#📜ಪ್ರಚಲಿತ ವಿದ್ಯಮಾನ📜
ಸೂತ್ರಧಾರರು ಕುಣಿಸದ ಕರಿಮಾಯಿ ನಾಟಕಕ್ಕೆ ಬಿ ಜಯಶ್ರೀ ಕಂಠ ಜೀವದ್ರವ್ಯ
ಚಂದ್ರಶೇಖರ ಕಂಬಾರರ 'ಕರಿಮಾಯಿ' ಕಾದಂಬರಿ ನಾಟಕರೂಪವನ್ನು ಪಡೆದುಕೊಂಡು ಅನೇಕ ಪ್ರದರ್ಶನಗಳನ್ನು ಕಾಣುತ್ತಿದೆ. ಆರಂಭದಲ್ಲಿ ಗಜವದನನ ಆರಾಧನೆಯೊಂದಿಗೆ ಶುರುವಾದ ಕರಿಮಾಯಿ ನಾಟಕ ಸೂತ್ರಧಾರರಿಂದ ಆರಂಭದಲ್ಲಿಯೇ ವಿಘ್ನ ಆವರಿಸಿಕೊಂಡಿತು. ಸೂತ್ರಧಾರರ ಸ್ಪಷ್ಟತೆ ಇಲ್ಲದ ಮಾತು ಪ್ರೇಕ್ಷಕರಿಗೆ ಮುಳುವಾಯಿತು. ಕಥೆಯ ಪ್ರವೇಶಕ್ಕೆ ಸೂತ್ರಧಾರರು ಗೊಂದಲ ಸೃಷ್ಟಿಸಿದರು. ಗಾಳಿಪಟಕ್ಕೆ ಸೂತ್ರವಿದ್ದರೆ ಬಾನಿನಲ್ಲಿ ಹಾರಾಡಲು ಸಾಧ್ಯ. ಸೂತ್ರವಿರದ ಗಾಳಿಪಟವಾಗಿದ್ದ ನಾಟಕವನ್ನು ಬಿ ಜಯಶ್ರೀ ಅವರ ಗಾಯನ ಜೀವಂತವಾಗಿ ಇಟ್ಟಿತ್ತು. ನಾಟಕದ ಮಧ್ಯದಲ್ಲಿ ಬಿ ಜಯಶ್ರೀರವರ ಸೂತ್ರಧಾರರ ಮೇಲಿನ ಕೋಪ ವ್ಯಕ್ತವಾಗುತ್ತಿತ್ತು. ಸೂತ್ರಧಾರ ಜೋರಾಗಿ ಮಾತನಾಡದೆ ಇದ್ದಾಗ ಮೈಕ್ ಕೊಟ್ಟು ಜೋರಾಗಿ ಮಾತಾಡುವಂತೆ ಸನ್ನೆ ಮಾಡಿದರು ಕೂಡ ಸೂತ್ರಧಾರ ಮಾತನಾಡಲೇ ಇಲ್ಲ. ಅದೇ ಅಸಮಾಧಾನದಿಂದ ಮೈಕ್ ಅನ್ನು ಕಿತ್ತುಕೊಂಡು ಹಾಡು ಮುಂದುವರಿಸಿದರು.
