ಜ್ಯೋತಿಷ್ಯ ಮತ್ತು ಭವಿಷ್ಯ ಹಾಗು ವಾಸ್ತವ........
ಯೋಚಿಸಬೇಕಾದ ವಿಷಯ.... ಮತ್ತು ಅರ್ಥ ಮಾಡಿಕೊಳ್ಳುವ ಮನೋಭಾವ..... ಹಾಗೂ ನಿರ್ಧರಿಸುವ ಚಾಣಾಕ್ಷತೆ.
ಜ್ಯೋತಿಷಿಗಳು ಹೇಳುವ ಭವಿಷ್ಯದ ಬಗ್ಗೆ ಭಾರತೀಯ ಸಮಾಜದಲ್ಲಿ ಅಂದಾಜು ಸುಮಾರು ಶೇಕಡಾ 80/90 ರಷ್ಟು ಮಹಿಳೆಯರು ಮತ್ತು ಶೇಕಡಾ 60/70 ರಷ್ಟು ಪುರುಷರಿಗೆ ನಂಬಿಕೆ, ಗೌರವ, ವಿಶ್ವಾಸವಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರು ಇದಕ್ಕೆ ಶರಣಾಗಿದ್ದಾರೆ..............
ಆರೋಗ್ಯ ಸಮಸ್ಯೆಗೆ ಡಾಕ್ಟರುಗಳು, ಜಮೀನು ವಿವಾದಗಳಿಗೆ ಲಾಯರ್ ಮತ್ತು ನ್ಯಾಯಾಧೀಶರು , ಸಾಂಸಾರಿಕ ಸಮಸ್ಯೆಗಳಿಗೆ ಪೋಲಿಸ್ ಮತ್ತು ಸಂಬಂಧಿಗಳು, ಶೈಕ್ಷಣಿಕ ಸಮಸ್ಯೆಗೆ ಶಿಕ್ಷಕರು ಮತ್ತು ವಿದ್ಯಾಸಂಸ್ಥೆಗಳು, ಆರ್ಥಿಕ ಸಮಸ್ಯೆಗಳಿಗೆ ಆಡಳಿತಾತ್ಮಕ ವ್ಯವಸ್ಥೆಗಳು ಇತ್ಯಾದಿ ಇದ್ದರೂ ಜ್ಯೋತಿಷಿಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಹಾಗಾದರೆ ಜ್ಯೋತಿಷ್ಯ ನಿಜವೇ.???
ಸಮಸ್ಯೆಗಳಿಗೆ ಪರಿಹಾರ ಮತ್ತು ಭವಿಷ್ಯದ ಭದ್ರ ಬುನಾದಿ ಇವರಿಂದ ಸಾಧ್ಯವೇ ?
ನಿಜವಾದ ಕುತೂಹಲ ಇರುವುದೇ ಇಲ್ಲಿ. ಕೆಲವು ಚಾಣಾಕ್ಷ ಜ್ಯೋತಿಷಿಗಳು ಶೇಕಡ 70/80 ರಷ್ಟು ಸರಿಯಾಗಿಯೇ ಹೇಳುತ್ತಾರೆ ಎಂದೆನಿಸುತ್ತದೆ. ಇದು ಹೇಗೆ ಸಾಧ್ಯ ? ಸೃಷ್ಟಿಯ ಸ್ವಾಭಾವಿಕತೆಯನ್ನು ಭೇದಿಸುವ ಶಕ್ತಿ ಜ್ಯೋತಿಷಿಗಳಿಗೆ ಇದೆಯೇ ?
ಇದನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಮಾಜದ Social structure ಹೇಗೆ Construct ಆಗಿದೆ ಎಂಬುದನ್ನು ಗಮನಿಸಬೇಕು.
