#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏🏻ಶ್ರೀಕೃಷ್ಣನ ಕಥೆಗಳು📜
ಕೃಷ್ಣ- ನಾರದ- ಬಲರಾಮರ ದ್ವಾರಕಾ ನಾಟಕ: ಭಾಗ2
(ಭಾಗ–1 ಸಂಕ್ಷಿಪ್ತ ಸಾರಾಂಶ
ದ್ವಾರಕೆಯಲ್ಲಿ ಬಲರಾಮ–ರೇವತಿ ಸಂಭಾಷಣೆಯಿಂದ ಆರಂಭವಾದ ಕುಸ್ತಿ ಗೊಂದಲ, ನಾರದರನ್ನು ಮಲ್ಲಯುದ್ಧಕ್ಕೆ ಎಳೆದು ತರುವ ಹಾಸ್ಯಮಯ ಘಟನೆ, ಮತ್ತು ಕೃಷ್ಣನಿಗೆ “ಯಾರೂ ಕೇಳದ, ಹಿಂದೆ ನಡೆದಿರದ ಕಥೆ” ಬೇಕೆಂಬ ವಿಚಿತ್ರ ಬೇಡಿಕೆ—ಇವೆಲ್ಲವೂ ನಾರದರನ್ನು ಹೊಸ ಲೀಲೆಗೆ ಪ್ರೇರೇಪಿಸುತ್ತವೆ.
ಅದೇ ಸಮಯದಲ್ಲಿ, ಕೃತವರ್ಮ–ಸತ್ಯವತಿಯ ಗೃಹದಲ್ಲಿ ನಾರದರು ರೂಪಿಸಿದ ಪರೀಕ್ಷೆಯಿಂದ, ಪತಿವ್ರತಾ ಶಕ್ತಿಯ ಮಹಿಮೆ ಹೊರಹೊಮ್ಮಿ, ಸತ್ಯವತಿ ನಾರದನ ಶಾಪದಿಂದ ಹೆಣ್ಣು ಕುದುರೆಯಾಗಿ ಪರಿವರ್ತಿತಳಾಗುತ್ತಾಳೆ.
ಈಗ ಅವಳ ವಿಮೋಚನೆಗೆ “ಮೂರು ವಜ್ರಗಳು” ಎಂಬ ರಹಸ್ಯವೇ ಏಕೈಕ ಸುಳಿವು.)
ಕೃತ ವರ್ಮನು ಕುದುರೆಯಾದ ಹೆಂಡತಿಗೆ ಚಿನ್ನದ ಸರಪಳಿ ಹಾಕಿ ಅರಮನೆಯಲ್ಲಿ ಕಟ್ಟಿ ಅದರ ಜೊತೆಯಲ್ಲೇ ಇರತೊಡ ಗಿದನು. ಕೆಲವು ದಿನಗಳಲ್ಲೇ ಆ ಕುದುರೆ ಸರಪಳಿಯನ್ನು ಬಿಚ್ಚಿ ಕೊಂಡು ಹೊರಗೆ ಬಂದು ಓಡಿತು. ಕೃತವರ್ಮನು ಅದರ ಹಿಂದೆ ಹೋದನು, ಆ ಕುದುರೆ ಕಾಡು ಮೇಡುಗಳನ್ನು ಸುತ್ತುತ್ತಾ ಎಲ್ಲಾ ದೇಶಗಳನ್ನು ಸಂಚರಿಸಿ ಕೊನೆಗೆ ದ್ವಾರಕಾ ನಗರದ ಸಾಮಂತರಾಜ ಸುಬುದ್ದೀ ಯ ಅರಮನೆಯ ಹತ್ತಿರ ಬಂದಿತು. ಅಕಸ್ಮಾತ್ ಹೊರಗೆ ನೋಡಿದ ಸುಬುದ್ಧಿಗೆ ಕುದುರೆ ಕಣ್ಣಿಗೆ ಬಿದ್ದು, ಆಶ್ಚರ್ಯ ಪಟ್ಟನು. ದೇವಲೋಕದ ಕುದುರೆಯನ್ನು ಮೀರಿಸುವ ಸೌಂದರ್ಯ ಇದರದ್ದು. ಎಂದು ತಿಳಿದವನೇ ಸೇವಕರ ಹತ್ತಿರ ಹೇಳಿ ಅದನ್ನು ಹಿಡಿದು ತರಿಸಿ ತನ್ನ ಅರಮನೆಯೊಳಗೆ ಕಟ್ಟಿದನು. ರಾಜನು ಖುಷಿಯಾಗಿ ಅದನ್ನು ಚೆನ್ನಾಗಿ ನೋಡಿಕೊಂಡನು. ಕುದುರೆ ಸರಿಯಾದ ಸ್ಥಳ ಸೇರಿದೆ ಎಂದು ನಾರದರು ಮನಗಂಡು ಸಂತೋಷದಿಂದ ಮುಂದೆ ಹೊರಟರು.
