#PSSM World ದೀಪ ಆರಿದರೆ ಎಲ್ಲಿ ಹೋಗುತ್ತದೆ? ಒಂದು ಮಡಕೆ ಒಡೆದರೆ ಅದರಲ್ಲಿರುವ ಆಕಾಶ ಎಲ್ಲಿಗೆ ಹೋಗಿ ಸೇರಿಕೊಳ್ಳುತ್ತೇ? ನಿಜವಾಗಿಯೂ ಯಾರೂ ಎಲ್ಲಿಯೂ ಹೋಗುವುದಿಲ್ಲ. ಕೇವಲ ಈ ನಮ್ಮ ಶರೀರ ಇಲ್ಲವಾಗುತ್ತೆ ಅಷ್ಟೇ. ನಾನೆ ಈ ಶರೀರ- ಮನಸ್ಸು ಎಂಬ ಭಾವವು ಹೀಗೆ ಆತಂಕಗೊಳ್ಳಲು ಕಾರಣವಾಗುತ್ತದೆ. "ನಾನು ಇದ್ದೇನೆ" ಎಂಬ ನನ್ನೊಳಗಿನ ಮೂಲ ಅರಿವಿನ ಸ್ವರೂಪಕ್ಕೂ ಮತ್ತು ನನ್ನಿಂದ ಹೊರಗಿರುವ ಅಸ್ತಿತ್ವಕ್ಕೂ ಯಾವುದೇ ಭಿನ್ನತೆ ಇರುವುದಿಲ್ಲ. ಅದನ್ನು ಬೇರೆ ಬೇರೆ ಮಾಡಲು ಆಗದು.ಸತ್ಯವು ಅಖಂಡ, ಪರಿಪೂರ್ಣ. ಅದನ್ನು ಬಿಟ್ಟರೆ ಇಲ್ಲಿ ಬೇರೆ ಏನೂ ಇಲ್ಲ.
ನಾವು ಇಲ್ಲಿ ಭೂಮಿಗೆ ಬಂದಿದ್ದೆ ಆ ಅಸ್ತಿತ್ವದಿಂದ, ನಾವು ಈಗ ಇಲ್ಲಿ ಈಗ ಅಸ್ತಿತ್ವದಲ್ಲಿಯೇ ಇದ್ದೀವೆ, ಮುಂದೆ ನಾವು ಹೋಗಬೇಕಾದರೂ ಎಲ್ಲಿಗೆ? ಅದೇ ಅಖಂಡ ಅಸ್ತಿತ್ವ. ಇಂತಹ ಪರಮ ಸತ್ಯದ ವಿನಃ ಬೇರೆ ಏನೋ ಒಂದು ಇದೆ ಎಂದು ತಿಳಿಯುವುದು ಬ್ರಾಂತಿ, ಭ್ರಮೆ.
ಮನುಷ್ಯನು ಸಾವಿನ ಭಯದಿಂದ ಮುಕ್ತಾನಾಗಬೇಕಾದರೆ, ತನ್ನ ಇರುವಿಕೆಯ ಕುರಿತು ಪ್ರಶ್ನೆ ಮಾಡಬೇಕು. ತಾನು ಯಾರು, ಎಲ್ಲಿಂದ ಈ ಭೂಮಿಗೆ ಬಂದಿದ್ದೇನೆ ಮತ್ತು ಸತ್ತನಂತರ ತನ್ನ ಇರುವಿಕೆಯ ಅಸ್ತಿತ್ವ ಏನಾಗಿರುತ್ತದೆ ಎಂದು. ಹೀಗೆ ಆಳವಾಗಿ ವಿಚಾರಿಸಿದರೆ, ಸಾವು ಒಂದು,ನಮಗೆ ನಾವೇ ಆರೋಪಿಸಿಕೊಂಡಿರುವ ಒಂದು ಭ್ರಮೆ ಎಂದು ತಿಳಿಯುವುದು.
