#ದಿನಕ್ಕೊಂದು ಕಥೆ
'ಕಂಚಿನ ತೇರು' ಮಕ್ಕಳ ಕಥೆ:-
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಳೇ ಮುದ್ದಿನ ಮಗಳಿದ್ದಳು.
ರಾಜಕುಮಾರಿ ಸಕಲ ವಿದ್ಯಾ ಪಾರಂಗತೆ. ಅತ್ಯಂತ ಚೆಲುವೆ. ಅವಳಿಗೂಬ್ಳು ಸಖಿ ಹಾಗೂ ಅವಳೇ ಸಾಕಿದ ಒಂದು ಮಂಗ ಇದ್ದು, ಹನುಮ ಎಂದು ಕರೆಯುತ್ತಿದ್ದಳು. ಆಕೆ ಶ್ರೀರಾಮನ ಪರಮಭಕ್ತೆ. ಅವಳಿಗೆ ಕಥೆಗಳನ್ನು ಓದುವ ಹುಚ್ಚು ಮತ್ತು ಅದರಲ್ಲಿ ಬರುವಂತಹ ಅದ್ಭುತ, ವಿಶಿಷ್ಟ, ವೈವಿಧ್ಯ ತೆಗಳಿಂದ ಕೂಡಿದ ಏನಾದರೂ ಇದ್ದರೆ, ಅದನ್ನು ರಾಜನಿಗೆ ತಿಳಿಸಿ ಪಡೆದು ಕೊಳ್ಳುತ್ತಿದ್ದಳು. ರಾಜನಿಗೋ ಮಗಳು ಕೇಳುವುದು ಹೆಚ್ಚೋ, ಕೊಡಿಸುವುದು ಹೆಚ್ಚೋ, ಎಂಬಂತೆ ಅವಳು ಬಯಸಿದ್ದನ್ನು ದೇಶದ ಯಾವ ಮೂಲೆಯೊಳಗಿದ್ದರೂ ತರಿಸಿಕೊಡುತ್ತಿದ್ದ.
ಹೀಗೆ ಒಮ್ಮೆ ಕಥೆ ಓದುತ್ತಿದ್ದಾಗ ಗಂಧರ್ವ ಕನ್ಯೆಯೊಬ್ಬಳು 'ಕಂಚಿನ ತೇರಿ'ನ ಲ್ಲಿ ಭೂಮಿ ಆಕಾಶ ಸೇರಿದಂತೆ ಸಂಚರಿಸುತ್ತಿದ್ದಳು. ಆ ತೇರು ಹೇಗಿತ್ತೆಂದರೆ ಆಕಾಶದಲ್ಲಿ ಹಾರುತ್ತದೆ, ಭೂಮಿ ಮೇಲೆ ಚಲಿಸುತ್ತದೆ, ನೀರಿನಲ್ಲಿ ತೇಲುತ್ತದೆ,
ಒಂದು- ಒಂದುವರೆ ತಿಂಗಳು ಕಾಲ ಇಬ್ಬರು ವಾಸ ಮಾಡಬಹುದಾದಷ್ಟು ಸೌಕರ್ಯವಿದೆ. ಯಾವ ದಿಕ್ಕು ಬೇಕೋ ಅಲ್ಲಿಗೆ ದಿಕ್ಸೂಚಿಯನ್ನು ತಿರುಗಿಸಿದರೆ ಅದೇ ದಿಕ್ಕಿಗೆ ಹೋಗುತ್ತಿತ್ತು. ವಿಶೇಷವಾಗಿ ಕಂಚಿನ ರಥಕ್ಕೆ ದೈವೀಕ ಶಕ್ತಿ ಇದ್ದು ದುಷ್ಟ ಶಕ್ತಿಗಳು ಅದರ ಹತ್ತಿರ ಸುಳಿಯುತ್ತಿರಲಿಲ್ಲ. ಇದನ್ನು ಓದುತ್ತಿದ್ದಂತೆ ರಾಜ ಕುಮಾರಿಗೆ ತಾನು ಅಂಥ ಕಂಚಿನ ತೇರಿನಲ್ಲಿ ಸಂಚಾರ ಮಾಡ ಬೇಕೆನಿಸಿತು.