ನಾರದರು ಗಗನ ಮಾರ್ಗದಿಂದ ದ್ವಾರಕೆಗೆ ಬಂದು ಒಡ್ಡೋಲಗದಲ್ಲಿ ಕುಳಿತಿದ್ದ ಬಲರಾಮನ ಬಳಿ ಬಂದರು. ಬಲರಾಮನು, ನಾರದರನ್ನು ಸ್ವಾಗತಿಸಿ ಆಸನದಲ್ಲಿ ಕೂರಿಸಿದನು. ನಾರಾಯಣ ಸ್ಮರಣೆ ಮಾಡುವುದನ್ನು ಬಿಟ್ಟು ಬರೀ ಕುದುರೆ ವರ್ಣನೆ ಮಾಡತೊಡಗಿದರು. ಇದನ್ನು ಕೇಳಿದ ಬಲರಾಮನು ಅಂತ ಸುಂದರವಾದ ಕುದುರೆ ಎಲ್ಲಿದೆ ಎಂದನು. ನಾನು ನೋಡಿದ್ದೇನೆ. ಆದರೆ ಅದನ್ನು ಪಡೆದುಕೊಳ್ಳುವುದು ಕಷ್ಟ ಎಂದರು. ಬಲರಾಮನು ಅದೆಷ್ಟೇ ಕಷ್ಟವಾಗಲಿ ನಾನು ಪಡೆದುಕೊಳ್ಳುವೆ ಹೇಳಿ ಎಂದನು. ನಿನ್ನ ಸಾಮಂತರಾಜ ಸುಬುದ್ದಿಯ ಅರಮನೆಯಲ್ಲಿದೆ ಎಂದರು. ಬಲರಾಮನು ಅಷ್ಟೇ ತಾನೇ ನಾನು ತರಿಸಿಕೊಳ್ಳುತ್ತೇನೆ ಎಂದವನೇ ಕುದುರೆ ಯನ್ನು ತನಗೆ ಒಪ್ಪಿಸುವಂತೆ ಸುಭುದ್ಧಿಗೆ ಪತ್ರ ಬರೆದು ಕಳಿಸಿದನು. ಇದನ್ನೆಲ್ಲ ನೋಡಿ ನಾರಾಯಣ ನಾರಾಯಣ ಎನ್ನುತ್ತಾ ನಾರದರು ಸುಬುದ್ದಿಯ ಅರಮನೆಗೆ ಹೊರಟರು. ಅಲ್ಲೆ ಇದ್ದ ಕೃಷ್ಣನು ಮುಗುಳ್ನಗುತ್ತಾ ನಾರದರೆ ನಿಮ್ಮ ಕೆಲಸವಾಯಿತೇ ಎಂದನು. ಇಲ್ಲ ಕೃಷ್ಣಾ ಈಗ ತಾನೆ ಶುರು ಮಾಡಿದ್ದೇನೆ. ಎಂದು ಹೇಳಿ ಸುಬುದ್ದೀಯ ಅರಮನೆಗೆ ಬಂದರು.
ಅರಮನೆಯಲ್ಲಿ ಬಲರಾಮನು ಸುಬುದ್ದಿಗೆ ಬರೆದು ಕಳಿಸಿದ ಪತ್ರದ ಸಾರಾಂಶ. ರಾಜ್ಯದಲ್ಲಿ ಯಾವುದೇ ಅಮೂಲ್ಯ ವಾದ ವಸ್ತುಗಳು ಇದ್ದರೆ ಅದನ್ನು ಪೋಷಿಸುವ ಜವಾಬ್ದಾರಿ ಅರಮನೆಯದು ಆದುದರಿಂದ ನಿನ್ನಲ್ಲಿರುವ ಬೆಲೆಬಾಳು ವ ಕುದುರೆಯನ್ನು ತಂದು ಒಪ್ಪಿಸು ಇಲ್ಲದಿದ್ದರೆ ಯುದ್ಧಕ್ಕೆ ತಯಾರಾಗು. ಎಂಬ ಪತ್ರ ಓದಿದ ಸುಭುದ್ಧಿಯು ಕೆಂಡಾ ಮಂಡಲವಾಗಿ, ಇದೇನಿದು ಬೇರೆಯವರ ಸ್ವತ್ತನ್ನು ಅಪಹರಿಸಿ ಅದೆಲ್ಲಾ ತಾವೇ ಗೆದ್ದಿದ್ದು ಎಂದು ಹೇಳಿಕೊಳ್ಳು
ವುದೇ ಕೃಷ್ಣ- ಬಲರಾಮರ ಕೆಲಸವೇ ಎಂದು ಅಬ್ಬರಿಸಿ, ಪತ್ರವನ್ನು ಕಂಚುಕಿಗೆ ಕೊಟ್ಟು, ನಾವು ಕುದುರೆಯನ್ನು ಕೊಡುವುದಿಲ್ಲ ಎಂದು ಬಲರಾಮನಿಗೆ ಹೇಳು. ಇದನ್ನು ಕೇಳಿದ ಕಂಚುಕಿ ನೀವು ಕುದುರೆ ಒಪ್ಪಿಸದಿದ್ದರೆ ಯುದ್ಧ ಆಗುತ್ತದೆ ಎಂದನು. ಸುಬ್ಬುದ್ಧಿ ಆವೇಶದಿಂದ ಆಗಲಿ ನಾನು ಯುದ್ಧಕ್ಕೆ ತಯಾರಿದ್ದೇನೆ ಎಂದನು. ಕಂಚುಕಿ ತಿಳಿಸಲು ಹೊರಟನು.
