ShareChat
click to see wallet page
search
#🕉️ ಜೈ ಶ್ರೀ ರಾಮ🙏 ಶ್ರೀರಾಮ ಕಥಾ ಮಹಿಮೆ ಅಧ್ಯಾಯ 1:- ಸುರಪುರವೆಂಬ ಅಗ್ರಹಾರದಲ್ಲಿ ಕೇಶವ ಭಟ್ಟ ಎಂಬ ಬ್ರಾಹ್ಮಣನು ಆಚಾರ ಶೀಲನೂ, ಧರ್ಮಪರಾಯಣನೂ, ನಿಯಮಿಷ್ಠನೂ ಆಗಿದ್ದನು. ಆದರೆ ಬಡತನ ಜೊತೆಗೆ ಅನಾರೋಗ್ಯ ಇದ್ದು ಬಹಳ ಕಷ್ಟ ಪಡುತ್ತಿದ್ದನು.ಆದರೂ ಸತ್ಕುಲ ಪ್ರಸೂತನಾದ ಆ ಬ್ರಾಹ್ಮಣನು ಎಷ್ಟೇ ಕಷ್ಟವಿದ್ದರೂ ಸದಾಚಾರನಾಗಿ, ನಿತ್ಯ ಸೂರ್ಯೋದಯಕ್ಕೂ ಮುನ್ನವೇ ಎದ್ದು ಊರಿನ ಸಮೀಪವಿದ್ದ ಸರೋ ವರಕ್ಕೆ ಹೋಗಿ ನಿತ್ಯ ಕರ್ಮಗಳ ಮುಗಿಸಿ, ದೇವರ ಪೂಜೆಗೆ ಹೂವು ತುಳಸಿ ಗಳನ್ನು ತಂದು ಸ್ನಾನಮಾಡಿ ತನ್ನ ಇಷ್ಟ ದೇವನಾದ ಶ್ರೀರಾಮಚಂದ್ರ ಮೂರ್ತಿಯನ್ನು ಭಕ್ತಿಯಿಂದ ಪೂಜೆಸಿ ವೈಶ್ವದೇವ ಬಲಿಹರಣಗಳನ್ನು ಕೊಟ್ಟು, ಅತಿಥಿಗಳನ್ನು ಸತ್ಕರಿಸುತ್ತಾ,ತನ್ನ ಸಂಸಾರ ಸಾಗಿಸುತ್ತಿದ್ದನು. ಶ್ರೀಮನ್ನಾರಾಯ ಣನು ಇಂತಹ ಭಕ್ತರನ್ನು ಪರೀಕ್ಷಿಸಿ ಅವರಿಗೆ ಮುಕ್ತಿ ಮಾರ್ಗವನ್ನು ತೋರಿಸು ವುದು ನಾರಾಯಣನ ವ್ಯಾಪಾರವಾಗಿದೆ. ಇಂತಿರಲಾಗಿ ಕೇಶವಭಟ್ಟನನ್ನು ಪರೀಕ್ಷಿಸುವ ಸಲುವಾಗಿ ನಾರಾಯಣನು ವೃದ್ಧ ಬ್ರಾಹ್ಮಣ ರೂಪದಲ್ಲಿ ಒಂದು ಮಟ-ಮಟ ಮಧ್ಯಾಹ್ನ ಕೇಶವ ಭಟ್ಟನ ಮನೆಗೆ ಬಂದನು. ಬ್ರಹ್ಮ ವರ್ಚಸ್ಸಿನಿಂದ ತೇಜಸ್ವಿಯಾದ ಆ ವೃದ್ಧ ಬ್ರಾಹ್ಮಣ ನನ್ನು ಆದರದಿಂದ ಸತ್ಕರಿಸಿ ಅರ್ಘ್ಯಪಾದ್ಯಾದಿಗಳನ್ನು ಕೊಟ್ಟು ಮಣೆ ಮೇಲೆ ಕೂರಿಸಿದನು. ನಂತರ ಬ್ರಾಹ್ಮಣನನ್ನು