ಇಡೀ ಭಾರತೀಯರ ಸಾಮಾಜಿಕ ವ್ಯವಸ್ಥೆ ಭಕ್ತಿ, ಭಾವನೆ, ನಂಬಿಕೆಗಳ ಆಧಾರದ ಮೇಲೆ ನಿಂತಿದೆ. ಮನುಷ್ಯ ಸಂಬಂಧಗಳು ಮುಖ್ಯವಾಗಿ ತಂದೆ, ತಾಯಿ, ಮಕ್ಕಳು ಮುಂತಾದ ರಕ್ತ ಸಂಬಂಧಗಳು ಬಹಳಷ್ಟು ಬೆಸೆದುಕೊಂಡಿದೆ. ಅಜ್ಞಾನ, ಬಡತನ, ಭಯ ಮತ್ತು ಮೌಢ್ಯ ಇಲ್ಲಿನ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ. ಪ್ರೀತಿ, ಪ್ರೇಮ, ಪ್ರಣಯಗಳ ಬಗ್ಗೆ ತೀರಾ ಸಂಕುಚಿತ ಮನೋಭಾವವಿದೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ಯಾವುದೇ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಇಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಭಾರತೀಯ ಜನರ ಜೀವನಶೈಲಿ ತುಂಬಾ ಏರಿಳಿತಗಳನ್ನು ಉಂಟುಮಾಡುತ್ತಿದೆ. ಇದೇ ಈ ಜ್ಯೋತಿಷಿಗಳ ಮೂಲ ಬಂಡವಾಳ.
ಇಡೀ ವ್ಯವಸ್ಥೆಗೆ ಮತ್ತು ಸಾಮಾನ್ಯ ಜನರಿಗೆ ಅನ್ವಯಿಸುವ ಕೆಲವು ಅಂಶಗಳನ್ನು ಬಹಳ ಕಲಾತ್ಮಕವಾಗಿ ಹೇಳುತ್ತಾರೆ.
ಅದನ್ನು ಕೇಳಿದರೆ " ಅರೆ , ಇದೇನಿದು ಎಷ್ಟೊಂದು ಸತ್ಯ. ನನ್ನ ಜೀವನದಲ್ಲಿ ನಡೆದಿರುವುದೇ ಅಲ್ಲವೆ. ಜ್ಯೋತಿಷ್ಯ ನಿಜವಾಗಿ ಸತ್ಯ " ಎಂಬ ನಂಬಿಕೆ ಬರುತ್ತದೆ.
ನಿಮ್ಮ ಹಿರಿಯರಿಗೆ ಆರೋಗ್ಯ ಸಮಸ್ಯೆ ಇದೆ, ನಿಮಗೆ ಸ್ನೇಹಿತರಿಂದ ಮೋಸವಾಗುತ್ತದೆ, ನಿಮ್ಮ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ, ನಿಮಗೆ ವಾಹನಗಳಿಂದ ಗಂಡಾಂತರವಿದೆ, ನೀವು ಬೇರೆಯವರನ್ನು ಬೇಗ ನಂಬಿ ಮೋಸ ಹೋಗುವಿರಿ " ಇತ್ಯಾದಿ ಇತ್ಯಾದಿ....
ಚುನಾವಣಾ ಸಂಧರ್ಭದ ಫಲಿತಾಂಶ ಬಿಡಿ. ಈ ದೇಶದ ಪ್ರತಿಯೊಬ್ಬರೂ ಭವಿಷ್ಯಕಾರರೇ...!
ಆದರೆ ,
ವಾಸ್ತವದಲ್ಲಿ ಇದೊಂದು ಭ್ರಮೆ. ನಮ್ಮ ಮದುವೆ, ಮಕ್ಕಳು, ಉದ್ಯೋಗ, ಆರೋಗ್ಯ, ಕೌಟುಂಬಿಕ ಕಲಹ, ಆರ್ಥಿಕ ಅಧೋಗತಿ, ಶತ್ರುಗಳ ಕಾಟ, ಕೆಲವೊಮ್ಮೆ ಯಶಸ್ಸು ಎಲ್ಲವೂ ಸಹಜ, ಸ್ವಾಭಾವಿಕ ಮತ್ತು ನಾವು ವಾಸಿಸುವ ದೇಶ, ಕಾಲ, ಪರಿಸ್ಥಿತಿ ಮತ್ತು ನಮ್ಮ ಮನೋಭಾವವನ್ನು ಅವಲಂಬಿಸಿರುತ್ತದೆ. ಅದನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ತಾಳ್ಮೆ ಮತ್ತು ಜಾಣತನ ನಮ್ಮ ಸಾಮಾನ್ಯ ಜನರಿಗೆ ಇನ್ನೂ ಮೂಡಿಲ್ಲ. ಅದಕ್ಕೆ ಬದಲಾಗಿ ಮೌಢ್ಯಕ್ಕೆ ಮತ್ತು ಸುಲಭ ಪರಿಹಾರದ ಆಕರ್ಷಣೆಗೆ ಒಳಗಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ.