ಆ ಹೊತ್ತಿಗೆ ನಾರಾಯಣ ನಾರಾಯಣ ಎನ್ನುತ್ತಾ ನಾರದರು ಬಂದರು. ಅವರನ್ನು ಕಂಡು ಗುರುಗಳೇ,ನೀವೇ ಈ ಸಂಕಟದಿಂದ ಪಾರು ಮಾಡಬೇಕು ಎಂದು ಸುಬುದ್ಧಿ ಕೈ ಮುಗಿದನು. ಕುದುರೆಯ ವಿಚಾರದಲ್ಲಿ ನೀನು ಯುದ್ಧಕ್ಕೆ ಸಿದ್ಧ ಎಂದು ಹೇಳಿದೆಯಲ್ಲ ಕೃಷ್ಣ ಬಲರಾಮರನ್ನು ನಿನ್ನಿಂದ ಜಯಿಸಲು ಸಾಧ್ಯವೇ ಎಂದು ಕೇಳಿದರು. ಅದಕ್ಕೆ ಅವನು ಏನು ದಾವಂತದಲ್ಲಿ ಹೇಳಿದೆ ಎಂದು ಪೆಚ್ಚುಮುಖ ಹಾಕಿದನು. ಹಾಗಾದರೆ ಕೇಳು ನೀನು ಮತ್ತು ಕುದುರೆ ಉಳಿಯ ಬೇಕಾದರೆ ಒಂದು ಉಪಾಯ ಹೇಳುವೆ, ಈಗಲೇ ಪಾಂಡವರು ಇರುವ ದ್ವೈತವನಕ್ಕೆ ಹೋಗು. ಅಲ್ಲಿ ಬಲಶಾಲಿ ಭೀಮನಿರುತ್ತಾನೆ, ಅವನಿಗೆ ಪೂರ್ತಿ ವಿಷಯವನ್ನು ತಿಳಿಸದೆ ನನಗೆ ಸಹಾಯ ಮಾಡು ಎಂದು ಪಾದ ಹಿಡಿದು ಕೃಷ್ಣನ ಪಾದಸಾಕ್ಷಿ ಪ್ರಮಾಣ ತೆಗೆದುಕೊಳ್ಳಬೇಕು. ಆನಂತರ ಕುದುರೆ ಕಥೆಯನ್ನು ಹೇಳಬೇಕು. ಅನುಮಾನ ವ್ಯಕ್ತಪಡಿಸಿದ ಸುಭದ್ಧಿಗೆ ನೀನು ಹೆದರಬೇಡ. ಆದರೆ ಪ್ರಮಾಣ ತಗಳುವ ಮೊದಲು ಯಾವ ವಿಷಯವನ್ನು ಹೇಳಬೇಡ. ನೀನು ಹೋಗುವಾಗ ನಾರಾಯಣನ ಸ್ಮರಣೆ ಮಾಡುತ್ತಾ ಹೋಗು, ನಾನು ಹೇಳಿದ್ದು ಎಂದು ಅಪ್ಪಿತಪ್ಪಿಯು ಬಾಯಿ ಬಿಡಬೇಡ.
ನಾರದರ ಮಾತಿನಂತೆ ಸುಭುದ್ಧಿ ಕುದುರೆ ತೆಗೆದುಕೊಂಡು ದ್ವೈತವನಕ್ಕೆ ಬಂದನು. ಭೀಮ ಕುಳಿತಲ್ಲಿಗೆ ಬಂದನು. ಭೀಮನು 'ಓಂ ನಮಃ ಶಿವಾಯ' ಎಂದು ನಾಮಸ್ಮರಣೆ ಮಾಡುತ್ತಿದ್ದ ಸುಬುದ್ಧಿ ಬಂದವನೇ, ಭೀಮನ ಕಾಲು ಹಿಡಿದುಕೊಂಡು ನನ್ನನ್ನು ಕಾಪಾಡು ನಾನು ನಾರಾಯಣನ ಪರಮ ಭಕ್ತ ಎಂದನು. ಗೊತ್ತಾಯ್ತು ಹೇಳು ಏನಾಗಿದೆ ಎಂದು ಕೇಳಿದಾಗ, ಮೊದಲು ಕೃಷ್ಣನ ಪಾದ ಸಾಕ್ಷಿ ಪ್ರಮಾಣ ತೆಗೆದುಕೊಂಡು. ನಂತರ ಕೃಷ್ಣ- ಬಲರಾಮರೇ ನನ್ನಲ್ಲಿರುವ ಕುದುರೆಗಾಗಿ ಯುದ್ಧ ಮಾಡಲು ಬರುತ್ತಿದ್ದಾರೆ ಎಂದು ಹೇಳಿದಾಗ ಭೀಮನು ಸುಭದ್ದಿಯನ್ನು ಅಲ್ಲೇ ಚಚ್ಚಿ ಹಾಕಲು ಹೊರಟಿದ್ದ. ಆದರೂ ಕೃಷ್ಣನಪಾದ ಸಾಕ್ಷಿ ಎಂದು ಪ್ರಮಾಣ ಮಾಡಿದ ನೆನಪಾಗಿ ಸುಧಾರಿಸಿಕೊಂಡು ಧರ್ಮರಾಯನ ಬಳಿ ಬಂದು, ಅಣ್ಣ ನನ್ನನ್ನು ಇನ್ನು ಮರೆತು ಬಿಡಿ ನಾವು ಕೃಷ್ಣ ಭಕ್ತರಾಗಿದ್ದೆವು. ನಾನು ಈ ಸುಬುದ್ದಿಗೆ ಮಾತು ಕೊಟ್ಟ ಕಾರಣ ನಮಗೆ ಸಹಾಯ ಮಾಡಿದ ಕೃಷ್ಣ- ಬಲರಾಮರೊಂದಿಗೆ ಹೋರಾಡ ಬೇಕಾಗಿದೆ ಎಂದಾಗ ಧರ್ಮರಾಯನು ತಡೆದು, ನಾವು ಐದು ಜನರು ಒಂದೇ, ಅಂದು ದ್ಯೂತ- ದಾಟದಲ್ಲಿ ಸೋತಿದ್ದು ನಾನು, ಆದರೆ ನನ್ನ ಜೊತೆ ಬೆಂಬಲಕ್ಕಾಗಿ ನಿಂತಿರಿ. ಇಂದು ಸಹ ನೀನು ಮಾತು ಕೊಟ್ಟೆ ,ನಿನ್ನ ಬೆಂಬಲಕ್ಕೆ ನಾವು ಇದ್ದೇವೆ. ಕೃಷ್ಣನ ಪಾದ ಸಾಕ್ಷಿ ಎಂದು ಮಾತು ಕೊಟ್ಟ ಮೇಲೆ ನಾವು ಕುದುರೆ ಬಿಡುವಂತಿಲ್ಲ ಎಂದನು. ಅರ್ಜುನನು ಸಹ ಅಣ್ಣನ ಮಾತಿಗೆ ಬೆಂಬಲ ಕೊಟ್ಟ. ಅವರು ಯುದ್ಧಕ್ಕೆ ತಯಾರಾದರು. ಇದನ್ನೆಲ್ಲಾ ತಿಳಿದುಕೊಂಡು ನಾರದರು ಅಲ್ಲಿಂದ ಜಾಗ ಖಾಲಿ ಮಾಡಿದರು.
