#💪ಹನುಮ ಜಯಂತಿ ಶುಭಾಶಯಗಳು🚩 #ಜೈ ಹನುಮಾನ್
ಹನುಮಂತನ ನಿಸ್ವಾರ್ಥ ಭಕ್ತಿ :-
ಶ್ರೀರಾಮನ ಭಕ್ತ ಹನುಮಂತ ಹಾಗೆ ಶ್ರೀರಾಮನ ಸೇವೆ ಗಾಗಿಯೇ ತನ್ನನ್ನು ಮೀಸಲಿಟ್ಟಿದ್ದನು. ಯಾರಿಗೂ ರಾಮನ ಸೇವೆ ಮಾಡಲು ಅವಕಾಶವೇ ಸಿಗುತ್ತಿರಲಿಲ್ಲ.ರಾಮನ ಸೇವೆ ಮಾಡುವುದರಲ್ಲಿ ಯಾರು ಮೊದಲಿಗರು ಎಂಬ ಸ್ಪರ್ಧೆ ಇಟ್ಟರೆ, ಹನುಮಂತನೇ ಮುಂಚೂಣಿಯಲ್ಲಿ ಬರುತ್ತಿದ್ದ. ಆದರೆ ಇದು ಲಕ್ಷ್ಮಣ, ಭರತ, ಶತ್ರುಘ್ನ, ಹಾಗೂ ಸೀತೆಯು ಸೇರಿದಂತೆ ಯಾರಿಗೂ ಸರಿ ಹೋಗುತ್ತಿರಲಿಲ್ಲ. ಅವರೆಲ್ಲಾ ಏನಾದರೂ ಒಂದೊಂದು ರಾಮನ ಸೇವೆ ಮಾಡ ಬೇಕೆಂದು ಕೊಂಡಿದ್ದರೆ ಅದನ್ನೆಲ್ಲಾ ಊರಿಗ್ಮೊದಲೆ ಹನುಮಂತ ಮಾಡಿ ಮುಗಿಸಿರುತ್ತಿದ್ದ. ಅವರಿಗೆ ಯಾವ ಸೇವೆ ಮಾಡಲು ಅವಕಾಶ ಇರುತ್ತಿರಲಿಲ್ಲ. ಈ ವಿಷಯದಲ್ಲಿ ಅವರೆಲ್ಲ ಹನುಮನ ಮೇಲೆ ಬೇಸರಗೊಂಡಿದ್ದರು.
ಒಮ್ಮೆ ಅವರೆಲ್ಲ ಸಮಲೋಚನೆ ನಡೆಸಿ ರಾಮನಿಗೆ ಮಾಡಬೇಕಾದ ಎಲ್ಲಾ ಸೇವೆಯನ್ನು ಅವರವರೊಳಗೆ ಹಂಚಿಕೊಂಡರು. ಆಯಾ ಸೇವೆಯನ್ನು ವಹಿಸಿಕೊಂಡವರೇ ಅದನ್ನು ಮಾಡಬೇಕು. ಸೇವೆಗಳನ್ನು ಯಾರು ಯಾವುದು ಮಾಡಬೇಕು ಎಂಬ ಪಟ್ಟಿ ಮಾಡಿದರು. ಒಬ್ಬರು ಮಾಡಿದ ಕೆಲಸವನ್ನು ಮತ್ತೊಬ್ಬರು ಮಾಡುವಂತಿಲ್ಲ. ಹಾಗೆ ರಾಮನ ಸೇವೆಯ ಯಾವ ಕೆಲಸವನ್ನು ಯಾರು ವಹಿಸಿಕೊಂಡಿರು ತ್ತಾರೋ ಅವರ ಕೈಯಲ್ಲೆ ಆ ಸೇವೆ ಮಾಡಿಸಿ ಕೊಳ್ಳಬೇಕು. ಆ ಕೆಲಸಕ್ಕೆ ಸಂಬಂಧಪಟ್ಟವರನ್ನೆ ಕೇಳಬೇಕು. ಏಕೆಂದರೆ ಒಬ್ಬೊಬ್ಬರು ತಲಾ ಒಂದೊಂದು ಕೆಲಸ ಎಂದು ಹಂಚಿ ಕೊಂಡಿದ್ದರು. ಯಾರಿಗೂ ನೋವು- ಬೇಸರವಾಗಬಾರದು ಎಂದು ಈ ವಿಷಯ ರಾಮನೆದುರಿಗೆ ಮಾತಾಡಿ
ಒಪ್ಪಿಸಿದ್ದರು ರಾಮನೂ ಸಹ ಮುಗುಳ್ನಗುತ್ತಾ ಎಲ್ಲವನ್ನುಅವರೆಲ್ಲ ಹೇಳಿದಂತೆ ಒಪ್ಪಿಕೊಂಡಿದ್ದ. ಇದರಲ್ಲಿ ಆಂಜನೇ ಯನಿಗೆ ಯಾವ ಕೆಲಸವೂ ಇರಲಿಲ್ಲ.
