ShareChat
click to see wallet page
search
#🎥 Motivational ಸ್ಟೇಟಸ್ 1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಅವರ ಬಳಿ ಅವರದ್ದು ಎನ್ನುವ ಸ್ವಂತ ಕಾರು ಇರಲಿಲ್ಲ. ಅವರು ತಮ್ಮ ಸ್ವಂತ ಕೆಲಸಗಳಿಗೆ ಸರಕಾರಿ ಕಾರನ್ನು ಬಳಸುತ್ತಿರಲಿಲ್ಲ. ಮಕ್ಕಳನ್ನು ಶಾಲೆಗೆ ಬಿಡಲು, ಕರೆದುಕೊಂಡು ಬರಲು ಸರಕಾರಿ ವಾಹನ ಬಳಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಕೆಲವು ಅಧಿಕೃತ ಕಾರ್ಯಕ್ರಮಗಳಿಗೆ ಪತ್ನಿಯನ್ನು ಕರೆದುಕೊಂಡು ಹೋದರೂ, ಮಕ್ಕಳನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಹೆಂಡತಿಯೊಬ್ಬಳೇ ಹೋಗುವ ಸಂದರ್ಭದಲ್ಲಿ ಸರಕಾರಿ ವಾಹನವನ್ನು ಬಳಸುವುದನ್ನು ಅವರು ಸಮ್ಮತಿಸುತ್ತಿರಲಿಲ್ಲ. ಪ್ರಧಾನಿಯ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬೇಕಾಗಿತ್ತು. ಇದಕ್ಕೆ ಶಾಸ್ತ್ರಿಯವರಿಗೆ ಪಶ್ಚಾತ್ತಾಪವಿರಲಿಲ್ಲ. ಆದರೆ ತಮ್ಮ ಕಟ್ಟುಪಾಡಿನಿಂದಾಗಿ ಕುಟುಂಬದವರಿಗೆ ತೊಂದರೆಯಾಗುವುದು ಶಾಸ್ತ್ರಿಯವರ ಗಮನಕ್ಕೆ ಬಂದಿತ್ತು. ಒಮ್ಮೆ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ತಂದೆಗೆ ತಿಳಿಯದಂತೆ, ಪ್ರಧಾನಿ ಕಚೇರಿಯ ಕಾರನ್ನು (ಸರಕಾರಿ ಕಾರು) ಖಾಸಗಿ ಕೆಲಸಕ್ಕಾಗಿ ಬಳಸಿದ್ದರು. ಇದು ತಿಳಿದ ಶಾಸ್ತ್ರಿಯವರು ತಕ್ಷಣವೇ ತಮ್ಮ ಚಾಲಕನನ್ನು ಕರೆಸಿ, ಕಾರು ಎಷ್ಟು ಕಿಲೋಮೀಟರ್ ಓಡಿದೆ ಎಂದು ಕೇಳಿದರು. ನಂತರ, ಆ ದೂರಕ್ಕೆ ತಗಲುವ ಪೆಟ್ರೋಲ್ ವೆಚ್ಚವನ್ನು ಲೆಕ್ಕ ಹಾಕಿ, ತಮ್ಮ ಸ್ವಂತ ಹಣದಿಂದ ಸರಕಾರಿ ಖಜಾನೆಗೆ ಆ ಹಣವನ್ನು ಜಮೆ ಮಾಡಿದ್ದರು. ಓಡಾಟಕ್ಕೆ ಸ್ವಂತ ಕಾರು ಇಲ್ಲದಿದ್ದರೆ ತಮ್ಮ ಕುಟುಂಬದ ಸದಸ್ಯರಿಗೆ ತೊಂದರೆಯಾಗುವುದನ್ನು