#🥳ಹೋಳಿ ಹಬ್ಬದ ಶುಭಾಶಯಗಳು😍
ಬಣ್ಣಗಳ ಹಬ್ಬ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಹೊಸ ಆಶೆಗಳನ್ನೇ ತರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು!
Happy Holi!
#holifestival #HappyHoli #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಅಸಮಾನ್ಯ ಕನ್ನಡಿಗನ ಬದುಕಿನ ಕಥನ ಕಥಾನಾಯಕನ ಕಥೆ
ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠದ ಮೂಲಕ ಡಾ. ರಾಜಕುಮಾರ್ ಅವರ ಜೀವನ ಚರಿತ್ರೆ `ಕಥಾನಾಯಕನ ಕಥೆ’ಯು ಪುಸ್ತಕ ರೂಪದಲ್ಲಿ (2026) ಪ್ರಕಟವಾಗುತ್ತಿದೆ. ಭಾರತದ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದ ಕಲಾವಿದರು ಅಪರೂಪ. ಅಭಿನಯಕ್ಕಾಗಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಕಲಾವಿದ ಡಾ. ರಾಜಕುಮಾರ್. ಡಾ. ರಾಜಕುಮಾರ್ ಕೇವಲ ಸಿನಿಕಲಾವಿದರಾಗಿ ಮಾತ್ರ ಉಳಿಯದೆ, ಕನ್ನಡದ ನೆಲ-ಜಲ ಮತ್ತು ಭಾಷೆಯ ಉಳುವಿಗಾಗಿ ಬೀದಿಗಳಿದ ಅಪರೂಪದ ಕಲಾವಿದ. ಇಂತಹ ಅಸಮಾನ್ಯ ಕನ್ನಡಿಗನ ಬದುಕಿನ ಸಮಗ್ರ ವಿವರಗಳನ್ನು ದಾಖಲಿಸುವ ಪ್ರಯತ್ನಗಳನ್ನು ಕೆಲವರು ಮಾಡಿದ್ದಾರೆ. ಶ್ರೀ ದೊಡ್ಡಹುಲ್ಲೂರು ರುಕ್ಕೋಜಿಯವರು ಡಾ. ರಾಜಕುಮಾರ್ ಸಮಗ್ರ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಇದೊಂದು ಮಹತ್ವದ ಪ್ರಯತ್ನವಾಗಿದೆ. ಆದರೆ ಡಾ. ರಾಜಕುಮಾರ್ ಅವರ ಆತ್ಮಕತೆ ಇಲ್ಲಿಯವರೆಗೂ ಪ್ರಕಟವಾಗಿರಲಿಲ್ಲ. ಭಾರತದ ಪ್ರಖ್ಯಾತ ಚಲನಚಿತ್ರ ನಟರಾದ ಅಮಿತಾಬಚ್ಚನ್, ಎನ್.ಟಿ.ಆರ್, ಎಂ. ಜಿ. ರಾಮಚಂದ್ರನ್, ಮೋಹನ್ ಲಾಲ್ರಂತಹ ಕಲಾವಿದರ ಜೀವನ ಚರಿತ್ರೆಗಳನ್ನು ಆಯಾ ರಾಜ್ಯಭಾಷೆಗಳಲ್ಲದೆ, ಅಂತರಾಷ್ಟ್ರೀಯ ಖ್ಯಾತಿಯ ಪೆಂಗ್ವಿನ್ ಪ್ರಕಾಶನವು ಇಂಗ್ಲೀಷನಲ್ಲೂ ಪ್ರಕಟಿಸಿದೆ. ಆದರೆ ಇಲ್ಲಿಯವರೆಗೆ ಡಾ. ರಾಜಕುಮಾರ್ ಅವರ ಆತ್ಮಕಥೆ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಈಗ ಕನ್ನಡ ವಿಶ್ವವಿದ್ಯಾಲಯವು ಡಾ. ರಾಜಕುಮಾರ್ ಅವರ ಆತ್ಮಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ.
ಡಾ.ರಾಜಕುಮಾರ್ ಅಧ್ಯಯನ ಪೀಠವು ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಅಧ್ಯಯನ ಪೀಠವನ್ನು ದಿ: 18.04.2006 ರಂದು ವಿದ್ಯುಕ್ತವಾಗಿ ಆರಂಭಿಸಲಾಯಿತು. ಕಳೆದ ಎರಡು ದಶಕಗಳಿಂದ ಅಧ್ಯಯನ ಪೀಠವು ಅಹರ್ನಿಸಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಚಲನಚಿತ್ರ, ರಂಗಭೂಮಿ ಮತ್ತು ಅಭಿನಯ ಕಲೆಗೆ ಸಂಬಂಧಿಸಿದ ವಿವಿಧ ರಂಗಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಪೀಠವು ಮುಂದಡಿ ಇಟ್ಟಿದೆ.
1. ಡಾ. ರಾಜಕುಮಾರ್ ಅವರು ಕನ್ನಡ ರಂಗಭೂಮಿ ಮತ್ತು ಸಿನೆಮಾ ರಂಗಗಳ ನಡುವೆ ಒಂದು ಸೇತುವೆ ಎಂಬಂತೆ ಪರಿಭಾವಿಸಲ್ಪಟ್ಟಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕನ್ನಡದ ಭಾಷಿಕ ಪರಿಸರ ಮತ್ತು ಕಲಾಜಗತ್ತು ಹೇಗೆ ರೂಪುಗೊಳ್ಳುತ್ತಾ ಬಂದಿದೆ ಎಂಬುದನ್ನು ವಿಶ್ಲೇಷಿಸುವುದು.
2. ಡಾ. ರಾಜಕುಮಾರ್ ಕನ್ನಡವನ್ನೂ ಒಳಗೊಂಡಂತೆ ಭಾರತದ ಅಭಿನಯ ಮತ್ತು ಗಾಯನ ಪರಂಪರೆಗಳಿಗೆ ಮಹೋನ್ನತ ಕೊಡುಗೆಗಳನ್ನು ನೀಡಿದ್ದಾರೆ. ಜನಪ್ರಿಯ ಕಲಾಪ್ರಕಾರದಲ್ಲಿ ಉನ್ನತ ಸಾಧನೆಗಳನ್ನು ಮಾಡಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ರಾಜಕುಮಾರ್ ಅವರ ಬದುಕನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ.
3. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ನಾಡಿನ ಸಮಾಜ ಮತ್ತು ಸಂಸ್ಕೃತಿಗಳನ್ನು ಪರಿಭಾವಿಸುವ ಕ್ರಮವೊಂದಿದೆ. ಅದರಲ್ಲೂ ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಭಾವುಕ ನೆಲೆಯಲ್ಲಿ ಕಲ್ಪಿಸಿಕೊಳ್ಳುವ ಪರಿಪಾಠವೊಂದು ಬೆಳೆದು ಬಂದಿದೆ. ಕನ್ನಡ ರಾಷ್ಟ್ರೀಯತೆ ಎಂಬ ಒಂದು ರಾಜಕೀಯ ರಚನೆಯನ್ನು ಭಾವುಕವಾಗಿ ಪರಿಭಾವಿಸುವ ಹಿಂದಿರುವ ಒತ್ತಾಸೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
4. ಮನರಂಜನೆಯ ಅತ್ಯಂತ ಪ್ರಭಾವಶಾಲಿ ಮಾಧ್ಯಮವೆಂದರೆ ಸಿನಿಮಾ. ಈ ಮಾಧ್ಯಮವು ಜನಸಾಮಾನ್ಯರಲ್ಲಿ ಪ್ರಭಾವ ಬೀರಿದ ಕ್ಷೇತ್ರಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳ ಹೊರತಾಗಿಯೂ, ಸಾಂಸ್ಕೃತಿಕ ವಿಮರ್ಶೆಯಾಗಿಯೂ, ನಮ್ಮ ನಾಡಿನ ಸಮಾಜಗಳ ವಿವಿಧ ವಲಯಗಳ ಮೇಲೆ ಅದರ ಪ್ರಭಾವವನ್ನು ಬಿಚ್ಚಿಡಲು ಪೀಠವು ಕೆಲಸ ಮಾಡಬೇಕಾಗಿದೆ. ಈ ಎಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಪೀಠವು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ.
ನಾನು ಪೀಠದ ಸಂಚಾಲಕನಾದ ಮೊದಲ ದಿನವೇ ಡಾ. ರಾಜಕುಮಾರ್ ಅವರ ಆತ್ಮಕಥೆಯನ್ನು ಹುಡುಕಿ ಪ್ರಕಟಿಸಬೇಕು ಎಂದು ನಿರ್ಧರಿಸಿದೆ. ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿಯವರು ಈ ಯೋಜನೆಯನ್ನು ಕೈಗೊಳ್ಳಲು ತುಂಬು ಮನಸ್ಸಿನಿಂದ ಒಪ್ಪಿ ಸಹಕರಿಸಿದರು. ಹಿರಿಯರಾದ ನಾಡೋಜ ಬರಗೂರು ರಾಮಚಂದ್ರಪ್ಪನವರು ಈ ಆತ್ಮಕಥೆಯನ್ನು ಪ್ರಕಟಿಸಲು ವಿಶೇಷ ಕಾಳಜಿ ವಹಿಸಿದ್ದಾರೆ. ಡಾ. ರಾಜಕುಮಾರ್ ಅವರ ಮನೆಯವರ ಜೊತೆಗೆ ಮಾತನಾಡಿ ಈ ಆತ್ಮಕಥೆಯನ್ನು ಪ್ರಕಟಿಸಲು ಅನುಮತಿಯನ್ನು ಕೊಡಿಸಿದ್ದಲ್ಲದೆ, `ಕಥಾನಯಕನ ಕಥೆ’ಗೆ ಮಹತ್ವದ ಪ್ರವೇಶಿಕೆಯನ್ನು ಬರೆದುಕೊಟ್ಟಿದ್ದಾರೆ.
ನಾನು ಪೀಠದ ಸಂಚಾಲಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಈ ಆತ್ಮಕಥೆಯು ಪ್ರಕಟವಾದ ವಿಜಯಚಿತ್ರ ನಿಯತಕಾಲಿಕೆಯ ಸಂಚಿಕೆಗಳ ಹುಡುಕಾಟ ಶುರುವಾಯಿತು. ನನ್ನ ಜೊತೆಗೆ ಲೇಖಕರೂ ಸಿನೆಮಾ ನಿರ್ದೇಶಕರೂ ಆದ ಶ್ರೀ ಪ್ರಕಾಶರಾಜ್ ಮೇಹು ಅವರು ಈ ಸಂಚಿಕೆಗಳನ್ನು ಹುಡುಕಲು ತೊಡಗಿದರು. ಈ ಹೊತ್ತಿಗೆ ವಿಜಯಚಿತ್ರದ ಪ್ರಕಟಣೆ ನಿಂತು ಹೋಗಿತ್ತು. ಇದಲ್ಲದೆ, ವಿಜಯಚಿತ್ರದ ಎಲ್ಲ ಸಂಚಿಕೆಗಳನ್ನು ಸಂಗ್ರಹಿಸಿಟ್ಟಿದ್ದ ಪ್ರಕಟಣಾ ಸಂಸ್ಥೆಯ ಸಂಗ್ರಹಾಗಾರಕ್ಕೆ (Archive) ಬೆಂಕಿಬಿದ್ದು ಸುಟ್ಟು ಹೋಗಿತ್ತು. ಚೆನೈಗೆ ಹೋದರೆ ಪ್ರಯೋಜನವಿಲ್ಲವೆಂದು ಬೆಂಗಳೂರಿನ ಪುಸ್ತಕ ಪ್ರಿಯರಲ್ಲಿ ಯಾರಾದರೂ ಈ ಸಂಚಿಕೆಗಳನ್ನು ಸಂಗ್ರಹಿಸಿರಬಹುದು ಎಂಬ ಭರವಸೆಯೊಂದಿಗೆ ನನ್ನ ಹುಡುಕಾಟವನ್ನು ಮುಂದುವರೆಸಿದೆ. ಹಲವು ಜನರನ್ನು ಸಂಪರ್ಕಿಸಿದ ನಂತರವೂ ವಿಜಯಚಿತ್ರದ ಸಂಚಿಕೆಗಳು ಲಭ್ಯವಾಗಲಿಲ್ಲ. ಕೊನೆಯ ಪ್ರಯತ್ನದ ನೆಪದಲ್ಲಿ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀ ರಾಜು ಅವರನ್ನು ಸಂಪರ್ಕಿಸಿದೆವು. ಶ್ರೀ ರಾಜು ಅವರು ಡಾ. ರಾಜಕುಮಾರರ ಪರಮಾಭಿಮಾನಿ. ಶ್ರೀಯುತರು ನಮ್ಮನ್ನು ರವಿಶಂಕರ್ ಎಂಬ ಇನ್ನೊಬ್ಬ ರಾಜಕುಮಾರ್ ಅಭಿಮಾನಿಯ ಬಳಿ ಕರೆದೊಯ್ದರು. ಶ್ರೀ ರವಿಶಂಕರ್ ಅವರು ನಮ್ಮಗಳ ಹಿನ್ನೆಲೆ, ನಮ್ಮ ಉದ್ದೇಶಗಳನ್ನು ಸರಿಸುಮಾರು ಮೂರು ತಾಸಿನ ವರೆಗೆ ಪರೀಕ್ಷಿಸಿ ರಾಜಕುಮಾರ್ ಅವರ ಆತ್ಮಕಥೆ ಪ್ರಕಟವಾದ ವಿಜಯಚಿತ್ರದ ಎಲ್ಲ ಸಂಚಿಕೆಗಳನ್ನು ಕೊಡಲು ಒಪ್ಪಿಕೊಂಡರು. ಅಲ್ಲಿಗೆ ನಮ್ಮ ಹುಡುಕಾಟ ಮತ್ತು ಓಡಾಟಗಳಿಗೆ ಒಂದು ಮುಕ್ತಿ ಸಿಕ್ಕಂತಾಯಿತು. ರವಿಶಂಕರ್ ಮತ್ತು ರಾಜು ಇಬ್ಬರೂ ಸೇರಿ ಒಂದು ದಿನ ನಮ್ಮನ್ನು ಕಂಠೀರವ ಸ್ಟೂಡಿಯೋಕ್ಕೆ ಕರೆದೊಯ್ದು, ಅಲ್ಲಿ ಡಾ. ರಾಜಕುಮಾರ್ ಅವರ ಸಮಾಧಿಯ ಮುಂದೆ ವಿಜಯಚಿತ್ರದ ಸಂಚಿಕೆಗಳನ್ನು ಇರಿಸಿ, ಅವುಗಳಿಗೆ ಪೂಜೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ನಮ್ಮ ಕೈಗಿತ್ತರು. ವಿಜಯಚಿತ್ರದ ಸಂಚಿಕೆಗಳು ಅಣ್ಣಾವರ ಸಮಾಧಿಯ ಮುಂದೆ ವಿಧಿವತ್ತಾಗಿ ನಮ್ಮ ಕೈಸೇರಿದವು. ‘ಡಾ. ರಾಜ್ ಅವರ ಆತ್ಮಕಥೆಯನ್ನು ಪ್ರಕಟಿಸಿ ಯಾರೂ ಅದನ್ನು ಲಾಭ ಮಾಡಿಕೊಳ್ಳಬಾರದು. ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಆತ್ಮಕಥೆಯನ್ನು ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ ಪ್ರಕಟಿಸುತ್ತವೆ’ ಎಂಬ ಕಾರಣಕ್ಕಾಗಿ ರವಿಶಂಕರ್ ಈ ಸಂಚಿಕೆಗಳನ್ನು ನಮಗೇ ನೀಡಿ ಉಪಕರಿಸಿದ್ದಾರೆ. ರವಿಶಂಕರ್ ಅವರು ನಮ್ಮ ಮೇಲೆ ಪ್ರೀತಿ ತೋರಿಸಿ ವಿಶ್ವವಿದ್ಯಾಲಯದ ಮೂಲಕ ಆತ್ಮಕಥೆ ಪ್ರಕಟವಾಗಲು ಕಾರಣಕರ್ತರಾಗಿದ್ದಾರೆ, ಅವರಿಗೆ ವಿಶ್ವವಿದ್ಯಾಲಯದ ಪರವಾಗಿ, ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಇದರ ಜೊತೆಗೆ ರವಿಶಂಕರ್ ಅವರನ್ನು ನಮಗೆ ಪರಿಚಯಿಸಿ ಉಪಕರಿಸಿದವರು ಶ್ರೀ ರಾಜು ಅವರು. ಶ್ರೀ ರಾಜು ಅವರ ನೆರವಿಲ್ಲದೇ ಇದ್ದಲ್ಲಿ ಈ ಪುಸ್ತಕ ಪ್ರಕಟವಾಗುತ್ತಿರಲಿಲ್ಲ. ಶ್ರೀ ರಾಜು ಅವರಿಗೂ ಸಹ ಕೃತಜ್ಞತೆಗಳು ಸಲ್ಲಲೇಬೇಕು.
ಪ್ರಸ್ತುತ ಡಾ. ರಾಜಕುಮಾರ್ ಆತ್ಮಕತೆ 'ಕಥಾನಾಯಕನ ಕಥೆ’ಯು ಚೆನೈ ಮೂಲದ `ವಿಜಯಚಿತ್ರ’ಎಂಬ ಸಿನಿ ಮಾಸಪತ್ರಿಕೆಯಲ್ಲಿ 94 ಕಂತುಗಳಲ್ಲಿ ಎಂಟು ವರ್ಷಗಳ ಕಾಲ ಪ್ರಕಟವಾಯಿತು. (ವಿಜಯಚಿತ್ರದಲ್ಲಿ ಈ ಆತ್ಮಕಥೆ ಧಾರಾವಾಹಿಯಾಗಿ ಪ್ರಾರಂಭವಾದದ್ದು 1976 ಏಪ್ರಿಲ್ ತಿಂಗಳಲ್ಲಿ, ಸಂಪುಟ 2, ಸಂಚಿಕೆ 1. ಕೊನೆಯ ಭಾಗ ಪ್ರಕಟವಾದದ್ದು: ಮಾರ್ಚ್ 1994, ಸಂಪುಟ 9, ಸಂಚಿಕೆ 12, ಸಂಪಾದಕರು: ವಿಶ್ವಂ, ಉಪಸಂಪಾದಕರು: ಚಿ. ಸದಾಶಿವಯ್ಯನವರು, ಪ್ರಕಾಶನ: ಚಂದಮಾಮ ಪಬ್ಲಿಕೇಷನ್ಸ್, ಮದ್ರಾಸು 26) ಡಾ. ರಾಜಕುಮಾರ್ ಅವರು ಹೇಳಿದಂತೆ ಆತ್ಮಕಥೆಯನ್ನು ನಿರೂಪಿಸಿದವರು ಚಿ. ದತ್ತರಾಜ್ ಅವರು. ಚಿ. ದತ್ತರಾಜ್ ಅವರು ಚಿ. ಉದಯದಶಂಕರ್ ಅವರ ಕಿರಿಯ ಸಹೋದರ.
ಈ ಆತ್ಮಕಥೆಯ ಕೊನೆಯ ಕಂತು ಪ್ರಕಟವಾದದ್ದು 1984ರಲ್ಲಿ. 1984ರ ನಂತರದ ಡಾ. ರಾಜಕುಮಾರ್ ಅವರ ಬದುಕಿನ ವಿವರಗಳು ಈ ಪುಸ್ತಕದಲ್ಲಿಲ್ಲ. `ಕನ್ನಡದ ಜನ ವಿಜಯಚಿತ್ರ ಪತ್ರಿಕೆಯನ್ನು ಆ ಸಂದರ್ಭದಲ್ಲಿ ಖರೀದಿಸುತ್ತಿದ್ದುದು ಡಾ. ರಾಜ್ ಅವರ ಆತ್ಮಕತೆಯನ್ನು ಓದಲು. ವಿಜಯಚಿತ್ರದ ಪ್ರಸರಣದ ಸಂಖ್ಯೆಯೂ ಆ ಒಂದು ದಶಕದ ಅವಧಿಯಲ್ಲಿ ಹೆಚ್ಚಿತ್ತು’ ಎಂಬುದನ್ನು ಹಲವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದಾದ ನಂತರ ಈ ಆತ್ಮಕಥೆ ಪುಸ್ತಕ ರೂಪದಲ್ಲಿ ಪ್ರಕಟವಾಗಲೇ ಇಲ್ಲ.
