#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಓಂ ನಮಃ ಶಿವಾಯ
ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ
ಯಾರು ಶಿರದಲ್ಲಿ ರುಮಾಲನ್ನು ಧರಿಸಿರುವನೋ ಯಾರು ಬೆಟ್ಟಗಳಲ್ಲಿ ಸದಾ ಅಲೆದಾಡುತ್ತಿರುವನೋ, ಯಾರು ಜಮೀನುದಾರರ ಅಧಿಪತಿ ಯೋ ಅಂತಹ ರುದ್ರನೇ ನಿನಗೆ ನಮಸ್ಕಾರಗಳು.
ಅವನು ರುಮಾಲನ್ನು ಧರಿಸಿರುವುದು ಅವನ ಗುರುತನ್ನು ಮರೆಮಾಚಿಸಲಿಕ್ಕೆ. ಪರ್ವತಗಳಲ್ಲಿ ಯೋಗಿಗಳು ತಪಸ್ಸನ್ನು ಆಚರಿಸುತ್ತಾರೆ. ಅವರ ರಕ್ಷಣೆಗೆ ರುದ್ರನು ಪರ್ವತಗಳಲ್ಲಿ ಸಂಚರಿಸುತ್ತಾನೆ.
ಮೇಲಿನ ಮಂತ್ರಗಳು ಆಂದರೆ ಮೊದಲನೇ ಮಂತ್ರದಿಂದ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ಮಂತ್ರಗಳ ವರೆಗೆ ರಹಸ್ಯ ವಾದ ಅರ್ಥಗಳನ್ನು ಹೇಳಿದ್ದರೂ, ವೇದಗಳ ಕಾಲದಲ್ಲೂ, ಕಳ್ಳರು, ರಾತ್ರಿ ಕಳ್ಳರು, ಡಕಾಯಿತರು, ದರೋಡೆಕೋರರು, ಮೋಸ ವಂಚನೆ ಮಾಡುವವರು, ಕೊಲೆಗಡುಕರು ಇದ್ದರು ಎನ್ನುವುದು ತಿಳಿಯುತ್ತದೆ. ಆದರೆ ಅವರು ನಾಗರಿಕ ಸಮಾಜದಿಂದ ದೂರ ಉಳಿದಿದ್ದರು ಆದರೆ ಈಗ ಇಂತಹವರ ಸಂಖ್ಯೆ ಹೆಚ್ಚಿ ಅವರು ನಾಗರಿಕ ಸಮಾಜದ ಮಧ್ಯೆಯೇ ಇರುವುದಷ್ಟೇ ಅಲ್ಲದೆ, ನಮ್ಮನ್ನು ಆಳುವವರ ಮಧ್ಯೆಯೂ ಸೇರಿ ಹೋಗಿದ್ದು ಅಂಥವರನ್ನು ಶಿಕ್ಷಿಸಲು ರುದ್ರನು ತನ್ನ ಆಧುನಿಕ ಬಿಲ್ಲು ಬಾಣಗಳನ್ನು ಉಪಯೋಗಿಸುವಂತೆ ಬೇಡಿಕೊಂಡು, ಆ ರುದ್ರನಿಗೆ ನಮಸ್ಕಾರಗಳು.
ನಮ ಇಷುಮದ್ಭ್ಯೋ ಧನ್ವಾವಿಭ್ಯಷ್ಚ ವೋ ನಮಃ
ಯಾರು ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವವರೋ ಅವರಿಗೆ ನಮಸ್ಕಾರಗಳು.
ಇಲ್ಲಿಯೂ ಸಹಾ ರುದ್ರಗಣಗಳ ಬಗ್ಗೆ ಪ್ರಸ್ತಾಪಿಸಲಾಗಿದೆ
ನಮ ಅತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮಃ
ಯಾರ್ಯಾರು ಬಿಲ್ಲಿನ ಎರಡೂ ತುದಿಗಳಿಗೆ ಹಗ್ಗವನ್ನು ಕಟ್ಟಿ ಆ ಬಿಲ್ಲಿಗೆ ಬಾಣವನ್ನು ಹೂಡುತ್ತಾರೋ ಅಂತಹವರಿಗೆ ಅಂದರೆ ರುದ್ರಗಣಗಳಿಗೆ ನಮಸ್ಕಾರಗಳು
ಈ ಮಂತ್ರವು ಶಿಲ್ಪ ಕಲಾವಿದರನ್ನು ಅಂದರೆ ಇಂದ್ರ ಮತ್ತು ಅವನ ಸಹಾಯಕರನ್ನು ಕುರಿತು ಹೇಳಲಾಗಿದೆ ಎಂದು ಸಹಾ ಒಂದು ಅಭಿಪ್ರಾಯವಿದೆ. ಇಂದ್ರನೂ ಸೇರಿದಂತೆ ಈ ಎಲ್ಲಾ ದೇವತೆಗಳು, ರುದ್ರಗಣಗಳೂ ಸಹಾ ರುದ್ರನ ನೇರ ನಿಯಂತ್ರಣ ದಲ್ಲಿವೆ.
