#✝ಯೇಸು ವಾಕ್ಯಗಳು📖 #jesus #jesus loves you #bible #jesus quotes ಆದರ್ಶ ಪಾಲಕರೇ ನಮಗಾಗಿ ಪ್ರಾರ್ಥಿಸಿರಿ*🪻
**********************************
✍️ *ಮಥಿಯಾಸ್ ಕುಮಾರ್*
ಮೈಸೂರು
**********************************
ಮೇ ತಿಂಗಳ ಒಂದನೇ ತಾರೀಖನ್ನು ಕಾರ್ಮಿಕರ ದಿನವೆಂದು ವಿಶ್ವದ ಬಹುತೇಕ ರಾಷ್ಟ್ರಗಳು ಆಚರಿಸುತ್ತವೆ.
ಅದೇ ದಿನ *ಏಕ ಪವಿತ್ರ ಪ್ರೇಷಿತ ಕಥೋಲಿಕ ಧರ್ಮಸಭೆಯು* ಕಾರ್ಮಿಕರ ಪಾಲಕ ಸಂತ ಜೋಸೆಫರ ಹಬ್ಬವನ್ನು ಸಡಗರದಿಂದ ಆಚರಿಸುತ್ತದೆ. ಇದೊಂದು ಭಾವನಾತ್ಮಕ, ಅರ್ಥಗಳ ಎಲ್ಲೆ ಮೀರಿದ, ಕಾರ್ಮಿಕ ಬದುಕಿನ ಸಂಕೀರ್ಣತೆಗೆ ನಿಲುಕದ ಅವಿನಾಭಾವ ಸಂಬಂಧ. ಈ ಸಂಬಂಧದ ಜಾಡು ಹಿಡಿದು ನಡೆದಾಗ ಎದುರಾಗುವುದೇ ಕಾರ್ಮಿಕ ದಿನಾಚರಣೆ ಹಾಗೂ ಕಾರ್ಮಿಕ ಪಾಲಕ ಸಂತ ಜೋಸೆಫರ ಹಬ್ಬ!!
ಸಂತ ಜೋಸೆಫರು ಪ್ರಭುಯೇಸುಕ್ರಿಸ್ತರ ಪೋಷಕ ತಂದೆ, ಇವರು ತಮ್ಮ ಜೀವಿತಾವಧಿಯನ್ನು ಯೇಸುಕ್ರಿಸ್ತರು ಹಾಗೂ ಶ್ರೀಮಾತೆ ಮರಿಯಮ್ಮನವರ ಪಾಲನೆ ಹಾಗೂ ಪೋಷಣೆಗಾಗಿಯೇ ಮುಡುಪಾಗಿಟ್ಟು ತಮಗೆ ತಿಳಿದಿದ್ದ ಮರಗೆಲಸವನ್ನು ನಿಷ್ಠೆಯಿಂದ ಮಾಡುವ ಮೂಲಕ ಪವಿತ್ರ ಕುಟುಂಬವನ್ನು ಪೋಷಿಸಿದರು. ಇವರ ಕಾಯಕತತ್ವ ಹಾಗೂ ಪ್ರಾಮಾಣಿಕತೆಯು ಇಡೀ ಕಾರ್ಮಿಕವರ್ಗಕ್ಕೆ ಆದರ್ಶವಾಗಿದೆ.
