ShareChat
click to see wallet page
search
#ದಿನಕ್ಕೊಂದು ಕಥೆ #🙏 ಓಂ ನಮಃ ಶಿವಾಯ ಭೀಮಾಶಂಕರ ಜ್ಯೋತಿರ್ಲಿಂಗ:- ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಆರನೆಯ ಜ್ಯೋತಿರ್ಲಿಂಗ ವಾಗಿರುವ ಭೀಮಾಶಂಕರ ಜ್ಯೋತಿರ್ಲಿಂಗ ಒಂದು. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಪುಣೆಯ ಸಮೀಪದ ಖೇದ್ ಎಂಬ ಗ್ರಾಮದ ಸೈಯಾದ್ರಿ ಪರ್ವತದ ಮೇಲಿದೆ. ಭೀಮಾ ನದಿ ಈ ಪರ್ವತದಲ್ಲೆ ಉಗಮವಾಗುತ್ತದೆ. ನದಿ ತಟದಲ್ಲಿ ಶಿವನು ಭೀಮಾಶಂಕರ ಎಂಬ ಹೆಸರಿನಿಂದ ನೆಲೆಸಿ ಭಕ್ತರನ್ನು ಕಾಪಾಡುತ್ತಿದ್ದಾನೆ. ಭೀಮಾಶಂಕರ ಜ್ಯೋತಿರ್ಲಿಂಗದ ಕುರಿತು ಒಂದು ಕತೆ ಇದೆ:- ಬಹಳ ಹಿಂದೆ ಕರ್ಕಟಿ ಎಂಬ ರಾಕ್ಷಸಿ ಇದ್ದಳು. ಅವಳಿಗೆ ಭೀಮ ಎನ್ನುವ ಒಬ್ಬ ಮಗನಿದ್ದನು. ಅವನನ್ನು ತಾಯಿ ಒಬ್ಬಳೇ ಸಾಕುತ್ತಿದ್ದಳು. ಭೀಮನಿಗೆ ತನ್ನ ತಂದೆಯ ಬಗ್ಗೆ ಕುರಿತು ತಿಳಿದುಕೊಳ್ಳಬೇಕೆಂಬ ಕುತೂಹಲ ಉಂಟಾಗಿ ತಾಯಿಯನ್ನು ವಿಚಾರಿಸಿದ. ಅಮ್ಮ ನೀನೊಬ್ಬಳೇ ಹೀಗೆ ಕಾಡಿನಲ್ಲಿ ವಾಸ ಮಾಡುತ್ತಿರುವೆ ನಿನಗೆ ಯಾರು ಇಲ್ಲವೇ? ನನ್ನ ತಂದೆ ಯಾರು ಎಂದು ಕೇಳಿದನು. ಆಗ ಕರ್ಕಟೆ ಕಥೆಯನ್ನು ಹೇಳಿದಳು. ನಾನು ಮೊದಲು ವಿರಾಧ ಎಂಬ ದೈತ್ಯನನ್ನು ಮದುವೆಯಾಗಿದ್ದೆ. ಅವನನ್ನು ಶ್ರೀರಾಮನು ಕೊಂದನು. ನಂತರ ರಾವಣನ ತಮ್ಮ ಕುಂಭಕರ್ಣನನ್ನು ನಾನು ಮದುವೆಯಾದೆ ಅವನಿಗೆ ಹುಟ್ಟಿದವನೇ ನೀನು. ಶ್ರೀರಾಮಚಂದ್ರನು ನಿನ್ನ ತಂದೆಯನ್ನು ಸಂಹರಿಸಿದನು. ಆನಂತರ ನಾನು ನಮ್ಮ ತಂದೆ ತಾಯಿಯ ಜೊತೆ ಇದ್ದೆ. ಅವರು ಅಗಸ್ತ್ಯ ಮುನಿಗಳ ಶಿಷ್ಯನನ್ನು ಕೆಣಕಿದರೆಂದು ಅಗಸ್ತ್ಯ ಮಹರ್ಷಿಗಳು ನನ್ನ ತಂದೆ ತಾಯಿಯನ್ನು ಕೊಂದರು. ಆದ್ದರಿಂದ ಈ ಕಾಡಿನಲ್ಲಿ ನಾನೊಬ್ಬಳೇ ಒಂಟಿಯಾಗಿ ಬದುಕುತ್ತಿರುವೆ ಎಂದಳು. ಇದಲ್ಲದೆ ಶ್ರೀರಾಮನು ಭಗವಾನ್ ವಿಷ್ಣುವಿನ ಅವತಾರವೆಂದು ತಿಳಿಸಿದಳು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತನ್ನ ಪರಿವಾರವನ್ನು ಕೊಂದಂತಹ ವಿಷ್ಣುವಿನ ಮೇಲೆ ಮತ್ತು ಋಷಿಗಳ ಮೇಲೆ ಭೀಮನಿಗೆ ಕೋಪ ಬಂದಿತು. ಅವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ ಅವನ ತಪಸ್ಸಿಗೆ ಮೆಚ್ಚಿ ವರ ಕೇಳು ಎಂದಾಗ, ಅಮರತ್ವದ ವರವನ್ನು ಕೇಳಿದ. ಬ್ರಹ್ಮನು ತಥಾಸ್ತು ಎಂದನು. ಇದರಿಂದ ಅವನ ದುರಹಂಕಾರ ಹೆಚ್ಚಾಗಿ ಇನ್ನೂ ಕೆಟ್ಟ ರಾಕ್ಷಸನಾಗಿ ದೇವತೆಗಳಿಗೆ, ಋಷಿ ಮುನಿಗಳಿಗೆ, ಕಾಟ ಕೊಡಲು ಶುರು ಮಾಡಿದ. ಇಂದ್ರನನ್ನು ಸೋಲಿಸಿ ಸ್ವರ್ಗವನ್ನೇ ವಶಪಡಿಸಿ ಕೊಂಡನು. ಅಮರತ್ವದ ವರ ಪಡೆದುದರಿಂದ ಅವನನ್ನು ಸೋಲಿಸಲು ದೇವತೆಗಳು ಅವನೊಡನೆ ಯುದ್ಧ ಮಾಡಿದರೂ ವರದ ಪ್ರಭಾವದಿಂದ ಸಾಯಲಿಲ್ಲ. ಶ್ರೀಹರಿಯನ್ನು ಸೋಲಿಸಿದನು. ಆನಂತರ ಇಡೀ ಭೂಮಂಡಲವನ್ನು ತನ್ನ ವಶವಾಗಿ ಮಾಡಿಕೊಳ್ಳಬೇಕೆಂದು ಶಿವಭಕ್ತನಾದ ರಾಜ "ಸುಭೀಕ್ಷಣ" ಎಂಬುವನನ್ನು ಸೋಲಿಸಿ ಸೆರೆಮನೆಯಲ್ಲಿ ಇಡುತ್ತಾನೆ. ಸುಭೀಕ್ಷಣನು ಸೆರೆಮನೆಯಲ್ಲಿ ಶಿವನ ಪೂಜೆಯಲ್ಲಿ ಕಾಲಕಳೆಯುತ್ತಾನೆ. ಇದಾದಮೇಲೆ ಭೀಮ ರಾಕ್ಷಸನು ಸಾಧು -ಸಂತರು, ಋಷಿ ಮುನಿಗಳು ಎಲ್ಲರೂ ತನ್ನನ್ನೇ ಪೂಜೆ ಮಾಡಬೇಕೆಂದು ಕಟ್ಟಪ್ಪಣೆ ಮಾಡುತ್ತಾನೆ. ಇದರಿಂದ ದೇವತೆಗಳಿಗೆ ಕೋಪ ಬರುತ್ತದೆ. ಅವರೆಲ್ಲ ಬ್ರಹ್ಮನ ಹತ್ತಿರ ಹೋಗಿ ಈ ರಾಕ್ಷಸನನ್ನು ಸಂಹಾರ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ ಅವನ ಉಪಟಳವನ್ನು ಸಹಿಸಲಾರದೆ ಈಗಾಗಲೇ ಸಾಕಷ್ಟು ನಷ್ಟವನ್ನು ಅನುಭವಿಸಿದ್ದೇವೆ ಎಂದು ದೇವತೆಗಳು ಒಕ್ಕೊರಲಿನಿಂದ ಹೇಳಿದರು. ಬ್ರಹ್ಮನು ಯೋಚಿಸಿ, ಪರಶಿವನ ಮೂಲಕ ಇವನನ್ನು ಕೊಲ್ಲಬೇಕೆಂದು ದೇವತೆಗಳೊಂದಿಗೆ ಶಿವನ ಹತ್ತಿರ ಬಂದನು. ಪರಮೇಶ್ವರನು ದೇವತೆಗಳಿಗೆ ಧೈರ್ಯ ತುಂಬಿ ಭೀಮನನ್ನು ಸಂಹರಿಸುತ್ತೇನೆ ಎಂದು ಅಭಯ ನೀಡುತ್ತಾನೆ. ಅದೇ ಸಮಯಕ್ಕೆ ಭೀಮ ರಾಕ್ಷಸನು ಸೆರೆಮನೆಯಲ್ಲಿದ್ದ ರಾಜ ಸುಭೀಕ್ಷಣನ ಹತ್ತಿರ ಬಂದು, ನೀನು ಶಿವನನ್ನು ಪೂಜಿಸುವುದನ್ನು