***ಧರ್ಮವೆಂಬ_ಪರಮಪದ***
ಬಡಬ್ರಾಹ್ಮಣನೊಬ್ಬ ಧನವನ್ನೇ ಅಪೇಕ್ಷಿಸಿ ಕಾಮ್ಯಯಜ್ಞವೊಂದನ್ನು ಮಾಡಲು ನಿರ್ಧರಿಸಿದ. ಆದರೆ ಯಜ್ಞಮಾಡುವಷ್ಟು ಧನವೂ ಅವನ ಬಳಿ ಇರಲಿಲ್ಲ. ಅದಕ್ಕಾಗಿ ಶ್ರದ್ಧಾಭಕ್ತಿಯಿಂದ ಶುದ್ಧಮನಸ್ಸಿನಿಂದ ದೇವತೆಗಳನ್ನು ಪ್ರಾರ್ಥಿಸಿದ. ಆದರೆ ಯಾವುದೇ ದೇವತೆಯಿಂದ ಅವನಿಗೆ ಧನಪ್ರಾಪ್ತಿಯಾಗಲಿಲ್ಲ. ಆಗ ಬ್ರಾಹ್ಮಣನು ಮನುಷ್ಯರಿಂದ ಮೂರ್ತಿರೂಪದಲ್ಲಿ ಪೂಜಿಸಲ್ಪಡುವ ದೇವತೆಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ದೇವತೆಯು ನನಗೆ ಬೇಗ ಪ್ರಸನ್ನವಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವಾಗ ‘ಕುಂಡಧಾರ’ ಎಂಬ ದೇವತೆಗಳ ಅನುಚರನು ಕಾಣಿಸಿಕೊಳ್ಳುತ್ತಾನೆ. ಅವನನ್ನೇ ಧ್ಯಾನಿಸುತ್ತ ಸರ್ವಸೇವೆಗಳಿಂದ ಪ್ರಸನ್ನಗೊಳಿಸಿದ ಬ್ರಾಹ್ಮಣನಿಗೆ ಆ ದಿನ ಕನಸೊಂದು ಉಂಟಾಯಿತು. ಉತ್ತಮಕರ್ಮಗಳನ್ನು ಮಾಡಿದ ಯಾಚಕರಿಗೆ ದೇವತೆಗಳು ಅವರು ಅಪೇಕ್ಷಿಸಿದ ರಾಜ್ಯ-ಸಂಪತ್ತನ್ನು ಅನುಗ್ರಹಿಸುತ್ತಿದ್ದರು ಹಾಗೂ ಕೆಟ್ಟಕರ್ಮಗಳ ಫಲವನ್ನು ಅನುಭವಿಸುವ ಸಂದರ್ಭದಲ್ಲಿ ತಾವು ಹಿಂದೆ ಅನುಗ್ರಹಿಸಿದ್ದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದರು. ಇದನ್ನು ಕುಂಡಧಾರನು ಗಮನಿಸಿ ತನ್ನ ಮಿತ್ರನಾದ ಬ್ರಾಹ್ಮಣನು ಕ್ಷಣಿಕ ಧನಾಪೇಕ್ಷೆಗೆ ಒಳಗಾಗದೇ ಶಾಶ್ವತವಾದ ಶರೀರಕ್ಲೇಶಗಳಿಂದ ರಹಿತವಾದ ಧರ್ಮದ ಫಲವನ್ನು ಅನುಭವಿಸುತ್ತ ಸದಾ ಧಾರ್ಮಿಕನಾಗಿರಲೆಂದೂ ಮತ್ತು ಅವನ ಬುದ್ಧಿಯು ಧರ್ಮದಲ್ಲೇ ಸ್ಥಿರವಾಗಿರುವಂತೆ ಅನುಗ್ರಹಿಸಲು ದೇವತೆಗಳಲ್ಲಿ ಕೇಳಿಕೊಂಡ. ದೇವತೆಗಳು ಸುಪ್ರೀತರಾಗಿ “ಅಸ್ತು” ಎಂದು ನುಡಿದರು.