*"ಆದಿಯಲ್ಲಿ ದೇವರು ಪರಲೋಕ ಭೂಲೋಕಗಳು ಅವುಗಳಲ್ಲಿ ಇರುವ ಸಮಸ್ತ ಸೃಷ್ಟಿಯನ್ನು ನಿರ್ಮಿಸಿದರು, ನಂತರ ದೇವರು ತಮ್ಮ ಸೃಷ್ಟಿ ಕಾರ್ಯವನ್ನು ಮುಗಿಸಿ ಬಿಟ್ಟು ಏಳನೆಯದಿನದಲ್ಲಿ ವಿಶ್ರಮಿಸಿಕೊಂಡರು"* "
(ಆದಿಕಾಂಡ 2:1)
ಈ ಪವಿತ್ರ ದೇವರ ವಾಕ್ಯದಲ್ಲಿ ನಮಗೆ ತಿಳಿದು ಬರುತ್ತದೆ. ಮಹೋನ್ನತ ದೇವರು ಸಹ ಸಮಸ್ತ ಸೃಷ್ಟಿಯ ನಿರ್ಮಾಣಕಾರ್ಯದ ಸಲುವಾಗಿ ದುಡಿದರು ಎಂದು.!! ಒಂದು ವೇಳೆ ದೇವರು ಜಗತ್ತಿನಸೃಷ್ಟಿಯ ಕಾರ್ಯಕ್ಕೆ ಕೈ ಹಾಕದೆ ಸುಮ್ಮನಿದ್ದಿದ್ದರೆ ಈ ಜಗತ್ತು ಜೀವರಾಶಿಗಳು ಯಾವುದೂ ಇಲ್ಲದೆ ಬರಿದಾಗಿಯೇ ಇರುತ್ತಿತ್ತು. ದೇವರಾದ ಸರ್ವೆಶ್ವರ ಸ್ವಾಮಿಯ ನಿರಂತರ ದುಡಿತದ ಫಲವೇ ಆಗಿದೆ. ಸೃಷ್ಟಿ ಸಮಸ್ತವೂ. ಆದುದರಿಂದಲೇ ಜಗದ್ರಕ್ಷಕ ಯೇಸುಸ್ವಾಮಿಯು ನುಡಿಯುತ್ತಾರೆ. *"ನನ್ನ ಪಿತ ಸತತವೂ ಕಾರ್ಯ ನಿರತರು. ಅವರಂತೆಯೇ ನಾನೂ ಸದಾ ಕಾರ್ಯನಿರತನಾಗಿದ್ದೇನೆ."*
(ಯೊವಾನ್ನ 5:17) ಎಂದು. ಯೇಸುಕ್ರಿಸ್ತರು ತನ್ನ ದೇವ ಪಿತನು ತಮಗೆ ವಹಿಸಿದ್ದ ಕಾರ್ಯವನ್ನು ಕೈಗೊಳ್ಳುವ ಮೊದಲು ಅಂದರೆ ತಮ್ಮ ಭೂ ಜೀವಿತದ 33 ವರ್ಷಗಳಲ್ಲಿ 30 ವರ್ಷಗಳನ್ನು ತಮ್ಮ ಪೋಷಕ ತಂದೆ ಸಂತ ಜೋಸೆಫರು ಕಲಿಸಿಕೊಟ್ಟ, ಬಡಗಿಯ ಕೆಲಸದಿಂದ ದುಡಿಯುತ್ತಿದ್ರು ಎಂದು ತಿಳಿದು ಬರುತ್ತದೆ ಆದುದರಿಂದಲೇ ತನ್ನ ಸ್ವಗ್ರಾಮದವರು ಇವರನ್ನು
*"ಇವನು ಆ ಬಡಗಿಯಲ್ಲವೆ?”*(ಮಾರ್ಕ 6:3) ಎಂದು ತಾತ್ಸಾರ ಮಾಡುತ್ತಾರೆ.!
ದುಡಿಮೆಯು ಪ್ರತಿ ಮಾನವನಿಗೆ ದೇವರು ನಿಗದಿಪಡಿಸಿದ ಕರ್ತವ್ಯವಾಗಿದೆ. ದೇವರು ನಮ್ಮ ಆದಿ ತಂದೆ ಆದಾಮನಿಗೂ ಸಹ ದುಡಿಯಲು ಪ್ರೇರೇಪಿಸಿದರು. *"ನಂತರ ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿ ಮಾಡುವುದಕ್ಕೂ ಕಾಯವುದಕ್ಕೂ ಅದರಲ್ಲಿ ಬಿಟ್ಟರು. "*
(ಆದಿಕಾಂಡ 2:7-15) ಎಂದು ಪವಿತ್ರ ಶ್ರೀಗ್ರಂಥವು ನಮಗೆ ತಿಳಿಸುತ್ತದೆ.