ಅಕ್ರೂರ ದ್ವಾರಕಾಕ್ಕೆ ಬಂದು ಯುದ್ಧದ ವಿಷಯ ತಿಳಿಸಿದನು, ಬಲರಾಮನಿಗೆ ಪಾಂಡವರ ಮೇಲೆ ಕೋಪ ಬಂದರೂ, ಎಲ್ಲವನ್ನು ಬಲ್ಲ ಕೃಷ್ಣನು ನಗುತ್ತಿದ್ದ. ಕೃಷ್ಣನು ನಾರದರನ್ನು ಈಗ ನಿಮ್ಮ ಕೆಲಸ ಮುಗಿಯಿತೆ ಎಂದು ಕೇಳಿದನು. ಇಲ್ಲ ಕೃಷ್ಣ ಇನ್ನೂ ಸ್ವಲ್ಪ ಬಾಕಿ ಇದೆ ಎಂದು, ನಾರದರು ಹಸ್ತಿನಾಪುರಕ್ಕೆ ಬಂದರು. ದುರ್ಯೋಧನನ ಬಳಿ ಬಂದು ದುರ್ಯೋಧನ ನಿನಗೆ ಅದೃಷ್ಟ ಕೂಡಿ ಬಂದಿದೆ ಹೇಗೆ ಎಂದು ಕೇಳಿದನು. ನಿನಗೆ ಶತ್ರುಗಳು ಎಂದರೆ ಪಾಂಡವರು, ಇವರಿಗೆ ಮಿತ್ರ ಎಂದರೆ ಶ್ರೀ ಕೃಷ್ಣ. ಈಗ ಅವರಿಬ್ಬರ ನಡುವೆ ಜಗಳ ಹಚ್ಚಿದ್ದೇನೆ, ಇದರಿಂದ ಯುದ್ಧವಾಗುತ್ತದೆ, ಇದರಲ್ಲಿ ಪಾಂಡವರಿಂದ ಕೃಷ್ಣ ಸೋತರೂ ಸರಿಯೇ, ಕೃಷ್ಣನಿಂದ ಪಾಂಡವರು ಹತರಾದರೂ ಸರಿಯೇ, ಇದರಲ್ಲಿ ಯಾವುದೇ ಆದರೂ ನಿನಗೆ ಲಾಭ. ಈ ಲಾಭ ನೀನಗೆ ಸಲ್ಲುತ್ತದೆ. ಕೃಷ್ಣ -ಬಲರಾಮರು ಸೈನ್ಯ ಸಮೇತ ಯುದ್ಧಕ್ಕೆ ಬಂದರೆ ಪಾಂಡವರಲ್ಲಿ ಸೈನ್ಯವಿಲ್ಲವೆಂದು ಹಾಗೆ ಹೋಗಬಹುದು ಯುದ್ಧ ನಿಲ್ಲದಂತೆ ನೀನು ನಿನ್ನ ಸೈನ್ಯವನ್ನು ತೆಗೆದುಕೊಂಡು ಈ ಕೂಡಲೇ ಹೋಗಿ ಯುಧಿಷ್ಠಿರನಿಗೆ ಸಹಾಯ ಮಾಡುವ ನೆಪದಲ್ಲಿ ಅಲ್ಲೇ ನಿಂತಿರು ಎಂದರು. ದುರ್ಯೋಧನ ಬಹಳ ಖುಷಿಯಿಂದ ತನ್ನ ಅಪಾರ ಸೈನ್ಯದೊಂದಿಗೆ ದ್ವೈತವನಕ್ಕೆ ಬಂದು ಪಾಂಡವರ ಜೊತೆ ನಿಂತನು.
ದ್ವಾರಕಾದಿಂದ ಕೃಷ್ಣ ಬಲರಾಮರು ಸೈನ್ಯ ಸಮೇತ ಯುದ್ಧಕ್ಕೆ ಬಂದರು. ಕೃಷ್ಣ ಹೇಳಿದ, ಧರ್ಮರಾಜ ನಾನು ಮಾಡಿದ ಸಹಾಯವನ್ನು ಮರೆತು ಒಂದು ಕುದುರೆಗಾಗಿ ನಮ್ಮ ಮೇಲೆ ಯುದ್ಧಕ್ಕೆ ಬಂದೆಯಾ? ತಕ್ಷಣ ಅರ್ಜುನ ಹೇಳಿದ ಕೃಷ್ಣ ಅದೇ ಮಾತನ್ನ ನಿನಗೆ ಹೇಳಿದರೆ ಹೇಗೆ? ತಂದೆ- ತಾಯಿ, ಬಂದು ಬಳಗ ,ಗುರು- ದೈವ ಎಲ್ಲ ನೀನೆ ಅಂತ ತಿಳಿದ ನಮ್ಮ ಮೇಲೆ ನೀನು ಒಂದು ಕುದುರೆಗಾಗಿ ಅಷ್ಟು ದೊಡ್ಡ ಸೈನ್ಯ ಸಮೇತ ಯುದ್ಧಕ್ಕೆ ಬಂದಿರುವೆಯಲ್ಲ ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಯುದ್ಧ ಆರಂಭವಾಯಿತು. ದೇವಾನುದೇವತೆಗಳೇ ನಿಂತು ನೋಡುತ್ತಿದ್ದರು. ನಾರದರು ಮರೆಯಲ್ಲಿ ನಿಂತು ಈ ಆನಂದವನ್ನು ಸವಿಯುತ್ತಿದ್ದರು. ಬಲರಾಮ- ಭೀಮರು ಕೈ ಕೈ ಮೀಸಲಾಯಿಸಿ ಭೀಮನ ಕೈ ಮೇಲಾಗಿ ಬಲರಾಮನ ನ್ನು ಕಟ್ಟಿ ಕೆಳಗೆ ಮಲಗಿಸಿದನು. ಬಲರಾಮ ಭೀಮನಿಂದ ಕಟ್ಟಿಸಿಕೊಂಡು ಒದ್ದಾಡುತ್ತಾ ಮಲಗಿದ್ದರೆ, ನಾರದರು ಬಂದರು. ಬಲರಾಮ ತನ್ನ ಕಟ್ಟು ಬಿಚ್ಚುವಂತೆ ಕೇಳಿದ, ಅದಕ್ಕೆ ಬದಲಾಗಿ ನಾರದರು ತಡಿ ಬಂದೆ ಎಂದು ಪಂಚೆಯನ್ನು ಮೇಲೆ ಕಟ್ಟಿ, ಬಲರಾಮನೊಂದಿಗೆ ಬಾ, ಈಗ ಯುದ್ಧ ಮಾಡೋಣ ಎಂದರು. ಬಲರಾಮ ಹೇಳಿದ ಗುರುಗಳೇ ಇದೇನು ನನ್ನ ಕೈ ಕಟ್ಟಿದಾಗ ಯುದ್ಧ ಮಾಡುವೆ ಎನ್ನುವಿರಲ್ಲ , ಅದಕ್ಕೆ ನಾರದರು ಅಂದು ನಾನು ಬರುತ್ತಿದ್ದಾಗ ನೀನು ನಿನ್ನ ಜೊತೆಗೆ ಯುದ್ಧಕ್ಕೆ ಕರೆದೆಯಲ್ಲ ಇದು ಸರಿಯೇ? ಇಂದಿನ ನಿನ್ನ ಸ್ಥಿತಿಯೇ ಅಂದು ನನ್ನದಾಗಿತ್ತು ಎಂದರು. ಬಲರಾಮನು ಕ್ಷಮಿಸಿ ಗುರುಗಳೇ, ನನ್ನ ಕಟ್ಟನ್ನು ಬಿಚ್ಚಿ ಎಂದನು. ಕಟ್ಟು ಬಿಚ್ಚುತ್ತೇನೆ ಬಿಚ್ಚಿದ ಮೇಲೆ ನನ್ನನ್ನು ಹಿಡಿದು ಕೊಳ್ಳ ಬೇಡ ಎಂದ ನಾರದರು ಗರುಡನ ಸ್ಮರಣೆ ಮಾಡಿದರು ಬಲರಾಮನ ಕಟ್ಟು ಕಳಚಿತು. ತಕ್ಷಣ ನಾರದರು ಬಲರಾಮ ನೀನು ಯುದ್ಧ ಮಾಡುತ್ತಿರುವುದು ಕುದುರೆಗಾಗಿ ಅಲ್ಲಿ ನೋಡು ಸುಬ್ಬುದ್ದಿ ಹತ್ತಿರ ಕುದುರೆ ನಿಂತಿದೆ ಅದನ್ನು ಎಳೆದುಕೊಂಡು ಬಾ ಎಂದರು ಬಲರಾಮ ಓಡಿ ಹೋದ. ಸುಬುದ್ಧಿಯನ್ನು ಎಳೆದು ಆಚೆ ಹಾಕಿ ಕುದುರೆಯ ಮುಂಭಾಗದ ಕೂದಲ ಜುಟ್ಟು ಹಿಡಿದು ನಿಂತನು. ಈಗ ನಾರದರು ಭೀಮನ ಹತ್ತಿರ ಬಂದರು. ಭೀಮನಿಗೆ ನೋಡು ನಿನ್ನ ಕುದುರೆಯನ್ನು ಬಲರಾಮ ಹಿಡಿದುಕೊಂಡು ಹೋಗುತ್ತಿದ್ದಾನೆ ಓಡಿ ಹೋಗು ಎಂದರು ಭೀಮ ಓಡಿ ಬಂದು ಕುದುರೆಯ ಬಾಲ ಹಿಡಿದು ತನ್ನತ್ತ ಎಳೆದುಕೊಂಡನು.
