#📜ಪ್ರಚಲಿತ ವಿದ್ಯಮಾನ📜
‘ಹಕ್ಕಿಹಾಡು’ ನೂತನ ರಂಗಪ್ರಯೋಗ, ರಂಗಾಸಕ್ತ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶಸ್ವಿ
ರಂಗಲೋಕದ ವಿಸ್ಮಯ
ತಂತ್ರಜ್ಞಾನ ಮತ್ತು ಮನುಷ್ಯನ ಕಲಾತ್ಮಕ ಸೃಷ್ಟಿಯ ಸಂಯೋಗದೊಂದಿಗೆ ಅರಿವಿನಮನೆಯ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ರಂಗ ಶಿಬಿರದ ಮೊದಲ ರಂಗಪ್ರಯೋಗ ಎಲ್ಲಾ ಮಕ್ಕಳಿಗೂ ಒಂದು ಸವಾಲಿನದ್ದೇ ಆಗಿತ್ತು.
‘ಸಂಗಡಿಗರ’ ತಂಡ ಪ್ರಸ್ತುತ ಪಡಿಸಿದ ರಂಗಗೀತೆಗಳು ಸಾಹಿತ್ಯಾಸಕ್ತರನ್ನು ಒಂದು ರೀತಿ ಸಂಗೀತಲೋಕಕ್ಕೇ ಧ್ಯಾನಸ್ಥರನ್ನಾಗಿಸಿದರೆ ಕೆ.ರಾಮಯ್ಯನವರು ರಚಿಸಿ, ಅಶೋಕ್ ಕುಮಾರ್ ನಿರ್ದೇಶಿಸಿದ ‘ಹಕ್ಕಿಹಾಡು’ ನೂತನ ರಂಗಪ್ರಯೋಗ, ರಂಗಾಸಕ್ತ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ನವಿಲಿನ ಚೀತ್ಕಾರದೊಂದಿಗೆ ಪ್ರಾರಂಭಗೊಂಡ ನಾಟಕ, ಮಕ್ಕಳ ಹೊಸ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿತು. ಕಥೆಯ ಆರಂಭದಲ್ಲಿ ಮಕ್ಕಳ ಗಣಪನ ನೃತ್ಯ, ಹಕ್ಕಿಹಾಡು ಕಥನದ ಫಲಕ, ಅರಿವಿನ ಮನೆಯ ಸಹಕಾರ, ಪಪೆಟ್ ನ ಮೂಲಕ ಪ್ರದರ್ಶನಗೊಂಡು ನೋಡುಗರನ್ನು ಹುಬ್ಬೇರಿಸಿತು. ಕಥನಕ್ಕೆ ಪೂರಕ ತಂತ್ರಜ್ಞಾನ, ಕಥೆ, ಅಭಿನಯ, ಪಪೆಟ್ ಮೂಲಕ ಎರಡನ್ನೂ ಸಮತೂಕದೊಂದಿಗೆ ಒಯ್ದದ್ದು ನಾಟಕದ ಹೈಲೆಟ್. ಕೇವಲ ಇಪ್ಪತ್ತು ದಿನಗಳ ಕಾಲವಧಿಯಲ್ಲಿ ನಟನಾ ಕ್ಷೇತ್ರದ ಯಾವೊಂದು ಅನುಭವವಿಲ್ಲದ ಮಕ್ಕಳು ನಿಜಾರ್ಥದಲ್ಲಿ ಪ್ರೇಕ್ಷಕರ ಹೃದಯಗೆದ್ದಿದ್ದಾರೆ. ನಾಟಕದುದ್ದಕ್ಕೂ ಡಾ.ಶ್ರೀಪಾದ ಭಟ್ ರ ಸಂಗೀತ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡವು.
ಯಾವುದೇ ಮುಂದಾಲೋಚನೆಯಿಲ್ಲದೆ ಮನೆಯ ಮುಂದಿನ ಮರವನ್ನು ನಿರ್ದಾಕ್ಷಿಣ್ಯವಾಗಿ ಕಡಿಯಿವ ಮುನ್ನ ಈ ನಾಟಕ ನೋಡಬೇಕು. ಒಂದು ಮರ ಎಷ್ಟು ಪಕ್ಷಿಗಳಿಗೆ ಆಶ್ರಯಕೊಡಬಲ್ಲದೆಂಬುದನ್ನು ಆ ಮರದಲ್ಲಿ ಆಶ್ರಯಪಡೆಯುವ ಒಂದೊಂದು ಹಕ್ಕಿಯ ಪರಿಚಯದ ಮೂಲಕ ತಿಳಿಸಿ, ಅದೇ ಮರದಲ್ಲಿ ಪುಟ್ಟ ಸಂಸಾರ ಹೂಡಿ ಭವಿಷ್ಯತ್ತಿನ ಭಾವಿ ಪುಟ್ಟ ಹಕ್ಕಿಗಳು ಬರುವ ಕನಸು ಕಂಡು ಮೊಟ್ಟಯಿಡುವ ಹಕ್ಕಿಗೆ ಲೋಕ ಕಂಟಕ ತಪ್ಪಿದ್ದಲ್ಲ. ಆ ಕಂಟಕ ಬೆಕ್ಕಿನ ರೂಪದಲ್ಲಿ ಅವತರಿಸುತ್ತದೆ. ಬೆಕ್ಕು ಪಕ್ಷಿಗೆ ಮೊಟ್ಟೆ ತಿನ್ನಲು ಬಲವಂತದ ಬೇಡಿಕೆ ಇಡುತ್ತದೆ. ಪಕ್ಷಿ ಮುಂದೆ ಮರಿಗಳಾದಾಗ ನೀಡುವ ಭರವಸೆ ನೀಡುತ್ತದೆ, ಪುಣ್ಯಕೋಟಿ ಹಸುವಿನಂತೆ. ಕಾಲ ಕಳೆದು ಮೊಟ್ಟೆಯೊಡೆದು ಮರಿಬಂದದ್ದುನ್ನು ಪಪೆಟ್ ನ ಮೂಲಕ ಕಥಾನಕ ಸಾಗುತ್ತದೆ. ಮತ್ತೆ ಬೆಕ್ಕು ಕೊಟ್ಟಮಾತು ಉಳಿಸಲು ನೆನಪಿಸುತ್ತದೆ. ಕಣ್ಣೆದುರೇ ತನ್ನ ಹೆತ್ತಕಂದಮ್ಮಗಳ ಬಲಿಕೊಡದ ಹಕ್ಕಿ, ಮತ್ತೆ ದೊಡ್ಡದಾದಾಗ ತಿನ್ನುವುದರಿಂದ ಆಗುವ ಉಪಯೋಗದ ಬಗೆಗೆ ತಿಳಿಸಿ ಆಗಲೂ ಮರಿಗಳನ್ನು ಬೆಕ್ಕಿನಿಂದ ರಕ್ಷಿಸುತ್ತದೆ. ಹೀಗೆ ಸಾಗುವ ಕಥಾನಕ ಮುಂದೆ ಹಕ್ಕಿ ಮರಿಗಳು ಬೆಕ್ಕಿನ ಪಾಲಾದವೇ? ಅಥವಾ ಹಕ್ಕಿ ಉಪಾಯದಿಂದ ತನ್ನ ಬಳಗವನ್ನು ಸಂರಕ್ಷಿಸತೇ? ಇದೇ ಕಥೆಯ ತಿರುಳು.