ಕಾರ್ಮಿಕ ಪಾಲಕ ಸಂತ ಜೋಸೆಫರ ಕಾಯಕತತ್ವ. ಇಡೀ ಕಾರ್ಮಿಕ ವರ್ಗಕ್ಕೆ ಉನ್ನತ ಮಾದರಿಯ ಆದರ್ಶವಾಗಿದೆ. ಏಕೆಂದರೆ ಇವರು ತಮಗೆ ತಿಳಿದಿದ್ದ ಮರಗೆಲಸವನ್ನು ಮಾಡುವ ಮೂಲಕ ತಮ್ಮ ದೈಹಿಕ ಶ್ರಮದ ದುಡಿಮೆಯಿಂದಲೇ ಪವಿತ್ರ ಕುಟುಂಬದ ಎಲ್ಲಾ ಅವಶ್ಯಕತೆಯನ್ನು ಪೂರೈಸಿದರು. ಹಾಗೂ ಜಗದ್ರಕ್ಷಕ ಯೇಸು ಕ್ರಿಸ್ತರಿಗೂ ಸಹ ತಮ್ಮ ಕಸುಬನ್ನೇ ಕಲಿಸಿಕೊಟ್ಟು ತಮ್ಮ ಮರಗೆಲಸದ ಘನತೆಯನ್ನು ಮೆರೆದರು. ಇದರಿಂದ ಸಾಮಾನ್ಯ . ಕಾರ್ಮಿಕನ ಕೆಲಸಕ್ಕೂ ಗೌರವ ಮತ್ತು ಮರ್ಯಾದೆಯಿದೆ ಎಂದು ತೋರ್ಪಡಿಸುವ ದೇವರ ಯೋಜನೆ ಇದಾಗಿತ್ತು. ಹೀಗೆ ಸಾಮಾನ್ಯವಾಗಿ ಕಷ್ಟಕರ ಕೆಲಸಗಳಾದ ಕಲ್ಲು ಮಣ್ಣಿನ ಕೆಲಸಗಳು ಕಟ್ಟಡ ನಿರ್ಮಾಣದ ಕೆಲಸಗಳು ವಾಹನಗಳ ಚಾಲನೆ ಮತ್ತು ಕಾರ್ಖಾನೆಗಳ, ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳಿಗೆ ಸಂಬಂಧ ಪಟ್ಟ ಕೆಲಸಗಳು ಮುಂತಾದುವುಗಳನ್ನು ನಿರ್ವಹಿಸುವ ಪ್ರತಿ ಕಾರ್ಮಿಕರು ಕೀಳಾದ ಮನುಜರಲ್ಲ. ದೇವರ ಮುಂದೆ ಪ್ರತಿಯೊಬ್ಬರೂ ಶ್ರೇಷ್ಠರು ಆದರೆ ಪ್ರತಿ ಕಾರ್ಮಿಕರಲ್ಲಿ ಪ್ರಾಮಾಣಿಕತೆ ಬಹು ಮುಖ್ಯವಾಗಿದೆ.!!
ಸಂತ ಜೋಸೆಫರು ಯೇಸುಕ್ರಿಸ್ತರನ್ನು ಹಾಗೂ
ಶ್ರೀಮಾತೆ ಮರಿಯಮ್ಮನವರನ್ನು ಪೋಷಿಸುವ ಮಹಾ ಜವಾಬ್ದಾರಿಯನ್ನು ವಹಿಸಿಕೊಂಡು ಸ್ವಲ್ಪವೂ ದೇವರ ವಿರುದ್ಧ ಗೊಣಗುಟ್ಟದೆ. ಯಾವ ಅಧಿಕಾರದ ಆಸೆಯನ್ನೂ ಪಡದೆ
*''ಉದ್ಯೋಗಂ ಪುರುಷ ಲಕ್ಷಣಂ"* ಎಂಬಂತೆ ತಮ್ಮ ಅತೀ ಚಿಕ್ಕ ಕೆಲಸವನ್ನೇ ಪ್ರಾಮಾಣಿಕತೆಯಿಂದ ನಿರ್ವಹಿಸಿ ಮಹಿಮಾನ್ವಿತರಾದರು.
ಸರ್ವೆಶ್ವರ ಸ್ವಾಮಿಯು ಸಂತ ಜೋಸೆಫರನ್ನು ಸನ್ಮಾನಿಸಿ ಅವರಿಗಾಗಿಯೆ ಸ್ವರ್ಗದಲ್ಲಿ ಉನ್ನತಾಧಿಕಾರವನ್ನೂ ಪ್ರತ್ಯೇಕ ಸಿಂಹಾಸನವನ್ನು ನೀಡಿ ಗೌರವಿಸಿರಲೇಬೇಕು !
