#📜ಪ್ರಚಲಿತ ವಿದ್ಯಮಾನ📜
ಎಸ್ ಐ ಟಿ ತನಿಖೆಯ ವರದಿ ಮಾಸ್ಕ್ ಮ್ಯಾನ್ ನಂತೆ ಮಾಸ್ಕ್ ನಲ್ಲಿ ಮುಚ್ಚಿ ಹೋಗಿದೆಯೇ?: ಸುರೇಶ್ ಕುಮಾರ್
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಆರೋಪ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆ ನಡೆದ ಎಸ್ ಐಟಿಆ ತನಿಖೆಯ ವರದಿ ಮಾಸ್ಕ್ ಮ್ಯಾನ್ ನಂತೆ ಮಾಸ್ಕ್ ನಲ್ಲಿ ಮುಚ್ಚಿ ಹೋಗಿದೆಯೇ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಯಾವುದೇ ಸತ್ಯ ಹೊರಬರಲಿಲ್ಲ, ಬದಲಿಗೆ ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಎಸ್ ಐಟಿ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಆರೋಪಗಳ ವಿಚಾರವಾಗಿ ತನಿಖೆ ನಡೆಸಲು ಎಸ್ ಐಟಿ ರಚನೆ ಮಾಡಲಾಗಿದೆ. ಈ ತನಿಖೆ ಸಾಗುತ್ತಿರುವ ರೀತಿಯಿಂದ ಬೇಸತ್ತು ಎಸ್ ಐಟಿಯಲ್ಲಿದ್ದ ಅನೇಕರು ಹೊರಬಂದರು. ಸತ್ಯ ಬರಲಿ ಎಂದು ಅಂದು ನಾವು ಎಸ್ ಐಟಿ ಗೆ ವಿರೋಧ ಮಾಡಲಿಲ್ಲ. ಈಗ ಎಸ್ ಐಟಿ ಏನು ಮಾಡುತ್ತಿದೆ ಆರೋಪಗಳ ಬಗ್ಗೆ ಏನು ತನಿಖೆ ಆಗಿದೆ ಎಂದು ಪ್ರಶ್ನಿಸಿದರು.
ಗೃಹ ಮಂತ್ರಿಗಳು ಎಸ್ ಐ ಟಿ ತನಿಖೆಯ ಮಧ್ಯಂತರ ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಆ ವರದಿ ಎಲ್ಲಿದೆ? ಅದರಲ್ಲಿ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ? ಒಂದು ವೇಳೆ ಆರೋಪ ಮಾಡಿರುವ ಮಾಸ್ಕ್ ಮ್ಯಾನ್ ನಂತೇ ಈ ವರದಿಗೂ ಮಾಸ್ಕ್ ಹಾಕಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಧರ್ಮಸ್ಥಳ ಇನ್ನೂ ಕಳಂಕ ಹೊತ್ತುಕೊಂಡೇ ಇರಬೇಕಾ? ವರದಿಯನ್ನು ಸದನದ ಮುಂದಿಡಿ. ಧರ್ಮಸ್ಥಳ ಬುರುಡೆ ಗ್ಯಾಂಗ್, ಗಡಿಪಾರು ಇವೆಲ್ಲಾ ರಾಮಾಯಣ. ಈ ಬಗ್ಗೆ ನಾನು ಹೆಚ್ಚು ಹೇಳಲ್ಲ. ಏನೇ ಇರಲಿ, ಧರ್ಮಸ್ಥಳದ ಎಸ್ಐಟಿ ವರದಿಯನ್ನು ಮಂಡಿಸಿ ಎಂದು ಆಗ್ರಹಿಸಿದರು.