ಕುರಿತು, ಕೇಶವ ಭಟ್ಟ ಕೇಳಿದ, ಹೇ ವಿಪ್ರೋತ್ತಮನೆ, ಪಾಮರನಾದ ನೀವು ಬಂದು ನನ್ನ ಮನೆಯು ನಿಮ್ಮ ಪಾದ ಧೂಳಿಯಿಂದ ಪವಿತ್ರವಾಯಿತು. ನಿಮ್ಮ ದರ್ಶನ ಬಾಗ್ಯದಿಂದ ನನ್ನ ಜನ್ಮ ಸಾರ್ಥಕವಾಯಿತು. ತಾವು ಎಲ್ಲಿಂದ ಬಂದಿರುವಿರಿ, ತಮ್ಮ ನಾಮವೇನು, ಈ ಬಡವನ ಮನೆಗೆ ಬಂದ ಕಾರಣವು ಏನು ಎಂದು ಕೇಳಿದನು. ವೃದ್ಧ ಬ್ರಾಹ್ಮಣ:- ನಿನ್ನ ಈ ಒಣ ಉಪಚಾರದ ಮಾತು ಸಾಕು ನನಗೆ ಬಹಳ ಹಸಿವಾಗಿದೆ ಅದನ್ನು ಮೊದಲು ಪರಿಹರಿಸು ಎಂದನು. ಕೇಶವ ಭಟ್ಟ:- ಸ್ವಲ್ಪ ಆಲೋಚಿಸಿ, ಹೇ ಬ್ರಾಹ್ಮಣ, ಕೇಳು ಈಗ ನಮ್ಮ ಮನೆಯಲ್ಲಿ ಎಲ್ಲರ ಊಟ ಆಗಿದೆ ನಾನಾದರೋ, ಅತ್ಯಂತ ಬಡವನು ನನ್ನ ಸಂಪಾದನೆ ಹೊತ್ತಿಗೆ ಮಾತ್ರ ಸಾಕು. ಇಲ್ಲದಿದ್ದರೆ ಅಂದು ಉಪವಾಸವೇ ಗತಿ. ವೃದ್ಧ ಬ್ರಾಹ್ಮಣ:- ಎಲೈ ಭಟ್ಟನೇ! ಈ ನಿನ್ನ ಕಂತೆ ಪುರಾಣ ನನಗೆ ಬೇಡ. ಹಸಿವನ್ನು ನೀಗಿಸುವೆಯೋ ಇಲ್ಲವೋ ಹೇಳು? ಕೇಶವ ಭಟ್ಟ:- ವಿಪ್ರರೇ , ಇಷ್ಟೊಂದು ಕೋಪ ಬೇಡ ನನ್ನ ಮೊಮ್ಮಗಳ ಎರಡು ಹೊತ್ತಿನ ಊಟಕ್ಕಾಗಿ ಇಟ್ಟಿರುವ ಒಂದು ತುತ್ತು ಅನ್ನವನ್ನು ತಂದು ಕೊಡುವೆನು ಎಂದು ಹೇಳಿ ಅಡುಗೆ ಮನೆಗೆ ಹೋದನು. ಅಡುಗೆ ಮನೆಯಲ್ಲಿ ಅವನ ಪತ್ನಿಯು ಮೊಮ್ಮಗಳ ಸಲುವಾಗಿ ಸ್ವಲ್ಪ ಅನ್ನವನ್ನು ಮುಚ್ಚಿಡುತ್ತಿದ್ದಳು ಆ ಜಾಗವನ್ನು ನೋಡಿದಾಗ ಮುಚ್ಚಳವು ವಾರೆಯಾಗಿತ್ತು ಗಾಬರಿಯಿಂದ ಹತ್ತಿರಕ್ಕೆ ಹೋಗಿ ನೋಡಿದಾಗ ಅದರಲ್ಲಿ ಅನ್ನವಿರಲಿಲ್ಲ. ಬಹುಶಃ ಬೆಕ್ಕು ತಿಂದಿರಬಹುದು