ಪಪೆಟ್ ತಂತ್ರಜ್ಞಾನ ಮತ್ತು ರಂಗಾಭಿನಯಗಳೆರಡರ ಮೂಲಕ ಕಥಾನಕ ಹೆಣೆದಿರುವ ರೀತಿ ಮಾತ್ರ ವಿಸ್ಮಯ ಮೂಡಿಸುತ್ತದೆ. ಏಕಕಾಲಕ್ಕೆ ಅಭಿನಯಿಸುತ್ತಾ ರಂಗದ ಮೇಲೆ ನಟನೆಮಾಡುವ ಮಕ್ಕಳೆ ಮತ್ತೋಮ್ಮೆ ಪಪೆಟ್ ತಂತ್ರಜ್ಞಾನವನ್ನು ನಿರ್ವಹಿಸುವ ತಮ್ಮಗಳ ಚಾಣಾಕ್ಷ ಕಲೆಗೆ ಪ್ರೇಕ್ಷಕ ತಲೆದೂಗದೇ ಇರಲಾರ. ಕೇವಲ ಇಪ್ಪತ್ತು ದಿನಗಳ ರಂಗ ತರಬೇತಿಯಿಂದಾಗಿ ಅರಿವಿನ ಮನೆಗೆ ಹೊಸ ಕಳೆ ತಂದಿದೆ. ಸದಾ ಗಿಜುಗುಡುವ ವಾಣಿಜ್ಯೋದ್ಯಮದಲ್ಲೇ ಮಿಂದಿರುವ ಕಡೂರಿಗೆ ಬೇಸಗೆ ರಂಗಶಿಬಿರದ ಮಕ್ಕಳ ಈ ಪುಟ್ಟ ರಂಗಪ್ರಯೋಗವೊಂದು ಕಡೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಅಚ್ಚಳಿಯದ ಪುಟ್ಟ ದಾಖಲೆಯಾಗಿ ಉಳಿದಿದೆ.
ಇಂತಹ ಪರಿಕಲ್ಪನೆಯನ್ನು ಹೊತ್ತು ತಂದ ಗೆಳೆಯ, ಆವರಣ ಸಂಸ್ಥೆಯ ಸಂಸ್ಥಾಪಕ ಅಜಯ್ ಭಂಡಾರಿಯವರಿಗೂ, ಇಪ್ಪತ್ತು ದಿನಗಳ ಕಾಲ ಬಹು ತಾಳ್ಮೆಯಿಂದ ನಮ್ಮ ಮಕ್ಕಳನ್ನು ಸಹಿಸಿಕೊಂಡ ನಿರ್ದೇಶಕ ಅಶೋಕ್ ಕುಮಾರ್ ರವರಿಗೂ, ಅರಿವಿನ ಮನೆಯ ಸಮಸ್ತರಿಗೂ, ನಂಬಿ ರಂಗಶಿಬಿರಕ್ಕೆ ಬೆಂಬಲವಿತ್ತ ನಮ್ಮ ಪೋಷಕರಿಗೂ ಪ್ರೀತಿಪೂರ್ವಕ ಅಭಿನಂದನೆಗಳು.
- ಡಾ.ಮಂಜುನಾಥ್. ಬಿ.ಹೊಳೆಹೊನ್ನೂರು, ಸಹಾಯಕ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಂಪುರ
#Hakkihadu #new #stage #experiment #succeeded #captivating #hearts #theatre #lovers #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬಿಜೆಪಿ ಅಂಧ ಭಕ್ತರಿಗೆ ಮಾತ್ರ ಬೆಲೆ ಹೆಚ್ಚಳ ಮಾಡಿ: ಹೆಚ್.ಎಸ್.ಮಂಜುನಾಥ್ ಗೌಡ
ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕೇಂದ್ರ ಸಚಿವೆ ಶೋಭ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೌನದ ವಿರುದ್ಧ ಆಕ್ರೋಶ
ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನ ಖಂಡಿಸಿ ಮತ್ತು ಸಣ್ಣ ವ್ಯಾಪಾರಿಗಳು, ಹೋಟಲ್ ಉದ್ಯಮಿಗಳು ಮತ್ತು ಸಾರ್ವಜನಿಕರ ಪರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಖಾಲಿ ಸಿಲಿಂಡರ್ ಪ್ರದರ್ಶನದ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಸ್.ಮಂಜುನಾಥ್ ಗೌಡ, ಚುನಾವಣೆಗೋಸ್ಕರ ದರ ಏರಿಕೆ ಮಾಡದೆ, ಇದೀಗ ವಾಣಿಜ್ಯ ಗ್ಯಾಸ್ ದರ 990 ರೂಪಾಯಿ ಹೆಚ್ಚಳ ಮಾಡಿ, ಬೀದಿಬದಿಯ ಸಣ್ಣ ವ್ಯಾಪಾರಿಗಳು ಮತ್ತು ಹೋಟೆಲ್ ನವರಿಗೆ ಬಹಳ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ ಎಂದರು.
ಸಿಲಿಂಡರ್ ಬೆಲೆ ಏರಿಕೆ ವಿಷಯದ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನವಹಿಸಿದ್ದಾರೆ. ಕೇಂದ್ರ ಸರ್ಕಾರ ಬಿಜೆಪಿ ಅಂಧ ಭಕ್ತರಿಗೆ ಗ್ಯಾಸ್ ಬೆಲೆ ಹೆಚ್ಚಳ ಮಾಡಿ ಕೊಡಿ ಅವರು ಸಹಿಸಿಕೊಳ್ಳುತ್ತಾರೆ, ಸಾಮಾನ್ಯ ಜನರಿಗೆ ದರ ಕಡಿಮೆ ಮಾಡಿ ಎಂದು ಆಗ್ರಹಿಸಿದರು.
ಇಷ್ಟು ದಿನ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿಲ್ಲ, ಪಂಚ ರಾಜ್ಯ ಚುನಾವಣೆ ನಂತರ ಗದಾಪ್ರಹಾರ ಮಾಡಿದ್ದಾರೆ. ವಾಣಿಜ್ಯ ಗ್ಯಾಸ್ ದರ ಏರಿಕೆಯಿಂದ ಆಹಾರ, ತಿನಿಸುಗಳ ಬೆಲೆ ಹೆಚ್ಚಳವಾಗಲಿದೆ. ಇದರಿಂದ ವ್ಯಾಪಾರ ಕುಸಿತವಾಗಲಿದೆ. ಸಣ್ಣ ಉದ್ಯಮಿದಾರರು, ಹೋಟೆಲ್ ಗಳು ನಂಬಿರುವ ಕೋಟ್ಯಂತರ ಜನರ ಜೀವನ ಬೀದಿ ಪಾಲಾಗಲಿದೆ. ಆರ್ಥಿಕ ಕುಸಿತವಾಗಿ ದೇಶ ಕಂಗಾಲು ಆಗುವ ಪರಿಸ್ಥಿತಿ ಬರುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ 2 ರೂಪಾಯಿ ಹೆಚ್ಚಾದರೆ ಬೀದಿಗೆ ಬಂದು ಗಲಾಟೆ ಮಾಡುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಇಂದು 990 ರೂಪಾಯಿ ಗ್ಯಾಸ್ ದರ ಏರಿಕೆ ಮಾಡಿದೆ. ಈಗ ಯಾಕೆ ಮಾತನಾಡುತ್ತಿಲ್ಲ? ಶೋಭ ಮೇಡಮ್. ಸಂಸದ ತೇಜಸ್ವಿಸೂರ್ಯ ಎಲ್ಲಿದ್ದೀಯಪ್ಪ? ಎಂದು ಕೇಳಿದ ಅವರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಸಮಿತಿ ಹೋರಾಟ ಮತ್ತು ಪ್ರತಿಭಟನೆ ಮಾಡಲಿದೆ ಎಂದರು.
#BJP #increas #prices #only #blinddevotees #HSManjunathGowda #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮೋದಿ ಸರ್ಕಾರ ಬೆಲೆಯೇರಿಕೆ ಮಾಡತೊಡಗಿದೆ: ಸಿದ್ದರಾಮಯ್ಯ
ಬೆಂಗಳೂರು: ನಾವು ಮೊದಲೇ ಎಚ್ಚರಿಕೆ ಕೊಟ್ಟಂತೆ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ನರೇಂದ್ರ ಮೋದಿ ಸರ್ಕಾರ ಬೆಲೆಯೇರಿಕೆ ಮಾಡತೊಡಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ ಏಕಾಏಕಿ ₹993 ಹೆಚ್ಚಳ ಮಾಡಿದೆ. ಒಟ್ಟಾರೆ 19 ಕೆಜಿಯ 1 ಸಿಲಿಂಡರ್ಗೆ ನಿನ್ನೆಯವರೆಗೆ ₹2,078.50ರಷ್ಟಿದ್ದ ದರ ಇದೀಗ ₹3,071.5ಗೆ ತಲುಪಿದೆ. ಚುನಾವಣೆ ಅವಧಿಯಲ್ಲಿ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ಏರಿಕೆಯನ್ನು ತಡೆದಿತ್ತು ಎಂಬುದಕ್ಕೆ ದಿಢೀರನೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸಾಕ್ಷಿಯಾಗಿದೆ ಎಂದಿದ್ದಾರೆ.
ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದೆ. ಇದೊಂದು ರೀತಿಯಲ್ಲಿ ಅಧಿಕೃತ ಲೂಟಿಯೇ ಹೊರತು ಆಡಳಿತದ ಕ್ರಮವಲ್ಲ ಎಂದಿದ್ದಾರೆ.
ಆಗಾಗ ಜಾಗತಿಕ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ಭಾರತದ ನಾಗರಿಕರನ್ನು ಕಾಪಾಡುವುದು ಪ್ರಧಾನಿಯಾಗಿ ಮೋದಿಯವರ ಕರ್ತವ್ಯವಾಗಿದೆ. ಆದರೆ ಜನಸಾಮಾನ್ಯರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಬೆಲೆ ಏರಿಕೆಯ ಹೊರೆ ಹೊರಿಸುವುದು ಅರ್ಥಹೀನವಾಗಿದೆ. ನಮ್ಮ ದೇಶದ ಆರ್ಥಿಕತೆಗೆ ವಿದೇಶಾಂಗ ನೀತಿಯು ಶ್ರೀರಕ್ಷೆಯಂತಿರಬೇಕು. ಆದರೆ ಮೋದಿ ಸರ್ಕಾರದ ಟೊಳ್ಳು ವಿದೇಶಾಂಗ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.