ಸರಿ ಆ ಸರದಿ ಬಂದಿತು. ಆ ದಿನವೆಲ್ಲ ಹನುಮನಿಗೆ ರಾಮನ ಸೇವೆ ಮಾಡುವ ಯಾವ ಅವಕಾಶಗಳು ಇರಲಿಲ್ಲ. ರಾಮನ ಪಾದದ ಪಕ್ಕದಲ್ಲಿ ಕುಳಿತೇ ಇದ್ದನು. ರಾಮನ ಸೇವೆ ಮಾಡ ಲು ಎಲ್ಲರೂ ಸಿದ್ಧರಾಗಿದ್ದಾರೆ. ನಾನು ರಾಮನ ಸೇವೆ ಬಿಟ್ಟು ಏನು ಮಾಡಲಿ ಎಂದು ಗಲ್ಲದ ಮೇಲೆ ಕೈ ಇಟ್ಟು ಸುಮ್ಮನೆ ಕುಳಿತಿದ್ದನು. ಅವನನ್ನು ನೋಡಿದ ರಾಮ, ಏನಾ ದ್ರೂ ನನ್ನ ಹತ್ತಿರ ನಿನಗೆ ಮಾತನಾಡಲು ಇದೆಯೇ ಸಂಕೋಚವಿಲ್ಲದೆ ಹೇಳು ಎಂದು ಕೇಳಿದ. ಹನುಮಂತನು, ಪ್ರಭು ಮಾತಾಡಲು ಏನು ಇಲ್ಲ. ನನ್ನ ಒಂದು ಕೋರಿಕೆಯ ನ್ನು ಪೂರೈಸುವಿರಾ ಎಂದು ಕೇಳಿದೆ. ಅದೇನು ಕೇಳು ಹನುಮಂತ ಎಂದ. ಹನುಮನು ಪ್ರಭು ನೀವು ಆಕಳಿಸಿ ದಾಗೆಲ್ಲಾ ನಿಮ್ಮ ಬಾಯಿ ಮುಂದೆ 'ಚಿಟಿಕೆ' ಹೊಡೆಯುವ ಸೌಭಾಗ್ಯವನ್ನು ನನಗೆ ಕೊಡುತ್ತೀರಾ? ಹಾಗೂ ಈ ಕೆಲಸಕ್ಕೆ ಬೇರೆ ಯಾರೂ ಬರುವಂತಿಲ್ಲ ಇದನ್ನು ನಾನೇ ಮಾಡ ಬೇಕು ಎಂದು ಹನುಮಂತ ಎಳೆ ಮಕ್ಕಳಂತೆ ಕೇಳಿದ್ದಕ್ಕೆ, ರಾಮ ನಕ್ಕು ಆಯಿತು ಎಂದ.