ಐದು ದಶಕಗಳ ಕಾಲ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಿನಿಮಾ ಜಗತ್ತನ್ನು ಪೋಷಿಸಿದ ಪ್ರತಿಭಾಶಾಲಿ ಕಲಾವಿದನ ಆತ್ಮಚರಿತ್ರೆಯನ್ನು ಪ್ರಕಟಿಸಿದ್ದು ತಮಿಳು/ತೆಲುಗು ಮೂಲದ ಒಂದು ನಿಯತಕಾಲಿಕೆ. ಇದಾದ ನಂತರವಾದರೂ ಈ ಆತ್ಮಕಥೆ ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕಿತ್ತು. ಡಾ. ರಾಜಕುಮಾರ್ ಅವರು ನಮ್ಮ ಜೊತೆಗಿಲ್ಲ, ಅವರ ಆತ್ಮಕಥೆಯನ್ನು ನಿರೂಪಿಸಿದ ಶ್ರೀ ದತ್ತರಾಜ್ ಅವರೂ ಹಿಂದಿನ ವರ್ಷ ನಿಧನರಾದರು. ದತ್ತರಾಜ್ ಅವರ ಅಣ್ಣನ ಮಗ ಚಿತ್ರನಟ ಗುರುದತ್ (ಚಿ. ಉದಯಶಂಕರ್ ಅವರ ಮಗ) ಅವರನ್ನು ಸಂಪರ್ಕಿಸಿ `ಕಥಾನಾಯಕನ ಕಥೆ’ ಪುಸ್ತಕವನ್ನು ಪ್ರಕಟಿಸಲು ಅನುಮತಿಯನ್ನು ಕೇಳಿದೆವು. ಶ್ರೀ ಗುರುದತ್ ಅವರು ತುಂಬು ಮನಸ್ಸಿನಿಂದ ನಮಗೆ ಅನುಮತಿಯನ್ನು ನೀಡಿದರು. ಇದಲ್ಲದೆ ನಾಡೋಜ ಬರಗೂರು ರಾಮಚಂದ್ರಪ್ಪನವರ ಮೂಲಕ ಡಾ. ರಾಜಕುಮಾರ್ ಅವರ ಪುತ್ರ ರಾಘವೇಂದ್ರ ರಾಜಕುಮಾರ್ ಅವರನ್ನು ಸಂಪರ್ಕಿಸಿ ಪುಸ್ತಕ ಪ್ರಕಟಕಣೆಗೆ ಅನುಮತಿಯನ್ನು ಕೇಳಿದೆವು. ಶ್ರೀ ರಾಘವೇಂದ್ರ ರಾಜಕುಮಾರ್ ಅವರೂ ಸಂತೋಷದಿಂದ ಒಪ್ಪಿಗೆ ಸೂಚಿಸಿದರು. ಶ್ರೀ ಗುರುದತ್ ಮತ್ತು ಶ್ರೀ ರಾಘವೇಂದ್ರ ರಾಜಕುಮಾರ್ ಅವರಿಗೆ ನಮಸ್ಕಾರಗಳು
ವಿಜಯಚಿತ್ರದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಈ ಆತ್ಮಕಥೆಯ ಕೆಲವು ಭಾಗಗಳಿಗೆ ನಿರೂಪಕರು ಶೀರ್ಷಿಕೆಯನ್ನು ನೀಡಿರಲಿಲ್ಲ. ಅಂತಹ ಭಾಗಗಳಿಗೆ ನಾನು ಸೂಕ್ತವೆನ್ನಿಸುವ ಶೀರ್ಷಿಕೆಯನ್ನು ನೀಡಲು ಪ್ರಯತ್ನಿಸಿದ್ದೇನೆ. ಈ ಆತ್ಮಕಥೆಯ ಪ್ರಕಟಣೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಮಶಿವಮೂರ್ತಿವರು ವಿಶೇಷ ಆಸಕ್ತಿಯನ್ನು ತೋರಿಸಿ ನನಗೆ ಪ್ರೋತ್ಸಾಹಿಸಿದ್ದಾರೆ. ಕುಲಪತಿಯವರ ನಿರಂತರ ಒತ್ತಾಸೆ ಮತ್ತು ಮಾರ್ಗದರ್ಶನಗಳಿಂದ ಈ ಆತ್ಮಕಥೆಯ ಪ್ರಕಟಣೆ ಸಾಧ್ಯವಾಗಿದೆ. ಹಿಂದಿನ ಕುಲಸಚಿವರಾದ ಪ್ರೊ. ತಂಬಂಡ ವಿಜಯ ಪೂಣಚ್ಚ ಅವರ ಬೌದ್ಧಿಕ ಮತ್ತು ಆಡಳಿತಾತ್ಮಕ ಸಹಕಾರ ಅಮೂಲ್ಯವಾದದ್ದು. ಕನ್ನಡ ವಿಶ್ವವಿದ್ಯಾಲಯದ ಇಂದಿನ ಕುಲಸಚಿವರಾದ ಸಹೋದರ ಪ್ರೊ. ವಿರುಪಾಕ್ಷ ಪೂಜಾರಹಳ್ಳಿಯವರು ಸಹ ಪೀಠದ ಕೆಲಸಕಾರ್ಯಗಳಿಗೆ ಆಡಳಿತಾತ್ಮಕ ನೆರವನ್ನು ನೀಡಿದ್ದಾರೆ. ಪೀಠದ ಸಲಹಾ ಸಮಿತಿ ಸದಸ್ಯರಾದ ಪ್ರೊ. ಜಿ. ಪ್ರಶಾಂತ್ ನಾಯಕ್, ಡಾ. ಮಂಜುನಾಥ್ ಅದ್ದೆ, ಶ್ರೀ ಬಿ. ಎಂ. ಗಿರಿರಾಜ್ ಮತ್ತು ಶ್ರೀ ಪ್ರಕಾಶರಾಜ್ ಮೇಹು ಅವರ ಸಹಕಾರವೂ ದೊಡ್ಡದು. ಈ ಆತ್ಮಕಥೆಯನ್ನು ವೇಗವಾಗಿ ಗಣಕಕ್ಕೆ ಅಳವಡಿಸಿದ್ದು ಕೊಟ್ಟೂರಿನ ಕೊಟ್ರೇಶ್ ಅವರು. ಪುಟ ವಿನ್ಯಾಸ ಮಾಡಿದ್ದು ಶ್ರೀಮಾನ್ ಪ್ರಿಂಟೆಕ್ಸ್ ನ ಶ್ರೀ ಕಿಶೋರ್ ಅವರು. ಸುಂದರ ಮುಖಪುಟವನ್ನು ರಚಿಸಿಕೊಟ್ಟವರು ಮಿತ್ರರಾದ ಅರುಣ್ಕುಮಾರ್ ಅವರು, ಇವರೆಲ್ಲರಿಗೂ ಪೀಠದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಆತ್ಮಕಥೆಯನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರು, ಮಿತ್ರರೂ ಆದ ಪ್ರೊ. ಮಹದೇವಯ್ಯ ಮತ್ತು ಅವರ ಸಿಬ್ಬಂದಿಗಳಿಗೆ ಪೀಠದ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. `ಕಥಾನಾಯಕನ ಕಥೆ’ ಕೇವಲ ರಾಜಕುಮಾರ್ ಅವರ ಜೀವನದ ಕಥೆ ಮಾತ್ರವಲ್ಲ. ಇದು ನಮ್ಮ ಸಮಾಜದ ತಳಸ್ತರದ ಸಮುದಾಯದ ಸಾಮಾನ್ಯನೊಬ್ಬನ ಕಥನವೂ ಆಗಿದೆ. ಓದುತ್ತಾ ಹೋದಂತೆ ಇದು ನಮ್ಮ ಅಂತರಂಗವನ್ನು ತಾಕುತ್ತದೆ. ಇಂತಹ ಒಂದು ಚಾರಿತ್ರಿಕ ಮಹತ್ವದ ಕೃತಿಯನ್ನು ಪ್ರಕಟಿಸಲು ನನಗೆ ಅವಕಾಶ ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.
`ಕಥಾನಾಯಕನ ಕಥೆ’ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ರಾಜಕುಮಾರರ ಆತ್ಮಕಥೆಯು ಕನ್ನಡ ನೆಲದ ಜನಸಾಮಾನ್ಯನ ಆತ್ಮಕಥೆಯಂತೆ ಅನಾವರಣವಾಗುತ್ತದೆ. ಓದಿ... ಪ್ರತಿಕ್ರಿಯಿಸಿ...
- ಡಾ. ಎ. ಎಸ್. ಪ್ರಭಾಕರ
ಸಂಚಾಲಕರು
ನಾಡೋಜ ಡಾ. ರಾಜಕುಮಾರ್
ಅಧ್ಯಯನ ಪೀಠ
ಕನ್ನಡ ವಿಶ್ವವಿದ್ಯಾಲಯ, ಹಂಪಿ
#story #protagonist #life #extraordinary #Rajkumar #Kannadigas #ASPrabhakar #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಅಸಿಸ್ಟೆಂಟ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅರ್ಜಿ ಆಹ್ವಾನ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ರವರಿಂದ ಅಟೆಂಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾರ್ಚ್ 08 ಅರ್ಜಿ ಸಲ್ಲಿಸಲು ಕೊನೆಯ ದಿನ.
ಆಸಕ್ತರು “www.rbi.org.in/“ ಎಂಬ ಬ್ಯಾಂಕಿನ ಜಾಲತಾಣದಲ್ಲಿ “Recruitment for the post of Assistant – Panel Year 2025” ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ “www.rbi.org.in” ಎಂಬ ಬ್ಯಾಂಕಿನ ಜಾಲತಾಣವನ್ನು ಮಾತ್ರ ಸಂಪರ್ಕಿಸಬಹುದು.
#ReserveBankofIndia #invites #applications #posts #Assistant #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಇಸ್ರೇಲ್ ಪ್ರಧಾನಿ ನೆತನ್ಯಾಹು ಹತ್ಯೆ ಸುದ್ದಿಯ ಅಸಲಿಯತ್ತೇನು?
ವದಂತಿಗಳಿಗೆ ತೆರೆ ಎಳೆದ ಕಚೇರಿ!
ಜೆರುಸಲೆಂ/ದೆಹಲಿ: ಕಳೆದ ಕೆಲವು ಗಂಟೆಗಳಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕುರಿತು ಹರಡುತ್ತಿರುವ ಹತ್ಯೆಯ ವದಂತಿಗಳು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿವೆ. ಆದರೆ, ಈ ಸುದ್ದಿಗಳು ಕೇವಲ 'ಫೇಕ್ ನ್ಯೂಸ್' ಎಂದು ಇಸ್ರೇಲ್ ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ.
ಏನಿದು ಘಟನೆ?: ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೇ ಈ ವದಂತಿಗಳು ತಲೆ ಎತ್ತಿದ್ದವು. ಜೆರುಸಲೆಂನಲ್ಲಿರುವ ಪ್ರಧಾನಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ನೆತನ್ಯಾಹು ಅವರ ಸ್ಥಿತಿ ಗಂಭೀರವಾಗಿದೆ ಅಥವಾ ಅವರು ಮೃತಪಟ್ಟಿದ್ದಾರೆ ಎಂಬ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು.
ವಾಸ್ತವವೇನು?: ಸುರಕ್ಷಿತವಾಗಿದ್ದಾರೆ: ಇಸ್ರೇಲ್ ಸರ್ಕಾರದ ವಕ್ತಾರರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಧಾನಿ ನೆತನ್ಯಾಹು ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಮತ್ತು ದೇಶದ ಭದ್ರತಾ ಪರಿಸ್ಥಿತಿಯನ್ನು ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮೋದಿ-ನೆತನ್ಯಾಹು ಮಾತುಕತೆ: ಇಂದು (ಮಾರ್ಚ್ 2, 2026) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವ ಅಗತ್ಯತೆಯ ಬಗ್ಗೆ ಉಭಯ ನಾಯಕರು ಮಾತನಾಡಿದ್ದಾರೆ.
ಸ್ಥಳ ಭೇಟಿ: ದಾಳಿಯ ವದಂತಿಗಳ ನಂತರ ನೆತನ್ಯಾಹು ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಕ್ಷಿಪಣಿ ದಾಳಿಗೆ ತುತ್ತಾದ 'ಬೈಟ್ ಶೆಮೇಶ್' (Beit Shemesh) ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವದಂತಿ ನಂಬಬೇಡಿ: ಯುದ್ಧದ ಸಮಯದಲ್ಲಿ ಶತ್ರು ರಾಷ್ಟ್ರಗಳು ಜನರಲ್ಲಿ ಗೊಂದಲ ಮೂಡಿಸಲು ಇಂತಹ "ಮನೋವೈಜ್ಞಾನಿಕ ತಂತ್ರಗಳನ್ನು" (Psychological Warfare) ಬಳಸುತ್ತವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
#What #truth #behind #news #assassination #Israeli #PM #Netanyahu #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಅಣ್ಣಾವ್ರ ಅಭಿಮಾನಿಗಳ ಬಹು ದಿನಗಳ ಆಸೆ ಈಡೇರುವ ದಿನ ಸನ್ನಿಹಿತ
ಅಣ್ಣಾವ್ರ ಬಗ್ಗೆ ನನ್ನ "ಅಂತರಂಗದ ಅಣ್ಣ" ಪುಸ್ತಕವೂ ಸೇರಿದಂತೆ ನೂರಾರು ಪುಸ್ತಕಗಳು ಬಂದಿವೆ, ಮುಂದೆ ಇನ್ನೂ ಎಷ್ಟೋ ಪುಸ್ತಕಗಳು ಬರಬಹುದು. ಆದರೆ ಕಳೆದ 70-80ರ ದಶಕದಲ್ಲಿ "ವಿಜಯ ಚಿತ್ರ" ನಿಯತಕಾಲಿಕೆಗೆ ಸ್ವತಃ ಡಾ.ರಾಜಕುಮಾರ್ ಅವರೇ ಕುಳಿತು ಹೇಳಿ, ಚಿ.ಉದಯಶಂಕರ್ ಅವರ ಸಹೋದರ, ಸಿನಿಮಾ ನಿರ್ದೇಶಕ ಚಿ.ದತ್ತರಾಜ್ ಅವರ ಬಳಿ ಬರೆಸಿದ "ಕಥಾನಾಯಕನ ಕಥೆ" ಅನ್ನುವ ಧಾರಾವಾಹಿ ರೂಪದ ಅಣ್ಣಾವ್ರ ಆತ್ಮ ಕಥನ ಆಗ ಓದಿದ್ದವರನ್ನು ಬಿಟ್ಟರೆ ಇನ್ಯಾರಿಗೂ ಲಭ್ಯವಿರಲಿಲ್ಲ!