ವಾಣಿಜ್ಯ ಗ್ಯಾಸ್ ದರ ಏರಿಕೆಯಿಂದ ಕೇವಲ ವ್ಯಾಪಾರಸ್ಥರು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಿಲ್ಲ, ದೇಶದ ಪ್ರತಿಯೊಂದು ಮನೆಯ ಮೇಲೂ ದರ ಏರಿಕೆಯ ಪರಿಣಾಮ ಬೀರುತ್ತದೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಸಣ್ಣಪುಟ್ಟ ಕ್ಯಾಂಟೀನ್ಗಳು ಹಾಗೂ ಕೆಟರಿಂಗ್ ಸೇವೆಗಳಿಗೆ ತಮ್ಮ ಆಹಾರ ಪದಾರ್ಥಗಳ ಮೇಲೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಗ್ರಾಹಕರು ದೈನಂದಿನ ಊಟ-ಉಪಹಾರಗಳಿಗೆ ಹೆಚ್ಚು ಹಣಕೊಡುವ ಪರಿಸ್ಥಿತಿ ಬರುತ್ತದೆ. ನಗರದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮಾಲೀಕರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗುತ್ತದೆ. ಒಂದು ಲೋಟ ಟೀ ಯಿಂದ ಒಂದು ಸರಳ ಊಟದವರೆಗೆ, ಎಲ್ಲವೂ ದುಬಾರಿಯಾಗುತ್ತದೆ ಎಂದಿದ್ದಾರೆ.
ಕಾರ್ಮಿಕರ ದಿನದ ಕೊಡುಗೆ ಎಂಬಂತೆ ಮೋದಿಯವರು ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಸುವ ಮೂಲಕ ಶ್ರಮಿಕ ವರ್ಗಕ್ಕೆ ಬರೆ ಎಳೆದಿದ್ದಾರೆ. ಒಂದೆಡೆ ದರಗಳು ದುಬಾರಿಯಾದರೆ, ಮತ್ತೊಂದೆಡೆ ಆದಾಯ ಕ್ಷೀಣಿಸುತ್ತಿದೆ. ದೈನಂದಿನ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಕಾರ್ಮಿಕರು ಕೇಂದ್ರ ಸರ್ಕಾರದ ಬಳಿ ಘನತೆಯ ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸುವಂತೆ ಕೇಳಿದರೆ ಬೆಲೆಯೇರಿಕೆ ಮತ್ತು ಸಮರ್ಥನೆಯ ಉತ್ತರವನ್ನು ಕೊಡುತ್ತಿದೆ ಎಂದಿದ್ದಾರೆ.
ಇದು ಕೇವಲ ಆರಂಭವಷ್ಟೇ, ಇಂತಹ ಮತ್ತಷ್ಟು ಬೆಲೆ ಏರಿಕೆಯ ಹೊಡೆತಗಳು ಅಪ್ಪಳಿಸಲಿವೆ, ಅದರ ಹೊರೆಯನ್ನು ನಾಗರಿಕರೇ ಹೊತ್ತುಕೊಳ್ಳುವಂತಾಗಲಿದೆ. ಇದು ಮೋದಿ ಮಾದರಿಯ ಆಡಳಿತವಾಗಿದೆ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವುದು, ಬಳಿಕ ಅವರ ಮೇಲೆ ಹೊರೆ ಹೊರಿಸುವುದು ಮೋದಿಯವರ ಸೂತ್ರವಾಗಿದೆ ಎಂದಿದ್ದಾರೆ.
#Modi #govt #started #increasing #prices #elections #over #Siddaramaiah #GasPriceHike #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬಿಜೆಪಿ ಮುುಕ್ತ ದಕ್ಷಿಣ ಭಾರತ ಆಗಲಿದೆ: ಬಿ.ಕೆ. ಹರಿಪ್ರಸಾದ್
ಖರ್ಗೆ ಹೇಳಿಕೆಯೇ ಅಂತಿಮ, ನಾಯಕತ್ವದ ಬಗ್ಗೆ ಇನ್ಮುಂದೆ ಚರ್ಚೆ ಬೇಡ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಭೇಟಿ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಸಿದ್ದರಾಮಯ್ಯ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್, ಹಲವು ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಖಡಕ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದು 'ಕುತೂಹಲ'ದ ಭೇಟಿಯಲ್ಲ, 'ಸೌಜನ್ಯ'ದ ಭೇಟಿ: ಸಿಎಂ ಭೇಟಿಯ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದ ಹರಿಪ್ರಸಾದ್, ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕಳೆದ ಮೂರು ತಿಂಗಳುಗಳಿಂದ ನಾನು ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಸಭಾ ಚುನಾವಣೆಗಳಲ್ಲಿ ಬ್ಯುಸಿಯಾಗಿದ್ದೆ. ಹಾಗಾಗಿ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೊಂದು ಕೇವಲ ಸೌಜನ್ಯದ ಭೇಟಿಯಷ್ಟೇ ಎಂದರು.
ನಾಯಕತ್ವದ ಗೊಂದಲಕ್ಕೆ ಪೂರ್ಣವಿರಾಮ?: ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಬೆಂಬಲಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪರಮೋಚ್ಛ ನಾಯಕರು. ಅವರು ಒಮ್ಮೆ ಹೇಳಿಕೆ ನೀಡಿದ ಮೇಲೆ ಅದು ಅಂತಿಮ. ಅದನ್ನು ಯಾರೂ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಪಕ್ಷದ ಕಾರ್ಯಕರ್ತರು ಇನ್ಮುಂದೆ ನಾಯಕತ್ವದ ವಿಷಯದ ಬಗ್ಗೆ ಅನಗತ್ಯ ಹೇಳಿಕೆ ನೀಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.
ಸಚಿವ ಸಂಪುಟ ಪುನಾರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಸಿಲಿಂಡರ್ ಬೆಲೆ ಏರಿಕೆ: ರಾಹುಲ್ ಗಾಂಧಿ ಭವಿಷ್ಯ ನಿಜವಾಗಿದೆ: ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ರಾಹುಲ್ ಎಚ್ಚರಿಕೆ ನಿಜವಾಗಿದೆ. ಚುನಾವಣೆ ಮುಗಿದ ಮೇಲೆ ತೈಲ ಮತ್ತು ಅನಿಲ ಬೆಲೆ ಏರಿಕೆಯಾಗುತ್ತದೆ ಎಂದು ರಾಹುಲ್ ಗಾಂಧಿ ಮೊದಲೇ ಹೇಳಿದ್ದರು ಎಂದರು.
ಅಂದು ರಾಹುಲ್ ಮಾತುಗಳನ್ನು ಬಿಜೆಪಿ ಟ್ರೋಲ್ ಆರ್ಮಿ ಹಾಸ್ಯ ಮಾಡಿತ್ತು. ಆದರೆ ಇಂದು ಅವರ ಮಾತು ಅಕ್ಷರಶಃ ನಿಜವಾಗಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದರು.
ದಕ್ಷಿಣ ಭಾರತ ಬಿಜೆಪಿ ಮುಕ್ತ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜಾಗವಿಲ್ಲ. ಶೀಘ್ರದಲ್ಲೇ ಇದು 'ಬಿಜೆಪಿ ಮುುಕ್ತ ದಕ್ಷಿಣ ಭಾರತ' ಆಗಲಿದೆ. ಇನ್ನು ಎರಡು ವರ್ಷಗಳಲ್ಲಿ ಕರ್ನಾಟಕದಿಂದಲೂ ಅವರನ್ನು ಕಿತ್ತೊಗೆಯಲಾಗುವುದು. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಕಠಿಣ ಸ್ಪರ್ಧೆಯಿದ್ದು, ಫಲಿತಾಂಶಕ್ಕಾಗಿ ಕಾಯೋಣ ಎಂದರು.
#BJP #become #SouthIndiaMukth #BKHariprasad #malgudiexpress #malgudinews #news #TopNews
#🏯🙏 ಬುದ್ಧ ಪೂರ್ಣಿಮೆಯ ಶುಭಾಶಯಗಳು 🙏🏯
ಬುದ್ಧನಿಂದ ಆರಂಭವಾದ ಶ್ರಮಿಕರ ಹೋರಾಟದ ಬದುಕು ಇನ್ನೂ ಕೊನೆಗೊಂಡಿಲ್ಲ: ಡಾ. ಸತೀಶ ನಾಯ್ಕ
ಬೆಳಗಾವಿ: ಸಾಹಿತ್ಯವು ಎಡವೂ ಅಲ್ಲ, ಬಲವೂ ಅಲ್ಲ, ಅದು ಬದುಕಿನ ಚಿಂತನೆ. ವೈಚಾರಿಕ ಆದ್ಯ ಪರಂಪರೆಯ ಮೂಲಕ ಪಡೆದ ಶಿಕ್ಷಣ ಅನ್ನವನ್ನು ಒದಗಿಸಬೇಕು, ಬರವಣಿಗೆ ಬದುಕನ್ನು ಕಟ್ಟಿಕೊಡಬೇಕು ಎಂದು ಡಾ. ಸತೀಶ ನಾಯ್ಕ ಅಭಿಪ್ರಾಯಪಟ್ಟರು.
ಮಾನವ ಬಂದುತ್ವ ವೇದಿಕೆ ಬೆಳಗಾವಿಯ ಕೇಂದ್ರ ಕಚೇರಿಯಲ್ಲಿ, ಯುವ ಬರಹಗಾರರ ವೇದಿಕೆ ಬೌದ್ಧ ಪೌರ್ಣಿಮೆ ಮತ್ತು ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರಮಿಕರ ಒಡನಾಡಿಗಳು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬುದ್ಧನಿಂದ ಆರಂಭವಾದ ಶ್ರಮಿಕರ ಹೋರಾಟದ ಬದುಕು ಇನ್ನೂ ಕೊನೆಗೊಂಡಿಲ್ಲ. ಬಸವಣ್ಣನವರು ಕಟ್ಟಿದ ಸಮ ಸಮಾಜದ ಕನಸು ಕೈಗೂಡಿಲ್ಲ. ಅಂಬೇಡ್ಕರ್ ಸಾಂವಿಧಾನಿಕ ಆಶಯಗಳು ಪೂರ್ಣಗೊಂಡಿಲ್ಲ. ಕಾರ್ಲ್ ಮಾರ್ಕ್ಸ್ ಅವರ ಕಾರ್ಮಿಕರ ಪರವಾದ ಶ್ರಮ ಫಲ ನೀಡಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ್ ಚಂದರಗಿ ಮಾತನಾಡಿ, ಯುವ ಬರಹಗಾರರಿಗೆ ಪ್ರಶ್ನಿಸುವ ಮನೋಭಾವ ಮತ್ತು ಬದ್ಧತೆ ಇರಬೇಕು. ಬರವಣಿಗೆಯ ಶಕ್ತಿ ಅಗಾಧವಾದದ್ದು, ಅದರ ಆಂತರ್ಯವನ್ನು ಅರಿತುಕೊಂಡು ಸಾಹಿತ್ಯ ಕೃಷಿ ಮಾಡಿದರೆ ಪ್ರಶಸ್ತಿ ಮತ್ತು ಪದವಿಗಳಿಗಾಗಿ ಅರ್ಜಿ ಹಾಕಬೇಕಾದ ಅನಿವಾರ್ಯತೆ ಒದಗಿ ಬರಲಾರದು ಎಂದರು.