ತಕ್ಷಣ ಕನಸಿನಿಂದ ಎಚ್ಚರಗೊಂಡ ಬ್ರಾಹ್ಮಣನ ಪಕ್ಕದಲ್ಲಿ ನಾರುಬಟ್ಟೆಗಳು ಕಾಣಿಸಿದವು. ಅದನ್ನು ನೋಡಿದವನಿಗೆ ಕುಂಡಧಾರನೂ ನನ್ನ ತಪಸ್ಸಿಗೆ ಒಲಿಯಲಿಲ್ಲ ಎಂದು ಭಾವಿಸಿ ವೈರಾಗ್ಯದಿಂದ ಇನ್ನೂ ಹೆಚ್ಚಿನ ತಪಸ್ಸಾಧನೆಗಾಗಿ ಕಾಡಿಗೆ ಹೊರಟ. ಅನ್ನಾಹಾರಗಳನ್ನು ತ್ಯಜಿಸಿ, ವಾಯುಭಕ್ಷನಾಗಿ ಅತ್ಯಂತ ಕಠೋರ ವ್ರತನಿಷ್ಠನಾಗಿ ತಪಸ್ಸಿಗೆ ತೊಡಗಿದ. ಕಾಲಾನಂತರದಲ್ಲಿ ಅವನಿಗೆ ದಿವ್ಯದೃಷ್ಟಿಯುಂಟಾಯಿತು. ಅವನು ಮನಸ್ಸಿನಲ್ಲಿ ಯೋಚಿಸಿದ ಸಂಕಲ್ಪವು ಸಿದ್ಧಿಸುವಂತಹ, ಹೇಳಿದ ಮಾತು ಸತ್ಯವಾಗುವ ವಿಶೇಷ ಸಿದ್ಧಿಯು ಒಲಿಯಿತು. ಇದರಿಂದ ಬ್ರಾಹ್ಮಣನಿಗೆ ಸಂತೋಷವಾಯಿತು. ತಾನು ಅನುಗ್ರಹಿಸಿದವರಿಗೆ ರಾಜ್ಯ-ಸಂಪತ್ತು ಸಿಗುವಂತಹ ಸಿದ್ಧಿ ಅದು. ಅದೇ ಸಮಯಕ್ಕೆ ಕುಂಡಧಾರನೇ ಸಾಕ್ಷಾತ್ತಾಗಿ ಕಾಣಿಸಿಕೊಂಡು “ವಿಪ್ರಶ್ರೇಷ್ಠನೇ, ಧನಸಂಪತ್ತಿನ ಅಪೇಕ್ಷಿಯಾಗಿ ನೀನು ದೇವತೆಗಳನ್ನು ಆರಾಧಿಸಿದೆ. ನಿನಗೀಗ ದಿವ್ಯದೃಷ್ಟಿ ಪ್ರಾಪ್ತವಾಗಿದೆ. ರಾಜ್ಯ-ಕೋಶ-ಸಂಪತ್ತಿನಿಂದ ಮೆರೆದ ರಾಜರೆಲ್ಲ ಈಗ ಹೇಗಿದ್ದಾರೆ, ಅವರೆಲ್ಲ ಯಾವ ಲೋಕಗಳಿಗೆ ಹೋಗಿದ್ದಾರೆ ಎಂಬುದನ್ನು ನೋಡು” ಎಂದು ಹೇಳಿದ. ಬ್ರಾಹ್ಮಣನು ಅದೇ ರೀತಿಯಲ್ಲಿ ನೋಡಲಾಗಿ ಅನೇಕ ರಾಜರ ನರಕದಲ್ಲಿ ಬಿದ್ದಿರುವುದನ್ನು ಕಂಡ.
ಕುಂಡಧಾರನು ಶಾಂತದನಿಯಲ್ಲಿ ಬ್ರಾಹ್ಮಣನಿಗೆ “ವಿಪ್ರೋತ್ತಮ, ದಿವ್ಯದೃಷ್ಟಿಯಿಂದ ರಾಜರ ದುರವಸ್ಥೆಯನ್ನು ಪುನಃ ನೋಡು, ಯಾರು ಧನವನ್ನೂ, ಲೌಕಿಕ ಆಸೆಗಳನ್ನು ಅಪೇಕ್ಷಿಸುವರೋ ಅಂತಹವರಿಗೆ ಸ್ವರ್ಗದ ಬಾಗಿಲು ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ. ನೀನು ನನ್ನನ್ನು ಪೂಜಿಸಿದ ಕೂಡಲೇ ನಾನು ನಿನಗೆ ಧನವನ್ನು ಅನುಗ್ರಹಿಸಿದ್ದರೆ ನಿನ್ನ ಗತಿಯೂ ಇದಕ್ಕೆ ಹೊರತಾಗಿರಲಿಲ್ಲ. ಭೋಗವನ್ನು ಬಯಸುವವರನ್ನು ಕಾಮ, ಕ್ರೋಧ, ಲೋಭ, ಭಯ, ಮದ, ನಿದ್ರೆ, ತೂಕಡಿಕೆ, ಆಲಸ್ಯವೇ ಮೊದಲಾದ ಶತ್ರುಗಳು ಆಕ್ರಮಿಸುತ್ತವೆ. ದೇವತೆಗಳಿಗೆ ಯಾವಾಗಲೂ ಮಾನವರು ತಪಸ್ಸು ಮಾಡಿ ದೈವತ್ವಕ್ಕೆ ಏರುತ್ತಾರೆಂಬ ಭಯವಿದೆ. ಆದ್ದರಿಂದಲೇ ಕಾಮ-ಕ್ರೋಧಾದಿಗಳನ್ನು ಹುಟ್ಟಿಸಿ ಮನುಷ್ಯನು ಮಾಡುವ ತಪಸ್ಸಿಗೆ, ಧರ್ಮಕಾರ್ಯಗಳಿಗೆ ಎಲ್ಲಾ ರೀತಿಯಿಂದಲೂ ತೊಡಕನ್ನು ಉಂಟುಮಾಡುತ್ತವೆ. ಆದರೆ ಧರ್ಮಾತ್ಮನಾಗಲೆಂದೇ ದೇವತೆಗಳಿಂದ ಅನುಗೃಹೀತನಾದವನು ನೀನು. ನಿನ್ನ ತಪೋಬಲದಿಂದ ಯಾಚಕರಿಗೆ ರಾಜ್ಯವನ್ನು, ಧನವನ್ನೂ ಅನುಗ್ರಹಿಸುವ ಸಾಮರ್ಥ್ಯವನ್ನು ಪಡೆದಿರುವೆ. ಇದರಿಂದ ಲೋಕಕ್ಕೆ ಕಲ್ಯಾಣವಾಗುವ ಕಾರ್ಯಗಳನ್ನೇ ಮಾಡು” ಎಂದಾಗ ಬ್ರಾಹ್ಮಣನಿಗೆ ತಾನೆಣಿಸಿದ್ದು ತಪ್ಪು ಎಂಬುದು ತಿಳಿಯಿತು. ಕುಂಡಧಾರನಿಗೆ ಸಾಷ್ಟಾಂಗವೆರಗಿ “ ದೇವಾ, ಧನಾಪೇಕ್ಷಿಯಾದ ನನಗೆ ದೇವತೆಗಳಿಂದ ಅನುಗ್ರಹಿಸಲ್ಪಟ್ಟಿದ್ದ ಧನಾಗಮವನ್ನು ನೀನು ತಪ್ಪಿಸಿದೆ ಎಂದು ನಿನ್ನನ್ನು ಅನ್ಯತಾ ಭಾವಿಸಿದೆ. ಆದರೆ ನೀನು ನನ್ನ ನಿಜವಾದ ಮಿತ್ರನು. ನನಗೆ ಮಹಾನುಗ್ರಹವನ್ನೇ ಮಾಡಿರುವೆ” ಎಂದಾಗ ಕುಂಡಧಾರನು ಅವನನ್ನು ಆತ್ಮೀಯವಾಗಿ ಅಪ್ಪಿಕೊಂಡು ಸಂತೈಸಿ ಹರಸಿ ಹೊರಟುಹೋದನು. ಮುಂದೆ ಬ್ರಾಹ್ಮಣೋತ್ತಮನು ತನ್ನ ತಪಸ್ಸಿದ್ಧಿಯಿಂದ ಧರ್ಮಾಚರಣೆಯಿಂದ ಸತ್ಕಾರ್ಯಗಳನ್ನು ನಡೆಸುತ್ತಾ ಲೋಕಕ್ಕೆ ಹಿತವಾದ ಕಾರ್ಯಗಳಲ್ಲಿ ತೊಡಗಿಕೊಂಡನು.
ದೇವತೆಗಳು, ಬ್ರಾಹ್ಮಣರು, ಸತ್ಪುರುಷರು, ಎಲ್ಲರೂ ಜಗತ್ತಿನಲ್ಲಿ ಧಾರ್ಮಿಕರನ್ನು ಮಾತ್ರವೇ ಪೂಜಿಸುತ್ತಾರೆ. ಕಾಮೋಪಭೋಗಿಗಳನ್ನು ಯಾರೂ ಪೂಜಿಸುವುದಿಲ್ಲ. ಧನದಲ್ಲಿನ ಸುಖವು ಕ್ಷಣಿಕ, ಧರ್ಮಮಾರ್ಗದಲ್ಲಿನ ಸುಖವೇ ಶ್ರೇಷ್ಠ ಮತ್ತು ಶಾಶ್ವತ!!
ಯಾಕೆ ಎಲ್ಲರೂ ಪರಮಪದವನ್ನು ಪಡೆಯಲು ಅಥವಾ ಪರಮಾತ್ಮನಲ್ಲಿ ಒಂದಾಗಲು ಸಾಧ್ಯವಿಲ್ಲ? ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವ ಒಂದು ಮಾತನ್ನು ಗಮನಿಸಿ. ಸಾಮಾನ್ಯವಾಗಿ ಮನುಷ್ಯರು ತಮ್ಮ ಐಹಿಕಸುಖಾಂಕ್ಷಿಗಳಾಗಿಯೇ ದೇವರನ್ನು ಆರಾಧಿಸುತ್ತಾರೆ, ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಕ್ಷಾತ್ ಪರಮಾತ್ಮನನ್ನೇ ಹೊಂದುವ ಸಾಧನೆಯನ್ನು ತೊಡಗಿರುತ್ತಾರೆ. ಯರ್ಯಾರು ಲೌಕಿಕ ವಸ್ತುಗಳನ್ನು ಬಯಸುತ್ತಾರೋ ಅವರಿಗೆ ಭಗವಂತ ಅವರು ಬಯಸಿದ್ದನ್ನು ಮಾತ್ರವೇ ಕೊಡುತ್ತಾನೆ. ಯಾರು ಅವನಲ್ಲೇ ಶರಣಾಗತಿ ಹೊಂದಿ ಅನವರತ ಅವನನ್ನೇ ಧ್ಯಾನಿಸುತ್ತಾರೋ ಅಂತಹವರಿಗೆ ಮಾತ್ರವೇ ತನ್ನಲ್ಲಿ ಸೇರಿಸಿಕೊಳ್ಳುತ್ತಾನೆ.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್