ಅರಿತುಕೊಂಡ ಶಾಸ್ತ್ರಿಯವರು, ಒಂದು ಕಾರನ್ನು ಖರೀದಿಸಲು ನಿರ್ಧರಿಸಿದರು. ಆಗ ಆ ಫಿಯೆಟ್ ಕಾರಿನ ಬೆಲೆ ಹನ್ನೆರಡು ಸಾವಿರ ರುಪಾಯಿಗಳು! ಆದರೆ, ದೇಶದ ಪ್ರಧಾನಿಯ ಬ್ಯಾಂಕ್ ಖಾತೆಯಲ್ಲಿದ್ದದ್ದು ಕೇವಲ ಏಳು ಸಾವಿರ ರುಪಾಯಿಗಳು! ಶಾಸ್ತ್ರಿಯವರು ತಮ್ಮ ಸ್ನೇಹಿತರ ಬಳಿ ಕೇಳಿದ್ದಿದ್ದರೆ ಯಾರೂ ಇಲ್ಲವೆನ್ನುತ್ತಿರಲಿಲ್ಲ. ಪ್ರಧಾನಿಗೆ ಸಾಲ ಕೊಡುವುದು ಪ್ರತಿಷ್ಠೆಯ ವಿಷಯ ಎಂದು ಭಾವಿಸುತ್ತಿದ್ದರು ಅಥವಾ ಪ್ರಧಾನಿ ಮನೆ ಮುಂದೆ ಅದಕ್ಕಿಂತ ಉತ್ತಮವಾದ ಕಾರನ್ನು ನಿಲ್ಲಿಸಿರುತ್ತಿದ್ದರು. ಆದರೆ ಶಾಸ್ತ್ರಿಯವರು ಉಳಿದ ಐದು ಸಾವಿರ ರುಪಾಯಿಗಳಿಗಾಗಿ, ಯಾರಿಗೂ ಹೇಳಲಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಸಾಲ ಪಡೆಯಲು ನಿರ್ಧರಿಸಿದರು. ದೇಶದ ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿ ಕಾರಿಗಾಗಿ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಲು ತೀರ್ಮಾನಿಸಿದರು! ‘ನಾನು ಪ್ರಧಾನಿ ಎಂಬ ಕಾರಣಕ್ಕೆ ಯಾವ ರಿಯಾಯತಿಯನ್ನೂ ನೀಡಕೂಡದು, ಬ್ಯಾಂಕಿನ ನಿಯಮಗಳನ್ನು ಪಾಲಿಸಬೇಕು’ ಎಂದು ಶಾಸ್ತ್ರಿಯವರು ಕಟ್ಟಪ್ಪಣೆ ವಿಧಿಸಿದರು. ಅಷ್ಟು ಸಣ್ಣ ಮೊತ್ತಕ್ಕೆ ಪ್ರಧಾನಿಯವರಿಗೆ ಸಾಲ ನೀಡಿದರೆ ಬ್ಯಾಂಕಿನ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಬೇಕಾದೀತೆಂದು ಭಾವಿಸಿದ ಬ್ಯಾಂಕ್ ಮ್ಯಾನೇಜರ್, ತಮ್ಮ ಮೇಲಾಧಿಕಾರಿಯನ್ನು ಸಂಪರ್ಕಿಸಿದರು. ಅವರು ಪ್ರಧಾನಿ ಕಚೇರಿಯಲ್ಲಿರುವ ಅಧಿಕಾರಿಯನ್ನು ಸಂಪರ್ಕಿಸಿದರು. 