ಮೊದಲು ಗಿಣಿ, ಕವಡೆ, ಹಸ್ತ ಮುದ್ರಿಕೆ, ತಿಥಿ, ನಕ್ಷತ್ರ, ರಾಶಿ, ಜಾತಕ ಮುಂತಾದ ಕೆಲವು ವಿಷಯಗಳ ಮೇಲೆ ಯಾರೋ ಕೆಲವರು ಹೊಟ್ಟೆಪಾಡಿಗಾಗಿ ಶಾಸ್ತ್ರ ಹೇಳುತ್ತಾ, ಕೊಟ್ಟಷ್ಟು ಹಣ ಪಡೆಯುತ್ತಾ, ಹೇಗೋ ಉಪ ಉದ್ಯೋಗದಂತೆ ಜೀವಿಸುತ್ತಿದ್ದರು.
ಆದರೆ ಈ ಮಾಧ್ಯಮಗಳ ಪ್ರಭಾವ ಹೆಚ್ಚಾದ ಮೇಲೆ ಇದೊಂದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿತು ಮತ್ತು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಯಿತು.
ಬದುಕಿನ ಅನಿಶ್ಚಿತತೆ ಹೆಚ್ಚಾದಷ್ಟು ಜ್ಯೋತಿಷ್ಯ ತನ್ನ ಪ್ರಾಮುಖ್ಯತೆ ಪಡೆಯುತ್ತಿದೆ. ಅವರು ಹೇಳುವುದು ನಿಜವೆಂಬ ಭ್ರಮೆ ಸೃಷ್ಟಿಸುತ್ತಿದೆ.
ಪೌರಾಣಿಕ ದೇವರುಗಳನ್ನೇ Overtake ಮಾಡಿ ಹೊಸ ರೀತಿಯ ದೇವಮಾನವರೆಂಬ ನಕಲಿಗಳು ಜ್ಯೋತಿಷಿಗಳ ರೂಪದಲ್ಲಿ ಉಧ್ಭವವಾಗಿದ್ದಾರೆ.
ಈ ಬಗೆಗೆ ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ.
ಇದಕ್ಕೆ ಪರಿಹಾರವೆಂದರೆ,
ಹೆಚ್ಚು ಹೆಚ್ಚು ಸೃಷ್ಟಿಯನ್ನು ಅರಿಯಿರಿ. ಪ್ರಕೃತಿಗೆ ನಿಯತ್ತಾಗಿ ಬದುಕಿ. ಪರಿಸ್ಥಿತಿಯನ್ನು ವಿಶಾಲ ಅರ್ಥದಲ್ಲಿ ಗ್ರಹಿಸಿ. ಸಮಸ್ಯೆ ನನಗೆ ಮಾತ್ರ ಎಂಬ ಸಂಕುಚಿತತೆ ಬಿಡಿ. ಎಲ್ಲರೂ ಒಂದಲ್ಲಾ ಒಂದು ಸಮಸ್ಯೆಗಳಲ್ಲಿ ಇರುವವರೇ.
ಅದರ ರೂಪ ಮಾತ್ರ ಭಿನ್ನವಾಗಿರುತ್ತದೆ. ಅದೇ ವಾಸ್ತವ.
ಉದಾಹರಣೆಗೆ.......
ಮೇಷ ರಾಶಿ
---------------------
ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ.....
ವೃಷಭ ರಾಶಿ
--------------------
ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ.........
ಮಿಥುನ ರಾಶಿ
--------------------------
ನಿಮ್ಮ ಮನೆಯ ಹಿರಿಯರಿಗೆ ಆಗಾಗ ಅನಾರೋಗ್ಯ ಕಾಡುತ್ತದೆ. ಕಾಳಜಿ ವಹಿಸದಿದ್ದರೆ ಅನಾಹುತ ನಿಶ್ಚಿತ.........
ಕರ್ಕಾಟಕ ರಾಶಿ
--------------------------
ವಾಹನ ಪ್ರಯಾಣ ಮಾಡುವಾಗ ಅಪಘಾತವಾಗುವ ಸಾಧ್ಯತೆ ಇದೆ. ಪ್ರಯಾಣ ಮುಂದೂಡುವುದು ಉತ್ತಮ.......
ಸಿಂಹ ರಾಶಿ
--------------------
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು ಮತ್ತು ಉದ್ಯೋಗ ಹೋಗುವ ಸಾಧ್ಯತೆಯೂ ಇದೆ. ಸ್ವಲ್ಪ ಹುಷಾರು......
