ತಂದೆ-ಮಗನ ಸಾವಿಗೆ ಕಾರಣರಾದ 09 ಪೊಲೀಸರಿಗೆ ಗಲ್ಲು ಶಿಕ್ಷೆ....
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್ಕುಲಂನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ತಂದೆ-ಮಗನ ಅಮಾನವೀಯ ಲಾಕಪ್ ಡೆತ್ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಈ ಘೋರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 9 ಪೊಲೀಸರನ್ನು ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯ, ಎಲ್ಲರಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.
ಈ ಘಟನೆ ನಡೆದಿದ್ದು 2020ರ ಕೊರೊನಾ ಲಾಕ್ಡೌನ್ ಸಮಯದಲ್ಲಿ. ಕೇವಲ ನಿಗದಿತ ಸಮಯಕ್ಕಿಂತ ಕೆಲವೇ ನಿಮಿಷಗಳ ಕಾಲ ಹೆಚ್ಚುವರಿಯಾಗಿ ಅಂಗಡಿ ತೆರೆದಿದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿ ಜಯರಾಜ್ (59) ಮತ್ತು ಅವರ ಮಗ ಬೆನ್ನಿಕ್ಸ್ (31) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ಮೇಲೆ ಪೊಲೀಸರು ಸತತವಾಗಿ ಕ್ರೂರ ಹಲ್ಲೆ ನಡೆಸಿದ್ದಲ್ಲದೆ, ರಾತ್ರಿಯಿಡೀ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದರು. ಪರಿಣಾಮವಾಗಿ ಇಬ್ಬರೂ ಕಸ್ಟಡಿಯಲ್ಲೇ ಮೃತಪಟ್ಟಿದ್ದರು, ಇದು ತಮಿಳುನಾಡಿನಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. #ಸುದ್ದಿ