ಬಹಳಷ್ಟು ಅಭಿಮಾನಿಗಳು ಅದನ್ನು ಓದಲು ಕಾತುರರಾಗಿದ್ದಾರೆ. ನಾನು ಇದನ್ನು ಪುಸ್ತಕ ರೂಪದಲ್ಲಿ ತರಲು ಬಹಳಷ್ಟು ಪ್ರಯತ್ನಿಸಿದ್ದೆ. ಆದರೆ ಸಂಪೂರ್ಣ ಬರವಣಿಗೆ ದೊರಕದ ಕಾರಣ ಅದು ಸಾಧ್ಯವಾಗಿರಲಿಲ್ಲ. ನನ್ನನ್ನು ಹಂಪಿ ವಿಶ್ವವಿದ್ಯಾಲಯದ ಡಾ.ರಾಜಕುಮಾರ್ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯನನ್ನಾಗಿ ನೇಮಿಸಿದ ಮೇಲೆ ಈ ಕೆಲಸ ಆಗಲೇಬೇಕೆಂದು ಹಟ ತೊಟ್ಟು ಎಲ್ಲಾ ಪ್ರತಿಗಳನ್ನು ಹುಡಕ ತೊಡಗಿದೆವು.
ಕಡೆಗೆ ಬೆಂಗಳೂರಿನ ರವಿಶಂಕರ್ ಅನ್ನುವ ಅಣ್ಣಾವ್ರ ಅಭಿಮಾನಿಯೊಬ್ಬರ ಬಳಿ ಸಂಪೂರ್ಣ ಬರಹಗಳಿವೆ ಅನ್ನುವ ವಿಷಯ ಇನ್ನೊಬ್ಬ ಅಭಿಮಾನಿಗಳಾಗ ಕೆ ಇ ಬಿ ರಾಜು ಅನ್ನುವವರಿಂದ ತಿಳಿದಾಗ ಅವರ ಮೂಲಕ ರವಿಶಂಕರ್ ಅವರನ್ನು ನಾನು ಮತ್ತು ಅಧ್ಯಯನ ಪೀಠದ ಅಧ್ಯಕ್ಷರು, ಚಿಂತಕರು, ಸಾಹಿತಿಗಳು ಮತ್ತು ಪ್ರಾಧ್ಯಾಪಕರೂ ಆದ ಶ್ರೀ ಎ ಎಸ್ ಪ್ರಭಾಕರ್ ಅವರು ಭೇಟಿಮಾಡಿ, ಆ ಪ್ರತಿಗಳನ್ನು ಪಡೆದೆವು. ಅದರ ಪ್ರತಿಫಲ ಈಗ "ಕಥಾನಾಯಕನ ಕಥೆ" ಪುಸ್ತಕ ರೆಡಿಯಾಗಿದೆ.
ಇದೇ ತಿಂಗಳು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾಗುವುದು ನಿರ್ಧಾರವಾಗಿದೆ. ಶಿವರಾಜ್ಕುಮಾರ್ ಅವರ ಡೇಟಿಗಾಗಿ ಕಾಯುತ್ತಿದ್ದೇವೆ, ಅವರ ಡೇಟ್ ನೋಡಿಕೊಂಡು ಬಿಡುಗಡೆ ಕಾರ್ಯ ಹಮ್ಮಿಕೊಳ್ಳುತ್ತೇವೆ.
- ಪ್ರಕಾಶ್ ರಾಜ್ ಮೇಹು, ನಿರ್ದೇಶಕ
#day #cherished #wish #Rajkumar #fans will #come #true #near #PrakashRajMehu #sandalwood #entertainment #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಮಾಲ್ಗುಡಿ ಕಿಚನ್: ಆರು ವಿಧದ ರುಚಿಕರ ದೋಸೆಗಳನ್ನು ಮಾಡುವ ಸರಳ ವಿಧಾನ
ನಿಮ್ಮ ಅಡುಗೆ ಮನೆಯಲ್ಲೇ ಹೋಟೆಲ್ ರುಚಿಯನ್ನು ತರಲು ಈ ಸವಿವರವಾದ ಹಂತಗಳನ್ನು ಅನುಸರಿಸಿ.
1. ಮಸಾಲ ದೋಸೆ (Masala Dosa)
ಸಾಮಗ್ರಿಗಳು: ಅಕ್ಕಿ (2 ಕಪ್), ಉದ್ದಿನ ಬೇಳೆ (1/2 ಕಪ್), ಕಡಲೆ ಬೇಳೆ (2 ಚಮಚ), ಮೆಂತ್ಯ (1/2 ಚಮಚ), ಆಲೂಗಡ್ಡೆ, ಈರುಳ್ಳಿ, ಹಸಿಮೆಣಸು, ಅರಿಶಿನ.
ಹಂತ 1: ಅಕ್ಕಿ ಮತ್ತು ಬೇಳೆಗಳನ್ನು 4-6 ಗಂಟೆಗಳ ಕಾಲ ಚೆನ್ನಾಗಿ ನೆನೆಸಿ.
ಹಂತ 2: ನೆನೆದ ಮಿಶ್ರಣವನ್ನು ನುಣ್ಣಗೆ ರುಬ್ಬಿ, ಕನಿಷ್ಠ 8 ಗಂಟೆಗಳ ಕಾಲ ಹುದುಗಲು (Ferment) ಬಿಡಿ.
ಹಂತ 3: ಕಾದ ಹಂಚಿನ ಮೇಲೆ ಹಿಟ್ಟನ್ನು ತೆಳುವಾಗಿ ಹರಡಿ, ತುಪ್ಪ ಅಥವಾ ಎಣ್ಣೆ ಹಾಕಿ. ನಿಮಗೆ ಅಗತ್ಯವಿರುವಷ್ಟು ಬೇಯಿಸಿ.
ಹಂತ 4: ದೋಸೆಯ ಮಧ್ಯದಲ್ಲಿ ಸಿದ್ಧಪಡಿಸಿದ ಆಲೂಗಡ್ಡೆ ಪಲ್ಯವನ್ನು ಇಟ್ಟು, ಮಡಚಿ ಬಿಸಿಬಿಸಿಯಾಗಿ ಬಡಿಸಿ.
2. ಸೆಟ್ ದೋಸೆ (Set Dosa)
ಸಾಮಗ್ರಿಗಳು: ಅಕ್ಕಿ (2 ಕಪ್), ಉದ್ದಿನ ಬೇಳೆ (1/2 ಕಪ್), ಮೆಂತ್ಯ (1 ಚಮಚ), ಅವಲಕ್ಕಿ (1/2 ಕಪ್).
ಹಂತ 1: ಅಕ್ಕಿ, ಬೇಳೆ ಮತ್ತು ಅವಲಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿಡಿ.