ಕನ್ಯಾ ರಾಶಿ
---------------------
ಅನಿರೀಕ್ಷಿತ ಸುದ್ದಿ ಬರುತ್ತದೆ. ಕೆಟ್ಟ ವಿಷಯಗಳು ಕೇಳಬೇಕಾಗಬಹುದು. ಮಾನಸಿಕವಾಗಿ ಸಿದ್ದರಾಗಿ......
ತುಲಾ ರಾಶಿ
----------------------
ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಬಹುದು.........
ವೃಶ್ಚಿಕ ರಾಶಿ
------------------------
ಮಗ - ಮಗಳ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ವಿಚ್ಛೇದನದ ಸಾಧ್ಯತೆ ಇದೆ........
ಧನು ರಾಶಿ
--------------------
ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಹೊಂದಿ ಕೆಟ್ಟ ದಾರಿ ಹಿಡಿಯಬಹುದು. ಎಚ್ಚರಿಕೆಯಿಂದ ಇರಿ.
ಮಕರ ರಾಶಿ
------------------------
ಮನೆಯ ಆರ್ಥಿಕ ಪರಿಸ್ಥಿತಿ ಕುಸಿಯುತ್ತದೆ. ಅನಿರೀಕ್ಷಿತ ಘಟನೆಗಳು ನಡೆದು ಬಹಳ ನಷ್ಟ ಅನುಭವಿಸುವಿರಿ.......
ಕುಂಭ ರಾಶಿ
--------------------
ಕೌಟುಂಬಿಕ ಕಲಹಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡುತ್ತದೆ. ಶಾಂತಿ ಇಲ್ಲವಾಗುತ್ತದೆ.
ಮೀನ ರಾಶಿ
--------------------
ಅನಿರೀಕ್ಷಿತ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಳೆದುಕೊಂಡಿರುವುದನ್ನು ಮತ್ತೆ ಪಡೆಯುವಿರಿ.....
ಇದು,
ದಿನ, ವಾರ, ತಿಂಗಳು, ವಾರ್ಷಿಕ ಅಥವಾ ಜೀವನಪರ್ಯಂತ ಘಟಿಸಲಿರುವ ನಿಮ್ಮ ಭವಿಷ್ಯ. ದಿನನಿತ್ಯ ಟಿವಿ, ಪತ್ರಿಕೆ ಮುಂತಾದ ಎಲ್ಲಾ ಕಡೆಗಳಲ್ಲಿ ನಿಮ್ಮ ಹೆಸರಿನ ಮೇಲೆಯೋ, ಜನ್ಮ ನಕ್ಷತ್ರದ ಮೇಲೆಯೋ, ನಿಮ್ಮ ಹಸ್ತ ರೇಖೆಗಳ ಮೇಲೆಯೋ, ಕವಡೆ, ಗಿಣಿ ಮುಂತಾದವುಗಳ ಮೇಲೆಯೋ ಒಟ್ಟಿನಲ್ಲಿ ಆಯಾ ವಿಷಯದ ಪಂಡಿತರು ಈ ಭವಿಷ್ಯ ಹೇಳುತ್ತಾರೆ. ಇದರಲ್ಲಿಯೂ ಹಲವಾರು ವಿಧಾನಗಳು ಇವೆ.
ಹಾಗೆಯೇ ದಿಕ್ಕು, ಬಣ್ಣ, ಸಂಖ್ಯೆ, ಜನ್ಮ ಜಾತಕ, ಇತ್ಯಾದಿ ಅಂಶಗಳ ಮೇಲೆಯೂ ಭವಿಷ್ಯ ನುಡಿಯಲಾಗುತ್ತದೆ.
ಕೆಲವರು ಇದೊಂದು ವೈಜ್ಞಾನಿಕ ವಿದ್ಯೆ. ಗ್ರಹಗಳು, ನಕ್ಷತ್ರಗಳ ಚಲನವಲನಗಳನ್ನು ಅಭ್ಯಸಿಸಿ ಮನುಷ್ಯ ಇತಿಹಾಸದ ಅನುಭವಗಳ ಆಧಾರದ ಮೇಲೆ ಆತನ ಗುಣ ಸ್ವಭಾವಗಳನ್ನು ಗುರುತಿಸುವ ವಿಜ್ಞಾನವಿದು. ಖಚಿತ ಭವಿಷ್ಯ ಹೇಳುವುದು ಸಾಧ್ಯವಿಲ್ಲವಾದರು ಕೆಲವು ನಡೆಗಳನ್ನು ಗುರುತಿಸಬಹುದು.