ಮನಸ್ಸಿಗೆ ಬಂದಿದ್ದೇ ತಡ ರಾಜನಿಗೆ ತಿಳಿಸಿದಳು. ಅಪ್ಪಾಜಿ ನನಗೆ ಈ ತೇರು ಬೇಕು. ಎಷ್ಟು ಸಾಧ್ಯವೋ ಅಷ್ಟು ಬೇಗ ಮಾಡಿಸಿಕೊಡಿ ಎಂದಳು. ಇದನ್ನು ಕೇಳಿ ರಾಜನಿಗೆ ಚಿಂತೆಯಾಯಿತು. ಇದುವರೆಗೂ ಕೇಳುತ್ತಿದ್ದುದೆಲ್ಲಾ ಅವನ ಕೈಗೆಟುಕುವಂತಹದಾಗಿತ್ತು. ಆದರೆ ಇಂತಹ ಕಂಚಿನ ತೇರಿನ ಬಗ್ಗೆ ಅವನು ಎಲ್ಲೂ ಕೇಳಿರಲಿಲ್ಲ. ಆಗುವುದಿಲ್ಲ ಎಂದರೆ ಮಗಳು ಬಿಡುವುದಿಲ್ಲ.ರಾಜ ಕುಮಾರಿ ಮನಸ್ಸಿಗೆ ಬಂದ ಮೇಲೆ ಮುಗೀತು. ಅದು ಸಿಗುವ ತನಕ ಬೇರೆ ಕಡೆ ಯೋಚನೆ ಹರಿಸುವುದಿಲ್ಲ.
ರಾಜ ಅರಮನೆಯ ಮಂತ್ರಿ ಮತ್ತು ಸಭಾ ಸದಸ್ಯರುಗಳನ್ನು ಒಳಗೊಂಡಂತೆ ಇಡೀ ರಾಜ್ಯವನ್ನೇ ವಿಚಾರಿಸಿದ. ಯಾರಿಗಾದರೂ ತಿಳಿದಿದ್ದರೆ ತಿಳಿಸಿ ಎಂದು ಡಂಗುರ ಸಾರಿಸಿದ. ಯಾವ ಪ್ರಯೋಜನ ಆಗಲಿಲ್ಲ. ದಿನಕಳೆದಂತೆ ಮಗಳ ಉತ್ಸಾಹ ಕುಂದತೊಡಗಿತು. ದೇಶ, ವಿದೇಶಗಳಲ್ಲೂ, ಕಂಚಿನ ತೇರು ಮಾಡು ವ ಶಿಲ್ಪಿಯ ಕುರಿತು ವಿಚಾರಿಸಿದ. ರಾಜನೂ ಆಡಳಿತದಲ್ಲಿ ಆಸಕ್ತಿ ಕಳೆದು ಕೊಳ್ಳುವುದರಲ್ಲಿದ್ದ. ಆ ಹೊತ್ತಿಗೆ ಬೇರೆ ದೇಶದಲ್ಲಿ ಅಂತಹ ಶಿಲ್ಪಿ ಇದ್ದಾನೆಂದು ತಿಳಿದ ರಾಜನು ತುರ್ತಾಗಿ ಆತನನ್ನು ಕರೆಸುವ ವ್ಯವಸ್ಥೆ ಮಾಡಿದ.
ಶಿಲ್ಪಿಯನ್ನು ಕರೆಸಿದ, ಕಂಚಿನ ತೇರನ್ನು ನಾನು ಮಾಡುತ್ತೇನೆ. ಆದರೆ ಅದಕ್ಕೆ ಹೆಚ್ಚು ಸಮಯ, ಖರ್ಚು, ಕೆಲಸಗಾರರು ಬೇಕಾಗುತ್ತಾರೆ ಎಂದನು. ರಾಜ ನಿಗೆ ಶಿಲ್ಪಿ ಬೇಕಾಗಿದ್ದನೇ, ಹೊರತು ಇನ್ಯಾವ ಸಮಸ್ಯೆ ಇರಲಿಲ್ಲ. ಹೀಗಾಗಿ ಶಿಲ್ಪಿ ಕೇಳಿದ್ದಕ್ಕಿಂತ ಹೆಚ್ಚಾಗಿ ಒದಗಿಸುವಂತೆ ಮಂತ್ರಿಗೆ ಆಜ್ಞೆಮಾಡಿದ. ಶಿಲ್ಪಿ ಸಹ ತಡಮಾಡದೆ ಕೇಳಿದ ಸಮಯಕ್ಕೆ ಮುಂಚಿತವಾಗಿಯೇ,ಕಂಚಿನ ತೇರನ್ನು ಮಾಡಿಕೊಟ್ಟ. ರಾಜನ ಆನಂದಕ್ಕೆ ಪಾರವೇ ಇರಲಿಲ್ಲ.
