#📜ಪ್ರಚಲಿತ ವಿದ್ಯಮಾನ📜
ಕಾನೂನು ಹೋರಾಟಕ್ಕೆ ಸಜ್ಜಾದ ಧರ್ಮಸ್ಥಳ
ಮಂಗಳೂರು: ಅಕ್ರಮವಾಗಿ ಶವಗಳನ್ನು ಹೂತ ಪ್ರಕರಣ ಮತ್ತು ತಲೆಬುರುಡೆ ಪತ್ತೆ ಪ್ರಕರಣ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಧರ್ಮಸ್ಥಳ ಶ್ರೀ ಕ್ಷೇತ್ರವೇ ಮುಂದಾಗಿದ್ದು, ಕ್ಷೇತ್ರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಮಹೇಶ್ ಕಜೆ ವಾದ ಮಂಡನೆಗೂ ಸಿದ್ದರಾಗಿದ್ದಾರೆ. ಕ್ಷೇತ್ರದ ಪರ ಅರ್ಜಿಯು ಕೋರ್ಟ್ನಲ್ಲಿ ನಿರ್ಧಾರವಾಗಲಿದೆ. ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಕಾನೂನಾತ್ಮಕ ಹೋರಾಟಕ್ಕೆ ಎಸ್ಐಟಿ ವರದಿಯ ವಿಚಾರಣೆಯಲ್ಲಿ ತನ್ನನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿ ಸಲ್ಲಿಸಿದೆ.
ಎಸ್ಐಟಿ ಸಲ್ಲಿಸಿದ ವರದಿಯನ್ವಯ ಕುರಿತು ನ್ಯಾಯಾಲಯ ಆದೇಶ ನೀಡುವ ಸಾಧ್ಯತೆ ಇತ್ತು. ಆದರೆ, ಇದೀಗ ಕ್ಷೇತ್ರದ ಪರವಾಗಿ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದರಿಂದ ಮಹತ್ವದ ತಿರುವು ಪಡೆದಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿದರೆ, ಕೋರ್ಟ್ ನೀಡಲಿರುವ ಆದೇಶ ಮತ್ತೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ.
ಬುರುಡೆಗಳ ಪತ್ತೆ ಪ್ರಕರಣ ಸಂಬಂಧ ಎಸ್ಐಟಿ ಈಗಾಗಲೇ ಸುದೀರ್ಘ 4 ಸಾವಿರ ಪುಟಗಳ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ಮುಸುಕುಧಾರಿ ಚಿನ್ನಯ್ಯ ಸೇರಿದಂತೆ 6 ಮಂದಿ ಸೇರಿ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಿರುವುದನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಅದೇ ನ್ಯಾಯಾಲಯದಲ್ಲಿ ಧರ್ಮಸ್ಥಳ ಪರ ವಕಾಲತ್ತು ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಎಸ್ಐಟಿ ಸಲ್ಲಿಸಿದ ವರದಿ ಮೇಲಿನ ಆದೇಶ ಏನಾಗಬಹುದು ಎನ್ನುವ ಕುತೂಹಲವೂ ಹೆಚ್ಚಾಗಿದೆ.
ಇದುವರೆಗೂ ಕ್ಷೇತ್ರದ ವಿರುದ್ಧ ಏನೇ ಅಪಪ್ರಚಾರ ನಡೆದರೂ ಸುಮ್ಮನಿದ್ದ ಕ್ಷೇತ್ರದ ಪ್ರಮುಖರು, ಈಗ ಷಡ್ಯಂತ್ರ ನಡೆದಿರುವುದು ಖಚಿತವಾಗುತ್ತಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕ್ಷೇತ್ರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಮಹೇಶ್ ಕಜೆ ವಾದ ಮಂಡನೆಗೂ ಸಿದ್ಧರಾಗಿದ್ದಾರೆ. ಬುರುಡೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಶ್ರೀಕ್ಷೇತ್ರದ ಪರವಾಗಿಯೇ ಅರ್ಜಿ ಸಲ್ಲಿಕೆಯಾಗಿದೆ.
#Dharmasthala #ready #legal #fight #malgudiexpress #malgudinews #news #TopNews


