#🕉️ ಜೈ ಶ್ರೀ ರಾಮ🙏
ಶ್ರೀ ರಾಮಕಥಾ ಮಹಿಮೆ: ಅಧ್ಯಾಯ3
ತಂದೆ ಕೇಶವ ಭಟ್ಟನ ಮಾತಿನಂತೆ ರಾಮನ ದರ್ಶನ ಮಾಡಲು, ರಾಮ ಧ್ಯಾನ ಮಾಡುತ್ತಾ ಹೊರಟ ನಾರಾಯಣ ಭಟ್ಟನು ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೆಜ್ಜೆ ಹೆಜ್ಜೆಗೂ ರಾಮನಾಮ ಜಪ ಮಾಡುತ್ತಾ ಹೋಗುತ್ತಾ
ಎದುರಿಗೆ ಕಂಡ ಯುವಕರನ್ನು ಈ ಕೆಳಕಂಡಂತೆ ಪ್ರಶ್ನಿಸಿದನು.
ಅಯ್ಯಾ ಈ ನನ್ನ ಮಗಳನ್ನು ಪಾನಿ ಗ್ರಹಣ ಮಾಡಿಕೊಳ್ಳುವಿರಾ?
ಮೊದಲ ಯುವಕ:- ಸ್ವಾಮಿ ನನಗೆ ಓರ್ವ ಪತ್ನಿ ಇದ್ದಾಳೆ ನಾನು ಏಕಪದ ಆದ್ದರಿಂದ ಲಗ್ನವಾಗಲಾರೆನು.
ಎರಡನೇ ತರುಣ:- ಒಬ್ಬ ಹೆಂಡತಿಯನ್ನು ಸಾಕುವುದೇ ಬಹಳ ಕಷ್ಟ ಈ ಹುಡುಗಿಯನ್ನು ಹೇಗೆ ಮದುವೆ ಮಾಡಿಕೊಳ್ಳಲಿ ಆಗುವುದಿಲ್ಲ.
ನಾರಾಯಣ ಭಟ್ಟ, ಆಹಾ ವಿಧಿಯೇ! ನಾನಾಗೇ ಹೆಣ್ಣನ್ನು ಕೊಡಲು ಹೋದರೂ ಬೇಡ ಎನ್ನುವರಲ್ಲ ಇದೇನು ವಿಚಿತ್ರ ಎಲ್ಲವೂ ರಾಮ ಮಾಯೆ ಎಂದು ಮುಂದೆ ನಡೆದು ಹೋಗುತ್ತಿರಲು ಒಂದು ಗ್ರಾಮ ಸಿಕ್ಕಿತು. ಮುಂಭಾಗದಲ್ಲಿ ಅನೇಕ ಮಂದಿ ಬ್ರಾಹ್ಮಣರು ಸೇರಿ ಮಂತ್ರಘೋಷಗಳನ್ನು
ಪಟಿಸುತ್ತಾ ಭಗವಂತನನ್ನು ಆರಾಧಿಸುತ್ತಾ ಯಜ್ಞ ಮಾಡುತ್ತಿದ್ದರು. ಇದನ್ನು ಕಂಡು ಅಲ್ಲಿ ನಿಂತ ನಾರಾಯಣ ಬೆಟ್ಟ , ಅಯ್ಯಗಳೇ ನಾನು ರಾಮ ದರ್ಶನಕ್ಕಾಗಿ ಬಹಳ ದೂರ ಹೋಗಬೇಕು. ಈ ನನ್ನ ಮಗಳನ್ನು ಅಷ್ಟು ದೂರ ಆಹಾರ ನೀರು ಇಲ್ಲದೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ದಯಾಪರರಾದ ನಿಮ್ಮಲ್ಲಿ ಯಾರಾದರೂ ಇವಳನ್ನು ಮದುವೆಯಾಗುವಿರಾ ಎಂದು ಕೇಳಿದನು. ಕೆಲವರು ತಾನು ಆಗಲಾರೆ ನಾನು ಆಗಲಾರೆ ಎಂದರು. ಆಗ ದೂರದಲ್ಲಿ ಕುಳಿತಿದ್ದ ಪ್ರಾಪ್ತ ವಯಸ್ಕನಾದ ಬ್ರಾಹ್ಮಣ ಇವನ ಮಾತನ್ನು ಕೇಳಿಕೊಂಡು, ಅಯ್ಯಾ ಬ್ರಾಹ್ಮಣನೇ ನೀನಾಗಿ ಹೆಣ್ಣು ಕೊಡುತ್ತೇನೆ ಎಂದು ಕೇಳುವಾಗ ಮದುವೆ ಮಾಡಿಕೊಳ್ಳುವುದಿಲ್ಲ ಎಂದರೆ ತಪ್ಪಾಗುತ್ತದೆ. ಮನೆಗೆ ಬಂದ ಹೆಣ್ಣನ್ನು ಬಿಡಬಾರದು ಎಂದು ಪೂರ್ವಿಕರು ಹೇಳಿದ್ದಾರೆ. ಈಕೆಯು ನನ್ನ ಭಾಗ್ಯಲಕ್ಷ್ಮಿ ನಿಮ್ಮ ಮಗಳನ್ನು ನನಗೆ ಪಾನಿ ಗ್ರಹಣ ಮಾಡಿಕೊಟ್ಟು ತಮ್ಮ ಮುಂದಿನ ಕಾರ್ಯಕ್ಕೆ ಹೊರಡಿರಿ ಎಂದನು. ಸಂತೋಷದಿಂದ ವಧು ವರನಿಗೆ
ಮಂದಾಕಿನಿ ನದಿಯಲ್ಲಿ ಮಂಗಳ ಸ್ನಾನ ಮಾಡಿಸಿ ಪಾಣಿ ಗ್ರಹಣ ಮಾಡುವ
ಹೊತ್ತಿಗೆ ಸರಿಯಾಗಿ ಇವನು ನಿಶ್ಚಲ ಭಕ್ತಿಗೆ ಮೆಚ್ಚಿ ಲಕ್ಷ್ಮಿ ಪಾರ್ವತಿ ಸರಸ್ವತಿ ಮೊದಲಾದ ದೇವತಾ ಸ್ತ್ರೀಯರೆಲ್ಲ ನೆರೆದು ಪಾನಿ ಗ್ರಹಣವನ್ನು ಸಾಂಗವಾಗಿ ನೆರವೇರಿಸಿ ಹೊರಟು ಹೋದರು. ಮಗಳು ಅಳಿಯನಿಗೆ ಶ್ರೀರಾಮಕತೆ ಪೂಜೆಯನ್ನು ಉಪದೇಶಿಸಿ ತಪ್ಪದೇ ಆಚರಿಸುವಂತೆ ಹೇಳಿ ತನ್ನ ಮುಂದಿನ ಪ್ರಯಾಣ ಮಾಡಿದನು.
1. ಕುರುಡನಿಗೆ ಶ್ರೀರಾಮಕತಾ ಉಪದೇಶ:-
ನಾರಾಯಣ ಭಟ್ಟನು ಮಗಳ ವಿವಾಹ ಮಾಡಿ ಮುಂದೆ ಹೋಗುತ್ತಿರಲು ಒಂದು ಗ್ರಾಮದ ಬಳಿ ಹೊಲದಲ್ಲಿ ಒಬ್ಬ ಕುರುಡ ದೊಣ್ಣೆಯನ್ನು ಹಿಡಿದು ಕೊಂಡು ಟಪ್ ಟಪ್ ಎಂದು ಶಬ್ದ ಮಾಡುತ್ತಿರುವುದನ್ನು ನೋಡಿ ಅವನ ಬಳಿ ಹೋಗಿ ಮಾತನಾಡಿದನು. ನಾರಾಯಣ ಭಟ್ಟ:- ಅಯ್ಯಾ ಮುದಕನೇ ಇದೇಕೇ ಶಬ್ದ ಮಾಡುತ್ತಾ ಕುಳಿತಿರುವೆ, ಎಂದು ಕೇಳಿದಾಗ, ಮುದುಕನು ಸ್ವಾಮಿ ನೀವ್ಯಾರು ಒಳ್ಳೆಯವರಂತೆ ಕಾಣುತ್ತೀರಿ, ರವಸ್ಟು ಇಂಗೆ ಪಕ್ಕದಾಗೆ ಕುಳಿತು ಕೊಳ್ಳಿ ಬುದ್ಧಿ,
ನಾರಾಯಣ ಭಟ್ಟನು ಕುಳಿತು, ಈಗ ಹೇಳು ಎಂದನು. ಬುದ್ಧಿ ನಾನೇನು ಹೇಳ್ಳಿ ನಾನು ಹುಟ್ಟು ಕುರುಡ ಎರಡು ಕಣ್ಣು ಕಾಣುತ್ತಿಲ್ಲ ನನ್ನ ಹೆಂಡಿರು ಮಕ್ಳು ಯಾರಾದ್ರೂ ಒಬ್ರು ಇಲ್ಲಿಗೆ ಕರ್ಕಂಡು ಬಂದು ಬಿಡುತ್ತಾರೆ. ಯಾವಾಗ ಗ್ಯಾನ ಬರುತ್ತೊ ಕರ್ಕೊಂಡು ಹೋಗ್ತಾರೆ. ಆಗ ಮನೆಗೆ ಹೋಗಿ ಊಟ ಮಾಡಿ ಮಲ್ಕೋತೀನಿ. ಹಗಲು ರಾತ್ರಿ ಎಲ್ಲ ಒಂದೇ, ನಿದ್ರೆ ಬಂದ್ರೆ ರಾತ್ರಿ ಎಚ್ಚರ ಆದರೆ ಹಗಲು ಇದು ನನ್ನ ಚರಿತ್ರೆ ಎಂದನು.
ನಾರಾಯಣ ಭಟ್ಟ :- ಅಯ್ಯಾ ನಿನ್ನ ಚರಿತ್ರೆ ತಿಳಿಯಿತು. ನಿನಗೆ ಶ್ರೀರಾಮಕತಾ ಮಹಿಮೆ ಉಪದೇಶ ಮಾಡುವೆ ಅದರಂತೆ ಆಚರಿಸು ಎಂದು ಹೇಳಿ ಮುಂದೆ ಹೋದನು. ಮುದುಕನು ಅದರಂತೆ 'ರಾಮ ರಾಮ ನನ್ನ ಕಣ್ಣು ಬರಲಿ 'ಎಂದು ಹೇಳುತ್ತಿರಲು ಕಣ್ಣುಗಳು ಬಂದವು. ನಂತರ ರಾಮನಾಮ ಚಿಂತನೆಯಿಂದಲೇ ಮನೆಗೆ ಹೋಗಿ ಬಾಗಿಲು ತಟ್ಟಿ ಹೆಂಡತಿಯನ್ನು ಕೂಗಿದನು. ಹೆಂಡತಿ ಇದೇನು ಇಷ್ಟು ಬೇಗನೆ ನನ್ನ ಗಂಡ ಬಂದನಲ್ಲ ಯಾರು ಕರ್ಕೊಂಡು ಬಂದರು ಎಂದು ಗಾಬರಿಯಾಗಿ ಬಾಗಿಲು ತೆಗೆದಳು. ಮುದುಕನ ಹೆಂಡತಿಗೆ ಎಲ್ಲವನ್ನು
ಹೇಳಲಾಗಿ ಮುದುಕ ಹೇಳಿದ, ಯಾರೋ ಬ್ರಾಹ್ಮಣ ಬಂದಿದ್ರು ರಾಮ ನಾಮ ಉಪದೇಶ ಮಾಡುವೆ ಎಂದು ಹೇಳಿ ಮಾಡಿದರು. ಅದನ್ನು ನಾನು 'ರಾಮ ರಾಮ ನನಗೆ ಕಣ್ಣು ಕೊಡು' ಎನ್ನುತ್ತಿದ್ದಂತೆ ಕಣ್ಣುಬಂದಿತು. ಅವರನ್ನು ಕರೆದೆ ಆದರೆ ಅವರು ಇನ್ನೊಮ್ಮೆ ಬರುವೆ ಎಂದು ಹೊರಟರು. ಇನ್ನು ಮುಂದೆ ಅವರು ಹೇಳಿದಂತೆ ಶ್ರೀ ರಾಮನ ಪೂಜೆ ಮಾಡಿಕೊಂಡು ಸುಖವಾಗಿರೋಣ ಎಂದನು ಆನಂತರ ಮುದುಕ ಹೆಂಡತಿ ಮಕ್ಕಳೊಂದಿಗೆ ಶ್ರೀರಾಮ ಪೂಜೆ ಯನ್ನು ಮಾಡುತ್ತಾ, ನಾರಾಯಣಭಟ್ಟನ ಬರುವಿಕೆಗಾಗಿ ಕಾಯುತ್ತಿದ್ದರು.
2. ಅವಿವಾಹಿತ ಕನ್ಯೆಗೆ ಶ್ರೀರಾಮ ಮಹಿಮೋಪದೇಶ:-
ಮುದುಕನಿಗೆ ಶ್ರೀರಾಮಕತೆ ಉಪದೇಶ ಮಾಡಿ ನಾರಾಯಣ ಭಟ್ಟ ಮತ್ತೊಂದು ಗ್ರಾಮಕ್ಕೆ ಬಂದು ಅಶ್ವತ್ಥ ಕಟ್ಟೆ ಮೇಲೆ ಓರ್ವ ಕನ್ಯೆ ಚಿಂತೆಯಿಂದ ಕುಳಿತಿದ್ದನ್ನು ಕಂಡು ಮಾತನಾಡಿಸಿದನು. ಎಲೈ ಬಾಲೆ ಇದೇಕೆ ಚಿಂತಿಸುತ್ತಾ ಕುಳಿತಿರುವೆ ಕಾರಣವೇನು ಎಂದನು. ಆಗ ಆ ಕನ್ಯೆ, ಪೂಜ್ಯರೇ ನಾನು ಅವಿವಾಹಿತಳು. ನನ್ನ ತಂದೆ ತಾಯಿ ನನಗೆ ಸರಿಯಾದ ವರನನ್ನು ಹುಡುಕದೆ ಒಬ್ಬ ಮುದುಕನಿಗೆ ಕೊಟ್ಟು ವಿವಾಹ ಮಾಡಬೇಕೆಂದು ಮಾತನಾಡುತ್ತಿದ್ದಾರೆ ಇದೇ ಈಗ ಬಂದಿರುವ ತೊಂದರೆ. ಇದನ್ನು ಕೇಳಿ ನಾರಾಯಣ ಭಟ್ಟ , ಕನ್ಯೆ ಚಿಂತಿಸಬೇಡ ಆತನನ್ನು ನೀನು ಖಂಡಿತ ಲಗ್ನವಾಗುವುದಿಲ್ಲ ನಿನಗೆ ಅನುಕೂಲ ನಾದ ವರ ಸಿಕ್ಕುವನು. ಅದುವರೆಗೂ ನೀನು ನಾನು ಉಪದೇಶಿಸುವ ಶ್ರೀರಾಮಕತಾ ಮಹಿಮೆ ಮತ್ತು ಪೂಜೆಯನ್ನು ಪ್ರತಿ ಶನಿವಾರ ಆಚರಿಸು ಎಂದು ಹೇಳಿ ಮುಂದಕ್ಕೆ ಹೋದನು.
