#📜ಪ್ರಚಲಿತ ವಿದ್ಯಮಾನ📜
ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಧಿಕಾರ ಅಲ್ಲ ಜವಾಬ್ದಾರಿ: ಬಿ ಕೆ ಹರಿಪ್ರಸಾದ್
ಬೆಂಗಳೂರು: ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂದು ಮಹತ್ವಾಕಾಂಕ್ಷೆಯ ದಿನ, ಮಹತ್ವಪೂರ್ಣವಾದ ದಿನ. ಕೆಪಿಸಿಸಿ ಅಧ್ಯಕ್ಷನಾಗಿರುವುದು ಇದು ಅಧಿಕಾರ ಅಲ್ಲ ಜವಾಬ್ದಾರಿ ಅಂತ ಭಾವಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡು, ಅರಮನೆ ಮೈದಾನದಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 141 ವರ್ಷ ಈ ದೇಶದ ಸೇವೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯಾದ್ಯಂತ ಗಟ್ಟಿಗೊಳಿಸುವ, ಸಂಘಟಿಸುವ ಅವಕಾಶವಿದು. ಇದಕ್ಕಾಗಿ ನನ್ನ ಅಚ್ಚುಮೆಚ್ಚಿನ ನಾಯಕಿ ಸೋನಿಯಾಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನೆಚ್ಚಿನ ನಾಯಕರಾದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ರಾಜ್ಯದ ಉಸ್ತುವಾರಿ ಸುರ್ಜೇವಾಲಾ ಅವರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ದೇಶ ಗುಲಾಮಗಿರಿಯಲ್ಲಿ ನರಳುತ್ತಿದ್ದಾಗ ಜನರನ್ನು ಸಂಘಟಿಸಿ ಎಲ್ಲರನ್ನು ಸಮಾನರು ಎಂದು ಬೇಧವಿಲ್ಲದೆ ನಿರಂತರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯಗೊಳಿಸುವಲ್ಲಿ ದೇಶಕ್ಕಾಗಿ ದುಡಿದ ಪಕ್ಷ ರಾಷ್ಟ್ರೀಯ ಕಾಂಗ್ರೆಸ್ ಎಂದರು.
ಸರ್ವಧರ್ಮಗಳನ್ನು ಸಮಾನವಾಗಿ ನೋಡುವ ಎಲ್ಲರೂ ಭ್ರಾತೃತ್ವದಲ್ಲಿ ಬದುಕುವಂತೆ ಮಾಡುವ ವ್ಯವಸ್ಥೆಗೆ ಕಾಂಗ್ರೆಸ್ ಅಡಿಪಾಯ ಹಾಕಿದೆ. ಭಾರತ ದೇಶದಲ್ಲಿ 500-600 ರಾಜರುಗಳಿದ್ದ ರಾಜ್ಯವನ್ನು ಗಣರಾಜ್ಯವೆಂದು ಘೋಷಿಸಿದರಲ್ಲಿ ಕಾಂಗ್ರೆಸ್ಸಿನ ಪಾತ್ರ ಹಾಗೂ ಮಹಾತ್ಮ ಗಾಂಧಿಜಿಯವರ, ಪಟೇಲರ ಪಾತ್ರವಿದೆ, ಎಂಬುದನ್ನ ನಾವು ಮರೆಯಬಾರದು ಎಂದರು.
ಕಾಂಗ್ರೆಸ್ ಪಕ್ಷ, ದೇಶದಲ್ಲಿ ಕೇವಲ ಅಧಿಕಾರ, ಚುನಾವಣೆ ನಡೆಸುತ್ತಾ ಬಂದಿಲ್ಲ. ಅದಕ್ಕಾಗಿ ರಾಜಕಾರಣ ಮಾಡುತ್ತಿಲ್ಲ, ಬದಲಾಗಿ ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಉಳಿಸುವ, ನಮ್ಮ ಪೂರ್ವಜರು ಕಟ್ಟಿದ ಪ್ರಜಾಪ್ರಭುತ್ವವನ್ನು ಉಳಿಸುವ, ಪ್ರಜಾಸತ್ತಾತ್ಮಕವಾಗಿ ಬದುಕಲು ಅವಕಾಶ ನೀಡಿದ ಉದ್ದೇಶವನ್ನು ಅದರ ಆಶೋತ್ತರಗಳನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು.