ಹಂತ 2: ಇದನ್ನು ನುಣ್ಣಗೆ ರುಬ್ಬಿ, ರಾತ್ರಿಯಿಡೀ ಹುದುಗಲು ಬಿಡಿ.
ಹಂತ 3: ಹಂಚಿನ ಮೇಲೆ ಹಿಟ್ಟನ್ನು ದಪ್ಪವಾಗಿ ಹಾಕಿ (ಹರಡಬೇಡಿ), ಮುಚ್ಚಳ ಮುಚ್ಚಿ ಬೇಯಿಸಿ.
ಹಂತ 4: ದೋಸೆ ಮೆತ್ತಗಾದಾಗ ತೆಗೆದು ಸಾಗು ಅಥವಾ ಚಟ್ನಿಯೊಂದಿಗೆ ಸವಿಯಿರಿ.
3. ನೀರ್ ದೋಸೆ (Neer Dosa)
ಸಾಮಗ್ರಿಗಳು: ಸೋನಾ ಮಸೂರಿ ಅಕ್ಕಿ (2 ಕಪ್), ಕಾಯಿತುರಿ (1/2 ಕಪ್), ಉಪ್ಪು.
ಹಂತ 1: ಅಕ್ಕಿಯನ್ನು ಕೇವಲ 2 ಗಂಟೆಗಳ ಕಾಲ ನೆನೆಸಿ.
ಹಂತ 2: ಅಕ್ಕಿ ಮತ್ತು ಕಾಯಿತುರಿಯನ್ನು ಸ್ವಲ್ಪ ಉಪ್ಪು ಮತ್ತು ಹೆಚ್ಚು ನೀರು ಸೇರಿಸಿ ಹಾಲಿನಂತೆ ತೆಳುವಾಗಿ ರುಬ್ಬಿಕೊಳ್ಳಿ.
ಹಂತ 3: ಕಾದ ಹಂಚಿನ ಮೇಲೆ ನೀರನ್ನು ಚಿಮುಕಿಸಿದಂತೆ ಹರಡಿ, ಮುಚ್ಚಳ ಮುಚ್ಚಿ ಬೇಯಿಸಿ.
ಹಂತ 4: ಈ ದೋಸೆಯನ್ನು ತಿರುಗಿಸಿ ಹಾಕುವ ಅವಶ್ಯಕತೆಯಿಲ್ಲ. ಮಡಚಿ ತಟ್ಟೆಗೆ ವರ್ಗಾಯಿಸಿ.
4. ರವೆ ದೋಸೆ (Rava Dosa)
ಸಾಮಗ್ರಿಗಳು: ಚಿರೋಟಿ ರವೆ (1 ಕಪ್), ಅಕ್ಕಿ ಹಿಟ್ಟು (1 ಕಪ್), ಮೈದಾ (1/2 ಕಪ್), ಜೀರಿಗೆ, ಹಸಿಮೆಣಸು.
ಹಂತ 1: ರವೆ, ಅಕ್ಕಿ ಹಿಟ್ಟು ಮತ್ತು ಮೈದಾವನ್ನು ಮಜ್ಜಿಗೆಯಂತೆ ತೆಳುವಾಗಿ ನೀರು ಸೇರಿಸಿ ಬೆರೆಸಿ.
ಹಂತ 2: ಇದಕ್ಕೆ ಜೀರಿಗೆ, ಹಸಿಮೆಣಸು, ಶುಂಠಿ ಸೇರಿಸಿ 30 ನಿಮಿಷ ನೆನೆಯಲು ಬಿಡಿ.
ಹಂತ 3: ಕಾದ ಹಂಚಿನ ಮೇಲೆ ಸುತ್ತಲೂ ಹಿಟ್ಟನ್ನು ಸುರಿಯಿರಿ (ತೆಳುವಾಗಿರಲಿ).
ಹಂತ 4: ಎಣ್ಣೆ ಹಾಕಿ ಗರಿಗರಿಯಾಗುವವರೆಗೆ ಬೇಯಿಸಿ.
5. ರಾಗಿ ದೋಸೆ (Ragi Dosa)
ಸಾಮಗ್ರಿಗಳು: ರಾಗಿ ಹಿಟ್ಟು (1.5 ಕಪ್), ಅಕ್ಕಿ ಹಿಟ್ಟು (1/2 ಕಪ್), ಹುಳಿ ಮೊಸರು (1/2 ಕಪ್), ಈರುಳ್ಳಿ, ಕೊತ್ತಂಬರಿ.
ಹಂತ 1: ರಾಗಿ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಮೊಸರನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ಕಲಸಿ.
ಹಂತ 2: ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಮತ್ತು ಸೊಪ್ಪನ್ನು ಸೇರಿಸಿ.
ಹಂತ 3: ಹಂಚಿನ ಮೇಲೆ ಹಿಟ್ಟನ್ನು ಹರಡಿ, ಎರಡು ಬದಿಗಳಲ್ಲಿ ಚೆನ್ನಾಗಿ ಬೇಯಿಸಿ.
6. ಪೇಪರ್ ದೋಸೆ (Paper Dosa)
ಸಾಮಗ್ರಿಗಳು: ಅಕ್ಕಿ (3 ಕಪ್), ಉದ್ದಿನ ಬೇಳೆ (1 ಕಪ್), ಕಡಲೆ ಬೇಳೆ (2 ಚಮಚ), ಮೆಂತ್ಯ (1 ಚಮಚ).
ಹಂತ 1: ಅಕ್ಕಿ-ಬೇಳೆಗಳನ್ನು 6 ಗಂಟೆ ನೆನೆಸಿ, ಅತ್ಯಂತ ನುಣ್ಣಗೆ ರುಬ್ಬಿ 8-10 ಗಂಟೆ ಹುದುಗಿಸಿ.
ಹಂತ 2: ದೊಡ್ಡ ಹಂಚಿನ ಮೇಲೆ ಹಿಟ್ಟನ್ನು ಅತ್ಯಂತ ತೆಳುವಾಗಿ ಹರಡಿ.
ಹಂತ 3: ದೋಸೆ ಕಂದು ಬಣ್ಣಕ್ಕೆ ಬರುವವರೆಗೆ ಬೇಯಿಸಿ, ನಂತರ ಕೋನ್ ಆಕಾರದಲ್ಲಿ ಮಡಚಿ.
ವಿಶೇಷ ಸೂಚನೆ: ಪರಿಪೂರ್ಣ ದೋಸೆಗಾಗಿ ಸರಿಯಾದ ಹುದುಗುವಿಕೆ ಮತ್ತು ಕಾದ ಕಾವಲಿ ಅತಿ ಮುಖ್ಯ.
#simple #way #make #six #types #delicious #dosas #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಫ್ಯಾಕ್ಟ್ ಚೆಕ್: ಅನಂತಕುಮಾರ್ ಹೆಗಡೆ ಹೆಸರಿನಲ್ಲಿ ಹರಡುತ್ತಿರುವ ಮೀಸಲಾತಿ ಕುರಿತ ಪೋಸ್ಟ್ನ ಅಸಲಿಯತ್ತೇನು?