ಒಂದು ಶುಭ ದಿನದಲ್ಲಿ ಕಂಚಿನ ತೇರನ್ನು ರಾಜಕುಮಾರಿಗೆ ಕೊಡುಗೆಯಾಗಿ
ಕೊಟ್ಟನು. ರಾಜಕುಮಾರಿಯ ಆನಂದಕ್ಕೆ ಪಾರವೇ ಇಲ್ಲ. ಈಗಂತೂ ಕಂಚಿನತೇರು ಅವಳು, ಅವಳ ಸಖಿ, ಮತ್ತು ಮಂಗ ಇಷ್ಟೇ ಅವಳ ಪ್ರಪಂಚ. ಆ ತೇರಿನಲ್ಲಿ ಪ್ರತಿದಿನವು ಬೇರೆ ಬೇರೆ ದಿಕ್ಕಿಗೆ ಬಹುದೂರ, ದಿನ ಪೂರ್ತಿ ಹೋಗಿ ಬರುತ್ತಿದ್ದರು.
ಒಮ್ಮೆ ಹೀಗಾಯಿತು. ರಾಜಕುಮಾರಿ ಸಖಿಯ ಅಜ್ಜಿಗೆ ಆರೋಗ್ಯ ಕೆಟ್ಟಿತು
ಅವಳ ಅಜ್ಜಿ ಮೊದಲು ಅರಮನೆಯಲ್ಲಿ ಬಹಳ ಕಾಲ ಕೆಲಸ ಮಾಡಿದ್ದಳು. ಸಖಿ ತನ್ನ ಅಜ್ಜಿ ನೋಡಲು ಹೊರಟಳು. ಅಜ್ಜಿ ಮೊಮ್ಮಗಳ, ಆರೈಕೆಯಲ್ಲಿ ಸ್ವಲ್ಪ ದಿನವಿದ್ದು ಕಣ್ಣುಮುಚ್ಚಿತು. ಹೀಗಾಗಿ ಸಖಿಗೆ ಕೂಡಲೆ ಹೊರಟು ಬರಲು ಆಗಲಿಲ್ಲ. ರಾಜಕುಮಾರಿಗೆ ತುಂಬಾ ಬೇಸರವಾಗಿ ಒಂದು ದಿನ ತಾನೇ ಕಂಚಿನ ತೇರನ್ನು ತೆಗೆದುಕೊಂಡು ಹೊರಟಳು. ಗೊತ್ತಾಗದಂತೆ ಬಹಳ ದೂರ ಬಂದುಬಿಟ್ಟಳು. ಅದು ಯಾವ ಜಾಗ ಎಂದು ತಿಳಿಯಲು ಕಂಚಿನ ತೇರನ್ನು ನಿಲ್ಲಿಸಲು ಹೊರಟರೆ ಅದೂ ಆಗಲಿಲ್ಲ. ಇಲ್ಲಿ ತನಕ ಹೊರಡುವಾಗ ಮಾತ್ರ ತೇರನ್ನು ಅವಳೇ ಓಡಿಸಿ, ಹಾರಿಸಿ, ಖುಷಿಯಾಗಿ ಹೋಗುತ್ತಿದ್ದಳು. ಸಂಜೆ ಮನೆಗೆ ಬರುವಾಗ ಸಖಿ ಕೈಗೆ ಕೊಟ್ಟು ತಾನು ಆರಾಮಾಗಿ ಕಥೆ ಓದುತ್ತಾ ನಿದ್ರೆ ಮಾಡಿಕೊಂಡು ಬರುತ್ತಿದ್ದಳು. ಅರಮನೆಯ ಆವರಣದಲ್ಲಿ ರಥ ನಿಂತಾಗಲೇ ಸಖಿ ಅವಳನ್ನು ಎಬ್ಬಿಸುತ್ತಿದ್ದಳು. ಒಮ್ಮೊಮ್ಮೆ ಕಂಚಿನ ತೇರಿನಲ್ಲೇ ರಾತ್ರಿ ಕಳೆಯುತ್ತಿದ್ದಳು. ಅದನ್ನೆಲ್ಲ ತಿಳಿದುಕೊಳ್ಳುವ ಪ್ರಸಂಗವೇ ಬರಲಿಲ್ಲ.
