#📜ಪ್ರಚಲಿತ ವಿದ್ಯಮಾನ📜
ಸಂಪತ್ತಿಗೆ ಸವಾಲ್ ಬರೀ ರಾಜಕುಮಾರ್ ಸಿನಿಮಾ ಅಲ್ಲ!
1974 ನಾನು ಹುಟ್ಟಿದ್ದೆ ಆದರೆ ಚಿಕ್ಕ ಹುಡುಗ. ರೀ-ರಿಲೀಸ್ನಲ್ಲಿ,ಮೈಸೂರಿನಲ್ಲಿ ಈ ಸಿನಿಮಾ ನೋಡಿದ ನೆನಪಿದೆ. ಆಗಿನ ಕಾಲದಲ್ಲಿ ರಾಜಕುಮಾರ್ ಸಿನಿಮಾ ನೋಡುವುದೆ ಒಂದು ಸಂಭ್ರಮ. ಹಬ್ಬದ ವಾತಾವರಣ. ಕಳೆದ ತಿಂಗಳು ಅಂತರರಾಷ್ಟ್ರೀಯ ಬೆಂಗಳೂರು ಚಲನಚಿತ್ರೋತ್ಸವದಲ್ಲಿ "ಶಂಕರ್ ಗುರು" ಸಿನಿಮಾವನ್ನು ತುಂಬಿದ ಗೃಹದಲ್ಲಿ ಅಭಿಮಾನಿಗಳ ಸಿಳ್ಳೆ-ಚಪ್ಪಾಳೆಗಳ ನಡುವೆ ನೋಡಿದ ನೆನಪು ಮಾಸುವ ಮುನ್ನವೆ ಇಂದು ಪ್ರಸನ್ನ ಚಿತ್ರಮಂದಿರದಲ್ಲಿ "ಸಂಪತ್ತಿಗೆ ಸವಾಲ್" ನೋಡುವ ಅವಕಾಶ. ಪ್ರಸನ್ನ ಚಿತ್ರಮಂದಿರದಲ್ಲಿ 70-80ರ ದಶಕ ಮರು ಸೃಷ್ಟಿಯಾದಂತಿತ್ತು. ತಮ್ಮ ಬಾಲ್ಯದ,ಯೌವನದ ದಿನಗಳಲ್ಲಿ ಸಿನಿಮಾ ನೋಡಿ, ಸಂಭ್ರಮಿಸಿದ್ದವರೇ ಹೆಚ್ಚಾಗಿ ಬಂದಿದ್ದರು, ಕೆಲವರು ತಮ್ಮ ಮಕ್ಕಳಿಗೆ,ಮೊಮ್ಮಕ್ಕಳಿಗೆ ತಮ್ಮ ಕಾಲದ ವೈಭವ ಹೇಗಿತ್ತು ಅನ್ನುವುದನ್ನು ತೋರಿಸಲೆಂದು ಕರೆತಂದಂತಿತ್ತು. ಈಗಿನ ಜನರೇಷನ್ನಿನ ಮಕ್ಕಳಿಗೆ ರಾಜಕುಮಾರ್ ಅಂದರೆ ಪುನೀತ್ ರಾಜಕುಮಾರ್ ಅವರ ಅಪ್ಪ, ಅಂತವರಿಗೆ ಪುನೀತ್ ರಾಜಕುಮಾರ್ ಅಂದರೆ ರಾಜಕುಮಾರ್ ಅವರ ಮಗ ಅನ್ನುವುದನ್ನು ತಿಳಿಸಲು ಅಣ್ಣಾವ್ರ ಸಿನಿಮಾಗಳನ್ನು ತೋರಿಸಬೇಕು ಅನ್ನುವುದು ನನ್ನ ಬಯಕೆ.