ಏಕೆಂದರೇ ಯೇಸುಕ್ರಿಸ್ತರು ಪವಿತ್ರ ಗ್ರಂಥದಲ್ಲಿ ನುಡಿದ ಸಾಮತಿಯಂತೆ ಪಿತ ದೇವರು ಸಂತ ಜೋಸೆಫರನ್ನು ಕುರಿತು ನುಡಿದಿರಲೇಬೇಕು ಏನೆಂದರೆ:
*"ಭಲಾ ನೆಚ್ಚಿನ ಸೇವಕ ನೀನು ಪ್ರಾಮಾಣಿಕ ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು"*
(ಮತ್ತಾಯ 25:21) ಎಂದು ಹೇಳಿ ಸ್ವರ್ಗದ ಸಿರಿಪದವಿಯನ್ನು ನೀಡಿರಲೇಬೇಕು ಅಲ್ಲವೇ? ಏಕೆಂದರೆ ಪ್ರಭುಕ್ರಿಸ್ತರು ನುಡಿದಂತೆ. *"ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿ ಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ"*
(ಮತ್ತಾಯ 24:47)
ಆದುದರಿಂದ *ಸಮಸ್ತ ಕಾರ್ಮಿಕರು ಸಂತ ಜೋಸೆಫರ ಆದರ್ಶವನ್ನು ಅನುಸರಿಸಬೇಕಾಗಿದೆ.,*
ವಿಶ್ವವ್ಯಾಪ್ತಿಯಾಗಿರುವ ಪವಿತ್ರ ಕಥೋಲಿಕ ಧರ್ಮಸಭೆಯು ಪರಿಶುದ್ಧ ಬಲಿಪೂಜೆಯ ಪ್ರತಿಷ್ಠಾ ಪ್ರಾರ್ಥನೆಯಲ್ಲಿ ಸಂತ ಜೋಸೆಫರ ಹೆಸರನ್ನು ಸೇರಿಸಿರುವುದರಿಂದ ಧರ್ಮಸಭೆಯು ಸಂತ ಜೋಸೆಫರಿಗೆ ಎಂಥಹ ಉನ್ನತ ಸ್ಥಾನವನ್ನು ನೀಡಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ.
ಸಂತ ಜೋಸೆಫರು ಇಹಲೋಕದ ಮಹಿಮಾನ್ವಿತ ಸತ್ಪುರುಷರೇ ಸರಿ. ಕಥೋಲಿಕ ಧರ್ಮಸಭೆಯ ಪರಮಪೂಜ್ಯ ಜಗದ್ಗುರು
*12ನೇ ಭಕ್ತಿನಾಥರು*(ಪೋಪ್ ಪಿಯಸ್ XII)
1955 ರಲ್ಲಿ ಸಂತ ಜೋಸೆಫರಿಗೆ
*''ಕಾರ್ಮಿಕರ ಪಾಲಕ"* ರೆಂದು ಬಿರುದನ್ನು ನೀಡಿ ಗೌರವಿಸಿದರು ಮತ್ತು ಈ ಹಬ್ಬವನ್ನು ಮೇ ತಿಂಗಳ ಮೊದಲನೆಯ ದಿನ ಆಚರಿಸುವಂತೆ ಆಜ್ಞೆಯಿತ್ತರು.
ಕಾರ್ಮಿಕರು ಕೆಲಸದ ಬಗ್ಗೆ ಈ ಕ್ರೈಸ್ತ ತಿಳುವಳಿಕೆಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಈ ಹಬ್ಬವನ್ನು
ಮೇ1,1955 ರಂದು
*ಜಗದ್ಗುರು 12ನೇ ಭಕ್ತಿನಾಥರು* (ಪೋಪ್ ಪಿಯಸ್ XII) ಅಧಿಕೃತವಾಗಿ
*St. Joseph the Worker* ಹಬ್ಬವನ್ನು ಸ್ಥಾಪಿಸಿ, ಕಾರ್ಮಿಕರ ಜೀವನಕ್ಕೆ ಕ್ರೈಸ್ತ ಧರ್ಮದ ಬೆಳಕನ್ನು ನೀಡಲು ಉದ್ದೇಶಿಸಿದರು.: ಆದರೆ ಹಿಂದಿನ ಪೋಪ್ಗಳು ಈಗಾಗಲೇ ನೆಲವನ್ನು ಸಿದ್ಧಪಡಿಸಿದ್ದರು.
*ಪೂಜ್ಯ ಪಿಯಸ್ IX* ಒಂದು ನಿರ್ದಿಷ್ಟ ರೀತಿಯಲ್ಲಿ *ಸಂತ ಜೋಸೆಫ್* ಅವರನ್ನು
*"ಸಾರ್ವತ್ರಿಕ ಧರ್ಮಸಭೆಯ ಪೋಷಕರು"* ಎಂದು ಘೋಷಿಸಿದಾಗ ಕಾರ್ಮಿಕನಾಗಿ ಅವರ ಮಹತ್ವವನ್ನು ಗುರುತಿಸಿದ್ದರು. ಶಾಶ್ವತ ಮೋಕ್ಷಕ್ಕೆ ಸಾಧನವಾಗಿ ಕೆಲಸದ ತತ್ವವನ್ನು
*ಸಂತ ಜಾನ್ ಪಾಲ್ II* ಅವರು ತಮ್ಮ ವಿಶ್ವಕೋಶದ *ಲ್ಯಾಬೋರೆಮ್ ಎಕ್ಸರ್ಸೆನ್ಸ್* ನಲ್ಲಿ ಮತ್ತೆ ಕೈಗೆತ್ತಿಕೊಳ್ಳುತ್ತಾರೆ, ಅಲ್ಲಿ ಅವರು "ಕೆಲಸದ ಸುವಾರ್ತೆ"ಯನ್ನು ಉಲ್ಲೇಖಿಸುತ್ತಾರೆ. ಮತ್ತು
*ಕಾರ್ಡಿನಲ್ ಏಂಜೆಲೊ ರೊನ್ಕಲ್ಲಿ* *ಪೋಪ್ ಸಂತ ಜಾನ್ XXIII* ಆಗಿ ಮಾರ್ಪಟ್ಟರು - ಪೇತ್ರರ ಪೀಠ ಸಿಂಹಾಸನಕ್ಕೆ ಆಯ್ಕೆಯಾದಾಗ *ಜೋಸೆಫ್* ಎಂಬ ಹೆಸರನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಿದ್ದರು, ಅವರು ಯೇಸುವಿನ ಪೋಷಕ ತಂದೆಯಾಗಿದ್ದ ಸಂತರಿಗೆ ತುಂಬಾ ಭಕ್ತಿ ಹೊಂದಿದ್ದರು. ಇತರ ಅನೇಕ ಸಂತರು, ವಿಶೇಷವಾಗಿ
*ಅವಿಲಾದ ಸಂತ ತೆರೇಸಾ* ಅವರು ಸಂತ ಜೋಸೆಫರ ಬಗ್ಗೆ ನಿರ್ದಿಷ್ಟ ಭಕ್ತಿ ಹೊಂದಿದ್ದರು..!
ಇತ್ತೀಚಿನ ಕಾಲದಲ್ಲಿ *ವಿಶ್ವಗುರು ಫ್ರಾನ್ಸಿಸ್* ಅವರು ಸಂತ ಜೋಸೇಫ್ ಅವರ ಬಗ್ಗೆ ವಿಶೇಷ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅವರ *“Patris Corde”* ಎಂಬ ಪ್ರೇಷಿತಪತ್ರದಲ್ಲಿ, ಸಂತ ಜೋಸೇಫ್ ಅವರನ್ನು *“ನಿಶ್ಶಬ್ದ ಸೇವಕ”*, *“ಪ್ರೀತಿಯ ತಂದೆ”* ಮತ್ತು *“ಧೈರ್ಯದ ವ್ಯಕ್ತಿ”* ಎಂದು ವರ್ಣಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ದೃಷ್ಟಿಯಲ್ಲಿ, ಸಂತ ಜೋಸೇಫ್ ಪ್ರತಿಯೊಬ್ಬ ಕಾರ್ಮಿಕನಿಗೂ ಮಾದರಿಯಾಗಿದ್ದು, ಯಾವುದೇ ಕೆಲಸವನ್ನು ಗೌರವದಿಂದ ಮಾಡುವ ಪ್ರೇರಣೆಯನ್ನು ನೀಡುತ್ತಾರೆ.