ನಿರ್ದೇಶಕಿಯಾದ ಬಿ. ಜಯಶ್ರೀ ಅವರ ಈ ಅಸಮಾಧಾನ ಸಹಜವಾದದೇ. ಪ್ರಯೋಗ ಪ್ರತಿಬಾರಿ ಪರೀಕ್ಷೆ ಒಡ್ಡುತ್ತದೆ ಎಂಬುದಕ್ಕೆ ಕರಿಮಾಯಿ ನಾಟಕ ಸಾಕ್ಷಿ ಆಯಿತು. ಬಹಳಷ್ಟು ಪ್ರಯೋಗಗಳನ್ನು ಮಾಡಿದ ಕಲಾವಿದರು ಮಾಗಬೇಕೆ ಹೊರತು ಮಲಗಿಕೊಳ್ಳಬಾರದು. ಸೂತ್ರಧಾರರು ಲಯ ತಪ್ಪುತ್ತಿದ್ದರು. ಕಂಬಾರರ ಹಾಡಿನೊಂದಿಗೆ ನಾಟಕಕ್ಕೆ ಉಸಿರು ದೊರೆಯುತ್ತಿತ್ತು. ನಾಟಕ ಖೂನಿಯಿಂದ ಆರಂಭವಾಗಿ ಖೂನಿಯೊಂದಿಗೆ ಮುಕ್ತಾಯವಾಗುವುದು. ಕೊಲೆಪಾತಕರನ್ನು ಮರೆಮಾಚಲು ಗೌಡ ಕುಲಕರ್ಣಿ ಹರಸಾಸ ಪಡುವರು. ಕೊಲೆಗಾರ ನಿಂಗುವಿಗೆ ತೃತೀಯ ಲಿಂಗಿ ವೇಷ ಹಾಕಿಸುವರು. ಕಾಯ್ದೆ ಕಾನೂನುಗಳಿಗೆ ಕವಡೆ ಕಿಮ್ಮತ್ತು ಕೊಡುವುದಿಲ್ಲ ಎಂಬ ವಾದ ವಿವಾದಗಳೊಂದಿಗೆ ಆರಂಭವಾದ ಊರಿನ ಮುಖಂಡರ ನಡುವಿನ ಮನಸ್ತಾಪಗಳು ನಾಟಕದಲ್ಲಿ ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಮತ್ತೊಮ್ಮೆ ಮಾತಿನ ಚಕಮಕಿ ಮೂಲಕ ಪ್ರದರ್ಶನಗೊಳ್ಳುತ್ತವೆ.
ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕೆನ್ನುವವರು ಒಂದು ವರ್ಗ. ಅವನನ್ನು ಬಚಾವ್ ಮಾಡಬೇಕೆನ್ನುವ ಮತ್ತೊಂದು ವರ್ಗ. ಕಾನೂನಿಗೆ ಶರಣಾಗಲೇಬೇಕು ಎಂಬ ವಾದ ವಿವಾದಗಳು ಕರಿಮಾಯಿ ಮುಂದೆಯೇ ನಡೆಯುತ್ತವೆ. ಗ್ರಾಮೀಣರ ಬದುಕಿನಲ್ಲಾಗುವ ಸೂಕ್ಷ್ಮ ರೀತಿಯ ಸ್ಥಿತ್ಯಂತರಗಳನ್ನು ಶಿವಪುರ ಎಂಬ ಕಲ್ಪನೆಯ ಊರಿನ ಮೂಲಕ ಪ್ರಸ್ತುತ ವಿದ್ಯಮಾನಗಳನ್ನು ಕಂಬಾರರು ಚಿತ್ರಿಸಿದ್ದಾರೆ.
ಗೌರಿ -ಘಟವಾಳಪ್ಪ ಅವರ ಕೊಲೆ ವಿಷಯವಾಗಿ ಫೌಜ್ದಾರನು ನಡೆಸುವ ಚರ್ಚೆ ಮೆಚ್ಚುವಂಥದ್ದು. ಕೊಲೆ ಯಾರು ಮಾಡಿದ್ದಾರೆಂದು ಪತ್ತೆ ಹಚ್ಚಲು ಫೌಜ್ದಾರನಿಗೆ ಸಾಧ್ಯವಾಗುವುದೇ ಇಲ್ಲ. ಇದು ವರ್ತಮಾನದ ಘಟನೆಗಳಂತೆ ಪ್ರತಿಬಿಂಬಿತವಾಗಿದೆ. ಅಕ್ರಮ ಸಂಬಂಧ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗಿ ಜೀವ ಕಳೆದುಕೊಳ್ಳುತ್ತಿವೆ. ಇದೇ ಮಾದರಿಯ ಮರ್ಯಾದೆ ಹತ್ಯೆಗಳು ಕೂಡ ಇಂದಿಗೂ ಜೀವಂತವಾಗಿವೆ ಎಂಬ ಒಳದನಿ ನಾಟಕದ್ದು. ಈ ಕೊಲೆಯ ವಿಚಾರವಾಗಿ ನಾಟಕ ತನ್ನ ಎಳೆಯನ್ನು ಬಿಚ್ಚಿಕೊಳ್ಳುವುದಕ್ಕೆ ಶುರುಮಾಡುತ್ತದೆ. ಕೊಲೆಯ ಸುತ್ತ ಪಾತ್ರಗಳು ಮಾತಾಡುತ್ತವೆ. ಕೊಲೆಗಾರ ಯಾರು ಎಂಬುದನ್ನು ಭೇದಿಸಲು ಸಾಧ್ಯವಾಗುವುದಿಲ್ಲ. ಕೊಲೆಗಾರ ಗೊತ್ತಿದ್ದು ತನ್ನ ತಪ್ಪನ್ನು ಒಪ್ಪಿಕೊಂಡರು ಗೌಡ, ಕುಲಕರ್ಣಿ ಕೊಲೆಗಾರನನ್ನು ರಕ್ಷಿಸುವುದು ನಾಟಕದ ವ್ಯಂಗ್ಯ.
ಗೌಡರ ಮನೆಯ ಆಳು ಗೌಡರ ಎದುರಾಳಿಯ ಮನೆಯಲ್ಲಿ ಮದ್ಯಪಾನ ಸೇವಿಸುವುದು, ಕರಿಮಾಯಿ ಮೇಲೆ ಕುಡಿಯುವುದಿಲ್ಲ ಎಂದು ಆಣೆ ಮಾಡಿ ಮತ್ತೆ ಕುಡಿಯುವುದಕ್ಕೆ ಶುರು ಮಾಡಿ, ಮರಣ ಹೊಂದುವುದು. ಅದಕ್ಕೆ ಕರಿಮಾಯಿಯ ಕೋಪವೇ ಕಾರಣವೆನ್ನುವುದು. ಹೀಗೆ ಗ್ರಾಮ ದೇವತೆಯ ಮೇಲಿನ ನಂಬಿಕೆ -ಅಪನಂಬಿಕೆಗಳ ನಡುವಿನ ಸಂಘರ್ಷವಿದು. ಪಾತ್ರಧಾರಿಗಳು ಪ್ರೇಕ್ಷಕರಿಗೆ ಮುಟ್ಟುವಂತೆ ಇನ್ನಷ್ಟು ಕ್ರಿಯಾಶೀಲತೆಯಿಂದ ನಟಿಸಬೇಕು. ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಸ್ಪಂದನ ತಂಡ ಮತ್ತಷ್ಟು ಚುರುಕಾಗಬೇಕಿದೆ. ಅತಿ ಹೆಚ್ಚು ಪಾತ್ರಗಳ ನಾಟಕದ ನಾಗಾಲೋಟಕ್ಕೆ ಮಿತಿ ಹಾಕಿ ಕೊಂಡರೆ ಪ್ರಯೋಗ ಸಮಂಜಸವೆನಿಸುವುದು.
ಕರಿಮಾಯಿಯ ಜಾತ್ರೆ ನಿಮಿತ್ತ ನಾಟಕ ಆಡಿಸಬೇಕೆಂದು ಬೆಳಗಾವಿಯಿಂದ 'ಚಿಮಣಾ'ಳನ್ನು ಕರೆಸುವವರು. ಆ ಚಿಮಣಾ ಗೌಡರಿಗೆ ಬಸರಾಗಿದ್ದೇನೆಂದು ಗುಲ್ಲು ಎಬ್ಬಿಸುವ ದೃಶ್ಯ, ಆ ಬಸರಿಗೆ ಗರ್ಭಪಾತ ಮಾಡಿಸಬೇಕೆಂಬ ನಿರ್ಣಯ, ತಾನು ಗೌಡರಿಗೆ ಬಸರಾಗಿದ್ದೇನೆ ಎಂದು ಗೌಡನಿಂದ ಎರಡು ಎಕರೆ ಜಮೀನು ಬೇಕೆಂದು ಹಠ ಹಿಡಿಯುವ ಚಿಮಣಾಳನ್ನು ಊರಿಂದ ಬಹಿಷ್ಕಾರ ಹಾಕುವರು. ಈ ಎಲ್ಲಾ ಸಿಟ್ಟುಗಳನ್ನು ಇಟ್ಟುಕೊಂಡ ಚಿಮಣಾ ಬೆಳಗಾವಿಯ ಬಸವರಾಜನೊಂದಿಗೆ ಶಾಮಿಲ್ ಆಗಿ ಕರಿಮಾಯಿಯ ಬಂಗಾರದ ಮುಖವನ್ನು ಕದಿಯುವ ಸಾಹಸಕ್ಕೆ ಮುಂದಾಗುತ್ತಾರೆ. ಹಾಗೆ ಕರಿಮಾಯಿ ಪೂಜಾರಿಯ ಮೈಯಲ್ಲಿ ದೈವ ಬರದಂತೆ ಷಡ್ಯಂತ್ರ ರೂಪಿಸುತ್ತಾರೆ.
ಕರಿಮಾಯಿಯ ಪೂಜಾರಿಯನ್ನು ತನ್ನ ಆಟದ ಬುಗುರಿಯನ್ನಾಗಿ ಮಾಡಿಕೊಳ್ಳಲಾಗುತ್ತದೆ. ಚಿಮಣ ಕರಿಮಾಯಿಯ ಪೂಜಾರಿಯ ಆತ್ಮಹತ್ಯೆಗೆ ಕಾರಣವಾಗುತ್ತಾಳೆ. ಚಿಮಣಾಳ ಬಸವರಾಜರ ಕೃತ್ಯಕ್ಕೆ ಶಿವಾಪುರದ ಜನತೆ ದಂಗಾಗುತ್ತಾರೆ. ಚಿಮಣಾ ಗೌಡರಿಗೆ ಬಸರಾಗದಿದ್ದರು ಸುಳ್ಳು ಹೇಳಿ ನಯವಂಚಕಳಂತೆ ವರ್ತಿಸುವಳು. ಪಂಚಾಯತಿ ತನ್ನ ಕೈಲಿ ಇಲ್ಲದ ಗೌಡನಿಗೆ ಇಲ್ಲ ಸಲ್ಲದ ಆರೋಪಗಳು ಅವನನ್ನು ಆವರಿಸುತ್ತವೆ. ಗೌಡ ಯಾರೋ ಮಾಡಿದ ತಪ್ಪನ್ನು ತನ್ನ ಮೇಲೆ ಹಾಕಿಕೊಂಡು ಅವಳಿಗೆ ನ್ಯಾಯ ಒದಗಿಸಲು ಮುಂದಾದರೂ ಚಿಮಣ ಅದರಿಂದ ಹಿಂದೆ ಸರಿಯುತ್ತಾಳೆ. ತನಗೆ ಬೇಕಿರುವುದು ಎರಡು ಎಕರೆ ಹೊಲ ಎಂದು ಅವಳು ಪಟ್ಟು ಹಿಡಿತಾಳೆ. ಮುಗ್ಧರಾದ ಹಳ್ಳಿಯ ಜನತೆಯನ್ನು ನಗರದ ಬೆಳಗಾವಿ ಜನತೆ ಹೇಗೆ ಮೋಸಗೊಳಿಸುತ್ತಾರೆ ಎಂದು ಕಾಣಬಹುದು. ಓದಿದವರು ಹೇಗೆ ಜನರನ್ನು, ಸಮಾಜವನ್ನು ವಂಚನೆಗೊಳಪಡಿಸುತ್ತಾರೆ ಎಂಬ ಸೂಚ್ಯ ದನಿಯು ಇಲ್ಲಿದೆ. ಕರಿಮಾಯಿ ಜಾತ್ರೆಯ ನಿಮಿತ್ತ ಶಾಲಾ ಮಾಸ್ತರರಿಗೆ ನಾಟಕ ಆಡಿಸಬೇಕೆಂದು ಕೆಲವು ಯುವಕರು ದುಂಬಾಲು ಬೀಳುವ ದೃಶ್ಯ ಪ್ರೇಕ್ಷಕರಲ್ಲಿ ನಗು ಮೂಡಿಸುತ್ತದೆ. ಈ ನಾಟಕದಲ್ಲಿ ತಾನಿಲ್ಲವೆಂದು ನಿಂಗು ಆ ನಾಟಕ ಯಶಸ್ವಿಯಾಗದಂತೆ ತಂತ್ರ ರೂಪಿಸುತ್ತಾನೆ.