ಬಿಜೆಪಿ ಮತ್ತು ಸಂಘಪರಿವಾರದವರು ಸಂವಿಧಾನದ ವಿರುದ್ಧ, ಸ್ವಾತಂತ್ರ್ಯ ಹೋರಾಟದ ವಿರುದ್ಧ, ದಾಸ್ಯದ ಪರವಾಗಿ ಇದ್ದವರು. ಮುಂಬರುವ 2028-29 ರಲ್ಲಿ ಚುನಾವಣೆಯ ಭಾಗವಾಗಿ ಈ ದೇಶ ಒಡೆದು ಆಳಲು ಯತ್ನಿಸುತ್ತಿರುವವರ ವಿರುದ್ಧ ಹೋರಾಡಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯಲ್ಲೂ ಕೊಡುಗೆ ನೀಡದ ಭಾರತೀಯ ಜನತಾ ಪಾರ್ಟಿ ಹಾಗೂ ಆರ್ಎಸ್ಎಸ್ ನಮ್ಮ ಮುಂದೆ ದೊಡ್ಡ ಸವಾಲುಗಳನ್ನು ತಂದಿಟ್ಟಿದೆ. ಸಾಂವಿಧಾನಿಕ ಹುದ್ದೆಗಳನ್ನು, ನಮ್ಮ ವ್ಯವಸ್ಥೆಯನ್ನು ತಮ್ಮ ಅಡಿಯಲ್ಲಿ ಇರಿಸಿಕೊಂಡು ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದೆ. ನಮ್ಮ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಕೆಲಸವನ್ನು ಬ್ರಿಟಿಷರ ಮಾದರಿಯಲ್ಲಿ ಮಾಡುತ್ತಿದ್ದಾರೆ ಎಂದರು.
ಸ್ವತಂತ್ರ ಪೂರ್ವದಲ್ಲಿ ತೆರಿಗೆ ಕಟ್ಟುವವರು ಮಾತ್ರ ಮತದಾನ ಮಾಡುವ ಅವಕಾಶವಿದ್ದದ್ದನ್ನು ತೆಗೆದುಹಾಕಿ ಇಡೀ ದೇಶದ ಕಟ್ಟಕಡೆಯ ವ್ಯಕ್ತಿಗೂ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಆ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಾ ಬಂದಿದೆ. ವೋಟ್ ಚೋರಿ, ಎಸ್ಐಆರ್ ಅಂತಹ ಅಸ್ತ್ರಗಳನ್ನು ಬಳಸಿ ಜನರ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಕೊಡಲು ಹುನ್ನಾರ ನಡೆಸಿದ್ದು ಹಲವು ರಾಜ್ಯಗಳಲ್ಲಿ ಅದನ್ನು ಜಾರಿ ಮಾಡಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ದೇಶದಲ್ಲಿ ಅಶಾಂತಿ ಸೃಷ್ಟಿಸಲು ಆ ಮೂಲಕ ಈಗ ರಾಜ್ಯದಲ್ಲಿ ನಾವು ರಾಷ್ಟ್ರ ಕವಿ ಕುವೆಂಪು ಅವರ ಆಶಯದಂತೆ ಕರೆ ಕೊಡಬೇಕಿದೆ, ಒಟ್ಟಾಗಬೇಕಿದೆ ಎಂದು ಕರೆ ನೀಡಿದರು.
ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಓ. ಬನ್ನಿ, ಸೋದರರೆ, ಬೇಗ ಬನ್ನಿ!
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನ್ನು ಹೊರದೂಡಲೈ ತನ್ನಿ, ವಿಜ್ಙಾನ ದೀವಿಗೆಯ ಹಿಡಿಯ ಬನ್ನಿ.
ಓ, ಬನ್ನಿ, ಸೋದರರೆ,ವಿಶ್ವಪಥಕ್ಕೆ ಎಂದು ಕೂಗಿ ಕೂಗಿ ಹೇಳಬೇಕಿದೆ ಎಂದರು.