ಪವಿತ್ರ ಕಥೋಲಿಕ ಧರ್ಮಸಭೆಯು ಪ್ರತಿ ವರ್ಷವು ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತದೆ. ಅಂದೇ ವಿಶ್ವ ಕಾರ್ಮಿಕರ ದಿನಾಚರಣೆಯು ಇರುವುದರಿಂದ ಇದೊಂದು ಅವಿನಾಭಾವ ಸಂಬಂಧ ಎಂದರೇ ತಪ್ಪಾಗಲಾರದು. ಕಾರ್ಮಿಕ ದಿನಾಚರಣೆಯನ್ನು ಆಚರಿಸುವ ಸಮಸ್ತ ಕಾರ್ಮಿಕ ಬಂಧುಗಳು ತಮ್ಮ ಹೋರಾಟವನ್ನು ಕೇವಲ ತಮ್ಮ ಬೇಡಿಕೆಗಳಿಗೆ ಮಾತ್ರ ಮೀಸಲಿಡದೆ. ಶೋಷನಾತ್ಮಕ ನೀತಿಯನ್ನು ಬದಲಿಸಲು ಹಾಗೂ ಶ್ರಮಜೀವಿ ಕಾರ್ಮಿಕ ವರ್ಗದ ಐಕ್ಯತೆ ಸಾಧಿಸಲು ಹಾಗೂ ದುಡಿಯುವ ಕಾರ್ಮಿಕ ವರ್ಗಗಳಲ್ಲಿ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಹೋರಾಟ ನಡೆಸಬೇಕಾಗಿದೆ.
ಯೇಸುಕ್ರಿಸ್ತರು ನುಡಿಯುತ್ತಾರೆ.
*"ದುಡಿದು ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವಜನರೇ ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ"* ಎಂದು (ಮತ್ತಾಯ 11:28) ಈ ವಾಕ್ಯದಲ್ಲಿ ವಿಶ್ರಾಂತಿದಾತ ಪ್ರಭು ಕ್ರಿಸ್ತರು ಶ್ರಮಜೀವಿಗಳನ್ನು ಕುರಿತು ಕರೆದಿದ್ದಾರೆ. ಸೋಮಾರಿಗಳನ್ನಲ್ಲ ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕಾಗಿದೆ.
ಸಂತ ಪೌಲರು ತಿಳಿಸುತ್ತಾರೆ. *"....ಮೈಗಳ್ಳತನದಿಂದ ದಿನಗಳೆಯುವ ಯಾವ ಸೋದರನೊಂದಿಗೂ ಸಂಪರ್ಕವಿಟ್ಟುಕೊಳ್ಳಬೇಡಿ. ದುಡಿಯಲೊಲ್ಲದವನು ಉಣಲೂ ಬಾರದು"* (2 ಥೆಸಲೋನಿಕ 3:6-10) ಎಂದು ಆದುದರಿಂದ ಶ್ರಮಜೀವಿ ಕಾರ್ಯತತ್ವವು ನಮ್ಮ ಉಸಿರಾಗಲಿ, ಕಾರ್ಮಿಕ ಪಾಲಕ ಸಂತ ಜೋಸೆಫರ ಆದರ್ಶವು ಪ್ರತಿ ಕಾರ್ಮಿಕ ಬಂಧುಗಳಿಗೆ ಪ್ರೇರಣೆಯಾಗಲಿ ಎಂದು ಸಮಸ್ತ ಕಾರ್ಮಿಕ ಬಂಧುಗಳಿಗೆ ವಿಶ್ವಕಾರ್ಮಿಕ ದಿನಾಚರಣೆಯ
ಹಾಗೂ
*ಕಾರ್ಮಿಕರ ಪಾಲಕ ಸಂತ ಜೋಸೆಫರ ಹಬ್ಬದ ಹಾರ್ಧಿಕ ಶುಭಾಶಯಗಳು.*