Malgudi Express
657 views
1 days ago
#📜ಪ್ರಚಲಿತ ವಿದ್ಯಮಾನ📜 ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯ ಮಳೆ ಕೊರತೆ ಹಿನ್ನೆಲೆ ದಾವಣಗೆರೆ: ಜಿಲ್ಲೆಯಲ್ಲಿ ಕೃತಿಕಾ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಶೇ. 100ರಷ್ಟು ಬರಗಾಲ ಆವರಿಸುವ ಆತಂಕ ಎದುರಾಗಿದ್ದು, ರೈತರು ಯಾವುದೇ ಜಮೀನನ್ನು ಪಾಳು ಬಿಡದಂತೆ ಕಡ್ಡಾಯವಾಗಿ ಬರ ನಿರೋಧಕ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು, ಕುಡಿಯುವ ನೀರು, ಉದ್ಯೋಗ ಸೃಷ್ಠಿ, ಮೇವು ಸಂಗ್ರಹಣೆಗೆ ಆದ್ಯತೆ ನೀಡಲು ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬರಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ತಹಶೀಲ್ದಾರರು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿಸ್ತರಣಾಧಿಕಾರಿಗಳು, ಪಿಡಿಒ ಹಾಗೂ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿರಬೇಕು ಮತ್ತು ಪ್ರತಿ 15 ದಿನಗಳಿಗೊಮ್ಮೆ ರೈತರೊಂದಿಗೆ ಸಭೆ ನಡೆಸಿ ನೀರು, ಮೇವು, ರಸಗೊಬ್ಬರ ಹಾಗೂ ಬೆಳೆಗಳ ಬಗ್ಗೆ ಚರ್ಚಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ವಿ.ಎ ಮತ್ತು ಆರ್.ಐಗಳು ಖುದ್ದಾಗಿ ಪರಿಶೀಲಿಸಬೇಕು. ತಹಶೀಲ್ದಾರರು ಕನಿಷ್ಠ 5 ಕೇಂದ್ರಗಳಿಗಾದರೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ರೈತರ ಮನವೊಲಿಸಿ ನವಧಾನ್ಯಗಳು, ಊರಲೆ, ನವಣೆ, ಶೇಂಗಾ, ದ್ವಿದಳ ಧಾನ್ಯಗಳು, ಕಡಲೇಕಾಯಿ, ತೊಗರಿ, ಸೋಯಾ ಹಾಗೂ ಸಜ್ಜೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಆಗಸ್ಟ್ ಅಥವಾ ಅಕ್ಟೋಬರ್ ಅಂತ್ಯದೊಳಗೆ ಹುರುಳಿ ಬೆಳೆಯನ್ನು ಬಿತ್ತನೆ ಮಾಡಲು ಅವಕಾಶವಿದ್ದು, ಜಮೀನನ್ನು ಖಾಲಿ ಬಿಡದಂತೆ ನೋಡಿಕೊಳ್ಳಬೇಕು ಮತ್ತು ಅತಿ ಹೆಚ್ಚು ನೀರು ಬೇಡುವ ಬಾಳೆ, ಅಡಿಕೆ ಮುಂತಾದ ಹೊಸ ತೋಟಗಾರಿಕಾ ಬೆಳೆಗಳ ನಾಟಿಯನ್ನು ಮುಂದೂಡುವಂತೆ ರೈತರಲ್ಲಿ ಮನವೊಲಿಸಬೇಕು ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಬೆಳೆ ವಿಮೆ (Crop Insurance) ಪ್ರಕ್ರಿಯೆಯನ್ನು ಅತ್ಯಂತ ಶೀಘ್ರವಾಗಿ ಜಾರಿಗೊಳಿಸಬೇಕು. ನರೇಗಾ ಹಾಗೂ ಕೃಷಿ ಇಲಾಖೆಯಡಿ ನಿರ್ಮಿಸಲಾದ ಕೃಷಿ ಹೊಂಡ ಮತ್ತು ಚೆಕ್ ಡ್ಯಾಂಗಳಲ್ಲಿನ ಕಳೆ ಹಾಗೂ ಗಿಡಗಂಟೆಗಳನ್ನು ತೆರವುಗೊಳಿಸಿ, ಹೂಳೆತ್ತಿ ಮಳೆನೀರನ್ನು ಹಿಡಿದಿಡಲು ಸಜ್ಜುಗೊಳಿಸಬೇಕು ಎಂದರು. ಜಿಲ್ಲೆಯಲ್ಲಿ 63 ವಾರಗಳಿಗಾಗುವಷ್ಟು ಮೇವು ಇದ್ದು ಮೇವು ಕೊರತೆ ಇಲ್ಲ, ಆರ್.