ಧರ್ಮಸ್ಥಳದ ಬಗ್ಗೆ ಸಲ್ಲಿಸಲಾಗಿದ್ದ ಪಿಎಎಲ್ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಪೈಸಾ ವಸೂಲಿ ಲಿಟಿಗೇಷನ್ ಎಂದು ಹೇಳಿದೆ. ಧರ್ಮಸ್ಥಳ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರ. ಬಹಳ ಜನರಿಗೆ ಮಂಜುನಾಥ ಭರವಸೆಯಾಗಿ ಉಳಿದಿದ್ದಾರೆ. ನಂಬಿಕೆಗೆ ಕೆಲವರು ಮಸಿ ಬಳಿಯುವ ಪ್ರಯತ್ನ ಮಾಡಿದರು. ಏನೇ ಆಗಲಿ, ಸತ್ಯಾಂಶ ಗೊತ್ತಾಗಬೇಕಿದೆ. ಎಸ್ಐಟಿ ತನಿಖಾ ವರದಿಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಶ್ರೀಸಾಮಾನ್ಯರ ಹಿತ ಕಾಯುವ ಒಂದೂ ಚರ್ಚೆಯಾಗುತ್ತಿಲ್ಲ. ಹೀಗಾದರೆ ಅರ್ಥವಿಲ್ಲದಂತಾಗುತ್ತದೆ. ಶ್ರೀಸಾಮಾನ್ಯರ ಹಿತ ಕಾಯುವ, ಅವರ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಬೇಕಿದೆ. ವಿಧಾನಸಭೆಯ ಬಗ್ಗೆ ಜನಸಾಮಾನ್ಯರು ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಭಿನ್ನಮತ ತೀವ್ರಗೊಂಡಿದೆ ಅಧಿಕಾರಕ್ಕಾಗಿ ಬಿಕ್ಕಟ್ಟು ಆರಂಭಗೊಂಡಿದೆ ಒಳ ಜಗಳದಿಂದ ಕೂಡಿರುವ ಸರ್ಕಾರ ಇದು. ಬೆಲೆ ಏರಿಕೆ ಮಾಡುವ ಸರ್ಕಾರ ಇದಾಗಿದ್ದು, ಜನ ಬಯಸಿದಂತೆ ನಡೆದುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜಕೀಯ ಸೇಡು ತೀರಿಸಿಕೊಳ್ಳುವ ಸರ್ಕಾರ ಇದಾಗಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯಲ್ಲಿ ದೊಡ್ಡ ಮಟ್ಟದ ಘರ್ಷಣೆ ಉಂಟಾಯಿತು ರಾಜಕೀಯ ಕಾರಣಕ್ಕಾಗಿ ಬಡಪಾಯಿ ಕಾರ್ಯಕರ್ತನೊಬ್ಬನನ್ನು ಸುಟ್ಟು ಹಾಕಲಾಯಿತು. ಘರ್ಷಣೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದಲ್ಲಿ ಮೃತ ದೇಹವನ್ನು ಹೂತು ಹಾಕುವ ಸಂಪ್ರದಾಯ ಇದೆ. ಆದರೆ ರಾಜಕೀಯ ಕಾರಣಕ್ಕಾಗಿ ಇದನ್ನು ಮರೆಮಾಚಿ ಮೃತ ದೇಹವನ್ನು ಸುಟ್ಟು ಹಾಕಲಾಯಿತು ಎಂದು ಹೇಳಿದ ಅವರು, ರಾಜ್ಯಪಾಲರು ಮಾಡಿದ ಭಾಷಣಕ್ಕೆ ತಾವು ವಂದನೆ ಸಲ್ಲಿಸುವುದಿಲ್ಲ. ಬದಲಿಗೆ ಸದನಕ್ಕೆ ಬಂದ ರಾಜ್ಯಪಾಲರಿಗೆ ವಂದನೆ ಸಲ್ಲಿಸುವುದಾಗಿ ಹೇಳಿದರು.
#SIT #investigation #report #covered #mask #like #MaskedMan #SSureshKumar #malgudiexpress #malgudinews #news #TopNews


