಾರ್ಗೆ ಸೇರಿಸಿ.
ಮಾಲ್ಗುಡಿ ಎಕ್ಸ್ಪ್ರೆಸ್ ಟಿಪ್ಸ್:
ತಾಜಾತನ: ಸಾಂಬಾರ್ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿಟ್ಟರೆ 2 ತಿಂಗಳು ಬಾಳಿಕೆ ಬರುತ್ತದೆ.
ರುಚಿಯ ಗುಟ್ಟು: ಒಗ್ಗರಣೆಗೆ ತುಪ್ಪ ಬಳಸಿದರೆ ಹೋಟೆಲ್ ಸಾಂಬಾರ್ನ ಅಸಲಿ ಸುವಾಸನೆ ಮನೆ ತುಂಬುತ್ತದೆ!
ಇನ್ನೇಕೆ ತಡ? ಇಂದು ಸಂಜೆಯೇ ಇಡ್ಲಿ ಅಥವಾ ಬಿಸಿ ಅನ್ನದ ಜೊತೆ ಈ 'ಉಡುಪಿ ಸ್ಪೆಷಲ್' ಸಾಂಬಾರ್ ಸವಿಯಿರಿ!
#secret #making #Udupi #hotel #style #masala #powder #sambar #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಗದ್ದಾಫಿ ಕಾಲದ ಲಿಬಿಯಾ ಸ್ವರ್ಗವಾಗಿತ್ತೇ?
ಸಾಮಾಜಿಕ ಜಾಲತಾಣದ ಸುದ್ದಿಯ ಅಸಲಿಯತ್ತೇನು?
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಲಿಬಿಯಾದ ಮಾಜಿ ನಾಯಕ ಮುಅಮ್ಮರ್ ಗದ್ದಾಫಿ ಆಡಳಿತದ ಬಗ್ಗೆ ಒಂದು ಸುದೀರ್ಘ ಪೋಸ್ಟ್ ಹರಿದಾಡುತ್ತಿದೆ. "ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಒಬ್ಬ ಜನಪ್ರಿಯ ನಾಯಕನನ್ನು ಕೊಂದವು, ಗದ್ದಾಫಿ ಕಾಲದಲ್ಲಿ ಲಿಬಿಯಾ ಸ್ವರ್ಗವಾಗಿತ್ತು" ಎಂಬರ್ಥದ ಈ ಪೋಸ್ಟ್ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ 'ಮಾಲ್ಗುಡಿ ಎಕ್ಸ್ಪ್ರೆಸ್' ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ.
ಪೋಸ್ಟ್ನಲ್ಲಿ ಏನಿದೆ?: ವೈರಲ್ ಆಗಿರುವ ಸುದ್ದಿಯ ಪ್ರಕಾರ, ಗದ್ದಾಫಿ ಆಡಳಿತದಲ್ಲಿ:
ವಿದ್ಯುತ್ ಬಿಲ್ ಇರಲಿಲ್ಲ, ಶಿಕ್ಷಣ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿತ್ತು.
ಬ್ಯಾಂಕ್ ಸಾಲಗಳಿಗೆ 0% ಬಡ್ಡಿ ಇತ್ತು.
ಹೊಸದಾಗಿ ಮದುವೆಯಾದವರಿಗೆ ಸುಮಾರು 60,000 ದಿನಾರ್ ($50,000) ಉಡುಗೊರೆ ನೀಡಲಾಗುತ್ತಿತ್ತು.
ಪೆಟ್ರೋಲ್ ಬೆಲೆ ಕೇವಲ $0.14 ಇತ್ತು.
ಲಿಬಿಯಾ ದೇಶಕ್ಕೆ ಯಾವುದೇ ವಿದೇಶಿ ಸಾಲವಿರಲಿಲ್ಲ.