ಈಗಿನ ಅನೇಕ ನಕಲಿ ಜ್ಯೋತಿಷಿಗಳ ವ್ಯಾಪಾರಿ ಮನೋಭಾವದಿಂದ ಇದು ಕಲುಷಿತಗೊಂಡಿದ್ದು ನಿಜವಾದ ಜ್ಯೋತಿಷ್ಯ ಶಾಸ್ತ್ರ ವೈಚಾರಿಕವಾದದ್ದು ಎಂದು ಸಮರ್ಥಿಸಿಕೊಳ್ಳುತ್ತಾರೆ....
ಹೌದು,
ಕೆಲವೊಮ್ಮೆ ಅದರಲ್ಲೂ ನಮ್ಮ ಸಂಕಷ್ಟದ ಸಮಯದಲ್ಲಿ ಯಾರೋ ಜ್ಯೋತಿಷಿಗಳು ಮೇಲೆ ತಿಳಿಸಿದ ಅಂಶಗಳ ಆಧಾರದಲ್ಲಿ ಕೆಲವು ಊಹಾತ್ಮಕ ಅಥವಾ ಅವರು ಕಲಿತ ವಿದ್ಯೆಯ ನೆರವಿನಿಂದ ಕೆಲವು ಸಲಹೆ ಸೂಚನೆಗಳನ್ನು ನೀಡಬಹುದು. ಅದು ಹಲವು ಬಾರಿ ನಿಜವೂ ಆಗಬಹುದು. ಅದು ಜ್ಯೋತಿಷ್ಯದ ಮೇಲೆ ನಂಬಿಕೆ ಹೆಚ್ಚಿಸುತ್ತದೆ. ಹಾಗಾದರೆ ಜ್ಯೋತಿಷ್ಯ ನಿಜವೇ ?
ಒಣ ವೈಚಾರಿಕ ಪ್ರಜ್ಞೆಯೂ ಬೇಡ ಅಥವಾ
ಹಿರಿಯರು ತೋರಿದ ಧರ್ಮ, ಸಂಪ್ರದಾಯದ ನಂಬಿಕೆಯ ದಾರಿಯೂ ಬೇಡ. ನಮ್ಮ ಇಂದಿನ ಅರಿವು ಅನುಭವದ ಮಿತಿಯಲ್ಲಿ ಇದನ್ನು ಯೋಚಿಸೋಣ.........
ಇದು ಸಾರ್ವತ್ರಿಕ ಸತ್ಯವೇ ?
ವಿಶ್ವದ ಈಗಿನ ಸುಮಾರು 750 ಕೋಟಿ ಜನಸಂಖ್ಯೆಗೂ ಇದು ಅನ್ವಯವಾಗುತ್ತದೆಯೇ ?
ಸೃಷ್ಟಿಯ ಎಲ್ಲಾ ಭೂ ಪ್ರದೇಶದಲ್ಲಿಯೂ ಏಕ ಪ್ರಕಾರವಾಗಿ ಪರಿಣಾಮ ಬೀರುತ್ತದೆಯೇ ?
ಮನುಷ್ಯರಿಗೆ ಮಾತ್ರವೇ ಅಥವಾ ಸಕಲ ಚರಾಚರ ಜೀವಿಗಳಿಗೂ ಅನ್ವಯಿಸುತ್ತದೆಯೇ ?
ಬಣ್ಣ, ದಿಕ್ಕು, ಸಂಖ್ಯೆಗಳು ಮನುಷ್ಯನ ವ್ಯಾವಹಾರಿಕ ಅನುಕೂಲಕ್ಕಾಗಿ ಗುರುತಿಸುವಿಕೆಯ ಕಾರಣಕ್ಕಾಗಿ ನೀಡಿದ ಹೆಸರುಗಳಲ್ಲವೇ ?
ಸಾರ್ವಜನಿಕವಾಗಿ ಪ್ರಾಕೃತಿಕ ವಿಕೋಪಗಳನ್ನು, ವೈಯಕ್ತಿಕವಾಗಿ ಮನುಷ್ಯನ ಏಳು ಬೀಳುಗಳನ್ಮು, ಯಶಸ್ಸು ವೈಫಲ್ಯಗಳನ್ನು, ಹುಟ್ಟು ಸಾವುಗಳನ್ನು ಖಚಿತವಾಗಿ ಮೊದಲೇ ಮಾಹಿತಿ ನೀಡಲು ಸಾಧ್ಯವೇ ?
