#ದಿನಕ್ಕೊಂದು ಕಥೆ
#ಜಾಜಲಿ
ಹಿಂದೆ ಜಾಜಲಿ ಎಂಬ ಮಹಾತಪಸ್ವಿಯೊಬ್ಬ ಅರಣ್ಯದಲ್ಲಿ ವಾಸವಾಗಿದ್ದ. ಜಾಜಲಿಯು ತಪೋಧನನಾಗಿದ್ದ ಹಾಗೂ ಕಠೋರವ್ರತನಿಷ್ಠನಾಗಿದ್ದು ಮನೋವೇಗದಿಂದಲೇ ಎಲ್ಲ ಲೋಕಗಳನ್ನು ಸಂಚರಿಸುತ್ತಿದ್ದ. ಭೂಮಿಯೇ ಹಾಸಿಗೆ, ಆಕಾಶವನ್ನೇ ಹೊದಿಕೆಯನ್ನಾಗಿಸಿಕೊಂಡು ಮಳೆ, ಚಳಿ, ಬಿಸಿಲು, ಗಾಳಿಗೆ ಅಂಜದೇ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ. ಅಂತಹ ಘೋರ ತಪಸ್ಸನ್ನು ಮಾಡಿದರೂ ಜಾಜಲಿಗೆ ಧರ್ಮದ ಜ್ಞಾನವುಂಟಾಗಲೇ ಇಲ್ಲ. ಧರ್ಮದ ಪೂರ್ಣಸ್ವರೂಪದ ಅನುಭವ ತನಗಾಗದ್ದರಿಂದ ಅವನು ಖಿನ್ನನಾಗಿದ್ದ, ಇನ್ನೂ ಕಠಿಣವಾದ ತಪಸ್ಸನ್ನು ಮುಂದುವರೆಸಿದ. ಹೀಗಿರುವಾಗ ಒಮ್ಮೆ ಬಯಲಿನಲ್ಲಿ ಏಕಪಾದದಲ್ಲಿ ನಿಂತು ತಪಸ್ಸು ಮಾಡುತ್ತಿರುವಾಗ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಜಾಜಲಿ ಅದನ್ನು ಲೆಕ್ಕಿಸದೇ ತನ್ನ ತಪದಲ್ಲೇ ನಿರತನಾಗಿದ್ದ. ಅವನ ತಲೆಕೂದಲು ಜಡೆಗಟ್ಟಿದವು, ಕಾಡಿನ ವಾಸದಿಂದ ಅವನ ಶರೀರ ಮಲಿನವಾಗಿತ್ತು, ವಾಯುವನ್ನೇ ಆಹಾರವನ್ನಾಗಿ ಸ್ವೀಕರಿಸುತ್ತಿದ್ದರಿಂದ ದೇಹ ಕೃಶವಾಗಿತ್ತು. ಎಲ್ಲವನ್ನೂ ನಿರ್ಲಕ್ಷಿಸಿ ಒಣಗಿದ ಮರದಂತೆ ನಿಶ್ಚೇಷ್ಟನಾಗಿ ನಿಂತುಬಿಟ್ಟ!
ಅಲ್ಲಾಡದೇ ನಿಂತ ಜಾಜಲಿಯ ಜಡೆಗಟ್ಟಿದ ತಲೆಯ ಮೇಲೆ ಗುಬ್ಬಚ್ಚಿ ದಂಪತಿಗಳು ಗೂಡು ಮಾಡಿಕೊಂಡವು. ಹುಲ್ಲು – ತರಗೆಲೆಗಳನ್ನು ತಂದು ಗೂಡು ಕಟ್ಟುತ್ತಿದ್ದರೂ ಜಾಜಲಿ ಅಲ್ಲಾಡಲಿಲ್ಲ ಬದಲಾಗಿ ಅದನ್ನು ಉಪೇಕ್ಷಿಸಿದ. ಕಂಬದAತೆ ನಿಂತಿದ್ದ ಋಷಿಯು ತಮಗೆ ಏನೂ ತೊಂದರೆ ಮಾಡುವುದಿಲ್ಲ ಎಂಬುದನ್ನು ತಿಳಿದ ಗುಬ್ಬಚ್ಚಿಗಳು ಅವನ ಮೇಲಿನ ವಿಶ್ವಾಸದಿಂದ ಅಲ್ಲಿಯೇ ಸುಖವಾಗಿ ವಾಸಮಾಡತೊಡಗಿದವು. ಮಳೆಗಾಲ ಮುಗಿದು ಚಳಿಗಾಲ ಆರಂಭವಾಯಿತು. ಪ್ರಕೃತಿನಿಯಮದಂತೆ ಗುಬ್ಬಚ್ಚಿಗಳು ಋಷಿಯ ತಲೆಯಮೇಲಿದ್ದ ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟವು. ಜಾಜಲಿಗೂ ಈ ವಿಷಯ ತಿಳಿಯಿತು. ದಯಾಳುವಾದ ಅವನಿಗೆ ಪಕ್ಷಿಗಳಿಗೆ ತೊಂದರೆ ಮಾಡುವುದು ಇಷ್ಟವಿರಲಿಲ್ಲ. ಇನ್ನೂ ಸ್ಥಿರವಾಗಿ ನಿಂತ. ಗುಬ್ಬಚ್ಚಿಗಳು ಬೆಳಿಗ್ಗೆ ಆಹಾರವನ್ನರಸಿ ಹೋಗಿ ಸಂಜೆಯಾಗುವಷ್ಟರಲ್ಲಿ ಗೂಡಿಗೆ ಹಿಂದಿರುಗುತ್ತಿದ್ದವು. ಮೊಟ್ಟೆಗಳು ಸುರಕ್ಷಿತವಾಗಿರುವುದರಿಂದ ಅವುಗಳಿಗೆ ಯಾವುದೇ ಭಯವಿರಲಿಲ್ಲ. ಸ್ವಲ್ಪಕಾಲದ ನಂತರ ಮೊಟ್ಟೆಗಳು ಒಡೆದು ಪುಟ್ಟ ಹಕ್ಕಿಮರಿಗಳು ಹೊರಬಂದವು. ಮರಿಗಳು ಬೆಳೆಯುತ್ತಾ ಜಾಜಲಿಯ ಮೈಮೇಲೆ ಕುಳಿತವು. ರೆಕ್ಕೆ ಬಲಿತ ಮರಿಗಳು ಅಪ್ಪ-ಅಮ್ಮ ಗುಬ್ಬಚ್ಚಿಗಳೊಂದಿಗೆ ತನ್ನ ಸುತ್ತೆಲ್ಲ ಹಾರಾಡುವುದನ್ನು ಕಂಡು ಋಷಿಯು ಹರ್ಷಿತನಾದ. ಕಾಲಕಳೆದಂತೆ ಎಲ್ಲ ಪಕ್ಷಿಗಳು ಗೂಡನ್ನು ತೊರೆದು ಬೇರೆಡೆಗೆ ಹಾರಿಹೋದವು. ಹಕ್ಕಿಗಳು ಹೊರಟುಹೋದ ನಂತರ ಜಾಜಲಿಗೆ ಒಂದು ರೀತಿಯ ವಿಭ್ರಮ ಉಂಟಾಯಿತು. ತಾನು ಸಿದ್ಧಪುರುಷನಾದೆ ಎಂಬ ಅಹಂಕಾರವೊಂದು ಹುಟ್ಟಿಕೊಂಡಿತು. ತಾನು ಧರ್ಮಾತ್ಮನಾದೆ ಎಂದು ಜೋರಾಗಿ ಘೋಷಿಸಿದ. ಅಷ್ಟರಲ್ಲಿ ಅಂತರಿಕ್ಷವಾಣಿಯೊಂದು ಧ್ವನಿಸಿತು “ಜಾಜಲಿಯೇ, ಧರ್ಮದಲ್ಲಿ ನೀನು ವಾರಾಣಸಿಯಲ್ಲಿರುವ ಪ್ರಾಜ್ಞನಾದ ತುಲಾಧಾರನಿಗೆ ಸಮಾನನಲ್ಲ” ಎಂದಿತು. ಇದರಿಂದ ಕುಪಿತನಾದ ಜಾಜಲಿ ತುಲಾಧಾರನನ್ನು ಸಂದರ್ಶಿಸಲು ಹೊರಟ.
ತುಲಾಧಾರನು ಒಬ್ಬ ವೈಶ್ಯನಾಗಿದ್ದನು. ಜೀವನ ನಿರ್ವಹಣೆಗಾಗಿ ವೈಶ್ಯವೃತ್ತಿಯಲ್ಲಿದ್ದರೂ ವ್ಯವಹಾರಗಳಲ್ಲಿ ಮೋಸ-ವಂಚನೆರಹಿತನಾಗಿದ್ದ. ಪ್ರಾಣಿಜಂತುಗಳಲ್ಲಿ ಕರುಣೆಯನ್ನಿಟ್ಟು ಸಾಧ್ಯವಾದಷ್ಟು ಸತ್ಕಾರ್ಯಗಳಲ್ಲಿ ನಿರತನಾಗಿದ್ದ. ಜಿತೇಂದ್ರಿಯನಾಗಿದ್ದ ಅವನಿಗೆ ವಿಷಯಾಸಕ್ತಿಯು ಇರಲಿಲ್ಲ. ವೇದ ಉಪನಿಷತ್ತುಗಳಲ್ಲಿ ಹೇಳಲ್ಪಟ್ಟ ಪರಬ್ರಹ್ಮತತ್ತ್ವವನ್ನು, ಧರ್ಮಸೂಕ್ಷ್ಮಗಳನ್ನು ತುಲಾಧಾರನು ಜಾಜಲಿಗೆ ವಿವರಿಸಿದನು. ಆತ್ಮಯಜ್ಞ, ದ್ರವ್ಯಯಜ್ಞ, ಕಾಮ್ಯಯಜ್ಞ, ಮನೋತಪೋಯಜ್ಞಗಳು, ಮುಂತಾದ ಯಜ್ಞಕರ್ಮಗಳನ್ನು, ಅವುಗಳ ಅನುಷ್ಠಾನ, ಆಚರಣೆಗಳ ಉದ್ದಿಶ್ಯವನ್ನು ತಿಳಿಸುತ್ತಾನೆ. ಸನಾತನವಾಗಿ ಹರಿದು ಬಂದ ಧರ್ಮತತ್ತ್ವಗಳನ್ನು ಬೋಧಿಸಿದ ತುಲಾಧಾರನ ಮಾತುಗಳಿಂದ ಜಾಜಲಿಯು ಪ್ರಭಾವಿತನಾದ, ಧರ್ಮದ ನಿಜಾರ್ಥವನ್ನು ಅರಿತ. ನಂತರ ತಪೋಮಾರ್ಗದಲ್ಲಿ ಈ ಧರ್ಮತತ್ತ್ವಗಳನ್ನು ಅಳವಡಿಸಿಕೊಂಡು, ಆಜೀವಪರ್ಯಂತ ಪಾಲಿಸುತ್ತ ನಿಜಾನಂದವನ್ನು ಹೊಂದಿದ.
🙏🏻
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