ShareChat
click to see wallet page
search
#ದಿನಕ್ಕೊಂದು ಕಥೆ #ಭಕ್ತ ಅಂಬರೀಷನ ಕಥೆ ಅಂಬರೀಷ ಮಹಾರಾಜನು ಶ್ರೀಕೃಷ್ಣನ ಅಂತರಂಗದ ಭಕ್ತರಲ್ಲಿ ಒಬ್ಬನಾಗಿದ್ದ. ನಿಜವಾದ ದೈವಭಕ್ತರಿಗೆ ಭಕ್ತಿಯಲ್ಲದೆ ಮತ್ತೇನೂ ರುಚಿಸುವುದಿಲ್ಲ. ಅಂಬರೀಷನು ಅಷ್ಟು ದೊಡ್ಡ ಸಾಮ್ರಾಜ್ಯಕ್ಕೆ ಒಡೆಯನಾದರೂ, ಅವನಿಗೆ ರಾಜ್ಯದ ಲೋಭವಿರಲಿಲ್ಲ. ಅವನ ಪರಿಶುದ್ಧವಾದ ಭಕ್ತಿಯನ್ನು ಶ್ರೀಹರಿಯು ಬಹಳವಾಗಿ ಮೆಚ್ಚಿಕೊಂಡಿದ್ದ. ಅಷ್ಟೇ ಅಲ್ಲ ಅವನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೂ ಕಾವಲಿಗೆ ಇರಿಸಿದ್ದ. ದಿವ್ಯಶಕ್ತಿಯ ಆ ಚಕ್ರವು ಅದೃಶ್ಯ ರೂಪದಲ್ಲಿ ಇದ್ದುಕೊಂಡು ಅವನನ್ನು ರಕ್ಷಿಸುತ್ತಿತ್ತು. ಒಂದು ಸಲ ಅಂಬರೀಷ ರಾಜನು ತನ್ನ ಹೆಂಡತಿಯೊಂದಿಗೆ ಏಕಾದಶೀ ವ್ರತವನ್ನು ಕೈಗೊಂಡ. ರಾಜನು ಯಮುನಾ ನದಿಯಲ್ಲಿ ಸ್ನಾನಮಾಡಿದ. ತನ್ನ ಆರಾಧ್ಯ ದೈವನಾದ ಪದ್ಮನಾಭನಿಗೆ ಅಭಿಷೇಕ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿದ. ಆ ಸಮಯದಲ್ಲಿ ನೂರಾರು ಮಂದಿ ಬ್ರಾಹ್ಮಣರಿಗೆ ಗೋವುಗಳನ್ನೂ, ಬೆಳ್ಳಿ, ಬಂಗಾರ, ವಸ್ತ್ರ, ದಕ್ಷಿಣೆಗಳನ್ನು ಸಂತೋಷದಿಂದ ದಾನಮಾಡಿದ. ಇಷ್ಟೆಲ್ಲಾ ಕಾರ್ಯಗಳು ನಿಯಮಬದ್ಧವಾಗಿ ನಡೆದ ಮೇಲೆ, ಮರುದಿನ ರಾಜನು ಪಾರಣೆಯ ಆಚರಣೆಗೆ ಸಿದ್ಧನಾಗತೊಡಗಿದ. ಆ ಸಮಯಕ್ಕೆ ಸರಿಯಾಗಿ ಕೋಪ ಸ್ವಭಾವದ ದೂರ್ವಾಸ ಮುನಿಗಳು ಅಲ್ಲಿಗೆ ದಯಮಾಡಿಸಿದರು. ಅಂಬರೀಷನು ಅವರನ್ನು ಭಯ-ಭಕ್ತಿಗಳಿಂದ ಸ್ವಾಗತಿಸಿದ, ಸತ್ಕರಿಸಿದ. ಅವರು – “ನಾನು ನದಿಗೆ ಹೋಗಿ ಸ್ನಾನ – ಸಂಧ್ಯಾವಂದನೆಗಳನ್ನು ಮುಗಿಸಿಕೊಂಡು ಬರುತ್ತೇನೆ. ಅಷ್ಟರಲ್ಲಿ ಊಟದ ವ್ಯವಸ್ಥೆ ಮಾಡಿಸು,” ಎಂದು ಹೇಳಿ ಯಮುನಾ ನದಿಗೆ ಹೊರಟರು. ಮುನಿಗಳ ಭೋಜನಕ್ಕೆ ವ್ಯವಸ್ಥೆ ಮಾಡಲಾಯಿತು. ಆದರೆ ಮುನಿಗಳು ಪಾರಣೆ ಸಮಯಕ್ಕೆ ಬರಲಿಲ್ಲ. ರಾಜನು ವ್ರತದ ನಿಯಮದಂತೆ ದ್ವಾದಶಿಯ ಮುಹೂರ್ತ ಕಳೆಯುವ ಮೊದಲೆ ಪಾರಣೆ ಮಾಡಬೇಕಾಗಿತ್ತು. ಆದರೆ ದೂರ್ವಾಸರು ಬರುವ ಲಕ್ಷಣ ಕಾಣಿಸಲಿಲ್ಲ. ಇದರಿಂದ ಅಂಬರೀಷನಿಗೆ ಸಮಸ್ಯೆಯಾಯಿತು. ಈಗ ಏನು ಮಾಡಬೇಕೋ ತಿಳಿಯಲಿಲ್ಲ. ಜ್ಞಾನಿಗಳಾದ ಹಿರಿಯ ಬ್ರಾಹ್ಮಣರನ್ನು ಕರೆದು “ಈಗ ನಾನೇನು ಮಾಡಲಿ? ಈ ಸಮಸ್ಯೆಯಿಂದ ನಾನು ಹೇಗೆ ಪಾರಾಗಲಿ,” ಎಂದು ಕೇಳಿದ. ದೂರ್ವಾಸರು ಅತಿಥಿಗಳಾಗಿ ಅಲ್ಲಿಗೆ ಬಂದಿದ್ದರು. ಅವರನ್ನು ಬಿಟ್ಟು ರಾಜನು ಊಟ ಮಾಡುವಂತಿರಲಿಲ್ಲ. ರಾಜ ಅಂಬರೀಷನು ತರುವಾಯ ಸ್ವಲ್ಪ ನೀರು ಕುಡಿದು ಪಾರಣೆ ವಿಧಿಯನ್ನು ಮುಗಿಸಿದ. ಸ್ವಲ್ಪ ಹೊತ್ತಿಗೆ ದೂರ್ವಾಸರು ಅರಮನೆಗೆ ಬಂದರು. ಆಗ ಅವರಿಗೆ ತಮ್ಮ ಯೋಗದೃಷ್ಟಿಯಿಂದ ರಾಜನು ನೀರು ಸೇವಿಸಿದ ಸಂಗತಿ ತಿಳಿದುಹೋಯಿತು. ಹೇಳಿ ಕೇಳಿ ಅವರು ಮೊದಲೇ ಮಹಾ ಕೋಪಿಷ್ಟರು. ಹೊತ್ತು ಮೀರಿದ್ದರಿಂದ ಹಸಿವಿನ ಬಾಧೆಯೂ ಅವರನ್ನು ಕಾಡತೊಡಗಿತ್ತು. ಇದರ ಜೊತೆಗೆ ರಾಜನು ತಮಗೆ ಅಪಚಾರ ಮಾಡಿದ್ದಾನೆ ಎಂದು ತಿಳಿದ ಮೇಲೆ ಅವರು ಕೆಂಡಮಂಡಲವೇ ಆಗಿಬಿಟ್ಟರು. ನಿರಪರಾಧಿಯಾದ ಅಂಬರೀಷ ಮಹಾರಾಜನು ದೂರ್ವಾಸರಿಗೆ ಎಷ್ಟು ಸಮಾಧಾನ ಹೇಳಿದರೂ ಪ್ರಯೋಜನವಾಗಲಿಲ್ಲ. ಕೋಪಾವೇಶದ ಭರದಲ್ಲಿ ದೂರ್ವಾಸರು ತಮ್ಮ ತಲೆಯಿಂದ ಒಂದು ಕೂದಲನ್ನು ಮಂತ್ರಿಸಿ, ಅದು ಒಂದು ದೊಡ್ಡ ರಾಕ್ಷಸವಾಗುವಂತೆ ಮಾಡಿದರು. ಬೆಂಕಿಯ ಸ್ವರೂಪದ ಆ ಭಯಂಕರ ಭೂತವು ಅರಮನೆಯೇ ಅದುರುವಂತೆ ಕೂಗಿಡುತ್ತಾ ಕೈಯಲ್ಲಿ ತ್ರಿಶೂಲ ಹಿಡಿದು ರಾಜನನ್ನು ಕೊಲ್ಲಲು ಮುಂದಾಯಿತು. ಆಗ ಶ್ರೀಹರಿಯ ಪರಮ ಭಕ್ತನಾದ ಅಂಬರೀಷನು ಸ್ವಲ್ಪವೂ ಹೆದರಲಿಲ್ಲ. ನಿಂತ ಸ್ಥಳದಿಂದ ಕದಲಲೂ ಇಲ್ಲ. ಅವನು ಹರಿಯನ್ನು ಸ್ಮರಿಸುತ್ತಾ ನಿಂತುಬಿಟ್ಟ. ಮಾಯದ ಭೂತವು ಅಂಬರೀಷನ ಸನಿಹಕ್ಕೆ ಬರುವುದೇ ತಡ, ಸದಾ ಅವನ ರಕ್ಷಣೆಗಾಗಿ ಅದೃಶ್ಯ ರೂಪದಲ್ಲಿ ಇರುತ್ತಿದ್ದ ವಿಷ್ಣುಚಕ್ರವು ಅದನ್ನು ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡಿಬಿಟ್ಟಿತು. ಅನಂತರ ಅದು ಗರಗರನೆ ತಿರುಗುತ್ತಾ ದೂರ್ವಾಸರ ಕಡೆಗೂ ಬರತೊಡಗಿತು. ಇದರಿಂದ ಭೀತರಾದ ಮುನಿಗಳು ಅಲ್ಲಿಂದ ಓಡತೊಡಗಿದರು. ಆಗ ಚಕ್ರವೂ ಅವರ ಬೆನ್ನಟ್ಟಿ ಹೊರಟಿತು. ಮುನಿಗಳು ಎಲ್ಲಿಗೆ ಹೋದರೂ ಅದು ಅವರನ್ನು ಬಿಡಲಿಲ್ಲ. ಅವರು ಮೂರು ಲೋಕಗಳನ್ನು ಸುತ್ತಿ ಬಂದರೂ, ಚಕ್ರದ ಭಯ ನಿವಾರಣೆಯಾಗಲಿಲ್ಲ. ಕಡೆಗೆ ಅವರು ಸತ್ಯಲೋಕಕ್ಕೆ ಹೋಗಿ ಬ್ರಹ್ಮದೇವನನ್ನು ಕಂಡರು. ಆತನಲ್ಲಿ, “ಹೇ ಪಿತಾಮಹನೆ, ಶ್ರೀಹರಿಯ ಸುದರ್ಶನ ಚಕ್ರವು ನನ್ನನ್ನು ಕೊಲ್ಲಲು ಅಟ್ಟಿಸಿಕೊಂಡು ಬರುತ್ತಿದೆ. ದಯವಿಟ್ಟು ನೀನು ಅದನ್ನು ಶಾಂತಗೊಳಿಸಿ ನನ್ನನ್ನು ರಕ್ಷಿಸು,” ಎಂದು ಬೇಡಿಕೊಂಡರು. ಅದಕ್ಕೆ ಬ್ರಹ್ಮದೇವನು, “ಎಲೈ ದೂರ್ವಾಸನೆ, ಅಂಬರೀಷನು ಶ್ರೀಹರಿಯ ಅಂತರಂಗದ ಭಕ್ತ. ಅವನು ಕನಸಿನಲ್ಲೂ ತಪ್ಪು ಮಾಡುವುದಿಲ್ಲ. ಅಂತಹ ಪುಣ್ಯಾತ್ಮನನ್ನು ನೀನು ಹೀನವಾಗಿ ನಿಂದಿಸಿದೆ. ನಾನು ಲೋಕದ ಸೃಷ್ಟಿಕರ್ತ ಎಂಬುದು ನಿಜ. ಆದರೆ ನನ್ನ ಸೃಷ್ಟಿ ವಿಶ್ವಾತ್ಮನಾದ ಆ ಭಗವಂತನಿಂದಲೇ ಆಗಿದೆ. ಹೀಗಿರುವಾಗ ಆತನ ಚಕ್ರದ ವೇಗವನ್ನು ತಡೆಗಟ್ಟುವ ಶಕ್ತಿ ನನಗೆಲ್ಲಿದೆ?” ಎಂದು ಹೇಳಿಬಿಟ್ಟ. ಆಗ ದೂರ್ವಾಸರು ಕೈಲಾಸಕ್ಕೆ ಓಡಿದರು. ಅಲ್ಲಿ ಶಿವಶಂಕರನನ್ನು ಕಂಡು ಅಡ್ಡಬಿದ್ದರು. ಚಕ್ರದ ವಿಚಾರವನ್ನು ವಿವರಿಸಿ, “ಹೇ ಪಾರ್ವತೀ ರಮಣ, ನನ್ನನ್ನು ಕಾಪಾಡು, ಕಾಪಾಡು,” ಎಂದು ಪ್ರಾರ್ಥಿಸಿದರು. ಆಗ ಶಿವನೂ ಸಹ ಬ್ರಹ್ಮದೇವನು ಹೇಳಿದ ಮಾತುಗಳನ್ನೇ ಹೇಳಿ ಅವರನ್ನು ಅಲ್ಲಿಂದ ಕಳಿಸಿಬಿಟ್ಟ. ಆಗ ನೊಂದ ಮುನಿಗಳು ನೇರವಾಗಿ ವೈಕುಂಠಕ್ಕೆ ಹೋಗಿ ಶ್ರೀಮನ್ನಾರಾಯಣನನ್ನೇ ಕಂಡರು. ಪ್ರಾಣಭಯದಿಂದ ತಲ್ಲಣಿಸುತ್ತಿದ್ದ ಅವರು ಆತನಿಗೂ ವಿಷಯವನ್ನು ತಿಳಿಸಿ ಪ್ರಾಣಭಿಕ್ಷೆಯನ್ನು ಬೇಡಿದರು. ಆಗ ಶ್ರೀಹರಿಯು, “ಎಲೈ ದೂರ್ವಾಸ ಮುನಿಯೇ, ನನ್ನ ಪ್ರೀತಿಯ ಭಕ್ತನಾದ ಅಂಬರೀಷ ರಾಜನ ಮೇಲೆ ನೀನು ವಿನಾಕಾರಣ ಕೆರಳಿದೆ, ಅವನಿಗೆ ಕೇಡು ಮಾಡುವುದಕ್ಕೂ ಮುಂದಾದೆ. ಅವನಿಗೆ ಕೇಡು ಬಗೆಯುವವರನ್ನು ನಿರ್ನಾಮಮಾಡು ಎಂಬ ಆದೇಶವನ್ನು ನಾನು ಸುದರ್ಶನ ಚಕ್ರಕ್ಕೆ ನೀಡಿದ್ದೇನೆ. ಆದುದರಿಂದಲೇ ಅದು ನಿನ್ನ ಹಿಂದೆ ಬಿದ್ದಿದೆ. ಈಗ ನಾನೂ ಸಹ ಅದರ ವೇಗಕ್ಕೆ ತಡೆಹಾಕಲಾರೆ,” ನೀನು ಈ ಕೂಡಲೇ ಅಂಬರೀಷನ ಬಳಿಗೇ ಹೋಗು. ಆತನಲ್ಲಿ ಕ್ಷಮೆ ಬೇಡು. ಚಕ್ರದ ಭಯವನ್ನು ನೀಗಿಸು ಎಂದು ಅವನನ್ನೇ ಕೇಳಿಕೋ. ಆಗ ನಿನ್ನ ಪ್ರಯತ್ನ ತಪ್ಪದೆ ಫಲಿಸುವುದು,” ಎಂದು