ಕಂಚಿನ ತೇರು ಮುಂದೆ ಹೋಗುತ್ತಲೇ ಬಹಳ ದೂರ ಹೋಗಿ ಇಂಧನ ಮುಗಿದು ದೂರದ ದೊಡ್ಡ ನದಿಗೆ ಇಳಿದು ಕೆಸರಲ್ಲಿ ಗಾಲಿಗಳು ಹೂತು ಕೊಂಡಿತು. ಆಗಲೇ ಕತ್ತಲಾಗಿತ್ತು. ರಾತ್ರಿ ರಥದಲ್ಲಿ ಕಳೆದಳು. ಬೆಳಗಾದ ಮೇಲೆ ಹೊರಗೆ ಬಂದು ನೋಡಿದರೆ ಯಾವುದೋ ಹೊರ ದೇಶವೆಂದು ತಿಳಿಯಿತು. ರಥದಲ್ಲಿ ಸಾಕಷ್ಟು ಆಹಾರ ಸಾಮಗ್ರಿಗಳು, ವಾಸಿಸಲು ವ್ಯವಸ್ಥೆ ಇದ್ದುದರಿಂದ ಜೊತೆಗೆ ಅವಳಿಗೆ ಧೈರ್ಯ, ಜಾಣತನವಿತ್ತು. ರಾಮನ ಧ್ಯಾನ ಮಾಡಿ ಮುಂದೇನು ಅಂದು ಕೊಂಡಿರುವಾಗ, ಒಂದು ಹೆಂಗಸು ಒಂದಷ್ಟು ಬಟ್ಟೆಗಳನ್ನು ತಂದು ಒಗೆಯಲು ಕುಳಿತಳು. ಆಕೆ ಆಶ್ಚರ್ಯದಿಂದ ಕಂಚಿನ ತೇರನ್ನು ನೋಡುತ್ತಿರುವಾಗ, ಹನುಮನಿಗೆ ಹೇಳಿ ಆಕೆಯನ್ನು ಕರೆಸಿದಳು. ಅವರಾಡುವ ಭಾಷೆ ಅರ್ಥವಾಗದ ಕಾರಣ ಸನ್ನೆಮಾಡಿ ತನ್ನ ಬಟ್ಟೆಗಳನ್ನು ಒಗೆದು ಕೊಡುವಂತೆ ತಿಳಿಸಿದಳು.
ಇದೇ ರೀತಿ ನಾಲ್ಕಾರು ದಿನ ಕಳೆಯಿತು. ಅವಳಿಗೆ ತಾನು ಸಿಕ್ಕಿಹಾಕಿಕೊಂಡಿ ವುದು ಕಪ್ಪು ಜನರಿರುವ ದೇಶವೆಂದು, ಮತ್ತು ಅವಳ ಸನ್ನೆ, ಚಹರೆ ಹಾಗೂ ಆಡುವ ಮಾತುಗಳಿಂದ ಅಲ್ಲಿನ ಅರಮನೆ ಅಗಸಗಿತ್ತಿ ಎಂದುಕೊಂಡಳು. ಹೀಗಿರುವಾಗ ಒಂದು ದಿನ ಅರಮನೆ ಬಟ್ಟೆಗಳು ರಾಜಕುಮಾರಿ ಬಟ್ಟೆ ಅದಲು ಬದಲಾಗಿ ರಾಜಕುಮಾರಿ ಸೀರೆ ಅರಮನೆಯಲ್ಲಿ ಹರವಿದ್ದಳು. ಅಚಾನಕ್ ಅಲ್ಲಿಗೆ ಬಂದ ರಾಜಕುಮಾರ ಸೀರೆಯನ್ನು ಕಂಡು ಇದು ನಮ್ಮ ದೇಶದ ಬಟ್ಟೆ ಅಲ್ಲ ಹೇಗೆ ಬಂದಿತು ಎಂದು ದಾಸಿಯನ್ನು ವಿಚಾರಿಸಿ, ತಿಳಿದನು. ಕೂಡಲೇ ನದಿ ತೀರಕ್ಕೆ ಬಂದು ರಾಜಕುಮಾರಿ ಇದ್ದಲ್ಲಿಗೆ ಬಂದನು. ಅಂತಹ ಸುಂದರಿಯನ್ನು ಕನಸಿನಲ್ಲೂ ಕಂಡಿರಲಿಲ್ಲ. ರಾಜಕುಮಾರನ ಕಣ್ಣಲ್ಲಿ ಮಿಂಚು ಸಂಚರಿಸಿದಂತಾಯಿತು.