'ಈ ವಿಷಯದಲ್ಲಿ ಯಾವ ಕಾರಣಕ್ಕೂ ಪ್ರಧಾನಿ ಅವರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ. ನೀವು ಅವರಿಗೆ ಐದು ಸಾವಿರ ರುಪಾಯಿ ಸಾಲ ಮಂಜೂರು ಮಾಡಿ' ಎಂದು ಅವರು ಹೇಳಿದರು. ಬ್ಯಾಂಕ್ ಅಧಿಕಾರಿಗಳಿಗೆ ಬೇರೆ ದಾರಿಯೇ ಇರಲಿಲ್ಲ. ಅವರು ದೇಶದ ಪ್ರಧಾನಿಗೆ ಸಾಲ ಮಂಜೂರು ಮಾಡಿದರು. ಶಾಸ್ತ್ರಿಯವರು ಅರ್ಜಿ ಸಲ್ಲಿಸಿದ ದಿನವೇ ಸಾಲ ಮಂಜೂರಾಯಿತು. ಆದರೆ ಶಾಸ್ತ್ರಿಯವರು, 'ಸಾಮಾನ್ಯ ಜನರಿಗೆ ಎಷ್ಟು ವೇಗವಾಗಿ ಸಾಲ ಸಿಗುತ್ತದೆಯೋ ಅಷ್ಟೇ ವೇಗವಾಗಿ ನನಗೂ ಸಿಗಲಿ, ವಿಶೇಷ ಸೌಲಭ್ಯ ಬೇಡ' ಎಂದು ಸೂಚಿಸಿದ್ದರು. (ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದಿಗೂ ಶಾಸ್ತ್ರಿಯವರು ಸಹಿ ಮಾಡಿದ ಆ ಸಾಲದ ಪತ್ರಗಳನ್ನು ಮತ್ತು ಮರುಪಾವತಿಯ ದಾಖಲೆಗಳನ್ನು ತನ್ನ 'ಹೆರಿಟೇಜ್ ಗ್ಯಾಲರಿ'ಯಲ್ಲಿ ಅತ್ಯಂತ ಗೌರವದಿಂದ ಕಾಪಾಡಿಕೊಂಡು ಬಂದಿರುವುದು ಬೇರೆ ಕತೆ.) ಕೊನೆಗೂ ಪಿಯಟ್ ಕಾರು ಬಂದಿತು! ಕಾರಿನ ನಂಬರ್ DLE 6! ಅದು ಆ ಕಾಲದ ಇಟಾಲಿಯನ್ ವಿನ್ಯಾಸದ 'ಪ್ರೀಮಿಯರ್ ಪದ್ಮಿನಿ'ಯ ಮುಂಚಿನ ಆವೃತ್ತಿ. ಕಾರಿನ ಒಳಾಂಗಣ ತೀರಾ ಸರಳವಾಗಿತ್ತು. ಯಾವುದೇ ಐಷಾರಾಮಿ ಸೌಲಭ್ಯಗಳಿರಲಿಲ್ಲ. ಅಷ್ಟಕ್ಕೂ ಆ ಕಾರಿನಲ್ಲಿ ಹವಾ ನಿಯಂತ್ರಣ (ಎಸಿ)ವೂ ಇರಲಿಲ್ಲ. ದುರದೃಷ್ಟವಶಾತ್, ಕಾರು ಖರೀದಿಸಿದ ಕೇವಲ ಒಂದು ವರ್ಷದೊಳಗೆ, ಅಂದರೆ 1966ರ ಜನವರಿ 11ರಂದು ಅಂದಿನ ಅವಿಭಜಿತ ರಷ್ಯಾದ ತಾಷ್ಕೆಂಟ್‌ನಲ್ಲಿ ಶಾಸ್ತ್ರಿಯವರು ನಿಗೂಢವಾಗಿ ನಿಧನರಾದರು. ಆಗ ಬ್ಯಾಂಕ್ ಸಾಲ ಇನ್ನೂ ಬಾಕಿ ಇತ್ತು. ಶಾಸ್ತ್ರಿಯವರ ನಿಧನದ ನಂತರ ಅಂದಿನ ಇಂದಿರಾ ಗಾಂಧಿಯವರ ಸರಕಾರ ಆ ಸಾಲವನ್ನು ಮನ್ನಾ ಮಾಡಲು ಮುಂದಾಯಿತು. ಆದರೆ ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿ ಅದನ್ನು ನಿರಾಕರಿಸಿದರು. 