ಐ, ವಿ.ಎ ಹಾಗೂ ಪಿಡಿಒಗಳು ಹೆಚ್ಚು ಮೇವಿರುವ ರೈತರನ್ನು ಮನವೊಲಿಸಿ, ಪ್ರತಿ ಕಡೆಯಿಂದ ಒಂದೊಂದು ಹೊರೆ ಮೇವನ್ನು ಸಂಗ್ರಹಿಸಿ ಸುರಕ್ಷಿತವಾಗಿ ದಾಸ್ತಾನು ಮಾಡಬೇಕು. ಜಿಲ್ಲೆಯ ಮೇವು ಬೇರೆ ಜಿಲ್ಲೆಗಳಿಗೆ ರಫ್ತಾಗದಂತೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕು ಎಂದರು. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲಿ, ರಸಗೊಬ್ಬರ ದಾಸ್ತಾನನ್ನು ಪ್ರತಿದಿನ ಪರಿಶೀಲಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಹಾಗೂ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗದಂತೆ ಕ್ರಮವಹಿಸಬೇಕು ಮತ್ತು ಅಂಗಡಿಗಳ ಪಿಒಎಸ್‌ ಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು. ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ, ಪ್ರತಿ 15 ದಿನಗಳಿಗೊಮ್ಮೆ ಕೊಳವೆಬಾವಿಗಳ ಅಂತರ್ಜಲ ಮಟ್ಟದ ಸ್ಥಿತಿಗತಿಯನ್ನು ಕಡ್ಡಾಯವಾಗಿ ವೈಯಕ್ತಿಕವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿ ಹಾಗೂ ಸಿಇಒ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಕಾಲುವೆಗಳಿಗೆ ಸದ್ಯ ನೀರು ಬಿಡದಿರುವ ಕಾರಣ, ಬಾಕಿ ಇರುವ ಎಲ್ಲಾ ದುರಸ್ತಿ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಮನುಷ್ಯ ಶಕ್ತಿಯನ್ನು ಬಳಸಿ ಮಾಡುವ ಹೂಳೆತ್ತುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಹಾಗೂ ಯಂತ್ರೋಪಕರಣಗಳ ಅಗತ್ಯವಿರುವ ಕಾಮಗಾರಿಗಳ ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಪಾವಧಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕಿದೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಎಲ್ಲಾ ಬ್ಯಾಂಕುಗಳ ಸಭೆ ಕರೆದು, ರೈತರಿಗೆ ಕಿರುಸಾಲ ಹಾಗೂ ಕೃಷಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಬೇಸಿಗೆಯ ಬಿಸಿ ಮತ್ತು ಹಸಿರು ಹುಲ್ಲು ಇರುವುದರಿಂದ ಹಾವುಗಳ ಕಾಟ ಹೆಚ್ಚಿದ್ದು, ಹಾವು ಕಡಿತ ಔಷಧಿಯನ್ನು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇಡುವಂತೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. #Drinking #water #job #creation #fodder #procurement #mandatory #malgudiexpress #malgudinews #news #TopNews