ಸಾಹಿತಿಯಾದವನು ಸಮಾಜದ ಸಮಸ್ಯೆಗಳೊಂದಿಗೆ ಸ್ಪಂದಿಸಬೇಕು, ಸಮ ಸಮಾಜದ ಕಲ್ಪನೆಗೆ ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳಿಂದ ಪ್ರೇರಿತರಾಗಿ ಯುವಕರು ಶ್ರಮಿಕರ ಧ್ವನಿ ಆಗಬೇಕು ಎಂದರು.
ಕಾರ್ಯಕ್ರಮದ ಆಶಯ ನುಡಿಗಳನಾಡಿದ ಡಾ. ಗೌತಮ ಮಾಳಗೆ, ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳು ಯುವಸಮುದಾಯಕ್ಕೆ ಹೊಸ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡು ವೈಚಾರಿಕ ಬರವಣಿಗೆಗೆ ಆದ್ಯತೆ ನೀಡುವಂತಾಗಲಿ ಎಂದರು.
ಕಾರ್ಯಕ್ರಮದ ಸಂಚಾಲಕ ಪ್ರೊ. ದೇಮಣ್ಣ ಸೊಗಲದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಅ.ಬ. ಇಟಗಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಬಾಲಕೃಷ್ಣ ನಾಯಕ ಹಾಗೂ ಸಂಗಡಿಗರು ಕಾರ್ಮಿಕ ಗೀತೆಯನ್ನು ಹಾಡಿದರು. ಡಾ. ಮಂಜುನಾಥ ಪಾಟೀಲ ವಂದಿಸಿದರು. ಕು. ಸುನಿತಾ ಬ್ಯಾಳಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮ ತಳವಾರ, ಕುಮಾರ ಬ. ತಳವಾರ, ಡಾ. ನೀಲಪ್ಪ ವಾಲಿಕಾರ, ಡಾ. ಸುನೀಲಕುಮಾರ, ಪ್ರಕಾಶ್ ಮಬನೂರ, ಡಾ. ಅಪ್ಪಣ್ಣ ಜಿರನಾಳ, ಡಾ ರುದ್ರಪ್ಪ ಅರಳಿಮಟ್ಟಿ, ಎಂ.ಪಿ. ಬಿರಾದಾರ, ಪ್ರಕಾಶ ಬೊಮ್ಮನ್ನವರ, ಸಾವಕ್ಕ ದೊಡಮನಿ, ಕು. ಅಪೂರ್ವ ಕುರುಬಗಟ್ಟಿ, ಕು. ರಾಧಿಕಾ ಲಮಾಣಿ, ಕು. ಪ್ರತಿಭಾ ಕಲ್ಲಿ, ಕು. ಲಕ್ಷ್ಮಿ ಬನ್ನೂರ, ಕು. ರೂಪಾಲಿ ಅನಿಲಗೋಡ, ಕು. ಜಯಶ್ರೀ ನಾಯ್ಕ್, ಕು. ಹರ್ಷ ಅಂಕಲಗಿ, ಕು. ಸಾವಿತ್ರಿ ಬೇಡರ, ಕು. ಕಾವೇರಿ ಕರೋಶಿ, ಕು. ರಾಧಿಕಾ ಅಜಾಣಿ, ಕು. ಶಕುಂತಲಾ ಪಾಟೀಲ, ಕು. ಲಕ್ಷ್ಮಿ ಕಲಕಾಂಬಕರ, ಕು. ಅಂಜಲಿ ಬೇವಿನಕಟ್ಟಿ, ಕು. ಸ್ಪಂದನ, ಕು. ಸುಪ್ರಿಯಾ ಅಲಕುಂಟೆ, ಕು. ಶ್ರೇಯಾ ಜನಗೌಡ, ಬರಮು ಕುರಲಿ, ಕು. ಯಲ್ಲಪ್ಪ ರೋಣಿ, ಸಿದ್ಧಪ್ಪ ಮರಪೂರ, ಬಸವರಾಜ ಪೂಜೇರಿ, ನಾಗೇಶ ಪಾಟೀಲ, ಮಹೇಶ ಹಾಲಭಾವಿ, ಗಣೇಶ, ಕು. ಉದಯ ಮಾಳೆಗೆನ್ನವರ, ಕು. ರಾಜು ಖನಗಾವಿ, ಕು. ರಂಗನಾಥ ರಂಗಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.
#struggle #workers #began #Buddha #notendedyet #SatishNaik #malgudiexpress #malgudinews #news #TopNews
#💪🏼ಕಾರ್ಮಿಕರ ದಿನ👷🏼♂️
ಮೇ ದಿನದ ಆಶಯ ಬುಡಮೇಲುಗೊಳಿಸಿದ ಜನವಿರೋಧಿ ಕಾರ್ಮಿಕ ಸಂಹಿತೆಗಳು: ಸುನಿಲ್ ಕುಮಾರ್ ಬಜಾಲ್
ಮಂಗಳೂರು: 8 ಗಂಟೆಯ ದುಡಿಮೆ, 8 ಗಂಟೆಯ ನಿದ್ರೆ, 8 ಗಂಟೆಯ ವಿಶ್ರಾಂತಿಗಾಗಿ ಮೂಡಿ ಬಂದಿರುವ ಮೇ ದಿನಾಚರಣೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಜಗತ್ತಿನಾದ್ಯಂತ ಮಾನವ ಜನಕೋಟಿಗಳು ಒಂದಾಗಿ ಆಚರಿಸುವ ಏಕೈಕ ದಿನವಾಗಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕರೆ ನೀಡಿದರು.
