ShareChat
click to see wallet page
search
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಶ್ರೀಕೃಷ್ಣನಿಗೆ - ಕೃಷ್ಣನೇ ಸಾಟಿ:- ಕುರುಕ್ಷೇತ್ರದ ಧರ್ಮ- ಅಧರ್ಮಗಳ ನಡುವೆ ನಡೆದ ಯುದ್ಧದಲ್ಲಿ, ಘಟಾನುಘಟಿಗಳು, ಮಹಾಮಹಿಮರೆನಿಸಿಕೊಂಡವರೆಲ್ಲಾ, ಸಾವನ್ನಪ್ಪಿದರು.ಇಲ್ಲಿ ಸರಿ-ತಪ್ಪು ಪ್ರಶ್ನೆಗಳು ಬರುವುದಿಲ್ಲ. ಆದರೆ ಮಹಾಭಾರತದ ಈ ಯುದ್ಧದಲ್ಲಿ ಎಲ್ಲರ ಮನಕಲಕುವ ಸಾವು ಎಂದರೆ, ಅರ್ಜುನ ಸುಭದ್ರೆಯರ ಮಗನಾದ ಅಭಿಮನ್ಯುವಿನದು. ಆಡುವ ವಯಸ್ಸು ಮಹಾವೀರ, ಪರಾಕ್ರಮಿ, ಯುದ್ಧ ಕೌಶಲ್ಯವನ್ನು ತಿಳಿದವನು, ಯುದ್ಧದಲ್ಲಿ ಇವನ ಎದರು ನಿಂತರೆ ವೀರಾಧಿ ವೀರರು ಮಣ್ಣುಮುಕ್ಕುವರು. ಕೌರವರ ಸೇನಾಧಿಪತಿ ಗುರು ದ್ರೋಣಾಚಾರ್ಯರು, ಯುಧಿಷ್ಠಿರನನ್ನು ಬಂಧಿಸಿ ವಿಜಯ ಪತಾಕೆಯನ್ನು ಹಾರಿಸುವೆನೆಂದು ದುರ್ಯೋಧನನಿಗೆ ಮಾತುಕೊಟ್ಟಂತೆ, ಯುದ್ಧದ ಹದಿಮೂರನೇ ದಿನ ಚಕ್ರವ್ಯೂಹ ರಚಿಸಿದರು. ಈ ಚಕ್ರವ್ಯೂಹ ಭೇದಿಸುವ ರಹಸ್ಯ ಶ್ರೀಕೃಷ್ಣ ,ಅರ್ಜುನನಿಗೆ ಮಾತ್ರ ಗೊತ್ತಿತ್ತು. ಇದನ್ನು ತಿಳಿದಿದ್ದ ದ್ರೋಣರು ಕೃಷ್ಣ ಮತ್ತು ಅರ್ಜುನರನ್ನು ರಣರಂಗದಿಂದ ದೂರದಲ್ಲಿರುವಂತೆ ವ್ಯವಸ್ಥೆ ಮಾಡಿ ಯಾರೂ ಒಳಗೆ ಬರದಂತೆ ತಡೆಯಲು, ಒಂದು ದಿನದ ಮಟ್ಟಿಗೆ ಸಾವು ಬರದಂತೆ ವರಪಡೆದ ಜಯದ್ರಥನನ್ನು ಚಕ್ರವ್ಯೂಹದ ಹೊರಗೆ ನಿಲ್ಲಿಸಿದರು. ಎಲ್ಲರಿಗೂ ತಿಳಿದಿರುವಂತೆ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ಅಡ್ಡ ಬಂದವರನ್ನು ಕಡಿದುರುಳಿಸುತ್ತಾ ಮುಂದೆ ಮುಂದೆ ಹೋಗುತ್ತಾನೆ. ಇವನ ಶೌರ್ಯ, ಪರಾಕ್ರಮದ ಮುಂದೆ ಯಾರು ಉಳಿಯಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ದುರ್ಯೋಧನನಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವನು ಮಹಾರಥಿಗಳಾದ ದ್ರೋಣಾಚಾರ್ಯರು, ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ, ದುಶ್ಯಾಸನರನ್ನು ಒಂದೇ ಸಲಕ್ಕೆ ಅಭಿಮನ್ಯುವಿನ ಮೇಲೆ ಪ್ರಹಾರ ಮಾಡುವಂತೆ ತಿಳಿಸುತ್ತಾನೆ. ದ್ರೋಣ, ಕೃಪಾ, ಕರ್ಣರು, ಇದು ಯುದ್ಧನೀತಿ ಅಲ್ಲವೆಂದು ತಿಳಿದಿದ್ದರೂ, ಒಟ್ಟಿಗೆ ಒಂದೇ ಸಲಕ್ಕೆ ರಾಕ್ಷಸರಂತೆ ಅಭಿಮನ್ಯುವಿನ ಮೇಲೆ ಪ್ರಹಾರ ಮಾಡಿ ನೆಲಕ್ಕೆ ಬೀಳಿಸುತ್ತಾರೆ. ಯುದ್ಧರಥ, ಕತ್ತಿ ಇಲ್ಲದೆ ನಿರಾಯುಧನಾಗಿದ್ದರೂ, ರಥದ ಚಕ್ರವನ್ನೇ ಕಿತ್ತುಕೊಂಡು ರಕ್ತಸಿಕ್ತ ದೇಹದಿಂದ ಒಬ್ಬಂಟಿಯಾಗಿ ನಿಂತು ಆತಿರಥ ಮಹಾರಥರನ್ನೇ ಎದುರಿಸಿ ಹೋರಾಡುತ್ತಾನೆ. ಆದರೂ ಕೊನೆಗೆ ಮೋಸಕ್ಕೆ ಬಲಿಯಾಗಿ ವೀರ ಮರಣ ಹೊಂದುತ್ತಾನೆ. ಇವುಗಳೆಲ್ಲದರ ಮಧ್ಯೆ ಪಾಪಿಯಾದ ಜಯದ್ರಥನು ತನ್ನ ರಥದಿಂದ ಕೆಳಗಿಳಿದು ಬಂದು ಅಭಿಮನ್ಯವಿನ ಶವವನ್ನು ತನ್ನ ಕಾಲಿನಿಂದ ಒದೆಯುತ್ತಾ ರಾಕ್ಷಸನಗೆ ಬೀರುತ್ತಾ ದೂರ ತಳ್ಳುತ್ತಾನೆ. ಇದನ್ನೆಲ್ಲಾ ತಿಳಿದ ಕೃಷ್ಣ ಮತ್ತು ಅರ್ಜುನರಿಗೆ, ಅಭಿಮನ್ಯು ಸತ್ತಿದ್ದಾನೆ ಎಂಬ ದುಃಖಕ್ಕಿಂತ ಸತ್ತ ಅಭಿಮನ್ಯುವಿನ ಶವವನ್ನು ಜಯದ್ರಥ ಕಾಲಿನಿಂದ ಒದೆಯುತ್ತಾ ದೂರ ತಳ್ಳಿದ್ದು ಅವರಿಬ್ಬರಿಗೂ ಮೈ ಉರಿಯುತ್ತದೆ. ಕೃಷ್ಣನಂತು ಸಿಟ್ಟಿನಿಂದ ಕೊತಕೊತ ಕುದಿಯುತ್ತಾನೆ. ಕೋಪ ,ನೋವು, ಹತಾಶೆ, ಅಸಮಾಧಾನದಿಂದ ಬಂದ ಅರ್ಜುನ ರಣರಂಗದ ಮಧ್ಯೆ ಬಂದು ಕೇಳಿ, ಮೋಸದಿಂದ ನನ್ನ ಮಗನನ್ನು ಕೊಂದಿದ್ದು ಅಲ್ಲದೆ ನೀಚ ಮನಸ್ಸಿನ ಜಯದ್ರಥನು ಸತ್ತ ಅಭಿಮನ್ಯುವಿನ ಶವವನ್ನು ಕಾಲಿನಿಂದ ಒದ್ದು ತಳ್ಳಿದ್ದಾನೆ. ಅವನನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಾಳೆ ಸೂರ್ಯಾಸ್ತವಾಗುವುದರೊಳಗೆ ಸಾಯಿಸುತ್ತೇನೆ. ಒಂದು ವೇಳೆ ಅದು ನನ್ನಿಂದ ಆಗದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ ಎಂದು ಶಪಥ ಮಾಡುತ್ತಾನೆ. ಅರ್ಜುನನು ಮಾಡಿದ ಶಪಥ ಎರಡೂ ಪಾಳಯದಲ್ಲಿ ಸಂಚಲನ ಉಂಟು ಮಾಡುತ್ತದೆ. ಕೌರವರಿಗೆ ಜಯದ್ರಥನನ್ನು ಹೇಗಾದರೂ ಮಾಡಿ ಕಾಪಾಡಿಕೊಂಡರೆ, ಅರ್ಜುನ ಅಗ್ನಿ ಪ್ರವೇಶ ಮಾಡುತ್ತಾನೆ. ಅಲ್ಲಿಗೆ ಪಾಂಡವರು ಇತಿಶ್ರೀ ಆದಂತೆ ಎಂದು ಖುಷಿಪಡುತ್ತಿದ್ದರೇ, ಜಯದ್ರಥನನ್ನು ಸಂಹರಿಸಲಾಗದೆ, ಅರ್ಜುನ ಅಗ್ನಿ ಪ್ರವೇಶ ಮಾಡಿದರೆ ನಮ್ಮ ಕಥೆ ಮುಗಿದಂತೆ ಎಂದು ಪಾಂಡವರು ಚಿಂತಾಕ್ರಾಂತರಾಗಿ, ಅರ್ಜುನ ಜಯದ್ರಥನನ್ನು ಕೊಲ್ಲಲೇಬೇಕು ಇದರ ಕುರಿತು ಯೋಜನೆಗಳನ್ನು ರೂಪಿಸುತ್ತಾರೆ. ಎಲ್ಲವನ್ನೂ ಬಲ್ಲ ಕೃಷ್ಣ ಮಾತ್ರ ಯಾವ ಮಾತನ್ನೂ ಆಡದೇ, ಒಂದು ವೇಳೆ ಹಾಗಾದರೆ, ಹೀಗಾದರೆ, ಏನು ಮಾಡಬೇಕೆಂಬುದನ್ನು ಮೊದಲೇ ಸಿದ್ಧತೆ ಮಾಡಿಕೊಂಡು ಎಲ್ಲರ ಮಾತುಗಳನ್ನು ಕೇಳುತ್ತಾ, ತನ್ನ ಸೋದರಳಿಯ ಅಭಿಮನ್ಯುವಿನ ಶವವನ್ನು ಕಾಲಿನಿಂದ ಒದ್ದು ತಳ್ಳಿದ ಜಯದ್ರಥನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದನು. ಮರುದಿನ ಯುದ್ದ ಆರಂಭವಾಗುತ್ತಿದ್ದಂತೆ ರಥದಲ್ಲಿ ಕುಳಿತ ಕೃಷ್ಣ ಮತ್ತು ಅರ್ಜುನರು ಜಯದ್ರಥನನ್ನು ಹುಡುಕಲು ಆರಂಭಿಸುತ್ತಾರೆ. ಈಕಡೆ ಕೌರವರು ಜಯದ್ರಥನ ಸುರಕ್ಷತೆಯ ಜವಾಬ್ದಾರಿಯನ್ನು ಸೇನಾಧಿಪತಿ ದ್ರೋಣಾಚಾರ್ಯರಿಗೆ ಕೊಡುತ್ತಾರೆ. ಮಹಾ ಗುರುಗಳಾದ ದ್ರೋಣಾಚಾರ್ಯರು ಜಯದ್ರಥನನ್ನು ಕಾಪಾಡಲು ಯಾರಿಂದಲೂ ಭೇದಿಸಲಾಗದಂಥ ಯೋಜನೆಯನ್ನೇ ರೂಪಿಸಿದರು. ಮೂರು ಚಕ್ರವ್ಯೂಹ ಗಳನ್ನು ರಚಿಸಿ, ಅತಿರಥ ಮಹಾರಥರಾದ ಕೃಪಾಚಾರ್ಯ, ಅಶ್ವತ್ಥಾಮ, ಕರ್ಣ ಇವರುಗಳನ್ನು ಮೂರು ಚಕ್ರವ್ಯೂಹಗಳಿಗೆ ತಡೆಗೋಡೆಯಾಗಿ ನಿಲ್ಲಿಸುತ್ತಾರೆ. ಪಾಂಡವರು ಚಕ್ರವ್ಯೂಹ ಭೇದಿಸುವ ಹರಸಾಹಸ ಮಾಡಿದರು. ಈ ಭೀಕರ ಕದನದಲ್ಲಿ ಕೌರವರ ಐದು ದೊಡ್ಡ ಸೈನ್ಯದ ತುಕಡಿಗಳು ನಾಶವಾದರೂ ಗುರು ದ್ರೋಣಾಚಾರ್ಯರು ರಚಿಸಿದ ಒಂದೇ ಒಂದು ಚಕ್ರವ್ಯೂಹ ಭೇದಿಸಲು ಪಾಂಡವರಿಂದ ಸಾಧ್ಯವಾಗಲಿಲ್ಲ. ಅರ್ಜುನ ಮತ್ತು ಜಯದ್ರತನ ಮಧ್ಯೆ ಇದ್ದ ಚಕ್ರವ್ಯೂಹ ಭೇದಿಸುವುದು ಇರಲಿ, ಹತ್ತಿರ ಹೋಗಲು ಆಗಲಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಇನ್ನೇನು ಸೂರ್ಯಾಸ್ತದ ಸಮಯ ಬಂದಿತು. ಅರ್ಜುನ ಅಗ್ನಿ ಪ್ರವೇಶ ಮಾಡುವುದನ್ನೇ ಕೌರವರು ಕಾಯುತ್ತಿದ್ದರು. ಪಾಂಡವರು ಹತಾಶರಾಗಿ ಕೈಚೆಲ್ಲಿದ್ದರು. ರಥದಲ್ಲಿ ಕುಳಿತಿದ್ದ ಕೃಷ್ಣ ನೋಡುತ್ತಿದ್ದ. ಅಧರ್ಮದ ಮುಂದೆ ಧರ್ಮ ಸೋಲುವುದನ್ನು ಕೃಷ್ಣನಿಂದ ಸಹಿಸಲಾಗಲಿಲ್ಲ. ತಕ್ಷಣ ಸೂರ್ಯನನ್ನು ಮುಚ್ಚುವಂತೆ ಮೋಡಗಳಿಗೆ ಹೇಳಿದ. ಕತ್ತಲು ಆವರಿಸಿದ್ದನ್ನು ಕಂಡು ಸೂರ್ಯಾಸ್ತವಾಯಿತು ಎಂದು ಭ್ರಮಿಸಿ ಕೌರವರು ಕುಣಿದರು. ಅರ್ಜುನ ಸೂರ್ಯ ಮರೆಯಾದುದನ್ನು ನೋಡಿ, ಭಾರವಾದ ಹೃದಯದಿಂದ ತಲೆಕೆಳಗೆ ಹಾಕಿ, ಗಾಂಡೀವವನ್ನು ಕೈ ಬಿಟ್ಟು ,ರಥದಿಂದ ಕೆಳಗಿಳಿಯುತ್ತಾನೆ. ತನ್ನ ಬಾಣಗಳಿಂದಲೇ ಚಿತೆಯನ್ನು ಮಾಡುತ್ತಾನೆ. ಅರ್ಜುನನು ಪ್ರಾಣತ್ಯಾಗ ಮಾಡುವುದನ್ನು ನೋಡಲು ಕೌರವರೆಲ್ಲ ಸಂತೋಷದಿಂದ ಓಡೋಡಿ ಬಂದು ಅಗ್ನಿ ಮುಂದೆ ನಿಂತರು. ಕೌರವರು ಸಂತೋಷದಿಂದ ಹುಚ್ಚರಾಗಿದ್ದರು. ಪಾಂಡವರ ಮೈಯಲ್ಲಿದ್ದ ಶಕ್ತಿಯೆಲ್ಲಾ ಉಡುಗಿ ಹೋಗಿತ್ತು. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಇಂಥ ಅಮೋಘವಾದ ದೃಶ್ಯ ಮುಂದೆ ಸಿಗುವುದಿಲ್ಲ ಎಂದುಕೊಂಡು ಅರ್ಜುನನನ್ನು ನೋಡಿ ಗೇಲಿಮಾಡಿ ನಗಲು ಚಕ್ರವ್ಯೂಹದೊಳಗೆ ಭದ್ರವಾಗಿದ್ದ ಜಯದ್ರಥನು ಈಚೆ ಬಂದು ಚಿತೆಯ ಮುಂದೆ ನಿಲ್ಲುತ್ತಾನೆ. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಕೃಷ್ಣನು ಮೋಡಗಳನ್ನು ಸರಿಸಿ ಸೂರ್ಯನನ್ನು ಮುಂದೆ ತರುತ್ತಾನೆ. ಇದ್ದಕ್ಕಿದ್ದಂತೆ ಸೂರ್ಯನ ಕಿರಣಗಳನ್ನು ಕಂಡ ಕೌರವ - ಪಾಂಡವರು ದಂಗಾಗಿಹೋದರು. ಕೃಷ್ಣ ಕೂಗಿ ಹೇಳಿದ "ಏ ಪಾರ್ಥ, ನೋಡು ನಿನ್ನ ಮಗನ ಶವವನ್ನು ಒದ್ದ ಶತ್ರು ನಿನ್ನ ಮುಂದೆ ನಿಂತಿದ್ದಾನೆ. ಮುಂದಿರುವ ಅಗ್ನಿ ದೇವನಿಗೆ ನಮಿಸು, ಗಾಂಡೀವವನ್ನು ಮೇಲೆತ್ತು, ಹೂಡು ನಿನ್ನ ಬಾಣ" ಎಂದು ಆದೇಶ ನೀಡಿದ. ಕ್ಷಣವೂ ತಡಮಾಡದ ಅರ್ಜುನ ಗಾಂಡೀವ ಎತ್ತಿದ, ಬಾಣ ಹೂಡಿ ಓಡುತ್ತಿದ್ದ ಜಯದ್ರಥನ ಶಿರಶ್ಚೇದ ಮಾಡಿದ. ಕ್ಷಣಮಾತ್ರದಲ್ಲಿ ಗುಡುಗು-ಮಿಂಚು ಅಬ್ಬರಿಸಿದಂತೆ ಎಲ್ಲವೂ ನಡೆದು ಹೋಯಿತು. ಜಯದ್ರಥನನ್ನು ಹೊಡೆದು ಜಯ ಸಾಧಿಸಿದ್ದು ಅರ್ಜುನನೇ ಆದರೂ, ಸೇಡಿಗೆ ಸೇಡು, ಎಂಬ ಕೃಷ್ಣನು ಚಾಣಾಕ್ಷತನದಿಂದ ತನ್ನ ಸೋದರಳಿಯ ಅಭಿಮನ್ಯುವನ್ನು ಕೊಂದು ಆ ಶವವನ್ನು ಕಾಲಿನಿಂದ ತಳ್ಳಿದ ಜಯದ್ರಥ ನ ಶಿರಸ್ಸನ್ನು , ಅರ್ಜುನನ ಮೂಲಕ ತಲೆಯಿಂದ ಬೇರೆ ಮಾಡಿಸಿ ಸೇಡು ತೀರಿಸಿಕೊಂಡನು. ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ್, ಆಶ್ಚರ್ಯವದ್ವದತಿ ತಥೈವ ಚಾನ್ಯ, ಆಶ್ಚರ್ಯ ವಚ್ಚೈ ನಮನ್ಯ ಶೃಣೋತಿ, ಶ್ರುತ್ವಾ ಪ್ಯೇ ನಂ ವೇದ ನ ಚೈವ ಕಶ್ಚಿತ್! ಒಬ್ಬ ಈತನನ್ನು ಅದ್ಭುತದಂತೆ ಕಾಣುತ್ತಾನೆ. ಮತ್ತೊಬ್ಬ ಅದ್ಭುತದಂತೆ ಹೇಳುತ್ತಾನೆ. ಮಗದೊಬ್ಬ ಅದ್ಭುತದಂತೆ ಕೇಳುತ್ತಾನೆ. ಹೀಗೆ ಕೇಳಿದ ಮೇಲೂ ಯಾರು ಈತನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರರು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🔱 ಭಕ್ತಿ ಲೋಕ - ShareChat