#📜ಪ್ರಚಲಿತ ವಿದ್ಯಮಾನ📜
ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನಮ್ಮ ಅವಿಭಜಿತ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗಳು ದೇಶದ ಆಡಳಿತ, ನ್ಯಾಯಾಂಗ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನನ್ಯವಾದದ್ದು. ಒಂದು ಕಾಲದಲ್ಲಿ ಆಡಳಿತ ಸೇವೆ ಎಂದರೆ ಅದು 'ಕೋಲಾರ ಅಡ್ಮಿನಿಸ್ಟ್ರೇಟಿವ್ ಸರ್ವಿಸ್' (KAS) ಎನ್ನುವಷ್ಟರ ಮಟ್ಟಿಗೆ ನಮ್ಮ ಬಯಲುಸೀಮೆ ಭಾಗದ ಪ್ರತಿಭೆಗಳು ದೇಶದಾದ್ಯಂತ ಹೆಸರು ಮಾಡಿದ್ದವು. ಆ ಭವ್ಯ ಪರಂಪರೆಯನ್ನು ಮುಂದುವರಿಸುತ್ತಾ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೀಲಟೂರು ಗ್ರಾಮದ ಒಂದು ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ಶಿಕ್ಷಕರ ಮಗ ಡಾ. ಕೆ.ಎಸ್. ಸೋಮಶೇಖರ್ ಅವರು ಈಗ ದೇಶದ ಶಾಸಕಾಂಗದ ಮೇಲ್ಮನೆಯಾದ ರಾಜ್ಯಸಭೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ.
ಕನ್ನಡ ಸೇರಿದಂತೆ ಪಂಚಭಾಷೆಗಳಲ್ಲಿ ಪರಿಣತಿ ಹೊಂದಿರುವ, ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿರುವ ಸೋಮಶೇಖರ್ ಅವರು, ಕಳೆದ ಮೂರು ದಶಕಗಳಿಂದ ಸಂಸತ್ತಿನ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಇವರು, ಇಂದು ರಾಜ್ಯಸಭೆಯ ಕಾರ್ಯದರ್ಶಿಯಂತಹ ಉನ್ನತ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ಎತ್ತರಿಸಿದ್ದಾರೆ.
ನಮ್ಮ ಮಣ್ಣಿನ ಪ್ರತಿಭೆಗಳು ದೆಹಲಿಯ ರಾಜಕೀಯ ಮತ್ತು ಆಡಳಿತದ ಶಕ್ತಿಕೇಂದ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ. ಡಾ. ಕೆ.ಎಸ್. ಸೋಮಶೇಖರ್ ಅವರ ಮುಂದಿನ ಅಧಿಕಾರಾವಧಿ ಯಶಸ್ವಿಯಾಗಲಿ, ಅವರ ಅನುಭವದಿಂದ ದೇಶದ ಸಂಸದೀಯ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿ ಎಂದು ಈ ಮೂಲಕ ಹಾರೈಸುತ್ತೇನೆ.
- ಡಾ.ಕೆ.ಸುಧಾಕರ್, ಸಂಸದ
#matter #joy #talents #playing #crucial #role #Delhi #KSudhakar #malgudiexpress #malgudinews #news #TopNews