ಏನೋ? ಎಂದುಕೊಂಡ ಅಯ್ಯೋ ವಿಧಿಯೇ ಇದ್ದ ಒಂದು ತುತ್ತು ಅನ್ನವು ಅತಿಥಿಗೆ ಕೊಡಲು ಇಲ್ಲವಾಯಿತೇ ಎಂದು ಪ್ರಲಾಪಿಸಿದನು. ಇರುವ ವಿಷಯವನ್ನು ವೃದ್ಧ ಬ್ರಾಹ್ಮಣಗೆ ತಿಳಿಸಿ ಕ್ಷಮೆಯಾಚಿಸಬೇಕೆಂದು ಅಡುಗೆ ಮನೆಯಿಂದ ಕೈಮುಗಿದುಕೊಂಡೇ ಬಂದು ಹೇ ಬ್ರಾಹ್ಮಣನೆ ವಿಧಿ ನನ್ನನ್ನು ಪರೀಕ್ಷಿಸುತ್ತಿದೆ ಪರಮಾತ್ಮನ ಮಾಯೆಯು ನನ್ನನ್ನು ಬಹಳವಾಗಿ ಬಂಧಿಸಿರುವುದು ಆ ಒಂದು ತುತ್ತು ಅನ್ನವನ್ನು ಮಾರ್ಜಾಲ ತಿಂದಿರಬಹುದು ನಾನೇನು ಹೇಳಲಿ ನನ್ನ ಅಪರಾಧವನ್ನು ಮನ್ನಿಸಿ ಎಂದು ಬೇಡಿದನು. ವೃದ್ಧ ಬ್ರಾಹ್ಮಣ- ಏ ಭಟ್ಟನೇ, ಅನ್ನವಿಲ್ಲದಿದ್ದರೆ ಒಂದು ಪಂಚ ಪಾತ್ರೆ ನೀರ ನ್ನಾದರೂ ಕೊಡು ನನ್ನ ಹಸಿವನ್ನು ನೀಗಿಸದೆ ನನ್ನನ್ನು ವೃಥಾ ಕಾಯಿಸುತ್ತಿರುವೆ ಇದೇಯೋ ನಿನ್ನ ಅತಿಥಿ ಸೇವೆ ಎಂಬ ಮಾತನ್ನು ಕೇಳಿಸಿಕೊಂಡು ಕೇಶವ ಭಟ್ಟ ನೀರು ತರಲು ಅಡುಗೆ ಮನೆಗೆ ಬಂದನು. ಹಣೆ ಬರಹ ಎಂಬಂತೆ, 'ಒಳ್ಳೆಯ ಪತಿಗೆ ಕೆಟ್ಟ ಸತಿ, ಕೆಟ್ಟಪತಿಗೆ ಒಳ್ಳೆಯ ಸತಿಯು ದೊರಕುವುದು ಭಗವಂತನ ನಿಯಮವಲ್ಲದೆ ಇನ್ನೇನು? ಕೇಶವ ಭಟ್ಟನಿಗೂ ಹೀಗೆ ಆಗಿತ್ತು. ಸದಾಚಾರ ಸಂಪನ್ನ ಸದ್ಗುಣಿಯಾದ ಕೇಶವ ಭಟ್ಟನಿಗೆ, ಕರ್ಣ ಕಠೋರಳಾದ, ಬಾಯಿ ಮುಂದೆ ಮಾಡುವ, ಒರಟು ಸತಿಯು ದೊರೆತಿದ್ದಳು. ಕೇಶವ ಭಟ್ಟನ ಹಣೆ ಬರಹವೇ ಹಾಗಿತ್ತು. ನೀರನ್ನು ತರಲು ಅಡುಗೆ ಮನೆಗೆ ಹೋದರೆ, ಏತೀ ಅಂದರೆ ಪ್ರೇತಿ ಅನ್ನುವ ಸತಿ ಇರಲು, ಕೇಶವ ಭಟ್ಟನಿಗೆ ಕಿಲುಬು ಕಾಸಿನ ಸ್ವಾತಂತ್ರ್ಯವೂ ಇರಲಿಲ್ಲ ಏನೇ ಮಾಡಬೇಕೆಂದರು ಪತ್ನಿಯನ್ನು ಕೇಳಲೇಬೇಕಿತ್ತು, ಹಾಗೆ ಪತ್ನಿಯನ್ನು ಕರೆದು, ಲೇ, ಹಜಾರದಲ್ಲಿ ಒಬ್ಬವೃದ್ದ ಬ್ರಾಹ್ಮಣ ಹಸಿವಿನಿಂದ ಸಂಕಟ ಪಡುತ್ತಿದ್ದಾನೆ. ಅತಿಥಿಗಳನ್ನು ಆಧರಿಸುವುದು ನಮಗೆ ಶ್ರೇಯಸ್ಕರ ಒಂದು ತುತ್ತು ಅನ್ನ ಕೊಡೋಣ ಎಂದು ಬಂದು ನೋಡಿದರೆ ಅನ್ನ ಮಾಯವಾಗಿತ್ತು. ಈಗ ಅತಿಥಿಯ ಹಸಿವನ್ನು ನೀಗಿಸಲು ಒಂದು ಪಂಚಪಾತ್ರೆ ನೀರನ್ನು ಕೊಟ್ಟು ಸತ್ಕರಿಸಲು ಪಂಚಪಾತ್ರೆಯಲ್ಲಿ ಶುದ್ಧವಾದ ಜಲವನ್ನು ತೆಗೆದುಕೊಂಡು ಹೋಗಿ ಬ್ರಾಹ್ಮಣರಿಗೆ ಕೊಡುವೆನು ಎಂದು ಹೇಳುವುದನ್ನು ಕೇಳಿದ ಕೂಡಲೇ, ಅವನ ಹೆಂಡತಿ ಕೋಪದಿಂದ ಏನೂ? ಬ್ರಾಹ್ಮಣನನ್ನು ಸತ್ಕರಿಸುವುದೇ? ಅವನೇನು ನಿಮಗೆ ಹೊರಿಸಿ ಕೊಡುವನು, ಬಾವಿಗೆ ಹೋಗಿ ನೀರು ತಂದವರಿಗೆ ಅದರ ಕಷ್ಟ ಗೊತ್ತು ಒಂದು ಹನಿ ನೀರು ಇಲ್ಲ ಹೋಗಿ ಎಂದು ಮುಖ ಗಂಟಿಕ್ಕಿ, ಹಲ್ಮುಡಿ ಕಚ್ಚಿ ಗಂಡನನ್ನು ಹೆದರಿಸಿದಳು. ತನ್ನ ಸತಿ ಅಷ್ಟು ಸಿಡುಕಿನಿಂದ ಉತ್ತರ ಕೊಟ್ಟರೂ, ಸತಿಯನ್ನು ಕುರಿತು, ಅಲ್ವೆ ನಿನಗೆ ಅಷ್ಟು ಕಷ್ಟವಾದರೆ, ನನಗೆ ಕುಡಿಯಲು ನಿತ್ಯ ರಾತ್ರಿ ಇಡುವ ಒಂದು ಲೋಟ ನೀರನ್ನು ಈಗಲೇ ನನಗೆ ಕೊಟ್ಟು ಬಿಡು ನಾನು ರಾತ್ರಿ ನೀರನ್ನು ಕುಡಿಯುವುದಿಲ್ಲ. ಎಂದು ಹೇಳಿ ತನಗೆ ರಾತ್ರಿ ಕುಡಿಯಲು ಕೊಡುವ ನೀರನ್ನೆ ತಂದು ವೃದ್ಧ ಬ್ರಾಹ್ಮಣಗೆ ಕೊಟ್ಟನು. ವೃದ್ಧ ಬ್ರಾಹ್ಮಣನು, ಇವರ ಕಷ್ಟವನ್ನೆಲ್ಲ ಅರಿತು, ಬ್ರಾಹ್ಮಣ ನಿನ್ನ ಭಕ್ತಿಗೆ ಮೆಚ್ಚಿದೆನು. ಈ ನಿನ್ನ ದಾರಿದ್ರ ಮಾಯವಾಗಲು ನಿನಗೆ ಶ್ರೀರಾಮಕತಾ ಮತ್ತು ಪೂಜೆಯನ್ನು ತಿಳಿಸುವೆನು ಅದರಂತೆ ನೀನು ಪ್ರತಿ ಶನಿವಾರವೂ ತಪ್ಪದಂತೆ ಆಚರಿಸು, ನಿನ್ನ ಕಷ್ಟ ಕಾರ್ಪಣ್ಯಗಳೆಲ್ಲಾ ಕಳೆದು ಅತ್ಯಂತ ಸುಖ ಪಡುವೆ ಎಂದು ಉಪದೇಶಿಸಿ ಶ್ರೀಮನ್ನಾರಾಯಣನು ಅಂತರ್ಧಾನನಾದನು. ಶ್ರೀರಾಮ ಕಥೆ ಮತ್ತು ಪೂಜಾ ಕ್ರಮ :- ಕೇಶವ ಭಟ್ಟನು ಪ್ರತಿ ಶನಿವಾರವು ಸೂರ್ಯೋದಯಕ್ಕೆ ಎದ್ದು ಮನೆಯನ್ನು ಗೋಮಯದಿಂದ ಸಾರಿಸಿ ದೇವರ ಉಪಕರಣೆಗಳನ್ನು ತೊಳೆದು, ನದಿ, ಸರೋವರ, ಹಳ್ಳ ,ಕೆರೆ, ಕೊಳ, ಎಲ್ಲಾದರೂ ಸ್ನಾನ ಮಾಡಿ, ಪೂಜೆಗೆ ಬೇಕಾದ ಪತ್ರ - ಪುಷ್ಪ ಗಳನ್ನು ಸಂಗ್ರಹಿಸಿ, ಜಪ- ತಪ- ಧ್ಯಾನ ಗಳನ್ನು ಮುಗಿಸಿ, ಶ್ರೀರಾಮನ ನೈವೇದ್ಯಕ್ಕೆ ಬೇಕಾಗುವ (ಒಂದು ಅಳತೆಯಲ್ಲಿ) ಐದು ಭಾಗ ಗೋಧಿಹಿಟ್ಟು ಅಥವಾ ಅಕ್ಕಿ ಹಿಟ್ಟು, ಐದು ಭಾಗ ಬೆಲ್ಲ, ಐದು ಭಾಗ ತುಪ್ಪ, ಇವುಗಳನ್ನೆಲ್ಲ ಸೇರಿಸಿ, ಉಂಡೆಗಳನ್ನು ತಯಾರಿಸಿ, ಶ್ರೀರಾಮಚಂದ್ರನನ್ನು ಪೂಜಿಸಲು ಕೂರುತ್ತಿದ್ದನು. ಹೂವು, ತುಳಸಿ, ಗಂಧದಿಂದ ಅಲಂಕರಿಸಿ, ರಾಮನ ಸ್ತೋತ್ರವನ್ನು ಪತಟಿಸುತ್ತಾ ಪೂಜಿಸಿ, ಗೋದಿ ಹಿಟ್ಟಿನ ಉಂಡೆಗಳನ್ನು ರಾಮನಿಗೆ ನೈವೇದ್ಯ ಮಾಡಿ ಸಮರ್ಪಿಸಿ " ದೀನ ಬಂದೋ, ಅನಾಥರಕ್ಷಕ, ಆಪದ್ಬಾಂಧವ, ದಯಾ ಸಿಂಧೋ, ಜಾನಕಿ ರಾಮ, ದಶರಥರಾಮ, ರಾಮ ಚಂದ್ರ" ಹೇ ಪ್ರಭು ನಮ್ಮ ಕಷ್ಟಗಳನ್ನು ಪರಿಹರಿಸಿ ನಮ್ಮನ್ನು