ಆತನಿಗೆ ಭಾಷೆಯ ಜ್ಞಾನವಿತ್ತು. ಎಲ್ಲವನ್ನೂ ತಿಳಿದುಕೊಂಡು ನಮ್ಮ ದೇಶದಲ್ಲಿ ಇರುವವರೆಗೂ ಆತಂಕ ಪಡುವ ಅಗತ್ಯವಿಲ್ಲ. ದೇಶದ ಹಿತ ದೃಷ್ಟಿಯಿಂದ ಸದ್ಯಕ್ಕೆ ಬೇಕಾದ ರಕ್ಷಣೆಯನ್ನು ಇಲ್ಲಿಯೇ ಮಾಡುತ್ತೇನೆ. ಕೆಲವು ದಿನಗಳ ನಂತರ ಅರಮನೆಗೆ ಕರೆಸಿಕೊಳ್ಳುತ್ತೇನೆ ಎಂದನು. ನಂತರ ನಿಮ್ಮ ದೇಶಕ್ಕೆ ಕಳಿಸುವ ಏರ್ಪಾಡು ಮಾಡುತ್ತೇನೆ ಎಂದ. ರಾಜಕುಮಾರ ನಿತ್ಯ ಬಂದು ಅವಳಿಗೆ ಬೇಕಾದ ರಕ್ಷಣೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಖುದ್ದಾಗಿ ತಾನೇ ಮಾಡಿಸಿದನು. ಕೆಲವೇ ದಿನಗಳಲ್ಲಿ ಇಬ್ಬರಲ್ಲೂ ಅನುರಾಗ ಮೂಡಿತು.
ರಾಜಕುಮಾರಗೆ- ರಾಜಕುಮಾರಿನೇ ಸಿಕ್ಕಿದ್ದರೂ ಮದುವೆಯಾಗಲು ಹಲವು ಅಡ್ಡಿ ಆತಂಕಗಳಿತ್ತು. ರಾಜಕುಮಾರ ಕಪ್ಪು ದೇಶದ ಪ್ರಜೆಯಾಗಿ ರಾಜನಾಗಿ ದ್ದರೂ ಅವನು ಮಾತ್ರ ಶ್ವೇತ ವರ್ಣದ ಸ್ಫುರದ್ರೂಪಿಯಾಗಿದ್ದು ಆ ದೇಶದಲ್ಲಿ ಇದ್ದುದರಲ್ಲಿ ಚೆನ್ನಾಗಿರುವ ಒಬ್ಬ ಕಪ್ಪು ಹುಡುಗಿ ಜೊತೆ ಗೆಳೆತನವನ್ನು ಹೊಂದಿದ್ದು, ಮದುವೆಯ ವಿಚಾರ ಮಾತ್ರ ಮಾತಾಡಿರಲಿಲ್ಲ. ರಾಜಕುಮಾರ ರಾಜ ಕುಮಾರಿ ಇಬ್ಬರು ಒಂದು ನಿರ್ಧಾರಕ್ಕೆ ಬಂದು ಗಾಂಧರ್ವ ರೀತಿಯಲ್ಲಿ ವಿವಾಹವಾದರು. ಅವರ ಪ್ರೀತಿಗೆ ಸಾಕ್ಷಿಯಾಗಿ ಪುಟ್ಟ ಕುಮಾರ ಹುಟ್ಟಿದ. ಹನುಮ ಜೊತೆಯಲ್ಲಿದ್ದರೂ ಕೆಲಸ ಕಾರ್ಯ ಮಾಡಿಕೊಡಲು ಕೆಲಸದವರು ಬೇಕು. ಊರೊಳಗಿಂದ ಕರೆ ತರುವಂತಿಲ್ಲ. ಮೇಲಾಗಿ ನದಿ ತೀರದ ಹತ್ತಿರ ದೆವ್ವ-ಭೂತ, ರಾಕ್ಷಸರ ಸಂಚಾರವಿದೆ ಎಂದು ಹೇಳುತ್ತಿದ್ದರು.