ರಾಮನಿಂದ ಅನುಮತಿ ಸಿಕ್ಕ ಕ್ಷಣದಿಂದಲೇ ಆಂಜನೇಯನ ಕೆಲಸ ಶುರುವಾಯಿತು. ರಾಮನ ಪದತಲ ಬಿಟ್ಟು ಅವನು ಏಳಲೇ ಇಲ್ಲ. ಏಕೆಂದರೆ ರಾಮ ಯಾವಾಗ ಆಕಳಿಸುತ್ತಾ ನೋ ಎಂದು ಅವನ ಮುಖವನ್ನೇ ನೋಡುತ್ತಾ 'ಚಿಟಿಕೆ' ಹೊಡೆಯಲು ತಯಾರಾಗಿರುತ್ತಿದ್ದ. ರಾಮನ ಪಾದದ ಪಕ್ಕದಲ್ಲೆ ಕುಳಿತು ರಾಮನ ಮುಖವನ್ನೇ ನೋಡುತ್ತಿದ್ದ. ರಾಮ ಆಕಳಿಸುವ ಒಂದೇ ಒಂದು ಅವಕಾಶವನ್ನು ಕಳೆದು ಕೊಳ್ಳಬಾರದೆಂದು ಕಣ್ಣಲ್ಲಿ ಕಣ್ಣಿಟ್ಟು ನೋಡುತಿದ್ದ. ಆಂಜನೇಯ ಮಾಡುತ್ತಿದ್ದ ಸೇವೆ ಬಹು ಪ್ರಿಯವಾಗಿ, ರಾಮನ ಮನಸ್ಸಿಗೂ ಹಿತವಾಗಿತ್ತು. ಬೇರೆಯವರ ಸೇವೆ ರಾಮನಿಗೆ ಸರಿ ಹೋಗಿರಲಿಲ್ಲ. ತಾನು ಆಕಳಿಸಿದಾಗೆಲ್ಲಾ ಚಿಟಕಿ ಹೊಡೆ ಯುವ ಕೆಲಸ ಹನುಮನಿಗೆ ಸಂತೋಷವಾಗಿಯೇ ರಾಮ ಕೊಟ್ಟಿದ್ದ. ಹನುಮಂತ ಸ್ವಾಮಿ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ. ಈ ಕೆಲಸ ಸಿಕ್ಕ ಮೇಲೆ ಹನುಮನಿಗೆ ಹಿಂದೆಂದಿ ಗಿಂತಲೂ ಬಿಡುವಿಲ್ಲದಷ್ಟು ಕೆಲಸ. ಅಲ್ಲದೆ ಸದಾ ಕಾಲ ರಾಮನ ಜೊತೆಗೆ ಇರುವ ಯೋಗ. ಹಗಲು-ರಾತ್ರಿಯೆನ್ನದೆ ದಿನಪೂರ್ತಿಯೂ ಆಂಜನೇಯ ರಾಮನ ಮುಂದೆ ಕುಳಿತಿದ್ದರಿಂದ ರಾಮನ ಸಹೋದರರಿಗೆ, ಹಾಗೂ ಪತ್ನಿ ಸೀತೆಗೆ ಕಿರಿಕಿರಿಯಾಯಿತು. ಯಾವಾಗ ಬಂದು ನೋಡಿ ದರೂ “ಅಳಿಯನ ಜೊತೆ ಗೆಳೆಯ” ಎನ್ನುವಂತೆ ರಾಮನ ಜೊತೆ ಹನುಮಂತ ಮೊದಲಿಗಿಂತಲೂ ಹೆಚ್ಚು ಹೊತ್ತು ಅಂದರೆ ಮುಖ್ಯವಾದ ವಿಷಯ ಮಾತಾಡಲು ಬಂದಾಗ ರಾಮನ ಪದತಲದಲ್ಲಿ ಹನುಮಂತನೇ ಇರುತ್ತಿದ್ದ. ಇದರಿಂದ ಅವರಿಗೆಲ್ಲಾ ಅಸಮಾಧಾನವಾಯಿತು. ಉಳಿದವರಿಗೆ ರಾಮನ ಜೊತೆ ಸಮಯ ಕಳೆಯುವ ಅವಕಾಶ ತಪ್ಪಿತು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಅಂದು ರಾತ್ರಿ ಊಟ ಮಾಡಿದ ರಾಮ ತನ್ನ ಕೊಠಡಿಗೆ ಮಲಗಲು ಹೋದನು. ಸ್ವಲ್ಪ ಹೊತ್ತಿಗೆ ಸೀತಾಮಾತೆಯು ಕೋಣೆಗೆ ಬಂದಳು. ಮಂಚದ ಕೆಳಗೆ ಹನುಮಂತ ಕೂತಿರುವುದನ್ನು ನೋಡಿ ಗಾಬರಿಗೊಂಡಳು. ನಾವು ಮಲಗುವ ಕೋಣೆಯಲ್ಲಿ ಏನು ಮಾಡುತ್ತಿರುವೆ ನಾವು ಮಲಗಬೇಕು ನೀನು ಇಲ್ಲಿಂದ ಎದ್ದು ಹೊರಗೆ ಹೋಗು ಎಂದಳು. ಆಗ ಹನುಮನು ಚಿಂತಿಸಬೇಡಿ ತಾಯಿ ದಯ ವಿಟ್ಟು ನೀವು ನಿಮ್ಮ ಪಾಡಿಗೆ ನಿದ್ದೆ ಮಾಡಿ ರಾತ್ರಿ ಸಮಯದ ಲ್ಲಿ ಪ್ರಭು ಆಕಳಿಸಿದರೆ ನಾನು ನನ್ನ ಕರ್ತವ್ಯವ ನ್ನು ಪಾಲಿಸಬೇಕು ನನ್ನ ಪಾಡಿಗೆ ನಾನು ಇರುತ್ತೇನೆ ಎಂದನು.
ಸೀತೆಗೆ ರಾಮನ ಅಸಹಾಯಕತೆಯನ್ನು ನೋಡಿ, ಸ್ವಾಮಿ ನಾವು ರಾತ್ರಿ ನಿದ್ದೆ ಮಾಡುವ ಸಮಯದಲ್ಲೂ “ಚಿಟಿಕೆ” ಹೊಡೆಯಲು ಹನುಮಂತನಿಗೆ ಅನುಮತಿ ನೀಡಿದ್ದೀರಾ ಎಂದು ಕೇಳಿದಳು. ಆಗ ರಾಮ ಯಾವುದೇ ಕಾರಣಕ್ಕೂ ಕರ್ತವ್ಯವನ್ನು ಮಾಡಲು ಅವರವರಿಗೆ ಬಿಡಬೇಕು ಅಪ್ಪಿ ತಪ್ಪಿಯೂ ಬದಲಾಯಿಸುವುದಿಲ್ಲ ಎಂದು ನಾನು ಮಾತು ಕೊಟ್ಟಿದ್ದೇನೆ ಅಲ್ಲವೇ? ಈಗ ಅಸಹಾಯಕನಾಗಿದ್ದೇನೆ. ನಾನು ನನ್ನ ಭಕ್ತರ ಗುಲಾಮ ಎಂಬುದು ನಿನಗೆ ಗೊತ್ತಿದೆ ಅಲ್ಲವೇ?ಶ್ರೀರಾಮ ನಗುತ್ತಲೇ ಸೀತೆಯನ್ನು ಕೇಳಿದ. ಈ ಮಾತಿನಿಂದ ಸೀತೆಗೆ ನಾಚಿಕೆಯಾಗಿ ತನ್ನ ತಪ್ಪಿನ ಅರಿವಾಯಿತು.