'ನನ್ನ ಪತಿ ಪ್ರಾಮಾಣಿಕವಾಗಿ ಬದುಕಿದವರು, ಅವರ ಹೆಸರಿನಲ್ಲಿ ಸಾಲ ಉಳಿಯಬಾರದು. ನನ್ನ ಪತಿ ಮಾಡಿದ ಸಾಲವನ್ನು ನಾನೇ ತೀರಿಸುತ್ತೇನೆ' ಎಂದು ಹೇಳಿದರಲ್ಲದೇ, ತಮ್ಮ ಉಳಿತಾಯ ಮತ್ತು ತಮಗೆ ಬರುತ್ತಿದ್ದ ಪಿಂಚಣಿ ಹಣದಿಂದ ಕಂತುಗಳಲ್ಲಿ ಆ ಸಾಲವನ್ನು ಮರುಪಾವತಿಸಲಾರಂಭಿಸಿದರು. ಈ ವಿಷಯ ಹೇಗೋ ಪತ್ರಕರ್ತರಿಗೆ ಗೊತ್ತಾಯಿತು. ಇದನ್ನು ಅವರು ಪತ್ರಿಕೆಯಲ್ಲಿ ವರದಿ ಮಾಡಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶಾದ್ಯಂತ ಹರಡಿತು. ಶಾಸ್ತ್ರಿಯವರ ಕುಟುಂಬ ಸಾಲದಲ್ಲಿ ಇರುವುದನ್ನು ಸಹಿಸದ ದೇಶವಾಸಿಗಳು ಲಲಿತಾ ಶಾಸ್ತ್ರಿಯವರ ಹೆಸರಿಗೆ ಹಣವನ್ನು ಮನಿಯಾರ್ಡರ್ ಮೂಲಕ ಕಳಿಸಲಾರಂಭಿಸಿದರು. ಎಂಟಾಣೆ, ಒಂದು ರುಪಾಯಿಯಿಂದ ಹಿಡಿದು, ಕಾರಿನ ಮೂಲ ಬೆಲೆ ಹನ್ನೆರಡು ಸಾವಿರ ರುಪಾಯಿ ತನಕ ಜನ ಹಣ ಕಳಿಸಿದ್ದರು. ಕೂಲಿಕಾರರು, ಬಡವರು, ಶ್ರೀಮಂತರು ಎಂಬ ಭೇದ-ಭಾವವಿಲ್ಲದೇ ಜನ ಹಣ ಕಳಿಸಿದ್ದರು. ಒಂದು ವರ್ಷದವರೆಗೂ ಲಲಿತಾ ಶಾಸ್ತ್ರಿ ಹೆಸರಿನಲ್ಲಿ ಹಣ ಬರುತ್ತಲೇ ಇತ್ತು. 'ಯಾರೂ ಹಣ ಕಳಿಸಬೇಡಿ' ಎಂದು ಮನವಿ ಮಾಡಿಕೊಂಡರೂ ಹಣ ಬರುವುದು ನಿಂತಿರಲಿಲ್ಲ. ದೇಶದ ಮಹಾಜನತೆ ಕಳಿಸಿದ ಹಣದಲ್ಲಿ ನೂರಾರು ಕಾರುಗಳನ್ನು ಖರೀದಿಸಬಹುದಿತ್ತು. ಆದರೆ ಲಲಿತಾ ಶಾಸ್ತ್ರಿಯವರು ಒಂದು ಪೈಸೆಯನ್ನೂ ಸ್ವೀಕರಿಸಲಿಲ್ಲ. ಯಾವ ಮನಿಯಾರ್ಡರನ್ನೂ ನಗದೀಕರಿಸಲಿಲ್ಲ! ಈ ಕಾರು ಇಂದಿಗೂ ಸುಸ್ಥಿತಿಯಲ್ಲಿದೆ. ಇದು ಶಾಸ್ತ್ರಿಯವರ ಶಿಸ್ತು, ಸರಳ ಜೀವನ ಮತ್ತು ಅವರ ಕುಟುಂಬದ ಮೇಲಿನ ಪ್ರೀತಿಯ ದ್ಯೋತಕವಾಗಿ ಆ ಕಾರು ಅಲ್ಲಿ ನಿಂತಿದೆ. ಅಲ್ಲಿಂದ ಹೊರಬರುವಾಗ ಅನಿಸಿತು. *ರೋಡ್ ರೋಲರ್‌ನಂಥ ಅಧಿಕಾರವಿದ್ದರೂ, ದಾರಿಯ ಬದಿಯ ಹೂವಿನ ಗಿಡಕ್ಕೆ ಪೆಟ್ಟು ಮಾಡದೇ ಸಾಗುವ ಕಲೆಯೇ ಅಸಲಿ ರಾಜಕೀಯ* ಅಲ್ಲವೇ ?
🎥 Motivational ಸ್ಟೇಟಸ್ - DLE 6 INU DLE 6 INU - ShareChat