ನಾರಾಯಣ ಭಟ್ಟನ ಮಾತಿನಂತೆ ರಾಮ ಪೂಜೆ ಮಾಡುವುದಾಗಿ ಸಂಕಲ್ಪ ಮಾಡಿ ಆರಂಭಿಸಲು, ಆ ದಿನ ರಾತ್ರಿ ಕನ್ಯೆಯ ಕನಸಿನಲ್ಲಿ ಶ್ರೀರಾಮಚಂದ್ರನು ಕಾಣಿಸಿಕೊಂಡು ಎಲೈ ಬಾಲೆ ನಿನಗೆ ರಾಮ ಉಪದೇಶ ಮಾಡಿದ ಬ್ರಾಹ್ಮಣ ನಿನ್ನಲ್ಲಿಗೆ ಪುನಃ ಬರುವುನು. ಅವನೇ ನಿನಗೆ ಸರಿಯಾದ ಪತಿ ಅವನನ್ನು ವಿವಾಹವಾಗಿ ಧನ್ಯಳಾಗುವೆ ಎಂದು ಮಾಯವಾದನು.
3. ವೃದ್ಧ ಸ್ತ್ರೀಗೆ ಶ್ರೀರಾಮ ಮಹಿಮಾ ಉಪದೇಶ:-
ಹೀಗೆ ಮುಂದೆ ಬರುತ್ತಿರಲು ಮತ್ತೊಂದು ಗ್ರಾಮದ ಮುಂಭಾಗದ ಅಶ್ವತ್
ಕಟ್ಟೆಯ ಮೇಲೆ ಚಿಂತಾಕ್ರಾಂತಳಾಗಿ ಓರ್ವ ವೃದ್ಧ ಸ್ತ್ರೀ ಕುಳಿತಿರುವುದನ್ನು ಕಂಡು ಮಾತನಾಡಿಸಿದನು.
ನಾರಾಯಣ ಭಟ್ಟ:- ಎಲೆ ವೃದ್ಧೆ ಏಕೆ ಚಿಂತಿಸುತ್ತಿರುವೆ?
ವೃದ್ಧ ಸ್ತ್ರೀ:- ಬ್ರಾಹ್ಮಣ ಬಡತನದಿಂದ ಜೀವನೋಪಾಯಕ್ಕೆ ಕಷ್ಟವಾಗಲು ನನ್ನ ಪತಿ ಮೂರು ತಿಂಗಳ ಹಿಂದೆ ಕಾಶಿಯಾತ್ರೆಗೆ ಹೋದವರು ಬರಲಿಲ್ಲ. ಭಿಕ್ಷಾಟನೆಗೆ ಹೋದ ಏಕ ಮಾತ್ರ ಪುತ್ರ ಬರಬೇಕು. ಪತಿ ಚಿಂತನೆ, ದಾರಿದ್ರ ಚಿಂತನೆ ಯಿಂದ ಕುಳಿತಿರುವೆನು ಎಂದಳು.
ಭಟ್ಟನು, ವೃದ್ಧಳೇ ಚಿಂತಿಸಿ ಪ್ರಯೋಜನವಿಲ್ಲ. ನಾನು ಉಪದೇಶಿಸುವ ಶ್ರೀರಾಮಕತಾ ಮತ್ತು ಪೂಜೆ ಪ್ರತಿ ಶನಿವಾರ ತಪ್ಪದೇ ಆಚರಿಸು ನಿರಂತರ ರಾಮ ಧ್ಯಾನ ಮಾಡು, ಚಿಂತಿಸಬೇಡ ಒಳ್ಳೆಯದಾಗುತ್ತದೆ ಎಂದು ಹೇಳಿ ಮುಂದೆ ಹೋದನು.
ಆ ಮುದುಕಿಯು ಇವನ ಉಪದೇಶದಂತೆ ರಾಮಧ್ಯಾನ ಮಾಡುತ್ತಿರಲು ಕಾಶಿಯಾತ್ರೆಗೆ ಹೋಗಿದ್ದ ಪತಿ ಅದೇ ದಿನ ಗಂಗೆ ಸಹಿತ ಮನೆಗೆ ಬಂದನು.
ಸತಿಯು ಹೇಳಿದಳು ಈಗ ತಾನೆ ಓರ್ವ ಬ್ರಾಹ್ಮಣ ರಾಮಕತಾ ಪೂಜೆ ಮತ್ತು ಶ್ರೀರಾಮ ಮಹಿಮೆ ಉಪದೇಶಿಸಲು ಇಷ್ಟು ದಿನ ಬರದೇ ಇದ್ದವರು ಈ ದಿನ ಬಂದಿರುವಿರಿ. ಆಶ್ಚರ್ಯ ಆಗಿದೆ ತಡಮಾಡದೆ ರಾಮ ಪೂಜೆ ಮಾಡೋಣ ಎಂದು ಪೂಜಾ ಸಾಮಗ್ರಿ ಸಂಗ್ರಹಿಸಿಕೊಂಡು ರಾಮ ಪೂಜೆ ಮಾಡಿ ಪ್ರಸಾದ ಸ್ವೀಕರಿಸಿ ಮಗನ ನಿರೀಕ್ಷೆಯಲ್ಲಿ ಇದ್ದರು.
ಇತ್ತ ಭಿಕ್ಷಾನ್ನಕ್ಕೆ ಹೋದ ಬಾಲಕನು ಪ್ರತಿದಿನ ಊರ ಮುಂದಿನ 'ಗಂಡಕಿ' ನದಿಯಲ್ಲಿ ತಾನು ತಂದ ಭಿಕ್ಷಾನ್ನವನ್ನು ಗಂಗಾಮಾತೆಗೆ ಪೂಜಿಸಿ ನೈವೇದ್ಯ ಮಾಡಿ ಬರುವ ವಾಡಿಕೆ. ಈ ರೀತಿ ಪೂಜೆ ಮಾಡುತ್ತಿರಲು, ಅದೇ ಊರಿನ ರಾಜನು ಮೃತಪಟ್ಟು 12 ದಿನಗಳು ಕಳೆದಿದ್ದು ರಾಜನಿಗೆ ಮಕ್ಕಳಿಲ್ಲದ ಕಾರಣ ಸಾಮಂತ ರಾಜರು ಅವರವರಲ್ಲೆ ಜಗಳವಾಡಲು, ನಂತರ ರಾಜ ಮುಖಂಡರು ಸಭೆ ಕರೆದು ಅಲ್ಲಿಯ ಪದ್ಧತಿಯಂತೆ ಆನೆಯ ಕೈಯಲ್ಲಿ ಹೂವಿನ ಹಾರ ಹಾಕಿ ಕಳಿಸಿದರು ಅದು ಯಾರ ಕೊರಳಿಗೆ ಹಾಕಿ ಕರೆದುಕೊಂಡು ಬರುತ್ತದೊ ಅವರಿಗೆ, ರಾಜ್ಯದ ಪಟ್ಟ ಕಟ್ಟುವುದೆಂದು ತೀರ್ಮಾನಿಸಿದರು. ಪಟ್ಟದಾನೆಯ ಸೊಂಡಿಲಿಗೆ ಹಾರ ಹಾಕುತ್ತಲೇ, ಎಲ್ಲರನ್ನೂ ಬಿಟ್ಟು
ಓಡಿಹೋಯಿತು. ಅದು ನದಿಯಲ್ಲಿ ಪೂಜೆ ಮಾಡುತ್ತಿದ್ದ ಯುವ ಬಾಲಕನ ಕೊರಳಿಗೆ ಹಾರ ಹಾಕಿ ಬೆನ್ನ ಮೇಲೆ ಕೂರಿಸಿಕೊಂಡು ಅರಮನೆಗೆ ಕರೆದುಕೊಂಡು ಬಂದಿತು. ಹುಡುಗನನ್ನು ನೋಡಿ ಎಲ್ಲರೂ ಅವನನ್ನು ತಿರಸ್ಕರಿಸಿ ಒಂದು ಪೊದೆಯಲ್ಲಿ ಅಡಗಿಸಿಟ್ಟು ಮತ್ತೆ ಹಾರವನ್ನು ಹಾಕಿ ಕಳಿಸಲು, ಎಲ್ಲರನ್ನೂ ಬಿಟ್ಟು ಪೊದೆಯಲ್ಲಿದ್ದ ಹುಡುಗನನ್ನು ಹುಡುಕಿ ಹಾರ ಹಾಕಿ ಕರೆದುಕೊಂಡು ಬಂದಿತು. ರಾಣಿಯು ಭಗವಂತನ ಮಾಯೆಯಲ್ಲಿ ಭಿಕ್ಷಾನ್ನ ಬಾಲಕನು ರಾಜನಾಗಬೇಕು ಎಂದರೆ ಅದು ದೈವ ಸಂಕಲ್ಪವಾಗಿದೆ ಈತನೇ ರಾಜ ಪದವಿಗೆ ಅರ್ಹನು ಎಂದಳು.