ಕಾಪಾಡೋ, ತಂದೇ ಎಂದು ಗದ್ಗತಿತನಾಗಿ, ಶ್ರೀರಾಮನಿಗೆ ಶರಣಾಗತನಾಗಿ ಪ್ರಾರ್ಥಿಸಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿದ ನಂತರ ನೈವೇದ್ಯಕ್ಕೆ ಇಟ್ಟ ಉಂಡೆ ಗಳನ್ನು ಸಮಭಾಗ ಮಾಡಿ ಅರ್ಧ ಭಾಗ ಬ್ರಾಹ್ಮಣರಿಗೂ, ಮುತ್ತೈದೆಯರಿಗೂ, ಬಂಧು ಮಿತ್ರರಿಗೂ ಕೊಟ್ಟು, ಉಳಿದ ಭಾಗವನ್ನು ತನ್ನ ಮನೆಯವರೊಂದಿಗೆ ಭುಂಜಿಸಿ ಭಗವತ ಚಿಂತನೆಯಲ್ಲಿ ಕಾಲವನ್ನು ಕಳೆಯುತಿದ್ದನು. ಹೀಗೆ ಪ್ರತಿ ಶನಿವಾರವೂ ಯಾರು ತಪ್ಪದೆ ಮಾಡುವರೋ ಅವರು ಇಹಲೋಕದಲ್ಲಿ ಸುಖವನ್ನು, ಪರಲೋಕದಲ್ಲಿ ಮುಕ್ತಿಯನ್ನು ಪಡೆಯುವರು ಎಂಬ ವೃದ್ಧ ಬ್ರಾಹ್ಮಣನ ಉಪದೇಶದಂತೆ ಕೇಶವಭಟ್ಟನು ಶ್ರೀರಾಮ ಪೂಜೆ ಮತ್ತು ಕಥಾ ಶ್ರವಣವನ್ನು ತಪ್ಪದೇ ಮಾಡುತ್ತಿರಲು ಶ್ರೀರಾಮನ ಕೃಪೆಯಿಂದ ಸಕಲ ಐಶ್ವರ್ಯವನ್ನು ಪಡೆದನು. ಹೀಗೆ ಶ್ರೀರಾಮನ ಅನುಗ್ರಹದಿಂದ ಸಕಲ ಐಶ್ವರ್ಯಗಳು ಬರಲು, ಕೇಶವ ಭಟ್ಟನು ಸಾಕಷ್ಟು ದಾನ ಧರ್ಮಗಳನ್ನು ಮಾಡಿ, ಮಾತಾ ಪಿತೃಗಳಿಗೆ ಪಿಂಡ ಪ್ರಧಾನ ಮಾಡಿ ಋಣಮುಕ್ತನಾಗಲು 'ಗಂಗಾ ಭಾಗಿರತಿ' ಸ್ನಾನ ಮಾಡಿ ಪುಣ್ಯ ಕ್ಷೇತ್ರಗಳ ದರ್ಶನ ಮಾಡಲು ಯಾತ್ರೆ ಹೊರಡಲು ನಿರ್ಧರಿಸಿದನು. ಸತಿಯನ್ನು ಕುರಿತು, ಎಲೈ ಸಾಧ್ವಿಯೇ, ನಾವು ಹಿಂದೆ ಬಡತನದಿಂದ ಯಾತ್ರೆ ಮಾಡಲು ಆಗಲಿಲ್ಲ ಈಗ ಪ್ರಭು ಶ್ರೀರಾಮನ ಕೃಪೆಯಿಂದ ಸಕಲ ಐಶ್ವರ್ಯ ಪ್ರಾಪ್ತ ವಾಗಿದೆ ಆದ್ದರಿಂದ ನಾವು ಗಂಗಾ ಭಾಗಿರತಿ ಯಾತ್ರೆಗೆ ಹೋಗಿ ಆ ಪವಿತ್ರ ನದಿಯಲ್ಲಿ ಮಿಂದು, ನಮ್ಮ ಮಾತಾಪಿತೃ ಗಳಿಗೆ ಪಿಂಡ ಪ್ರಧಾನ ಮಾಡಿ ಋಣಮುಕ್ತರಾಗಿ ಬರೋಣ ಬಾ ಎಂದು ಹೇಳಿದನು. ಎಂದೂ ಕಾಣದ ಬಿಕನಾಶಿಯಾದ ಈತನ ಸತಿಯು, ಎಲೈ ಪತಿಯೇ, ನಿಮಗೆ ಹುಚ್ಚು ಹಿಡಿದಿರಬಹುದು, ನೀವೇ ಹೋಗಿ ನದಿಗಳಲ್ಲಿ ಪುಣ್ಯಸ್ನಾನಮಾಡಿ ಮುಕ್ತರಾಗಿ ಬನ್ನಿ.ದೇವರು ಐಶ್ವರ್ಯ ಕೊಟ್ಟಾಗ ಸುಖ ಅನುಭವಿಸುವುದನ್ನು ಬಿಟ್ಟು ಯಾತ್ರೆ ಮಾಡಬೇಕಂತೆ ನನಗೆ ಯಾವುದೂ ಬೇಡ ನಾನು ಮನೆಯಲ್ಲಿ ಸುಖವಾಗಿರುವೆನು ಎಂದು ಹೇಳಿದ ಸತಿಯ ಮಾತನ್ನು ಕೇಳಿ, ಕೇಶವ ಭಟ್ಟನು ಮನದಲ್ಲಿ, ಅವಳ ಕರ್ಮ ಶೇಷವು ಕಳೆದಿಲ್ಲವೆಂದು ಭಾವಿಸಿ ತಾನೊಬ್ಬನೇ ಹೊರಟು ನಿಂತು, ಪ್ರಾತಃಕಾಲ ಎದ್ದು ಸ್ನಾನಾದಿಗಳನ್ನು ಮುಗಿಸಿ ಶ್ರೀರಾಮ ನನ್ನು ಪೂಜಿಸಿ, ಬ್ರಾಹ್ಮಣ ಸುಹಾಸಿನಿಯರಿಗೆ ಸಮಾರಾಧನೆಯನ್ನು ಮಾಡಿ ಅವರುಗಳನ್ನು ಭೂರಿದಕ್ಷಿಣೆಗಳಿಂದ ತೃಪ್ತಿಪಡಿಸಿ, ಮಗನಾದ ನಾರಾಯಣ ಭಟ್ಟನಿಗೆ ಶ್ರೀರಾಮ ಪೂಜೆಯನ್ನು ತಪ್ಪದೇ ಆಚರಿಸುವಂತೆ ಹೇಳಿ ತಾನು ಯಾತ್ರೆಗೆ ಹೊರಟನು. ಎಂಬಲ್ಲಿಗೆ ಶ್ರೀರಾಮ ಕತೆಯ ಮೊದಲ ಅಧ್ಯಾಯವು ಸಂಪನ್ನವಾಯಿತು. (ಎರಡನೇ ಅಧ್ಯಾಯ ಮುಂದಿನ ಶನಿವಾರ ಹಾಕುತ್ತೇನೆ) ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ!! (ಶ್ರೀರಾಮ ಕಥಾ ಮಹಾತ್ಮೆ ) ವಂದನೆಗಳೊಂದಿಗೆ, ಆಶಾ ನಾಗಭೂಷಣ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🕉️ ಜೈ ಶ್ರೀ ರಾಮ🙏 - ShareChat