ಮೇ ದಿನಾಚರಣೆಯ ಅಂಗವಾಗಿ ಮಂಗಳೂರಿನಲ್ಲಿ ಜರುಗಿದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಅಂತಹ ಮೇ ದಿನದ ಆಶಯವನ್ನು ಬುಡಮೇಲುಗೊಳಿಸಿ ದಿನದ ದುಡಿಮೆಯನ್ನು 12 ಗಂಟೆಗೆ ಏರಿಸುವ ಮೂಲಕ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಸರಕಾರದ ವಿರುದ್ಧ ಸಮರಶೀಲ ಹೋರಾಟವನ್ನು ನಡೆಸಲು ಕಾರ್ಮಿಕ ವರ್ಗ ಸಜ್ಜಾಗಬೇಕೆಂದು ಕರೆನೀಡಿದರು.
ಬಂಡವಾಳಶಾಹಿ ವ್ಯವಸ್ಥೆಯ ಮುಂದುವರಿದ ಭಾಗವೇ ಸಾಮ್ರಾಜ್ಯಶಾಹಿ ವ್ಯವಸ್ಥೆಯಾಗಿದ್ದು, ಇಂದು ಇಡೀ ಜಗತ್ತನ್ನು ನಿಯಂತ್ರಿಸಲು ಹೊರಟಿದೆ. ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿಗಳು ಜನಸಾಮಾನ್ಯರನ್ನು ಕಾರ್ಮಿಕ ವರ್ಗವನ್ನು ಘೋರವಾಗಿ ಕಾಡುತ್ತಿವೆ. ಜಗತ್ತಿನೆಲ್ಲೆಡೆ ಕವಿದ ಯುದ್ಧದ ಕಾರ್ಮೋಡಗಳಿಂದ ವಿಪರೀತ ಬೆಲೆಯೇರಿಕೆಯಾಗಿದ್ದು ಕಾರ್ಮಿಕರ ಬದುಕು ತೀವ್ರ ಸಂಕಷ್ಟಕ್ಕೊಳ್ಳಗಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮೇ ದಿನ ಆಚರಣಾ ಸಮಿತಿಯ ಗೌರವಾಧ್ಯಕ್ಷ, ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ ಬದುಕನ್ನು ಉತ್ತಮಗೊಳಿಸದೆ ಸಮಾಜದ ಅಭಿವೃದ್ಧಿಯಾಗಲೀ, ದೇಶದ ಉದ್ದಾರವಾಗಲೀ ಸಾಧ್ಯವಿಲ್ಲ. ಆದರೆ ಜಗತ್ತಿನೆಲ್ಲೆಡೆ ಸಮಾಜವಾದಿ ರಾಷ್ಟ್ರಗಳನ್ನು ಬಿಟ್ಟರೆ ಉಳಿದ ಎಲ್ಲಾ ದೇಶಗಳು ಅಲ್ಲಿನ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತದೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕ ರವಿಚಂದ್ರ ಕೊಂಚಾಡಿ, ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಬೊಗಳೆ ಬಿಟ್ಟ ನರೇಂದ್ರ ಮೋದಿ ಸರಕಾರ ಹೆಜ್ಜೆಹೆಜ್ಜೆಗೂ ದೇಶದ ಕಾರ್ಮಿಕ ವರ್ಗದ ಬದುಕನ್ನು ಸರ್ವನಾಶ ಮಾಡಿದೆಯೇ ಹೊರತು ದೇಶದ ಜನತೆಗಾಗಿ ಏನೂ ಮಾಡಿಲ್ಲ ಎಂದರು.
ಸಭೆಯನ್ನುದ್ದೇಶಿಸಿ ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ನೌಕರರ ಮುಖಂಡರಾದ ಸುನಿಲ್ ರಾಜ್ ಮಾತನಾಡಿ, ಮೇ ದಿನದ ಮಹತ್ವವನ್ನು ಹಾಗೂ ಮುಂಬರುವ ದಿನಗಳಲ್ಲಿ ಕಾರ್ಮಿಕ ವರ್ಗದ ಸವಾಲುಗಳನ್ನು ಎಳೆಎಳೆಯಾಗಿ ವಿವರಿಸಿದರು.
ಎಲ್ಲಾ ವಿಭಾಗದ ಕಾರ್ಮಿಕರು, ನೌಕರರು ಹಾಗೂ ಜನಪರ ಸಂಘಟನೆಗಳು ಸೇರಿ ರಚಿಸಿಕೊಂಡ ಮೇ ದಿನ ಆಚರಣಾ ಸಮಿತಿಯ ಆಶ್ರಯದಲ್ಲಿ ಜರುಗಿದ ಮೇ ದಿನಾಚರಣೆಯ ಪ್ರಾರಂಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಿಂದ ಕಾರ್ಮಿಕರ ಆಕರ್ಷಕ ಮೆರವಣಿಗೆ ನಡೆದು ಕೇಂದ್ರ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ SSLC ಹಾಗೂ PUC ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿವಿಧ ವಿಭಾಗದ ಕಾರ್ಮಿಕರ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ CITU ಜಿಲ್ಲಾ ನಾಯಕರಾದ ಬಿ ಕೆ ಇಮ್ತಿಯಾಜ್, ಶಶಿಧರ್ ಶಕ್ತಿನಗರ, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಲೋಕೇಶ್ ಎಂ, ಸಂತೋಷ್ ಆರ್ ಎಸ್, ಮುಝಾಫರ್ ಅಹಮದ್, DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಆದಿವಾಸಿ ಹಕ್ಕುಗಳ ಸಮಿತಿಯ ನಾಯಕರಾದ ಕರಿಯ ಕೆ, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ ಮೊದಲಾದವರು ಇದ್ದರು.