ಶ್ಲೋಕ:- ರಂ ಕಂ ಕರೋತಿ ರಾಜಾನಾಂ, ರಾಜಾನಾಂ ರಂಕಮೇವ ಚ
ಧನಿಕಂ ನಿರ್ಧನಂ ಚೈವ ನಿರ್ಧನಂ ಧನಿಕಂ ತಥಾ !!
ಕೆಲಸಕ್ಕೆ ಬಾರದವನು ರಾಜನನ್ನಾಗಿಯೂ ರಾಜನನ್ನು ಕೆಲಸಕ್ಕೆ ಬಾರದವ ನನ್ನಾಗಿಯೂ ಧನಿಕನನ್ನು ಬಡವನನ್ನಾಗಿಯೂ ಬಡವನನ್ನು ಧನಿಕನನ್ನಾಗಿಯೂ ಮಾಡುವುದು ಭಗವಂತನ ಲೀಲೆಯು!!
ಆದ್ದರಿಂದ ಇವನಿಗೆ ಶಾಸ್ತ್ರೋಕ್ತವಾಗಿ ಪಟ್ಟವನ್ನು ಕಟ್ಟಬೇಕೆಂದು ಹೇಳಲು
ಸಾಮಂತ ರಾಜರೆಲ್ಲರೂ ಭಗವಂತನ ಮಾಯೆಗೆ ಆಶ್ಚರ್ಯ ಪಟ್ಟು ಬಾಲಕನಿಗೆ ರಾಜ್ಯ ಪಟ್ಟಾಭಿಷೇಕವನ್ನು ಮಾಡಿದರು. ಸ್ತೋತ್ರಿಕರು ಸ್ತುತಿಯನ್ನು ಸೇವಾ ದಳದವರು ಬಹುಪರಾಕ್ ನ್ನು ಹೇಳಿದರು. ಸಾಮಂತ ರಾಜರು ನಜರನ್ನು ಅರ್ಪಿಸಿದರು. ಪಟ್ಟಾಭಿಷೇಕ ಸಾಂಗವಾಗಿ ಮುಗಿದ ಮೇಲೆ ಆ ತರುಣನು ವೃದ್ಧ ಮಾತಾಪಿತರನ್ನು ರಾಜ ಮರ್ಯಾದೆಯಿಂದ ಅರಮನೆಗೆ ಕರೆತರುವಂತೆ ರಾಜಭಟರಿಗೆ ಆಜ್ಞಾಪಿಸಿದನು. ರಾಜಾಜ್ಞೆಯಂತೆ ರಾಜಭಟರು ಬಾಲಕನ ಮಾತಾ ಪಿತರನ್ನು ಪಲ್ಲಕ್ಕಿಯಲ್ಲಿ ಅರಮನೆಗೆ ಕರೆತಂದರು ರಾಜನು ಮರ್ಯಾದೆಯಿಂದ ಪೂಜಿಸಿದನು. ಅವನ ತಾಯಿ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಶ್ರೀರಾಮ ಪ್ರಸಾದವನ್ನು ಮಗನಿಗೆ ಕೊಟ್ಟು ಮಗು ಈ ಪ್ರಸಾದದಿಂದಲೇ ನಿನಗೆ ರಾಜ್ಯ ಪದವಿ ಉಂಟಾಯಿತು ಇದನ್ನು ಸ್ವೀಕರಿಸು ಎಂದು ಕೊಟ್ಟಳು.
ಮತ್ತು ಮಗು ಶ್ರೀರಾಮ ಭಕ್ತನಾದ ಓರ್ವ ಬ್ರಾಹ್ಮಣನು ಶ್ರೀರಾಮ ಪೂಜೆ ಮತ್ತು ಮಹಿಮೆಯನ್ನು ಉಪದೇಶಿಸಿದನು. ಇದನ್ನು ನೀನು ಪ್ರತಿಶನಿವಾರ ತಪ್ಪದೆ ಆಚರಿಸಬೇಕು ಎಂದು ಹೇಳಲು ರಾಜನು ಸಂತೋಷದಿಂದ ಶ್ರೀರಾಮ ಕೃಪೆಯಿಂದ ಉಂಟಾದ ಆ ರಾಜ್ಯಕ್ಕೆ ಅಂದಿನಿಂದಲೂ 'ರಾಮರಾಜ್ಯ'ವೆಂದು
ತಾನು 'ರಾಮ ರಾಜ'ನೆಂತಲೂ ಹೆಸರು ಇಟ್ಟುಕೊಂಡು, ಉಪದೇಶ ಮಾಡಿದ ಬ್ರಾಹ್ಮಣನನ್ನು ಪತ್ತೆಹಚ್ಚಲು ಎಂಟು ದಿಕ್ಕುಗಳಿಗೂ ಸೇವಕರನ್ನು ಕಳಿಸಿ ರಾಜ್ಯಭಾರ ಮಾಡಿಕೊಂಡು ರಾಮಧ್ಯಾನ ಸಕ್ತನಾಗಿ ಮಾತಾ ಪಿತರೊಂದಿಗೆ ಅನೇಕ ವರ್ಷಗಳು ಸುಖವಾಗಿರಲು, ರಾಮಭಕ್ತನಾದ ಈ ರಾಮರಾಜನಿಗೆ ರಾಣಿಯು ತನ್ನ ಮಗಳನ್ನು ಕೊಟ್ಟು ವಿಧಿ ಪ್ರಕಾರ ವಿವಾಹವನ್ನು ಮಾಡಿ ಮಗಳು ಅಳಿಯನೊಂದಿಗೆ ಸುಖವಾಗಿದ್ದಳು.