ಮಾಲ್ಗುಡಿ ಫ್ಯಾಕ್ಟ್ ಚೆಕ್: ಸತ್ಯಾಂಶಗಳು ಇಲ್ಲಿವೆ
ನಮ್ಮ ತಂಡವು ಈ ಕುರಿತು ಅಂತರರಾಷ್ಟ್ರೀಯ ವರದಿಗಳು ಮತ್ತು ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿದಾಗ ಕಂಡುಬಂದ ಅಂಶಗಳು ಹೀಗಿವೆ:
1. ಶಿಕ್ಷಣ ಮತ್ತು ಆರೋಗ್ಯ (ಸತ್ಯ): ಗದ್ದಾಫಿ ಕಾಲದಲ್ಲಿ ಲಿಬಿಯಾದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಉಚಿತವಾಗಿದ್ದವು ಎಂಬುದು ನಿಜ. 1969ರಲ್ಲಿ ಅವರು ಅಧಿಕಾರಕ್ಕೆ ಬಂದಾಗ ಸುಮಾರು 25% ರಷ್ಟಿದ್ದ ಸಾಕ್ಷರತೆ ಪ್ರಮಾಣವು 2011ರ ವೇಳೆಗೆ 80% ಕ್ಕಿಂತ ಹೆಚ್ಚಾಗಿತ್ತು. ಇದು ಅವರ ಆಡಳಿತದ ದೊಡ್ಡ ಸಾಧನೆಯೆಂದೇ ಪರಿಗಣಿಸಲ್ಪಟ್ಟಿದೆ.
2. ಬಡ್ಡಿರಹಿತ ಸಾಲ ಮತ್ತು ಉಚಿತ ವಿದ್ಯುತ್ (ಅರ್ಧ ಸತ್ಯ): ಲಿಬಿಯಾದ ಬ್ಯಾಂಕುಗಳು ರಾಷ್ಟ್ರೀಕೃತವಾಗಿದ್ದವು ಮತ್ತು ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಇತ್ತು. ಹಾಗೆಯೇ, ತೈಲ ಸಮೃದ್ಧ ರಾಷ್ಟ್ರವಾಗಿದ್ದರಿಂದ ವಿದ್ಯುತ್ ಮತ್ತು ಇಂಧನದ ಬೆಲೆಗಳು ಅತಿ ಕಡಿಮೆ ಇದ್ದವು. ಆದರೆ ಇವೆಲ್ಲವೂ ಕೇವಲ ಗದ್ದಾಫಿ ಬೆಂಬಲಿತ ನಾಗರಿಕರಿಗೆ ಮಾತ್ರ ಸುಲಭವಾಗಿ ದಕ್ಕುತ್ತಿದ್ದವು ಎಂಬ ಆರೋಪಗಳಿವೆ.
3. ಉಚಿತ ಮನೆ ಮತ್ತು ಮದುವೆಯ ಉಡುಗೊರೆ (ಉತ್ಪ್ರೇಕ್ಷಿತ): ಹೊಸದಾಗಿ ಮದುವೆಯಾದವರಿಗೆ ಸರ್ಕಾರ ಸಹಾಯಧನ ನೀಡುತ್ತಿತ್ತು ಎಂಬುದು ನಿಜವಾದರೂ, ಪೋಸ್ಟ್ನಲ್ಲಿ ಹೇಳಲಾದ 60,000 ದಿನಾರ್ ಎಂಬ ಮೊತ್ತವು ಎಲ್ಲರಿಗೂ ಸಿಗುತ್ತಿರಲಿಲ್ಲ. ಇದು ಯೋಜನೆಯ ಆರಂಭಿಕ ಹಂತದಲ್ಲಿ ಕೆಲವರಿಗೆ ಸೀಮಿತವಾಗಿತ್ತು.
4. ದೇಶದ ಸಾಲ ಮತ್ತು ಮೀಸಲು ನಿಧಿ (ಸತ್ಯ): ಲಿಬಿಯಾ ಮೇಲೆ ಯಾವುದೇ ವಿದೇಶಿ ಸಾಲವಿರಲಿಲ್ಲ ಮತ್ತು ದೇಶವು ಸುಮಾರು $150 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಹೊಂದಿತ್ತು ಎಂಬುದು ಐತಿಹಾಸಿಕವಾಗಿ ನಿಜ. ಗದ್ದಾಫಿ ಹತ್ಯೆಯ ನಂತರ ಈ ಹಣವನ್ನು ಪಾಶ್ಚಿಮಾತ್ಯ ದೇಶಗಳು ಫ್ರೀಜ್ ಮಾಡಿದ್ದು ಕೂಡ ಸತ್ಯ.
5. ಗ್ರೇಟ್ ಮ್ಯಾನ್-ಮೇಡ್ ರಿವರ್ ಪ್ರಾಜೆಕ್ಟ್ (ಸತ್ಯ): ವಿಶ್ವದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಇದನ್ನು ಗದ್ದಾಫಿ ಜಾರಿಗೆ ತಂದಿದ್ದರು. ಮರುಭೂಮಿಯ ನಡುವೆ ಕುಡಿಯುವ ನೀರು ಮತ್ತು ಕೃಷಿಗೆ ನೀರು ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಗದ್ದಾಫಿ ನಂತರದ ಲಿಬಿಯಾ: ಇಂದಿನ ಕಹಿ ವಾಸ್ತವ
ಪೋಸ್ಟ್ನಲ್ಲಿ ಹೇಳಿರುವಂತೆ ಗದ್ದಾಫಿ ನಂತರ ಲಿಬಿಯಾ ಅರಾಜಕತೆಗೆ ತುತ್ತಾಗಿದೆ ಎಂಬುದು ಕಟು ಸತ್ಯ.
ಅಸ್ಥಿರತೆ: ಇಂದು ಲಿಬಿಯಾದಲ್ಲಿ ಎರಡು ಪ್ರತ್ಯೇಕ ಸರ್ಕಾರಗಳಿವೆ ಮತ್ತು ನಿರಂತರ ಅಂತರ್ಯುದ್ಧ ನಡೆಯುತ್ತಿದೆ.
ಬಡತನ: ಒಂದು ಕಾಲದಲ್ಲಿ ಅರಬ್ ರಾಷ್ಟ್ರಗಳಲ್ಲೇ ಬಲಿಷ್ಠವಾಗಿದ್ದ ದಿನಾರ್ ಮೌಲ್ಯ ಕುಸಿದಿದೆ. ಜನರು ಮೂಲಭೂತ ಸೌಕರ್ಯಗಳಿಗೂ ಪರದಾಡುತ್ತಿದ್ದಾರೆ.
ವಿದೇಶಿ ಹಸ್ತಕ್ಷೇಪ: ಲಿಬಿಯಾದ ತೈಲ ಸಂಪತ್ತನ್ನು ನಿಯಂತ್ರಿಸಲು ರಷ್ಯಾ, ಟರ್ಕಿ ಮತ್ತು ಅಮೆರಿಕದಂತಹ ರಾಷ್ಟ್ರಗಳು ಇಂದಿಗೂ ಅಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ.
ತೀರ್ಪು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ನಲ್ಲಿರುವ ಹೆಚ್ಚಿನ ಆರ್ಥಿಕ ಅಂಕಿಅಂಶಗಳು ಸತ್ಯಕ್ಕೆ ಹತ್ತಿರವಾಗಿವೆ. ಆದರೆ, ಗದ್ದಾಫಿ ಒಬ್ಬ ಕ್ರೂರ ಸರ್ವಾಧಿಕಾರಿಯಾಗಿದ್ದರು, ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದರು ಮತ್ತು ತಮ್ಮ ವಿರೋಧಿಗಳನ್ನು ಹತ್ಯೆ ಮಾಡುತ್ತಿದ್ದರು ಎಂಬ ಮತ್ತೊಂದು ಮುಖವನ್ನು ಈ ಪೋಸ್ಟ್ ಮರೆಮಾಚಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗದ್ದಾಫಿ ಕಾಲದ ಲಿಬಿಯಾ ಆರ್ಥಿಕವಾಗಿ ಸುಭಿಕ್ಷವಾಗಿತ್ತು, ಆದರೆ ರಾಜಕೀಯವಾಗಿ ಮುಕ್ತವಾಗಿರಲಿಲ್ಲ. ಅವರ ಪತನದ ನಂತರ ಲಿಬಿಯಾ ನರಕಸದೃಶವಾಗಿದೆ ಎಂಬುದು ಮಾತ್ರ ಅಕ್ಷರಶಃ ನಿಜ.
#Libya #under #Gaddafi #paradise #malgudiexpress #malgudinews #news #TopNews