ಬಿಟ್ಟು ನನ್ನನ್ನು ಪೂಜೆ ಮಾಡಬೇಕು ಎಂದು ಆಜ್ಞಾಪಿಸುತ್ತಾನೆ. ರಾಜನು ಅವನ ಮಾತನ್ನು ನಿರ್ಲಕ್ಷಿಸಿದಾಗ, ಕ್ರೂರಿಯಾದ ಭೀಮ ತನ್ನ ಕತ್ತಿಯಿಂದ ರಾಜನ ತಲೆಯನ್ನು ಕಡಿಯಲು ಹೊರಡುತ್ತಾನೆ. ಕತ್ತಿಯನ್ನೆತ್ತಿ ಇನ್ನೇನು ಕಡಿಯಬೇಕು ಎನ್ನುವಾಗ ಶಿವನು ಶಿವಲಿಂಗ ದೊಳಗಿಂದ ಪ್ರಕಟವಾಗಿ ಪಿನಾಕ ಧನುಸ್ಸಿ ನಿಂದ ರಾಕ್ಷಸನ ಕತ್ತಿಯನ್ನು ಎರಡು ಭಾಗ ಮಾಡಿ, ಅವನ ಎಲ್ಲಾ ಆಯುಧ ಗಳನ್ನು ನಾಶಪಡಿಸಿ ರಾಕ್ಷಸನನ್ನು ಸುಟ್ಟು ಭಸ್ಮ ಮಾಡುತ್ತಾನೆ. ದೇವತೆಗಳು ಹರ್ಷೋದ್ಗಾರ ಗೈದರು. ಪರಮೇಶ್ವರನನ್ನು ಆ ಸ್ಥಳದಲ್ಲೆ "ಭೀಮಾಶಂಕರ" ಎಂಬ ಹೆಸರಿನಿಂದ ಜ್ಯೋತಿರ್ಲಿಂಗ ರೂಪದಲ್ಲಿ ನೆಲೆಸುವಂತೆ ಪ್ರಾರ್ಥಿಸುತ್ತಾರೆ. ಅಂತೆಯೇ ಭೀಮಾಶಂಕರ ಎಂಬ ಹೆಸರಿನಿಂದ ಅಲ್ಲಿ ಶಿವನು ನೆಲೆಸುತ್ತಾನೆ. ರಾಕ್ಷಸರೊಡನೆ ಯುದ್ಧ ಮಾಡಿದಾಗ ಶಿವನ ಮೈಯಿಂದ ಸುರಿದ ಬೆವರಿನ ಹನಿಗಳಿಂದ ಭೀಮಾನದಿ ಉಗಮವಾಯಿತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಭೀಮಾಶಂಕರ ದೇವಾಲಯ ಸೈಯ್ಯಾದ್ರಿ ಪರ್ವತದ ತಪ್ಪಲಿನಲ್ಲಿ ಇದೆ. ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಮರಾಠರ ಕೊಡುಗೆ ಅಪಾರವಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಭೀಮಶಂಕರ್ ದೇವಾಲಯಕ್ಕೆ ಭಕ್ತಾದಿಗಳು ತಪ್ಪದೆ ಬಂದು ದರ್ಶನ ಮಾಡಿ ಪುನೀತರಾಗುತ್ತಾರೆ. ಯಂ ಡಾಕಿನಿಶಾಕಿನಿಸಮಾಜೇ ನಿಷೇವ್ಯ ಮಾಣಂ ನಿಶಿತಾಶನೈಶ್ಚ ! ಸದೈವ ಭೀಮಾದಿಪದಪ್ರಸಿದ್ಧಂ ತಂ ಶಂಕರಂ ಭಕ್ತ ಹಿತಂ ನಮಾಮಿ ! ಜ್ಯೋತಿರ್ಮಯದ್ವಾದಶಲಿಂಗಕಾನಾಂ ಶಿವಾತ್ಮನಾಂ ಪ್ರೋಕ್ತಮಿದಂ ಕ್ರಮೇಣ ! ಸ್ತೋತ್ರಂ ಪಠಿತ್ವಾ ಮನುಜ್ಯೋತಿಭಕ್ತ್ಯಾ ಫಲಂ ತದಾಲೋಕ್ಯ ನಿಜಂ ಭಜೇಶ್ಚ ! ' ಶ್ರೀಮತ್ ಶಂಕರಾಚಾರ್ಯ' ವಿರಚಿತಂ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ದಿನಕ್ಕೊಂದು ಕಥೆ - ஸ [30= ஸ [30= - ShareChat