ಈ ಕಡೆ ಕೃಷ್ಣ ಮತ್ತು ಅರ್ಜುನರಿಗೆ ಯುದ್ಧವಾಗುತ್ತಿತ್ತು. ದೈವಾಸ್ತ್ರಗಳನ್ನು ಬಿಡುತ್ತಾ ಯುದ್ಧ ಮಾಡುತ್ತಿದ್ದರು. ಅಸ್ತ್ರಗಳು ಬೆಟ್ಟಗಳಿಗೆ ತಗಲಿ ಬಂಡೆಗಳು ಕೆಳಗೆ ಬೀಳುತ್ತಿದ್ದವು. ಬಂಡೆಗಳು ಬೀಳುವ ಜಾಗದಲ್ಲಿ ದುರ್ಯೋಧನ-
ಶಕುನಿ ನಿಂತಿದ್ದರು. ಶಕುನಿ ಹೇಳಿದ ನೋಡು ದುರ್ಯೋಧನ, ಇವೆಲ್ಲ ನಾರದರ ಕುತಂತ್ರ ಎಂದನು. ನಾರದರು ಕೃಷ್ಣ -ಅರ್ಜುನರಿದ್ದಲ್ಲಿಗೆ ಓಡಿ ಹೋಗಿ ಕೃಷ್ಣ ನೋಡು ಅಲ್ಲಿ, ಬಲ ಭೀಮ ಕುದುರೆ ಬಾಲ ಹಿಡಿದು ಎಳೆಯುತ್ತಿದ್ದಾನೆ, ನಿನ್ನ ಅಣ್ಣ ಬಲರಾಮನಿಗೆ ಸಹಾಯ ಮಾಡು ಎಂದರು. ಬಲರಾಮನಿಗೆ ಸಹಾಯ ಮಾಡಲು ಓಡಿ ಬಂದ ಕೃಷ್ಣನು, ಕುದುರೆಯ ಲಗಾಮು ಹಿಡಿದ. ಈಗ ಭೀಮ, ಬಲರಾಮ, ಕೃಷ್ಣ, ಸೇರಿದಂತೆ ಮೂರು ವಜ್ರಗಳು ಕುದುರೆಯನ್ನು ಹಿಡಿದಂತಾಯಿತು.
ಇನ್ನು ಅರ್ಧ ವಜ್ರ ದುರ್ಯೋಧನನನ್ನು ಕರೆ ತರಲು ನಾರದರು ಓಡಿದರು. ಬಹಳ ಹಿಂದೆ ದುರ್ಯೋಧನನ ತಾಯಿ ಗಾಂಧಾರಿ ಗಜಗೌರಿ ವ್ರತವನ್ನು ಮಾಡಿದ್ದಳು. ದೇವತೆಗಳು ಪ್ರತ್ಯಕ್ಷವಾಗಿ, ತಾಯಿ ನಿನ್ನ ಎರಡು ಕೈಗಳನ್ನು ಮುಂದೆ ಚಾಚು, ವರವನ್ನು ಕೊಡುತ್ತೇವೆ. ವರ ಪಡೆದ ಕೈಗಳಿಂದ, ನಿನಗೆ ಪ್ರೀತಿ ಪಾತ್ರನಾದ ಒಬ್ಬ ಮಗನನ್ನು 'ನೆತ್ತಿಯಿಂದ ಕಾಲಿನ ತನಕ ಶರೀರವನ್ನು ಮುಟ್ಟಿ ಮೈದಡವಿದರೆ ಅವನ ದೇಹ ವಜ್ರಕಾಯ ವಾಗುತ್ತದೆ' ಎಂದಿದ್ದರು. ಆಕೆ ಅಂತಥ ವಜ್ರಕಾಯ ಶರೀರವಾಗುವ ವರವನ್ನು ತನ್ನ ಪ್ರೀತಿಯ ಮಗ ದುರ್ಯೋಧನನಿಗೆ ಕೊಡಲು ತಯಾರಿ ಮಾಡಿದ್ದಳು. ಆ ಪ್ರಕಾರ ಗಾಂಧಾರಿ ದುರ್ಯೋಧನನಿಗೆ ಸ್ನಾನ ಮಾಡಿ, ವಸ್ತ್ರ ಧರಿಸದೆ ತನ್ನ ಮುಂದೆ ಬರುವಂತೆ ಹೇಳಿದ್ದಳು. ದುರ್ಯೋಧನನು ತಾಯಿಯಿಂದ ವರ ಪಡೆಯಲು, ಸ್ನಾನ ಮಾಡಿ ಬೆತ್ತಲೆಯಾಗಿ ಬರುತ್ತಿದ್ದನು. ಇದನ್ನು ಮೊದಲೇ ತಿಳಿದಿದ್ದ ಕೃಷ್ಣನು ದುರ್ಯೋಧನನಿಗೆ ವಜ್ರಕಾಯ ಶರೀರವಾದರೆ ಜಗತ್ತು ಏನೇನೋ ಕಾಣಬೇಕಾಗುತ್ತದೋ ಎಂದು ಕೊಂಡು, ಆ ಸಮಯಕ್ಕೆ ವೃದ್ಧ ಬ್ರಾಹ್ಮಣನಂತೆ ನದಿ ತೀರಕ್ಕೆ ಬಂದು, ದುರ್ಯೋಧನನಿಗೆ ಕೇಳುವಂತೆ ಛೀ,ಛಿ ಏನ್ ಅಸಹ್ಯ, ಬೆಳೆದು ನಿಂತ ಮಗ ತಾಯಿ ಎದುರಿಗೆ ವಿವಸ್ತ್ರನಾಗಿ ನಿಲ್ಲುವುದು ಎಂದರೆ ನಾಚಿಕೆಗೇಡು. ಕೊನೆಯ ಪಕ್ಷ ಒಂದು ಲಂಗೋಟಿ ಹಾಕಿಕೊಳ್ಳಬಹುದು ಎಂದು ಹೇಳಿದ ಮಾತು ದುರ್ಯೋಧನನ ಕಿವಿಗೆ ಬಿದ್ದು ಅವನು ಅಲ್ಲೇ ಹತ್ತಿರದಲ್ಲಿದ್ದ ಬಾಳೆಗಿಡದ ನಾರನ್ನು ಸೊಂಟಕ್ಕೆ ಕಟ್ಟಿಕೊಂಡು ಬಾಳೆ ಎಲೆಯನ್ನು ಅದರ ಮೇಲೆ ಸುತ್ತಿಕೂಂಡು ತಾಯಿ ಬಳಿ ಹೋದನು. ಮಗು ಬಂದೆಯಾ ಬಾ ನನ್ನ ಕಂದಾ ಎಂದು ಗಾಂಧಾರಿ ಪ್ರೀತಿಯಿಂದ ಕರೆದಳು ಅವನ ಶರೀರದ ಪ್ರತಿಯೊಂದು ಭಾಗವನ್ನು ಎರಡು ಕೈಗಳಿಂದ ತಡವುತ್ತಾ ಬಂದಳು ಹೊಟ್ಟೆಯ ಭಾಗದವರೆಗೂ ಬಂದಳು. ನಂತರ ಸೊಂಟದ ಹತ್ತಿರ ಕೈ ತಂದಾಗ ಬಾಳೆ ನಾರು ಕೈಗೆ ಅಟಿಯಿತು. ಕೂಡಲೆ ಕಣ್ಣಿನ ಪಟ್ಟಿ ಬಿಚ್ಚಿ ನೋಡಿದಳು. ಅಲ್ಲಿಗೆ ಕೈಗಳಲ್ಲಿದ್ದ ಆಶೀರ್ವಾದದ ಶಕ್ತಿ ಮುಗಿಯಿತು. ಮಗ ಬಾಳೆ ಎಲೆ ಸುತ್ತಿಕೊಂಡಿದ್ದು ಕಂಡಿತು. ವಜ್ರಕಾಯ ಅಲ್ಲಿಗೆ ನಿಂತಿತು. ದುರ್ಯೋಧನನ ಶರೀರ ಅರ್ದ ಮಾತ್ರ ವಜ್ರಕಾಯವಾಗಿ ಇನ್ನರ್ಧ ಹಾಗೆ ಉಳಿಯಿತು. ಅಂದಿನಿಂದ ದುರ್ಯೋಧನಗೆ 'ಅರ್ಧವಜ್ರ' ಎಂಬ ಹೆಸರು ಬಂದಿತು.
ಈ ವಿಚಾರ ನಾರದರಿಗೆ ಮೊದಲೇ ಗೊತ್ತಿತ್ತು. ದುರ್ಯೋಧನದ ಬಳಿ ನಾರದರು ಬಂದರು. ನಾರದರನ್ನು ಕಾಣುತ್ತಲೇ ಏನು ಗುರುಗಳೇ, ಯೋಗ ಬಂದಿದೆ ಎಂದು ಹೇಳಿ ನನ್ನ ಮೈ ಮೇಲೆ ಬಂಡೆಕಲ್ಲು ಬೀಳುವಂತೆ ಮಾಡಿದಿರಿ. ನಾರದರು ಹೇಳಿದರು, ಏನೋ ಅದು ಹಂಗಾಯಿತು ಬಿಡು, ಈಗ ಎಲ್ಲರೂ ಕುದುರೆಗಾಗಿ ಕುಸ್ತಿ ಆಡುತ್ತಿದ್ದಾರೆ. ಭೀಮ ಬಾಲ ಹಿಡಿದಿದ್ದಾನೆ, ಬಲರಾಮ ಮುಂದಲೇ ಹಿಡಿದಿದ್ದಾನೆ, ಕೃಷ್ಣ ಲಗಾಮು ಹಿಡಿದಿದ್ದಾನೆ. ಕುದುರೆ ಓಡುವುದು ಕಾಲಿನಿಂದ ನೀನು ಹೋಗಿ ಕಾಲು ಹಿಡಿ ಎಂಬ ನಾರದರ ಮಾತು ಕೇಳಿ ದುರ್ಯೋಧನನ ಓಡಿ ಬಂದು ಕುದುರೆಯ ಕಾಲುಗಳನ್ನು ಹಿಡಿದ, ಸತ್ಯವತಿಯ ಶಾಪ ವಿಮೋಚನೆಯಾಯಿತು. ಆ ಕುದುರೆ ಹೆಣ್ಣಾಗಿ ನಿಂತಿತು, ಬಲರಾಮ ಇದೇನಿದು ಕುದುರೆ ಯಲ್ಲ ಎಂದು ಆಕೆಯ ಕೂದಲನ್ನು ಬಿಟ್ಟನು, ಇದೇನು ಮುತ್ತಿನ ಸರ ಎಂದು ಅವಳ ಕುತ್ತಿಗೆ ಯನ್ನು ಕೃಷ್ಣ ಬಿಟ್ಟನು. ಇದೇನಿದು ಎಂದು ಬಾಲ ಹಿಡಿದಿದ್ದ ಭೀಮನು ಆಕೆಯ ಸೆರಗನ್ನು ಬಿಟ್ಟನು. ದುರ್ಯೋಧನ ಮಾತ್ರ ಬಿಗಿಯಾಗಿ ಆಕೆಯ ಕಾಲು ಹಿಡಿದು ತಲೆ ಬಗ್ಗಿಸಿ ಕುಳಿತಿದ್ದನು. ಎಲ್ಲರೂ ಸತ್ಯವತಿಯ ಕಾಲು ಎಂದ ಕೂಡಲೇ ಬಿಟ್ಟನು.