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳ ತಾಣವಾಗಿ ಮಾರ್ಪಡುತ್ತಿವೆ. ಅದರಲ್ಲೂ ರಾಜಕೀಯ ನಾಯಕರ ಹೆಸರಿನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಸೃಷ್ಟಿಸಿ ಹರಿಬಿಡುವುದು ಸಾಮಾನ್ಯವಾಗಿದೆ. ಪ್ರಸ್ತುತ, ಉತ್ತರ ಕನ್ನಡದ ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ ಅವರ ಭಾವಚಿತ್ರವಿರುವ ಪೋಸ್ಟರ್ವೊಂದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗುತ್ತಿರುವ ವಿಷಯವೇನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ನಲ್ಲಿ ಹೀಗಿದೆ: "ಬ್ರಾಹ್ಮಣರು ನಾವು ಬೇಡಿ ತಿನ್ನುವವರಲ್ಲ, ಮೀಸಲಾತಿ ಎಂಬ ಭಿಕ್ಷೆ ನಮಗೆ ಬೇಕಾಗಿಲ್ಲ".
ಈ ಹೇಳಿಕೆಯು ಬ್ರಾಹ್ಮಣ ಸಮುದಾಯದ ಸ್ವಾಭಿಮಾನದ ಹೆಸರಿನಲ್ಲಿ ಹಂಚಿಕೆಯಾಗುತ್ತಿದ್ದು, ಇದು ಅನಂತಕುಮಾರ್ ಹೆಗಡೆಯವರೇ ನೀಡಿದ ಹೇಳಿಕೆ ಎಂದು ಬಿಂಬಿಸಲಾಗುತ್ತಿದೆ. ಇದು ಸಮುದಾಯದ ಒಳಗೆ ಮತ್ತು ಹೊರಗೆ ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ. ಇನ್ನು ಕೆಲವರು ಶತಮಾನಗಳ ಕಾಲ ಮೀಸಲಾತಿ ಅನುಭವಿಸಿ ಈಗ ಬೇಡ ಎನ್ನುವುದು ಹೇಗೆ? ಎಂದು ಪ್ರಶ್ನಿಸಿದರೆ, ಇನ್ನೂ ಕೆಲವರು EWS ಮೀಸಲಾತಿ ಕುರಿತು ಚರ್ಚೆ ನಡೆಸುವಂತೆ ಸವಾಲೆಸೆದಿದ್ದಾರೆ.
ನಮ್ಮ ಫ್ಯಾಕ್ಟ್ ಚೆಕ್ ತಂಡ ಈ ಕೆಳಗಿನ ಆಯಾಮಗಳಲ್ಲಿ ತನಿಖೆ ನಡೆಸಿದೆ:
1. ಡಿಜಿಟಲ್ ಹೆಜ್ಜೆಗುರುತುಗಳ ಪರಿಶೀಲನೆ: ಅನಂತಕುಮಾರ್ ಹೆಗಡೆಯವರ ಅಧಿಕೃತ ಫೇಸ್ಬುಕ್ ಪುಟ ಮತ್ತು ಎಕ್ಸ್ (ಟ್ವಿಟರ್) ಖಾತೆಗಳನ್ನು ಕಳೆದ ಆರು ತಿಂಗಳ ಅವಧಿಯಿಂದ ಇಂದಿನವರೆಗೆ ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗಿದೆ. ಎಲ್ಲಿಯೂ ಅವರು ಇಂತಹ ಹೇಳಿಕೆಯನ್ನು ಲಿಖಿತವಾಗಿ ಅಥವಾ ವಿಡಿಯೋ ರೂಪದಲ್ಲಿ ನೀಡಿರುವುದು ಕಂಡುಬಂದಿಲ್ಲ.
2. ಮಾಧ್ಯಮ ಅರ್ಕೈವ್ಗಳ ಹುಡುಕಾಟ: ಕರ್ನಾಟಕದ ಪ್ರಮುಖ ದಿನಪತ್ರಿಕೆಗಳು, ಸುದ್ದಿ ವಾಹಿನಿಗಳು ಮತ್ತು ಡಿಜಿಟಲ್ ಮಾಧ್ಯಮಗಳ ದಾಖಲೆಗಳನ್ನು ಪರಿಶೀಲಿಸಲಾಯಿತು. ಅನಂತಕುಮಾರ್ ಹೆಗಡೆಯವರು ತಮ್ಮ ನೇರ ನುಡಿಗಳಿಗೆ ಹೆಸರುವಾಸಿಯಾದವರಾದರೂ, ಮೀಸಲಾತಿಯನ್ನು "ಭಿಕ್ಷೆ" ಎಂದು ಕರೆದ ಯಾವುದೇ ವರದಿ ಲಭ್ಯವಿಲ್ಲ. ಒಂದು ವೇಳೆ ಇಂತಹ ಸಂವೇದನಾಶೀಲ ಹೇಳಿಕೆ ನೀಡಿದ್ದಲ್ಲಿ, ಅದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು.
3. ಫೋಟೋ ಫೋರೆನ್ಸಿಕ್ ಮತ್ತು ಎಡಿಟಿಂಗ್: ವೈರಲ್ ಆಗಿರುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ಬಳಸಿರುವ ಫಾಂಟ್ (ಅಕ್ಷರಶೈಲಿ) ಮತ್ತು ಹಿನ್ನೆಲೆಯ ಬಣ್ಣವು ಅಧಿಕೃತ ಪ್ರಕಟಣೆಗಳಿಗಿಂತ ಭಿನ್ನವಾಗಿದೆ. ಹಳೆಯ ಫೋಟೋ ಒಂದನ್ನು ಬಳಸಿ, ಅದರ ಮೇಲೆ ಕಿಡಿಗೇಡಿಗಳು ಈ ಪಠ್ಯವನ್ನು ಸೇರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಸತ್ಯಾಂಶ (The Reality): ಅನಂತಕುಮಾರ್ ಹೆಗಡೆಯವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅವರು ಮೀಸಲಾತಿ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಈ ರೀತಿ ಅವಹೇಳನ ಮಾಡಿಲ್ಲ. ಈ ಹಿಂದೆ ಅವರು ಸಂವಿಧಾನ ಮತ್ತು ಇತರ ವಿಷಯಗಳ ಬಗ್ಗೆ ನೀಡಿದ್ದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ ಅಥವಾ ಹೊಸದಾಗಿ ಇಂತಹ ಸುಳ್ಳು ಸಂದೇಶಗಳನ್ನು ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ತೀರ್ಪು (Verdict): ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಸಂಪೂರ್ಣ ನಕಲಿ (Fake). ಅನಂತಕುಮಾರ್ ಹೆಗಡೆಯವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಇದು ಸಾರ್ವಜನಿಕರನ್ನು ದಾರಿ ತಪ್ಪಿಸಲು ಸೃಷ್ಟಿಸಿದ ಎಡಿಟೆಡ್ ಪೋಸ್ಟ್ ಆಗಿದೆ.
#FactCheck #authenticity #post about #reservation #circulated #name #AnanthKumarHegde #malgudiexpress #malgudinews #news #TopNews













