#ಶ್ರೀನಿವಾಸ ಕಲ್ಯಾಣ 🌷🙏 #ವೈಶಾಖ ಮಾಸ #🔱 ಭಕ್ತಿ ಲೋಕ
ಶ್ರೀನಿವಾಸ ಕಲ್ಯಾಣ ಎರಡನೇ ಭಾಗ
ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠನಾದ ಕೇಸರಿಯ ಪತ್ನಿಯಾದ ಅಂಜನಾ ದೇವಿಯು ಪುತ್ರ ಸಂತಾನಕ್ಕಾಗಿ ಮತಂಗ ಮುನಿಗಳ ಆದೇಶದಂತೆ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ ಆಚರಿಸಿ ವಾಯುದೇವರ ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು. ಹಾಗಾಗಿ ಇದಕ್ಕೆ ಅಂಜನಾದ್ರಿ ಎಂದು ಹೆಸರು ಬಂದಿತು.
ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠದಲ್ಲಿ ಏಕಾಂತದಲ್ಲಿ ಇದ್ದನು. ಅಂತಃಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು. ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆಯಂತೆ ಕಾಯುತ್ತಿದ್ದರು. ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ. ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ ತಡೆಯಬೇಡ!! ಅಂತ ವಾಯುದೇವರು ಹೇಳಿದರು ಸಹ, ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು ಅಂತ ಹೇಳುತ್ತಾರೆ. ಅದಕ್ಕೆ ವಾಯುದೇವರು ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆಯನ್ನು ನೆನಪು ಮಾಡಿಕೊಡುತ್ತಾರೆ. ಆದರೂ ಸಹ ಶೇಷದೇವನು ಕೋಪದಿಂದ. "ಎಲೈ !! ವಾಯುದೇವ !! ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ? ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು?? ಕೇಳು! ನನ್ನ ಶಕ್ತಿ ಸಾಮರ್ಥ್ಯದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರೂ ಇಲ್ಲ ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು."
ತನ್ನ ಬಗ್ಗೆ ತಾನೇ ಸ್ವಪ್ರಶಂಸೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ. "ಹೇ ಶೇಷದೇವನೇ! ಅರಮನೆಯಲ್ಲಿ ಇರುವ ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ ಮಾತ್ರಕ್ಕೆ ಪಟ್ಟದ ಆನೆಗೆ ಸಮವಾದೀತೇ? ಮಹಾರಾಜನ ಸೇವೆಗೆ ಇರುವ ಸೇವಕನು ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ?ಅದು ಅವನ ದೊಡ್ಡಸ್ತಿಕೆಯೆ ?? ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??. ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು" ಎಂದು ವಾಯುದೇವರು ಉಪದೇಶ ಮಾಡುತ್ತಾರೆ.
ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು. ಆಗ ಶ್ರೀಹರಿಯು ಹೊರಗಡೆ ಬಂದು. ಶೇಷ !! ಏಕಿಂತು ಕೂಗಾಡುತ್ತಿರುವೆ!! ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ?? ಎಂದು ಪ್ರಶ್ನಿಸಲು ಅದಕ್ಕೆ ಶೇಷದೇವನು ಪ್ರಭು ಮಲಯಾಚಲವಾಸಿಯು, ಬಹು ಗರ್ವಿಷ್ಟನು, ದುರಭಿಮಾನಿಯು, ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ. ಅದಕ್ಕಾಗಿ ಈ ಕಲಹ ಎಂದು ಹೇಳುತ್ತಾನೆ..
ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು..
ಭಗವಂತನು ಮುಖ್ಯ ಪ್ರಾಣನನ್ನು ಕಂಡು ಕುಮಾರ!! ಪವಮಾನ!! ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ?? ಎಂದು ಮಧುರವಾಣಿ ಇಂದ ನುಡಿದನು. ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು. ಅಹಂಕಾರದಿಂದ ತಾನು ಮಹಾನ್ ಶಕ್ತಿಶಾಲಿ. ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ ಎಂದು ಹೇಳುವನು. ಅದಕ್ಕೆ ಭಗವಂತನು ಶೇಷ !! ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ. ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು.. ಆದ್ದರಿಂದ ನಿಮ್ಮ ಇಬ್ಬರಿಗೂ ಪರೀಕ್ಷೆ ಇಡುವೆನು. ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತ ರಾಜಕುಮಾರನಾದ ಆನಂದಾದ್ರಿ ಬೆಟ್ವಿದೆ. ನೀನು ನಿನ್ನ ದೇಹವೆಂಬ ಹಗ್ಗ ದಿಂದ ಅದನ್ನು ಬಿಗಿಯಾಗಿ ಸುತ್ತುವರೆದು ಕುಳಿತಿಕೊ. ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ. ಅದರಿಂದ ಯಾರು ಶ್ರೇಷ್ಠರು ಅಂತ ತಿಳಿಯುತ್ತದೆ ಅಂತ ಆಜ್ಞೆ ಮಾಡಿದನು. ಅದರಂತೆ ಶೇಷದೇವನು ತಾನೇ ಶಕ್ತಿ ಶಾಲಿ. ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು. ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯವನ್ನು ನೋಡಲು ನಿಂತರು.
ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ. ಏನಾಶ್ಚರ್ಯ!! ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು. ತನ್ನ ಪುತ್ರನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು ಶೇಷದೇವನ ಸಹಿತವಾಗಿ ನದಿಯ ದಡದ ಮೇಲೆ ಇರಿಸಿದರು.
ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ. ನಿರ್ಣಯ ಮಾಡುತ್ತಾರೆ. ಶೇಷದೇವನ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು ಹೋಗಿ ಜಗತ್ಪ್ರಾಣನಾದ, ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ ನಾನು ಮಾಡಿದ ನಿಂದಾರೂಪ ಕಾರ್ಯವನ್ನು ಕ್ಷಮಿಸಿ ಅಂತ ಪ್ರಾರ್ಥನೆ ಮಾಡುತ್ತಾರೆ. ಆಗ ವಾಯುದೇವರು ಕರುಣಾಳುಗಳು, ಯಾರಲ್ಲಿಯು ದ್ವೇಷವಿಲ್ಲದವರು ಶೇಷದೇವನ ಅಪರಾಧವನ್ನು ಕ್ಷಮಿಸಿ, ಅನುಗ್ರಹ ಮಾಡಿ "ಶೇಷದೇವ ! ಇದೆಲ್ಲಾ ಶ್ರೀ ಹರಿಯ ಇಚ್ಛೆಯ ಪ್ರಕಾರ ನಡೆದಿದೆ. ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು. ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತವಾಗುವುದು" ಎಂದು ಹೇಳಿ ಅವರನ್ನು ಆನಂದಗೊಳಿಸಿದರು.
ಮುಂದುವರೆಯುತ್ತದೆ...
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲರಾಜೇಶ್