#📜ಪ್ರಚಲಿತ ವಿದ್ಯಮಾನ📜
ಧಮ್ ಇದ್ರೆ ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಿ: ಸಿದ್ದರಾಮಯ್ಯಗೆ ಎಚ್ಡಿಕೆ ಸವಾಲು
ಮೈಸೂರು: ರಾಜ್ಯ ರಾಜಕಾರಣದಲ್ಲಿ 'ಅಹಿಂದ' ನಾಯಕ ಎಂದು ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು ಎಸೆದಿದ್ದಾರೆ. "ನಿಮಗೆ ಅಷ್ಟೊಂದು ತಾಕತ್ತಿದ್ದರೆ ಕಾಂಗ್ರೆಸ್ ಬಿಟ್ಟು ಹೊರಬಂದು, ಸ್ವಂತ ಪಕ್ಷ ಕಟ್ಟಿ ಕೇವಲ ಐದು ಕ್ಷೇತ್ರಗಳಲ್ಲಿ ಗೆದ್ದು ತೋರಿಸಿ" ಎಂದು ಗುಡುಗಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ರಾಜಕೀಯ ನೈತಿಕತೆ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಹರಿತವಾದ ಟೀಕಾಪ್ರಹಾರ ನಡೆಸಿದರು.
ಕಣ್ಣೀರಿನ ಇತಿಹಾಸ ನೆನಪಿಸಿದ ಕುಮಾರಸ್ವಾಮಿ: ಸಿದ್ದರಾಮಯ್ಯ ಅವರು ಜೆಡಿಎಸ್ ಮತ್ತು ದೇವೇಗೌಡರ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಎಚ್ಡಿಕೆ, ಹಳೆಯ ದಿನಗಳನ್ನು ನೆನಪಿಸಿದರು.
1999ರಲ್ಲಿ ಸೋತಾಗ ಸಿದ್ದರಾಮಯ್ಯ ಮತ್ತು ಹೆಚ್.ಸಿ. ಮಹಾದೇವಪ್ಪ ದೇವೇಗೌಡರ ಮುಂದೆ ಬಂದು ಕಣ್ಣೀರು ಹಾಕಿದ್ದರು. ಅಂದು ಅವರು ಸುರಿಸಿದ ಕಣ್ಣೀರಿಗೆ ಬಕೆಟ್ ಇಟ್ಟಿದ್ದರೆ ಅದು ತುಂಬಿ ಹೋಗುತ್ತಿತ್ತು. ಅಂದು ದೇವೇಗೌಡರು ಇವರ ಕಣ್ಣೀರು ಒರೆಸಿ ಧೈರ್ಯ ತುಂಬಿದ್ದರು. ಅದನ್ನು ಮರೆಯಬೇಡಿ ಎಂದರು.
ಕುಟುಂಬ ರಾಜಕಾರಣದ ಬಗ್ಗೆ ವಾಗ್ದಾಳಿ: ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಉತ್ತರಿಸಿದ ಅವರು, "ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ" ಎಂದರು.
ವಸೂಲಿ ಆರೋಪ: ನಾನು ಸಿಎಂ ಆಗಿದ್ದಾಗ ನನ್ನ ಮಗನಿಗೆ ಆಶ್ರಯ ಸಮಿತಿ ಸದಸ್ಯತ್ವ ನೀಡಿ ವಸೂಲಿ ಮಾಡಲು ಬಿಟ್ಟಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಅಧಿಕಾರ ನೀಡಿ ಜಿಲ್ಲೆಗಳನ್ನು ನೋಡಿಕೊಳ್ಳಲು ಬಿಟ್ಟಿದ್ದಾರೆ. ಅವರ ಮಗ ಈಗ ಎಲ್ಲೆಡೆ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನೈತಿಕತೆ ಪ್ರಶ್ನೆ: ಮಗನನ್ನು ರಾಜಕೀಯದಲ್ಲಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಬೇರೆಯವರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.
ಅಹಿಂದ ಚಾಂಪಿಯನ್ಗೆ ಬಿಗ್ ಚಾಲೆಂಜ್: ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದಾಗ ಗೆದ್ದ ಸೀಟುಗಳ ಬಗ್ಗೆ ನೀಡುವ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಅಂದು 58 ಸೀಟು ಗೆದ್ದಿದ್ದು ದೇವೇಗೌಡರ ಮತ್ತು ನನ್ನ ಶ್ರಮದಿಂದ. ಸಿದ್ದರಾಮಯ್ಯ ಅವರ ಪಾತ್ರ ಕೇವಲ 10 ಪರ್ಸೆಂಟ್ ಮಾತ್ರ ಎಂದರು.
ಇನ್ನೊಬ್ಬರು ಕಟ್ಟಿದ ಪಕ್ಷಕ್ಕೆ ಬಂದು, ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಅಧಿಕಾರ ಅನುಭವಿಸುವುದು ಸುಲಭ. ತಾಕತ್ತಿದ್ದರೆ ಸ್ವಂತ ಬಲದ ಮೇಲೆ 5 ಸೀಟು ಗೆಲ್ಲಿ ಎಂದರು.
ಕಾಂಗ್ರೆಸ್ ಕಥೆ ಮುಗಿಸಲು ಸಿದ್ದರಾಮಯ್ಯ ಸಾಕು: ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಯ ಬಗ್ಗೆ ಲೇವಡಿ ಮಾಡಿದ ಅವರು, ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಪಕ್ಷಕ್ಕೆ 'ಕೊನೆಯ ಮೊಳೆ' ಹೊಡೆಯಲಿದ್ದಾರೆ ಎಂದು ಭವಿಷ್ಯ ನುಡಿದರು. ತಮಿಳುನಾಡಿನಲ್ಲಿ ಡಿಎಂಕೆ ಮುಂದೆ ಸೀಟಿಗಾಗಿ ಕೈಚಾಚುವ ಕಾಂಗ್ರೆಸ್ಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು.
ಸಿಎಂ ಕುರ್ಚಿ ಕನಸು ಮತ್ತು ಹೊಟ್ಟೆಕಿಚ್ಚು: ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಿರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಸಿಎಂ ಆಗಿರುವುದಕ್ಕೆ ಅವರ ಪಕ್ಷದ ನಾಯಕರಿಗೇ ವಿಪರೀತ ಹೊಟ್ಟೆನೋವು ಇದೆ. ಸ್ವಾರ್ಥಕ್ಕಾಗಿ ಕನಸು ಕಾಣುವವರಿಗೆ ಭಗವಂತ ಒಲಿಯುವುದಿಲ್ಲ ಎಂದು ಪರೋಕ್ಷವಾಗಿ ಕೈ ನಾಯಕರ ಕಾಲೆಳೆದರು.
#Form #ownparty #win #seats #HDKumaraswamy #Congress #JDS #challenges #Siddaramaiah #malgudiexpress #malgudinews #news #TopNews