ನಮ್ಮ ನಾಡಗೀತೆಯಲ್ಲಿ ಹೇಳಿದ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. "ಹಿಂದೂ-ಮುಸ್ಲಿಂ,ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರ ಉದ್ಯಾನ. ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವುದು ಕಾಂಗ್ರೆಸ್ನ ಮೂಲ ಉದ್ದೇಶ. ಅದಕ್ಕಾಗಿ ಇಂದು ಸಂಕಲ್ಪ ಮಾಡಬೇಕಿದೆ ಈ ರಾಜ್ಯದಲ್ಲಿ ದ್ವೇಶ ರಾಜಕಾರಣಕ್ಕೆ ಬೆಂಬಲ ಇಲ್ಲ, ಕೋಮುದ್ವೇಷ ಬಿತ್ತುವವರನ್ನು ದೂರ ಇಡುವ ಪಣ ತೋಡೋಣ. ದೆಹಲಿಯಲ್ಲಿ ದೇಶದ ಪರವಾಗಿ ಹೋರಾಟ ಮಾಡುತ್ತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೈಬಲಪಡಿಸಬೇಕಿದೆ ಎಂದರು.
ಈ ದೇಶದ ಮೊಟ್ಟ ಮೊದಲ ಭಯೋತ್ಪಾದ ನಾಥುರಾಮ್ ಗೋಡ್ಸೆ. ಈ ದೇಶದ ಮಹಾತ್ಮನನ್ನು ಕೊಂದ ಗೋಡ್ಸೆಯನ್ನು ಕೊಲೆಗಡುಕ, ದೇಶದ್ರೋಹಿ ಎಂದು ಇಂದಿಗೂ ಘೋಷಿಸದೆ ಆತನಿಗೆ ಗುಡಿ ಕಟ್ಟಿ ಪೂಜಿಸುವ ಆರ್ಎಸ್ಎಸ್ ಬಿಜೆಪಿ ನಿರಂತರವಾಗಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಇದರಿಂದ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ನಾವು ನೀವು ಕಂಡಿದ್ದೇವೆ ಎಂದರು.
ಅಂಬೇಡ್ಕರ್ ಅವರು ಹೇಳುವಂತೆ "ಜೀವನ ಮಾಡೋಕೆ ಅಂತ ರಾಜಕಾರಣಕ್ಕೆ ಬರಬೇಡಿ, ದೀನ-ದಲಿತರ ಬಡವರ ಉದ್ದಾರಕ್ಕಾಗಿ ಮಾತ್ರ ಬನ್ನಿ" ಎಂಬ ಮಾತನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರಕ್ಕೂ ಮುನ್ನ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ನೆನೆಯಬೇಕು ಅವರ ಬದುಕು ಇದರಿಂದ ಹಸನಾಗುತ್ತದೆಯಾ ಎಂದು ಚಿಂತಿಸಬೇಕು ಆದರೆ, ಮೋದಿಯವರಿಗೆ ನೆನಪಾಗೋದು ಅದಾನಿ - ಅಂಬಾನಿ ಮಾತ್ರ ಎಂದರು.
ಬಿಜೆಪಿ ಹಾಗೂ ಆರ್ಎಸ್ಎಸ್ ಪುಕ್ಕುಲರು. ನಾವು ಸುಮ್ಮನಿರುವುದಕ್ಕೆ ಆಟಾಟೋಪ ಹೆಚ್ಚಾಗಿದೆಯಷ್ಟೆ ನಾವಿನ್ನು ಹಿಂದೆ ಸರಿಯಬಾರದು. ನೆಹರು ಅವರನ್ನು ಇನ್ನಿಲ್ಲದಂತೆ ಜರಿಯುವ ಇವರುಗಳು ಅವರ ಸಮಕ್ಕೂ ಬರಲಾರರು. ಹಸಿವು, ಬಡತನ, ಅನಾರೋಗ್ಯವನ್ನು ನಾವು ವಿಜ್ಞಾನದ ಮೂಲಕ ಸರಿಪಡಿಸಬೇಕೇ ವಿನಃ ಮೂಡನಂಬಿಕೆಯಿಂದಲ್ಲ ಎಂದರು.
ನಮ್ಮನ್ನು ನಾವು ಕಂಡುಕೊಳ್ಳುವ ಮಾರ್ಗ ಇತರರನ್ನು ಸೇವೆ ಮಾಡುವುದು - ಇದೆ ಕಾಂಗ್ರೆಸ್ ಪಕ್ಷದ ತತ್ವ - ಸಿದ್ಧಾಂತ ಮತ್ತು ಧ್ಯೇಯ. ನಾವು ಇದನ್ನು ಮರೆಯಬಾರದು. ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆ, ಗರಿಬೀ ಹಟಾವೋ ಹಾಗೂ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪ್ರಜ್ಞಾಪೂರ್ವಕವಾಗಿದದ್ದರು. ಆದರೆ, ಮೋದಿ ಅಮೆರಿಕಾ ಮುಂದೆ ಶರಣಾಗಿ ಸರೆಂಡರ್ ಪ್ರಧಾನಿಯಾಗಿ ದೇಶವನ್ನು ಜಾಗತಿಕಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದರು.
ಒಂದು ರಾಷ್ಟ್ರದ ನಿಜವಾದ ಶಕ್ತಿ ಇರುವುದು ಇತರರಿಂದ ಪಡೆಯುವುದರಿಂದ ಅಲ್ಲ, ಸ್ವಾವಲಂಬಿಯಾಗಿ ಸಾಧಿಸಿದಾಗ ಮಾತ್ರ. ಇಂದಿರಾಗಾಂಧಿಯವರ ಆಡಳಿತದ ಫಲವೇ ಹಸಿರು ಕ್ರಾಂತಿ. ಅದರ ಫಲವೇ ರಾಷ್ಟ್ರದಲ್ಲಿ ಅತಿಹೆಚ್ಚಿನ ಅಕ್ಕಿ ಬೆಳೆಯುವ ರಾಷ್ಟ್ರವಾಗಿದೆ, ಹೆಚ್ಚು ಹಾಲು ಉತ್ಪಾದಿಸುವ ದೇಶ ಭಾರತವಾಗಿದೆ ಎಂದರು.
ಯುವಶಕ್ತಿ ತಂತ್ರಜ್ಞಾನ ಅಧುನಿಕತೆಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ, ಯುವಕರಿಗೆ ಮತದಾನದ ಹಕ್ಕು ಘೋಷಿಸಿದ ಶ್ರೇಯಸ್ಸು ನನ್ನ ನೆಚ್ಚಿನ ನಾಯಕ ರಾಜೀವ್ ಗಾಂಧಿ ಅವರದ್ದು. ಇಡೀ ಭಾರತದಲ್ಲಿ ಆ ಕುಟುಂಬದ ಆರು ನೇತಾರರ ಜೊತೆಗೆ ಕೆಲಸ ಮಾಡಿರುವ ಹೆಮ್ಮೆ ಸಾಧನೆ ನನ್ನದು. ರಾಷ್ಟ್ರಕ್ಕಾಗಿ ಕೋಮು ಸೌಹಾರ್ದತೆಗಾಗಿ ದೇಶದ ಅಖಂಡತೆಗಾಗಿ ಜೀವತೆತ್ತಿರುವುದು ಗಾಂಧೀಜಿ ಬಿಟ್ಟರೆ ಅದು ನೆಹರು ಕುಟುಂಬ ಮಾತ್ರ ಎಂದರು.
ಮಹಾತ್ಮ ಗಾಂಧಿ ಅವರ ಹೆಸರಲ್ಲಿ ನರೇಗಾ ಉದ್ಯೋಗ ಖಾತ್ರಿ, ಉಚಿತ ಶಿಕ್ಷಣ, ಆಹಾರ ಖಾತ್ರಿ ಯೋಜನೆ ತಂದದ್ದೆಲ್ಲ ಕಾಂಗ್ರೆಸ್ ಪಕ್ಷ. ಆದರೆ, ಮೋದಿ ಇದೆಲ್ಲವನ್ನು ಬುಡಮೇಲು ಮಾಡುತ್ತಿದ್ದಾರೆ, ಯುವಜನರ ಕನಸನ್ನು ಹಾಳು ಮಾಡಿದ್ದಾರೆ. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ, ನಿರುದ್ಯೋಗದ ಹೆಸರಲ್ಲಿ ನಾಶ ಮಾಡಿದೆ ಎಂದರು.