4. ನಾಗರಾಜನಿಗೆ ಶ್ರೀರಾಮ ಮಹಿಮೋಪದೇಶ:-
ಮುಂದುವರೆದ ನಾರಾಯಣನು ರಾಮಧ್ಯಾನ ಪಾರಾಯಣನಾಗಿ ಬರುತ್ತಿರಲು ದಾರಿಯಲ್ಲಿ ಒಂದು ದೊಡ್ಡ ಸರ್ಪ ಅಡ್ಡವಾಗಿ ಮಲಗಿತ್ತು. ಅದನ್ನು ಕಂಡು ಎಲೈ ನಾಗರಾಜನೇ ಇದೇಕೆ ದಾರಿಯಲ್ಲಿ ಓಡಾಡುವ ಜನಗಳಿಗೆ ತೊಂದರೆ ಭೀತಿ ಉಂಟಾಗುವಂತೆ ಮಲಗಿರುವೆ ಎಂದು ಕೇಳಿದನು.ಆಗ ನಾಗರಾಜನು ಎಲೈ ಬ್ರಾಹ್ಮಣ ನಾನು ಮಲಗಿರುವ ಈ ಸ್ಥಳದಲ್ಲಿ 108 ಕೊಪ್ಪರಿಗೆ ಹಣವಿದೆ ಅದನ್ನು ಇಲ್ಲಿ ಕಾದುಕೊಂಡಿರುವಂತೆ ರಾಮನ ಆಜ್ಞೆ ಯಾಗಿದೆ ಅದಕ್ಕಾಗಿ ಚಲಿಸದೆ ಜಡವಾಗಿ ಮಲಗಿರುವೆ ನನ್ನನ್ನು ಈ ನಿರ್ಬಂಧದಿಂದ ಎಂದಿಗೆ ಬಿಡುಗಡೆ ಮಾಡುವನೋ ನಾ ಕಾಣೆ.
ನಾರಾಯಣ ಭಟ್ಟ ಹೇಳಿದ ಹಾಗಾದರೆ ನಾನು ಉಪದೇಶಿಸುವ ಶ್ರೀರಾಮ ನಾಮ ಮಹಿಮೆಯನ್ನು ಜಪಿಸುತ್ತಿರು ಇನ್ನು ಸ್ವಲ್ಪ ಕಾಲದಲ್ಲಿಯೇ ನಿನಗೆ ನಿರ್ಬಂಧವು ತಪ್ಪುವುದು ಹೇಳಿ ಮುಂದೆ ಹೋದನು. ಅದೇ ದಿನ ರಾತ್ರಿ ನಾಗರಾಜನಿಗೆ ಶ್ರೀರಾಮನು ಸ್ವಪ್ನದಲ್ಲಿ ಬಂದು, ಎಲೈ ನಾಗರಾಜ ನಿನಗೆ ರಾಮೋಪದೇಶ ಮಾಡಿದ ಬ್ರಾಹ್ಮಣನು ಪುನಃ ನಿನ್ನಲ್ಲಿಗೆ ಬರುವನು ಅವನಿಗೆ ನಿನ್ನಲ್ಲಿರುವ 108 ಕೊಪ್ಪರಿಗೆಯ ಹಣವನ್ನು ದಾನ ಮಾಡು ಅಂದು ನೀನು ಮುಕ್ತನಾಗುವೆ ಎಂದು ಹೇಳಿ ಅಂತರ್ಧನನಾದನು.