ರಾತ್ರಿಯಲ್ಲಿ ಒಂದು ಹಗ್ಗವನ್ನು ತುಳಿದು ಹಾವೆಂದು ಭ್ರಮಿಸಿದಂತೆ, ನಾವು ನಮ್ಮ ಶರೀರವನ್ನೇ ನಂಬಿ,ನಾವು ಅಂದರೆ ಈ ಶರೀರವೇ "ನಾನು"ಎಂದು ನಂಬಿ ಭ್ರಮಿಸಿದಂತೆ. ಬೆಳಕಿನಲ್ಲಿ ಹಗ್ಗವನ್ನು ನೋಡಿದಾಗ ಅದು ಹಾವಲ್ಲ ಎಂದು ಹೇಗೆ ತಿಳಿದು ಬರುವುದೋ ಹಾಗೆಯೇ ಜ್ಞಾನದ ( ಅರಿವಿನ) ಬೆಳಿಕನಲ್ಲಿ ಈ ಶರೀರವನ್ನು ನೋಡಿದಾಗ, ಈ ಶರೀರವೂ ಅರಿವಿನ ಬೆಳಿಕಿನಲ್ಲಿ ಲಯವಾಗಿಬಿಡುವುದು. ಹಾಗಾದರೆ ಹಗ್ಗದಲ್ಲಿರುವ ಹಾವು, ಶರೀರದಲ್ಲಿರುವ ನಾನು ಎಂಬ ಭಾವ ಎಲ್ಲಿ ಹೋದವು? ಎಲ್ಲಿಯೂ ಇಲ್ಲ. ಕೇವಲ ನಮ್ಮ ತಪ್ಪು ತಿಳುವಳಿಕೆ ( ಅಧ್ಯಾಸ) ಹೋಯಿತಷ್ಟೇ.
ಈ ಆಯಾಮದಿಂದ ನಮ್ಮಲಿ "ನಾನು" ಎಂಬುದು ಏನು ಎಂದು ಹುಡುಕಿದರೆ, ಅಲ್ಲಿ ಯಾರೂ ಇಲ್ಲ. ನಾನು ನನ್ನದು ಎಂಬುದು ಒಂದು ದೃಶ್ಯ ಪ್ರಪಂಚ. ಈ ಸಮಸ್ತ ಸೃಷ್ಟಿಯಿಂದ ನಾವು ಬೇರೆ ಇದ್ದಂತೆ ನಮಗೆ ಅನಿಸುವುದರಿಂದ, ಸಾವಿನ ಭಯ, ಸ್ವರ್ಗ ನರಕಗಳ ಚಿಂತನೆ ಮೊದಲಾಗುವುದು. ನಾನು ಎಂಬ ಮೂಲ ಸ್ವರೂಪವಾದ ಪ್ರಜ್ಞೆ ಒಂದೇ ಸತ್ಯ. ಅದು ನಿತ್ಯ ನಿರಂಜನ, ಅನಂತ, ಕಾಲದೇಶಾತೀತ. ಹುಟ್ಟು ಸಾವು ಈ ಕಾಲತೀತ ಅಸ್ತಿತ್ವದಲ್ಲಿ ಕೇವಲ ಎರಡು ಸಣ್ಣ ಘಟನೆಗಳು ಅಷ್ಟೇ. ಸಾವು ಅಂತಿಮ, ಮುಕ್ತಾಯ ಅಲ್ಲ. ಅದೊಂದು ಅವಕಾಶ. ಇದನ್ನು ಪ್ರಜ್ಞಾಪೂರ್ವಕವಾಗಿ ಅರಿತರೆ, ಯಾರೂ ಎಂದೂ ನಾಶವಾಗುವುದೆಯಿಲ್ಲ ಎಂಬ ತಿಳಿವು ಮೂಡುವುದು.
ಧನ್ಯವಾದಗಳು 🙏🙏