ಇದಕ್ಕೆ ಪುರಾವೆ ಎಂಬಂತೆ ಒಂದು ದಿನ ಒಬ್ಬ ಹೆಂಗಸು ತನ್ನ ಮಗಳೊಂದಿಗೆ ಬಂದು ಕೆಲಸ ಮಾಡಿ ಕೊಡುವುದಾಗಿ ಹೇಳಿದಳು. ರಾಜಕುಮಾರಿ ಹೊರಗಿನ ಕೆಲಸ ಮಾತ್ರ ಮಾಡಿಸುತಿದ್ದಳು. ಆಕೆಯ ಪುಟ್ಟಮಗಳು ಒಳಗಡೆ ಮಗುವನ್ನು ನೋಡಿಕೊಳ್ಳುತ್ತಿತ್ತು. ಒಂದು ದಿನ ತೊಟ್ಟಿಲು ತೂಗುವಾಗ ಆ ಹುಡುಗಿ
ಹಳಳೂ ಹಳ್ಳುಳಾಯಿ, ಹಲ್ಲುಲ್ಲಾಯೀ
ನಮ್ಮಮ್ಮ ನಿಮ್ಮಮ್ಮನ ತಿಂತಾರೆ,
ನಾನು ನಿನ್ನನ್ನ ತಿಂತೀನಿ ಹಳ್ಳುಳಾಯಿ
ಎಂದು ಹಾಡು ಹೇಳುತ್ತಾ ತೊಟ್ಟಿಲು ತೂಗುವುದನ್ನು ನೋಡಿದ ರಾಜಕು ಮಾರಿಗೆ ಸಂದೇಹ ಬಂದು ಮತ್ತೆ ಹಾಡು ಹೇಳಿಸಿದಳು. ಪುಟ್ಟ ಹುಡುಗಿ ಅದೇ ಹಾಡನ್ನು ಖುಷಿಯಾಗಿ ಹೇಳಿತು. ಅನುಮಾನ ಬಲವಾಯಿತು ಪುಟ್ಟ ಹುಡುಗಿಯನ್ನು ಕರೆದು ಬೆಳ್ಳಿಯ ಗಂಟೆಯನ್ನು ಅದರ ಅಮ್ಮನಿಗೆ ತೊಳೆದು ಕೊಡುವಂತೆ ಹೊರಗೆ ಕಳಿಸಿ ಕಂಚಿನ ತೇರಿನ ಬಾಗಿಲು ಮುಚ್ಚಿದಳು. ಪುಟ್ಟ ಹುಡುಗಿ ಗಂಟೆ ಶಬ್ದ ಮಾಡುತ್ತಾ ಹೊರಗೆ ಬಂದಂತೆ ಗಂಟೆ ಶಬ್ದ ಕಿವಿಗೆ ಕೇಳುತ್ತಿದ್ದಂತೆ ಮಾಯಾವಿ ರಾಕ್ಷಸಿ ಹಾಗೂ ಮಗಳು ಇಬ್ಬರು ಮಾಯವಾದರು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಇತ್ತ ರಾಜಕುಮಾರನ ಅರಮನೆಯಲ್ಲಿ ಅವನ ಗೆಳತಿಗೆ ಅನುಮಾನ ಶುರುವಾಗಿ ಇನ್ನು ನೀನು ಕಾಯುವುದರಲ್ಲಿ ಅರ್ಥವಿಲ್ಲ ನನಗಿಂತ ಚೆನ್ನಾ ಗಿರುವವರು ಈ ದೇಶದಲ್ಲಿ ನಿನಗೆ ಯಾರೂ ಸಿಗುವುದಿಲ್ಲ. ಈಗಲೇ ನನ್ನನ್ನು ಮದುವೆಯಾಗು ಎಂದು ಒತ್ತಾಯ ಮಾಡಿದಳು. ಈ ಸಮಯಕ್ಕೆ ಕಾದಿದ್ದ ರಾಜಕುಮಾರ ಹೀಗೆ ಕೇಳಿದ ಒಂದು ವೇಳೆ ನಿನಗಿಂತ ಸುಂದರಿ ಸಿಕ್ಕರೆ ನಾನು ಅವಳನ್ನು ಮದುವೆಯಾಗುತ್ತೇನೆ ಎಂದನು. ಅವಳು ಒಪ್ಪಿದಳು. ಆನಂತರ ಒಂದು ದಿನ ಗೆಳತಿಯನ್ನು ಕರೆದುಕೊಂಡು ನದಿ ತೀರಕ್ಕೆ ಬಂದ. ಕಂಚಿನ ತೇರಿನ ಒಳಗೆ ಹೋದರು. ರಾಜಕುಮಾರಿ ಬಂಟ ಹನುಮ ಬಣ್ಣದ ಬಟ್ಟೆ ಹಾಕಿ, ಸೊಂಟಕ್ಕೆ ಬೆಳ್ಳಿ ಗೆಜ್ಜೆ ಕಟ್ಟಿಕೊಂಡು ಮುಂದೆ ಬಂದ. ಅವನನ್ನು ನೋಡಿದ ರಾಜನ ಗೆಳತಿ ವ್ಯಂಗ್ಯದಿಂದ ಇವಳೇನಾ ನೀನು ಹೇಳಿದ ಸುಂದರಿ ಎಂದಳು. ರಾಜಕುಮಾರ ಸುಮ್ಮನೆ ನಕ್ಕ. ಹನುಮ ಟುರ್ ಟುರ್ ಎಂದು ನೆಗೆಯುತ್ತಾ, ಕುಣಿಯುತ್ತಾ ಅವರಿಗೆ ಅತಿಥಿ ಸತ್ಕಾರ ಮಾಡಿದ.
ಇನ್ನೇನು ಹೊರಡುವ ಸಮಯ ಬಂದಿತು. ಸಣ್ಣ ಕೋಣೆಯೊಳಗಿಂದ ಪಟ್ಟೆ ಅಂಚಿನ ಸೀರೆಯಲ್ಲಿ, ಸರ್ವಾಲಂಕೃತಳಾಗಿ ಮುದ್ದಾದ ಮಗುವನ್ನು ಎತ್ತಿ ಕೊಂಡು ಸುರ ಸುಂದರಿ ರಾಜಕುಮಾರಿ ಹೊರಗೆ ಬಂದಳು. ರಾಜ ಕುಮಾರಿಯ ಕಣ್ಣುಕೋರೈಸುವ ಸೌಂದರ್ಯವನ್ನು ನೋಡಿ. ರಾಜಕುಮಾರನ ಗೆಳತಿ ಮೂರ್ಛೆ ತಪ್ಪಿಬಿದ್ದಳು. ನಂತರ ಎಚ್ಚರವಾದ ಮೇಲೆ ಕೊಟ್ಟ ಮಾತಿನಂತೆ ಒಪ್ಪಿಕೊಂಡಳು. ರಾಜಕುಮಾರ ಆಕೆ ಏನು ಕೇಳಿದಳೋ ಅದನ್ನೆಲ್ಲ ಕೊಟ್ಟು ಕಳುಹಿದನು. ಇಷ್ಟರಲ್ಲಾಗಲೇ ರಾಜಕುಮಾರಿ ತಂದೆಗೆ ವಿಷಯಗಳೆಲ್ಲ ತಿಳಿದು ಅದೇ ಸಮಯಕ್ಕೆ ಬಂದರು. ಮಗಳನ್ನು ಕಂಡು ಅವಳ ಧೈರ್ಯವನ್ನು ಮೆಚ್ಚಿ ಅದೇ ಕಂಚಿನ ತೇರಿನಲ್ಲಿ ಮಗಳು ಅಳಿಯ, ಮೊಮ್ಮಗುವನ್ನು ಕರೆದುಕೊಂಡು ಹೋಗಿ ಇಡೀ ರಾಜ್ಯವೇ ಸಂಭ್ರಮಿಸು ವಂತೆ ಭಾರಿ ಸಮಾರಂಭ ಮಾಡಿ ಪ್ರಜೆಗಳಿಗೆ ಬೇಕಾದಷ್ಟು ಉಡುಗೊರೆಗಳನ್ನು ಕೊಟ್ಟನು. ರಾಜ್ಯಕ್ಕೆ ರಾಜ್ಯವೇ ಸಂತೋಷದಲ್ಲಿ ಮಿಂದೆದ್ದಿತು.
(ಇದು ನಾವು ಚಿಕ್ಕವರಿರುವಾಗ, ನಮ್ಮ ಅಜ್ಜಿ ಹೇಳುತ್ತಿದ್ದ ಅನೇಕ ಕಥೆಗಳಲ್ಲಿ ಇದೂ ಒಂದು )
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