ಸೀತಾಮಾತೆ ಅರಿತೋ ಅರಿಯದೆಯೋ ತನ್ನ ಸ್ವಾರ್ಥದಲ್ಲಿ ಆಂಜನೇಯನ ನಿಜ ಭಕ್ತಿಯನ್ನು ಅಲಕ್ಷ ಮಾಡಿದ್ದಳು. ಹನುಮ ತನ್ನ ಸ್ವಾಮಿಗೆ ವನವಾಸದಲ್ಲಿ ಅದೆಷ್ಟು ಭಕ್ತಿ, ನಿಷ್ಠೆಗಳಿಂದ ಸೇವೆ ಸಲ್ಲಿಸಿದ್ದನೆಂದು ನೆನಪು ಮಾಡಿ ಕೊಂಡಳು. ಕ್ಲಿಷ್ಟಕರ ಸನ್ನಿವೇಶಗಳಲ್ಲಿ ,ರಾಮ-ರಾವಣರ ಯುದ್ಧದಲ್ಲಿ ಹಸಿವು, ಆಯಾಸ, ನಿದ್ರೆ, ನೀರಡಿಕೆ ಹಂಗನ್ನು ತೊರೆದು, ರಾಮಚಂದ್ರನ ಕೆಲಸ ಕಾರ್ಯಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿ ಮುಗಿಸುತ್ತಿದ್ದ ಹನುಮಂತ ಎಡೆಬಿಡದೆ ರಾಮನ ಸೇವೆ ಮಾಡಿದ್ದಾನೆ. ಅಂಥ ಸ್ವಾಮಿ ಭಕ್ತನ ಸೇವೆಯನ್ನು ಕಿತ್ತುಕೊಂಡು ಎಂಥ ತಪ್ಪು ಮಾಡಿದ್ದೆ ಎಂದುಕೊಂಡು, ಕೂಡಲೇ ಲಕ್ಷ್ಮಣ, ಭರತ, ಶತ್ರುಘ್ನ ರನ್ನು ಕರೆದು ಅವರೆಲ್ಲ ವಹಿಸಿ ಕೊಂಡಿದ್ದ ಕರ್ತವ್ಯಗಳನ್ನು ಹನುಮನಿಗೆ ಕೊಡಲು ಹೇಳಿದಳು. ಹನುಮನನ್ನು ಮಮತೆ ಯಿಂದ ಸಂತೈಸಿದಳು. ನಿರಪಕ್ಷೆಯಾದ ಸೇವೆಗೆ ಯಾವತ್ತಿ ದ್ದರೂ ಫಲ ದೊರೆಯುತ್ತದೆ ಎನ್ನುವುದಕ್ಕೆ ರಾಮನ ಬಂಟ ಹನುಮಂತ ಸ್ವಾರ್ಥರಹಿತ ಸೇವೆ ಉದಾಹರಣೆಯಾಗಿದೆ.
ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು🙏
ಮನೋಜವಂ ಮಾರುತತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ.
ಹನುಮಂತನ ಸ್ಮರಣೆಮಾಡುವುದರಿಂದ ಬುದ್ಧಿ ,ಶಕ್ತಿ, ಕೀರ್ತಿ, ಧೈರ್ಯ, ನಿರ್ಭಯತೆ, ಆರೋಗ್ಯ, ಉತ್ಸಾಹ ಮತ್ತು ವಾಕ್ಪಟುತ್ವ ಇವುಗಳು ಸಿದ್ಧಿಸುತ್ತವೆ. ವಾಯುವಿಗೆ ಸಮಾನ ವೇಗವುಳ್ಳ , ಜಿತೇಂದ್ರಿಯನಾದ, ಬುದ್ಧಿವಂತರಲ್ಲಿ ಶ್ರೇಷ್ಠನಾದ ವಾಯುಪುತ್ರನಾದ, ವಾನರ ಸಮೂಹಕ್ಕೆ ಮುಖ್ಯನಾದ ಶ್ರೀರಾಮದೂತನಾದ ಹನುಮಂತನಿಗೆ ನಮಸ್ಕರಿಸುತ್ತೇನೆ.
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