'ಸಾವಿಗಿಂತ ಬದುಕು ದೊಡ್ಡದು' ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಆಣೆ ಪ್ರಮಾಣಗಳು ನಾಟಕದಲ್ಲಿ ನೋಡುಗರ ಕುತೂಹಲವನ್ನು ಹೆಚ್ಚಿಸುತ್ತದೆ. ಇಂದಿನ ದಿನಮಾನಗಳಲ್ಲಿ ಕೊಲೆಗಾರನ ರಕ್ಷಣೆ ಮಾಡುವ ತಂತ್ರಗಾರಿಕೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹೊಸದೇನಲ್ಲ ಎಂಬಂತೆ ರಾಜಕೀಯ ಧೋರಣೆಗಳನ್ನು ಕಂಬಾರರು ಕಟ್ಟಿ ಕೊಟ್ಟಿದ್ದಾರೆ.
ಪಾತ್ರಗಳು ಸಂಭಾಷಣೆ ಮಾಡುತ್ತಿರುವಾಗಲೇ ಹಾಡುಗಳನ್ನು ಹಾಡುತ್ತಿರುವುದರಿಂದ ನಟರ ಮಾತುಗಳು ಸರಿಯಾಗಿ ಕೇಳಿಸುತ್ತಿರಲಿಲ್ಲ. ಇದು ನಟರ ದೌರ್ಬಲ್ಯವೂ ಅಥವಾ ಪಂಡಿತ ರಂಗ ಮಂದಿರದ ಧ್ವನಿವರ್ಧಕಗಳ ಸಮಸ್ಯೆಯೋ ಎಂಬ ಗೊಂದಲ ಕಾಡತೊಡಗಿತ್ತು.
ಪ್ರೇಕ್ಷಕರ ಮಧ್ಯದಿಂದಲೇ ಪ್ರವೇಶ ಪಡೆಯುವ ಕರಿಮಾಯಿ ಪಾತ್ರದ ಪೂಜಾರಿಯ ನರ್ತನಕ್ಕೆ ರಂಗಮಂದಿರ ಕಂಪಿಸಿತು. ಕಂಬಾರರ ಹಾಡುಗಳು ನಾಟಕಕ್ಕೆ ಮೆರುಗನ್ನು ತಂದುಕೊಟ್ಟವು. ಬಿ ಜಯಶ್ರೀಯವರ ಗಾಯನ ನಾಟಕಕ್ಕೆ ಕಳಸದಂತೆ ಶೋಭಾಯಮಾನವಾಗಿತ್ತು. ಈ ನಾಟಕಕ್ಕೆ ಬಿ ಜಯಶ್ರೀ ಅವರ ಗಾಯನವಿಲ್ಲದಿದ್ದರೆ ನಾಟಕ ಅಪೂರ್ಣವಾಗುವ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿತು. ರಂಗದಲ್ಲಿ ಕರಿಮಾಯಿಯ ಮೂರ್ತಿ ಬೆಟ್ಟದ ಮೇಲಿರುವಂತೆ ಎತ್ತರದಲ್ಲಿ ಕುಳ್ಳಿರಸಲಾಗಿತ್ತು. ಅದರ ಮುಂದೆ ಗಾಯನ ತಂಡವಿತ್ತು. ಮೊದಲ ಅಂಕದಲ್ಲಿ ಕರಿಮಾಯಿಯ ಮೂರ್ತಿ ದರ್ಶನ ಮಾಡಿಸುವುದರ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು ಮತ್ತೆ ಚಪ್ಪಾಳೆಯನ್ನು ಪಡೆಯಲು ನಾಟಕ ಹರಸಾಹಸ ಪಡುತ್ತಿತ್ತು. ಬೆಳಗಾವಿಯ ಗ್ರಾಮೀಣ ಭಾಷೆಯಲ್ಲಿ ನಾಟಕ ಮತ್ತಷ್ಟು ಪ್ರಭಾವ ಬೀರುವ ಸಾಧ್ಯತೆಗಳಿದ್ದರೂ ನಟವರ್ಗ ಸಾಧಿಸುವಲ್ಲಿ ಸಫಲವಾಗಲಿಲ್ಲ. ರಂಗ ಸಜ್ಜಿಕೆ ನಾಟಕಕ್ಕೆ ಹೊಂದಿಕೊಳ್ಳುವಲ್ಲಿ ಸ್ವಲ್ಪ ಅಡಚಣೆ ಆಗುತ್ತಿತ್ತು. ನಟರು ತಮ್ಮ ವ್ಯಾಪ್ತಿಯನ್ನು ಮೀರಿ ರಂಗಕ್ಷೇತ್ರ ಆವರಿಸಿಕೊಳ್ಳುತ್ತಿದ್ದರು ಎನಿಸುತ್ತಿತ್ತು. ಸ್ವಲ್ಪಮಟ್ಟಿನ ರಂಗದ ಶಿಸ್ತು ಅಗೋಚರವಾಗಿತ್ತು. ತುಂಬಾ ವಿಸ್ತಾರವಾದ ನಾಟಕವನ್ನು ದೃಶ್ಯ ಕಟ್ಟುವಾಗ ಸೀಮಿತಗೊಳಿಸಬೇಕಿತ್ತು. ಪಂಚಾಯಿತಿಯ ವಾಗ್ವಾದದಲ್ಲಿ ಮಾತಿನ ಏರಿಳಿತಗಳ ಅಂಶಗಳು ಕಾಣೆಯಾಗಿದ್ದವು. ಚಿಮಣ ಪಾತ್ರ ಮಾತ್ರ ಜೀವಂತವಾಗಿ ರಂಗದ ಮೇಲೆ ಆಟವಾಡಿತು. ರಂಗದ ಮೇಳ ನಾಟಕಕ್ಕೆ ಹೊಸ ವಿನ್ಯಾಸವನ್ನು ಒದಗಿಸುವಂತೆ ತಯಾರಿ ಮಾಡಿಕೊಂಡಿದ್ದರೆನಿಸತ್ತದೆ. ಆದರೆ ನಟರಾದವರು ಅದಕ್ಕೆ ಪೂರಕವಾಗಿ ರಂಗ ಅಧ್ಯಯನದಲ್ಲಿ ತಲ್ಲಿನರಾಗಬೇಕು. 2026ರ ಕಲಬುರ್ಗಿ ರಂಗೋತ್ಸವದಲ್ಲಿ ಬಿ. ಜಯಶ್ರೀ ನಿರ್ದೇಶನದ ಕರಿಮಾಯಿ ನಾಟಕವನ್ನು ಬೆಂಗಳೂರು ಸ್ಪಂದನ ತಂಡ ಪ್ರದರ್ಶಿಸಿತು. 'ಸಾವಿರದ ಶರಣವ್ವ ಕರಿಮಾಯಿ ತಾಯಿ, 'ಬ್ಯಾಟಿ ಬ್ಯಾಟಿಯನಾಡಿದ ಬ್ಯಾಡರ ಹುಡುಗ ಕಾಡ ಬ್ಯಾಟಿಯನಾಡಿದ' ಕಂಬಾರರ ಭಾವ ನಾಟಕದ ಕೇಂದ್ರ ಬಿಂದುವಾಗಿತ್ತು. ಆದರೆ ಸ್ಪಂದನ ತಂಡ ನಟನೆಯ ಕಾಡಬ್ಯಾಟಿಯನ್ನು ಹಿಡಿಯಲು ಮತ್ತಷ್ಟು ಪಳಗಬೇಕಿದೆ. 'ಸಾವಿರದ ಶರಣವ್ವ ಕರಿಮಾಯಿ ತಾಯಿ ' ಸಾಲಿನಲ್ಲಿ ನಾಟಕದ ಸಾವು ಅಗೋಚರವಾಗಿ, ಕರಿಮಾಯಿ ಪೂಜಾರಿಯ ಆತ್ಮಹತ್ಯೆ, ಇನ್ನು ಹುಟ್ಟದ ಕೂಸಿಗೆ ಗರ್ಭಪಾತವಾಗಿ ಮರಣ ಶಾಸನವನ್ನು ನಾಟಕ ನಿರೂಪಿಸುತ್ತದೆ.
- ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, ಸಂಶೋಧಕರು, ಯಾದಗಿರಿ
#BJayashree #voice #lifeblood #Karimai #drama #malgudiexpress #malgudinews #news #TopNews