ನಮ ಆಯಚ್ಚಭ್ಯೋ ವಿಸೃಜದ್ಭ್ಯಶ್ಚ ವೋ ನಮಃ
ಯಾರು ಬಿಲ್ಲನ್ನು ಬಗ್ಗಿಸಿ ಅದರಿಂದ ಬಾಣವನ್ನು ಬಿಡುತ್ತಾರೋ ಅವರಿಗೆ ನಮಸ್ಕಾರಗಳು
ಬಿಲ್ಲನ್ನು ಬಗ್ಗಿಸಿ ಬಾಣ ಬಿಡುವುವರನ್ನು ಶ್ರಮಿಕ ವರ್ಗಕ್ಕೆ ಅನ್ವಯಿಸಿ ಶ್ರಮಿಕ ವರ್ಗದವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳನ್ನು ಹೇಳಲಾಗಿದೆ.
ನಮೋ ಸದ್ಭ್ಯೋ ವಿಧ್ಯದ್ಬ್ಯಶ್ಚ ವೋ ನಮಃ
ಬಾಣಗಳಿಂದ ಗುರಿಗೆ ಹೊಡೆಯುತ್ತಿರುವವರಿಗೆ ಮತ್ತು ಗುರಿಯನ್ನು ಬೇಧಿಸುತ್ತಿರುವವರಿಗೆ ನಮಸ್ಕಾರಗಳು.
ಬಿಲ್ಲುಗಾರರಲ್ಲಿ ಎರಡು ವಿಧ, ಒಂದು ಬಗೆಯವರು ಗುರಿಗೆ ಬಾಣವನ್ನು ಬಿಡುವಂತಹವರಾದರೆ, ಮತ್ತೊಂದು ಬಗೆಯವರು ಗುರಿಯನ್ನು ಬೇಧಿಸಿ ಮುಂದೆ ಹೋಗುವಂತೆ ಬಾಣವನ್ನು ಬಿಡುವಂತಹವರು. ಈ ಯೋಧರ ರೂಪ ದಲ್ಲಿರುವ ರುದ್ರನಿಗೆ ನಮಸ್ಕಾರಗಳು
ನಮ ಆಸೀನೇಭ್ಯಃ ಶ್ಯನಾಭ್ಯಶ್ಚ ವೋ ನಮಃ / ಶ್ಯನೇಭ್ಯಶ್ಚ ವೋ ನಮಃ
ಆಸನದಲ್ಲಿ ನೇರವಾಗಿ ಕುಳಿತಿರುವವರಿಗೂ ಹಿಂದೆ ಒರಗಿಕೊಂಡು ಕುಳಿತಿರುವವರಿಗೂ ನಮಸ್ಕಾರಗಳು
ಅಂದಿನ ಕಾಯಕ ಯೋಗವನ್ನು ಮುಗಿಸಿ ಆಸನದಲ್ಲಿ ನೇರವಾಗಿಯೋ ಅಥವಾ ಒರಗಿಕೊಂಡೋ ವಿಶ್ರಾಂತಿ ಪಡೆಯುತ್ತಿರುವವರ ರೂಪದಲ್ಲಿ ತೋರುತ್ತಿರುವ ರುದ್ರನಿಗೆ ನಮಸ್ಕಾರಗಳು. ವೇದಕಾಲದ ಸಮಾಜದಲ್ಲಿ ಅವರವರ ಪಾಲಿಗೆ ಬಂದ ಕಾಯಕವನ್ನು ಮಾಡುವುದನ್ನು ಕಾಯಕ ಯೋಗ ಎಂದು ಕರೆಯಲಾಗಿದೆಯಲ್ಲದೆ, ಈ ಕಾಯಕ ಮಾಡುವವರಲ್ಲಿ ರುದ್ರನನ್ನೇ ಕಂಡು ನಮಸ್ಕರಿಸುವ ಸಂಸ್ಕಾರ ವಿತ್ತು ಎಂಬುದನ್ನು ಈ ಮಂತ್ರದ ಮೂಲಕ ಹೇಳಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಅವರವರ ಪಾಲಿಗೆ ಬಂದ ಕಾಯಕ ಗಳನ್ನು ಮಾಡಲೇ ಬೇಕಾದ್ದು ಅನಿವಾರ್ಯ ಮತ್ತು ಅವಶ್ಯಕ ಎಂಬ ಅರಿವು ವೇದ ಕಾಲದ ಸಮಾಜದಲ್ಲಿಯೇ ಇತ್ತು. ಇದು ಹೊಸದಾಗಿ ಇತ್ತೀಚಿಗೆ ಬಂದದ್ದೇನೂ ಅಲ್ಲ ಎನ್ನುವುದಕ್ಕೆ ಈ ಮಂತ್ರ ಪುರಾವೆ ಒದಗಿಸುತ್ತದೆ.
ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮಃ
ನಿದ್ರೆ ಮಾಡುತ್ತಿರುವವರಿಗೆ ಮತ್ತು ಜಾಗೃತಾವಸ್ಥೆ ಯಲ್ಲಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು.
ಭೂಮಿಯ ಒಂದು ಭಾಗದ ಜನ ನಿದ್ರೆ ಮಾಡುತ್ತಿದ್ದರೆ ಮತ್ತೊಂದು ಭಾಗದ ಜನ ಜಾಗೃತ ರಾಗಿರುತ್ತಾರೆ. ಅಂದರೆ ಭೂಮಿಯು ಗುಂಡಾಗಿದೆ ಅನ್ನುವ ತಿಳಿವಳಿಕೆ ವೇದ ಕಾಲದಲ್ಲೇ ಇತ್ತು ಎನ್ನಲು ಈ ಮಂತ್ರಕ್ಕಿಂತ ಬೇರೆ ಪುರಾವೆ ಬೇಕಿಲ್ಲಾ. ಇದು ಆಳವಾದ ತಪಸ್ಸಿನಲ್ಲಿ ಮಗ್ನರಾಗಿ ಸಮಾಧಿ ಸ್ಥಿತಿ ತಲುಪಿರುವ ಒಂದು ವರ್ಗವನ್ನೂ ಹಾಗೂ ತಮ್ಮ ಕರ್ಮ ಯೋಗ ದಲ್ಲಿ ಅಂದರೆ ಕಾಯಕ ಯೋಗದಲ್ಲಿ ನಿರತರಾಗಿರುವ ಮತ್ತೊಂದು ವರ್ಗವನ್ನು ಕುರಿತ ಮಂತ್ರ ಎಂತಲೂ ಭಾವಿಸ ಬಹುದು.
ನಮಸ್ತಿಷ್ಟದ್ಭ್ಯೋ ಧಾವದ್ಬ್ಯಶ್ಚ ವೋ ನಮಃ
ನಿಂತಿರುವವರ ಮತ್ತು ಓಡುತ್ತಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು
ಇಲ್ಲಿ ಜಡ ಮತ್ತು ಚೇತನಗಳ ಬಗ್ಗೆ ಹೇಳಿದ್ದು ರುದ್ರನು ಜಡರೂಪದಲ್ಲೂ ಚೇತನ ರೂಪದಲ್ಲೂ ಇದ್ದು ಅವನು ಸರ್ವವ್ಯಾಪಿ ಎಂದು ಮತ್ತೊಮ್ಮೆ ಹೇಳಲಾಗಿದೆ.
ನಮಃ ಸಭಾಭ್ಯಃ ಸಭಾಪತಿಭ್ಶಶ್ಚ ವೋ ನಮಃ
ಸಭೆಯಲ್ಲಿ ಭಾಗವಹಿಸಿರುವವರೂ ಸಬೆಯ ಅಧ್ಯಕ್ಷನೂ ಆದ ರುದ್ರನಿಗೆ ನಮಸ್ಕಾರಗಳು.
ಸಭೆಗಳು ಅಂದರೆ ಆಧ್ಯಾತ್ಮಿಕ, ಧಾರ್ಮಿಕ ಸಭೆಗಳು. ಇಂತಹ ಸಭೆಗಳಲ್ಲಿ ಭಾಗವಹಿಸುವವರಲ್ಲಿಯೂ ಪ್ರವಚನ ನೀಡುವವರಲ್ಲಿಯೂ ಇರುವವನು ಒಬ್ಬನೇ. ಅವನು ರುದ್ರ. ಗುರುವಿನ ರೂಪ ದಲ್ಲಿಯೂ ಶಿಷ್ಯನ ರೂಪದಲ್ಲಿಯೂ ತಾನೇ ಆಗಿರುವ ರುದ್ರನಿಗೆ ನಮಸ್ಕಾರಗಳು
ನಮೋ ಅಶ್ವೇಭ್ಯೋs ಶ್ವಪತಿಭ್ಯಶ್ಚ ವೋ ನಮಃ
ಅಶ್ವಗಳಿಗೂ ಅಶ್ವಗಳ ಅಧಿಪತಿಯಾದ ರುದ್ರನಿಗೂ ನಮಸ್ಕಾರಗಳು.
ವೇದಗಳಲ್ಲಿ ಅಶ್ವ ಎನ್ನುವ ಪದವನ್ನು ಬಹಳ ಆಳವಾದ ಅರ್ಥದಲ್ಲಿ ಉಪಯೋಗಿಸಲಾಗಿದೆ. ಇದು ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿ. ಈ ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿಯೂ ತಾನೇ ಆಗಿ, ಈ ಶಕ್ತಿಯ ಅಧಿಪತಿಯೂ ತಾನೇ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು.
ಶುಭವಾಗಲಿ ಧನ್ಯವಾದಗಳು