ಪ್ರಕೃತಿಯ ಎಲ್ಲಾ ಅಂಶಗಳನ್ನು ಜ್ಯೋತಿಷ್ಯ ಶಾಸ್ತ್ರ ಭೇದಿಸಿದೆಯೇ ?
ಆರೋಗ್ಯವೇ ಇರಲಿ, ಆರ್ಥಿಕ ಪರಿಸ್ಥಿತಿಯೇ ಇರಲಿ, ತಂತ್ರಜ್ಞಾನವೇ ಇರಲಿ, ಮಾನಸಿಕ ಸಮತೋಲನವೇ ಇರಲಿ ಅಥವಾ ವ್ಯವಸ್ಥೆಯ ಯಾವುದೇ ವಿಷಯದಲ್ಲಿ ವಿಜ್ಞಾನ ಮತ್ತು ಜ್ಯೋತಿಷ್ಯದ ಮುಖಾಮುಖಿಯಲ್ಲಿ ಜ್ಯೋತಿಷ್ಯ ಹೆಚ್ಚು ಖಚಿತವಾದದ್ದು ಮತ್ತು ಸಾರ್ವತ್ರಿಕ ಸತ್ಯ ಎಂದು ನಿಮಗನಿಸುತ್ತದೆಯೇ ?
ಯಾವುದೋ ನಮ್ಮ ವೈಯಕ್ತಿಕ ನೆಲೆಯಲ್ಲಿ ಕೆಲವು ಘಟನೆಗಳು ಕಾಕತಾಳೀಯ ಅಥವಾ ಸಹಜ ಸ್ವಾಭಾವಿಕವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಜವಾದಲ್ಲಿ ಅದನ್ನೇ ಸಂಪೂರ್ಣ ಸತ್ಯ ಎಂದು ಭಾವಿಸಬೇಕೆ ?
ಈ ಕ್ಷಣದ ಆಧುನಿಕ ಸಮಾಜವನ್ನು ಗಮನಿಸಿದಾಗ ಇಡೀ ವಿಶ್ವದ ದಿನನಿತ್ಯದ ಆಗುಹೋಗುಗಳನ್ನು ಮುನ್ನಡೆಸುತ್ತಿರುವುದು ವಿಜ್ಞಾನವೇ ಅಥವಾ ಜ್ಯೋತಿಷ್ಯವೇ ?
ಸಾವಿನ ಭಯ ಪಡದೆ, ಸೋಲಿನ ಆತಂಕಕ್ಕೆ ಒಳಗಾಗದೆ, ನಿಷ್ಕಲ್ಮಶ ಮನಸ್ಸಿನಿಂದ, ವಿಶಾಲ ಮನೋಭಾವದಿಂದ, ದೀರ್ಘಕಾಲದ ಮೌನದಲ್ಲಿ ಇದರ ಬಗ್ಗೆ ನೀವು ಯೋಚಿಸಿದರೆ ಬಹುಶಃ ವಾಸ್ತವಿಕ ಸತ್ಯ ನಿಮಗೆ ಅರ್ಥವಾಗಬಹುದು.
ಬದುಕು ತುಂಬಾ ಸರಳವಾಗಿದ್ದಾಗ,
ಮನುಷ್ಯ ಪ್ರಕೃತಿಯೊಂದಿಗೆ ಜೀವಿಸುತ್ತಿದ್ದಾಗ, ಆತನ ಬೇಡಿಕೆಗಳು ಅನ್ನ ಆಹಾರಕ್ಕೆ ಸೀಮಿತವಾಗಿದ್ದಾಗ, ಅಕ್ಷರ ಜ್ಞಾನವಿಲ್ಲದ ಸಮಯದಲ್ಲಿ, ವಿಜ್ಞಾನ ಇನ್ನೂ ಅಸ್ತಿತ್ವವಿಲ್ಲದ ಕಾಲದಲ್ಲಿ ಜ್ಯೋತಿಷ್ಯ ಒಂದು ಸಲಹಾ ರೂಪದ ಮಾರ್ಗದರ್ಶನವಾಗಿ ಇದ್ದಿರಬಹುದು....