ನಾರದರು ಬಂದು ಕೃಷ್ಣಾ, ನೀನು ಆಶ್ಚರ್ಯದಿಂದ ನೋಡುತ್ತಿರುವೆಯಲ್ಲವೇ ನೋಡು ಎಂದು ಒಂದು ಕಡೆ ಕೈ ತೋರಿದಾಗ ಭೂಮಿ ಬಿರಿಯಿತು ಸತ್ಯವತಿಯ ಪತಿ ಕೃತವರ್ಮ ಮೇಲೆದ್ದು ಬಂದನು.ನಾರದರು, ಇಷ್ಟೆಲ್ಲ ನಡೆದುದರ ಕುರಿತಾಗಿ ಹೇಳಿದರು. ಕೃಷ್ಣಾ, ಆ ದಿನ ನಿನ್ನ ದರ್ಶನಕ್ಕೆ ಅರಮನೆಗೆ ಬಂದೆ ಆದರೆ ಬಲರಾಮ ತನ್ನ ಕುಸ್ತಿಗಾಗಿ ನನ್ನನ್ನು ಬಲವಂತವಾಗಿ ಜೊತೆಗೆ ಕರೆದ, ನಾನೇನು ಕುಸ್ತಿಪಟುವೇ, ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಹತ್ತಿರ ಬಂದರೆ, ನೀನು ನನಗೊಂದು ಕಥೆ ಹೇಳು ಎಂದೆ, ಬಲರಾಮನಿಗೆ ಕುಸ್ತಿಗೆ ಜೊತೆ, ನಿನಗೆ ಬೇಸರ ಕಳೆಯಲು ಹಿಂದೆಂದೂ ಕೇಳಿರದ ಮುಂದೆಂದೂ ನಡೆಯದ ಕಥೆಯನ್ನು ಹೇಳಬೇಕಿತ್ತು. ಇವೆರಡನ್ನು ಸೇರಿಸುವ ಸಲುವಾಗಿ ಗಗನ ಮಾರ್ಗದಲ್ಲಿ ಬಂದೆ ಕಥೆಗೆ ಪೂರಕವಾದ ಸಾಮಗ್ರಿ ಇಲ್ಲಿ ಸಿಕ್ಕಿತು. ನಾರದರು ಶಿಷ್ಯ ಕೃತವರ್ಮ ಅವನನ್ನು ಕರೆದು, ನಿನ್ನ ಸಂಸಾರ ಹಾಳು ಮಾಡಿದೆ ಎಂದುಕೊಂಡೆ, ಆದರೆ, ನೀನು ಮತ್ತು ನಿನ್ನ ಮಹಾಸತಿ ಸತ್ಯವತಿಯದು ಸುಂದರ ವಾದ ಅನ್ಯೋನ್ಯವಾದ ದಾಂಪತ್ಯ. ಕೃತ ವರ್ಮ ನಿನಗೆ ಸದ್ಯದಲ್ಲೇ ಸತಿ ವಿಯೋಗವಿತ್ತು. ಆದ್ದರಿಂದ ನಾಟಕದ ವಸ್ತುವಾಗಿ ಸತ್ಯವತಿಯನ್ನು ಆಯ್ಕೆ ಮಾಡಿ ನಿಮ್ಮಿಬ್ಬರನ್ನು ಸ್ವಲ್ಪ ಕಾಲ ಬೇರೆ ಇರುವಂತೆ ಮಾಡಿದೆ. ಈಗ ಎಲ್ಲಾ ಸುಖಾಂತ್ಯವಾಯಿತು ಎಂದರು. ಹಾಗೂ ಕೃತ ವರ್ಮ ಸತ್ಯವತಿಯರನ್ನು ಕರೆದು ಕೃಷ್ಣ ನಲ್ಲಿ ಆಶೀರ್ವಾದ ಪಡೆಯುವಂತೆ ಹೇಳಿದರು. ಕೃಷ್ಣ ಅವರಿಬ್ಬರಿಗೂ ಆಶೀರ್ವಾದ ಮಾಡಿದನು. ಹಿಂದೆಂದೂ ಕೇಳಿರದ ಮುಂದೆ ಕಂಡರಿಯದ ನಾರದರ ನಾಟಕಕ್ಕೆ ಎಲ್ಲರೂ ತಲೆದೂಗಿದರು.
ಬೊಂಬೆಯಾಟವಯ್ಯ ಬ್ರಹ್ಮಾಂಡವೇ,
ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬ ಮಾಯವಯ್ಯ ಈ ಲೀಲೆಯ
ಬೊಂಬೆಯಾಟವಯ್ಯ
ಜಗವ ಸೃಜಿಸಿ ಗತಿ ಸೂತ್ರವ ನಾಡಿಸಿ
ನಗುನಗುತಾ ಕುಣಿಸಿ ಮಾಯೆ ಬೀಸಿ
ರಾಗದ ಭೋಗದ ಉರಿಯೋಳು ನಿಲ್ಲಿಸಿ
ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ
ಬೊಂಬೆಯಾಟವಯ್ಯ!!
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