ಕನ್ನಡ ಚಲನಚಿತ್ರ ರಂಗ ಎಂದೋ ಹುಟ್ಟಿತ್ತು, ಆದರೆ ಅದು ಬೆಳೆದದ್ದು 1954ರ "ಬೇಡರ ಕಣ್ಣಪ್ಪ"ನ ಜೊತೆ. ರಾಜಕುಮಾರರಿಂದಲೇ ಬೆಳೆದು, ರಾಜಕುಮಾರರಿಗಾಗಿಯೇ ಉಳಿದ ಈ ಚಿತ್ರರಂಗ, ಅವರ ಜೊತೆಯೇ ಮುಗಿಯಿತೇನೋ ಅನ್ನುವುದು ಹಲವರ ಅನುಮಾನ! ಅದಕ್ಕೆ ಕಾರಣ ಇಲ್ಲದಿಲ್ಲ. ಹಿಂದಿ ಚಿತ್ರರಂಗದಲ್ಲಿ ದಿಲೀಪ್ ಕುಮಾರ್, ರಾಜ್ ಕಪೂರ್ ಅವರ ನಂತರ ಅಮಿತಾಭ್ ಬಚ್ಚನ್ ಯುಗ ಶುರುವಾಯ್ತು. ತಮಿಳಿನಲ್ಲಿ ಎಂ ಜಿ ಆರ್, ಶಿವಾಜಿ ಗಣೇಶನ್ ನಂತರ ಕಮಲಹಾಸನ್, ರಜನೀಕಾಂತ್ ಯುಗ. ತೆಲುಗಿನಲ್ಲಿ ಎನ್ ಟಿ ಆರ್, ಎ ಎನ್ ಆರ್ ನಂತರ ಚಿರಂಜೀವಿ. ಮಲಯಾಳಮ್ ನಲ್ಲಿ ಪ್ರೇಂ ನಜೀರ್ ನಂತರ ಮಮ್ಮುಟ್ಟಿ, ಮೋಹನ್ ಲಾಲ್. ಹೀಗೆ ಬದಲಾಗುತ್ತ, ಬೆಳೆಯುತ್ತ ಬಂತು. ಕರ್ನಾಟಕದಲ್ಲಿ ಮಾತ್ರ ರಾಜಕುಮಾರ್ ಯುಗ ಅನ್ನುವುದು ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಕಾಲದಲ್ಲೂ ಹಾಗೇ ಇತ್ತು. ಶಿವರಾಜ್ಕುಮಾರ್, ರವಿಚಂದ್ರನ್ ಕಾಲದಲ್ಲೂ ಅದು ಬದಲಾಗಲಿಲ್ಲ. ಅವರು ಬದುಕಿರುವವರೆಗೂ ಅವರೇ ನಂಬರ್ ಒನ್. ಸತತ ಮೂರು ತಲೆಮಾರಿಗೂ ಅವರೊಬ್ಬರೇ ನಾಯಕ!!!
ಅವರ ಅಸಾಧಾರಣ ಅಭಿನಯ ಸಾಮರ್ಥ್ಯ, ಆ ವರ್ಸಟ್ಯಾಲಿಟಿಯನ್ನು ಸರಿಗಟ್ಟುವುದಿರಲಿ, ಅವರ ಹತ್ತಿರಕ್ಕೂ ಸುಳಿಯಲು ಯಾರಿಗೂ ಸಾಧ್ಯವಾಗಲಿಲ್ಲ ಅನ್ನುವುದು ವಾಸ್ತವ. ಅವರನ್ನು ನೋಡಿದ ಕನ್ನಡಿಗರಾರಿಗೂ ಆ ಸ್ಥಾನದಲ್ಲಿ ಮತ್ಯಾರನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ ಅನ್ನುವುದೇ ಇಂದಿನ ಕನ್ನಡ ಚಿತ್ರರಂಗದ ಅಧೋಗತಿಗೆ ಕಾರಣವಿರಬಹುದೆ ಅನ್ನುವುದು ನನ್ನ ಅನುಮಾನ.
ಇನ್ನು ಈ "ಸಂಪತ್ತಿಗೆ ಸವಾಲ್" ಸಿನಿಮಾಗೆ ಸಂಬಂಧಿಸಿದ, ನನ್ನ ಕಣ್ಣ ಮುಂದೆ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ಶಿವರಾಜ್ಕುಮಾರ್ ಅವರ ಕೆಲವು ಅಭಿಮಾನಿಗಳು ಅಣ್ಣಾವ್ರ ಬಳಿ ಬಂದು "ಶಿವರಾಜ್ಕುಮಾರ್ ಅವರ ನಾಯಕತ್ವದಲ್ಲಿ ಸಂಪತ್ತಿಗೆ ಸವಾಲ್ ಸಿನಿಮಾವನ್ನು ರೀಮೇಕ್ ಮಾಡಿದರೆ ಹೇಗೆ" ಎಂದು ಕೇಳಿದರು. ಆಗ ಅಣ್ಣಾವ್ರು "ಭದ್ರನ ಪಾತ್ರವನ್ನೇನೋ ಶಿವಣ್ಣನ ಹತ್ರ ಮಾಡುಸ್ತೀರೀ... ವಜ್ರಮುನಿಯವರನ್ನ ಎಲ್ಲಿಂದ ತರ್ತೀರಿ? ಬಾಲಣ್ಣನವರನ್ನ ಎಲ್ ಕರ್ಕೊಂಡ್ ಬರ್ತೀರಿ? ಸಂಪತ್ತಿಗೆ ಸವಾಲ್ ಬರೀ ರಾಜಕುಮಾರ್ ಸಿನಿಮಾ ಅಲ್ಲ! ಅವರೆಲ್ಲರು ಇದ್ದದ್ರಿಂದ್ಲೇ ಅದು ಒಳ್ಳೆಯ ಸಿನಿಮಾ, ಈ ಥರ ವ್ಯರ್ಥ ಪ್ರಯತ್ನ ಮಾಡ್ಬೇಡಿ" ಅಂದ್ರು!!!
- ಪ್ರಕಾಶ್ ರಾಜ್ ಮೇಹು, ನಿರ್ದೇಶಕ
#SapattigeSaval #Rajkumar #movie #PrakashRajMehu #malgudiexpress #malgudinews #news #TopNews