#Antipeople #laborcodes #undermined #hope #MayDay #SunilKumarBajal #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
दीदी बंगाल में ऐतिहासिक वोटों से जीतने जा रही हैं।: अखिलेश यादव
#westbengal #tmc #mamatabanerjee #akhileshyadav #assemblyelection #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಕನ್ನಡ ಸಾಹಿತ್ಯದ ಅಲೆಗಳು ಬಹುಮುಖೀ ಆಯಾಮವನ್ನೊಳಗೊಂಡಿವೆ: ಪ್ರೊ.ಚಂದ್ರಶೇಖರ ನಂಗಲಿ
ಬೆಂಗಳೂರು: ಸಾವಿರ ವರ್ಷಗಳಿಗೂ ಹೆಚ್ಚಿನ ಪರಂಪರೆಯನ್ನುಳ್ಳ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಹಾಗೂ ತತ್ವಪದ ಸಾಹಿತ್ಯದ ಮೂರು ಅಲೆಗಳಿವೆಯೆಂದು ವಿಮರ್ಶಕ ಪ್ರೊ. ಚಂದ್ರಶೇಖರ ನಂಗಲಿ ಹೇಳಿದರು.
ಸರ್ಕಾರಿ ಕಲಾ ಕಾಲೇಜಿನಲ್ಲಿ ಅವ್ಯಕ್ತ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಸಿ. ನಾಗೇಂದ್ರಕುಮಾರ್ ಅವರ ಅನುಸಂಧಾನ ಸಂಶೋಧನ ಲೇಖನಗಳ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ, ಸ್ಪಂದನಶೀಲಗುಣವುಳ್ಳ, ಪ್ರಗತಿಪರವಾದ, ಜನರ ಜೀವನಾಡಿಯ ಸಾಹಿತ್ಯ ಈ ಮೂರು ಅಲೆಗಳಾಗಿವೆ. ಒಂದು ವಿಶೇಷವೆಂದರೆ ಇವುಗಳು ಏಕಮುಖಿಯಾದ ಚಿಂತನೆಯಾಗದೆ, ಬಹುಮುಖೀ ಆಯಾಮವನ್ನೊಳಗೊಂಡಿವೆ ಎಂದರು.
ಡಾ. ಬಿ.ಸಿ. ನಾಗೇಂದ್ರಕುಮಾರರು ತಮ್ಮ ಅನುಸಂಧಾನ ಕೃತಿಯಲ್ಲಿ ಕನ್ನಡ ಸಾಹಿತ್ಯದ ಮೂರು ಅಲೆಗಳನ್ನು ಸಮರ್ಥವಾಗಿ ಗುರುತಿಸಿದ್ದಾರೆ. ನವೋದಯ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಸ್ವಾತಂತ್ರ್ಯ ಚಳವಳಿಯ ವಿಭಿನ್ನ ನೆಲೆಗಳನ್ನು ಗಾಂಧೀವಾದಿ, ಹಿಂದೂವಾದಿ ಹಾಗೂ ಸಮಾಜವಾದಿ ರಾಷ್ಟ್ರೀಯತೆಯನ್ನು ಪ್ರಕ್ರಿಯಾತ್ಮಕ ಪ್ರಜ್ಞೆಯೆಂದು ಲೇಖಕರು ಗುರುತಿಸಿದ್ದಾರೆ ಎಂದರು.
ಭಾಷಾಂಧತೆ, ಮತಾಂಧತೆಗಿಂತ ವಿಶ್ವಮಾನವ ಅನಿಕೇತನ ಮುಖ್ಯ ಎಂಬುದನ್ನು ಪ್ರಕ್ರಿಯಾತ್ಮಕ ಪ್ರಜ್ಞೆಯೆಂದು ಗುರುತಿಸಿದ್ದಾರೆಂದು ಕೃತಿಯನ್ನು ಕುರಿತು ಮಾತನಾಡಿದರು.
ಕೃತಿಕಾರ ಡಾ.ಬಿ.ಸಿ.ನಾಗೇಂದ್ರಕುಮಾರ್ ಮಾತನಾಡಿ, ಓರ್ವ ಲೇಖಕ ಎಂದಿಗೂ ತವಕ ತಲ್ಲಣಗಳನ್ನು ಎದುರಿಸುತ್ತಾನೆ. ಅವನಿಗೆ ಬರವಣಿಗೆ ಒಂದು ಬಿಡುಗಡೆಯ ದಾರಿಯಾಗಬೇಕು. ಬರೆದದ್ದೆಲ್ಲ ಸಾಹಿತ್ಯವಲ್ಲ, ಅದು ಸಮಕಾಲೀನ ಪ್ರತಕ್ರಿಯಾತ್ಮಕವಾಗಿರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಪಿ. ಶಿವಪ್ರಸಾದ್ ಮಾತನಾಡಿ, ಭಾಗವತ ಕವಿಯಾದ ಕುಮಾರವ್ಯಾಸ ಓರ್ವ ಜನಪದೀಯ ಕವಿಯಾಗಿದ್ದಾನೆ. ಆ ಕಾರಣದಿಂದಲೇ ಆತ ಜನಸಾಮಾನ್ಯರ ನಾಲಿಗೆಯಲ್ಲಿ ಮತ್ತು ಮನಸ್ಸಿನಲ್ಲಿ ನೆಲೆನಿಂತಿದ್ದಾನೆ ಎಂದರು.
ಕೆ.ಜಿ.ಸಿ.ಟಿ.ಇ ಕಾರ್ಯದರ್ಶಿ ಡಾ. ಹೆಚ್.ಜಿ. ನಾರಾಯಣ, ಅವ್ಯಕ್ತ ಪ್ರಕಾಶನದ ವಸು ವತ್ಸಲೆ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ವೈ. ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.
#waves #Kannada #literature #multifaceted #dimension #ChandrashekarNangali #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
Most Influential Young Indians 2026 ಪಡೆದ ರುಕ್ಮಿಣಿ ವಸಂತ್
#rukminivasanth #malgudiexpress #malgudinews #news #TopNews
| Subscribe | Comment | Like | Share |