ನರೇಂದ್ರ ಮೋದಿ ಸುದೀರ್ಘ ಅಧಿಕಾರವಾದಿಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ದಲಿತರು ದೀನರು ಬಡವರಿಗಾಗಿ ಒಂದೇ ಒಂದು ಸಮರ್ಥ ಕಾರ್ಯಕ್ರಮ ಪರಿಚರಿಯಿಸಿಲ್ಲ. ಆದರೆ, ಕರ್ನಾಟಕವನ್ನು ಮಾದರಿ ರಾಜ್ಯವಾಗಿಸಲು ಹಾಗೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಗೂ ನಾನು ಪಣ ತೊಟ್ಟಿದ್ದೇವೆ ಎಂದರು.
ಕರ್ನಾಟಕ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ. ಅದಕ್ಕೆ ಹಿರಿಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ, ಕಿರಿಯ ನಾಯಕರ ಸಹಕಾರ ಕೊಡಬೇಕು ಎಂದು ಕೇಳಿಕೊಕಡರೂ.
ಮುಂದಿನ ದಿನಗಳಲ್ಲಿ ನಮ್ಮ ಮುಂದೆ ದೊಡ್ಡ ಸವಾಲಿದೆ ಅದೇ ಎಸ್ಐಆರ್. ಅದರಿಂದ ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಅದನ್ನು ನಿಭಾಯಿಸಿ ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂಬ ಭರವಸೆ ನೀಡುತ್ತಿದ್ದೇನೆ. ನಾನು ಸಾಮಾನ್ಯ ಕಾರ್ಯಕರ್ತನೇ ಹೊರತು ಬಂಡವಾಳಶಾಹಿ ಅಲ್ಲ, ಪ್ರಬಲಜಾತಿಯವನಲ್ಲ. ನನಗೆ ಈ ಮಟ್ಟದ ಅವಕಾಶ ಸಿಕ್ಕಿದೆ ಅಂದ ಮೇಲೆ ನಿಮಗೂ ಸಿಗುತ್ತದೆ ಕಾರ್ಯಕರ್ತರು ಪಕ್ಷದ ಮೇಲೆ ನಂಬಿಕೆ ಗಟ್ಟಿಗೊಳಿಸಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ವಿದ್ಯಾರ್ಥಿ- ಯುವಕರು ಮಹಿಳೆಯರನ್ನು ಒಳಗೊಂಡಂತೆ ಹೊಸ ಅವಕಾಶಗಳಿಂದ ಅರ್ಹರಿಗೆ ಅವಕಾಶ ನೀಡಿ ಹೊಸ ರೀತಿಯಲ್ಲಿ ಪಕ್ಷವನ್ನು ಕಟ್ಟುತ್ತೇನೆ ನಾಯಕರೆಲ್ಲರೂ ಸಹಕಾರ ಕೊಡಬೇಕು. ಜೊತೆಗೆ ಹೊಸ ಕಾರ್ಯಕರ್ತರು ಹೊಸ ಜವಾಬ್ದಾರಿಯನ್ನು ಹುಮ್ಮಸಿನಲ್ಲಿ ನಿರ್ವಹಿಸೋಣ ಎಂದು ಕರೆನೀಡಿದರು.
ನಿಮ್ಮ ಪ್ರೀತಿ - ಅಭಿಮಾನ ನಮ್ಮನ್ನು ಸದಾ ತಲುಪುತ್ತದೆ ಹಾಗಾಗಿ ಇಲ್ಲಿವರೆಗೆ ನಡೆದು ಬಂದಂತೆ ಹಾರ ತುರಾಯಿ, ಪೇಟ, ಶಾಲು ತಂದು ಹಣ ಖರ್ಚುಮಾಡಬೇಡಿ. ಪಕ್ಷಕ್ಕಾಗಿ ನಿಮ್ಮದಾದ ದೇಣಿಗೆ ಅಂತ ಅದೇ ಹಣವನ್ನು ನೀಡಿ ಪಕ್ಷವನ್ನು ಸಂಘಟಿಸಿ ಎಂದು ನನ್ನ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಕೋರಿಕೊಂಡಿರುವೆನು, ಪಾಲಿಸುವರೆಂದು ನಂಬಿರುವೆ ಎಂದರು.
#KPCC #President #post #responsibility #power #BKHariprasad #malgudiexpress #malgudinews #news #TopNews