ಸಲಹೆ ನೀಡಿದ. ಅದಕ್ಕೆ ದೂರ್ವಾಸರು `ಹಾಗೆಯೇ ಆಗಲಿ,’ ಎನ್ನುತ್ತಾ ಅಂಬರೀಷನ ಅರಮನೆಗೆ ಓಡಿದರು. ಅವನ ಅರಮನೆಗೆ ಬಂದವರೇ ಓಡಿಹೋಗಿ ಅವನ ಪಾದಗಳ ಮೇಲೆ ಬಿದ್ದರು. “ಹೇ ಅಂಬರೀಷ ಮಹಾರಾಜ, ನಾನು ನಿನ್ನ ನಿರ್ಮಲವಾದ ಭಕ್ತಿ, ಪರಿಶುದ್ಧವಾದ ಆಚಾರ-ವಿಚಾರಗಳನ್ನು ಅರ್ಥಮಾಡಿಕೊಳ್ಳದೆ ಮೂರ್ಖತನ ಮಾಡಿದೆ. ಹೇ ಮಹಾತ್ಮ, ದಯವಿಟ್ಟು ನನ್ನ ಅಪರಾಧವನ್ನು ಕ್ಷಮಿಸು. ಆ ಚಕ್ರದ ಕೋಪವನ್ನು ಶಾಂತಗೊಳಿಸಿ ನನ್ನ ಪ್ರಾಣವನ್ನು ರಕ್ಷಿಸು,” ಎಂದು ಗೋಳಿಟ್ಟರು. ಅವನು ಅವರನ್ನು ಆದರ ಭಾವದಿಂದ ಎಬ್ಬಿಸಿ ಸಮಾಧಾನಪಡಿಸಿದ. ಬಳಿಕ ಭಗವಂತನನ್ನು ಧ್ಯಾನಿಸುತ್ತಾ – “ಹೇ ಪರಮಾತ್ಮ ದಯಾಸಾಗರ, ದಯಮಾಡಿ ಈ ಪೂಜ್ಯರನ್ನು ಕಾಪಾಡು. ನನ್ನ ಭಕ್ತಿ ಶ್ರದ್ಧೆ, ಆಚಾರ – ವಿಚಾರಗಳಿಂದ ನಿನಗೆ ಸಂತೋಷವಾಗಿದ್ದರೆ, ಈ ವಯೋವೃದ್ಧರೂ ಜ್ಞಾನವೃದ್ಧರೂ, ಮಹಾಮಹಿಮರೂ ಆಗಿರುವ ದೂರ್ವಾಸ ಮುನಿಗಳಿಗೆ ಮಂಗಳವಾಗುವಂತೆ ಮಾಡು” ಎಂದು ಪರಿಪರಿಯಾಗಿ ಪ್ರಾರ್ಥಿಸಿದ. ಆತನಕ ಬೆಂಕಿಯ ಜ್ವಾಲೆಗಳನ್ನು ಉಗುಳುತ್ತಾ ದೂರ್ವಾಸರನ್ನು ಕಾಡುತ್ತಿದ್ದ ಸುದರ್ಶನ ಚಕ್ರವು, ಅಂಬರೀಷನು ಹೀಗೆ ಪ್ರಾರ್ಥಿಸಿದ ಕೂಡಲೇ ಮಾಯವಾಗಿ ಹೋಯಿತು. ಆಗ ಮುನಿಗಳು ಭಯಮುಕ್ತರಾದರು. ಹೀಗೆ ಪರಿಸ್ಥಿತಿ ಪೂರ್ತಿ ತಿಳಿಗೊಂಡ ಮೇಲೆ ಅಂಬರೀಷ ಮಹಾರಾಜನು ದೂರ್ವಾಸರಿಗೆ ಮೊದಲು ಭೋಜನ ಮಾಡಿಸಿ, ಅನಂತರ ತಾನು ಊಟ ಮಾಡಿದ. ✍🏻 Narayana Shasthry ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ದಿನಕ್ಕೊಂದು ಕಥೆ - ShareChat