5. ರಾಜನಿಗೆ ಶ್ರೀ ರಾಮ ಮಹಿಮೋಪದೇಶ:-
ಮುಂದೆ ಹೊರಟ ನಾರಾಯಣ ಭಟ್ಟನು ಮತ್ತೊಂದು ಗ್ರಾಮದ ಕೆರೆಯ ಏರಿಯ ಮೇಲೆ ಅಲ್ಲಿಯ ರಾಜನು ಬಹಳ ಮಂದಿ ಕೂಲಿಗಳೊಂದಿಗೆ
ಯೋಜನಾ ಕ್ರಾಂತನಾಗಿ ಕುಳಿತಿರುವುದನ್ನು ಕಂಡು, ರಾಜನೇ ಚಿಂತಾಕ್ರಾಂತ ನಾಗಿ ಏಕೆ ಕುಳಿತಿರುವೆ ನಿನ್ನ ಯೋಚನೆಗೆ ಕಾರಣವೇನು ಎಂದು ಕೇಳಿದನು. ಅದಕ್ಕೆ ರಾಜನು, ಎಲೈ ಬ್ರಾಹ್ಮಣೋತ್ತಮ ನಾನು ಈ ಕೆರೆಯ ಏರಿಯನ್ನು ಪ್ರತಿದಿನ ಕೆಲಸಗಾರರಿಂದ ಕಟ್ಟಿಸಿ ಮನೆಗೆ ಹೋಗಿ ಮಲಗಿ ನಂತರ ಬೆಳಗ್ಗೆ ಬಂದು ನೋಡುವಾಗ ಕೆರೆ ಏರಿಯು ಒಡೆದು ನೀರು ದಿಕ್ಕಾಪಾಲಾಗುತ್ತದೆ ಇದು ಹೇಗೆ ಎಂದು ಯೋಚಿಸುತ್ತಿರುವೆ ಎಂದನು.
ಅದಕ್ಕೆ ನಾರಾಯಣ ಭಟ್ಟನು, ರಾಜನೇ ಚಿಂತಿಸಬೇಡ ನಾನು ಉಪದೇಶಿಸುವ ಶ್ರೀರಾಮನಾಮ ಮಹಿಮೆಯ ಪೂಜೆ ಮತ್ತು ಕಥೆಯನ್ನು ಪ್ರತಿಶನಿವಾರವು ತಪ್ಪದೇ ಆಚರಿಸು. ನಿನ್ನ ಪ್ರಥಮ ಪೂಜೆಯ ದಿನವೇ ನಿನಗೆ ಚಿಂತೆ ಪರಿಹಾರ ವಾಗುತ್ತದೆ ಎಂದು ಹೇಳಿ ಮುಂದೆ ಹೊರಟನು.
ಆ ರಾಜನು ಶ್ರೀರಾಮ ಪೂಜೆಯನ್ನು ಮಾಡಿದ ದಿನ ರಾತ್ರಿಯೇ ರಾಮನು ಕನಸಿನಲ್ಲಿ ಬಂದು ಎಲೈ ರಾಜನೇ, ನಿನ್ನ ಋತುಮತಿಯಾದ ಮಗಳಿಗೆ ವಿವಾಹ ಮಾಡದಿರುವುದೇ ನಿನ್ನ ಕೆರೆ ಏರಿಯು ಒಡೆಯಲು ಕಾರಣ. ನಿನಗೆ ರಾಮ ಮಹಿಮೆಯನ್ನು ಉಪದೇಶಿಸಿದ ಬ್ರಾಹ್ಮಣನು ಪರಮ ಭಕ್ತನು ಅವನು ಪುನಃ ನಿನ್ನಲ್ಲಿಗೆ ನನ್ನ ದರ್ಶನ ಮಾಡಿಕೊಂಡು ಬರುವನು ಅವನಿಗೆ ನಿನ್ನ ಮಗಳನ್ನು ಕೊಟ್ಟು ಲಗ್ನ ಮಾಡು. ನಾಳೆಯೆ ನಿನ್ನ ಕಾರ್ಯ ಸಫಲವಾಗುತ್ತದೆ ಎಂದು ಹೇಳಿ ಮಾಯವಾದನು.
ರಾತ್ರಿ ಬಿದ್ದ ಕನಸಿನಿಂದ ಬೆಳಗ್ಗೆ ಹೋಗಿ ರಾಜನು ಏರಿಯನ್ನು ನೋಡಲು ಯಾವ ಭಾಗವೂ ಒಡೆಯದಿರಲು ಕೂಲಿಕಾರದೊಂದಿಗೆ ಸಂತೋಷಪಟ್ಟು ನಾರಾಯಣ ಭಟ್ಟನ ಬರುವಿಕೆಯನ್ನು ಎದುರು ನೋಡುತ್ತಾ ಈ ವೃತ್ತಾಂತ ವನ್ನು ತನ್ನ ಮಗಳಿಗೆ ಹೇಳಿದನು. ಆಕೆಯೂ ಸಹ ಆನಂದ ಭರಿತಳಾಗಿ ರಾಮಧ್ಯಾನ ಸಕ್ತಳಾಗಿ ತನ್ನ ವಿವಾಹವನ್ನು ನಿರೀಕ್ಷಿಸುತ್ತಿದ್ದಳು.
ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ
ಮಾಮಕ ಬೀಷ್ಟದಾಯ ಮಹಿತ ಮಂಗಲಂ!
ಕೋಸಲೇಶಾಯ ಮಂದಹಾಸದಾಸ ಪೋಷಕಾಯ
ವಾಸವಾದಿ ವಿನತ ಸದ್ವರಾಯ ಮಂಗಳಂ!!
(ನಾಳೆ 4ನೇ ಅಧ್ಯಾಯ ಬರೆಯುತ್ತೇನೆ)
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