ಆದರೆ ಇಂದಿನ ಸಂಕೀರ್ಣ ಆಧುನಿಕ ಸಮಾಜದಲ್ಲಿ ವಿಜ್ಞಾನವನ್ನು ತಿರಸ್ಕರಿಸಿ, ಜ್ಯೋತಿಷ್ಯವನ್ನು ಪುರಸ್ಕರಿಸಿ ನಮ್ಮ ದೇಶದ ಅಭಿವೃದ್ಧಿ ಸಾಧ್ಯವೇ ?
ವೈಯಕ್ತಿಕ ಬದುಕಿನ ಯಶಸ್ಸು ನೆಮ್ಮದಿ ಸಾಧ್ಯವೇ ?
ತಾಖತ್ತಿದ್ದರೆ ಹೇಳಿ ನಿಮ್ಮ ಭವಿಷ್ಯ ಜೈಲಿನಲ್ಲಿರುವ ಖೈದಿಗಳಿಗೆ,.....
ಧೈರ್ಯವಿದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ಆಸ್ಪತ್ರೆಯಲ್ಲಿ ಮಲಗಿರುವ ರೋಗಿಗಳಿಗೆ,...
ಗೊತ್ತಿದ್ದರೆ ಹೇಳಿ ನಿಮ್ಮ ರಾಶಿಗಳ ಚಲನೆ ಭಿಕ್ಷುಕರಿಗೆ,....
ತಿಳಿದಿದ್ದರೆ ಹೇಳಿ ನಿಮ್ಮ ಮುನ್ಸೂಚನೆ ಹೊಟ್ಟೆಪಾಡಿನ ವೇಶ್ಯೆಯರಿಗೆ,....
ಅರಿತಿದ್ದರೆ ಹೇಳಿ ನಿಮ್ಮ ರಾಹುಕೇತುಗಳ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ,.....
ಅರ್ಥವಾದರೆ ಹೇಳಿ ನಿಮ್ಮ ಭವಿಷ್ಯ ಅನಾಥಾಶ್ರಮದ ಮಕ್ಕಳಿಗೆ,.....
ಬುದ್ದಿ ಇದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ವೃದ್ಧಾಶ್ರಮದ ಹಿರಿಯ ಜೀವಗಳಿಗೆ,....
ಕುರಿ, ಕೋಳಿ, ನಾಯಿ, ಹಂದಿ, ಹಸುಗಳಿಗೆ ಹೇಳಿ ಅದರ ಆಯುಷ್ಯದ ಭವಿಷ್ಯ,.....
ಗಾಳಿ, ನೀರು, ಬೆಳಕು, ಅರಣ್ಯಗಳಿಗೆ ಹೇಳಿ ನಿಮ್ಮ ಜ್ಯೋತಿಷ್ಯ,....
ಹಸು ಶ್ರೇಷ್ಠ - ಹಂದಿ ಕನಿಷ್ಠ,
ಗಂಡು ಶ್ರೇಷ್ಠ - ಹೆಣ್ಣು ಕನಿಷ್ಠ,
ಬಿಳಿ ಶ್ರೇಷ್ಠ - ಕಪ್ಪು ಕನಿಷ್ಠ,
ಪೂರ್ವ ಶ್ರೇಷ್ಠ - ಪಶ್ಚಿಮ ಕನಿಷ್ಠ,
9 ಶ್ರೇಷ್ಠ - 7 ಅನಿಷ್ಠ,
ಶಾಸ್ತ್ರೀಯ ಸಂಗೀತ/ ನೃತ್ಯ ಶ್ರೇಷ್ಠ,
ಜಾನಪದ ಸಂಗೀತ/ನೃತ್ಯ ಕನಿಷ್ಠ,
ಕಾಲ್ಪನಿಕ ದೇವರು ಶ್ರೇಷ್ಠ - ವಾಸ್ತವ ಮನುಷ್ಯ ಕನಿಷ್ಠ,
ಬಿಡಿ ಈ ಮೌಢ್ಯದ ತಾರತಮ್ಯವನ್ನು,
ಬದುಕಿ ಸರಳವಾಗಿ - ಸಹಜವಾಗಿ,
ಸೃಷ್ಟಿಗೆ ನಿಯತ್ತಾಗಿ......
ಯೋಚಿಸಿ ನಿರ್ಧರಿಸುವ,
ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವ, ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯ ನಿಮಗಿದೆ.
ಧನ್ಯವಾದಗಳು........
❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್


